Tuesday, March 9, 2010

ಕೋಮಲ ಕುಸುಮ ಮಣ್ಣ ಸೇರಿತು

ಅಮ್ಮನ ಮನೆ ಕಡೆ ಹೆಜ್ಜೆ ಇಟ್ಟ ಕೂಡಲೆ ಕಹಿ ಘಟನೆಗಳೆಲ್ಲವನ್ನು ಮರೆತು, ಮನಸನ್ನು ಸ್ವಚ್ಚಂದದಿ ತೇಲಾಡಲು ಬಿಡುತ್ತಾಳೆ. ಅಮ್ಮ, ತಮ್ಮ,ತಂಗಿ, ಅಪ್ಪ ಎಲ್ಲರು ದೀಕ್ಷಳನ್ನು ಕಾಣುವುದೇ ತಡ ಮುಗಿಲೇ ಕೈಗೆಬಂದಂತೆ ಆಗುತ್ತದವರಿಗೆಲ್ಲ. ಹಲವು ದಿನಗಳ ನಂತರ ದೀಕ್ಷಳ ಆಗಮನ ಖುಷಿ ನೀಡಿತ್ತು, ದೀಕ್ಷಳಿಗೆ ಉಪಚಾರವೋ ಉಪಚಾರ ಅಮ್ಮನ ಕೈತುತ್ತು, ಅಪ್ಪನ ಹಾರೈಕೆ, ತಮ್ಮ ತಂಗಿಯ ಸೇವೆ ಎಲ್ಲದರಲ್ಲು ಮುಳುಗಿ ಹೋಗಿದ್ದಳು. ಅಪ್ಪ ಮಗಳಲ್ಲಿ ಏನೋ ಮಾತನಾಡಬೇಕೆಂದು ಕೊಳ್ಳುತ್ತಾರೆ. ಅವಳ ಮುಂದೆ ಬಂದು ನಿಂತು ಮಾತನಾಡಲು ತಡವರಿಸುತ್ತಲಿರುತ್ತಾರಾದರೂ ಸುಮ್ಮನಿರಲು ಪ್ರಯತ್ನಿಸುವುದನ್ನು ಮಗಳು ಗಮನಿಸಿ, ಅಪ್ಪ ನೀವೇನೋ ಹೇಳಲಿದ್ದೀರಿ ಹೇಳಿ ಎಂದಾಗ ಮಗು, ನಾ ಹೇಳುವ ಮಾತು ಗಂಭೀರವಾದದ್ದು ನಿನ್ನ ಜೀವನಕ್ಕೆ ಸಂಬಂಧಿಸಿದ್ದು ಎಂದು.... ಅಂದು ಅವರಪ್ಪ ಕದ್ದು ಕೇಳಿಸಿಕೊಂಡ ಚಿತ್ರಣವನ್ನೆಲ್ಲ ಅವಳೆದುರಿಡುತ್ತಾನೆ. ತದೇಕ ಚಿತ್ತಳಾಗಿ ಕೇಳುತ್ತಲಿದ್ದ ದೀಕ್ಷಳಿಗೆ ಮೈ ಒಮ್ಮೆಲೆ ಝುಮ್ ಎಂದುಬಿಡುತ್ತದೆ. ಎಷ್ಟೆ ಆಗಲಿ ಅಪ್ಪ ನನ್ನ ನೋವು ತಿಳಿದು ಅವರೆಷ್ಟು ನೊಂದು ಬಿಡುಟ್ಟಿದ್ದರು ಎಂದು ಅವಳ ಒಳ ಮನಸು ಹೇಳುತ್ತಲಿರುತ್ತೆ.

ಅತ್ತೆ ಮನೆಯಲ್ಲಿ ನೆಡೆಯೋ ಮುಸುಕಿನೊಳಗಿನ ಗುದ್ದಾಟದಲ್ಲಿ ನಲುಕಿರುವುದು ಅಪ್ಪ, ಮಗಳು ಮಾತ್ರ. ಬೇರಾರಿಗೂ ತಿಳಿದಿಲ್ಲ ಆದರೂ ಮಗಳು ಅಪ್ಪನನ್ನು ಸಮಾಧಾನಗೊಳಿಸಿ ನೀವೇನು ಚಿಂತಿಸಬೇಡಿ. ಹಲವು ವರ್ಷದ ಹಿಂದೆ ಮಾಡಿಕೊಂಡ ನಮ್ಮ ಜಾತಿ ಕಟ್ಟುಪಾಡಿಗೆ ನೀವು ಯಾರು ಜವಾಬ್ದಾರರಲ್ಲ ಹಾಗೆಂದು ಕ್ರಿಸ್ಟಿಯನ್ ಜನರಂತೆ ನಾವು ಪೂಜೆಯನ್ನು ಮಾಡುತ್ತಲಿದ್ದೇವೆ. ಕೇವಲ ಹೆಸರು ಬದಲಾವಣೆಯಲ್ಲೇನಿದೆ ಈ ಜನರಿಗೆ ಬುದ್ಧಿ ಬರುವುದಿಲ್ಲ. ನಾನು, ಅವೆಲ್ಲವನ್ನು ನಿಭಾಯಿಸುವೆ ಈ ಸಣ್ಣ ವಿಷಯ ದೊಡ್ಡ ಪ್ರಮಾದವಾಗಿದೆಯೆಂದು ಯಾರಲ್ಲೂ ಹೇಳುವುದುಬೇಡ. ನೆಮ್ಮದಿಯಾಗಿದ್ದು ಬಿಡಿ ಎಂದು ಅಪ್ಪನಲ್ಲಿ ಮೊರೆಯಿಡುತ್ತಾಳೆ. ಅಪ್ಪನು ಏನೋ ಧೈರ್ಯ ಮಾಡಿ ಸುಮ್ಮನಾಗುತ್ತಾರೆ.

ಇನ್ನೇನು ಅತ್ತೆ ಮನೆಗೆ ಹೊರಡಬೇಕೆನ್ನುತ್ತಲಿರುವಂತೆ ದೀಕ್ಷಳು ತಲೆ ಸುತ್ತಿ ಹಾಗೆ ಕುಸಿದು ಬೀಳುತ್ತಾಳೆ. ಇದ ಕಂಡ ಅಮ್ಮ ಡಾಕ್ಟರರಲ್ಲಿ ತೋರಿಸಿಕೊಂಡು ಹೋಗು ಇಂದು ಇಲ್ಲೇ ಇರೆಂದು ಹೇಳಲು, ಇಲ್ಲಮ್ಮ ನಾ ಹೊರಡುವೆ ನನಗೇನಾಗಿಲ್ಲವೆಂದು ಹೊರಟೆ ಬಿಡುವಳು.
----------
ಗಂಡನ ಮನೆಗೆ ಬರುತ್ತಲೇ ಕಾದಿತ್ತು ಮುಸುಕಿನ ಹಬ್ಬ ಎದುರು ಬಂದ ಅತ್ತೆ ಮಾವ, ಎಲ್ಲಿಗೆ ಹೋಗಿದ್ದೋ ಅಲ್ಲೇ ಇದ್ದು ಬಿಡು. ನಮ್ಮ ಮನೆಗೆ ಬರುವುದು ಬೇಕಿಲ್ಲವೆಂದು ಅತಿ ತಿರಸ್ಕಾರದಿಂದ ಹೇಳುವರು. ಅಷ್ಟರಲ್ಲಿ ಮಗ ಕೆಲಸದಿಂದ ಬರುತ್ತಾನೆ, ಬಾಗಿಲಲ್ಲೇ ನಿಲ್ಲಿಸಿದ್ದ ಹೆಂಡತಿಯನೊಮ್ಮೆ ನೋಡಿ ಒಳನೆಡೆದ. ಆಕೆಯೂ ಗಂಡನೊಟ್ಟಿಗೆ ನೆಡೆಯಲೆತ್ನಿಸುವಾಗ ಒಮ್ಮೆಲೇ ಅಲ್ಲೇ ನಿಲ್ಲು, ನನ್ನಪ್ಪ ಅಮ್ಮ ನಿಲ್ಲಿಸಿರುವುದೇಕೆ, ನಿನ್ನ ತಪ್ಪಿಗೆ ಶಿಕ್ಷೆ ಎಂದೇಳಿ ಒಳಗೋಗುತ್ತಾನೆ. ದೀಕ್ಷ ಮರುಮಾತಾಡದೆ ಅಪ್ಪನ ಮನೆಯಲ್ಲಿ ಕಳೆದ ಸಂತಸ ಕ್ಷಣವನ್ನು ನೆನೆದು ಅಲ್ಲೇ ಬಾಗಿಲಲ್ಲಿ ನಿಂತಿರುತ್ತಾಳೆ. ಇವಳು ಈ ಮೊದಲೇ ಮಾನಸಿಕವಾಗಿ ತಯಾರಾಗೇ ಬಂದಿದ್ದಳು. ಆಗುವುದೆಲ್ಲ ಆಗಲಿ ಭಗವಂತನ ದಯೆ ಇರಲೆಂದು, ಸುಮ್ಮನೆ ನೆಲ ನೋಡುತ್ತಲಿದ್ದಳು. ಆ ಕ್ಷಣ ಪಕ್ಕದ ಮನೆಯವರಲ್ಲೆ ಇವಳತ್ತ ನೋಡುತ್ತಿರುವುದು ಕಂಡು ಬೇಸರದಿಂದ ಅತ್ತೆ, ಮಾವ, ಗಂಡ ಎಲ್ಲರಿಗೂ ಸಮಾಧಾನದಿ ಹೇಳಿಕೊಳ್ಳುತ್ತಾಳೆ, ತಪ್ಪಾಯಿತು ಮತ್ತೊಮ್ಮೆ ಒಪ್ಪಿಗೆ ಇಲ್ಲದೆ ಹೋಗುವುದಿಲ್ಲ ಎಂದು ಗೋಗರೆದರಾರು ಬಗ್ಗಲಿಲ್ಲ. ನಿಂತಿದ್ದ ದೀಕ್ಷ ಒಮ್ಮೆಲೆ ಕುಸಿದು ಬಿದ್ದಾಗ ಅಕ್ಕಪಕ್ಕದವರು ಬಂದು ನೋಡುತ್ತಲಿದ್ದಂತೆ, ಬಾಗಿಲು ತೆರೆದ ಅತ್ತೆಮಾವ ಡಾಕ್ಟರರನ್ನು ಕರೆತರುತ್ತಾರೆ, ಭಯದಲ್ಲೇ ಸೊಸೆ ಡಾಕ್ಟರರಿಗೇನು ಹೇಳಿ ಬಿಡುವಳೋ ಎಂದು ಹೆದರಿ ಅವಳ ಸೇವೆ ಮಾಡುತ್ತಾರೆ. ಇದೇ ಸಮಯಕ್ಕೆ ಸರಿಯಾಗಿ ಡಾಕ್ಟರರು ಸಿಹಿಸುದ್ದಿ ನೀಡಿ ಬೂದಿ ಮುಚ್ಚಿದ ಕೆಂಡದಂತೆ ಅಲ್ಲಿನ ಕಹಿ ಘಟನೆಗೆ ತಾತ್ಕಾಲಿಕ ತಿಲಾಂಜಲಿಯಿಡುತ್ತಾರೆ. ಇನ್ನು ದೀಕ್ಷ ಮನೆಗೊಂದು ಮಗು ಕೊಡುವ ನಿಮಿತ್ತ ಸಂತಸದ ಅಲೆ ಸೃಷ್ಟಿಸುತ್ತಾಳೆ.

ಮನೆಗೆ ದೇವರು ಬರಲಿ, ಮಗು ಬರಲಿ, ನಾಯಿ ಬಾಲ ಡೊಂಕು ಎಂಬಂತೆ ೯ ತಿಂಗಳ ನಂತರ ಹೆಣ್ಣು ಮಗುವಿನ ಆಗಮನ, ಉರಿಯುವ ಬೆಂಕಿಗೆ ತುಪ್ಪ ಸುರಿದಂತೆ ಹೀಯಾಳಿಸುವುದು ಮತ್ತಷ್ಟು ಅತಿಯಾಯಿತು. ಅಪ್ಪ ಅಮ್ಮನಿಗೂ ಸ್ವಲ್ಪ ಸ್ವಲ್ಪ ತಿಳಿದು ನ್ಯಾಯ ಪಂಚಾಯಿತಿ ಎಂದು ಹಿರಿಯರೆದುರು ಮಾತುಕತೆಗಳಾದವು, ಆದರು ಏಕೋ ಗಂಡ, ಅತ್ತೆ ಮಾವನನ್ನು ಸಮಾಧಾನಿಸಲಾಗಲಿಲ್ಲ ಆದರೂ ಜೀವನ ನೆಡೆಸುತ್ತಲಿದ್ದಳು.

ಇತ್ತ ತಂದೆ ತಾಯಿ ದಿನವೆಲ್ಲ ಅವಳ ಬಗ್ಗೆ ಕೊರಗುತ್ತಲಿದ್ದರು, ಇತ್ತ ಕ್ಷಮ (ದೀಕ್ಷಳ ತಂಗಿ) ತನ್ನ ಪ್ರೇಮದಲ್ಲಿ ತಲ್ಲೀನಳಾಗಿದ್ದಳು. ಅಕ್ಕನ ಬಗೆಗಿನ ದುಃಖವನ್ನು ಸಂಕೇತನಲ್ಲಿ ಹೇಳಿಕೊಂಡು ದುಃಖಿಸುತ್ತಲಿದ್ದಳು, ಆದರೇನು ಸಮಾಧಾನ ಪಡಿಸುವುದೊಂದೇ ಸೂತ್ರ ಅವನಿಗೆ. ಒಮ್ಮೆ ಸಂಕೇತ್ ಮತ್ತು ಕ್ಷಮ ಸಿನಿಮ ನೋಡಲು ಹೋಗಿರುತ್ತಾರೆ. ಅದು ಕ್ಷಮ ಹಿಂದೂ ಧರ್ಮದವರಂತೆ ಸೀರೆಯುಟ್ಟು ಹಣೆಗೆ ಕುಂಕುಮವನ್ನಿಟ್ಟು, ಹೂ ಮುಡಿದು, ಜೊತೆ ಜೊತೆಯಲ್ಲಿ ನೆಡೆಯುತ್ತಿರುವುದ ಕಂಡ ಬಾವ (ಅಕ್ಕನ ಗಂಡ) ಒಳಗೊಳಗೆ ಕುದಿಯುತ್ತ ಮರಳಿ ಮನೆಗೆ ಹೋಗಿ ತಂಗಿಯ ಬಗೆಗೆ ಹೇಳಿ ಹೆಂಡತಿಯತ್ತಿರ ಒಂದು ದೊಡ್ಡ ರಾಮಾಯಣವನ್ನೇ ಮಾಡಿಬಿಡುತ್ತಾನೆ. ಸಣ್ಣ ಮಾತು ಪ್ರಕೋಪಕ್ಕೆ ತಿರುಗಿ ದೀಕ್ಷಳ ಕೆನ್ನೆಗೆ ಹೊಡೆಯುವ ಮಟ್ಟಕ್ಕೆ ತಿರುಗುತ್ತದೆ, ಅದು ಅವಳ ಪ್ರಾಣಕ್ಕೆ ಕುತ್ತಾಗಿ ಬಿಡುತ್ತದೆ. ತಕ್ಷಣವೇ ಎಚ್ಚೆತ್ತ ಅವರ ಮನೆಯವರು ಯಾವುದೋ ನೆಪವೇಳಿ ಕಾಲು ಜಾರಿ ಬಿದ್ದು ಪ್ರಾಣಹೋಯಿತೆಂದು ಅವರ ಅಮ್ಮನ ಮನೆಯವರು ಬರುವ ಮೊದಲು ಡಾಕ್ಟರ್ ಸರ್ಟಿಫಿಕೇಟ್ ಮಾಡಿಸಿಬಿಡುತ್ತಾರೆ. ಪುಟ್ಟ ತಪ್ಪು ಅದು ಯಾರದೋ, ಅವಳಿಗೆ ಸಂಬಂಧಿಸಿದಲ್ಲ ಆದರೂ ಜಾಣೆ, ಸುಂದರೆ, ಧೈರ್ಯವಂತೆ ಎಲ್ಲವೂ ಆಗಿದ್ದ ಕುಸುಮಕೋಮಲೆ ಮಣ್ಣಾಗಿ ಬಿಟ್ಟಳು.


ಅಪ್ಪ, ಅಮ್ಮ ಮಗಳ ಸಾವಿನ ವಾರ್ತೆ ತಿಳಿಯುತ್ತಿದ್ದಂತೆ ಕಡಲ ಅಬ್ಬರವೇ ಒಡಲಿಗೆ ಬಂದೊಡೆದಂತೆ ಕುಸಿದು ಬೀಳುತ್ತಾರೆ. ಮನೆಯಲ್ಲಿ ಸಾವಿನ ಛಾಯೆ ಎದ್ದು ಕಾಣುತ್ತಲಿರುತ್ತೆ ಅವಳ ಸಾವು ಕೇವಲ ಹಿಂದೂ ವೇಷಭೂಷಣ ಅಥವ ಹೆಸರು ಬದಲಾವಣೆ ಇಷ್ಟೆ ಅವಳ ಸಾವಿಗೆ ಕಾರಣವೆಂದು ಯಾರಿಗೂ ತಿಳಿದಿರಲಿಲ್ಲ. ಅಪ್ಪನಿಗೆ ಅಲ್ಪ ಸ್ವಲ್ಪ ತಿಳಿದಿದ್ದರೂ ಅಳಿಯನಿಗೆ ಶಿಕ್ಷಿಸುವ ಮನಸೇ ಮಾಡಲಿಲ್ಲ. ಹೋದ ಮಗಳು ಮತ್ತೆ ಬರುವಳೆ ಎಂಬ ದುಃಖದ ದೈನ್ಯತೆಯಲ್ಲಿ ಮುಳುಗಿ ಹೋಗಿದ್ದರು. ಮಗಳ ಶವಸಂಸ್ಕಾರ ಮುಗಿಸಿ ಬರುವ ಹೊತ್ತಿನಲಿ ಅಲ್ಲೇ ಇದ್ದ ಆ ಹಸುಗೂಸನ್ನು ಯಾರು ಗಮನಿಸದೆ ಹೆಣ್ಣೆಂಬ ತಿರಸ್ಕಾರದಲ್ಲಿದ್ದ ಆ ಮನೆಯವರು ಆ ಮಗುವಿಗೆ ಆಸರೆ ನೀಡಲು ಒಪ್ಪಲೇ ಇಲ್ಲ. ಮೊದಲೇ ಯಾರು ಇಲ್ಲದ ದೀಕ್ಷಳನ್ನು ಸಾಕಿದ್ದ ಆ ಅಪ್ಪನಿಗೆ ಈ ಮಗುವನ್ನು ಬಿಡುವ ಮನಸಾದರು ಹೇಗೆ ಬರುತ್ತದೆ ಹೇಳಿ. ಒಂದು ಕುಸುಮ ಕೋಮಲೆಯನ್ನು ಕಳೆದುಕೊಂಡ ನೆನಪು ಮಾಸಲು ಮತ್ತೊಂದು ಹಸುಗೂಸು ಕೋಮಲೆಯನ್ನು ಕರೆತರುತ್ತಾರೆ.
--------
ಜೀವನದಲ್ಲಿ ಅಂದುಕೊಂಡಂತೆ ಏನು ನೆಡೆಯುವುದಿಲ್ಲ ಸಣ್ಣ ತಪ್ಪು ದೊಡ್ಡದಾಗಿ ಜೀವವನ್ನೆ ತೆಗೆದು ಬಿಡುತ್ತದೆ ಅಲ್ಲವೆ..?
ಒಂದು ಕುಸುಮದ ಜೀವನ ಕಮರಿಹೋಯ್ತು..... ಮತ್ತೊಂದು ಕುಸುಮಳ ಜೀವನ ಹೇಗೆ...? ಮುಂದಿನ ಭಾಗ...