Saturday, November 15, 2014

ಮಕ್ಕಳಾಗಿರವ್ವಾ ಮನ ತುಂಬಿ...!!

ಬಾಲ್ಯ ಮರುಕಳಿಸುವುದಿಲ್ಲ, ಮಕ್ಕಳನ್ನು ಕಂಡಾಗ ನಾವೂ ಅವರೊಂದಿಗೆ ಬೆರೆತಾಗ ಬಾಲ್ಯ ಮರುಕಳಿಸುವ ಸಾಧ್ಯತೆ ಇದೆ. ಹೌದು ನೆನ್ನೆ ಮಕ್ಕಳ ದಿನಾಚರಣೆ ಆದ್ದರಿಂದ ಕುವೈತಿನಲ್ಲಿ ನಡೆಯುವ ಕನ್ನಡ ಶಾಲೆ "ಚಿಗುರು ಬಳ್ಳಿ" ಮಕ್ಕಳೆಲ್ಲಾ ಸದಾ ಮನೆಯೊಳಗೆ ಕುಳಿತು ಸದಾ ನಾಲ್ಕು ಗೋಡೆಯ ಮಧ್ಯೆ ಓದುವುದಕ್ಕಿಂತ, ಅಲ್ಲೇ ಹತ್ತಿರದ ಉದ್ಯಾನವನದಲ್ಲಿ ಒಂದೆರಡು ಘಂಟೆಗಳ ಕಾಲ, ಆಟ-ಪಾಠ ಎರಡೂ ನಡೆಯಲೆಂದು ಕೊನೆ ಘಳಿಗೆಯಲ್ಲಿ ಸಂಧ್ಯಾ ಅರುಣ್ ನಿರ್ಧಾರ ಮಾಡಿದ್ದರು.  

ಸ್ವಲ್ಪ ತಣ್ಣನೆಯ ವಾತಾವರಣ, ಮಕ್ಕಳು ಬರುತ್ತಾರೋ ಇಲ್ಲವೋ ಎಂಬ ಅನುಮಾನದಲ್ಲೇ ನಾನು ನನ್ನವರು ಮಾತನಾಡುತ್ತ ಹೋಗುತ್ತಿದ್ದೆವು. ಒಬ್ಬೊಬ್ಬರಾಗಿ ಅಪ್ಪಂದಿರು ತಮ್ಮ ಮಕ್ಕಳನ್ನು ಕರೆದುಕೊಂಡು ಬಿಡುತ್ತಿದ್ದರೆ..!! ಮಕ್ಕಳಲ್ಲಿನ ಹುಮ್ಮಸ್ಸು, ಅಪ್ಪಂದಿರಲ್ಲಿದ್ದ ಸಂತಸ ಎಲ್ಲವೂ ನಮ್ಮ ಅನುಮಾನವನ್ನು ದೂರ ಮಾಡಿತ್ತು. 



ಮೊದಲೇ ಪಾರ್ಕ್ ಎಂದರೆ ಕೇಳಬೇಕಾ..? ವಾರಾಂತ್ಯ ಪೂರ ಮಜವಿರುತ್ತೆ ಎಂದು ಫುಲ್ 'ದಿಲ್ ಖುಷ್ ' ನಮ್ಮ ಮಕ್ಕಳು, ಇನ್ನು ಮಕ್ಕಳು ಬರುವರಿದ್ದರು ಅಷ್ಟರಲ್ಲಾಗಲೇ ಬಂದಿದ್ದ ಮಕ್ಕಳು ಆಟ ಶುರುಹಚ್ಚಿಕೊಂಡಿದ್ದರು, ಪಾಠ ಇರುವುದಿಲ್ಲ ಬರಿ ಆಟ ಇರಬೇಕು ಎಂದುಕೊಂಡಿದ್ದರೇನೋ ಪಾಪಾ..!! ಬನ್ನಿ ಮಕ್ಕಳ ಕುಳಿತುಕೊಳ್ಳಿ ಅಂದ್ರೇ "ಓಹ್ ಆಟ ಇಲ್ವಾ ಆಂಟಿ... ಪ್ಲೀಸ್ ಸ್ವಲ್ಪ ಆಟವಾಡ್ತೀವಿ" ಎಂದು ಕೇಳುತ್ತಿದ್ದರು.

ಮೊದಲು ಪಕ್ಕಾ ಇಂಗ್ಲೀಷ್-ಕನ್ನಡದ ಗಣಪತಿ ಹಾಡಿನಿಂದ ಸ್ವಲ್ಪ ಮಕ್ಕಳ ಗಮನ ಪಾಠದತ್ತ ಗಮನ ಸೆಳೆಯಲು  ನಮ್ಮ ಅರುಣ್ ಅವರು ಹೇಳಿಕೊಟ್ರು. ಆನಂತರ ಮಕ್ಕಳ ದಿನಾಚಾರಣೆ ಆದ್ದರಿಂದ ನಿಮ್ಮ ಆಸೆ ಏನಿದೆ ಹೇಳಿ ಮಕ್ಳಾ ಅಂತಾ ಸಂಧ್ಯಾ ಅವರು ಕೇಳಿದ್ರೆ, ಒಬ್ಬೊಬ್ಬರದೂ ಒಂದೊಂದು ಆಸೆ ನನಗೆ ಮೊಬೈಲ್ ಬೇಕು, ಆ ಆಟಿಕೆ ಬೇಕು, ವಿಡಿಯೋ ಗೇಮ್ ಬೇಕು, ನಾನು ಆಟ ಆಡ್ಬೇಕು, ನಾನು ಕನ್ನಡ ಚೆನ್ನಾಗಿ ಕಲಿಬೇಕು, ಕನ್ನಡ ಓದೋದು ಕಲಿಬೇಕು ಹೀಗೆ ಹಲವಾರು ಆಸೆ ಹಂಚಿಕೊಂಡ್ರು. ಅಲ್ಲೇ ಇದ್ದಾ ನಮ್ಮ ರಾಜೀವ್ ಅವರು ಮಕ್ಕಳೊಂದಿಗೆ ಮಾತಿಗೆ ಶುರುವಿಟ್ಟರು ಕನ್ನಡದ ಅಂಕಿಗಳು ಗೊತ್ತಾ ಅಂದಿದ್ದೇ ತಡಾ... ಒಂದು, ಎರಡು, ಮೂರು.......... ಹತ್ತು ..... ಸಾವಿರ ಹೀಗೆ.  ನಿಲ್ಲಿಸಿ ಮಕ್ಕಳ ಸಾಕು ಎಂದರೂ ಬಿಡದೆ ಕೋಟಿವರೆಗು ಕನ್ನಡ ಅಂಕಿ ಹೇಳುವಷ್ಟು ಹುಮ್ಮಸ್ಸಿನಿಂದಿದ್ದರು. ನಂತರ ನಾನು ಇಂಗ್ಲೀಷ್ ನಲ್ಲಿ ಮಾತು-ಕತೆ ನಡೆಸಿದ್ದನ್ನು ಕನ್ನಡದಲ್ಲಿ ಹೇಳಿ ಮಕ್ಕಳಾ ಅಂದ್ರೇ ಅಬ್ಬಾ...!! ಆಶ್ಚರ್ಯವಾಗುತ್ತೇ ಪಕ್ಕಾ ಕನ್ನಡ ಭಾಷೆಯನ್ನೇ ಬಳಸಿ ಮಾತನಾಡಿದ್ರು ಗೊತ್ತಾ..!!. 

                

ಇಷ್ಟೆಲ್ಲಾ ಆಯ್ತು ಇನ್ನೇನು ಮುಗಿತು ಆಟಕ್ಕೆ ಹೋಗಬಹುದು ಅಂದುಕೊಂಡ್ರೆ ಛೇ..!! ಪೇಪರ್ ತಗೊಳ್ಳಿ ಬರಿರಿ, ನಾವು ಹೇಳಿದ್ದನ್ನ ಅನ್ನೋದೇ ಈ ಸಂಧ್ಯಾ ಆಂಟಿ, ಸರಿ ಎಲ್ಲರೂ ಪೇಪರ್ ಪೆನ್ಸಿಲ್ ತೆಗೆದ್ರು, ಅಗಸ, ಗರಗಸ, ಸರ, ಘಂಟೆ, ಎಲ್ಲಾ ನಾವು ಒಂದು ವರ್ಷದ ಹಿಂದೆ ಹೇಳಿಕೊಟ್ಟ ಪದಗಳನ್ನೆಲ್ಲ ಬರೆದಿದ್ದು ನೋಡಿ ನನಗೆ ನಿಜಕ್ಕೂ ಖುಶಿ ಆಯ್ತು... ಸುಳ್ಳು ಅಂದುಕೋಬೇಡಿ ನೋಡಿ ಇಲ್ಲಿ ಅವರ ಮುದ್ದಾದ ಅಕ್ಷರಗಳು ಹೇಗಿ ನಿಜ ಹೇಳ್ತಾ ಇವೆ.


ಈ ಚಿತ್ರ ಸ್ವಲ್ಪ ದೊಡ್ಡದು ಮಾಡಿ ನೋಡಿ... ಮುದ್ದಾದ ಅಕ್ಷರಗಳನ್ನು.. 

ಮತ್ತೊಂದು ವಿಷಯ ಹೇಳಲೇಬೇಕು, ಇಲ್ಲಿನ ಎಷ್ಟೋ ಮಕ್ಕಳಲ್ಲಿ ಕನ್ನಡ ಮಾತೃಭಾಷೆ ಅಲ್ಲದಿದ್ದರೂ, ಇಷ್ಟು ಚೆನ್ನಾಗಿ ಕನ್ನಡ ಕಲಿಯುತ್ತಿದ್ದಾರೆ. - ಇದು ನಮಗೆಲ್ಲಾ ಹೆಮ್ಮೆಯ ವಿಷಯ.



               

ಅದಾಗಲೇ ೩೦ನೇ ಪದ ಬರಿರಿ ಮಕ್ಕಳಾ ಅಂದ್ರೇ ಇಲ್ಲೊಬ್ಬ ನಮ್ಮ ಪುಟ್ಟ ಪೋರಾ ಹೇಳಿದಾ... ಏನಿದು ಇವತ್ತು ಚಿಲ್ಡ್ರನ್ಸ್ ಡೇ ನಾ..!! ರೈಟಿಂಗ್ ಡೇ ನಾ ಅಂತಾ ಹಹಹ, ನನಗೆ ನಗು ತಡೆಯಲಾಗಲಿಲ್ಲ.... ಇವತ್ತು ಎರಡೂ ದಿನ ಸ್ವಲ್ಪ ಹೊತ್ತು, ಆಮೇಲೆ ಆಟವಾಡಿ ಎಂದಾಗ ಎಲ್ಲರ ಮುಖದಲ್ಲಿ ಮಂದಹಾಸ ಮೊಳಗುತ್ತಿತ್ತು... 

                

ಸರಿ ಮುಗಿತಪ್ಪಾ ಇನ್ನು ಪಾಠ ಆಯ್ತು, ಈಗ ಆಟ ಎನ್ನುವಾಗಲೇ ಕೈಗೊಂದು ಗುಲಾಬಿ ಕೊಟ್ಟು ತಿಂಡಿ ತೀರ್ಥ ಕೊಡುತ್ತಿದ್ದರೆ... ಇವ್ರೇನು ಆಟಕ್ಕೆ ಬಿಡ್ತಾರೋ ಇಲ್ವೊ ಅನ್ನೋ ಹಾಗೆ ನಮ್ಮನ್ನ ನೋಡ್ತಾ ಇದ್ರು ಮಕ್ಕಳು. ತಿಂಡಿ ನಂತರ ಆಟವೂ ಆಯ್ತು ಇನ್ನೂ ಆಟದ ಮನಸ್ಸು ಇರುವಾಗಲೇ ಅಪ್ಪಂದಿರು ಬಂದು ಬನ್ನಿ ಸಾಕು ಎಂದು ಮನೆ ಕಡೆ ಕರೆದುಕೊಂಡು ಹೋದರು.





ಮಕ್ಕಳ ದಿನಾಚಾರಣೆ ಒಂದು ರೀತಿ ಖುಷಿಯಿತ್ತು, ಆ ಮಕ್ಕಳಲ್ಲಿ ನನ್ನ ಮಗನ ಕಂಡೆ ಮನಸ್ಸು ಪೂರ್ತಿ ಸೊಗಸುಕಂಡೆ... ಮಕ್ಕಳ ಆಸಕ್ತಿ, ಶ್ರದ್ಧೆ, ಹೊನಲು-ಬೆಳಕು, ತರಲೆ, ಆಟದ ಹುರುಪು ಎಲ್ಲವನ್ನೂ ಕಂಡೆ... ಒಂದು ನಲಿವಿನ ದಿನವಾಯ್ತು ನನ್ನದು.

                                 

Monday, September 8, 2014

ಪೂರ್ಣಚಂದ್ರ ತೇಜಸ್ವಿ ಎಂದರೆ ನನ್ನ ಅಣ್ಣ(ಪ್ಪ) ನೆನಪಾಗುತ್ತೆ....!!


ನಾನಿನ್ನು ಚಿಕ್ಕವಳು ೫-೬ನೇ ತರಗತಿ ಇರ್ಬೇಕು... ಟಿವಿಯಲ್ಲಿ ತಬರನ ಕಥೆ ನೋಡ್ತಾ ಇದ್ವಿ.. ನೋಡೋದೇನು ಬಂತು ಸೊರಾ ಬುಸಾ ಅಳ್ತಾನೇ ಇದ್ವಿ... ಪಾಪ ಆ ಚಿತ್ರದ ನಾಯಕ ಏನೆಲ್ಲಾ ಕಷ್ಟಪಡ್ತಾನಪ್ಪಾ, ತಡೆಯಲಾರದ ನೋವಿಗೆ ನನ್ನ ಲಂಗ ಕಣ್ಣು-ಮೂಗಿನಲ್ಲಿ ಬರುವುದನ್ನೆಲ್ಲಾ ಒರೆಸಿಕೊಳ್ತಿತ್ತು. ಒಂದು ಕಡೆ ಅಮ್ಮಾ, ನಿಮ್ಮ ಅಪ್ಪನೇ ನೋಡು ಆ ತಬರ... ಎಂದು ಕಣ್ಣು ಒದ್ದೆ ಮಾಡಿಕೊಳ್ತಿದ್ದ್ರು... ನಿಮ್ಮ ಅಪ್ಪನ ಕಥೆ ನೋಡಿಯೇ ಕಥೆ ಬರೆದ್ರೇನೋ ಆ ಮಹಾನುಭಾವ ಅಂತಾ ಇದ್ರು.

ಅಮ್ಮ ಹೇಳೋಕ್ಕು ಕಾರಣ ಇದೆ. ಅಣ್ಣ (ಅಪ್ಪ) ದೇವನಹಳ್ಳಿಯಿಂದ ಬೆಂಗಳೂರಿಗೆ ಬರಬೇಕೆಂದರೆ ಸಾಧನೆ, ಬಸ್ಸುಗಳ ತೊಂದರೆ ಆದ್ದರಿಂದ ಆಗೆಲ್ಲ ಅಣ್ಣ ವಾರಕ್ಕೊಮ್ಮೆ ಮನೆಗೆ ಬರೋರು, ಇದನ್ನೆಲ್ಲಾ ತಪ್ಪಿಸಲು ಅಣ್ಣ ಮಾಗಡಿ ಹತ್ತಿರದ ಊರಿಗೆ ವರ್ಗಾವಣೆ ಮಾಡಿಸಿಕೊಂಡು ಬೆಂಗಳೂರಿಗೆ ಬಂದು ನೆಲೆಸಿದರು. ಅಣ್ಣನ ವರ್ಗಾವಣೆ ಏನೋ ಆಯ್ತು, ದಿನ ಅಣ್ಣನ ಜೊತೆ ಇರುವ ಹಾಗೂ ಆಯ್ತು, ಆದ್ರೆ ಅಣ್ಣನಿಗೆ ಸಂಬಳವೇ ಬರುತ್ತಿರಲಿಲ್ಲ. ಇದೇ ಸಮಯದಲ್ಲಿ ಹೊಸ ಮನೆ ಬೇರೆ ಕಟ್ಟಿಸುತ್ತಿದ್ದ್ವು. ಅಣ್ಣನ ಸಂಬಳವೇ ಜೀವನಕ್ಕೆ ಆಧಾರ, ಅಂತಹದರಲ್ಲಿ ಸುಮಾರು ೧-೨ ವರ್ಷದವರೆಗೇ ಸಂಬಳವೇ ಬರಲಿಲ್ಲವೆಂದರೆ ಜೀವನ ಹೇಗೆ..?? ಅಬ್ಬಾ ಊಹಿಸಲೂ ಸಾಧ್ಯವಿಲ್ಲ ಅಮ್ಮನ ಅಳಲು, ಅಣ್ಣನ ಮೌನ ಎರಡೂ ಅರ್ಥವಾಗ್ತಿತ್ತು ಆದರೆ ನಾವೆಲ್ಲ ಚಿಕ್ಕವರು ಏನೂ ಮಾಡಲು ಸಾಧ್ಯವಾಗಿರಲಿಲ್ಲ..

 ಆಗೆಲ್ಲ ಅಣ್ಣ ವಾರಕ್ಕೆ ಒಮ್ಮೆಯಾದರೂ ಡಿಡಿ ಆಫೀಸ್, ಅಲ್ಲಿ ಇಲ್ಲಿ ಎಂದು ಅಲೆಯೋದೆ ಕೆಲಸವಾಗಿತ್ತು. ಯಾವ ಕಚೇರಿ ಮೆಟ್ಟಿಲು ಹತ್ತಿದರೂ, ಯಾರನ್ನ ಕೇಳಿದರೂ ಏನೂ ಪ್ರಯೋಜನವಾಗದೇ ಅಣ್ಣ ಬೇಸತ್ತು ಬಸವಳಿದು ಹೋಗಿದ್ದರು.. ಅಣ್ಣನಿಗೆ ಆಗ ಸಂಬಳವೂ ಇಲ್ಲ, ಇತ್ತ ಮನೆಯಲ್ಲಿನ ಪಾಡು ಹೇಳತೀರದು, ತುತ್ತಿಗೂ ಕಷ್ಟಪಡುವಂತಾಗಿದ್ದ ಕಾಲವದು... ಸರ್ಕಾರಿ ಕಚೇರಿಗೆ ಅಲೆದು ಅಲೆದು ಕೊನೆಗೆ ನಿಂತು ಹೋಗಿದ್ದ ಸಂಬಳವೇನೋ ಪ್ರಾರಂಭವಾಯ್ತು ಆದರೆ ಆ ೨ವರ್ಷದ ಸಂಬಳ ತೆಗೆದುಕೊಳ್ಳಲು ಸುಮಾರು ೭-೮ ವರ್ಷ ಸರ್ಕಾರಿ ಮೆಟ್ಟಿಲು ಸವೆಸಿದ್ದರು.

ಇಂತಹ ಸಮಯದಲ್ಲಿ ತಬರನ ಕಥೆ ಪೂರ್ಣ ಅಣ್ಣನಿಗೆ ಒಪ್ಪುತ್ತಿತ್ತು... ತಬರನ ಚಪ್ಪಲಿಯೂ ಸಹ... ಅಣ್ಣ ಲಂಚ ಕೊಡುವವನಲ್ಲ, ನ್ಯಾಯಕ್ಕೆ ತಲೆಬಾಗುವವ. ಸದಾ ನಾನು ನ್ಯಾಯವಾಗಿ ಮಕ್ಕಳಿಗೆ ವಿದ್ಯೆ ಹೇಳಿಕೊಟ್ಟಿದ್ದರೆ, ಖಂಡಿತಾ ಆ ಹಣ ಬರುತ್ತೆ ಎಂದು ವೇದಾಂತಿಯಾಗಿಬಿಡುತ್ತಿದ್ದರು.

ಅಮ್ಮಾ ಸುಮಾರು ಸರಿ ಈ ಚಿತ್ರ ನೋಡಿದಾಗೆಲ್ಲ ತೇಜಸ್ವಿಯವರನ್ನ ನೆನಪು ಮಾಡಿಸೋರು... ಅದೇ ಕಾರಣಕ್ಕೆ ತಬರನ ಕಥೆಯನ್ನು ಓದಬೇಕೆಂದು ಏಳನೇ ತರಗತಿಯಲ್ಲಿದ್ದಾಗ ದಾಸರಹಳ್ಳಿಯ ಲೈಬ್ರೆರಿಯ ಮೂಲೆಯಲ್ಲೆಲ್ಲೋ ಕುಳಿತು ದಿನವೆಲ್ಲಾ ಓದಿ ಕಣ್ಣೀರುಟ್ಟು ಬಂದಿದ್ದೆ.. ಇದೇ ಕಾರಣ ತೇಜಸ್ವಿ ಎಂದರೆ ನನ್ನ ಅಣ್ಣ ನೆನಪಾಗ್ತಾರೆ...  ಮುಂದೆ ಹಲವಾರು ಓದಿದ್ದೇನೇ ಮನಸ್ಸಿಗೂ ಮುಟ್ಟಿದೆ ಆದರೆ ನನ್ನಣ್ಣನಾದ ತಬರನಷ್ಟಲ್ಲ.!!


                                           ಚಿತ್ರ ಬಿಡಿಸೋಕ್ಕೆ ಪ್ರಯತ್ನಿಸಿದೆ ಆದರೆ ಸರಿ ಬರಲಿಲ್ಲ...

ಅಣ್ಣನಿಗೆ ಈ ಕಥೆ ನೆನಪಿಸುವುದಿಲ್ಲ ಈಗ ನಿವೃತ್ತಿ ಜೀವನದಲ್ಲಿ ಖುಷಿಯಾಗಿದ್ದಾರೆ ಅಲ್ವಾ ಅಣ್ಣಾ... :) :)

Monday, August 18, 2014

ನೋವು

           


ಒಲವಿನ ಮನೆ-ಮನ ಹಲವು
ತಿರುಗಿ ಮಗುಚಿದರೆ ಕೆಲವು
ಹೆಸರಿಸಲಾಗದಷ್ಟು ನೋವು
ಅದಕ್ಕೆ ಒಂದಿಲ್ಲೊಂದು ಬಾವು

ಭಾವನೆಗಳು ಬಿಕರಿಯಾದರೆ 
ಪರಸ್ಪರರಲಿ ಭಿನ್ನತೆಯ ಬೇನೆ
ಮೇಲು-ಕೀಳು ಎಂದು ಮೆರೆದರೆ
ಜಗವೆಲ್ಲಾ ವ್ಯಥೆಯ ಸೋನೆ

ಸೂಜಿಯ ಮೊನಚಿನಲಿ 
ಹಿತವಲ್ಲದ ಮಾತು ಬೆರೆಸುವುದರಲಿ 
ಆಯುಧಗಳ ಬಳಕೆಯಲಿ
ಸಾವಿನ ಸುದ್ದಿಗಳಲಿ ನೋವು ಅಡಗಿದೆ

ದಣಿವು,ಧಾವಂತ  ಅತೃಪ್ತಿ,ಆಲಸ್ಯ
ನಂಜಿನ ಅಂಚು ತಲುಪಿದಾಗ
ತೃಪ್ತಿಯಲೂ ಅಜೀರ್ಣ ತಟ್ಟಿದರೆ
ಅನುಭವಿಸಲಾಗದ ರುಚಿಯೇ ನೋವು...

Wednesday, July 16, 2014

ನಿಶ್ಯಬ್ದ


ಚಿತ್ರ @ ಅಂತರ್ಜಾಲ


ಮೋಟಾರುಗಳ ಸದ್ದಿಲ್ಲ, ತಣ್ಣನೆ ಮಲಗಿರುವ ನಗರ
ದಿನಪತ್ರಿಕೆ, ಹಾಲು, ಹೂ ಮಾರುವವರ ಧ್ವನಿಯಿಲ್ಲ
ಮನೆಗಳ ಮುಂದೆ ರಂಗೋಲಿ ಇರಲಿ, ಬೀದಿ ನಾಯಿಗಳ ಓಡಾಟವಿಲ್ಲ
ಸಾಲು ಸಾಲು ಮರಗಳು ತಮ್ಮ್ ತಮ್ಮ ನೆರಳ ಮೇಳದಲಿವೆ

ಬಾಯ್ತೆರೆದು ನಿಂತಿರುವ ಆಗಸದಲಿ ಪ್ರಶಾಂತ ಮೋಡಗಳು
ಆಗಸನ ಪ್ರತಿಬಿಂಬ, ಕನ್ನಡಿಯಲಿ ಮುಖ ತೋರುವಂತಾ ಕೊಳ
ಹಸಿರ ಹಾಸಿಗೆಯಲ್ಲಿ ಇಬ್ಬನಿಗಳ ಹನಿ ಮಿಣುಕು ಬೆಳಕಂತೆ
ಯಾರ ಕಾಲ್ತುಳಿತಕೂ ಸಿಗದೆ ಬೀರುತಿವೆ ಮಂದಹಾಸ...!!

ತುಂಬು ರಸ್ತೆಯಲಿ ಶಬ್ದವಿಲ್ಲದ  ಏಕಾಂತ
ಸ್ವರ್ಗ ಸೃಷ್ಟಿಸಿದೆ ಆ ಸಾಲು ಮರಗಳಿಗೆ
ತೊಟ್ಟು ಕಳಚಿ ಬಿದ್ದ ಬಿನ್ನಾಣದ ತರಗೆಲೆಗಳು 
ಮಾತ್ರ ಸಂತೃಪ್ತಿಯಲಿ ಸರಿದಾಡುವುದೇ  ಸದ್ದು!!

Tuesday, July 8, 2014

ಜೀವ-ಭಾವ

ಜೀವ-ಭಾವ

ನಾವೇ ಬೆಳೆಸಿದ ಬಂಧನಗಳಲಿ
ಕೂಡು ಕುಟುಂಬದ ಒಕ್ಕಲಲಿ
ಸಂಬಂಧಗಳ ಹೊನಲಿನಲಿ
ನಾವಿರುವುದು ಹರಿವ ತೊರೆಗಳಲಿ 

ಬಿರುಕು ಮನೆಗಳ ಹೊಡೆತ
ಒಂಟಿ ನೆಲೆಗಳ ಸೆಳೆತ
ಒಡಕು ಮನಗಳ ಮಿಡಿತ
ದೂರ ನೆಲೆಸುವ ತುಡಿತ 

ಸಂಸ್ಕೃತಿ-ಜನರ ನಡುವೆ
ಬದಲಾವಣೆಯ ಕೊಳವೆ
ಹಿಂದಿನದು ಇಂದಿಗೆ ದಾವೆ
ಮರುಕಳಿಸುವುದು ಅಸಾಧ್ಯವೆ

ಬಂಧುತ್ವ ಬೆಸುಗೆಗಳ ಭಾವ
ನಶ್ವರತೆಯಲಿ  ಹಾವಭಾವ
ಜನಪದದ ಹಿರಿಮೆಯ ಜೀವ
ಪ್ರಸ್ತುತ ನಲುಗುತಿದೆ ಅನುಭಾವ

ಪೂರ್ಣ ಸೊಗಡಿನ ತೆನೆಗಳು
ಅರಳದೆ ಮೊಗಚಿದೆ ದಿನಗಳು
ಸಾಂಪ್ರದಾಯದ ಚಿಲುಮೆಗಳು
ಈಗ ನೇತಾಡುವ ಬಾವುಲಿಗಳು

Thursday, February 20, 2014

ನಲ್ಲೆ..ಓರೆನೋಟ..!!

ಇತ್ತೀಚೆಗೆ ಕನ್ನಡ ಸಂಪದದಲ್ಲಿ ಬಂದಿದ್ದ ದ.ರಾ ಬೇಂದ್ರೆಯವರ "ನಾನು ಬಡವಿ ಆತ ಬಡವ" ಸಾಹಿತ್ಯಕ್ಕೆ ಸೂಕ್ತವಾಗಿ ಈ ಚಿತ್ರ ಬಳಸಿದ್ದರು.. ಆ ಮಾಹಿತಿಯನ್ನು ಸ್ನೇಹಿತೆಯೊಬ್ಬರು ಮುಖಪುಟದ ಗೋಡೆಯ ಮೇಲೆ  ಹಂಚಿಕೊಂಡಿದ್ದರು, ಆಗ ನನ್ನನ್ನು ಈ ಜೋಡಿಗಳ ಚಿತ್ರ ಹೆಚ್ಚು ಆಕರ್ಷಿಸಿ ಚಿತ್ರ ಬಿಡಿಸುವಂತಾಯಿತು. ಕೊನೆಗೆ ಚಿತ್ರವೊಂದೇ ಇದ್ದರೆ ಸಾಕೇ ಸಾಲುಗಳನು ಗೀಚಿಬಿಟ್ಟೆ.. ಸೂಕ್ತವಾಗಿದೆಯೋ ಇಲ್ಲವೋ ಗೊತ್ತಿಲ್ಲ ಆದರು ನನ್ನ ಭಾವಗಳ ಸಾಲು ನಿಮ್ಮೊಂದಿಗೆ


 ಬಿಡಿಸಿದ್ದು-ಗೀಚಿದ್ದು.. ನಾನೇ..!!

ನಲ್ಲೆ, ಮೌನದ ಮುಂಗುರುಳು
ನಿನ್ನ ನಯನಗಳ ತಬ್ಬಿರಲು
ನನ್ನಾಸರೆಯ ಹೆಗಲು ಹುಡುಕುತಿದೆ
ಆ ಮಿಂಚು ಕಣ್ ಗಳ ಹೊಂಬೆಳಕು

ನಲ್ಲೆ, ನಿನ್ನ ಸ್ಪರ್ಶದ ಒನಪು 
ಮಿರ ಮಿರ ಮಿರುಗಿ
ಎನ್ನ ಹೃದಯದೊಳು 
ಮೂಡಿದೆ ಒಲವ ಹೊಳಪು

ಬಾಹು ಬಂಧನದ ಸೆರೆ
ನೀ ಬಯಸಿ ಬಂದರೆ 
ಒಂದು ನವಿರು ಚುಂಬನ
ನನ್ನ ಸೆಳೆವ ಈ  ಕಿರುನೋಟಕೆ

Saturday, February 15, 2014

ಮರುಳು..ಹೂ.. ಮರಳು


ಡೈಸಿ ಬೆಳೆದು ನಿಂತಿಹಳು
ಮರುಧರೆಯ ಒಡಲೊಳು
ಯಾರ ಬಿತ್ತನೆಯಿಲ್ಲ
ನಿಸರ್ಗ ಕೃಪೆಗೆ
ಬೆಳೆದು ನಗುತಿಹಳು
ಬಯಸಿ ತಂದನವನು
ಗುಲಾಬಿಯೊಂದೇ ಪ್ರೇವವಲ್ಲ ಗೆಳತಿ
ಭಾವ ತುಂಬಿ ನೀಡುವ
ಹೂ ಯಾವುದಾದರೂ
ಪ್ರೀತಿ ಉಸಿರು ನನ್ನೊಡತಿ 
ಎಂಬವನ ಒಲುಮೆ
ತುಂಬಿ ನಗುತಿಹುದು
ನನ್ನ ಮನೆ-ಮನದ ಹೂದಾನಿಯಲಿ






ನನ್ನೂರ ರಸ್ತೆ ಬದಿ
ಹಾದು ಹೋದರೆ
ನನ್ನೊಳಗೊಂದು ಆಶ್ಚರ್ಯ
ತನ್ ತಾನೆ ಬೆಳೆವ
ಈ ಹೂಗಳ ನಾಟಿ ಮಾಡಿ
ಕಳೆ ಕಿತ್ತವರಾರು..?

ಮರುಳುಗಾಡಲೂ
ಹಸಿರ ಗರ್ಭಕೆ ಪ್ರಸವವುಂಟೆ..??

ಡೈಸಿ, ಲ್ಯಾವೆಂಡರ್ ಹೆಸರಿನ 
ಕೂಸುಗಳು ಈ ಮಾಸದಲಿ
ಬಂದು ಹೋಗುವವರ
ನೋಡಿ ಮರುಳಾಗದವರುಂಟೆ..??
                           

ಈ ಹೂಗಳು ಮರುಭೂಮಿಯಲ್ಲಿ ಬೆಳೆದು ನಿಂತಿವೆ.. ಕಣ್ಣು ಹಾಯ್ದಡೆಲ್ಲಾ ಈ ಹೂಗಳೇ ಕಾಣುತಿವೆ. 

Tuesday, January 21, 2014

ಬಂಧನ


ಅವನೊಳಗೆ ಬಂಧಿಯಾಗುವ ಇಚ್ಛೆ
ಬಲವಾದ ಬಂಧನದ ಬಿಸಿಯೂ ಹಿತ
ಸ್ವರ್ಗ ಕಾಣ್ಪೆನೆಂಬ ತುಡಿತದ ಈ ಮನ
ಹುಡುಕುತಿದೆ ಬಾಹುಗಳ ಸ್ಪಂದನ

ಆಯ್ಕೆಯ ಸುರಕ್ಷೆ ನಂಬಿಕೆಯೊಳಿರಲು
ಬಿಗುಮಾನದ ಅಂಚು ದಾಟಿರುವೆ
ಪಲ್ಲವಿಗಳ ಜೋಡಿಸಿ ಹಾಡು ಹೆಣೆದು
ರಾಗಾಲಾಪದಿ ತೋಳುಗಳ ಸಂಧಿಸುವೆ

ನಿಶ್ಚಿತ ಬದುಕು ಅವನೊಟ್ಟಿಗೆ
ಎಂದು ಬರೆದ ಅಕ್ಷತೆಗಳ ದೀಕ್ಷೆ
ಬಯಕೆ ಬಳ್ಳಿಯಲಿ ತೇಲುವ ಸಮೀಕ್ಷೆ
ಪ್ರಫುಲ್ಲತೆಯಲಿ ಹಾರೈಸಿತು ಮನದ ಒಟ್ಟಿಗೆ 

ಬಂಧನ ಅದು ಪ್ರೀತಿ ಸಂಕೋಲೆ
ಬದುಕಿರುವವರೆಗೂ ಸ್ವರ್ಣಗೃಹ
ಆಪ್ತತೆ ಮಿಂಚು ಬೆಳಕಿನ ನೆಲೆ
ಅವನ ಹೃದಯ ಒಲವಿನ ಕಾರಾಗೃಹ

Tuesday, January 14, 2014

ಸಕ್ಕರೆ ಕೈಗೆ ಸಿಕ್ಕರೆ

ಸೂರ್ಯನು ಧನಸ್ಸು ರಾಶಿಯಿಂದ ಮಕರ ರಾಶಿಗೆ ಪ್ರವೇಶಿಸುವ ದಿನವನ್ನೇ ಸಂಕ್ರಾಂತಿ ಎಂದು ಕರೆಯುತ್ತಾರೆ.  ಮಕರ ಸಂಕ್ರಾಂತಿಯನ್ನು ಸುಗ್ಗಿಯ ಹಬ್ಬವೆಂದೂ ಸಹ ಕರೆಯುತ್ತಾರೆ. ಈ ದಿನ ರೈತರು ತಾವು ಬೆಳೆದ ಬೆಳೆಯನ್ನು ಕೊಯ್ಲು ಮಾಡಿ, ಫಸಲು ಶೇಖರಿಸಿ ಆ ದವಸ ಧಾನ್ಯಗಳಿಗೆ ಪೂಜೆ ಮಾಡುವುದು ಒಂದು ವಿಶೇಷ.

ಮತ್ತೊಂದು ವಿಶೇಷವೆಂದರೆ ಎಳ್ಳು, ಹುರಿಗಡಲೆ, ಕಡಲೆಕಾಯಿ ಬೀಜ ಎಲ್ಲವನ್ನು ಬಿಸಿ ಮಾಡಿ ನಂತರ ಕೊಬ್ಬರಿ ಮತ್ತು ಬೆಲ್ಲವನ್ನು  ಸಣ್ಣ ಸಣ್ಣ ಚೂರುಗಳಂತೆ ಕತ್ತರಿಸಿಕೊಂಡು ಬಿಸಿ ಮಾಡಿದ ಪದಾರ್ಥಗಳೊಂದಿಗೆ ಮಿಶ್ರಣ ಮಾಡಿಕೊಳ್ಳುತ್ತೇವೆ. ನಂತರ ಸಕ್ಕರೆ ಅಚ್ಚಿನೊಂದಿಗೆ ಎಳ್ಳು-ಬೆಲ್ಲದ ಮಿಶ್ರಣವನ್ನು ಎಲ್ಲರೊಂದಿಗೆ ಹಂಚುತ್ತ "ಎಳ್ಳು-ಬೆಲ್ಲ ತಿಂದು ಒಳ್ಳೆಯ ಮಾತುಗಳನ್ನಾಡಿ" ಎಂದು ಎಲ್ಲರಿಗೂ ಹೇಳಿ ಶುಭಾಶಯ ಕೋರುವುದೇ ನಗರವಾಸಿಗಳ ಸಂಕ್ರಾಂತಿ.

ಸಕ್ಕರೆ ಅಚ್ಚು ಮಾಡಿ ಎಷ್ಟೋ ವರ್ಷಗಳು ಕಳೆದಿದ್ದವು. ಬೆಂಗಳೂರಿನಲ್ಲಿದ್ದಾಗ ಅಮ್ಮನ ಜೊತೆ ಮಾಡುತ್ತಿದ್ದ ಸಕ್ಕರೆ ಅಚ್ಚು ಮಾತ್ರ ನೆನಪು ಈ ನೆನಪನ್ನು ಮರುಕಳಿಸುವಂತೆ ಮಾಡಿದ್ದು ನಮ್ಮ ಸ್ನೇಹಿತೆಯರು.. 



















ಕೆಲವರು ಸ್ನೇಹಿತೆಯರು ಕೂಡಿ ಸಕ್ಕರೆ ಅಚ್ಚು ಮಾಡಿದ್ದೇವೆ ನೋಡಿ. ನಿಮಗೂ ಸಕ್ಕರೆಯಂತಾ ಸಿಹಿಯ ಅಚ್ಚು-ಮೆಚ್ಚುಗಳು ಸದಾ ನಿಮ್ಮದಾಗಲಿ

ಸಕ್ಕರೆ ಅಚ್ಚು ಮಾಡುವ ವಿಧಾನ  :
ಒಂದು ಪಾತ್ರೆಯಲ್ಲಿ ೧ ಕೇ ಜಿ ಸಕ್ಕರೆ ಮತ್ತು  ಸಕ್ಕರೆ ಮುಳುಗುವಷ್ಟು ನೀರನ್ನು ಹಾಕಿ ಕುದಿಸಿಕೊಳ್ಳಬೇಕು. 

ಕುದಿಯುತ್ತಿರುವಂತೆ ಒಂದು ಅಥವಾ ಎರಡು ಸ್ಪೂನ್ ಹಾಲು ಮಿಶ್ರಣ ಮಾಡಿ ಬಿಳಿ ಬಟ್ಟೆಯಲ್ಲಿ ಸೋಸಿಕೊಳ್ಳಬೇಕು.  

ಸೋಸಿದ ಸಕ್ಕರೆ ನೀರನ್ನು ಮತ್ತೊಮ್ಮೆ ಕುದಿಸಿ ನಂತರ ಹಾಲು ಒಂದು ಅಥವಾ ಎರಡು ಸ್ಪೂನಿನಷ್ಟು ಹಾಕಿ ಸೋಸಿಕೊಳ್ಳಿ. ಇದೇ ರೀತಿ ಮತ್ತೊಮ್ಮೆ ಸೋಸುವ ಕ್ರಿಯೆಯನ್ನು ಪುನರಾವರ್ತಿಸಿ. 

ಈ ಸೋಸಿದ ಸಕ್ಕರೆ ನೀರನ್ನು ಸ್ವಲ್ಪ ಸ್ವಲ್ಪವೇ (ಒಂದು ಅಥವಾ ಎರಡು ಸ್ವೌಟು) ಚಿಕ್ಕ ಬಟ್ಟಲಿನಲ್ಲಿ ತೆಗೆದುಕೊಂಡು ಸಣ್ಣ ಉರಿಯಲ್ಲಿ ಒಲೆಯ ಮೇಲೆ ಕದಡುತ್ತಲೇ ಇರಬೇಕು. ಒಲೆಯ ಮೇಲೆ ಕುದಿಯಲು ಇಟ್ಟ ಸಕ್ಕರೆ ಪಾಕವನ್ನು ಸದಾ ಕೈಯಾಡುತ್ತಲೇ ಇರಬೇಕು.  ಸ್ವಲ್ಪ ಸಮಯದ ನಂತರ ಗಟ್ಟಿಯಾಗುತ್ತ ಬರುವ ಪಾಕವನ್ನು ಕೆಳಗಿಟ್ಟು ಚೆನ್ನಾಗಿ ಸೌಟಿನಿಂದ ನಾದುತ್ತಿರಬೇಕು. 

ನಾದಿದ ಸಕ್ಕರೆ ಪಾಕ ಬಿಳಿ ಬಣ್ಣದಲ್ಲಿ ಕಾಣುತ್ತಿದ್ದಂತೆ  ಒಂದು ಸ್ಪೂನ್ ನಿಂಬೆರಸ  ಹಾಕಿ ಮತ್ತೆ ಕೈಯ್ಯಾಡುತ್ತಲಿರಿ. ಆನಂತರ 
ನಮಗೆ ಬೇಕಾದ ವಿನ್ಯಾಸವುಳ್ಳ ಸಕ್ಕರೆ ಅಚ್ಚು(ಮೌಲ್ಡ್)ಗಳಿಗೆ ಅಚ್ಚುಗಳಿಗೆ ಹಾಕಿ ೫-೧೦ ನಿಮಿಷ ಸಕ್ಕರೆ ಗಟ್ಟಿಯಾಗಲು ಬಿಡಿ. ಆನಂತರ ಅಚ್ಚುಗಳನ್ನು ನಿಧಾನವಾಗಿ ತೆಗೆದರೆ ಸಕ್ಕರೆ ಅಚ್ಚು ತಯಾರಾಗಿರುತ್ತದೆ.

ಸೂಚನೆ: ಮರದ ಅಚ್ಚುಗಳನ್ನು ೫-೬ ಗಂಟೆಗಳ ಕಾಲ ನೀರಿನಲ್ಲಿ ನೆನೆಯಲು ಬಿಡಿ ಆನಂತರ ಒಣ ಬಟ್ಟೆಯಿಂದ ಸ್ವಚ್ಚ ಮಾಡಿಕೊಂಡು ಬಳಸಿಕೊಳ್ಳಿ. 


ಸಕ್ಕರೆ ಕೈಗೆ ಸಿಕ್ಕರೆ
ನೀರಲ್ಲಿ ಕದಡಿ
ಬೆಂಕಿ ಬಾಯಿ ಹೊಕ್ಕರೆ
ಅಚ್ಚಿನೊಳಗೆ ಕುಳಿತು
ಚಿತ್ತಾಕಾರದಲಿ ಹೊಳೆದು
ಬಾಯೊಳು ಕರಗಿ ಕರಗಿ
ನೀರಾಗುವಂತೆ ಸವಿಯ 
ಕೊಡುವ ಈ ಸಕ್ಕರೆ 
ಹಿಗ್ಗಿನ ಹಬ್ಬಕೆ ಬಲು ಅಕ್ಕರೆ 


ಪೊಂಗಲ್ ಮಾಡಿ, ಎಳ್ಳು ಬೆಲ್ಲ ಹಂಚಿ, ಅವರೆ,ಗೆಣಸು, ಕಡಲೆಕಾಯಿ, ಕಬ್ಬು ತಿಂದು ಸದಾ ಸಿಹಿಯಾದ ಜೀವನ ನಡೆಸಿ... ಎಲ್ಲರಿಗೂ ಮಕರ ಸಂಕ್ರಾಂತಿ ಶುಭಾಶಯಗಳು

Thursday, January 9, 2014

ತೂಕದ ತೆಕ್ಕೆ

ಪೋಟೋ ಕೃಪೆ - ಮಲ್ಲಿಕಾರ್ಜುನ್

ತೂಕದ ತೆಕ್ಕೆಗೆ ಬೆನ್ನು ಕೊಡುತ 
ಎಲ್ಲ ಸಾಗಿಸುವ ಗೂಡ್ಸ್ ಗಾಡಿಯಂತೆ  
ಕಣ್ ಅಳತೆಯಲಿ ಸಾಗಬೇಕು
ಮಾಲೀಕನ ಅನುಸರಿಸುತ

ಪಾತ್ರೆ ಪಾಲಾಸಿನ ಜಾತ್ರೆಯಲಿ
ನಾಯಿ ಕುರಿಗಳ ಮೆರವಣಿಗೆ  
ಮರ ಮೂಟೆಗಳ ಹೊರೆಗೆ
ಮನಸು ಮೌನ ದಿಬ್ಬಣದೆಡೆಗೆ

ಅವರು ಕೊಡುವ ತುತ್ತಿಗೆ
ನಮ್ಮದು ಭಾರ ಹೊರುವ ಗುತ್ತಿಗೆ
ನಮ್ಮ ಕಾಯ ಅವರ ಸಂಸಾರ
ಬೀದಿ ಬೀದಿ ಅಲೆದು ಹೂಡುವ ಬಿಡಾರ

ವೈಚಿತ್ರ್ಯ ಹವಾಮಾನದ ಅಡೆತಡೆಯಲಿ
ಸ್ವಸ್ಥತೆಯ ಏರುಪೇರಿನ ಹಂದರ
ಒಡೆಯನ ಮಾತು ನಮ್ಮ ಮೌನದಲಿ
ಹಾದಿ ಸವೆಸಲು ಹೆಜ್ಜೆಯಿಡಬೇಕು ನಿರಂತರ

Sunday, January 5, 2014

ನೆನಪುಗಳ ಸುತ್ತ - ಜಿ.ಎಸ್.ಎಸ್

 1
೧೯೭೦ರಲ್ಲಿ ಬೆಂಗಳೂರಿನಲ್ಲಿದ್ದ ಸಮಯ ಆಗ ಡಾ. ಚಿದಾನಂದಮೂರ್ತಿ, ಡಾ. ಕೆ ಮರಳಸಿದ್ದಪ್ಪ ಮುಂದಾದವರು ಶಿವರುದ್ರಪ್ಪನವರೊಂದಿಗೆ ಸಹಉದ್ಯೋಗಿಗಳು. ಎಲ್ಲರೂ ಒಮ್ಮೆ ಕರಗ ನೋಡುವ ಆಸೆಯಿಂದ ಧರ್ಮರಾಯ ಗುಡಿಯ ಹತ್ತಿರ ಬರುತ್ತಾರೆ. ಅಲ್ಲಿ ನಿಂತು ನೋಡಿದರೆ ಸುತ್ತಲೂ ಜನ, ಕರಗ ಹೋದ ಕಡೆಯೆಲ್ಲಾ ಹೋಗಲು ಆಗದು ಎಂದು ಅಲ್ಲೇ ಇದ್ದ ಒಂದು ಮಹಡಿ ಮನೆಯ ಮೇಲೆ ಹತ್ತಿ ಕೂತು ನೋಡೋಣವೆಂದುಕೊಳ್ಳುತ್ತಾರೆ. ಎಲ್ಲರೂ ಮಹಡಿ ಮನೆ ಹತ್ತಿರ ಹೋಗಿ ಏಣಿ ಹಾಕಿದ್ದನ್ನು ನೋಡಿ ಹತ್ತಲು ಹೋಗುತ್ತಾರೆ. ಅಲ್ಲೇ ಇದ್ದ ವ್ಯಕ್ತಿ ೨೫ಪೈಸೆ ಕೊಟ್ಟರೆ ಹತ್ತಲು ಬಿಡುತ್ತೇನೆ. ಎಂದು ಕಾಸು ತೆಗೆದುಕೊಂಡು ಮಹಡಿ ಹತ್ತಿಸುತ್ತಾನೆ.

ಮಹಡಿ ಮೇಲೆ ಕುಳಿತಿದ್ದರಿಂದ ಕರಗವನ್ನು ಆ ಜನಸಂದಣಿಯಲ್ಲಿ ಕುತೂಹಲದಿಂದ ನೋಡುತ್ತಿದ್ದಾರೆ. ಮಧ್ಯರಾತ್ರಿ ಕರಗ ಧರ್ಮರಾಯ ಗುಡಿಯಿಂದ ವಾದ್ಯಗಳೊಂದಿಗೆ ಹಾದಿಯುದ್ದಕ್ಕೂ ಸಾಗಿಹೋಗುತ್ತಿದೆ. ಜನ ಕರಗ ಬಂತು ಕರಗ ಎಂದು ಕೂಗುತ್ತಿದ್ದಾರೆ. ಇವರಿಗೂ ಕುತುಹಲ ಕರಗ ನೋಡಲು ತುದಿಗಾಲಲ್ಲಿ ನಿಂತಿದ್ದವರು. ಈ ಕರಗ ಸಂಶೋಧನೆಗೆ ಒಂದು ಒಳ್ಳೆಯ ವಸ್ತು ಎಂದು ಡಾ. ಮೂರ್ತಿಯವರು ಯೋಜನೆ ಮಂಡಿಸುತ್ತಿದ್ದರಂತೆ. ನೋಡಿ ನಾವುಗಳು ಯಾವುದಾದರು ಜಾತ್ರೆ, ಕರಗ ನೋಡಿದರೆ ಅಲ್ಲಿರುವ ದೇವರಿಗೆ ಕೈಮುಗಿಯುವುದು ಇಲ್ಲವೇ ಆ ವರ ಕೊಡು, ಇದು ಕೊಡು ಎಂದು ಕೇಳುವುದರಲ್ಲೇ ಮಗ್ನ. ಸಾಹಿತಿಗಳಿಗೆ ದೇವರಿಗಿಂತ ಅಧ್ಯಯನದತ್ತ ಗಮನ ಎಂಬುದಕ್ಕೆ ಇದು ಉದಾಹರಣೆ. 

ದಾರಿ ಉದ್ದಕ್ಕು ಸಾಗಿ ಹೋದ ಕರಗದ ಸಂಭ್ರಮವನ್ನು ಕಣ್ ತುಂಬಿಕೊಂಡ ಜಿ ಎಸ್ ಎಸ್ ಮತ್ತು ಸಂಗಡಿಗರು ಇನ್ನೇನು ಮುಗಿಯಿತು, ಮನೆ ಕಡೆ ಹೊರಡಲು ಅನುವಾದಾಗಲೇ ತಿಳಿದಿದ್ದು. ಮಹಡಿ ಏರಲು ಏಣಿ ಹಾಕಿದ್ದರು ಇಳಿಯಲು ಏಣಿ ಇರಲೇ ಇರಲಿಲ್ಲ. ಈಗ ಇಳಿಯಲು ಏಣಿ ಬೇಕು ನಾಲ್ಕಾಣೆ ಕೊಟ್ಟಿದ್ದು ಬರಿ ಹತ್ತಲು ಮಾತ್ರ ಕೊಟ್ಟಿದ್ದಂತೆ ಆಯಿತು.  ಆ ಮನೆಯ ತಾರಸಿನ ಮೇಲೆ ಇವರುಗಳ ಜೊತೆ ಬಹಳಷ್ಟು ಜನರು ನಾಲ್ಕಾಣೆ ಕೊಟ್ಟು ಹತ್ತಿದ್ದರು. ಆ ರಾತ್ರಿ ಪೂರ ಅಲ್ಲೇ ಕಳೆಯುವ ಪರಿಸ್ಥಿತಿ ಬಂದೊದಗಿತ್ತು. ಆ ಸಮಯಕ್ಕೆ ಸರಿಯಾಗಿ ತಾರಸಿಯ ಕೆಳಗಿನ ಮನೆಗೆ ಇಳಿದು ಹೋಗುವ ಬಾಗಿಲನ್ನು ಪತ್ತೆ ಹಚ್ಚಿದರು. ಆನಂತರ ಎಲ್ಲರೂ ಆ ಮನೆಯ ಬಾಗಿಲು ಬಡಿಯುತ್ತಿದ್ದದ್ದು ಆ ಮನೆಯವರಿಗೂ ಅರ್ಥವಾಗಿರಬಹುದು ನಾಲ್ಕಾಣೆ ಏರುವುದಕ್ಕೆ ಇಳಿಯುವುದಕ್ಕಲ್ಲಾ ಯಾರೋ ಮಾಡಿದ್ದ ಕೆಲಸಕ್ಕೆ ಇವರುಗಳನ್ನು ಹೊರಗೆ ಕಳುಹಿಸಲು ಬಾಗಿಲು ತೆರೆಯಬೇಕಾಯ್ತು. ಹೀಗೆ ಮಹಡಿ ಮೇಲೆ ಜಾಗರಣೆಯನ್ನು ತಡೆಯಲು ಆ ಮನೆಯವರ ಸಹಾಯವಾಯ್ತು ಎಂದು ಜಿ ಎಸ್ ಎಸ್ ಹೇಳುತ್ತಾರೆ. (ಇದೊಂದು ಹಾಸ್ಯ ಸನ್ನಿವೇಶದ ನೆನಪು)
---------
2

ಒಮ್ಮೆ ಪಿ.ಎಚ್.ಡಿ ಮಾಡುವ ಸಮಯ ಸ್ನೇಹಿತರೊಂದಿಗೆ ಕಾಶಿಗೆ ಪ್ರವಾಸಹೋಗಿದ್ದ ಸಂದರ್ಭ. ಎಲ್ಲರೂ ನದಿಯಲ್ಲಿ ಸ್ನಾನ ಮಾಡಬೇಕೆಂದು ಹೋರಾಟಾಗ ಅವರ ಸ್ನೇಹಿತರಾದ ಪ್ರಭುಶಂಕರರು ಬರುವುದಿಲ್ಲ ಎಂದು ಕುಳಿತರು. ಮಿಕ್ಕುಳಿದವರ ಜೊತೆ ಶಿವರುದ್ರಪ್ಪನವರು ಸ್ನಾನಕ್ಕೆ ತೆರಳಿದರು. ಸ್ವಲ್ಪ ಸಮಯವಾಗುತ್ತಿದ್ದಂತೆ ಈಜು ಬಾರದ ಪ್ರಭುಶಂಕರರು ನದಿಗೆ ಇಳಿದೇ ಬಿಟ್ಟರು. ಇದ್ದಕ್ಕಿದ್ದ ಹಾಗೆ ಮುಳುಗುತ್ತಿದ್ದ ಸ್ನೇಹಿತನನ್ನು ಹಿಡಿಯಲು ಹೋದ ಜಿ ಎಸ್ ಎಸ್ ಅವರೂ ಸಹ ನೀರಿನ ಸೆಳೆತಕ್ಕೆ ಸಿಕ್ಕಿಬಿಟ್ಟರು. ಇನ್ನು ಉಳಿಯುವುದಿಲ್ಲ ಎಂದು ಗಾಬರಿಯಲ್ಲಿದ್ದವರನ್ನು ಯಾರೋ ಒಬ್ಬ ವ್ಯಕ್ತಿ ಬಂದು ದಡಕ್ಕೆ ಎಳೆದು ತಂದು ಬಿಟ್ಟರಂತೆ ಆತ ಹೋಗುವ ಮುನ್ನ " ದೈವವಶಾತ್ ಉಳಿದಿದ್ದೀರಿ, ಹೋಗಿ ಕಾಶಿ ವಿಶ್ವನಾಥನಿಗೆ ಪೂಜೆ ಸಲ್ಲಿಸಿ. ಊರಿಗೆ ಹೋದ ಮೇಲೆ ನಾಲ್ಕು ಜನರಿಗೆ ಅನ್ನ ಹಾಕಿ" ಎಂದು ಹೊರಟು ಹೋಗುತ್ತಾರೆ. 

ಒಂದೇ ಒಂದು ಕ್ಷಣ ಸಾವಿನ ದವಡೆಗೆ ಹೊರಟಿದ್ದ ಶಿವರುದ್ರಪ್ಪನವರು ಹೀಗೆ ಹೇಳುತ್ತಾರೆ.  ಕೇವಲ ಒಂದೇ ಕ್ಷಣ ಪ್ರವಾಹದಿಂದ ಸಾವು ಬಂದುಬಿಡುತ್ತಿತ್ತು, ಬದುಕಿನ ದಡಕ್ಕೆ ಬಂದಿದ್ದೆವು. ಇದನ್ನು ನೆನೆದಾಗ ಅನ್ನಿಸುತ್ತದೆ.  "ಸಾವಿಗೂ ಬದುಕಿಗೂ ಇರುವ ಅಂತರ ಕೇವಲ ಕೂದಲೆಳೆಯಷ್ಟು ಮಾತ್ರದ್ದು, ನಾವು ಬದುಕಿರುವುದೂ ಕೂಡಾ ಒಂದು ಆಕಸ್ಮಿಕವೋ ಏನೋ". 

ಮತ್ತೊಂದು ಕಡೆ ಹೇಳುತ್ತಾರೆ "ನಾವು ಇದ್ದೇವೆ ಅಥವಾ ಇಲ್ಲ ಎಂಬ ಕಾರಣಕ್ಕಾಗಿ, ಯಾವುದೂ ನಡೆಯುವುದೊ ಬಿಡುವುದೂ ವ್ಯತ್ಯಾಸವಾಗುವುದಿಲ್ಲ. ನಾವು ಯಾವುದನ್ನು ಮಹತ್ವದ್ದು ಹಾಗೂ ಮೌಲಿಕವಾದದ್ದು ಎಂದು ಅಂದುಕೊಳ್ಳುತ್ತೇವೋ ಅದನ್ನು ಒಂದು ಗುಬ್ಬಚ್ಚಿ ಕೂಡ ಲಕ್ಷ್ಯಕ್ಕೆ ತೆಗೆದುಕೊಳ್ಳುವುದಿಲ್ಲ. ಆದರೂ ನಾವು ನಮ್ಮ ಕೀರ್ತಿ-ಪ್ರತಿಷ್ಠೆ-ಸಾಧನೆ - ಸಿದ್ಧಿ ಇತ್ಯಾದಿಯಾಗಿ ಕೊಚ್ಚಿಕೊಳ್ಳುತ್ತೇವಲ್ಲ ಇದಕ್ಕೆ ಏನರ್ಥ? ನಮಗೂ ಈ ಜಗತ್ತಿಗೂ ಗಾಢವಾದ ಸಂಬಂಧವಿದೆ ಅಂದುಕೊಳ್ಳುತ್ತೇವಲ್ಲ ಅದು ಎಂಥ ಸಂಬಂಧ?".

ಸೌಂದರ್ಯ ಸಮೀಕ್ಷೆ(ಇದು ಅವರ ಪಿಹೆಚ್‌ಡಿ ಮಹಾ ಪ್ರಬಂಧ). ಸೌಂದರ್ಯ ಸಮೀಕ್ಷೆ ಈ ಗ್ರಂಥ ವಿಶಿಷ್ಟತೆಯಿಂದ ಕೂಡಿದೆ ಇದು ಕಾವ್ಯ ಸೌಂದರ್ಯವನ್ನೂ ಹೆಚ್ಚಿಸಿದೆ. ಪಿ ಎಚ್ ಡಿ  ಸಮಯದ ಪ್ರವಾಸದ  ಈ ಘಟನೆ ಅವರಲ್ಲಿ ಬದುಕಿನ ಬಗ್ಗೆಯೂ  ಒಂದು ಪಿ ಎಚ್ ಡಿಯನ್ನು  ನೀಡಿತು ಎಂದೇ ಹೇಳಬಹುದು.
----------
3
ಒಂದೆಡೆ ಜಿ. ಎಸ್ . ಎಸ್ ಅವರು ನಾ. ಕಸ್ತೂರಿ ಯವರನ್ನು ನೆನಪುಮಾಡಿಕೊಳ್ಳುತ್ತಾರೆ. ಅವರು ಕೇರಳ ಮೂಲದವರಾದರೂ ಕನ್ನಡ ಕಲಿತು, ಕನ್ನಡ ಶಬ್ದ ಭಂಡಾರಕ್ಕೆ ಅಪಾರ ಕೊಡುಗೆ ಕೊಟ್ಟಿದ್ದಾರೆ. ಇಂಥ ವ್ಯಕ್ತಿಯನ್ನು ನಮ್ಮ ಕನ್ನಡ ಜನ ಸಲ್ಲಿಸಬೇಕಾದ ಗೌರವ ಸಲ್ಲಿಸಲಿಲ್ಲ ಎಂದು ಹೇಳುತ್ತಾರೆ. ನಾ. ಕಸ್ತೂರಿ ಅವರು ಜಿ ಎಸ್ ಎಸ್ ಅವರಿಗೆ ಸದಾ ಹುರುದುಂಬಿಸುತ್ತಿದ್ದರು. ಹಾಸ್ಯ ಕವನ, ಹಲವಾರು ಸಭೆಗಳಿಗೆ ಕರೆದುಕೊಂಡು ಹೋಗಿ ಭಾಷಣ ಮಾಡುವ ಕಲೆಯನ್ನು ಕಲಿಸಿಕೊಟ್ಟರಂತೆ. ಹಾಗೆ  ಶಿವರಾಮ ಕಾರಂತರ "ಕೊರವಂಜಿ" ಮಾಸ ಪತ್ರಿಕೆಯಲ್ಲಿ ದಿಬ್ಬಯ್ಯ ಎಂಬ ಕಾವ್ಯನಾಮದಲ್ಲಿ ಪ್ರಕಟಿಸುವಂತೆ ಮಾಡಿದ್ದರು. ಜಿ ಎಸ್ ಎಸ್ ಮತ್ತು ಅವರ ಸ್ನೇಹಿತರಾದ ಪ್ರಭುಪ್ರಸಾದರು ಸದಾ ದಾವಣಗೆರೆಯ ಊರಾಚೆಗಿನ ದಿಬ್ಬವೊಂದರ ಮೇಲೆ ಕೂರುತ್ತಿದ್ದರಿಂದ ನಾ.ಕಸ್ತೂರಿ ಅವರು ಜಿ ಎಸ್ ಎಸ್ ಅವರಿಗೆ ದಿಬ್ಬಯ್ಯ ಎಂದು ಕರೆದರೆಂದು ಹೇಳುತ್ತಾರೆ. 

ಇಂದ್ರಭವನದಲಿ ಚಂದ್ರ ಮೂಡಿತೋ
ದೋಸೆ ಹಂಚಿನಲ್ಲಿ.
ಮೂಡಿತೆಂಬೆಯೊ, ಮತ್ತೆ ಮುಳುಗಿತೋ
ಉದರ ಗಗನದಲ್ಲಿ! 

- ಈ ಸಾಲುಗಳು ಶಿವರಾಮ ಕಾರಂತ ಮೆಚ್ಚುಗೆ ಪಡೆದಿದ್ದವು. 

----------
4
ಒಮ್ಮೆ ಜಿ ಎಸ್ ಎಸ್ ಅವರು ಪುಟ್ಟಪರ್ತಿಗೆ ಭೇಟಿ ನೀಡಿದಾಗ ನಡೆದ ಘಟನೆ..

ಪುಟ್ಟಪರ್ತಿ ಸಾಯಿ ಬಾಬ ಅವರ ಕೋಣೆಗೆ ಹೋದಾಗ, ಬಾಬರಲ್ಲಿ ಏನು ಕೇಳಬೇಕೆಂದು ಅವರಿಗೆ ತಿಳಿದಿರಲಿಲ್ಲ. ಅವರ ಮೌನವನ್ನು ಕಂಡ ಬಾಬ ಅವರೇ ಪ್ರಶ್ನಿಸುತ್ತಾರೆ.

 "ನನಗೆ ಎಲ್ಲಾ ಗೊತ್ತು. ನೀನು ಹೇಳದಿದ್ದರೇನು..? ನೀನು ಚಿಕ್ಕಂದಿನಿಂದ ತುಂಬಾ ಕಷ್ಟಪಟ್ಟಿದ್ದೀಯಾ"  ಬಾಬಾ ಹೇಳುತ್ತಾರೆ.

ಹೌದು, ಎಂದು ಜಿ ಎಸ್ ಎಸ್ ಹೇಳುತ್ತಾರೆ (ಆ ಕಷ್ಟದಿಂದ ಪಾರು ಮಾಡು ಎಂದು ಕೇಳುತ್ತೇನೆ ಎಂದುಕೊಂಡರೇನೋ ಆದರೆ ಕೇಳಲೇ ಇಲ್ಲ).

'ಚಿಂತೆಯಿಲ್ಲ, ನಿನ್ನ ಕಷ್ಟಗಳನ್ನು ನಾನು ನೋಡಿಕೊಳ್ಳುವೆ. ಎಲ್ಲವೂ ಸರಿ ಹೋಗುವುದು' ಎಂದು ಬಾಬಾ ಆಶ್ವಾಸನೆ ನೀಡುತ್ತಾರೆ.

ಆಗ ತಟ್ಟನೇ ಜಿ ಎಸ್ ಎಸ್ ಹೇಳುತ್ತಾರೆ 'ನನ್ನ ಕಷ್ಟಗಳನ್ನು ನೀವು ನೋಡಿಕೊಳ್ಳುವುದೆಂದರೇನು? ಕಷ್ಟಗಳು ಬಂದಿವೆ. ಹಾಗೆ ಮುಂದೆಯೂ ಬರುತ್ತವೆ. ಪ್ರತಿ ಬಾರಿ ಕಷ್ಟಬಂದಾಗಲೆಲ್ಲಾ ನಿಮ್ಮಲ್ಲಿಗೆ ಬರಬೇಕು. ಅದು ಎಷ್ಟರಮಟ್ಟಿಗೆ ಸರಿ.?'

ನಾನಿರುವುದು ಏಕೆ?- ಎಂದು ಬಾಬ ಉತ್ತರಿಸುತ್ತಾರೆ.

ನನ್ನ ಕಷ್ಟ ನೀವು ನೋಡಿಕೊಳ್ಳುವುದು ಬೇಡ. ಆದರೆ ನನಗೆ ಬರುವ ಕಷ್ಟಗಳೆಲ್ಲವನ್ನೂ ಎದುರಿಸುವ ಶಕ್ತಿ ಮಾತ್ರ ನನಗೆ ಕೊಡುವುದಾದರೆ ಕೊಡಿ ಎಂದು ಹೇಳಿಬಿಡುತ್ತಾರೆ.

ಕ್ಷಣ ಮೌನವಾಗಿದ್ದ ಕೋಣೆಯಲ್ಲಿ ಜಿ ಎಸ್ ಎಸ್ ಅವರೇ ಒಂದು ಪ್ರಶ್ನೆ ಕೇಳುತ್ತಾರೆ. "ನನಗೊಂದು ಅನುಮಾನವಿದೆ". ನಿಮ್ಮನ್ನು ಕೇಳಲೆ ಎಂದು.

ಆಗಲಿ ಎಂದರು ಬಾಬ 

'ನೀವು ಪವಾಡ ಮಾಡುತ್ತೀರಲ್ಲ ಏಕೆ?' ಎಂದರು ಜಿ ಎಸ್ ಎಸ್ 

ನೋಡಪ್ಪ, ಜನರನ್ನು ಸನ್ಮಾರ್ಗದಲ್ಲಿ ನಡೆಸೋದಕ್ಕೆ ಈ ಪವಾಡಗಳು ಬೇಕಾಗುತ್ತವೆ. ಭಕ್ತಿ ಶ್ರದ್ಧೆ ಕಡೆಗೆ ತರಲು ಇದು ಸಹ ಒಂದು ದಾರಿ. ಎಂದು ಹೇಳಿ ಮುಂದಕ್ಕೆ ಜಿ ಎಸ್ ಎಸ್ ಮಾತನಾಡಲೂ ಬಿಡದೆ ಮತ್ತೆ ನೋಡೋಣ, ಆಗಾಗ ಬರುತ್ತಲಿರಿ ಎಂದರಂತೆ. ಹಾಗೆ ಹೇಳಿದರೆ ಅಲ್ಲಿಗೆ ಮುಕ್ತಾಯ ಎಂಬಂತೆ ಎಂದುಕೊಂಡು ಜಿ ಎಸ್ ಎಸ್ ಹೊರಗಡೆ ಬಂದರು.

ಈ ಸಂಭಾಷಣೆಯಿಂದಲೇ ಪವಾಡಗಳನ್ನು ಜಿ ಎಸ್ ಎಸ್ ಅವರು ನಂಬುತ್ತಿರಲಿಲ್ಲವೆಂದು ತಿಳಿಯುತ್ತದೆ. 

ಹೀಗೆ ಓದುತ್ತ ಹೋದಂತೆ ಹಲವಾರು ವಿಷಯಗಳು ತೆರೆದುಕೊಳ್ಳುತ್ತವೆ. ಮತ್ತಷ್ಟು ಓದಲು ಸ್ನೇಹಿತರು ಜಿ ಎಸ್ ಎಸ್ ಅವರ ಪುಸ್ತಕಗಳನ್ನು ಕೊಟ್ಟಿದ್ದಾರೆ ಓದಿದ್ದೇನೆ ಅಲ್ಲದೆ ಮತ್ತೊಮ್ಮೆ ಓದಲು ಪ್ರಾರಂಭಿಸಿದ್ದೇನೆ. ಅವುಗಳಲ್ಲಿ ಬಹಳಷ್ಟು ವಿಷಯಗಳು ತಿಳಿಯುತ್ತವೆ. ಶರಣರಾದ ಸಿದ್ಧರಾಮ ಜೀವನ ಚರಿತ್ರೆ ಇದು ಬಹಳಷ್ಟು ಮನಸ್ಸಿಗೆ ಮುದ ನೀಡಿದ ಪುಸ್ತಕ ಎಂದೇ ಹೇಳಬಹುದು, ಗುರುಗಳಾದ ಕುವೆಂಪು ಅವರ ಮೇಲೆ ಬರೆದ ಗದ್ಯ ಪುನರವಲೋಕನ, ಸಮಗ್ರ ಗದ್ಯ ಇವುಗಳೆಲ್ಲವೂ ಒಂದು ರೀತಿ ನಮ್ಮಲ್ಲಿ ಹೊಸ ವಿಚಾರಧಾರೆಯತ್ತ ತೆಗೆದುಕೊಂಡೋಗುತ್ತದೆ. 

ಬಹಳಷ್ಟು ಪುಸ್ತಕಗಳು ಓದುವ ಆಸೆಯಿದೆ ಅವುಗಳಲ್ಲಿ.... ಮಾಸ್ಕೋದಲ್ಲಿ ೨೨ ದಿನ, ಇಂಗ್ಲೆಂಡಿನಲ್ಲಿ ಚತುರ್ಮಾಸ, ಅಮೆರಿಕದಲ್ಲಿ ಕನ್ನಡಿಗ, ಗಂಗೆಯ ಶಿಖರಗಳಲ್ಲಿ, ವಿಮರ್ಶೆಯ ಪೂರ್ವ ಪಶ್ಚಿಮ, ಕಾವ್ಯಾರ್ಥ ಚಿಂತನ, ಗತಿಬಿಂಬ, ಅನುರಣನ, ಬೆಡಗು, ನವೋದಯ ಹೀಗೆ ಉದ್ದನೆಯ ಪಟ್ಟಿ ಬೆಳೆಯುತ್ತದೆ. 

ಸದ್ಯಕ್ಕೆ ಇಷ್ಟು.... ಮುಂದೇ ಮತ್ತೆ ಯಾವಾಗಲಾದರೂ ಬರುವೆ, ಜಿ.ಎಸ್.ಎಸ್ ಅವರ ಪುಸ್ತಕಗಳ ಓದಿನೊಂದಿಗೆ.