Tuesday, December 31, 2013

ಹಸನಾಗಲಿ


ವರ್ಷವಿಡಿ ನಗು, ಕುಣಿತ, ಹಾಸ್ಯ ಸರಮಾಲೆಗಳ ಕಂಡೆ
ಜೊತೆ ಜೊತೆಗೆ ಇಡುವ ಹೆಜ್ಜೆಗಳು ಎಡವಿದ್ದವು
ಮತ್ತಷ್ಟು ಆತ್ಮೀಯತೆಯಲಿ ಮುಖವಾಡಗಳ ಪರಿಚಯ
ಮಗದಷ್ಟು ಕತ್ತಿ ಮಸೆಯುತ್ತಿರುವುದ ಕಂಡು ಸಹಿಸಿದೆ

ಬರಲಿರುವ  ವರುಷಕೆ ನನ್ನದು ಹೊಸ ಅಲೆಯ ಬೇಡಿಕೆ
ಬಿರುಸಿನ ಅಲೆಯಾದರೂ ಸಹಿಸುವ ಶಕ್ತಿಯ ಕೋರಿಕೆ
ಮರುಧರೆಯಲೂ ಮಲ್ಲಿಗೆಯ ಬೆಳೆಯುವ ಅಭಿಲಾಷೆ
ತಂಗಾಳಿ ಬೀಸಲಿ ಈ ಮರ್ಕಟ ಮನಕೆ 

ಸ್ನೇಹ-ನಂಟು ದ್ವೇಷ-ಪ್ರೀತಿಯಲಿ ಗೆಲುವಾಗಲಿ ಒಲವಿಗೆ
ಬೆನ್ನ ಹಿಂದೆ ಮಸೆಯುವ ಕತ್ತಿಗಳು ಮೊಂಡಾಗುವಂತೆ 
ಆಸೆ ಆಮಿಷಗಳಲಿ ಯೋಗ್ಯವಾದುದು ಕೈಗೂಡಲಿ
ನಾ ಸಾಧಿಸುವ ಹಾದಿ ಹಸನಾಗುವಂತೆ


ಹೊಸ ವರ್ಷದ ಶುಭಾಶಯಗಳು... ಬದುಕು ಹಸನಾಗಲಿ...ಪ್ರೀತಿ ಬೆಳೆಯಲಿ  :)


Saturday, December 28, 2013

ಕಾವ್ಯಧಾರೆ

ಜಿ. ಎಸ್. ಎಸ್ ರವರಿಗೆ ಚಿಕ್ಕಂದಿನಲ್ಲಿ ಸಾಹಿತ್ಯ ಒಲವು ಹುಟ್ಟಿಸಿದ್ದು ಶಿವರಾಮ ಕಾರಂತರ "ಬಾಲಪ್ರಪಂಚ", ತಂದೆಯವರೊಂದಿಗೆ ಊರೂರು ಸುತ್ತುತ್ತಲಿದ್ದರಿಂದ ಅಲ್ಲಿನ ಪರಿಸರ. ಚಿಕ್ಕಂದಿನಲ್ಲಿ ಕಥೆಗಳನ್ನು ಓದುತ್ತಿದ್ದ ಇವರಿಗೆ ಕಥೆ ಬರೆಯುವ ಹುಚ್ಚಾಗಿ ಪುಟಗಟ್ಟಲೆ ಬರೆದು ಅದನ್ನು ಹರಿದು ಹಾಕಿದ್ದರಂತೆ. ತಾವು ದಾವಣಗೆರೆಯಲ್ಲಿ ಓದುತ್ತಿರುವಾಗ ಅವರ ಗಣಿತ ಟೀಚರ್ ಸಾಹಿತ್ಯದ ಹುಚ್ಚು ಹೆಚ್ಚಿಸಿದ್ದರು. ಕಾವ್ಯಾಸಕ್ತಿ ಹೆಚ್ಚು ಬೆಳೆಯಲು ಕುವೆಂಪುರವರೇ ಸ್ಪೂರ್ತಿ ಎಂದು ಹೇಳುತ್ತಾರೆ. 

ಬಿಡುವಿನ ಸಮಯದಲ್ಲಿ ಗಣಿತ ಟೀಚರ್(ರೇವಣ್ಣ) ನೀಡುತ್ತಿದ್ದ ವಿಷಯದ ಮೇರೆಗೆ ಏನನ್ನಾದರು ಬರೆಯುವುದು, ಅದರ ಬಗ್ಗೆ ಚರ್ಚಿಸುವುದು. ಇದೇ ಸಮಯವನ್ನು ಸದುಪಯೋಗ ಪಡಿಸಿಕೊಂಡ ಜಿ. ಎಸ್. ಎಸ್ ಒಂದು ಕಥೆಯನ್ನು ಪದ್ಯವಾಗಿಸಿದ್ದರು
ಇರುವೆಯೊಂದು ತನ್ನ ಮರಿಗೆ 
ನೀರೊಳೀಜು ಕಲಿಸಲೆಂದು
ಹರಿವ ತೊರೆಯ ತಡಿಗೆ ಬಂದು
ನಿಂತುಕೊಂಡಿತು 
- ಸಾಲುಗಳನ್ನು ಕೇಳಿದ ಮೇಷ್ಟ್ರು ಖುಷಿಯಿಂದ ಶಿವರುದ್ರಪ್ಪನವನ್ನು ಪ್ರೋತ್ಸಾಹಿಸಿ ಬೆನ್ನು ತಟ್ಟಿದ್ದರು. ಈ ಸಾಲುಗಳು ಬರೆದಾಗ ಅವರಿಗೆ ೧೪ ವರ್ಷಗಳು.

೧೯೪೩ರಲ್ಲಿ ತುಮಕೂರಿನ ಕಾಲೇಜಿನಲ್ಲಿರುವಾಗ ಜಿ.ಪಿ ರಾಜರತ್ನಂ ಅವರು ಅಧ್ಯಾಪಕರು. ಒಮ್ಮೆ ರಾಜರತ್ನಂ ಅವರಿಗೆ ತಾವು ಬರೆದ ಕವಿತೆಗಳನ್ನು ಹಂಚಿಕೊಳ್ಳುತ್ತಾರೆ. ಅದೇ ಒಂದು ಸದಾವಕಾಶ ಎನ್ನಬಹುದು. ಅಲ್ಲಿಂದ ರಾಜರತ್ನಂ ಅವರು ಜಿ.ಎಸ್ .ಎಸ್ ಅವರಿಗೆ ಪದ್ಯ ಬರೆಯುವುದು,  ಮತ್ತಷ್ಟು ಚೆನ್ನಾಗಿ ಬರೆಯುವುದು ಹೇಗೆ ಎಂದು ತಿದ್ದಿ ತೀಡುತ್ತಾರೆ. ಅಲ್ಲದೇ ಅವರ ಕವಿತೆಗಳನ್ನು ಓದಿದ ರಾಜರತ್ನಂ ಅವರು ಕೆಲವು ಕವಿತೆಗಳನ್ನು ಆರಿಸಿ ಮಾಸ್ತಿ ಅವರ ಸಂಪಾದಕತ್ವದ "ಜೀವನ" ಎಂಬ ಪತ್ರಿಕೆಗೆ ಕಳುಹಿಸುತ್ತಾರೆ. ಅದೇ ಮೊದಲು ಪತ್ರಿಕೆಯಲ್ಲಿ ಪ್ರಕಟವಾದ ಕವಿತೆ ನಂತರದ ದಿನಗಳಲ್ಲಿ ಅವರು ಹಿಂದಿರುಗಿ ನೋಡಿದ್ದೇ ಇಲ್ಲ. 

ತಮ್ಮ ಬಿ.ಎ ವಿದ್ಯಾಭ್ಯಾಸಕ್ಕೆ ಮೈಸೂರಿಗೆ ಕಾಲಿಟ್ಟ ನಂತರದ ದಿನಗಳು ಮಾತ್ರ ಅವಿಸ್ಮರಣೀಯ. ಜಿ.ಎಸ್.ಎಸ್ ಅವರ ಪದ್ಯಗೀಳನ್ನು ಮತ್ತಷ್ಟು ಹೆಚ್ಚಿಸಿದವರು ಅವರೇ ಹೇಳುವಂತೆ "ಪ್ರೇರಕ-ಪೋಷಕ-ಗುರು" ತ.ಸು ಶಾಮರಾಯರು. ಇಲ್ಲಿ ಮತ್ತೊಂದು ವಿಷಯ ಹೇಳಲೇ ಬೇಕು. ಜಿ.ಎಸ್.ಎಸ್ ಅವರ "ಎದೆ ತುಂಬಿ ಹಾಡುದೆನು ಅಂದು ನಾನು" ಈ ಜನಪ್ರಿಯ ಕವಿತೆಯನ್ನು ಬರೆದಿದ್ದು ಇದೇ ಶಾಮರಾಯರಿಗೆ. ಕಾರಣ ಶಾಮರಾಯರು ಸದಾ ಜಿ.ಎಸ್. ಎಸ್ ಎಂತಹುದೇ ಕವನಗಳನ್ನು ಬರೆಯಲಿ ಸ್ವಲ್ಪವೂ ಬೇಸರಿಸದೇ ಕೇಳುತ್ತಲಿದ್ದರಂತೆ. ಈ ಕೇಳುವಿಕೆಯೇ ಎದೆ ತುಂಬಿ...... ಹಾಡಿಗೆ ಸ್ಪೂರ್ತಿ. 

ಶಾಮರಾಯರ ಕಣ್ಣಿಗೆ ಬಿದ್ದ ಕವನಗಳು ಕುವೆಂಪುರವರ ಗಮನ ಸೆಳೆದದ್ದು ಒಂದು ವಿಶೇಷ. ಒಮ್ಮೆ ಮಹಾರಾಜ ಕಾಲೇಜಿನ ಕರ್ನಾಟಕ ಸಂಘದಲ್ಲಿ ಏರ್ಪಡಿಸಿದ್ದ ಕವಿತಾ ಸ್ಪರ್ಧೆಯಲ್ಲಿ ಬಹುಮಾನ ಜಿ ಎಸ್ ಎಸ್ ಅವರಿಗೆ ಬಹುಮಾನ ಬಂದಿರುತ್ತದೆ. ಜಿ ಎಸ್ ಎಸ್ ಅವರನ್ನು ಕಣ್ ಸನ್ನೇಯಲ್ಲೇ ಹತ್ತಿರ ಕರೆದು "ಏನೇನು ಬರೆದಿದ್ದೀಯಾ ಅದನ್ನೆಲ್ಲಾ ತಾ" ಎಂದು ಕುವೆಂಪುರವರು ಹೇಳುತ್ತಲಿದ್ದಂತೆ. ಗಾಬರಿ ಜೊತೆಗೆ ಸಂಕೋಚದಿಂದಲೇ ತಾವು ಬರೆದಿದ್ದ ಕವಿತೆಗಳನ್ನೆಲ್ಲವನ್ನು ತಂದುಕೊಡುತ್ತಾರೆ. 

ಆ ಕವಿತೆಗಳ ಕಡತವನ್ನೆಲ್ಲಾ ಓದಿದ ಕುವೆಂಪುರವರ ಅನಿಸಿಕೆ ಹೀಗಿದೆ "ಇದೇನಿದು? ಬೆಳದಿಂಗಳ ವರ್ಣನೆ, ಒಳ್ಳೇ ಪ್ರಖರವಾದ ನಡುಹಗಲಿನ ಅನುಭವದ ಹಾಗೆ ಇದೆಯಲ್ಲ" ಮತ್ತಷ್ಟು ಕವನಗಳನ್ನು ನೋಡಿ "ಹೀಗೇ ಬರೆಯುತ್ತಲಿರಿ. ನಿಜವಾಯಿಯೂ ಚೆನ್ನಾಗಿವೆ" ಎಂದರಂತೆ. ಆಹಾ..!! ಎಂಥಾ ಅದೃಷ್ಟ ಪ್ರೀತಿಯ ಗುರು, ಪ್ರಸಿದ್ಧ ಕವಿ ಹೀಗೆ ಬೆನ್ನುತಟ್ಟಿದರೆ ಶಿಷ್ಯರಿಗೆ ಹುರುಪು ಹೆಚ್ಚುವುದಲ್ಲವೇ..? ಅಲ್ಲಿನ ನಂತರ ಕುವೆಂಪುರವರ ಮಾರ್ಗದರ್ಶನದ ಮೇರೆಗೆ ಇವರು ಬರೆದ ಕವಿತೆಗಳನ್ನು "ಪ್ರಬುದ್ಧ ಕರ್ಣಾಟಕ" ಪತ್ರಿಕೆಗಳಲ್ಲಿ ಸುಮಾರು ಕಾಲದವರೆಗೆ ಬಿತ್ತರಗೊಂಡವು. 

ಈ ಮಧ್ಯೆ ಬಿ ಎ ಮುಗಿದ ನಂತರ ದಾವಣಗೆರೆ ಕಾಲೇಜಿಗೆ ಉಪನ್ಯಾಸಕರಾಗಿ ತೆರಳಿದ್ದ ಸಮಯ.  "ತಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆ"  ಹೆಸರಿನಲ್ಲಿ ತ ಸ ಶಾಮರಾಯರು ಪ್ರಕಾಶನ ಪ್ರಾರಂಭಿಸಿದ್ದರು. ಇದೇ ಪ್ರಕಾಶನದಲ್ಲಿ ಜಿ ಎಸ್ ಎಸ್ ಅವರ "ಸಾಮಗಾನ" ಕವನ ಸಂಕಲವನ್ನು ಪ್ರಕಟಿಸಿದ್ದರು. ಇದೇ ಕವನಸಂಕಲನಕ್ಕೆ ಶ್ರೀ ಕುವೆಂಪುರವರು ಮುನ್ನುಡಿಯನ್ನು ಸಹ ಬರೆದಿದ್ದರು.

ಸಾಮಗಾನ ಕವನಸಂಕಲ ಪ್ರಕಟವಾದಾಗ ಮತ್ತು ಅದೇ ಸಮಯದಲ್ಲಿ ಇವರ ಸ್ನೇಹಿತರಾದ ಬಿಳಿಗಿರಿ ಅವರ ಕವನಸಂಕಲನವೂ ಬಿಡುಗಡೆಯಾಗಿತ್ತು. ಇವರೀರ್ವರ ಕವನ ಸಂಕಲನಗಳ ಬಗ್ಗೆ ಒಂದು ಪತ್ರಿಕೆಯಲ್ಲಿ ವಿಮರ್ಶೆ ವಿಮರ್ಶೆಯಾಗದೆ, ಒಬ್ಬ ಕವಿಯ ಮೇಲೆ ಮತ್ತೊಬ್ಬರನ್ನು ಎತ್ತಿಕಟ್ಟುವಂತೆ ಬರೆದಿದ್ದರು. ಇದನ್ನು ಕಂಡ ಸ್ನೇಹಿತರಾದ ಬಿಳಿಗಿರಿ ಅವರು ಹೀಗೆ ಪತ್ರಿಕೆಗೆ ಒಂದು ಪತ್ರ ಬರೆಯುತ್ತಾರೆ "ವಿಮರ್ಶೆಯ ನೆಪದಲ್ಲಿ ಒಬ್ಬರನ್ನು ಹೊಗಳಿ ಇನ್ನೊಬ್ಬರನ್ನು ತೆಗಳುತ್ತ ನಿಮ್ಮ ಬೇಳೆ ಬೇಯಿಸಿಕೊಳ್ಳ ಬೇಡಿ ಎಂದು ಖಾರವಾಗಿ ಬರೆದಿದ್ದರಂತೆ" ಇಂತಹ ಸ್ನೇಹಿತರು ಈಗ ಸಿಗುತ್ತಾರೆಯೇ ಎಂದು ಜಿ.ಎಸ್.ಎಸ್ ಸ್ನೇಹಿತರನ್ನು ನೆನಪುಮಾಡಿಕೊಂಡಿದ್ದಾರೆ. 

ಇವರ ಕವಿತೆಗಳನ್ನು ಪತ್ರಿಕೆಯಲ್ಲಿ ಓದಿದ ಪ್ರೋ.ತೀ.ನಂ.ಶ್ರೀ, ಪು.ತಿ.ನ ಎಲ್ಲರೂ ಬೆನ್ನುತಟ್ಟಿದ್ದಾರೆ. ೧೯೫೩ರಲ್ಲಿ ಎರಡನೇ "ಚೆಲುವು-ಒಲವು"  ಕವನ ಸಂಗ್ರಹಕ್ಕೆ ಪು.ತಿ.ನ ಅವರು ಮುನ್ನುಡಿಯನ್ನು ಬರೆದು ಹಾರೈಸಿದ್ದರು. ನಂತರ ೧೯೫೭ರಲ್ಲಿ "ದೀಪದಹೆಜ್ಜೆ" ಕವನ ಸಂಗ್ರಹ ಪ್ರಕಟವಾಯಿತು. ಸಾಹಿತ್ಯ ವಿಮರ್ಶೆಯಲ್ಲಿ ಆಸಕ್ತಿ ಹೆಚ್ಚಿದ್ದ ಇವರಿಗೆ "ವಿಮರ್ಶೆಯ ಪೂರ್ವ-ಪಶ್ವಿಮ" ಎಂಬ ಕೃತಿ ರಚನೆ ಸಾಧ್ಯವಾಯಿತು.

ದಾವಣಗೆರೆಯಲ್ಲಿ ಒಮ್ಮೆ ದಿಬ್ಬದ ಮೇಲೆ ಕುಳಿತಿರುವಾಗ ಅಲ್ಲಿನ ಪರಿಸರ ಕಂಡು "ಎಲ್ಲಿ ಹೋಗುವಿರಿ ನಿಲ್ಲಿ ಮೋಡಗಳೆ" ಎಂಬ ಸಾಲು ಹುಟ್ಟಿಕೊಂಡವು, ಒಂದು ಸಂಜೆ ಕಾಲೇಜಿನಿಂದ ಮನೆಗೆ ಹೋಗುವ ದಾರಿಯಲ್ಲಿ ಒಬ್ಬ ಹೆಣ್ಣು ಮಗಳ ಜಡೆ ಇವರಿಗೆ ಆಕರ್ಷಿಸಿದೆ. ಆ ಜಡೆಯ ಆಕರ್ಷಣೆ "ಲಲನೆಯರ ಬೆನ್ನಿನೆಡೆ ಹಾವಿನೊಲು ಜೋಲ್ವಜಡೆ" ಸಾಲನ್ನು ರಚಿಸುವಂತೆ ಮಾಡಿತು. ಹಾಗೆ ಒಂದು ರಾತ್ರಿ ಕನಸಿನಲ್ಲಿ "ಚಂದ್ರ ಜೇಡ ಬಲೆ ನೇಯುತ್ತಿತ್ತು ಬೆಳದಿಂಗಳ ನೂಲಿನಲಿ" ಎಂಬ ಸಾಲು ಹೊಳೆದಿತ್ತು ಅದೆ ಸಾಲಿನ ಜಾಡು ಹಿಡಿದು ಹೊರಟವರು ಪೂರ್ಣಕವನವನ್ನು ಬರೆಯಲು ಸುಮಾರು ವರ್ಷಗಳೇ ತೆಗೆದುಕೊಂಡಿದೆ.  

ಶಿವರುದ್ರಪ್ಪನವರನ್ನು ಯಾವ ಪಂಥಕ್ಕೆ ಸೇರಿಸಬೇಕೆಂದು ತಿಳಯದೆ ಗೊಂದಲಕ್ಕೀಡ ಕೆಲವರು "ಸಮನ್ವಯ ಕವಿ" ಎಂದು ಕರೆದರು ಆದರೆ ನಾನು ಅದಲ್ಲ. ಯಾಕೆಂದರೆ ಯಾವುದೇ ಹಣೆ ಚೀಟಿಗಳಿಂದ ನಿರ್ದೇಶಿತವಾಗುವುದನ್ನು ನಾನು ಒಪ್ಪುವುದಿಲ್ಲ ಎಂದು ಹೇಳುತ್ತರೆ. 

ಕವಿತೆಗಳು ಸಮಯವಲ್ಲದ ಸಮಯಗಳಲ್ಲಿ ಮೈಪಡೆದು ಕೂತುಬಿಡುತ್ತಾ ಹೊಸ ಹೊಸ ರೂಪಕೊಡುವಂತ ಕಾವ್ಯವನ್ನು ನೀಡುತ್ತಲಿದ್ದ ಶಿವರುದ್ರಪ್ಪನವರು "ಕವಿತೆ ಕಾಲಬದ್ಧವಾದ ಕ್ರಿಯೆಯಲ್ಲ, ಕಾಲಾತೀತದಲ್ಲಿ ಸಂಭವಿಸುವ ಒಂದು ವಿಸ್ಮಯ" ಎಂದು ಹೇಳುತ್ತಾರೆ. 

ಸಾಮಗಾನ, ಚೆಲುವು-ಒಲವು, ದೇವಶಿಲ್ಪಿ/ಶಿಲ್ಪ, ದೀಪದ ಹೆಜ್ಜೆ, ಅನಾವರಣ, ತೆರೆದ ಬಾಗಿಲು/ತೆರೆದ ದಾರಿ, ಗೋಡೆ, ವ್ಯಕ್ತಮಧ್ಯ ಓರೆ ಅಕ್ಷರಗಳು, ತೀರ್ಥವಾಣಿ, ಕಾರ್ತಿಕ, ಕಾಡಿನ ಕತ್ತಲಲ್ಲಿ, ಪ್ರೀತಿ ಇಲ್ಲದ ಮೇಲೆ, ಚಕ್ರಗತಿ - ಜಿ ಎಸ್ ಶಿವರುದ್ರಪ್ಪನವರು ತಮ್ಮದೇ ಶೈಲಿಯಲ್ಲಿ ಹೀಗೆ ಹಲವಾರು ಕವನ ಸಂಕಲಗಳನ್ನು ಬಿಡುಗಡೆ ಮಾಡಿದ್ದಾರೆ.

ಘಟನೆಗಳ ಸುತ್ತಾ... ಮುಂದಿನ ಭಾಗ

Thursday, December 26, 2013

ಏನು ಬರುತ್ತದೋ ಅದನ್ನು ಎದುರಿಸುತ್ತ ಒಪ್ಪಿಕೊಳ್ಳುವುದು - ಜಿ ಎಸ್. ಎಸ್.

೧೯೪೯ರಲ್ಲಿ ಬಿ. ಎ. ಆನರ್ಸ್ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾದ ಶಿವರುದ್ರಪ್ಪನವರಿಗೆ ದಾವಣಗೆರೆ ಡಿ.ಆರ್.ಎಂ ಕಾಲೇಜಿಗೆ ತಾತ್ಕಾಲಿಕ ಕನ್ನಡ ಉಪನ್ಯಾಸಕರಾಗಿ ನೇಮಕವಾದರು. 

ಮೊಟ್ಟ ಮೊದಲ ಬಾರಿಗೆ ಲೆಕ್ಚರರ್ ಆಗಿ ಮೇಷ ಧರಿಸುವುದು ಹೇಗೆ ಎಂದು ಜಿ.ಎಸ್.ಎಸ್ ಅವರಲ್ಲಿ ಪ್ರಶ್ನೆಗಳು ಕಾಡಿದ್ದವು. ಪಂಚೆ ಉಟ್ಟರೆ ಹುಡುಗರು ಗೇಲಿ ಮಾಡಬಹುದು, ಪೈಜಾಮ ಹಾಕಿಕೊಂಡು ಹೋದರೇ ನಾನು ವಿದ್ಯಾರ್ಥಿ ದಿನಗಳಲ್ಲಿ ಅದೇ ರೀತಿಯ ವೇಷಭೂಷಣದಲ್ಲಿರುತ್ತಿದ್ದೆ. ಪಂಚೆಗಿಂತ ಕೇಡು, ಪ್ಯಾಂಟೇ ವಾಸಿ ಎಂದುಕೊಂಡು ಅದಕ್ಕೆ ಒಪ್ಪುವ ಕೋಟು ಹೊಲಿಸಿಕೊಂಡರಂತೆ ಅವರೇ ಹೇಳುವಂತೆ 'ಸೂಟಾವತಾರಿ'ಯಾಗಿದ್ದೆ ಎಂದು ಹೇಳುತ್ತಾರೆ. ಕಾಲೇಜಿಗೆ ರಿಪೋರ್ಟ್ ಮಾಡಿಕೊಳ್ಳುವ ಹಿಂದಿನ ದಿನವಷ್ಟೇ 'ಶೂ' ಕೊಂಡು ರಾತ್ರಿ ಸ್ವಲ್ಪ ಹೊತ್ತು ರಿಹರ್ಸಲ್ ಸಹ ಮಾಡಿದ್ದರಂತೆ. ಬೆಳಗ್ಗೆ ಮೊದಲ ಪಾಠ ಮಾಡುವ ಮುನ್ನ ಅವರ ಗುರುಗಳಾದ ಕುವೆಂಪು ಅವರನ್ನು ನೆನೆದೆ, ಅವರೇ ಬರೆದ ’ಚಿತ್ರಾಂಗದಾ’ ಕಾವ್ಯವನ್ನು ಕುರಿತು ಒಂದು ಘಂಟೆಗಳ ಕಾಲ ಪಾಠ ಮಾಡಿ ಎಲ್ಲರೊಂದಿಗೆ ಸೈ ಎನಿಸಿಕೊಂಡಿದ್ದರು.

ತದನಂತರ ಮೈಸೂರಿನ ಯುವರಾಜ ಕಾಲೇಜಿಗೆ ವರ್ಗವಾದರು. ೧೯೫೧ರ ವೇಳೆಗೆ ಎಂ.ಎ ಶಿಕ್ಷಣವನ್ನು ಮುಗಿಸಿಕೊಂಡರು. ಆನಂತರ ಶಿವಮೊಗ್ಗೆಯ ಸಹ್ಯಾದ್ರಿ ಕಾಲೇಜಿನಲ್ಲಿ ಎರಡು ವರ್ಷ ಉಪನ್ಯಾಸಕರಾಗಿದ್ದರು. 

"ನಾನು ನಾಳೆ ಏನಾಗಬೇಕು ಎಂಬ ಬಗ್ಗೆ ಯಾವತ್ತೂ ತಲೆ ಕೆಡಿಸಿಕೊಳ್ಳಲಿಲ್ಲ. ಏನು ಬರುತ್ತದೋ ಅದನ್ನು ಎದುರಿಸುತ್ತ ಒಪ್ಪಿಕೊಳ್ಳುವುದು ನನಗೆ ಅಭ್ಯಾಸವಾಗಿಬಿಟ್ಟಿದೆ." ಹೀಗೆ ಶಿವರುದ್ರಪ್ಪನವರು ಅವರ ಜೀವನ ತಿರುವು, ಏರಿಳಿತಗಳನ್ನು ಸ್ವೀಕರಿಸಿದ ಬಗ್ಗೆ ಹೇಳಿಕೊಳ್ಳುತ್ತಾರೆ. ಮೈಸೂರಿಗೆ ಭಾರತ ಸರ್ಕಾರದ ಫೆಲೋಷಿಪ್ ಮೇಲೆ, ಕುವೆಂಪು ಅವರ ನಿರ್ದೇಶನದಲ್ಲಿ ಪಿ.ಎಚ್.ಡಿ ಅಧ್ಯಯನ ಮಾಡುವ ಸದಾವಕಾಶ ಇವರಿಗೆ ದೊರಕಿತು.

ಗಂಗೋತ್ರಿಯ ಸ್ನಾತಕೋತರ ಕೇಂದ್ರದಲ್ಲಿ ಪಾಠ ಹೇಳುತ್ತಿದ್ದ ಶಿವರುದ್ರಪ್ಪನವರಿಗೆ ಪರಿಚಿತರೊಬ್ಬರ ಒತ್ತಯದ ಮೇರೆಗೆ ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ, ರೀಡರ್ ಹುದ್ದೆಗೆ ಅರ್ಜಿ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಅವರ ಆತ್ಮೀಯ ಸ್ನೇಹಿತರಾದ ಪ್ರಭುಶಂಕರ್ ಅವರೂ ಸಹ ಅದೇ ಹುದ್ದೆಗೆ ಅರ್ಜಿ ಸಲ್ಲಿಸಿದ್ದರು. 

ಈ ವೇಳೆಗಾಗಲೇ ಪ್ರಭುಶಂಕರ್ ಅವರು ಡಿಗ್ರಿ ಕಾಲೇಜಿನಲ್ಲಿ ಉಪನ್ಯಾಸ ಮಾಡುತ್ತಲಿದ್ದರಿಂದ, ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಅವರಿಗೆ ಕೆಲಸ ಸಿಕ್ಕರೆ ಅವರೂ ನನ್ನ ಹಾಗೆ ಸ್ನಾತಕೋತ್ತರ ತರಗತಿಗಳಿಗೆ ಪಾಠ ಮಾಡವ ಅವಕಾಶ ದೊರೆಯುತ್ತದೆ. ಈ ಕಾರಣಕ್ಕೆ ಜಿ ಎಸ್ ಎಸ್ ಇಂಟರ್ವ್ಯೂಗೂ ಸಹ ಹೋಗದೆ, ಸ್ನೇಹಿತರಿಗೆ ಅವಕಾಶ ನೀಡಿದ್ದರು.  ಆದರೆ ಅವರೇ ಹೇಳಿದಂತೆ ಏನು ಬರುತ್ತೋ ಅದನ್ನು ಸ್ವೀಕರಿಸುವ ವ್ಯಕ್ತಿತ್ವವುಳ್ಳ ಜಿ ಎಸ್ ಎಸ್ ಉಸ್ಮಾನಿಯಾ ವಿಶ್ವವಿದ್ಯಾಲಯಕ್ಕೆ ಕನ್ನಡ ವಿಭಾಗದ ರೀಡರ್ ಮತ್ತು ಮುಖ್ಯಸ್ಥರಾಗಿ ನೇಮಕಗೊಂಡಿದ್ದು ಮಾತ್ರ ಅವರಿಗೆ ಆಶ್ವರ್ಯ ನೀಡಿತ್ತು. ಕಾರಣ ಇಷ್ಟೇ ಜಿ ಎಸ್ ಎಸ್ ಅಂದು ಇಂತರ್ವ್ಯೂಗೆ ಹೋಗಿಲ್ಲ. ಆದರೂ ಈ ಆಯ್ಕೆಯನ್ನು ಮಾಡಿದ್ದು ಪ್ರೊ. ತೀ ನಂ ಶ್ರೀಕಂಠಯ್ಯನವರು  ಮತ್ತು ಅವರ ತಂಡ. ಅದು ಒಂದು ರೀತಿ ಬಯಸದೇ ಬಂದದ್ದು.  

ಮೈಸೂರು ವಿಶ್ವವಿದ್ಯಾಲಯದಿಂದ ಡೆಪ್ಯುಟೇಷನ್ ಮೇಲೆ ಉಸ್ಮಾನಿಯಾ ವಿಶ್ವವಿದ್ಯಾಲಯಕ್ಕೆ ತೆರಳುವ ಮುನ್ನವೂ ಜಿ ಎಸ್ ಎಸ್ ತಮ್ಮ ಪ್ರೀತಿಯ ಗುರುಗಳ ಅನುಮತಿಯನ್ನು ಪಡೆದೇ ಮುಂದುವರಿಯುತ್ತಾರೆ. 

ಹೈದಾರಾಬಾದಿನಲ್ಲಿ ಡಿಪ್ಯುಟೇಷನ್ ಮೇಲೆ ತೆರಳಿದ್ದರೂ, ವಾಪಸ್ ಮೈಸೂರಿಗೆ ಬರಬೇಕೆಂಬ ಕಾತುರ ಅವರಲ್ಲಿ ಸದ ಮನೆ ಮಾಡಿತ್ತು. ಈ ಮಧ್ಯೆ ಮೈಸೂರು ವಿಶ್ವವಿದ್ಯಾಲಯದ ಮಾನಸ ಗಂಗೋತ್ರಿಯಲ್ಲಿ ಕರೆಯಲಾದ ರೀಡರ್, ಲೆಕ್ಚರರ್, ಪ್ರೊಫೆಸರ್ ಹೀಗೆ ಹಲವಾರು ಹುದ್ದೆಗಳಿಗೆ ಅರ್ಜಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಕನ್ನಡ ಪರಿಸರದಲ್ಲಿಯೇ ತಾನು ಬೆಳೆಯಬೇಕು ಎಂಬ ಆಸೆಗೆ ತಣ್ಣೀರೆರಚುವಂತಹ ಸನ್ನಿವೇಶಗಳು ತಲೆದೋರಿದ್ದವು. ಡೆಪ್ಯುಟೇಷನ್ ಅವಧಿ ಮುಗಿಯುತ್ತಲಿದೇ ಮುಂದೆ ಏನು ಎತ್ತ ಎಂಬ ಪ್ರಶ್ನೆಗಳು ಅವರನ್ನು ಕಾಡುತ್ತಲೇ ಇತ್ತು. ಇದೇ ಸಮಯದಲ್ಲಿ ಅಂದಿನ ಕುಲಪತಿಯಾಗಿದ್ದ ಶ್ರೀ ಮಾಲಿಯವರಿಗೆ ಒಂದು ಪತ್ರ ಬರೆದಿದ್ದರು. "ಅಶೈಕ್ಷಣಿಕ ರಾಜಕೀಯ ಪ್ರವೃತ್ತಿಗಳು ನನ್ನನ್ನು ಮೈಸೂರು ವಿಶ್ವವಿದ್ಯಾಲಯದಿಂದಲೇ ದೂರ ಇಡಲು ಪ್ರಯತ್ನಿಸುವಂತೆ ಕಾಣುತ್ತದೆ" ತಮ್ಮೆಲ್ಲ ಬೇಸರಗಳೊಂದಿಗೆ ಹೀಗೊಂದು ಸಾಲು ಬರೆದಿದ್ದರು. ಆ ಪತ್ರ ಕೆಲಸ ಮಾಡಿತು ಎಂಬುದಕ್ಕೆ ಮೈಸೂರು ಮಹಾರಾಜ ಕಾಲೇಜಿಗೆ ರೀಡರ್ ಮತ್ತು ಕನ್ನಡ ವಿಭಾಗದ ಮುಖ್ಯಸ್ಥರನ್ನಾಗಿ ನೇಮಕವಾದಾಗ. 

೧೯೬೪ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ರೀಡರ್ ಹುದ್ದೆಗಾಗಿ ನಡೆದ ಸಂದರ್ಶನದ ಒಂದು ತುಣುಕು ಓದಿ- 

ಪ್ರೋ. ಭೀಮಸೇನ ರಾಯರು ವ್ಯಾಕರಣಗಳ ಬತ್ತಳಿಕೆಗೆ ಕೈ ಹಾಕಿ ಅವರನ್ನು ಸುಲಭವಾಗಿ ಉರುಳಿಸಲು ಪ್ರಯತ್ನಿಸುವ ಮುನ್ನ ಜಿ ಎಸ್. ಎಸ್. ಒಂದು ಮಾತು ಹೇಳುತ್ತಾರೆ. ದಯಮಾಡಿ ವ್ಯಾಕರಣ ಕುರಿತು ನನಗೆ ಪ್ರಶ್ನೆ ಹಾಕಬೇಡಿ, ನನ್ನ ಕ್ಷೇತ್ರ ಅದಲ್ಲ. ಸಾಹಿತ್ಯವನ್ನು ಕುರಿತು ಅದು ಯಾವ ಕಾಲದ್ದೇ ಆಗಲಿ ಕೇಳಿ ಎಂದು ಬಿಡುತ್ತಾರೆ.

ನಂತರ ಪ್ರೊ.ಮಾಳಾವಾಡರು ಷಡಕ್ಷರ ಕವಿಯ "ಶಬರಶಂಕರವಿಲಾಸ" ಗ್ರಂಥ ತೆಗೆದು ಈ ಪದ್ಯದ ಅರ್ಥವನ್ನು ಹೇಳಿ ಎಂದು ಕೇಳುತ್ತಿದ್ದಂತೆ ನಾನು ಅರ್ಥ ಹೇಳುವುದಿಲ್ಲ. ಯಾಕೇ? ಎನ್ನುತ್ತಿದ್ದಂತೆ, ಜಿ ಎಸ್ ಎಸ್ ಅವರದು ದಿಟ್ಟ ಉತ್ತರ "ನೋಡಿ ಸರ್ ನಾನು ಒಬ್ಬ ಅಧ್ಯಾಪಕ, ಹದಿನೈದು ವರ್ಷಗಳಿಗೂ ಮೀರಿದ ಕಾಲದಲ್ಲಿ ಪಾಠ ಹೇಳಿದ್ದೇನೆ. ತರಗತಿಗೆ ಹೋಗುವ ಮುನ್ನ ಸಾಕಷ್ಟು ಪೂರ್ವ ಸಿದ್ಧತೆ ಮಾಡಿಕೊಂಡೇ ಹೇಳುವುದು ನನ್ನ ಪದ್ಧತಿ, ಹೀಗಿರುವಾಗ ಇದ್ದಕ್ಕಿದ್ದ ಹಾಗೆ ಯಾವುದೋ ಪದ್ಯವನ್ನು ತಾವು ತೋರಿಸಿ ಅರ್ಥ ಹೇಳು ಅನ್ನುತ್ತೀರಿ?" ಇದರ ಮೇಲೆ ರೀಡರ್ ಅಂಥ ಹುದ್ದೆಗೆ ಬಂದ ನನ್ನನ್ನು ಯಾವುದೋ ಪದ್ಯವೊಂದರ ಅರ್ಥವನ್ನು ನಾನು ಹೇಳಬಲ್ಲೆನೋ ಇಲ್ಲವೋ ಎಂದು ಶಂಕಿಸುತ್ತೀರಿ. ಈ ಕಾರಣಗಳಿಂದ ನಾನು ಈ ಪದ್ಯಕ್ಕೆ ಅರ್ಥ ಹೇಳುವಿದಿಲ್ಲ. ಎಂದು ಜಿ ಎಸ್ ಎಸ್ ಹೇಳಿಬಿಟ್ಟರಂತೆ.

ನಂತರ ಮಾಳವಾಡರು ಹೋಗಲಿ ಬಿಡಿ... Please enlighten me about this poem ಎಂದು ಹೇಳಿದಾಗ. ಜಿ ಎಸ್ ಎಸ್ ಆ ಪದ್ಯವನ್ನು ಓದಿ ಹೀಗೆ ಹೇಳಿದರು ‘sir there is no light in this poem to enlighten you’ ಅಲ್ಲಿದ್ದ ಕುಲಪತಿಗಳು, ರಿಜಿಸ್ಟ್ರಾರ್ ಎಲ್ಲರೂ ಜೋರು ನಕ್ಕು ವಾತಾವರಣ ತಿಳಿಗೊಂಡಿತು.

 ಅಲ್ಲೇ ಇದ್ದ ರಿಜಿಸ್ಟ್ರಾರ್ ಮಲ್ಲಿಕಾರ್ಜುನಪ್ಪನವರು ಜಿ ಎಸ್ ಎಸ್ ಕುರಿತು ನೀವು ಒಳ್ಳೆಯ ಕವಿ ನಿಮ್ಮ ಕಾವ್ಯವಾಚನವಾಗಲಿ ಎಂದು ಕೇಳುಕೊಂಡ ನಂತರ ಸಂದರ್ಶನ ಹೋಗಿ ಗೋಷ್ಠಿಯಾಯಿತು ಎಂದು ಜಿ ಎಸ್ ಎಸ್ ಅವರು ಹೇಳುತ್ತಾರೆ.

ಈ ಸಂದರ್ಶನದ ಬಗ್ಗೆ ತಿಳಿದವರು ಬೆಂಗಳೂರು ವಿವಿ ಕನ್ನಡ ವಿಭಾಗ ಹಾಳಾಗಿ ಹೋಯಿತು. ಮಹಾಕವಿ ಷಡಕ್ಷರ ದೇವನ ಪದ್ಯದ ಅರ್ಥ ಗೊತ್ತಿಲ್ಲದಿರುವವರೆಲ್ಲಾ ವಿಭಾಗದ ಮುಖ್ಯಸ್ಥರು ಹೀಗೆ ಮಾಡಿದರೆ ನಮ್ಮ ಶಿಕ್ಷಣ ಎಲ್ಲಿಗೆ ನಿಲ್ಲುತ್ತದೆ ಎಂದು ದೊಡ್ಡ ಮನುಷ್ಯರೊಬ್ಬರು ಮೂದಲಿಸಿದ್ದರಂತೆ.

ನಾನು ಓದಿದ ಜಿ ಎಸ್. ಎಸ್. ಅವರ ಹಲವಾರು ಪುಸ್ತಕಗಳು, ಅಂತರ್ಜಾಲದ ಹಲವಾರು ಲೇಖನಗಳು ಅವರ ಮೇಲಿನ ಅಪಾರ ಗೌರವ ಹೆಚ್ಚಿಸಿದೆ.


 ಮುಂದೆ ಕವನದ ಗೀಳು ಮತ್ತು ಬೆಳವಣಿಗೆ... 

(ತಪ್ಪಿದ್ದಲ್ಲಿ ಕ್ಷಮಿಸಿ. ನಾ ಓದಿದ ಮಾಹಿತಿಗಳನ್ನೆಲ್ಲ ಕಲೆಹಾಕಿ ನೆನಪು ಮಾಡಿಕೊಂಡು ಬರೆಯುತ್ತಿರುವೆ)

ಮೊದಲ ಭಾಗ ಓದಿಲ್ಲದೇ ಇರುವವರು ಈ ಕೆಳಕಂಡ ಲಿಂಕ್ ಗೆ ಭೇಟಿ ನೀಡಿ:
http://mrudhumanasu.blogspot.com/2013/12/blog-post_24.html

Tuesday, December 24, 2013

ನೋವಿನ ಬುತ್ತಿ, ಗಂಡಾಂತರಗಳ ಗಂಟಿನ ಸುತ್ತ - ಜಿ ಎಸ್ ಎಸ್

ಒಮ್ಮೆ ತೊಟ್ಟಿಲಲ್ಲಿ ಕೂಸನ್ನು ಮಲಗಿಸಿ, ಬಾವಿಯಲ್ಲಿ ನೀರು ತರಲು ಅಮ್ಮ ತೆರಳುತ್ತಾಳೆ. ಇತ್ತ ಪಕ್ಕದ ಮನೆಯ ಹುಲ್ಲುಜೋಪಡಿಗೆ ಬೆಂಕಿ ಬಿದ್ದು ಹತ್ತಿಕೊಂಡಿದೆ. ಆ ಬೆಂಕಿಯ ಕೆನ್ನಾಲಿಗೆ ಅಕ್ಕಪಕ್ಕದವರ ಮನೆಗೆಲ್ಲ ಹರಡಿದೆ. ಇತ್ತ ತೊಟ್ಟಿಲಲ್ಲಿ ಮಲಗಿದ್ದ ಕೂಸಿನ ಮನೆಗೂ ಬೆಂಕಿ ಹತ್ತಿಕೊಂಡು ಉರಿಯುತ್ತಿದೆ. ಬಾವಿಯಿಂದ ನೀರು ತರುತ್ತಿದ್ದವಳು ಮನೆ ಹತ್ತಿಕೊಂಡು ಉರಿಯುತ್ತಿರುವುದನ್ನು ಕಂಡು ಮಗು ಮಲಗಿಸಿರುವುದು ನೆನಪಾಗುತ್ತದೆ. ಭಯಭೀತಳಾಗಿ ಆ ಹೊಗೆ-ಬೆಂಕಿಯ ನಡುವೆಯೂ ಮನೆಯೊಳಗೆ ಹಾದು ಮಲಗಿದ್ದ ಕೂಸನ್ನು ತನ್ನ ಎದೆಗವಚಿಕೊಂಡು, ದುಃಖತಪ್ತಳಾಗಿ ಒಂದೇ ಉಸಿರಿಗೆ ಊರಾಚೆಯ ಬಯಲಿನಲ್ಲಿ ಬಂದು ಕೂತಳು. 

ಮತ್ತೊಮ್ಮೆ ತುಂಗಾ ನದಿಯ ಮರಳುಹಾಸಿನ ಅಂಚಿಗೆ ಕಂಕುಳಲ್ಲಿದ್ದ ಎರಡೂವರೆ ವರ್ಷದ ಕೂಸನ್ನು ಕೂರಿಸಿ, ಸ್ಕೂಲ್ ಮೇಷ್ಟ್ರು ಶಾಂತವೀರಪ್ಪ ಮತ್ತು ವೀರಮ್ಮ ಮಾತಿನಲ್ಲಿ ಮಗ್ನರಾಗಿ ತಾವು ತಂದಿದ್ದ  ಬುತ್ತಿಯನ್ನು ತೆಗೆದು ರೊಟ್ಟಿ ತಿನ್ನುತ್ತಲಿದ್ದರು. ಅತ್ತಕಡೆಯಿಂದ ಯಾರೋ ಅರಚುತ್ತಾರೆ ಅಯ್ಯೋ ಮಗು, ಮಗು ಎಂದು... ಇತ್ತ ಕೂರಿಸಿದ್ದ ಕೂಸು ಹರಿಯುವ ತುಂಗಾನದಿ ಕಡೆಗೆ ಕ್ಷಣಾರ್ಧದಲ್ಲಿ ಹೋಗಿ ನೀರಿನಲ್ಲಿ ಮುಗುಚಿಕೊಂಡಿತ್ತು. ರೊಟ್ಟಿ ಸವಿಯಲ್ಲಿದ್ದ ತಾಯಿ ಓಡಿಹೋಗಿ ನೀರಿನಲ್ಲಿದ್ದ ಮಗುವನ್ನು ಬಾಚಿ ತಬ್ಬಿ ಆಲಂಗಿಸುತ್ತಾರೆ. 

ನಂತರದ ದಿನಗಳಲ್ಲಿ ಈ ಬಾಲಕ ಸುಮಾರು ೫-೬ ವರ್ಷವಿರಬೇಕು ಆಗ ತನ್ನ ಅಮ್ಮನನ್ನು ಕಳೆದುಕೊಂಡುಬಿಟ್ಟರು. ಆ ತಾಯಿಯ ಮುಖದ ನೆನಪು ಅಸ್ಪಷ್ಟ ಆದರೆ ಆಕೆಯ ಹಾಡಿನ ಕೊರಳಿನ ಇಂಪು ಮಾತ್ರ ಅವರ ಮನಸ್ಸಿನಲ್ಲಿ ಸದಾ ಅನುರಣಿಸುತ್ತಲೇ ಇರುತ್ತದೆ. ತನ್ನ ಎರಡು ಗಂಡಾಂತರಗಳಲ್ಲಿ ರಕ್ಷಿಸಿದ ತಾಯಿಯನ್ನು ಕಳೆದುಕೊಂಡ ಆ ಮನಸ್ಸು ಸದಾ ಆ ಅಮ್ಮನನ್ನೇ ಹುಡುಕುತ್ತಲಿರುತ್ತದೆ.

"ನಿನ್ನ ಅಮ್ಮ ದೇವರಲ್ಲಿ ಹೋಗಿದ್ದಾಳೆ" ಎಂದಾಗ  ಬರುತ್ತಾಳಲ್ಲವಾ..? ಮತ್ತೆ ಬಂದೇ ಬರುತ್ತಾಳೆಂಬ ಆಸೆಯಲ್ಲೇ ಬಾಲ್ಯ. ದಿನಕ್ರಮೇಣ ವಾಸ್ತವದ ಅರಿವಾದಾಗ ದುಃಖ ಒತ್ತರಿಸಿಕೊಂಡು ನೆನಪು ಕಾಡುತ್ತಲಿರುತ್ತದೆ. ಆ ನಂತರ "ಕಂಡ ಕಂಡ ಹೆಣ್ಣ ಮೊಗದಿ ತಾಯಿ ಮುಖವನರಸಿ" ಹುಡುಕುವುದೇ ಕೆಲಸ. ಎಲ್ಲಿ ಅಮ್ಮ, ಅರಿವಾಗುವ ಮುನ್ನ ಮತ್ತೆಂದೂ ಬಾರದಲೋಕಕ್ಕೆ ತೆರಳಿರುತ್ತಾಳೆ. ಈ ಅಮ್ಮನ ನೆನಪಲ್ಲಿ ಮತ್ತೊಬ್ಬ ತಾಯಿ ಶಾಂತಮ್ಮ ಅವರ ಜೀವನವನ್ನು ತುಂಬುತ್ತಾರೆ. ಹೀಗೆ ಬಾಲ್ಯದಲ್ಲೇ ನೋವಿನ ಬುತ್ತಿ, ಗಂಡಾಂತರಗಳ ಗಂಟನ್ನು ಕಟ್ಟಿಕೊಂಡು ಬೆಳೆದವರು ಜಿ ಎಸ್ ಶಿವರುದ್ರಪ್ಪನವರು. 

ಜಿ ಎಸ್ ಎಸ್ - ಗುಗ್ಗರಿ ಶಾಂತವೀರಪ್ಪ ಶಿವರುದ್ರಪ್ಪನವರ ಪೂರ್ವಿಕರು ಧಾರವಾಡ ಜಿಲ್ಲೆಯ ಗುಗ್ಗರಿ ಎಂಬ ಊರಿನವರು. ಊರಿನ ನಂಟು ಕಳಚಿದ್ದರೂ ಅವರ ಹೆಸರಿನಲ್ಲಿ ಸದಾ ಬೆರೆತುಕೊಂಡಿದೆ. 

ಬಾಲ್ಯದ ದಿನಗಳಲ್ಲಿ ಅಪ್ಪನದು ಊರೂರು ಅಲೆಸುವಂತ ವೃತ್ತಿಯಲ್ಲಿ ಅವರನ್ನು ಹೆಚ್ಚು ಆಕರ್ಷಿಸಿದ್ದು ಹೊನ್ನಾಳಿಯ ಹತ್ತಿರದ ತುಂಗಭದ್ರಾ ನದಿ, ರಾಮಗಿರಿಯ ಬಯಲಾಟಗಳ ಹುಚ್ಚು, ಕೋಟೆ ಹಾಳುವಿನ ಸುತ್ತಮುತ್ತಲಿನ ಮಲೆನಾಡ ಸೆರಗು, ಬೆಲಗೂರಿನ ತೆಂಗಿನ ತೋಟದ ಹರಹು, ಸುತ್ತಮುತ್ತಲಿನ ನೇಕಾರರ ಮನೆ, ಕುಂಬಾರರ ಬೀದಿ, ನೇಕಾರ ಮತ್ತು ಕುಂಬಾರರ ಕೈಚಳಕಗಳು ಹೀಗೆ ವಿಧವಿಧವಾದ ಸೂಕ್ಷ ಅನುಭೂತಿಗಳು ಜಿ. ಎಸ್ . ಎಸ್ ಅವರ ಬಗೆ ಬಗೆಯ ಕವಿತೆಗಳು ರೂಪ ತಾಳುವಂತೆ ಮೋಡಿ ಮಾಡಿದ್ದವು. 

 ಹೊಸದುರ್ಗದ ಹತ್ತಿರದ ಬೆಲಗೂರಿನಲ್ಲಿ ಮಿಡಲ್ ಸ್ಕೂಲ್ ಪರೀಕ್ಷೆ ಬರೆದವರಲ್ಲಿ ಎಂಟು ಜನರು, ಅವರಲ್ಲಿ ಪಾಸಾಗಿದ್ದವರು ಇಬ್ಬರೇ ಅವರಲ್ಲಿ ಜಿ ಎಸ್ ಶಿವರುದ್ರಪ್ಪರವರು ಸಹ ಒಬ್ಬರು. ಆನಂತರ ದಾವಣಗೆರೆಯಲ್ಲಿ ಹೈಸ್ಕೂಲಿಗೆ ಸೇರಿದರು.  ಶಾಂತವೀರಪ್ಪನವರಿಗೆ ಸಂಸಾರಿಕ ಕಷ್ಟಗಳು ಹೆಚ್ಚಾಗಿ ಮಗನನ್ನು ಮುಂದೆ ಓದಿಸುವ ಇಚ್ಚೆಯಿಲ್ಲ. ಬದಲು ಕೆಲಸಕ್ಕೆ ಸೇರಿಸಿದರೆ ಮನೆ ಸಾಗುವುದು ಕಷ್ಟವಿಲ್ಲವೆಂದು ಭಾವಿಸಿ ಕೆಲಸಕ್ಕೆ ಸೇರಿಕೊಳ್ಳಲು ಹೇಳುತ್ತಾರೆ. ಆದರೆ ಶಿವರುದ್ರಪ್ಪನವರಿಗೆ ಮುಂದೆ ಓದುವ ಆಸೆ ನಂತರ ತುಮಕೂರಿನಲ್ಲಿ ಇಂಟರ್ ಮೀಡಿಯೇಟ್ ಸೇರಿದರು. 

ಚಿತ್ರ : ಅಂತರ್ಜಾಲ ಕೃಪೆ

೧೯೪೨ ಆಗ ಸ್ವಾತಂತ್ರ್ಯ ಚಳುವಳಿ ಭರಾಟೆ, ಶಿವರುದ್ರಪ್ಪನವರೂ ಮೆರವಣಿಗೆಗಳಲ್ಲಿ ಭಾಗವಹಿಸಿ ವಂದೇ ಮಾತರಂ ಕೂಗಿದ್ದರು. ಈ ವಿಷಯ ತಿಳಿದ ಶಿವರುದ್ರಪ್ಪನವರ ತಂದೆಗೆ ಗಾಭರಿ. ಈ ಮೊದಲು ಮೇಷ್ಟ್ರು  ಅವರು ಶಿಕ್ಷಕರಾಗಿದ್ದ ರಾಮಗಿರಿಯಲ್ಲಿ, ಒಮ್ಮೆ ಶಾಲಾ ಕುರ್ಚಿಗಳನ್ನು ಕಾಂಗ್ರೆಸ್ ಪರವಾದ ಸಭೆಗೆ ಕಳುಹಿಸಿದ್ದದ್ದೇ ದೊಡ್ಡ ಪ್ರಮಾದವಾಗಿತ್ತು, ವಿಷಯ ಹಿರಿಯ ಅಧಿಕಾರಿಗಳಿಂದ "ಇದು ದೇಶದ್ರೋಹದ ಕೆಲಸ" ಎಂದು ನೋಟೀಸ್ ಜಾರಿಗೊಳಿಸಿದ್ದರು. ಮೊದಲೇ ಕಷ್ಟದಲ್ಲಿದ್ದ ಮೇಷ್ಟ್ರಿಗೆ ಶಿವರುದ್ರಪ್ಪನವರ ವಂದೇ ಮಾತರಂ ಮೆರವಣಿಗೆಯಲ್ಲಿ ಭಾಗವಹಿಸುವುದರಿಂದ ತನ್ನ  ಕೆಲಸ ಎಲ್ಲಿ ಕಳೆದುಕೊಳ್ಳುವೆನೆಂಬ ಭಯ. ಇದೆಲ್ಲವನ್ನು ಮನಗಂಡ ತಂದೆ "ಸದ್ಯಕ್ಕೆ ಓದು ಬೇಡ, ಏನೂ ಬೇಡ, ನೆಟ್ಟಗೆ ಮನೆಗೆ ಬಾ" ಒಂದು ಒತ್ತಾಯದಿಂದ ಕರೆಸಿಕೊಂಡರು.

ಅರ್ಧಕ್ಕೆ ಓದನ್ನು ನಿಲ್ಲಿಸಿ ಸುಮಾರು ಮೂರು ತಿಂಗಳು ಹಳ್ಳಿಯಲ್ಲೇ ಪುಸ್ತಕಗಳಲ್ಲಿ ಮುಳುಗಿಹೋಗುತ್ತಾರೆ. ಒಮ್ಮೆ ಏರೋಪ್ಲೇನ್ ಫ್ಯಾಕ್ಟರಿಯಲ್ಲಿ ಯುವಕರು ಬೇಕಿದ್ದಾರೆ ಎಂಬ ಜಾಹಿರಾತಿನಿಂದ ಶಿವರುದ್ರಪ್ಪನವರ ತಂದೆ ಮಗನನ್ನು ಕೆಲಸಕ್ಕೆ ಸೇರಲು ಪ್ರೋತ್ಸಾಹಿಸಿ ಬೆಂಗಳೂರಿಗೆ ಇಂಟ್ರವ್ಯೂಗೆ ಕಳುಹಿಸುತ್ತಾರೆ. ಅಲ್ಲಿ Physical fitness ನಂತರ ಡಾಕ್ಟರ್  your are unfit for this job. ಹೋಗು ಮನೆಗೆ ಎಂದು ಕಳುಹಿಸಿಬಿಡುತ್ತಾರೆ. ಕೊನೆಗೆ ಹ್ಯಾಪ್ ಮೋರೆ ಹಾಕಿಕೊಂಡು ಬಂದ ಶಿವರುದ್ರಪ್ಪನವರು ತಂದೆಯೊಂದಿಗೆ ಸದ್ಯಕ್ಕೆ ಕೆಲಸ ಖಾಲಿ ಇಲ್ಲವಂತೆ ಎಂದು ಸುಳ್ಳು ಹೇಳುತ್ತಾರೆ. 

ಮುಂದೆ ನಗರಸಭೆಗೆ ಬಿಲ್ ಕಲೆಕ್ಟರ್ ವೃತಿಗಾಗಿ ಇಂಟರ್ವ್ಯೂಗೆ ತಂದೆಯವರೇ ಶಿವರುದ್ರಪ್ಪನವರನ್ನು ಕರೆದುಕೊಂಡು ಹೋಗುತ್ತಾರೆ. ಅಲ್ಲಿ ಕಮೀಷನರ್ ನಿನ್ನ ವಯಸ್ಸು ಎಷ್ಟು ಎಂದಾಗ ೧೬ ಎಂದು ಕೇಳಿ, "ನೀನು ಮನೆಗೆ ಹೋಗು, ನೀನು ಇನ್ನು ಚಿಕ್ಕವನು ಈ ಕೆಲಸ ನಿನ್ನದಲ್ಲ" ಎಂದುಬಿಡುತ್ತಾರೆ. ಅಲ್ಲೇ ಇದ್ದ ಶಾಂತವೀರಪ್ಪನವರನ್ನು ಕರೆಸಿ 'ಇಷ್ಟು ಚಿಕ್ಕ ಹುಡುಗನ್ನ ಈಗಲೇ ಕೆಲಸಕ್ಕೆ ಸೇರಿಸಲು ಯಾಕ್ರಿ ಕರಕೊಂಡು ಬಂದಿದ್ದೀರಿ? ಈ ಕೆಲಸ ಎಂಥದು ಗೊತ್ತೆ? ಕರೆದುಕೊಂಡು ಹೋಗಿ ಮುಂದಕ್ಕೆ ಓದಿಸಿ’ ಎಂದು ಆ ಕಮೀಷನರ್ ಹೇಳಿ ಕಳುಹಿಸಿಬಿಡುತ್ತಾರೆ. 

ಸ್ವಾತಂತ್ರ್ಯ ಹೋರಾಟದ ನಡುವೆ ತಮ್ಮ ವಿದ್ಯಾಭ್ಯಾಸ ನಿಂತುಹೋಗಿತ್ತು. ೧೯೪೩ರ ಜೂನ್ ವೇಳೆಗೆ ಮತ್ತೆ ತುಮಕೂರು ಇಂಟರ್ ಮೀಡಿಯೇಟ್ ಕಾಲೇಜನ್ನು ಸೇರಿದರು. ಆನಂತರದ ದಿನಗಳಲ್ಲಿ ತುಮಕೂರಿನ ಸಿದ್ಧಗಂಗಾ ಮಠದಲ್ಲಿ ಇದ್ದುಕೊಂಡು ದಿನವೂ ಕಾಲೇಜಿಗೆ ಹೋಗಿಬರುತ್ತಲಿದ್ದರು. ಜೂನಿಯರ್ ಇಂಟರ್ ಪರೀಕ್ಷೆ ಪಾಸಾದ ನಂತರ ಸಕಲೇಶಪುರದ ರೇಂಜ್ ಇನ್ಸ್ಪೆಕ್ಟರ್ ಕಛೇರಿಯಲ್ಲಿ ಗುಮಾಸ್ತರಾಗಿ ಬೇಸಿಗೆ ರಜೆಯನ್ನು ಕಳೆದರು. ಮುಂದೆ ಬಿ.ಎ ಓದಬೇಕು ಎಂಬ ಆಸೆಯಿದ್ದರೂ ತಮ್ಮ ತಂದೆಯ ಆಶಯದ ಮೇರೆಗೆ ಆಹಾರ ಧಾನ್ಯಗಳ ಡಿಪೋನಲ್ಲಿ "ರೇಷನ್ ಗುಮಾಸ್ತ"ರಾದರು. ಈ ವೃತ್ತಿಯಿಂದ ಸುತ್ತಮುತ್ತಲ ಜನರ ಬವಣೆ ಮತ್ತು ತಾಕಲಾಟಗಳನ್ನು ನೋಡಿ "ಚಕ್ರವ್ಯೂಹ" ಕಾದಂಬರಿ ಬರೆಯುವಂತೆ ಮಾಡಿತು.  ವಿಪರ್ಯಾಸವೆಂದರೆ ಈ ಕಾದಂಬರಿಯ ಹಸ್ತಪ್ರತಿ ಓದಲು ತೆಗೆದುಕೊಂಡು ಹೋದವರು ಹಿಂದಿರುಗಿಸುವುದೇ ಇಲ್ಲ.

೧೯೪೬ರ ನಂತರ ಮತ್ತೆ ಓದುವ ಮನಸ್ಸು ಮಾಡಿದರು ಆಗ ಮೈಸೂರಿಗೆ ಬಂದು ಬಿ.ಎ ಆನರ್ಸ್ನಲ್ಲಿ ಕನ್ನಡ  ಸೇರಿಕೊಂಡರು. ಅಲ್ಲಿಂದಾಚೆಗೆ ಕೆ.ವಿ ಪುಟ್ಟಪ್ಪ (ಕುವೆಂಪು) ಅವರ ಪಾಠ ಕೇಳುವ ಯೋಗ ಕೂಡಿಬಂದಿತು. 

ಮುಂದೆ ಮತ್ತಷ್ಟು ವಿಷಯಗಳು ನಿಮ್ಮೊಂದಿಗೆ .... 

Thursday, December 12, 2013

ನಿತ್ಯ ಕಾಯಕ

ಚಿತ್ರ ಕೃಪೆ - ಮಲ್ಲಿಕಾರ್ಜುನ್ 


ದೇಹ, ಮನಸು ಬಯಸುತ್ತದೋ ಬಿಡುತ್ತದೋ
ಭಾರವನ್ನು ಹೊರಲೇ ಬೇಕು ಬವಣೆಗಳ ತೀರಿಸಲೇ ಬೇಕು

ನಮ್ಮದು ಐಷಾರಾಮಿ ಜೀವವಲ್ಲ
ಪ್ರಕೃತಿಯನೇ ನಂಬಿರುವ ಬಾಳ್ವೆ ನಮ್ಮದು

ಗಂಡ ಹೊಲ ಗದ್ದೆ ದನಕರುಗಳ ಹಿಂದೆ
ಕೂಸು ಬೆನ್ನಿಗೆ ಬಿಗಿದ ಚೀಲದ ಮುಂದೆ 
ನಾನು ಬಾವಿ ಬಾಯಿಗೆ ಹಗ್ಗ ಬಿಟ್ಟೆ
ಇನ್ನು ಬಾಯಾರಿಕೆಯ ನೆವ ತೀರಿಸುವ ಸಮೀಕ್ಷೆ 

ದಣಿವು ತೀರಿಸುವ ಈ ಬಿಂದಿಗೆ 
ಹೊರೆಯೋ  ಹಗುರವೋ 
ಒಯ್ಯುವ ಬಂಡಿ ನಾನೇ
ಹಳ್ಳಿ ದೇಹ ಕಟ್ಟುಮಸ್ತು 
ಎಂತ ಭಾರವನೂ ಸಹಿಸಲು ಅಸ್ತು ..

ಪಾದುಕೆಯ ಆವಾಹನ ಇಲ್ಲ
ಬಿಸಿಲ ಸಮ್ಮೋಹನವಿಲ್ಲ
ಕಾಲುದಾರಿಯೇ ಹೆಜ್ಜೆಗೆ ಆಹ್ವಾನ
ನಡು ಬಿರುಸು ಹೊರೆಗೆ 
ಸಿಂಬೆ ನೆತ್ತಿಯ ನೋವಿಗೆ
ಇದು ದಿನನಿತ್ಯದ ಕಾಯಕ

Tuesday, December 3, 2013

ಜಾತಿ ಹಿಂದೆ ಹೋಗುವುದು ಬೇಡ..!!

ನಿನ್ನೆ ದಿನ...

ನಿಮ್ಮ ಬಾಸ್ ಇಲ್ವಾ..? ಅವರ ರೂಮ್ ನಲ್ಲಿ ಕಾಣುತ್ತಿಲ್ಲ, ಎಂದ ಮೆದು ಸ್ವರ ಅತ್ತ ಬಾಗಿಲಿನ ಕಡೆ ಕಣ್ಣು ತೆರೆಯುವಂತೆ ಮಾಡಿತು. (ಆತ ಕಾಂಟ್ರಾಕ್ಟ್ ಕಂಪನಿಯಲ್ಲಿ ನಮ್ಮದೇ ಪ್ರಾಜಕ್ಟ್ ನಲ್ಲಿ ಕೆಲಸ ಮಾಡುತ್ತಿದ್ದವ,  ಸುಮಾರು ೪ ವರ್ಷಗಳಿಂದ ಒಂದೇ ಕಡೆ ಕೆಲಸಮಾಡುತ್ತಿದ್ದರಿಂದ ಚಿರಪರಿಚಿತ).

ಇಲ್ಲ ಅನ್ಸುತ್ತೆ
ಯಾಕೆ ಏನ್ ಸಮಚಾರ..? ಎಂದು ಕೇಳುತ್ತಿದ್ದಂತೆ

ಏನಿಲ್ಲ ನನ್ನ ಮಗಳ ಮದುವೆ ಅದಕ್ಕೆ ಅವರಿಗೆ ಪತ್ರಿಕೆ ಕೊಡಬೇಕಿತ್ತು. ಎಂದು ಖುಷಿ ಖುಷಿಯಲ್ಲಿ ಹೇಳುತ್ತ ನಿಂತ.

ಓಹ್ ಹೌದಾ..!! ಯಾಕೆ ನಮ್ಮ ಪ್ರಾಜೆಕ್ಟ್ ಮ್ಯಾನೇಜರ್ ನಿಮಗೆ ಅಷ್ಟು ಪರಿಚಿತರೇ..? ಅದು ಅಲ್ಲದೇ ಆಕೆ ಈಜಿಪ್ಟ್ ನವರು, ಭಾರತಕ್ಕೆ ಬರುತ್ತಾರಾ..?? ಎಂದು ನಾನು ಪ್ರಶ್ನಿಸಿದೆ. 

ಏನಿಲ್ಲ ಸುಮ್ಮನೆ ಮದುವೆ ಅಲ್ವಾ ಅದಕ್ಕೆ ಎಂದ... !! - ಹಾಗೂ ಮುಂದುವರಿದು ಮತ್ತಷ್ಟು ಪ್ರಶ್ನೆ ಕೇಳಿದೆ

ಅದು ಸರಿ ನಾನು ಮತ್ತೆ ಮಿಕ್ಕುಳಿದವರು ನಮ್ಮ ಕಚೇರಿ, ವಿನ್ಯಾಸ ಸಲಹಗಾರ ಕಚೇರಿಯವರಲ್ಲಿ ಎಷ್ಟು ಜನ ಭಾರತಿಯರಿದ್ದಾರೆ. ನಿನ್ನ ಮಗಳು ನನಗೆ ಎಷ್ಟು ಚೆನ್ನಾಗಿ ಪರಿಚಯ (ಆತನ ಮಗಳು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದರಿಂದ ಅವಳನ್ನು ಬಹಳಷ್ಟು ಬಾರಿ ಭೇಟಿ ಮಾಡಿದ್ದೆ) ನಮಗೆಲ್ಲ ಪತ್ರಿಕೆ ಕೊಡಬೇಕು ಎಂದೆನಿಸಲಿಲ್ಲವೇ..?  ಅದೂ ಅಲ್ಲದೇ ನಿಮ್ಮ ಕೇರಳದವರೇ ಆದ ಎಲೆಕ್ಟ್ರಿಕಲ್ ಇಂಜಿನಿಯರ್ ಅವರು ನಿಮ್ಮ ಪಕ್ಕದ ಊರಿನವರು. ಕಳೆದ ಬಾರಿ ಏನೋ ೪-೫ ಕೇಜಿಗಟ್ಟಲೆ ಪಾರ್ಸೆಲ್ ಕಳುಹಿಸಿದ್ದೆ ನಿನ್ನ ಹೆಂಡತಿಗೆ. ಅವರಿಗಾದರೂ ಕೊಡಬಹುದಿತ್ತು ಅಲ್ಲವಾ..? ಅವರು ಮದುವೆಗೆ ಬರಲಾಗದಿದ್ದರೆ ಅವರ ಮನೆ ಕಡೆಯಿಂದ ಯಾರನ್ನಾದರೂ ಕಳುಹಿಸುತ್ತಿದ್ದರು. - ಏಕೆ ಹೀಗೆ ??

ಹಾಗೇನಿಲ್ಲ, ಕೊಡಬಾರದೆಂದೇನಲ್ಲಾ "ನಿಮ್ಮ ಪ್ರಾಜೆಕ್ಟ್ ಮ್ಯಾನೇಜರ್ "ಕ್ರಿಶ್ಚಿಯನ್ " ಅದಕ್ಕೆ ಪತ್ರಿಕೆ ಕೊಡೋಣ ಎಂದು ಬಂದೆ..!!" ಈ ಮಾತು ಕೇಳಿದ ಕೂಡಲೆ ನನಗೇಕೋ ಕಸಿವಿಸಿ ಎನಿಸಿತು. ಆದರೂ ಸಾವರಿಸಿಕೊಂಡೆ.

ಚಿತ್ರ- ನೆಟ್ ಲೋಕ

ಹೀಗೆ ಮಾಡುತ್ತಿರುವುದು ಸರಿಯಲ್ಲಾ, ಆಕೆ ಈಜಿಪ್ಟ್ ನವಳು ಅದೂ ಅಲ್ಲದೇ ಭಾರತ ದೇಶದ ಗಂಧಗಾಳಿಯಿಲ್ಲದವರೂ,  ಅವರಿಗೂ ಪತ್ರಿಕೆ ಕೊಡಿ ಬೇಡವೆಂದು ಹೇಳುತ್ತಿಲ್ಲ, ಯಾವ ದೇಶದವರಾದರೇನು ಎಲ್ಲರ ಆಶೀರ್ವಾದ ನಿಮ್ಮ ಮಗಳಿಗೆ ಬೇಕು. ಜಾತಿ ಒಂದೇ ಎಂದ ಮಾತ್ರಕ್ಕೆ ಮಿಕ್ಕವರನ್ನು ನಿರ್ಲಕ್ಷಿಸುವುದು ಒಳಿತಲ್ಲ. ಜಾತಿ ಯಾರು ಮಾಡಿದರು ನೀವು ಹಿಂದು ಹೆಸರಿನಲ್ಲೇ ಕರೆಯಲ್ಪಡುತ್ತೀರಿ ನಿಮ್ಮ ಹೆಸರಿನಲ್ಲಿ ಭಾರತೀಯ ಮೂಲತೆ ಇದೆ. ಎಲ್ಲರಲ್ಲೂ ಏಕತೆಯನ್ನು ಕಾಣಿ.

ಅದರಲ್ಲೂ ಹೊರ ದೇಶಕ್ಕೆ ಬಂದಾಗ ನಾವು ಜಾತಿಯನ್ನಿಟ್ಟುಕೊಂಡು ಬಂದವರಲ್ಲ, ಭಾರತೀಯರು ಎಂಬುದೊಂದೇ ನಮ್ಮ ಮಂತ್ರ...!! ಜಾತಿಯ ಹಿಂದೆ ಹೋಗದಿರಿ. ಇಂತಹ ನಡವಳಿಕೆ ನಿಮಗೆ ಶೋಭೆ ತರುವಂತಹುದಲ್ಲ. - ಇಷ್ಟು ಮಾತನಾಡುತ್ತಿದ್ದಂತೆ ನಮ್ಮ ಪ್ರಾಜೆಕ್ಟ್ ಮ್ಯಾನೇಜರ್ ಬಂದಳು.. ಈತ ಸರಿ ಹೊರಡುವೆ ಎಂದು ಹೇಳಿ ಹೊರಡುತ್ತಿದ್ದವನನ್ನು ತಡೆದು.

"ನಾನು ಇದನ್ನು ಖಂಡಿಸುತ್ತೇನೆ" ಎಂದಷ್ಟೇ ಹೇಳಿ ಸಾಗಾಕಿದೆ..!!

ಸಂಜೆ ಮನೆಗೆ ಹೋದನಂತರ ಈ-ಮೈಲ್ ತೆರೆದಾಗ ಕಂಡಿದ್ದು ಮದುವೆಯ ಕರೆಯೋಲೆ ಜೊತೆಗೆ ೧೦ ಜನರಿಗೂ ಲಗತ್ತಿಸಲಾಗಿತ್ತು. 

ಇಂದು ಬೆಳ್ಳಗ್ಗೆ ಆತ ಬಂದು ಕ್ಷಮೆ ಕೋರಿ ನಾನು ಹಾಗೆ ಮಾಡಬಾರದಿತ್ತು. ತೆಗೆದುಕೊಳ್ಳಿ ಪತ್ರಿಕೆ ಮಗಳಿಗೆ ನಿಮ್ಮೆಲ್ಲರ ಆಶೀರ್ವಾದವಿರಲಿ ಎಂದು ಹೇಳಿ ಹೊರಟ.

ಇತ್ತ ನಮ್ಮ ಕಚೇರಿಯವರೆಲ್ಲ ಆತನ ಮಗಳಿಗೊಂದು ಉಡುಗೊರೆ ಕೊಟ್ಟು ಆಶೀರ್ವಾದಕ್ಕೆ ಗ್ರೀಟಿಂಗ್ ಕಳುಹಿಸೋಣ ಎಂದು ಎಲ್ಲರೂ ನಿರ್ಧರಿಸಿದರು. ಆದರೆ ಪ್ರಾಜೆಕ್ಟ್ ಮ್ಯಾನೇಜರ್ ಗೆ ಕೊಟ್ಟ ಪತ್ರಿಕೆ ಮಾತ್ರ ಕಸದ ಬುಟ್ಟಿಯಲ್ಲಿತ್ತು ಅದನ್ನು ತಂದು ನನ್ನ ಆಫೀಸ್ ಬಾಯ್ ನನ್ನ ಕೈಗೆ ಕೊಟ್ಟ. 

ಏಕೋ ಮನಸ್ಸಿನೊಳಗೆ ಒಂದು ರೀತಿ. ಆತನಿಗೂ ಮನವರಿಕೆ ಪೂರ್ಣ ಪ್ರಮಾಣದಲ್ಲಾಗಿದೆ ಎಂದುಕೊಂಡಿದ್ದೇನೆ. ಆದರೆ ಯಾರೂ ಜಾತಿ ಹಿಂದೆ ಹೋಗುವುದು ಬೇಡ ಮಾನವೀಯತೆಯೊಂದೇ ಧರ್ಮ ಅದನ್ನು ಪಾಲಿಸಬೇಕಿದೆ ಅಷ್ಟೇ..!!

Monday, December 2, 2013

ಕಾವಿನ ಸ್ಪರ್ಶ


ಸಣ್ಣ ಬಿಸಿಯೊಂದು ತಾಕಿ ಒಡಕಾದ ಗಾಜು 
ಮರು ಲೇಪಿಸಲಾಗದೆ ಮೂಡಿತೊಂದು ಗೆರೆಯು 

ಏನೊಂದು ಅರಿಯದ ಬಿಸಿಯು ತನ್ನ ಕಾವ ಮರೆತು
ಬಿರುಕು ಹುಟ್ಟಿಸಿ ಬಳಕೆ ಕಸಿಯಿತು

ತನ್ನೊಳಗಿನ ಶಕ್ತಿ ಟೊಳ್ಳೆಂದು ಬಯಸಿ
ಗಾಜು ಹಿತವಾದ ಶಾಖಕೆ ಪರವಶವಾಯಿತು

ಬಲವಿಲ್ಲದ ಕಾವು ಒಡಕಲ್ಲದ ಗಾಜು
ತನ್ನರಿವು ಅರಿಯದೆ ಒಬ್ಬರಿಗೊಬ್ಬರು ಆಹುತಿ 
ಮುಖಾಮುಖಿ ಭೇಟಿ ಇನ್ನೆಲ್ಲಿ
ಗಾಜಿನ್ನು ಕಸದ ಬುಟ್ಟಿಯಲ್ಲಿ ...!!! 



ಗಾಜಿನ ತಟ್ಟೆ ಆಕಸ್ಮಿಕವಾಗಿ ಕಾವು ತಾಕಿ ಚೂರಾದ ಸಂದರ್ಭದಲ್ಲಿ ಮನಸ್ಸಿಗೆ ಹೊಳೆದ ಸಾಲುಗಳು :) :)