Thursday, March 23, 2017

ಈ "ಉಪ್ಪಿಟ್ಟು" ಎಂಬ ತಿಂಡಿ ಹೆಸರು ಹೇಳುತ್ತಿದ್ದಂತೆ ಏನೆಲ್ಲಾ ನೆನಪುಗಳು ಬರುತ್ತೆ!!

ಬೆಳಗೆದ್ದು ಯಾವ ತಿಂಡಿ ಮಾಡಲಿ, ಅಯ್ಯೋ ಆಫೀಸಿಗೆ ತಯಾರು ಬೇರೆ ಆಗಬೇಕು, ಮಕ್ಕಳನ್ನ ಶಾಲೆಗೆ ಕಳುಹಿಸಬೇಕು, ಕಷ್ಟನಪ್ಪ ದಿನಾ ಏನ್ ತಿಂಡಿ, ಏನು ಅಡಿಗೆ ಅಂತಾ ಯೋಚನೆ ಮಾಡೋದ್ರಲ್ಲೇ ತಲೆ ಗಿರ್ ಅನ್ನುತ್ತೆ. ಇಂತಹ ಗಿರ್ ಎನ್ನುವ ಸಮಯದಲ್ಲೇ ನೋಡಿ ಈ ಉಪ್ಪಿಟ್ಟ್ ಥಟ್ ಅಂಥ ತಯಾರಾಗುತ್ತೆ. ಎಷ್ಟೋ ಜನರಿಗೆ ಅಯ್ಯೋ ಉಪ್ಪಿಟ್ಟಾ, ಇನ್ನು ಕೆಲವರಿಗೆ ವಾವ್ ಉಪ್ಪಿಟ್ಟಾ!!, ಮತ್ತೆ ಕೆಲವರು ಒಹೋ ಉಪ್ಪಿಟ್ಟ್ ಸಕತ್ ಇಂತಹ ಉದ್ಗಾರಗಳು ಕೇಳಿ ಬರುತ್ತೆ. ಇನ್ನು ಗಂಡು-ಹೆಣ್ಣು ನೋಡುವ ಶಾಸ್ತ್ರ ಎಂದು ಬಿಟ್ಟರೆ ಸಾಕು... ಉಪ್ಪಿಟ್ಟು, ಕಾಫಿ ಮಾಡಿಕೊಡೋಣ ಎಂದು ಹುಡುಗಿ ಕಡೆಯವರು ಮಾತನಾಡಿಕೊಂಡರೆ, ಗಂಡಿನ ಕಡೆಯವರು ಅಯ್ಯೋ ಅದೇ ಉಪ್ಪಿಟ್ಟು, ಎಲ್ಲೋದ್ರು ಈ ಉಪ್ಪಿಟ್ಟ್ ಮಾಡಿಬಿಡ್ತಾರಪ್ಪ ಎಂದು ಗೊಣಗಿಕೊಂಡೆ ಬರ್ತಾರೆ. ಹೆಣ್ಣು ಇಷ್ಟವಾದರೆ ಉಪ್ಪಿಟ್ಟಿನ ಕಡೆ ಗಮನವಂತೂ ಹೋಗಲ್ಲ, ಇಲ್ಲವಾದರೆ ಮುಗಿತು ಕತೆ ಅಯ್ಯೋ ಈ ಉಪ್ಪಿಟ್ಟು ತಿನ್ನೊ ಸಂಪತ್ತಿಗೆ ಇಲ್ಲಿವರೆಗೂ ಬಂದೆವಾ ಎಂದುಕೊಳ್ಳುತ್ತಾರೆ. ಕೆಲವರಿಗಂತೂ ಬಿಸಿ-ಬಿಸಿ ಉಪ್ಪಿಟ್ಟು ಬೇಕು, ಇನ್ನು ಕೆಲವರಿಗೆ ತಣ್ಣನೆ ಉಪ್ಪಿಟ್ಟು ಬೇಕು, ಮತ್ತೊಂದಷ್ಟು ಜನ ಬೇಸರಿಕೆಗೆ-ಆಸರಿಕೆಗೆ ಉಪ್ಪಿಟ್ಟು ಮಾಡಿಕೊಂಡು ತಿಂತಾರೆ. ನಾನಂತು ಯಾವಾಗಾದ್ರು ಸೋಮಾರಿತನ ಅತಿಯಾಗಿ ರಾತ್ರಿ ಊಟಕ್ಕೂ ಉಪ್ಪಿಟ್ಟು ಮಾಡಿ ಬಡಿಸಿದ್ದೀನಿ. ಪಾಪ ಗಂಡ-ಮಗ ಸದ್ದಿಲ್ಲದೆ ತಿಂದಿದ್ದಾರೆ. ಇನ್ನೇನು ಮಾಡ್ತಾರೆ ಸರಿ ರಾತ್ರಿಯಲ್ಲಿ ಎಲ್ಲಿ ಹೋಗ್ತಾರೆ ಹೇಳಿ.
ಏನೇ ಹೇಳಿ ಉಪ್ಪಿಟ್ಟು ಎಷ್ಟೋ ತರಹೇವಾರಿಯಾಗಿ ಮಾಡಬಹುದು ಕಾಳು ಉಪ್ಪಿಟ್ಟು, ಪ್ಲೈನ್ ಉಪ್ಪಿಟ್ಟು, ತರಕಾರಿ ಉಪ್ಪಿಟ್ಟು, ನುಚ್ಚಕ್ಕಿ ಉಪ್ಪಿಟ್ಟು, ಗೋಧಿ ನುಚ್ಚಿನ ಉಪ್ಪಿಟ್ಟು, ಹಿತಕವರೇ ಉಪ್ಪಿಟ್ಟು ಇನ್ನು ಇತ್ಯಾದಿ. ಮೊನ್ನೆ ಸ್ನೇಹಿತೆ ಮನೆಯಲ್ಲಿ ಉಪ್ಪಿಟ್ಟು ಹೊರಗಡೆಯಿಂದ ತರಿಸಿದ್ರು, ಎಷ್ಟು ಚೆಂದ ಅಂದ್ರೆ ಆ ಉಪ್ಪಿಟ್ಟಿನಲ್ಲಿ ಏನೂ ಹೆಚ್ಚು ಇರಲಿಲ್ಲ, ಹಾಗಾದ್ರೆ ಉಪ್ಪಿಟ್ಟು ಹೇಗಾಯ್ತು ಅಂತೀರಾ? ಆ ಉಪ್ಪಿಟ್ಟಿನಲ್ಲಿ ರವೆ, ಅಲ್ಲೊಂದು ಇಲ್ಲೊಂದು ಕಾಣುವ ಈರುಳ್ಳಿ (ಏನು ಉಂಡುಂಡಗೆ ಈರುಳ್ಳಿ ಹಾಕಿದ್ರಾ ಅನ್ನಬೇಡಿ ಕತ್ತರಿಸಿದ್ದರು) ಆ ಬಿಳಿ ರವೆಯ ಮೇಲೆ ಕಪ್ಪನೆ ಆಕರ್ಷಿಸುವ ಚಿಟಿದ ಸಾಸಿವೆ, ಕರಂ ಕುರುಮ್ ಎನ್ನುವ ಉದ್ದಿನ ಬೇಳೆ, ಹೆಚ್ಚು ಎಣ್ಣೆ ಬಳಸದೆ, ಮೃದುವಾಗಿ ಹದವಾಗಿ ಮಾಡಿದ್ದ ಉಪ್ಪಿಟ್ಟು ಬಾಯಿ ರುಚಿಗೆ ಹಿತವೆನಿಸಿತ್ತು, ಹೊಟ್ಟೆಗೂ ಆಹ್ಲಾದಕರವಾಗಿತ್ತು.
ಆ ಸ್ನೇಹಿತೆ ಮನೆಯ ಉಪ್ಪಿಟ್ಟು ನನ್ನ ತಾತನನ್ನು ನೆನಪಿಸಿತ್ತು!! ಸುಮಾರು ೧೮-೨೦ ವರ್ಷದ ಹಿಂದೆ ಇದ್ದ ತಾತನನ್ನ ನೆನಪಿಸುತ್ತು ಎಂದರೆ ಲೆಕ್ಕ ಹಾಕಿ ಆ ಉಪ್ಪಿಟ್ಟು ಅಥವಾ ತಾತನೋ ಎಷ್ಟು ಧನ್ಯರು ಎಂದು. ವಿಷ್ಯಕ್ಕೆ ಬಾ ಸುಮ್ಮನೆ ಉಪ್ಪಿಟ್ಟನ್ನ ಹಿಡಕೊಂಡು ಎಳಿಬೇಡ ಅಂತೀರಾ, ಹೂ ಸರಿ, ನಾವು ರಜೆಗೆ ಅಜ್ಜಿ ಊರಿಗೆ ಹೋದ್ರೆ ಸಾಕು ನಮಗೆ ಸಂಭ್ರಮ, ಹಳ್ಳಿ ಸೊಗಡು, ಆಲೆಮನೆ, ಕಬ್ಬು-ಗೆಣಸು, ಕಡಲೆಕಾಯಿ ಹೀಗೆ ತಿನ್ನೋ ಖುಷಿ. ಇದಕ್ಕೆ ನಾವು ಊರಿಗೆ ಹೋಗ್ತಾ ಇದ್ದಿದ್ದು ಬೇರೇನೂ ಕೆಲಸ ಬರೋಲ್ಲ ನೋಡಿ ಏನ್ ಮಾಡೋದು.
ಹಳ್ಳಿ ಮನೆ, ಅತ್ತೆ-ಮಾವಂದಿರಿಗೆ ಬಿಡುವಿಲ್ಲದ ಕೆಲಸ, ಸದಾ ಹೊಲ-ಗದ್ದೆ ಆಳು-ಕಾಳು ಹೀಗೆ ಎಲ್ಲರೂ ತಮ್ಮತಮ್ಮ ಕೆಲಸಗಳಲ್ಲಿ ಮಗ್ನರಾಗುತ್ತಿದ್ದರು. ಬೆಳಗೆದ್ದು ಕಾಫಿ ಟೀ ತಿಂಡಿ ಅಂತ ಈ ಪ್ಯಾಟೆ ಮಂದಿ ಮಾಡ್ತಾರೆ ನೋಡಿ. ಇವತ್ತೇನು ತಿಂಡಿ, ಮಧ್ಯಾಹ್ಮಕ್ಕೇನು ಊಟ, ಸಂಜೆಗೆ ಸ್ನಾಕ್ಸ್, ರಾತ್ರಿಗೆ ಲೈಟ್ ಡಿನ್ನರ್ ಹೀಗೆಲ್ಲ ಎಲ್ಲಿ ಮಾಡ್ತಿದ್ರು? ಅಚ್ಚ್ ಕಟ್ಟಾಗಿ ಕರಿ ಲಾಡು, ಬಿಳಿ ಬಾನ ಬಸ್ದು , ಎಲ್ಲರು ತಿಂದು ಹೊಲ-ಗದ್ದೆ ಕೆಲಸಗಳಿಗೆ ಹೋದ್ರೆ ಬರ್ತಾ ಇದ್ದದ್ದೇ ಸಂಜೆ. ಇಂತಹದರಲ್ಲಿ ನಮ್ಮ ಅತ್ತೆ ನಾವೆಲ್ಲಾ ಪ್ಯಾಟೆ ಮಕ್ಕಳು ಬಂದವ್ರೆ ಅಂತಾ ತಿಂಡಿ ಮಾಡ್ತಾ ಇದ್ರು. ಆದ್ರೆ ವಸಿ ತಡ ಆಗೋದು ಹೇಳಿ, ನಮಗೋ ಕಾಯುವಷ್ಟು ತಾಳ್ಮೆ ಇರ್ತಿರ್ಲಿಲ್ಲ. ಇನ್ನು ನಮ್ಮ ಪರಿಸ್ಥಿತಿ ನೋಡ್ತಿದ್ದ ತಾತ ......... ೧೦ ಗಂಟೆಗೆ ನಾಸ್ಟಾ ಕೊಡ್ತಾಳಿವಳು ಮಕ್ಕಳು ಅಲ್ಲಿವರೆಗೂ ಒಣಕ್ಕೊಂಡು ಇರ್ಬೇಕಾ ಅಂತಾ, ತಾತ ಲೇ ಮಕ್ಕಳಾ, ಬೇಗ ಕೈಕಾಲು ಮುಖ ತೊಳಕ್ಕೊಂಡು ಬನ್ರೋ ಎಂದು ಬೆಳಿಗ್ಗೆ ಊರ್ ಮುಂದಿನ ಅಜ್ಜಿ ಹೋಟೆಲ್ ಗೆ ಕರಕೊಂಡು ಹೋಗಿ ಉಪ್ಪಿಟ್ಟು ಕೊಡ್ಸೋರು.... ಆಹಾ! ಆ ಉಪ್ಪಿಟ್ಟಿನ ರುಚಿ, ಘಮಲು ಇನ್ನೂ ಹಾಗೆ ಇದೆ ನೆನಪಿನಲ್ಲಿ. ಹೋಟೆಲ್ ಅಜ್ಜಿ ಮಾಡುತ್ತಿದ್ದ ಉಪ್ಪಿಟ್ಟಿನಲ್ಲೂ ಅಷ್ಟೇ ಏನೂ ಇರುತ್ತಿರಲಿಲ್ಲ, ಯಾವ ತರಕಾರಿಯನ್ನೂ ಸೋಕಿಸುತ್ತಿರಲಿಲ್ಲ, ಘಮ್ಮನೆ ಹುರಿದು, ಬೆಳ್ಳಗಿನ ರವೆಗೆ ಬಿಸಿನೀರು ತೋರಿಸುತ್ತಿದ್ದರು ಅದರ ಜೊತೆಗಿಷ್ಟು ಸಾಸಿವೆ ಅಲ್ಲೊಂದು ಇಲ್ಲೊಂದು ಕತ್ತರಿಸಿದ ಈರುಳ್ಳಿ, ಯಾವ ಕಡಲೆಯೂ ಇಲ್ಲ, ಅದಾವ ಉದ್ದಿನ ಬೇಳೆಯೂ ಕಾಣುತ್ತಿರಲಿಲ್ಲ. ಆದರೆ ಜೋಪಡಿಯ ಎದುರು ತೆಂಗಿನ ಗರಿ ತಾರಸಿಯ ಕೆಳಗೆ, ಕಲ್ಲು ಬೆಂಚಿನ ಮೇಲೆ ಕುಳಿತು, ಊರ ಮಂದಿಯೆಲ್ಲ ತಾತನಿಗೆ ಯಾರ ಮಕ್ಕಳು ಎಂದಾಗ ನನ್ನ ದೊಡ್ಡ ಮಗಳ ಮಕ್ಕಳು ಇವರು, ಚಿಕ್ಕ ಮಗನ ಮಕ್ಕಳು ಇವರು ಎಂದು ಬೆಂಗಳೂರಿನ ಕಥೆಯೆಲ್ಲಾ ಹೇಳ್ತಾ ಹರಟುತ್ತಿರುವ ಹೊತ್ತಿಗೆ ಹೋಟೆಲ್ ಅಜ್ಜಿ ಬಿಸಿ ಬಿಸಿ ಉಪ್ಪಿಟ್ಟನ್ನು ದೊನ್ನೆಯೊಳಗೆ ಹಾಕಿ ಕೊಡುತ್ತಿದ್ದರು, ನಾವು ಅಲ್ಲೇ ಕೂತು ಬಿಸಿ ಎಂದು ಒಮ್ಮೆ ಉಪ್ಪಿಟ್ಟಿಗೆ ಬೆರಳುಗಳನ್ನ ತಾಗಿಸಿ ನೆಕ್ಕುತ್ತಿದ್ದ ರುಚಿ, ಬಿಸಿಯನ್ನೇ ಬಾಯಿಯ ಗಾಳಿಯಲ್ಲಿ ಊದಿ ಊದಿ, ತುತ್ತುಗಳನ್ನ ಬಾಯೊಳಗಿಟ್ಟು ನಿಮಿಷಗಟ್ಟಲೆ ಸವಿಯುತ್ತಿದ್ದ ಸವಿ ಆಹಾ!! ಈಗಲೂ ಬಾಯಿ ನೀರು ಬಂತು ನೋಡಿ. ತುಪ್ಪದ ಘಮದೊಂದಿಗೆ, ರುಚಿಕಟ್ಟಾದ, ಶುಚಿಯಾದ ದೊನ್ನೆ ಉಪ್ಪಿಟ್ಟು ಅದಕ್ಕೆ ತಾತ ಕೊಡುತ್ತಿದ್ದದ್ದು ಒಂದು ದೊನ್ನೆಗೆ ನಾಲ್ಕಾಣೆ ಮಾತ್ರ. ಅಂದಿನ ನಾಲ್ಕಾಣೆಗೆ ನಮ್ಮ ಹೊಟ್ಟೆ ತುಂಬುತ್ತಿದ್ದು ಆದರೆ ಈಗ ಆ ನಾಲ್ಕಾಣೆ ಕಣ್ ಮರೆಯಾಗಿದೆ. ಹೋಟೆಲ್ ಅಜ್ಜಿ ಅದಾವ ಮಂತ್ರವಾಕಿ ತಿಂಡಿ ಮಾಡ್ತಾ ಇತ್ತೋ ಗೊತ್ತಿಲ್ಲ, ಅಷ್ಟು ರುಚಿಯಂತೂ ನಾ ಇದುವರೆಗೂ ಎಲ್ಲಿಯೂ ತಿಂದಿಲ್ಲ, ನಾನು ಕೂಡ ಮಾಡಿಲ್ಲ ಬಿಡ್ರಿ. ಎಷ್ಟೊಂದು ತರಕಾರಿ, ತುಪ್ಪ, ಮಸಾಲೆ ಎಲ್ಲಾ ಇದ್ರೂ..!! ಅಜ್ಜಿ ಹೋಟೆಲ್ ಮುಂದೆ ನಮ್ಮನ್ನೆಲ್ಲ ನೀವಾಳಿಸಿ ಬಿಸಾಕ್ ಬೇಕು.
ನೆನಪಿನ ಹಿತ್ತಲಿಗೆ ಕರೆದುಕೊಂಡು ಹೋಗಿದ್ದು ಸಾಹಿತ್ಯಾಸಕ್ತಿ ಬಳಗ, ಅಲ್ಲಿನ ಉಪ್ಪಿಟ್ಟಿನ ಚರ್ಚೆಗೆ ಈ ದೊನ್ನೆ ಉಪ್ಪಿಟ್ಟು ಬಂದಿದೆ ....

Thursday, August 11, 2016

ಮಣ್ಣಿನ ಹಾದಿ - 04


ಮಣ್ಣಿನ ಹಾದಿ - 01

ಮಣ್ಣಿನ ಹಾದಿ - 02

ಮಣ್ಣಿನ ಹಾದಿ - 03
 ಮಣ್ಣಿನ ಹಾದಿ
ಮುಂದುವರಿದ ಕಥೆ ಭಾಗ - 04
ಇಂಜಿನಿಯರಿಂಗ್ ನಂತರ ಮುಂದುವರಿದ ವಿದ್ಯಾಭ್ಯಾಸ ನೆದರ್ಲಾಂಡಿನಲ್ಲಿ, ಸುಧೀರ್ಘ ಸಂಶೋಧನೆ, ತಲ್ಲೀನತೆ, ಕೃಷಿಯ ಬದುಕನ್ನೇ ಬೆಳೆಸುವಲ್ಲಿ ಧ್ಯಾನಸ್ತನಾಗಿದ್ದ. ಇತ್ತ ಶಂಕ್ರನ ತಮ್ಮ "ರಾಜ" ಹತ್ತನೆ ತರಗತಿ ಮೆಟ್ಟಿಲನ್ನ ಬಲು ಆಯಾಸದಿಂದ ಹತ್ತಿ ಕುಳಿತಿದ್ದ, ಆದರೆ ಹತ್ತನೇ ತರಗತಿಯಲ್ಲಿ ಬರಿ ಮಣ್ಣು ಹೊತ್ತದ್ದೇ ಹೆಚ್ಚು, ಅದಾಗಲೆ ಪಡ್ಡೆ ಹುಡುಗರ ಸಂಘ, ಊರ ಮಧ್ಯೆಯ ಅರಳಿಮರದಡೆ ದಿನವೂ ಹರಟೆ, ಇಸ್ಪೀಟ್, ರಾಜಕಾರಣ ಇದೇ ಕೆಲಸದಲ್ಲಿ ಮಗ್ನನಾದ. ಅಪ್ಪ-ಅಮ್ಮ ಇಬ್ಬರಿಗೂ ತಿಳಿದುಹೋಗಿತ್ತು ಇನ್ನು ಇವನ ವಿದ್ಯೆ ನೈವೇದ್ಯ ಮುಗಿದು ಇವನನ್ನು ಒಂದು ತಹಬದಿಗೆ ತರುವುದೂ ಕಷ್ಟದ ಕೆಲಸ, ಹೋಗಲಿ ಇರುವ ಜಮೀನನ್ನೇ ನೋಡಿಕೊಂಡು ಹೋಗು ಎಂದು ಅಪ್ಪ ಮಗನಿಗೆ ಬುದ್ಧಿವಾದ ಹೇಳಿ, ನೇಗಿಲನ್ನು ಕೈಗೆ ಕೊಟ್ಟ.

ಅಪ್ಪನ ಮಾತು ಮೀರದವನಂತೆ ರಾಜ ದಿನ ಬೆಳಗೆದ್ದು ಹೊಲ, ಗದ್ದೆ ಎಂದು ಓಡಾಡುತ್ತ ಆಳು-ಕಾಳುಗಳನ್ನ ಕರೆಸಿ ಕೆಲಸ ಮಾಡುತ್ತಿದ್ದದ್ದು ಕಂಡು ಅಪ್ಪ-ಅಮ್ಮನಿಗೆ ಖುಷಿ, ಇನ್ನು ಭೂಮಿ ಕೆಲಸಕ್ಕೆ ಇವನಿದ್ದಾನೆ ಎಂದು ತೃಪ್ತಿಪಟ್ಟುಕೊಂಡರು. ರಾಜ ಸ್ವಲ್ಪ ರಾಜಾರೋಷದಿಂದ ಕೆಲಸಮಾಡುವವ, ಧೈರ್ಯ ಹೆಚ್ಚು ಮೊದಲೆ ಗುಂಪು ಕಟ್ಟಿಕೊಂಡು ಓಡಾಡುವವ ಸುತ್ತಮುತ್ತಲ ಹಳ್ಳಿಗಳಲ್ಲಿ ನಡೆಯುವುದನನ್ನೆಲ್ಲಾ ಕಲೆಹಾಕಿ ಆಗುಹೋಗುಗಳ ಲೆಕ್ಕಾಚಾರದಲ್ಲಿ ತನಗೆ ಲಾಭ ಎಷ್ಟು ಬರುತ್ತೆ ಎಂದು ಕಾದು ಕುಳಿತಿರುತ್ತಿದ್ದ. ಇತ್ತೀಚೆಗೆ ತನ್ನ ಜಮೀನಿನ ಒಂದು ಫರ್ಲಾಂಗ್  ದೂರದಲ್ಲಿ ಏನೋ ಗ್ಯಾಸ್ ಲೈನ್ ಹೋಗುತ್ತದೆ, ಕೆರೆ ಪಕ್ಕದಲ್ಲಿ ಯಾವುದೋ ಕಾರ್ಖಾನೆ ಬರುತ್ತದಂತೆ ಎಂದು ಊರಿಗೆ ಊರೇ ಪುಕಾರು ಎಬ್ಬಿಸಿದ್ದನ್ನು ಕೇಳಿದ್ದ ರಾಜ ಲೆಕ್ಕಾಚಾರಕ್ಕೆ ಗುಂಪು ಕಟ್ಟಿಕೊಂಡು ಕೂತ.

ಸರ್ಕಾರಿ ಸ್ವಾಮ್ಯದಲಿ ನಡೆಯುವ ಈ ಕಾರ್ಖಾನೆ ಮತ್ತು ಗ್ಯಾಸ್ ಲೈನ್ ಕಾಮಗಾರಿ ಇನ್ನೇನು ಮುಂದಿನ ವರ್ಷ ಶುರುವಾಗುತ್ತದೆ ಎಂದು ಸರ್ಕಾರ ಅಕ್ಕ-ಪಕ್ಕದ ಜಮೀನಿನವರನ್ನು ಕರೆದು ಸಭೆ ನಡೆಸಿದರು, 'ನಿಮ್ಮ ಜಮೀನಿಗೆ ಇಷ್ಟು ಹಣವನ್ನು ಕೊಡುವಂತೆ ಸರ್ಕಾರ ನಿಗದಿಪಡಿಸಿದೆ ಜೊತೆಗೆ ಪ್ರತಿ ಮನೆಗೂ ಒಬ್ಬರಿಗೆ ಈ ಕಾರ್ಖಾನೆಯಲ್ಲಿ ಕೆಲಸ ಕೊಡಲಾಗುವುದು ಎಂದು ಆಮಿಷವನ್ನು ಒಡ್ಡುತ್ತಾರೆ'. ಇದೆಲ್ಲಾ ವಿಷಯಗಳನ್ನು ತಿಳಿದ ರಾಜ ತನ್ನ ಅಪ್ಪನ ಆಸ್ತಿ ಕೆರೆ ದಡದಿಂದ ಇತ್ತಕಡೆ ಇದೆ, ಈಗ ಸರ್ಕಾರಕ್ಕೆ ಈ ಜಮೀನಿನ ಅವಶ್ಯಕತೆ ಇಲ್ಲ, ನಮ್ಮ ಜಮೀನು ಕೊಳ್ಳಲು ಯಾರೂ ಬರುವುದೂ ಇಲ್ಲ, ನಮ್ಮ ಕೈನಲ್ಲಿ ದುಡ್ಡು ಆಡುವುದೂ ಇಲ್ಲ, ನನ್ನ ಜೊತೆಗಿರುವವರಿಗೆಲ್ಲ ಒಳ್ಳೆ ದುಡ್ಡು ಬಂದು ಸೇರುತ್ತೆ, ಇನ್ನು ಮುಗಿಯಿತು ಎಲ್ಲ ಕಾರು ತೆಗೆದುಕೊಂಡು ಬಂಗಲೆ ಕಟ್ಟಿಕೊಳ್ಳುತ್ತಾರೆ. ನಾವು ನಮ್ಮ ಮನೆ ಅಷ್ಟೇ ಹಳೇಕಾಲದವರಂತೆ ಇರಬೇಕು ಎಂದು ಒಳಗೊಳಗೆ ಕೊರಗುತ್ತಿದ್ದ.

ರಾಜನ ಕೊರಗಿಗೆ ತಕ್ಕಂತೆ ಮತ್ತಾವುದೋ ಒಂದು ಗಾಳಿ ಸುದ್ದಿ ಇವನತ್ತ ಬಂದಿತು, ಕೆರೆಯ ಎರಡೂ ದಡದಲ್ಲಿ ಕಾರ್ಖಾನೆಗಳು ಹುಟ್ಟುಹಾಕುತ್ತಾರಂತೆ, ಒಂದು ಕಡೆ ಸರ್ಕಾರ ಜಮೀನನ್ನು ಸೇರಿಸಿಕೊಂಡರೆ ಮತ್ತೊಂದು ಕಡೆ ಖಾಸಗಿ ಕಂಪನಿಗಳು ತಮ್ಮದಾಗಿಸಿಕೊಳ್ಳಲು ನಿಂತಿದ್ದಾರೆ. ಇದೇ ಸರಿ ಸಮಯ ಎಂಬಂತೆ ರಾಜ ತನ್ನ ಅಕ್ಕ-ಪಕ್ಕದವರನ್ನ ಸೇರಿಸಿದ ಮುಂದೆ ಖಾಸಗಿ ಕಂಪನಿಯವರು ಸಭೆ ಕರೆದರೆ ನಾವು ಸರ್ಕಾರಿ ಗೊತ್ತುಪಡಿಸಿರುವ ಹಣಕ್ಕಿಂತ ಹೆಚ್ಚು ಕೇಳಬೇಕು ನಾವೆಲ್ಲ ಒಕ್ಕೊರಲಿನಿಂದ ಒಗ್ಗಟ್ಟಿನಿಂದ ಮುನ್ನುಗ್ಗಲು ಮುನ್ಸೂಚನೆ ಕೊಡಲು ನಿಂತ. ರಾಜನ ಕನಸಿನಂತೆ ಖಾಸಗಿ ಕಂಪನಿಗಳು ಬಂದರು, ಜನರಿಗೆ ಹಣದ ಆಮಿಷವನ್ನೂ ಕೊಟ್ಟು ಅಡ್ವಾನ್ಸ್ ಸಹ ಕೊಟ್ಟು ಹೊರಟೇ ಬಿಟ್ಟರು.

ರಾಜನ  ಈ ಘನಂದಾರಿ ಕೆಲಸ ಅಪ್ಪ ಅಮ್ಮನಿಗೆ ತಿಳಿದೇ ಇಲ್ಲ, ೨ ತಿಂಗಳ ನಂತರ ಖಾಸಗಿ ಕಂಪನಿಯವ ಬಂದು ಪತ್ರಗಳನ್ನು ಮಾಡಿ ಜಮೀನ್ದಾರರಿಂದ ಸಹಿ ಪಡೆದು ದುಡ್ಡು ಕೊಟ್ಟು ಹೊರಡುವ ಕಾಲ ಹತ್ತಿರ ಬಂದಿದೆ. ಅಪ್ಪ-ಅಮ್ಮನನ್ನು ಒಪ್ಪಿಸಲು ಅಮ್ಮನಿಗೆ ಬಂಗಲೆ, ಮೈತುಂಬ ಒಡವೆ ಆಮಿಷವನಿಟ್ಟ, ಅಪ್ಪನಿಗೆ 'ಇರುವ ೫ ಎಕರೆ ತೋಟದ ಹತ್ತಿರಕ್ಕೆ ಪಕ್ಕಕ್ಕೆ ಊರ ಗೌಡರು ಮಾರುವ ಅವರ ತೋಟ ತೆಗೆದುಕೊಂಡು ದೊಡ್ಡ ಎಸ್ಟೇಟ್ ಮಾಡೋಣ, ಬೇಲಿ-ಬಂಕ ಹಾಕಿ ಅಣ್ಣ ಬರುವಷ್ಟರಲ್ಲಿ ನಾವು ರೆಡಿಯಿಟ್ಟರೆ ಅವನೂ ಕೃಷಿ ಸಂಶೋಧನೆಗೆ ಅನುಕೂಲವಾಗುತ್ತೆ, ಕೆರೆಯಲ್ಲಿ ಈಗಾಗಲೇ ನೀರೇ ಇಲ್ಲ, ಇನ್ನು ಗದ್ದೆ ಮಾಡುವುದು ಕಷ್ಟ ಅದು-ಇದು ಕಾರಣಗಳನ್ನ ಕೊಟ್ಟು' ಅಪ್ಪನನ್ನು ಒಂದು ಹಂತಕ್ಕೆ ಒಪ್ಪಿಸಿದ್ದಾಯ್ತು ಜಮೀನು ಬರೆದುಕೊಟ್ಟಿದ್ದೂ ಆಯ್ತು. ಕೈಯಲ್ಲಿ ದುಡ್ಡು ಹಿಡಿದು ಮನೆಗೆ ಬಂದಾಗ ಅಗಾದ ಕನಸು ಅಪ್ಪನದು, ತೋಟ, ಹೊಲ ಮತ್ತಷ್ಟು ಬೆಳೆ ಬೆಳೆಯುವ ಕಲ್ಪನೆಯಲ್ಲಿ ಮುಳುಗಿದ್ದ.

ರಾಜ ಮನೆಯಲ್ಲಿ ಬಂದ ದುಡ್ಡಿನಿಂದ ಅಪ್ಪಾ!! 'ಅಮ್ಮ ಇಷ್ಟುದಿನ ಕಷ್ಟಪಟ್ಟಿದ್ದಾಳೆ ಅವಳಿಗೊಂದು ಕತ್ತಿಗೆ ಸರಿ ಮಾಡಿಸಿಕೊಡು ಎಂದಾ', ಆಯ್ತು ಎಂದು ಅಪ್ಪ ಚಿನ್ನದ ಸರ ತಂದ. ಮಗ ಅಪ್ಪಾ ತೋಟ ದೂರ ಇದೆ, ಮನೆಗೆ ತೋಟಕ್ಕೂ ಓಡಾಡೋಕ್ಕೆ ಕಷ್ಟ ಒಂದು ಬೈಕ್ ಕೊಡ್ಸು ಅಂದಾ, ಸರಿ ಬೈಕ್ ಬಂತು. ಅಮ್ಮ-ಮಗ ಇಬ್ಬರೂ ಹಿತ್ತಲ ಕಡೆ ಇರೋ ಗೋಡೆ ಬಿದ್ದು ಹೋಗ್ತಾ ಇದೆ ಸರಿಮಾಡ್ಸಿ, ಮಗ ಫಾರಿನ್ ಇಂದ ಬರೋಸ್ಟರಲ್ಲಿ ಹೊಸ ಮನೆ ಇದ್ದಂತೆ ಇರಲಿ ಅಂದಾ, ಆಯ್ತು ಅಂತಾ ಒಂದು ಮೂಲೆಯ ಗೋಡೆ ಹೋಗಿ ಪೂರ ಹೊಸ ಬಂಗಲೆಯೇ ಕಟ್ಟುವಂತಾಯ್ತು. ಇಷ್ಟೆಲ್ಲಾ ಮುಗಿಸಿ ಪುಣ್ಯೋಜನೆ ಮಾಡಿಸುವಷ್ಟರಲ್ಲಿ ಫಾರಿನ್ ಮಗನಿಗೆ ವಿಷಯವೂ ಮುಟ್ಟಲಿಲ್ಲ. ಇತ್ತ ಬರಿಗೈ ಮಾಡಿಕೊಂಡ ಅಪ್ಪ ಕಾಸು ಖಾಲಿ ಮಾಡಿ ತಲೆಯ ಮೇಲೆ ಕೈಹೊತ್ತು ಕುಳಿತ.
 ---------
ಅಪ್ಪ-ಅಮ್ಮನನ್ನು ಪುಸಲಾಯಿಸಿ ಜಮೀನು ಮಾರುವುದರಲ್ಲಿ ರಾಜನಿಗೂ ಲಾಭವಿತ್ತು, ಒಂದಕ್ಕೆ ಎರಡು ಹೇಳಿ ಹಣದ ಗಂಟು ಮಾಡಿಕೊಂಡಿದ್ದ, ಗದ್ದೆ ಕೆಲಸದಿಂದಲೂ ತಪ್ಪಿಸಿಕೊಂಡ, ಇನ್ನು ಹೊಸ ಜಮೀನು ಕೊಳ್ಳಲು ಕೈನಲ್ಲಿ ಕಾಸಿಲ್ಲದ ಅಪ್ಪನನ್ನು ಮತ್ತಾವ ದಾರಿ ತೋರಿಸುತ್ತಾನೆ? ಯಾವುದೂ ಇಲ್ಲ ಆರಾಮಾಗಿ ಉಂಡು-ತಿಂದು ಊರ ಮುಂದೆ ಬಡಾಯಿ ಮಾತುಗಳಲ್ಲೇ ಸಮಯ ಕಳೆಯುತ್ತಾನೆ.

ಚಂದ್ರಣ್ಣ ಈಗ ಊರು ಹೋದ ಮೇಲೆ ಬಾಗಿಲು ಹಾಕಿಕೊಂಡರಂತೆ ಹಾಗೆ ಆಗಿದೆ, ಮಗ ಬಣ್ಣ ಕಟ್ಟಿ ಕನಸು ತೋರಿಸಿದ್ದ ಈಗ ಎಲ್ಲ ಅರ್ಥವಾಗಿದೆ ಮಿಕ್ಕ ೧ಎಕರೆ ಜಮೀನಿಗೂ ಏನಾದರು ಸಂಚಕಾರ ಬರುವುದೇನೋ ಎಂದು ಹೆದರಿದ್ದಾನೆ. ಮಗನ ಪುಂಡಾಟಿಕೆ ಸಹಿ ಹಾಕಿದೆ, ಇನ್ನಾದರು ಎಚ್ಚರ ವಹಿಸಬೇಕೆಂದು ಬಾವಮೈದುನನ ಮನೆಗೆ ಓಡುತ್ತಾನೆ. ಬಾವಮೈದುನನಿಗೆ ಇದ್ದಬದ್ದ ವಿಷಯಗಳನ್ನೆಲ್ಲಾ ತಿಳಿಸಿ, ದುಡ್ಡು ಹೀಗಾಗಿದೆ ಮನೆ ಗೃಹಪ್ರವೇಶ ಮಾಡಬೇಕಿದೆ ಅಷ್ಟೇ, ಮಗ ಹೀಗಾದ ಹೇಗೆ ಹೇಳಿಕೊಳ್ಳುವುದೋ ತಿಳಿದಿಲ್ಲ. ಬಾವಮೈದುನನಿಗೆ ಸ್ವಲ್ಪ ಅತಿಯಾದ ಕೋಪವೇ ಬಂದಿತ್ತು..! ಇಷ್ಟೆಲ್ಲಾ ಆದರೂ ನೀವು ತಿಳಿದವರ ಹತ್ತಿರ ಹಂಚಿಕೊಂಡಿಲ್ಲ, ಇರುವ ಆಸ್ತಿ ಮಾರಿ ಏನು ಮಾಡಬೇಕೆಂದು ಯೋಚಿಸಿಲ್ಲ, ಅತ್ತ ಶಂಕ್ರ ನೋಡಿದರೆ ಏನೋ ದೊಡ್ಡ ಆಸೆಯಿಟ್ಟುಕೊಂಡು, ಸಂಶೋಧನೆ ಮಾಡಲು ಹೊರಟಿದ್ದಾನೆ. ಮೈಮೇಲೆ ಪ್ರಜ್ಞೆ ಇಲ್ಲದೆ ಇಂತಹ ಕೆಲಸ ಮಾಡುತ್ತೀರಿ ನೀವುಗಳು, ಬೆಂಗಳೂರಿಗೆ ಹತ್ತಿರವಿರುವ ಸುತ್ತಮುತ್ತಲ ಜನ ಇದೇ ಸ್ಥಿತಿ, ಅಪ್ಪಂದಿರ ಆಸ್ತಿ ಮಾರಿ ಜೀವನ ಮಾಡುವ ಗಂಡುಮಕ್ಕಳು, ಆಸ್ತಿ ಬರಲಿಲ್ಲವೆಂದು ಕೋರ್ಟು, ಕೇಸ್ ಹಾಕುವ ಹೆಣ್ಣುಮಕ್ಕಳು. ಎಲ್ಲರೂ ಗುದ್ದಾಡಿ ಸಾಯುವಂತ ಪರಿಸ್ಥಿತಿಗೆ ಬಂದಿದ್ದಾರೆ. ಇನ್ನೆಲ್ಲಿ ನಮ್ಮ ಶಂಕ್ರನ ಸಾವಯವ ಕೃಷಿಯ ಕನಸು ಎಲ್ಲ ಅಲ್ಲೇ ನೀರುಪಾಲು. ಶಂಕ್ರನ ಸೋದರ ಮಾವನಿಗೆ ಎಲ್ಲಿಲ್ಲದ ಸಂಕಟ, ಕೆರೆ ಪಕ್ಕದ ಜಮೀನು ಹೋಯ್ತು ಮುಂದೇನು ಎಂಬ ಯೋಚನೆ ಕಾಡುತ್ತಿದೆ.

ಅಪ್ಪ-ಅಮ್ಮ ಮಗನ ದರ್ಬಾರಿನಲ್ಲಿ ಜಮೀನಿನ ಹಂಗು ಕಳೆದುಕೊಳ್ಳುತ್ತಲಿದ್ದರೆ ಸುಮ್ಮನೆ ಕೂರುವುದು ಹೇಗೆ ಎಂದು ಸೋದರಮಾವ ಊರಿಗೆ ಹೊರಟು ನಿಂತ, ಶಂಕ್ರುನ ತಮ್ಮನಿಗೆ ಬುದ್ಧಿವಾದ ಹೇಳಿದ್ದೇ ತಡ ರಂಗಾಗಿ ಕುಳಿತುಬಿಟ್ಟ. ರಾಜನಿಗೆ ಹಣ ಐಷಾರಾಮಿ ಜೀವನ ಹೆಚ್ಚು ಆಪ್ತ, ಯಾರ ಬುದ್ಧಿಮಾತಿಗೂ ಕಿವಿಕೊಡುವವನಂತಲ್ಲ. ಮಾವ ನನಗೂ ಗೊತ್ತಿದೆ ವ್ಯವಹಾರ ಜ್ಞಾನವಿದೆ, "ಅಕ್ಕಪಕ್ಕ ಜಮೀನು ಮಾರಿದರೆ ನಾವೇನು ಹಂಗೆ ಇರೋಕ್ಕೆ ಆಗುತ್ತಾ? ನಾವು ಇವತ್ತಲ್ಲಾ ನಾಳೆ ಮಾರೋರೆ ಆದ್ರೆ ಸ್ವಲ್ಪ ಬೇಗ ಮಾರಿದ್ದೀವಿ ಅಷ್ಟೇ?" ಎಂದು ಮಾವನ ಎದುರು ಜೋರು ಮಾಡಿದ.

ಮಾವ ಏರು ಧ್ವನಿಯಲ್ಲಿ ನೀವುಗಳು 'ನಿಮ್ಮ ಆಸೆಯಂತೆ ಏನು ಬೇಕೋ ಹಾಗೆ ಮಾಡುವಂತಿಲ್ಲ, ಮನೆಯಲ್ಲಿ ಹಿರಿಯ ಮಗನಿದ್ದಾನೆ ಅವನಿಗೂ ಮಾತು ತಿಳಿಸಿಯೇ ನೀವುಗಳು ಮುಂದುವರಿಯಬೇಕು ಇಲ್ಲವಾದರೆ ತಪ್ಪಾಗುತ್ತದೆ ಎಂದು ಗದರಿದ'. ಈಗ ಶಂಕ್ರು ವಿದ್ಯಾಭ್ಯಾಸ ಮುಗಿಸಿದ ಮೇಲೆ ಅವನ ಯೋಜನೆಗಳನ್ನು ಎಲ್ಲಿ ಮಾಡುತ್ತಾನೆ. ಅಷ್ಟು ಆಸ್ತಿಯನ್ನು ಮಾರಿದ್ದೀರಲ್ಲ ಎಂದು ಬಡಬಡಿಸುತ್ತಾ ತಂಗಿಯನ್ನೂ ಬೈಯ್ಯುತ್ತಿದ್ದಾನೆ, 'ನಿನಗೆ ಒಡವೆ ಹೆಚ್ಚಾಯಿತೆ?  ಮಕ್ಕಳ ಮುಂದಿನ ಜೀವನಕ್ಕೆ ದಾರಿ ಬೇಡವ' ಎಂದು.

ಅಣ್ಣ 'ಈಗ ಇರುವ ಒಂದು ಎಕರೆ ಜಮೀನಿನಲ್ಲೇ ಏನು ಬೇಕೋ ಮಾಡಲಿ ಬಿಡಣ್ಣಾ, ಕಷ್ಟವೇನಿಲ್ಲ ಉದ್ಧಾರ ಆಗುವವರು ಎಲ್ಲಿದ್ದರೂ ಆಗುತ್ತಾರೆ 'ಎಂದು ತಂಗಿ ಅಣ್ಣನಿಗೆ ಹೇಳುತ್ತಾಳೆ. 

ಅಣ್ಣನಿಗೆ ಸಮಾಧಾನವಿಲ್ಲ ಬೇಸರದಲ್ಲೇ ಇರುವ ಒಂದು ಎಕರೆ ಜಮೀನು ಹುಷಾರಾಗಿ ಕಾಪಾಡುವಂತೆ ಹೇಳಿ ಹೊರಟ.

-------

ಇತ್ತ ನೆದರ್ಲಾಂಡ್ ನಲ್ಲಿ ಶಂಕ್ರು "ಎರೆಹುಳು ಮತ್ತು ಭೂಮಿ ಫಲವತ್ತತೆ" ಈ ವಿಷಯವಾಗಿ ವಿಚಾರ ಮಂಡನೆ ಮತ್ತು ಹಲವಾರು ರೂಪುರೇಷೆಗಳನ್ನು ಮಂಡಿಸುತ್ತಾನೆ. ನೆದರ್ಲ್ಯಾಂಡ್ ಸರ್ಕಾರ ಈತನ ವಿಚಾರ ಮಂಡನೆಗೆ ಮನಸೋತು ಇದೇ ಪ್ರಾಜೆಕ್ಟ್ ನ್ನು ಮುಂದುವರಿಸುವಂತೆ ಮತ್ತೆ  ಪ್ರಾಜೆಕ್ಟ್ ಹೆಡ್ ಆಗಿ ಆಯ್ಕೆ ಮಾಡುತ್ತಾರೆ. ಆದರೆ ಶಂಕ್ರನಿಗೆ ವಿದೇಶದಲ್ಲಿರುವ ಯಾವುದೇ ಆಸಕ್ತಿ ಅವನಲ್ಲಿರಲಿಲ್ಲ, ಕೆರೆಯ ಪಕ್ಕದ ಜಮೀನು ಅತಿ ಹೆಚ್ಚು ಫಲವತ್ತತೆ ಹೊಂದಿದೆ ಅದನ್ನೇ ನಾನು ಸರಿದಾರಿಯಲ್ಲಿ ಬಳಸಿಕೊಳ್ಳಬೇಕು ಎಂದು ಮಹದಾಸೆ ಹೊಂದಿದ್ದನು.

ತನ್ನೆಲ್ಲಾ ಸಂಶೋಧನೆಯ ಜವಾಬ್ದಾರಿಯನ್ನು ಮುಗಿಸಿಕೊಂಡು ಭಾರತಕ್ಕೆ ವಾಪಾಸಾದ ಶಂಕ್ರು, ನೇರ ಮಾವನ ಮನೆಗೆ ಬಂದು ಇಳಿಯುತ್ತಾನೆ. ಮಾವನಿಗೆ ಒಳಗೊಳಗೆ ಊರಿನ ಸಂಗತಿಯೇ ಕಾಡುತ್ತಿದೆ, ಜಮೀನಿಲ್ಲ ನೀನು ವಾಪಸ್ ನೆದರ್ಲ್ಯಾಂಡಿಗೆ ಹೋಗು ಅಲ್ಲೇ ಕೆಲಸ ಮಾಡು ಎಂದು ಹೇಳಲೇ? ಅಥವಾ ನಾನೇ ಸ್ವಲ್ಪ ಜಮೀನು ಖರೀದಿಸಿಕೊಡಲೇ ಎಂದು ಗೊಂದಲದಲ್ಲೇ ಮೌನವಾಗಿದ್ದ. ಇತ್ತ ಮಾವನ ಮೌನದಲ್ಲಿ ಏನೋ ಅಡಗಿದೆ ಎಂದು ಶಂಕ್ರು ಬಾಯಿ ಬಿಡಿಸಿದ.

"ಊರಲ್ಲಿ ಇದ್ದ ೫ ಎಕರೆ ಜಮೀನಿನ ಕನಸು ಇನ್ನು ಕನಸು ಅಷ್ಟೇ ಶಂಕ್ರು" ಈಗ ನಾನೊಂದು ಯೋಜನೆಗೆ ಬಂದಿದ್ದೇನೆ. ನಿನ್ನ ಊರಿನಲ್ಲೇ ೪ ಎಕರೆ ಜಮೀನು ನೋಡಿಕೊಂಡು ಬಂದಿರುವೆ, ಅದು ನಿನಗೆ ಕೊಡುವೆ ನಿನ್ನ ಆಸೆಯನ್ನೆಲ್ಲಾ ಆ ಮಣ್ಣಿಗೆ ಮೀಸಲಿಡು. ನಿನ್ನ ಕೈಕೂಡಿಬಂದ ನಂತರ ನನಗೆ ಹಣ ಹಿಂದಿರುಗಿಸು. ಹೀಗೆ ಮಾವ ಹೇಳುತ್ತಿದ್ದರೆ ಏಕೆ ಹೀಗೆ ಮಾವ ಹೇಳ್ತಾರಲ್ಲಾ ಎಂದು ಗಾಬರಿಯಾದ. ಒತ್ತಾಯದ ನಂತರ ಇದ್ದ ೫ ಎಕರೆ ಜಮೀನಿನ ವಿಷಯ ಹೊರಬಂತು, ಶಂಕ್ರು ಕೂತಲ್ಲೇ ಕುಸಿದುಹೋದ. ಬಹಳಷ್ಟು ಆಸೆಗಳನ್ನು ಹೊತ್ತು ಬಂದವನಿಗೆ ನಿರಾಸೆ ಮೂಡಿಸಿತ್ತು. ತಮ್ಮನ ಮೇಲಿನ ಅಭಿಮಾನ ಒಮ್ಮೆಲೆ ಕುಗ್ಗಿಹೋಯಿತು.

ಸಂಜೆ ೬ಗಂಟೆ ಊರಿಗೆ ಮಾವನ ಜೊತೆ ಬಂದು ಕಾರ್ ಇಳಿಯುತ್ತಿದ್ದಂತೆ ಅಮ್ಮ ಆರತಿ ಹಿಡಿದು ಬಂದಳು ಮಗನಿಗೆ ನಾಯಿನರಿ ಎಲ್ಲರ ಕಣ್ಣುಗಳ ದೃಷ್ಟಿ ತೆಗೆದು ಒಳಹೋಗಲು ಹೇಳುತ್ತಾಳೆ. ಅಮ್ಮನಿಗೆ ಮಗನಿಗೆ ಯಾರ ಕಣ್ಣು ಬೀಳದಿರಲಿ ಎಂಬ ಆಸೆ ಆದರೆ ವೃತ್ತಿಬದುಕನ್ನು ಬೆಳೆಸಲು ಇಡಬೇಕಿದ್ದ ಕಣ್ಣು ಮಾತ್ರ ಇಲ್ಲ. ಅಮ್ಮ ಇನ್ನೂ ಮಗುವಾಗೆ ನೋಡುತ್ತಿದ್ದಾಳೆ, ಅವಳಿಗೂ ಇಷ್ಟವಿರಲಿಲ್ಲ ವ್ಯವಸಾಯ, ಹೊಲ ಗದ್ದೆ ಎಲ್ಲಾ! ಮಗ ಆಫೀಸರ್ ಆಗಿ ಎಸಿ ರೂಮಿನಲ್ಲಿ ಕೂತು ಕೆಲಸಮಾಡುವ ಕನಸಿತ್ತು. ಈಗ ಬೇಸಾಯ ಕನಸು ಆಗುವುದಿದೆ ಎಂದು ಮನದಲ್ಲೇ ಬೇಸರಪಟ್ಟುಕೊಂಡು ಒಳನಡೆದ. ನಡುಮನೆಯಲ್ಲಿ ಅಪ್ಪ ಮುಖ ತಗ್ಗಿಸಿ ಕುಳಿತಿದ್ದಾರೆ. ಹಿಂದಿನ ಲವಲವಿಕೆಯಿಲ್ಲ, ಮುಖ ಕೊಟ್ಟು ಮಾತನಾಡುವ ಮನಸಿಲ್ಲ, ತನ್ನೊಳಗೆ ಯಾವುದೋ ನೋವು ಅಡಗಿದೆ ಎಂಬುದು ಎದ್ದು ಕಾಣುತ್ತಿದೆ.

ಅಪ್ಪ ವಿದ್ಯಾವಂತನಲ್ಲ ಸದಾ ಭೂಮಿಯನ್ನು ನಂಬಿದ್ದವನು, ಬೇರೆಯವರ ಮಾತಿಗೆ ಮರುಳಾಗಿ ಮೋಸಹೋದತಿಳಿವಳಿಕೆಯಿಲ್ಲ ಈಗ ಹೋದದ್ದು ಹೋಗಿದೆ ಮುಂದೇನು ಎಂದು ಯೋಚಿಸೋಣ ಎಂದು ಅಪ್ಪನಿಗೆ ಸಾಂತ್ವಾನಿಸಲು ಶಂಕ್ರು ಮುಂದಾಗುತ್ತಾನೆ. ತನ್ನೊಳಗಿನ ಬೇಸರವನ್ನು ಮರೆತು ಶಂಕ್ರು ಅಪ್ಪನಿಗೆ ಹೇಳುತ್ತಾನೆ "ಅಪ್ಪಾ ಆಗಿದ್ದು ಆಗಿದೆ, ಈಗ ಹಳೆಯದನ್ನೆ ಮಾತನಾಡಿದ್ರೆ ಏನು ಪ್ರಯೋಜನವಿಲ್ಲ, ನನ್ನಲ್ಲಿ ವಿದ್ಯೆಯಿದೆ ಅದನ್ನು ಉಪಯೋಗಿಸಿಕೊಂಡು ಮುಂದುವರೆಯೋಣ" ಎಂದು ಅಪ್ಪನನ್ನು ಸಮಾಧಾನಿಸುತ್ತಿದ್ದ. ಅಪ್ಪ ಅದಕ್ಕೆ ಮಗನ ಕೈಹಿಡಿದು "ನನ್ನ ಕ್ಷಮಿಸಿಬಿಡು ಶಂಕ್ರು, ನಿನ್ನ ತಮ್ಮ ನನಗೆ ಹೇಳಿದಾಗ ನನಗೆ ಬೇರೆ ಏನೋ ಯೋಜನೆಯಿತ್ತು, ಹೊಸದಾದ ಹೊಲ ಕೊಂಡುಕೊಳ್ಳುವ ಆಶಯದ ಮೇಲೆ ಮಾರಿದ್ದೆ, ಆದರೆ ಹೀಗೆ ಖರ್ಚಾಗುತ್ತದೆ ಎಂದು ಗೊತ್ತಿರಲಿಲ್ಲ, ಈಗ ಇರುವ ೧ ಎಕರೆ ಜಮೀನು ಇದೆಯಲ್ಲ ಅದನ್ನ ನೀನೇ ಇಟ್ಟುಕೊಂಡು ಅದು ಏನು ಮಾಡಬೇಕೋ ಮಾಡು" ಎಂದು ಹೇಳುತ್ತಾನೆ.

ಅಪ್ಪ ಮತ್ತು ಅಣ್ಣನ ಮಾತುಗಳನ್ನೇ ಕೇಳಿಸಿಕೊಳ್ಳುತ್ತಿದ್ದ ರಾಜ ಎಲ್ಲಿದ್ದನೋ ಎದುರು ಪ್ರತ್ಯಕ್ಷನಾದ. ಅಪ್ಪಾ ನನಗೆ ಆ ಜಮೀನಿನಲ್ಲಿ ಭಾಗ ಬರಬೇಕು ನಾನು ಎಲ್ಲಿ ಜೀವನ ಮಾಡಲಿ, ಅವನನ್ನು ಓದಿಸಿದ್ದೀರಿ, ನಾನು ಏನು ಮಾಡಲು ಸಾಧ್ಯ, ನನಗೆ ಜಮೀನು ಕೆಲಸ ಬಿಟ್ಟರೆ ಬೇರೆ ಏನೂ ಬರುವುದಿಲ್ಲ. ಎನ್ನುತ್ತಿದ್ದಂತೆ ಅಪ್ಪನಿಗೆ ಎಲ್ಲಿಲ್ಲದ ಕೋಪ, ರಪ್ಪನೆ ಎದ್ದು ಮಗನ ಕಪಾಳಕ್ಕೆ  ಬಾರಿಸುತ್ತಾನೆ. "ಎಲ್ಲಾ ನಿನ್ನಿಂದಲೇ ಆಗಿದ್ದು ಇಲ್ಲಸಲ್ಲದ್ದು ಹೇಳಿ ಆಸ್ತಿ ಮಾರಿಸಿದೆ. ಈಗ ಎಲ್ಲಿದೆ ನನ್ನಲ್ಲಿ ಆಸ್ತಿ ಇರುವುದನ್ನೆಲ್ಲ ಕಳೆದುಹೋಯ್ತಲ್ಲಾ? ಇತ್ತ ದುಡ್ಡು ಇಲ್ಲ ನಮ್ಮ ಭೂಮಿಯೂ ಇಲ್ಲ. ಕೈ ಕೈ ಹಿಸುಕಿಕೊಳ್ಳುತ್ತ ಮತ್ತೆ ಮೂಲೆಯಲ್ಲೇ ಕುಳಿತ ಅಪ್ಪಾ, ಇತ್ತ ಶಂಕ್ರು ಅಪ್ಪ, ತಮ್ಮ ಅಮ್ಮ ಎಲ್ಲರನ್ನು ನೋಡಿ ಒಂದೇ ಮಾತು ಹೇಳಿದ ನನಗೆ ಈ ಆಸ್ತಿ ಬೇಡ "ಒಳಗೊಳಗೆ ನೊಂದುಕೊಳ್ಳುತ್ತಿದ್ದಾನೆ, ದುಡಿಯುವ ಮನಸ್ಸುಗಳಿಗೆ ಪ್ರೋತ್ಸಾಹಿಸೋ ಜನರಿಲ್ಲ ಎಂದು, ನಾನು ಮಾವನ ಸಹಾಯದಿಂದ ಒಂದು ಜಮೀನು ತೆಗೆದುಕೊಂಡು ಮುಂದಿನ ಬದುಕು ಸಾಗಿಸುವೆ ಎಂದು."

ಕಡ್ಡಿ ಎರಡು ತುಂಡಾಗುವಂತೆ ಮಾತನಾಡಿದ ಶಂಕ್ರುವಿನ ನಿರ್ಧಾರ ಕೇಳಿ ಮಾವನಿಗೆ ಖುಷಿ, ಮನೆಯಲ್ಲಿ ಹೇಳಿದಾಗ ಏನೂ ಮಾತನಾಡದವ ಈಗ ಇದ್ದಕ್ಕಿದ್ದಂತೆ ಒಪ್ಪಿಕೊಂಡನಲ್ಲ ಸದ್ಯ ಎಂದುಕೊಂಡು, ಸರಿ ಶಂಕ್ರು "ನಿನಗೆ ಇದೇ ಊರಲ್ಲಿ ನೋಡಿರುವ ಜಮೀನು ಕೊಡಿಸುವೆ, ನಿನ್ನಲ್ಲಿ ಇದ್ದಷ್ಟು ಹಣ ಕೊಡು" ಎಂದು ಹೇಳಿ ಎಲ್ಲ ಜಮೀನು ನೋಡಿ ಬಂದರು, ೪ ಎಕರೆ ಜಮೀನಿಗೆ ಹಣ ಹೂಡಿದ್ದು ಸೋದರಮಾವ. ಶಂಕ್ರು ನೆದರ್ಲ್ಯಾಂಡ್ ನಲ್ಲಿ ಗಳಿಸಿದ ಹಣವನ್ನು ಕೊಟ್ಟು ಉಳಿದ ಹಣವನ್ನು ಸಾಲವಾಗಿ ಪಡೆದ. ಜಮೀನಿನಲ್ಲೇ ಪುಟ್ಟ ಮನೆ, ನೀರಿಗಾಗಿ ಬೋರ್ ವೆಲ್ ಕೂಡ ಬಂತು, ಇತ್ತ ತಂದೆ-ತಾಯಿಗೆ ನಿಮಗೆ ಬೇಕೆನಿಸಿದಾಗ ಬರಬಹುದು ನನ್ನೊಂದಿಗೆ ಇರಬಹುದು. ನಾನು ಇನ್ನು ಜಮೀನಿನಲ್ಲೇ ಉಳಿದುಕೊಳ್ಳುವೆ ಎಂದು ಅಪ್ಪ-ಅಮ್ಮ, ಅತ್ತೆ-ಮಾವ ಎಲ್ಲರಿಗೊ ನಮಸ್ಕರಿಸಿ ಹೊಸಮನೆ ಪ್ರವೇಶ ಮಾಡಿದ. ಮನಸ್ಸಲ್ಲೇ ಬೇಸರವಿತ್ತು, ನನ್ನನ್ನು ಕೇಳದೆಯೇ ಆಸ್ತಿ ಮಾರಿದ್ದರು, ಮನೆಯಲ್ಲಿ ನನಗೂ ಒಂದು ಸ್ಥಾನವಿದೆ ಎಂಬ ಭಾವವೂ ಇಲ್ಲದೆ ವಿದೇಶದಿಂದ ಬರುವ ಮೊದಲೇ ಮನೆಗೊಂದಿಷ್ಟು ಹೂರಣ ಮಾಡಿ, ಆಸ್ತಿ ಮಾರಿದ ದುಡ್ಡೆಲ್ಲ ಕಳೆದುಬಿಟ್ಟರು. ನಾ ಓದುವಾಗ ಬೇಸಾಯಕ್ಕೆಂದೇ ಜೀವವಿಟ್ಟುಕೊಂಡು ಬಂದೆ ಆದರೆ ಈಗ ಹೀಗಾಗಿದೆ ಎಂದುಕೊಂಡು ಶಂಕ್ರು ತನ್ನ ಹೊಸ ಜೀವನಕ್ಕೆ ಮುಂದಾದ. ಇಲ್ಲಿ ಮನೆಯವರ ಮೇಲಿನ ಕೋಪ ಏನಾದರೂ ಸಾಧಿಸಿ ತೋರಿಸಬೇಕು ಎಂಬ ಹಠವೂ ಹೆಚ್ಚಿತ್ತು.

೪ ಎಕರೆಗೆ ಸುತ್ತಲೂ ಬೇಲಿ ಕಟ್ಟುವ ಕೆಲಸ, ಬೇಲಿಯ ಮಗ್ಗುಲಿನಲ್ಲೇ ಹೊನ್ನೆ, ಟೀಕ್ ಮರಗಳನ್ನು ನೆಡುತ್ತ ಬಂದ. ಜೇಬಿನಲಿದ್ದ ಹಣ ಕೈಗೆಟುಕದಷ್ಟಿತ್ತು, ಕೆಲಸದವರಿಗೆ ಕಾಸು ಕೊಡುವಷ್ಟು ಶಕ್ತನಾಗಿರಲಿಲ್ಲ. ಮಾವನನ್ನು ಮತ್ತೆ ಹಣ ಕೇಳುವ ಆಸೆಯೂ ಇರಲಿಲ್ಲ. ಇತ್ತ ಮಗನ ಕಷ್ಟ ನೋಡಿ ಅಪ್ಪನೂ ಕೈಜೋಡಿಸಿದ, ಅಮ್ಮನಿಗೆ ಬೇಸಾಯ ಸ್ವಲ್ಪ ಅಷ್ಟಕ್ಕೆ ಅಷ್ಟೇ ಆದರೂ ಮಗನ ಕೆಲಸಕ್ಕೆ ಮನಸೋತು ತಾನೂ ಕೈಜೋಡಿಸಿದಳು. ಎರಡು ಕೈ ಸೇರಿ ಚಪ್ಪಾಳೆ ಎಂಬಂತೆ ನೋಡ ನೋಡುತ್ತ ಬರಡು ಭೂಮಿ ಹಸಿರಾಯಿತು. ಮನೆ ಪಕ್ಕದಲ್ಲಿ ಕೊಟ್ಟಿಗೆ ಅಲ್ಲೊಂದೆರಡು ನಾಟಿ ಹಸು, ಅದರಿಂದ ಬಂದ ಹಾಲು, ಮೊಸರು ಬೆಣ್ಣೆ ಮನೆಗೆ ಆಗಿ ಮಿಕ್ಕಿದ್ದು ಮಾರಾಟವಾಗುತ್ತಿತ್ತು. ಸಾವಯವ ಕೃಷಿಗಾಗಿಯೇ ಒತ್ತು ಕೊಡುತ್ತ ಮನೆಯಲ್ಲಿ ಹಸು-ಕರು, ಕೋಳಿ, ಮೊಲ, ನಾಯಿ, ಬೆಕ್ಕು ಎಲ್ಲಾ ತರಹನಾದ ಸಾಕುಪ್ರಾಣಿಗಳನ್ನು ಸಾಕಲು ಶುರುವಾದ,

ಹಸುವಿನಿಂದ ಬಂದ ಸಗಣಿ ಗೊಬ್ಬರವಾಯಿತು, ಭೂಮಿಯಲ್ಲಿ  ಎರೆಹುಳುವಿನಿಂದ ಗೊಬ್ಬರ ತಯಾರಿಸುತ್ತ ಸಾವಯವ ಕೃಷಿಗೆ ಹೆಚ್ಚು ಒತ್ತು ಕೊಟ್ಟನು. ಒಂದೆಡೆ ಗದ್ದೆಯಲ್ಲಿ ಅಕ್ಕಿ ಬೆಳೆದ, ಮತ್ತೊಂದೆಡೆ ರಾಗಿ, ೨ ಎಕರೆಯಲ್ಲಿ ಸಪೋಟ, ದಾಳಿಂಬೆ, ಹಲಸು, ಮಾವು, ತರಕಾರಿ ಹೀಗೆ ಬೆಳೆಸಿದ ಗಿಡಗಳು ಮರವಾಗಿ ಹೆಚ್ಚು ಫಲವನ್ನು ನೀಡಲು ಆರಂಭವಾಯಿತು.

ಬೆಳಗೆದ್ದರೆ ಜಮೀನಿನಲ್ಲಿ ಹಣ್ಣಾಗಿ ಉದುರಿದ ಎಲೆಗಳು, ಕೊಳೆತ ಹಣ್ಣು ತರಕಾರಿ, ಸಗಣಿ ಎಲ್ಲವನ್ನು ಶೇಕರಿಸಿ, ಮಿಶ್ರಣ ಮಾಡಿ ಗೊಬ್ಬರ ತಯಾರಿಸುವುದು, ಇದೇ ಒಂದು ಕಾಯಕವನ್ನು ದಿನವೂ ತಪ್ಪದೇ ಮಾಡುತ್ತಿದ್ದ ಶಂಕರನಿಗೆ ಅದೇ ಒಂದು ದೊಡ್ಡ ವ್ಯವಹಾರವಾಗುತ್ತದೆಂದು ತಿಳಿದಿರಲಿಲ್ಲ. ಶೇಕರಿಸಿಟ್ಟ ಗೊಬ್ಬರವನ್ನು ಅಕ್ಕ-ಪಕ್ಕದ ಜಮೀನಿನವರು ಕೊಂಡುಕೊಳ್ಳುತ್ತಿದ್ದರು. ದಿನಕ್ರಮೇಣ ಗೊಬ್ಬರ ಕಾರ್ಖಾನೆಯಾಗಿಯೇ ತಿರುಗಿಕೊಂಡಿತು. ಅತ್ಯಂತ ಸರಳಜೀವಿಯಾದ ಶಂಕ್ರನಿಗೆ ಜೀವನೋಪಾಯಕ್ಕೆ ಯಾವುದೇ ತೊಂದರೆಯಾಗಲಿಲ್ಲ. 

ಶಂಕ್ರನ ಸಾವಯವ ಕೃಷಿಯ ಕೆಲಸ ಅಷ್ಟರಲ್ಲಾಗಲೇ ಊರು ದಾಟಿ ಬೆಂಗಳೂರಿನ ಸುತ್ತಮುತ್ತಲು ತಲುಪಿತ್ತು. ವ್ಯವಸಾಯ ತಂತ್ರಜ್ಞನ ಹೆಸರಿನಲ್ಲಿ ಸರ್ಕಾರಿಸ್ವಾಮ್ಯದಲ್ಲಿ ನಡೆಯುವ ಕಂಪನಿಗಳಿಗೆ ಆಹ್ವಾನ, ಅಲ್ಲಿ ವಿಚಾರ ವಿನಿಮಯ, ಕಾಲೇಜುಗಳಲ್ಲಿ ಪ್ರವಚನ, ಟಿವಿ ವಾಹಿನಿಗಳಲ್ಲಿ ಸಂದರ್ಶನ ಹೀಗೆ ದಿನವಿಡಿ ಬ್ಯುಸಿಯಾಗಿರುತ್ತಿದ್ದ ಶಂಕ್ರ. ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ. ಭಾರತ ಸರ್ಕಾರ ಇವನ ಕೆಲಸಕ್ಕೆ ಪ್ರಶಂಶಿಸಿ "ಅತ್ಯುತ್ತಮ ಬೇಸಾಯಗಾರ ಪ್ರಶಸ್ತಿ" ನೀಡಿತು, ರಾಜ್ಯ ಸರ್ಕಾರಕ್ಕೆ ಸಲಹೆಗಾರನಾಗಿಯೂ ಆಯ್ಕೆಯಾದ. ಇತ್ತ ಮಾವನಲ್ಲಿ ಇದ್ದ ಸಾಲಗಳನ್ನೂ ತೀರಿಸಿ ಋಣಮುಕ್ತನಾದ. ನೋಡ ನೋಡುತ್ತ ಪ್ರಪಂಚವೇ ಗುರುತಿಸುವಂತಾದನು.

ಶಂಕ್ರನ ಅಪ್ಪ-ಅಮ್ಮ ಚಿಕ್ಕ ಮಗನೊಂದಿಗಿನ ಸಂಬಂಧವನ್ನು ಪೂರ್ಣ ಬಿಡಿಸಿಕೊಂಡು ಬಂದಿದ್ದರು, ಅತ್ತ ಅವನ ಯಾವ ವಿಷಯಗಳೂ ಇವರುಗಳನ್ನ ಮುಟ್ಟುತ್ತಲೇ ಇರಲಿಲ್ಲ. 

ವಿದ್ಯೆ ನೈವೇದ್ಯ, ನಡೆ-ನುಡಿಯಲ್ಲೂ ಸಭ್ಯತೆಯನ್ನು ಕಳೆದುಕೊಂಡು, ಊರ ತುಂಬಾ ಪೋಲಿ ಹುಡುಗರ ಸಂ ಕಟ್ಟಿಕೊಂಡು ಓಡಾಡುತ್ತಲಿದ್ದನು. ಸಂಬಂಧಗಳು ಮೌನವಾಗಿವೆ ತಾವೇ ಮಾಡಿಕೊಂಡ ಬೇಲಿಗಳಿಂದ.  
-------

ಶಂಕ್ರನ ಅಮ್ಮ ತೋಟದ ಬೇಲಿ ನುಗ್ಗಿ  ಬಂದಿದ್ದ ಹಸುಗಳನ್ನು ಓಡಿಸಲು ಹೋಗುತ್ತಾ, ಅಲ್ಲೇ ಪಕ್ಕದ ಜಮೀನಿನಲ್ಲಿ ಎದ್ದಿದ್ದ ಕಂಪನಿಯ ಬಾಗಿಲು ಕಾಯುವವನ್ನು ಗದರುತ್ತಾಳೆ. "ಏನಯ್ಯಾ ಕಣ್ಣು ಕಾಣ್ಸೋಲ್ವಾ  ಈ ಹಸುಗಳು ಬೇಲಿ ನುಗ್ಗಿ ಬರುವಾಗ ಸ್ವಲ್ಪ  ಗದರಿ ಕಳ್ಸೋದಲ್ವಾ , ನಾವು ಕಷ್ಟಪಟ್ಟು ಬೆಳೆದಿರುವುದನ್ನೆಲ್ಲ  ನಾಶ ಮಾಡಿಬಿಟ್ಟವು. ನಿಮಗೇನು ಗೊತ್ತಾಗುತ್ತೆ ತಿಂಗಳ ತಿಂಗಳ ಸಂಬಳ ಎಣಿಸಿಕೊಳ್ಳೋ ಜನ, ಬಡ ರೈತರ ಕಷ್ಟ ಎಲ್ಲಿ ಗೊತ್ತಾಗ್ಬೇಕು ಹೇಳು ಮತ್ತೆ...! ನಾವು ಅಚ್ಚುಕಟ್ಟಾಗಿ ಎಲ್ಲರೂ ಭೂಮ್ ತಾಯಿ ಕೆಲಸ ಮಾಡೋ ಜನರಿಂದ ನಿಮ್ಮ ಕಂಪನಿಯವರು ನಮ್ಮ ಆಸ್ತಿಯನ್ನೆಲ್ಲಾ ಕಿತ್ತುಕೊಂಡರು, ಈಗ ಇರೋ ಭೂಮಿಗಳಿಗೂ ಉಳಿಗಾಲವಿದಂತೆ ಮಾಡೋ ಮಸಲತ್ತು. ಯಾವೋ ಹಸುಗಳನ್ನ ನಮ್ಮ ಹೊಲಕ್ಕೆ ಬಿಟ್ಟು ಮೇಯಿಸಿ ಎಡವಟ್ಟು ಮಾಡೋದು, ರಾತ್ರಿ ಹೊತ್ತು ನಿಮ್ಮ ಫ್ಯಾಕ್ಟರಿ ಜನ ಬಂದು ಹಲಸು, ಮಾವು, ತರಕಾರಿಗಳನ್ನ ಕದ್ದುಕೊಂಡು ಹೋಗೋದು. ಇದೆಲ್ಲಾ ನೀವುಗಳೇ ಮಾಡ್ತಾ ಇರೋ ಮಸಲತ್ತು" ಒಂದೇ ಸಮನೇ ಲಕ್ಷ್ಮಮ್ಮ ಬಡಬಡಾಯಿಸುತ್ತ ಜಮೀನಿನ  ಬೇಲಿ ದಾಟಿ ಹೊರಬಂದು  ಫ್ಯಾಕ್ಟರಿ ವಾಚ್ಮನ್  ಹತ್ತಿರ ಹೋಗುತ್ತಿದ್ದಂತೆ, ತನ್ನ ಮುಖವನ್ನ ವಾಚ್ಮನ್ ಅತ್ತ ತಿರುಗಿಸಿಕೊಳ್ಳುತ್ತಾನೆ.   

"ಮುಖ ಯಾಕ್ ಆ ಕಡೆ ಮಾಡ್ತೀಯಾ ಮಾತಾಡು ಈ ಕಡೆ" ಎನ್ನುತ್ತಾ ಹತ್ತಿರಕ್ಕೆ ಹೋದ ಲಕ್ಷ್ಮಮ್ಮನಿಗೆ ಮಾತೆ ಹೊರಡುತ್ತಿಲ್ಲ. ತಲೇ ತಗ್ಗಿಸಿ  ನಿಂತ್ತಿದ್ದ ವಾಚ್ಮನ್ನನ್ನೇ ದಿಟ್ಟಿಸಿ ನೋಡುತ್ತಾ "ಈ ಖಾಕಿದಾರಿ ನನ್ನ  ಕಿರಿಮಗ ಇದಾಂಗೆ ಇದ್ದಾನಲ್ಲಾ" ಹೇ ಅವನಲ್ಲ ಅವನ್ಯಾಕೆ ಇಲ್ಲಿ ಬರ್ತಾನೆ?" ಎಂದುಕೊಂಡರೂ,  ವಾಸ್ತ ವ   ಮಾತ್ರ ಬೇರಿಯಾಗಿತ್ತು. "ಆಸ್ತಿ ಮಾರಿದ್ದರ ಫಲ ಅದೇ ಫಾಕ್ಟರಿಯಲ್ಲಿ ಗುಲಾಮನ ಕೆಲಸ, ಜಮೀನ್ದಾರ ಈಗ ಗುಲಾಮನಾಗಿದ್ದ"  ಹಿಂದಿನದನ್ನೆಲ್ಲಾ ನೆನೆದು ಲಕ್ಷ್ಮಮ್ಮನಿಗೆ  ಚಿಕ್ಕ ಮಗನ ಮೇಲೆ ಕೋಪ ಉಕ್ಕರಿಸುತ್ತಿತ್ತು. ಮಸುಕಾಗಿ  ಕಾಣುವ ಕಣ್ಣುಗಳು ಮತ್ತಷ್ಟು ಕಂಬನಿಯಿಂದ ಮಬ್ಬಾಗಿಬಿಟ್ಟಿತ್ತು, ತೇವದ ರೆಪ್ಪೆಗಳನ್ನು ಒರೆಸುತ್ತಾ ಮೌನಕ್ಕೆ ಶರಣಾಗಿ ಮನೆಯತ್ತ  ಹೊರಟಳು.

ಇತ್ತ ರಾಜ ತನ್ನ  ತಪ್ಪುಗಳನ್ನ ಮೆಲುಕು ಹಾಕುತ್ತ ನಿರಾಶಾಭಾವದಲ್ಲಿ "ಇದ್ದ ಒಂದು ಎಕರೆ ಜಮೀನನ್ನು ಯಾವುದೋ ಕಂಪನಿಗೆ ಮಾರಿ ತನ್ನದೇ ಜಮೀನಿನಲ್ಲಿ ಕಟ್ಟಿದ ಫ್ಯಾಕ್ಟರಿಯಲ್ಲಿ ವಾಚ್ಮನ್ ಕೆಲಸ ಕೊಟ್ಟರು, ದಿನ ಬಾಗಿಲು ಕಾಯುತ್ತಾ ಅಯ್ಯೋ ನನ್ನದೇ ಜಾಮೀನು ಈಗ ಈ ಜನ ಬಂಗಾರ ಮಾಡಿಕೊಂಡು ದುಡಿತಾವ್ರೆ, ಲಕ್ಷ-ಕೋಟಿ ಸಂಪಾದನೆ ಮಾಡ್ತಾವ್ರೆ ಭೂಮಿತಾಯಿಯೂ ಇಲ್ಲ, ತ್ತ ನನ್ನದೇ ಸಂಬಂಧಗಳೂ ನನ್ನೊಂದಿಗೆ ಇಲ್ಲ. ಅಣ್ಣನ ಹತ್ತಿರ ಹೋಗಿ ಅವನಿಗೂ ಕೈಜೋಡಿಸೋ, ಮೈಮುರಿದೋ ಕೆಲಸ ಮಾಡಿದ್ದರೆ?! ನಾನು ಹೆಸರಿಗೆ ತಕ್ಕಂತೆ ರಾಜನಾಗೆ ಇರುತ್ತಿದ್ದೆ. ನನ್ನದೇ ಅಹಮ್ಮಿನ ಕೋಟೆಯಲ್ಲಿ ಹಣದ ಆಮಿಷಕ್ಕೆ ಬಲಿಯಾದೆ ಬೇಸಾಯವೂ ಇಲ್ಲ ಭೂಮಿಯೂ ಇಲ್ಲದಂತೆ ಮಾಡಿಕೊಂಡೆ ಭೂಮಿ ತಾಯಿ ಎಂದಿಗೂ ಮೋಸ ಮಾಡುವುದಿಲ್ಲ ಎಂಬುದಕ್ಕೆ ನನ್ನ ಅಣ್ಣನೇ ಸಾಕ್ಷಿ” ಎಂದು ಈಗ ರಾಜ ಪಶ್ಚಾತಾಪದ ಪರಮಾವಧಿಯಲ್ಲಿದ್ದಾನೆ.   

"ಮಣ್ಣಿನಹಾದಿ ಬಳಸಿದಷ್ಟು ಭಾವನೆಗಳನ್ನ ತೀರಿಸುತ್ತದೆ, ಬವಣೆಗಳನ್ನ ನೀಗಿಸುತ್ತದೆ.ಆದರೆ ಹಾದಿ ಮಾತ್ರ ಹಸನಾದ ಆಯ್ಕೆಗಾಗಬೇಕು
-ಅಂತಿಮ-

Monday, August 1, 2016

ಮಣ್ಣಿನ ಹಾದಿ -೩

ಮಣ್ಣಿನ ಹಾದಿ

ಕಥೆಯ ಭಾಗ 1 & 2 ಈ ಲಿಂಗ್ ಗೆ ಭೇಟಿ ಕೊಡಿ : 

ಮುಂದುವರಿದ 3ನೇ ಭಾಗ...
ಅಪ್ಪನ ಬದಲಾವಣೆಯಲ್ಲಿ ಶಂಕ್ರ ಹೋಳಿಗೆ ಊಟ ಮಾಡುತ್ತಿದ್ದಂತೆ ಪರೀಕ್ಷೆಗಳು ಮುಗಿದವು, ರಜೆಯಲ್ಲಿ ಅಪ್ಪನೊಂದಿಗೆ ಜಮೀನಿನ ಕೆಲಸ, ಗದ್ದೆ ಕಳೆ, ದನ-ಕರುಗಳ ಕೆಲಸ ಹೀಗೆ ಮುಂದುವರಿಯುತ್ತಿದೆ.

ಲಕ್ಷ್ಮಮ್ಮನ ಅಣ್ಣ ಬೆಂಗಳೂರಿಂದ ಬಂದಿದ್ದಾನೆ ಮನೆಯಲ್ಲಿ ಹಬ್ಬದ ಅಡುಗೆ ನಡೆಯುತ್ತಿದೆ. “ನೋಡು ಲಕ್ಷ್ಮು..!! ಶಂಕ್ರುನ ಸ್ವಲ್ಪ ದಿನ ಕಳ್ಸು ಈಗ ರಜೆ ಅಯ್ತೆ ಮನೆನಲ್ಲಿ ಮಕ್ಕಳ ಜೊತೆ ಇದ್ದು ಬರ್ಲಿಎಂದು ಬಲವಂತವಾಗಿ ಬೆಂಗಳೂರಿಗೆ ಹೊರಡಿಸಿಕೊಂಡು ನಡೆದೇ ಬಿಡುತ್ತಾನೆಚಂದ್ರಣ್ಣ ಬಾವಮೈದುನನ ಮಾತಿಗೆ ಇಲ್ಲ ಎನ್ನದೇ ಮೌನವಹಿಸಿದ್ದ, ಲಕ್ಷ್ಮಮ್ಮಳಿಗೆ ಆಶ್ಚರ್ಯ ಹೀಗೆ ದಿಡೀರನೇ ಬಂದು ಕರೆದುಕೊಂಡುಹೋಗಿದ್ದು ಏಕೆ ಎಂದು ತನ್ನೊಳಗಿನ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಿದ್ದಳು.

ಇತ್ತ ಶಂಕ್ರ ಬೆಂಗಳೂರಿಗೆ ಬಂದವನು ಸೀದ ಯಾವುದೋ ಪಾಠ ಮಾಡುವ ಮಾಸ್ತರರ ಎದುರು ನಿಲ್ಲಿಸಿದರು, “ನೋಡಿ ಇವನೇ ನಮ್ಮ ಹುಡುಗ, ಇನ್ನು ಒಂದು ತಿಂಗಳೊಳಗೆ ಸಿ.ಯಿ.ಟಿ ಬರುತ್ತೆ ಅದಕ್ಕೆ ಉತ್ತರಿಸುವಂತೆ ತಯಾರು ಮಾಡಿ, ದಿನ-ರಾತ್ರಿ ಎನ್ನದೆ ಇವನಿಗೆ ಟ್ಯೂಷನ್ ಮಾಡಿಮಾಸ್ಟರಿಗೆ ಹೇಳಿದ.  “ಶಂಕ್ರು ಸಂಜೆ ಬರ್ತೀನಿ ನಿನ್ನ ವಾಪಸ್ ಕರ್ಕೊಂಡು ಹೋಗೋಕ್ಕೆ" ಎಂದು ಮಾವ ಶಂಕರನಿಗೆ ಹೇಳಿ ಹೊರಟೇ ಬಿಟ್ಟ.

"ಹಾ..!! ಶಂಕ್ರು ನೋಡು, ನನ್ನ ಹೆಸರು ಶೇಖರ್ ನಿನಗೆ ನಾ ಮಾಡುವ ಪಾಠವನ್ನೆಲ್ಲ ಗಮನವಿಟ್ಟು ಓದು. ನಿನ್ನ ಮೇಲೆ ನಿನ್ನ ಮಾವನಿಗೆ ಅಪಾರ ಗೌರವ, ವ್ಯವಸ್ಥೆ ಸರಿ ಇಲ್ಲ, ಹಳ್ಳಿಯಲ್ಲಿ ಓದಲು ಮುಂದೆ ಕಷ್ಟ ಎಂದು ಇಲ್ಲಿಗೆ ಕರೆತಂದಿದ್ದಾರೆ. ಸಿ.ಯಿ.ಟಿ ರೂಪುರೇಷೆ ಎಲ್ಲವನ್ನು ನಿನಗೆ ತಿಳಿಸಿ ಅದಕ್ಕೆ ತಯಾರಾಗುವ ಪರಿ ಎಲ್ಲ ವಿವರಿಸುವೆ. ನೀನು ನಿನ್ನ ಮಾವ ಹೇಳಿದಂತೆ ಕೇಳು, ನೀನು ಬಹಳ ಬುದ್ಧಿವಂತಾ ಎಂದು ನಿನ್ನ ಮಾವ ಹೇಳಿದ್ದಾರೆ" ಹೀಗೆಂದು ಟ್ಯೂಷನ್ ಮಾಸ್ಟರ್ ಹೇಳಿದರು.

ಶೇಖರ್ ಸಿ.ಯಿ.ಟಿ ಮಾಹಿತಿ ನೀಡಿ ಶಂಕ್ರನನ್ನು ತಯಾರಿ ಮಾಡಿದರು, ಜೊತೆಗೆ ಪರೀಕ್ಷೆಯೂ ಮುಗಿಸಿದ. ಚೆನ್ನಾಗಿ ಪರೀಕ್ಷೆ ಬರೆದಿರುವೆ ಎಂಬ ಖುಷಿಯೂ ಇತ್ತು, ಮಾವನಿಗೆ ಯಾಕೆ ಡಾಕ್ಟರ್ ಮಾಡಿಸುವ ಆಸೆ. ಅವರಿಗೆ ಬೇಸರ ಬೇಡವೆಂದು ಈ ಪರೀಕ್ಷೆ ಬರೆದಿದ್ದೇನೆ. ಆದರೆ ಅಪ್ಪನ ಆಸೆ ಜೊತೆಗೆ ನನ್ನ ಆಸೆಯನ್ನೂ ಸಹ ನೆರವೇರಿಸಿಕೊಳ್ಳಬೇಕಿದೆ. ಸದ್ಯಕ್ಕೆ ಫಲಿತಾಂಶದವರೆಗೂ ಕಾಯುವ... ಈಗ ಊರ ಕಡೆ ಹೋಗಿ ಬರೋಣವೆಂದು ಶಂಕ್ರ ಹೊರಟ.

ಶೇಖರ್ ಸಿ.ಯಿ.ಟಿ ಮಾಹಿತಿ ನೀಡಿ ಶಂಕ್ರನನ್ನು ತಯಾರಿ ಮಾಡಿದರು ಜೊತೆಗೆ ಪರೀಕ್ಷೆಯೂ ಮುಗಿಸಿದ. ಚೆನ್ನಾಗಿ ಪರೀಕ್ಷೆ ಬರೆದಿರುವೆ ಎಂಬ ಖುಷಿಯೂ ಇತ್ತು, ಮಾವನಿಗೆ ಯಾಕೆ ಡಾಕ್ಟರ್ ಮಾಡಿಸುವ ಆಸೆ. ಅವರಿಗೆ ಬೇಸರ ಬೇಡವೆಂದು ಈ ಪರೀಕ್ಷೆ ಬರೆದಿದ್ದೇನೆ. ಆದರೆ ಅಪ್ಪನ ಆಸೆ ಜೊತೆಗೆ ನನ್ನ ಆಸೆಯನ್ನೂ ಸಹ ನೆರವೇರಿಸಿಕೊಳ್ಳಬೇಕಿದೆ. ಸದ್ಯಕ್ಕೆ ಫಲಿತಾಂಶದವರೆಗೂ ಕಾಯುವ... ಈಗ ಊರ ಕಡೆ ಹೋಗಿ ಬರೋಣವೆಂದು ಶಂಕ್ರ ಹೊರಟ.

ಬೆಳ್ಳಂ ಬೆಳಗ್ಗೆ ಶಾಲೆಯ ಪ್ರಿನ್ಸಿಪಾಲರು "ಶಂಕ್ರು, ಶಂಕ್ರು..." ಎಂದು ಜೋರಾಗಿ  ಕೂಗುತ್ತ ಮನೆ ಬಾಗಿಲು ತಟ್ಟುತ್ತಿದ್ದಾರೆ. ಒಳಗಡೆಯಿಂದ ಅಪ್ಪಾ, ಅಮ್ಮ ಶಂಕ್ರು ಓಡಿ ಬಂದು "ಯಾಕೆ ಏನಾಯ್ತು?" ಎಂದು ಎಲ್ಲರೂ ಗಾಬರಿಯಲ್ಲಿ ಪ್ರಿನ್ಸಿಪಾಲರ ಮುಖ ನೋಡುತ್ತಿದ್ದಾರೆ. "ಸ್ವಲ್ಪ ಕುಡಿಯೋಕ್ಕೆ ನೀರು ಕೊಡಮ್ಮ, ಈ ವಿಷಯಕ್ಕೆ ನೀನು ಪಾಯಸದೂಟ ಮಾಡಿ ಹಬ್ಬ ಮಾಡ್ಬೇಕು ಗೊತ್ತಾ..." ಎಂದು ಸಂತಸದಿಂದ "ಶಂಕ್ರು ನಮ್ಮ ತಾಲೋಕಿಗೆ ಅಲ್ಲಾ ರಾಜ್ಯಕ್ಕೆ ೪ನೇಯವನು ಗೊತ್ತಾ. ಅಷ್ಟು ಅಂಕಗಳನ್ನ ಗಳಿಸಿ ನಮಗೆ ನಮ್ಮ ಶಾಲೆಗೆ ಹೆಸರು ತಂದಿದ್ದಾನೆ". ಎಂದು ಪ್ರಿನ್ಸಿಪಾಲರು ಶಿಷ್ಯನ ಬಗ್ಗೆ ಖುಷಿಪಟ್ಟರು

ಅಪ್ಪಾ, ಅಮ್ಮನ ಮುಖ ಅರಳುತ್ತಲಿದೆ. ಮಗನನ್ನು ಬಾಚಿ ತಬ್ಬಿದ ಅಪ್ಪ ಹೆಮ್ಮೆಯ ನಗೆ ಬೀರುತ್ತಿದ್ದಾನೆ.

ಇದೇ ಖುಷಿ ಊರ ತುಂಬ ಹರಡಿತ್ತು. ಪಟೇಲರ ಜೊತೆಗೂಡಿ ಊರ ಮಂದಿಗೆ ಶಂಕ್ರನ ಗುಣಗಾನ ಮಾಡಲು ಮನೆ ಮುಂದೆ ಜಮಾಯಿಸಿದ್ದರು. ಊರ ಮಗ ಮನೆಮಗನೆಂಬಂತೆ ಹಳ್ಳಿ ಜನರು ಹಬ್ಬ ಆಚರಿಸಿದ್ದಾರೆ. ಇತ್ತ ಶಂಕ್ರನ ಸೋದರ ಮಾವ ಅಳಿಯನ ಸುದ್ದಿ ದಿನಪತ್ರಿಕೆಯಲ್ಲಿ ಕಂಡು ಊರಿಗೆ ಬಂದಿದ್ದಾನೆ. ಇಲ್ಲಿನ ಸಡಗರಲ್ಲಿ ಎಲ್ಲರೂ ಭಾಗಿಯಾಗಿದ್ದಾರೆ.

ಸಂಜೆಯ ಸೂರ್ಯ ಪಕ್ಕಕ್ಕೆ ಸರಿಯುತ್ತಿದ್ದಂತೆ ಸೋದರಮಾವ ತನ್ನ ತಂಗಿಗೆ "ನೋಡವ್ವಾ..!! ಶಂಕ್ರುನ ನನ್ನ ಜೊತೆ ಕಳ್ಸು ನಾನು ಡಾಕ್ಟರ್ ಮಾಡುಸ್ತೀನಿ, ಚೆನ್ನಾಗಿ ಓದಿಸಿ ಒಳ್ಳೆ ವಿದ್ಯಾಭ್ಯಾಸ ಕೊಡುಸ್ತೀನಿ" ಎಂದು ಕರೆಯುತ್ತಾನೆ.

ಅಲ್ಲಣ್ಣ, "ಅಷ್ಟು ದೊಡ್ಡ ಓದು ನಮ್ಮ ಕೈನಲ್ಲಿ ಆಗುತ್ತಾ? ಇದೆಲ್ಲ ಕನಸು ಬಿಡಣ್ಣಾ, ಬೇಡ ಯಾವುದಾದ್ರು ಡಿಗ್ರಿ ಮಾಡಿ ಮೇಷ್ಟ್ರ ಕೆಲಸ ಮಾಡ್ಲಿ". ಎಂದು ಲಕ್ಷ್ಮಮ್ಮನ ಮಾತು.

"ಹಂಗಲ್ಲವ್ವಾ, ಅವ್ನಾ ಅವತ್ತು ಸಿ.ಯಿ.ಟಿ ಬರೆಯಲಿ ಅಂತಾ ಯಾಕೆ ಕರ್ಕೊಂಡು ಹೋಗಿದ್ದು? ಮುಂದೆ ಸಿ.ಯಿ.ಟಿ ಯಲ್ಲಿ ಒಳ್ಳೆ ಅಂಕ ತಗೊಂಡ್ರೆ ಗೌರ್ಮೆಂಟ್ ಕಾಲೇಜಿನಲ್ಲಿ ಸೀಟ್ ಸಿಗುತ್ತೆ ಖರ್ಚು ಕೂಡ ಅಷ್ಟು ಇರೋಲ್ಲ. ಸೀಟ್ ಸಿಕ್ರೆ ಹೋಗ್ಲಿ ಬಿಡು. ನಿನಗ್ಯಾಕೆ ತಕರಾರು". ಎಂದು ಲಕ್ಷ್ಮಮ್ಮ ಅಣ್ಣನ ವಾದ

ಕೊಸರುತ್ತಾ "ಹಾಗಲ್ಲ " ಚಂದ್ರಣ್ಣ ಮೆಲ್ಲಗೆ ನಿ ಎತ್ತಿದ, "ನನ್ಗೆ ಮಗ ಇಲ್ಲೇ ಹತ್ತಿರದ ಹಳ್ಳೀಲಿ ಯಾವುದಾದ್ರು ಹೈಸ್ಕೂಲ್ ಟೀಚರ್ ಆಗಿ ಮನೆಯಿಂದನೇ ಓಡಾಡ್ಕೊಂಡು ರೈತನ ಕೆಲಸ ಮಾಡ್ಲಿ. ಅನ್ನೋ ಆಸೆ . ಅಂತಾ ದೊಡ್ಡ ದೊಡ್ಡ ಓದೆಲ್ಲ ಬೇಡ ನಮ್ಗೆ. ಬಡವ ನೀ ಮಡಗಿದಂಗೆ ಇರು ಅಂತಾ ಇರ್ತೀವಿ".

ಇಲ್ಲ ಚಂದ್ರಣ್ಣ, "ನೀನೇನು ಯೋಚಿಸ್ಬೇಡ ಜಮೀನು, ವ್ಯವಸಾಯ ನಿನ್ನ ಕಾಲಕ್ಕೆ ಮುಗಿತು, ಮುಂದೆ ಮುಂದೆ ಜೀವನದ ಶೈಲಿ ಬದಲಾಗುತ್ತೆ. ಆಗ ನೀನು ಪಶ್ಚಾತ್ತಾಪ ಪಡಬಾರ್ದು ನೋಡು ಅದಕ್ಕೇ ಹೇಳ್ತಾ ಇದ್ದೀನಿ. ಆಗ್ಲಿ ನೋಡೋಣ  ಬಿಡು ಸಿ.ಯಿ.ಟಿ ಫಲಿತಾಂಶ ಬರ್ಲಿ ತೀರ್ಮಾನಿಸೋಣ" ಎಂದು ಊರ ಕಡೆ ಮಾವ ಹೊರಟು ನಿಂತ.

ಸಂಜೆ ಟಿವಿಯ ಮುಂದೆ ಕುಳಿತ ಸೋದರಮಾವ ಸಿ.ಯಿ.ಟಿ ಫಲಿತಾಂಶ ಈ ವೆಬ್ ತಾಣದಲ್ಲಿ ನೋಡಿ ಎಂದು ಪ್ರಸಾರ ಮಾಡುತ್ತಿದ್ದಂತೆ, ಕಂಪ್ಯೂಟರ್ ತೆಗೆದು ಅಳಿಯನ ನಂಬರ್ ನೋಡುತ್ತಾ ಕುಳಿತ, ಎಷ್ಟನೇ ರ‍್ಯಾಂಕ್ ಬಂದಿದ್ದಾನೇ ಎಂದು ಹುಡುಕುತ್ತಿದ್ದಾನೆ ಶಂಕ್ರ ೩೦೦ ನೇ ರ‍್ಯಾಂಕ್ನಲ್ಲಿ ರಾರಾಜಿಸುತ್ತಿದ್ದಾನೆ. ಮಾವನ ಮೆದುಳು ಲೆಕ್ಕಾಚಾರದಲ್ಲಿ ಮುಳುಗಿದೆ ೩೦೦ರನೇ ರ‍್ಯಾಂಕ್ ಆದರೆ ಖಂಡಿತಾ ಡಾಕ್ಟರ್ ಸೀಟ್ ಸಿಗುತ್ತೆ, ಖುಷಿಯಲ್ಲಿ ತಂಗಿಯ ಊರಿನ ಕಡೆ ಹೊರಟ.

ಇತ್ತ ತಂಗಿ ಮತ್ತು ಕುಟುಂಬದವರಿಗೆಲ್ಲಾ ಶಂಕ್ರನ ಫಲಿತಾಂಶ ಮುಂದಿನ ಆಗುಹೋಗುಗಳ ಬಗ್ಗೆ ಮಾವ ವಿವರಿಸುತ್ತಿದ್ದರೆ, ಶಂಕ್ರ ಗಂಟಲು ಸರಿಪಡಿಸಿಕೊಳ್ಳುತ್ತಾ..." ಮಾವ, ನನಗೆ ಡಾಕ್ಟರ್ ಮಾಡುವ ಇಷ್ಟವಿಲ್ಲ ನಾನು ಅಗ್ರಿಕಲ್ಚರ್ ಸೈನ್ಸ್ ಮಾಡೋ ಆಸೆ ಹೊಂದಿದ್ದೇನೆ ಮಾವ. ಅಪ್ಪ-ಅಮ್ಮ ಹೇಳುವಂತೆ ಹೈಸ್ಕೂಲ್ ಟೀಚರ್ ಆಗಲಿ ನೀವು ಹೇಳುವಂತೆ ಡಾಕ್ಟರ್ ಆಗಲಿ ಇಷ್ಟವಿಲ್ಲ. ನನಗೆ ನನ್ನದೇ ಆದ ಗುರಿ ಇದೆ. ದಯವಿಟ್ಟು ನಿಮ್ಮೆಲ್ಲರ ಸಹಕಾರ ಬೇಕುಅವನ ಆ ಮಾತಿನ ಗತ್ತಿಗೆ ಎಲ್ಲರೂ ಮೌನಕ್ಕೆ ಶರಣಾದರು. ಮುಂದೆ ಯಾರೊಬ್ಬರೂ ಮಾತನಾಡಲಿಲ್ಲ.

ಶಂಕ್ರ ಈಗ ಯಾರ ಮಾತು ಕೇಳುವವನಂತೆ ಕಾಣಲಿಲ್ಲ, ದಿಟ್ಟ ನಿರ್ಧಾರ ಅವನ ಮುಖಭಾವದಲ್ಲಿ ಎದ್ದು ಕಾಣುತ್ತಿತ್ತು. ಇತ್ತ ಮಾವ "ಸರಿ ಬಿಡು ನಿನಗೆ ಏನು ಇಷ್ಟನೋ ಅದೇ ಓದು, ಬಿಎಸ್ಸಿ ಬದಲು ಇಂಜಿನಿಯರಿಂಗ್ ನಲ್ಲಿ ಈಗ ಅಗ್ರಿಕಲ್ಚರ್ ಬಂದಿದೆ ಅದನ್ನ ಮಾಡು, ಈಗಷ್ಟೆ ಕೆಲವು ವರ್ಷಗಳಿಂದ ಪ್ರಾರಂಭವಾಗಿದೆ. ಆದರೆ ನಮ್ಮ ಜೊತೆ ಬೆಂಗಳೂರಿನಲ್ಲಿ ಇರುಈಗ ನಿನ್ಗೆ ಖುಷಿನಾ!!, ನಾಳೆನೆ ಎಲ್ಲಾ ಕಾಲೇಜುಗಳಲ್ಲಿ ವಿಚಾರಿಸಿ ನಿನಗೆ ವ್ಯವಸ್ಥೆ ಮಾಡುತ್ತೇನೆ" ಎಂದು ಊರಿಗೆ ಹೊರಟ.  
----
ಬೆಂಗಳೂರಿಗೆ ಬಂದ ಮಾವ ತಕ್ಷಣವೇ ಅಳಿಯನನ್ನು ಕಾಲೇಜಿಗೆ ಸೇರಿಸುವ ವ್ಯವಸ್ಥೆ ಮಾಡಿದ, ಕಾಲೇಜಿಗೆ ಬೇಕಾದ ದುಡ್ಡನ್ನೂ ಮಾವನೇ ಬರಿಸಿದ, ತಂಗಿಗೆ ಅಣ್ಣನ ಸಹಾಯ ಕಂಡು ಖುಷಿ, "ಯಾಕಣ್ಣ ನೀನು ಇಷ್ಟೆಲ್ಲಾ ಮಾಡುತ್ತೀಯಾ, ನಾವೇ ಕಾಲೇಜಿಗೆ ಬೇಕಾದ ದುಡ್ಡು ಹೊಂದಿಸಿಕೊಳ್ಳುವೆವು ನೀನು ತೊಂದರೆ ತೆಗೆದುಕೊಳ್ಳಬೇಡ. ಇಲ್ಲ ಲಕ್ಷ್ಮು ನಮ್ಮ ಕೈನಲ್ಲಿ ಸಾಧ್ಯವಾಗುವುದನ್ನು ಮಾಡಬೇಕು, ನಾವು ಯಾರೋ ಆ ಅನಾಥಾಶ್ರಮಕ್ಕೆ ದುಡ್ಡು, ಅಲ್ಲೆಲ್ಲೋ ದೇವಸ್ಥಾನ ಕಟ್ಟುತ್ತಾರೆ ದುಡ್ಡು ಕೊಡಿ ಎಂದಾಗ ನಾವುಗಳು ಕೈಎತ್ತಿ ಹಣ ನೀಡುತ್ತೇವೆ. ನಮ್ಮಲ್ಲೇ ನಮ್ಮ ಕುಟುಂಬದಲ್ಲೇ ಅವಶ್ಯಕತೆ ಇರುವಂತ ಮಕ್ಕಳಿಗೆ ಸಹಾಯ ಮಾಡೋಣ, ಅಲ್ಲದೇ ಓದುವ ಮಕ್ಕಳನ್ನು ಪ್ರೋತ್ಸಾಹಿಸೋಣ ಅವನು ಎಲ್ಲಿಯವರೆಗು ಓದುತ್ತಾನೋ ಅಲ್ಲಿಯವರೆಗೆ ನಾನೇ ಓದಿಸುತ್ತೇನೆ, ನೀವಿಬ್ಬರು ನಿಶ್ಚಿಂತೆಯಿಂದ ಇದ್ದು ಬಿಡಿ" ಎಂದು ತಂಗಿ ಮತ್ತು ಬಾವನಿಗೆ ಸಮಾಧಾನದ ಮಾಡಿದ.

ಕಾಲೇಜು ಇನ್ನೇನು ನಾಲ್ಕು ದಿನಗಳಿವೆ ಪ್ರಾರಂಭ, ಊರಿನಿಂದ ಅಮ್ಮ ಅಪ್ಪಾ ಶಂಕ್ರು ಬೆಂಗಳೂರಿಗೆ ಬಂದಿದ್ದಾರೆ. ಬಾವಮೈದುನನ ಮನೆ ನೋಡಿ ಕಣ್ಣು ಕಣ್ಣು ಬಿಡುತ್ತಾ "ಅಬ್ಬಾ ಎಂಥಾ ಅರಮನೆ ತಂದೆಗೃಹಪ್ರವೇಶಕ್ಕೆ ನಾನು ಬರಲಿಲ್ಲ ಹೊಲಗದ್ದೆ ಎಂದು ಅಲ್ಲಿಯೇ ಉಳಿದುಬಿಟ್ಟೆ, ಅದು ಹೆಂಗೆ ದುಡಿತಾರಪ್ಪಾ ದೇವ್ರೇ, ನಾವುಗಳೋ ಭೂಮಿ ತಾಯಿ ನಂಬ್ಕೊಂಡು ಬರಿ ಮಣ್ಣು ಕೆರೆಯೋದೆ ಕೆಲ್ಸ, ನಾನು ನಂಬಿದ ಭೂಮಿತಾಯಿ ನನಗೆ ಎಂದೂ ಮೋಸ ಮಾಡಿಲ್ಲ ಆದರೆ ಶ್ರೀಮಂತಿಕೆಯನ್ನು ಮಾತ್ರ ತೋರಿಸಿಲ್ಲ, ಹೊಟ್ಟೆಬಟ್ಟೆಗೆ ಎಂದೂ ಇಲ್ಲದಂತೆ ಜೀವಿಸುವಂತೆ ಮಾಡಲಿಲ್ಲ ಆ ನನ್ನ ಭೂಮ್ತಾಯಿ. ಇರಲಿ ಎಲ್ಲವೂ ನಾವಂದುಕೊಂಡಂತೆ ಆಗುತ್ತಾ ನನ್ನ ಬಾಮೈದಾ ವಿದ್ಯಾವಂತ, ಗುಣವಂತ ಜಾಣಕೂಡ ಅವನ ವಿದ್ಯೆಗೆ ತಕ್ಕ ಕೆಲಸ, ಸಂಬಳ ಇದ್ದೇ ಇರುತ್ತೆ. ನಮ್ಮ ಕಣ್ಣೆದುರು ಚೆಂದಾಗಿರ್ಲಿ ಹೇಗೋ ನನ್ನ ಮಗನಿಗೂ ಆಧಾರವಾಗಿ ನಿಂತುಕೊಂಡಿದ್ದಾನೆ ಅವನ ತಕ್ಕಂತೆ ಬಂಗಾರದಂತ ಹೆಂಡತಿ ಕೊಂಚವೂ ಬೇಭಾವವಿಲ್ಲದಂತೆ ನನ್ನ ಮಗನ್ನ ನೋಡಿಕೊಳ್ಳುತ್ತಾಳೆ" ಎಂದು ಮನಸಿನಲ್ಲೇ ಖುಷಿ ಪಟ್ಟುಕೊಳ್ಳುತ್ತಿದ್ದಾನೆ.

ಅಣ್ಣ ಅತ್ತಿಗೆ ಎದುರು ಕೂತ ಲಕ್ಷ್ಮಮ್ಮ-ಚಂದ್ರಣ್ಣ "ಕೈಮುಗಿಯುತ್ತಾ ಇವನು ನನ್ನ ಮಗನಲ್ಲ, ನಿಮ್ಮ ಮಗನೆಂದುಕೊಳ್ಳಿ, ಅವನೇನೇ ತಪ್ಪು ಮಾಡಿದರೂ ತಿದ್ದಿ ಬುದ್ಧಿ ಹೇಳಿ ನಾವಿನ್ನು ಇವತ್ತು ಸಂಜೆ ಬಸ್ಸಿಗೆ ಹೊರ್ಡ್ತೀವಿ" ಎಂದು ಚಂದ್ರಣ್ಣ ಹೇಳ್ತಾ ಇದ್ದಹಾಗೇ ಬಾವಮೈದುನ  "ಹೇ ಸುಮ್ಮನಿರಿ ಬಾವ, ನಾಳೆ ಹೋದರೆ ಆಯ್ತು, ಯಾವಾಗಲೂ ಹಳ್ಳಿ-ಹೊಲಗದ್ದೆ ಇದೇ ಆಯ್ತು ಬೆಂಗಳೂರನ್ನು ಒಮ್ಮೆ ನೋಡಿ, ನೀವುಗಳು ಸ್ವಲ್ಪ ಹಳ್ಳಿ ಬಿಟ್ಟು ಹೊರಗೆ ಬಂದು ನೋಡಿ ಜನ ಹೇಗಿದ್ದಾರೆ ಎಂದು, ನೀವೆಲ್ಲ ಇನ್ನು ಓಬಿರಾಯನ ಕಾಲದಲ್ಲೇ ಇದ್ದೀರಲ್ಲಾ!?" ಎಂದು ಸುಮ್ಮನಿರಿಸಿದ

ಸಂಜೆ ಊರು ಸುತ್ತುವ ಕಾರ್ಯಕ್ರಮ ಅಣ್ಣ ಅತ್ತಿಗೆ ಮಕ್ಕಳು ಎಲ್ಲರೂಟ್ಟಿಗೆ ಇವರೂ ಓರಿಯನ್ ಮಾಲ್ ನೋಡಲು ಹೋದರು, ಅಣ್ಣ ಅಲ್ಲೇ ಇದ್ದ ಬಟ್ಟೆ ಅಂಗಡಿಗೆ ಕರೆದುಕೊಂಡು ಹೋಗಿ "ಶಂಕ್ರು, ನಿನಗೆ ಯಾವ ಬಟ್ಟೆ ಬೇಕೋ, ಎಷ್ಟು ಬೇಕೋ ತಗೋ", ಎಂದು ಹೇಳಿ ಮಕ್ಕಳಾದ ದಿಶಂತ್ ಮತ್ತು ಪಲ್ಲವಿಯನ್ನ ಜೊತೆಮಾಡಿ ಕಳುಹಿಸಿದ. ದಿಶಂತ್ ಮತ್ತು ಶಂಕ್ರು ಒಂದೇ ವಾರಗೆಯವರು ದಿಶಂತನಿಗೆ ಇಷ್ಟವಾದ ಬಟ್ಟೆಯನ್ನೇ ಶಂಕ್ರುವಿಗೆ ಕೊಟ್ಟು "ಹೋಗಿ ಟ್ರಯಲ್ ರೂಮಿನಲ್ಲಿ ಚೆಕ್ ಮಾಡು ಒಮ್ಮೆ" ಎಂದು ಬಲವಂತವಾಗಿ ದಬ್ಬಿದ. ಟ್ರಯಲ್ ರೂಮಿಗೆ ಹೋದವನೇ ಕೊಂಚ ಕಣ್ಣ್ ಅರಳಿಸಿದ, ಅಬ್ಬಾ ಏನಿದು ಸುತ್ತ ಕನ್ನಡಿ ಇದೆ ಎಂದುಕೊಳ್ಳುತ್ತ ಹೊಸ ಬಟ್ಟೆ ಧರಿಸಿ "ಅಬ್ಬಾ ಇದೆಲ್ಲಾ ನಮ್ಮಂತವರು ಹಾಕುವ ಬಟ್ಟೆಯಲ್ಲ ತಂದೆ, ನಮಗ್ಯಾಕೆ ಬಡವ ನೀ ಮಡಗಿದಂತೆ ಇರು ಎಂದು ಇರುವುದು ವಾಸಿ, ಸೋದರ ಮಾವ ಏನೋ ಪ್ರೀತಿಗೆ ಇಷ್ಟೆಲ್ಲಾ ಮಾಡುತ್ತಿದ್ದಾರೆ ಅದನ್ನ ದುರುಪಯೋಗ ಪಡಿಸಿಕೊಳ್ಳುವುದು ಬೇಡ" ಎಂದುಕೊಂಡು ಬಟ್ಟೆ ಬದಲಿಸಿ ಹೊರಬಂದ. "ದಿಶಂತ್ ಇವೆಲ್ಲ ನನಗೆ ಬೇಡ ಕಣೋ ಇವೆಲ್ಲ ನಿಮ್ಮಗಳಿಗೇ ಸರಿ, ನನ್ನ ಹತ್ತಿರ ಈಗಾಗಲೇ ಇದಾವೆ, ಸದ್ಯಕ್ಕೆ ನೀನು ತಗೋ ಮುಂದೆ ಯಾವಾಗಲಾದರು ನೋಡೋಣ" ಎಂದು ಸಂಕೋಚದಿಂದ ಹೇಳಿದ  

ಮಾವ ಶಂಕ್ರನನ್ನು ಗದರಿದ, "ನೀನು ಬೇರೆ ನಾವು ಬೇರೆ ಎಂದುಕೊಂಡಿಲ್ಲ ಹಳ್ಳಿಯವ, ಬಡವ ಎಂದಾದ ಕೂಡಲೆ ಇಂತಹದೇ ಅಂಗಡಿಯಲ್ಲಿ ಬಟ್ಟೆ ತಗೋಬೇಕು, ಇಂತಹವೇ ಬಟ್ಟೆ ಧರಿಸಬೇಕು ಎಂದು ಶಾಸನ ಬರೆದಿದೆಯಾ, ನೀನು ಇಂತಹ ಕೀಳರಿಮೆಗಳಿಂದ ಹೊರಬರಬೇಕು, ನಿನ್ನ ನೋಡಿ ನಾಲ್ಕು ಜನ ಕಲಿಯುವಂತಾಗಬೇಕು. ನನಗೆ ಶಕ್ತಿ ಇದೆ ಕೊಡಿಸುತ್ತೇನೆ ಮುಂದೆ ನನಗೆ ಶಕ್ತಿ ಇಲ್ಲದಂತಾಗಿ ನೀನು ಒಳ್ಳೆಯ ಸ್ಥಾನಕ್ಕೆ ಹೋದರೆ ನಾನು ನೀ ಹೇಳಿದಂತೆ ಇದ್ದು ಬಿಡಲಾ..!! ಹೇಳು? ಸದ್ದಿಲ್ಲದೆ ಹೋಗಿ ಬಟ್ಟೆ ತಗೋ, ನೀನು ಏನೇ ಹೇಳಬೇಕೆಂದಿದ್ದರೆ ಓದಿನಲ್ಲಿ ತೋರಿಸು ಬೇರೇನು ತಲೆ ಕೆಡಿಸಿಕೊಳ್ಳಬೇಡ". ಇತ್ತ ಅತ್ತೆ ಸಾಕ್ಷಿ ಕೂಡ "ಅಯ್ಯೋ ಶಂಕ್ರು, ನನ್ನ ಯಾರು ಬಟ್ಟೇ ತಗೋ ಅಂತಾ ಕೇಳೋದೆ ಇಲ್ಲ ನೋಡು, ಚಾನ್ಸ್ ಸಿಕ್ಕಾಗ ಬಳಸಿಕೊಳ್ಳಪ್ಪಾ" ಎಂದು ನಗೆ ತರಿಸಿದರು.

ಊರೆಲ್ಲ ಸುತ್ತಾಡಿ, ಲಕ್ಷ್ಮಮ್ಮ-ಚಂದ್ರಣ್ಣನಿಗೂ ಬಟ್ಟೆಬರೆ, ಮನೆಗೆ ಬೇಕಾದ ಕೆಲವು ವಸ್ತುಗಳನ್ನ ಕೊಡಿಸಿಕೊಂಡು ಬಂದರು. ಎಷ್ಟೋ ವರುಷಗಳ ನಂತರ ಎಲ್ಲರೂ ಸೇರಿದ್ದು ಮನೆಯಲ್ಲಿ ಒಂದು ಹೊಸ ಕಳೆಯನ್ನು ತಂದಿತ್ತು. ಖುಷಿ ಮನೆ ಮಾಡಿತ್ತು. "ಅಣ್ಣ-ಅತ್ತಿಗೆ ಕಷ್ಟದಿಂದ ಮೇಲೆ ಬಂದವರು ಎಲ್ಲದರ ಅರಿವು ಅವರಿಗಿದೆ  ಶಂಕ್ರು, ನೀನು ಚೆನ್ನಾಗಿ ಓದಿ ಒಳ್ಳೆ ಹೆಸರು ತಗೊಂಡು ಬಾ, ಅವರು ಹೇಳಿದಂತೆ ಕೇಳು ಆಯ್ತಾ" ಎಂದು ಮರುದಿನ ಊರಿನ ಕಡೆ ಹೊರಟರು.
----
ಮನೆಗೆ ಹತ್ತಿರವೇ ಇರುವ ಕಾಲೇಜ್, ಊಟಕ್ಕೂ ಬಂದು ಹೋಗುವಷ್ಟು ಹತ್ತಿರ, ಬೆಳಿಗ್ಗೆ ೮ರಿಂದ ಸಂಜೆ ೫ರವರೆಗಿನ ಕಾಲೇಜು, ಮೊದಲ ದಿನ ಹೊಸ ಅನುಭವ, ಬೆಂಗಳೂರು ನಗರ ಹೊಸತು, ಇಲ್ಲಿನ ವಾತಾವರಣ, ಜನಾ ಎಲ್ಲವೂ ಹೊಸತು. ಅಗ್ರಿಕಲ್ಚರಲ್ ಇಂಜಿನಿಯರಿಂಗ್ ಈ ಕಾಲೇಜಿನಲ್ಲಿ ಪ್ರಾರಂಭವಾಗಿ ಸುಮಾರು ೩ ವರ್ಷಗಳಾಗಿರಬೇಕು, ಇತ್ತೀಚೆಗೆ ವ್ಯವಸಾಯ, ಭೂಮಿ, ಮಣ್ಣು ಎಂಬ ಮಾತನ್ನೇ ಬಿಟ್ಟು ಎಲ್ಲರೂ ಸಾಫ್ಟ್ ವೇರ್ ಕೆಲಸಕ್ಕೆ ಮುಗಿಬೀಳುತ್ತಿರುವವರೇ ಹೆಚ್ಚು, ಬೇಸಾಯ ಮಾಡಿ ಸಾಧಿಸುವುದೇನು ಕೈನಲ್ಲಿ ಹಣವಿಲ್ಲದ್ದು ಜೀವನ ಕಷ್ಟ ಎಂದು ನಂಬಿಕೊಂಡು ಹಲವು ಬದಲಾವಣೆಗಳನ್ನು ಎಲ್ಲರೂ ಮಾಡುತ್ತಲೇ ಬಂದಿದ್ದಾರೆ. ಶಂಕ್ರ ಅದಾವುದೋ ಹೊಸ ಹುರುಪಿನಲ್ಲಿ ಬೇಸಾಯದತ್ತ ಒಲವು ಹರಿಸುವ ಸಲುವಾಗಿ ಈ ಕಾಲೇಜಿಗೆ ಸೇರಿಕೊಂಡ. ವಿಜ್ಞಾನವನ್ನು ತಿಳಿಯುವುದು ಅಷ್ಟು ಸುಲಭವಲ್ಲ, ವಿಜ್ಞಾನ ಈಗ ಹೆಚ್ಚು ಬೆಳೆದಿದೆ ಅದಕ್ಕೆ ತಕ್ಕಂತೆ ತಾಂತ್ರಿಕತೆಯೂ ಕೂಡ ಬೆಳೆದಿದೆ. ಈ ತಾಂತ್ರಿಕತೆಯನ್ನು ಉಳಿಸಿಕೊಂಡು ಅದೇ ಒಂದು ಅಸ್ತ್ರವಾಗಿ ಮುಂದುವರಿಯಬೇಕೆಂದು ಶಂಕ್ರ ತನ್ನ ಲೆಕ್ಕಾಚಾರದಲ್ಲೇ ಮುಳುಗಿದ್ದಾನೆನಾನು ಅಂದುಕೊಂಡಂತೆ ಇಲ್ಲಿ ಬೇಸಾಯಕ್ಕೆ ಒತ್ತು ಕೊಡುತ್ತಾರೋ ಇಲ್ಲವೋ ಗೊತ್ತಿಲ್ಲ. ಆದರೂ ಮೊದಲ ವರ್ಷದಲ್ಲಿ  ಭೂಮಿ ಫಲವತ್ತತೆ, ವ್ಯವಸಾಯದ ಆಗುಹೋಗುಗಳು, ನೆಲ-ಜಲ ಎಲ್ಲದರ ಅಲ್ಪಸ್ವಲ್ಪ ಮಟ್ಟಿಗೆ ಅರಿವಿಗೆ ಬರಬಹುದು.

ಕಾಲೇಜಿಗೇನು ಸೇರಿಯಾಗಿತ್ತು, ಮುಂದಿಟ್ಟ ಹೆಜ್ಜೆ ಹಿಂದಿಡುವ ಮಾತೇ ಇಲ್ಲ, ಆದರೆ ಕಾಲೇಜಿನಲ್ಲಿ ಈ ಕೋರ್ಸಿಗೆ ಕೇವಲ ೧೦ ಜನರಿದ್ದರು ಅದರಲ್ಲಿ ಕೆಲವರು "ಈ ಬ್ರಾಂಚ್ ಹೊಸದು ಕೆಲಸ ಸಿಗುತ್ತೆ ಕಂಪನಿಗಳಲ್ಲಿ" ಎಂದರೆ  ಇನ್ನು ಕೆಲವರು "ಈ ಬ್ರಾಂಚ್ ಗೆ ಕಡಿಮೆ ಫೀಸ್ ಅದಕ್ಕೆ ಸೇರಿದೆ" ಎಂದರು. ಇನ್ನೊಂದಿಬ್ಬರು ಹೇಳ್ತಾರೆ "ಅಯ್ಯೋ ನಮ್ಗೆ ಓದೇನು ಬೇಕಿಲ್ಲ ನಮ್ಮ ಅಪ್ಪಾ ದುಡಿದಿಟ್ಟಿರೋದನ್ನ ಖರ್ಚು ಮಾಡ್ಕೊಂಡಿದ್ರೆ ಸಾಕು ಆದ್ರೇ ಮುಂದೆ ಮದುವೆ ಆಗ್ಬೇಕಾದ್ರೆ ಹುಡುಗ ಏನ್ ಓದಿದ್ದಾನೆ ಎಂದು ಕೇಳ್ತಾರೆ ಅದಕ್ಕೆ ಇದು ಸುಲಭದ ಸಬ್ಜಕ್ ಎಂದು ಸೇರಿಕೊಂಡ್ವಿ" ಎಂದು ಅವರವರದೇ ಲೋಕದಲ್ಲಿ ಉತ್ತರಿಸಿದ್ದರು. ಶಂಕ್ರನ ಯೋಜನೆಯೇ ಬೇರೆ ಇವರೆಲ್ಲರಿಗಿಂತ ವಿಭಿನ್ನ ದಿಕ್ಕಿನದು, ತನ್ನ ಊರು ನೆಲ ಜಲ ಇವೆಲ್ಲವನ್ನು ಉಳಿಸಿಕೊಂಡು ಅದರಲ್ಲೇ ಸಾಧನೆ ಮಾಡಬೇಕೆಂದು ಛಲ ತೊಟ್ಟವನು.

ಕಾಲೇಜಿನ ಮೊದಲ ದಿನ ಲೆಕ್ಚರರ್ ಅಗ್ರಿಕಲ್ಚರಲ್ ಬಗ್ಗೆ ವಿವರ ನೀಡುತ್ತಿದ್ದಾರೆ. "ಈ ಕೋರ್ಸ್ ಗೆ ಸೇರುವವರು ಬಹಳ ಕಮ್ಮಿ ಅಂತಹದರಲ್ಲಿ ನೀವುಗಳು ಸೇರಿದ್ದೀರಿ, ಇತ್ತೀಚೆಗೆ ತಂತ್ರಜ್ಞಾನ ಬೆಳೆದಂತೆ ಜನ ಕಷ್ಟದ ಕೆಲಸಕ್ಕೆ ಕೈಹಾಕುತ್ತಿಲ್ಲ, ನೀವುಗಳು ಧೈರ್ಯಮಾಡಿದ್ದೀರಿ ಇದೇ ಹುಮ್ಮಸ್ಸು ಮುಂದೆಯೂ ಇರಲಿ"

"ಕೃಷಿ ಎಂದರೆ ಬರೀ ಬೇಸಾಯಕ್ಕೆ ಮೀಸಲಿಡದೆ ತೋಟಗಾರಿಕೆ, ಪಶು ಸಂಗೋಪನೆ, ಮೀನುಗಾರಿಕೆ, ಆಹಾರ ಸಂಸ್ಕರಣೆ ಎಲ್ಲಾ ಮೂಲಭೂತ ಸೌಕರ್ಯ ಮತ್ತು ಕೈಗಾರಿಕಾ ಸಂಬಂಧವಾಗಿ ಪ್ರತಿ ವರ್ಷವೂ ತಿಳಿಸಲ್ಪಡುತ್ತದೆ. ನಿಮ್ಮಲ್ಲಿ ಕೃಷಿ ಮೂಲದಿಂದ ಬಂದವರಾದರೆ ನಿಮಗೆ ಕೃಷಿಯ ಹಿನ್ನೆಲೆ ತಿಳಿದಿರುತ್ತದೆ ಮತ್ತು ಆಸಕ್ತಿಯೂ ಹೆಚ್ಚಿರುತ್ತದೆ" ಎಂದು ಲೆಕ್ಚರರ್ ಹೇಳುವಾಗ ಶಂಕ್ರನಿಗೆ ನಿಜಕ್ಕೂ ಕೃಷಿ ಹಿನ್ನೆಲೆ ನನ್ನಲ್ಲಿರುವುದು ಒಳಿತೇ ಆಯಿತೆಂದುಕೊಳ್ಳುತ್ತಿದ್ದಾನೆ.

ಮೊದಲ ದಿನ ಕಾಲೇಜಿನಲ್ಲಿನ ಕೃಷಿ ವಾತಾವರಣವೇ ಅವನಲ್ಲಿ ಊರಿನ ಜಮೀನು ಬಾವಿ, ಕೊಳ, ಗದ್ದೆ ಕೆರೆ ಕಟ್ಟೆಯ ಎಲ್ಲವನ್ನೂ ನಿರ್ವಹಿಸಿ ಅದನ್ನು ಬೆಳೆಸಬೇಕು ಹೆಚ್ಚು ಉತ್ಪನ್ನಗಳನ್ನ ಉಳಿಸಿಕೊಳ್ಳಬೇಕು ಎಂದು ಕನಸು ಕಾಣುತ್ತಿರುತ್ತಾನೆ.
------
ವರ್ಷಗಳು ಉರುಳುತ್ತಿವೆ, ಕೃಷಿಯಲ್ಲಿನ ಒಳಅರಿವು, ಆಗುಹೋಗುಗಳ ಬಗ್ಗೆ ಶಂಕ್ರ ಮನನ ಮಾಡಿಕೊಂಡಿದ್ದಾನೆ ಇನ್ನೇನು ಕಾಲೇಜಿನ ಮುಕ್ತಾಯದ ವರ್ಷ, ದೂರದ ದೇಶವಾದ ನೆದರ್ಲ್ಯಾಂಡಿನಲ್ಲಿ ಕೃಷಿಗೆ ಹೆಚ್ಚು ಒತ್ತುಕೊಡುತ್ತಾರೆ ಅದೇ ದೇಶದಲ್ಲಿ ಪ್ರತಿ ದೇಶದ ೩ ವಿದ್ಯಾರ್ಥಿಗಳಿಗೆ ಕೃಷಿ ಕುರಿತಾಗಿ ಸಮ್ಮೇಳವನನ್ನು ಏರ್ಪಡಿಸಿದ್ದಾರೆ ಅಲ್ಲಿ ಭಾಗವಹಿಸಲು ಶಂಕ್ರನಿಗೆ ಅವಕಾಶ ಒದಗಿ ಬಂದಿದೆ. ಕಾಲೇಜಿನಲ್ಲಿ ಎಲ್ಲಾ ವಿಷಯದಲ್ಲೂ ಶಂಕ್ರನೇ ಅಗ್ರ ಶ್ರೇಯಾಂಕಿತನಾದ್ದರಿಂದ ಈ ಸದಾವಕಾಶ ಒಲಿದು ಬಂದಿತ್ತು, ಅಂತೆಯೇ ನೆದರ್ಲಾಂಡ್ ದೇಶದಲ್ಲಿ ವ್ಯವಸಾಯವನ್ನು ಅರಿಯಲು ಮಾವನ ಸಹಾಯ ಪಡೆದುಕೊಂಡ, ಮನೆಯಲ್ಲಿ ದಿನವೂ ಕುಳಿತು ಅಂತರ್ಜಾಲ ಮುಖೇನ ನೆದರ್ಲಾಂಡ್ ನ ಕೃಷಿ ಮತ್ತು ಭಾರತ ಕೃಷಿ ಎರಡನ್ನೂ ಅವಲೋಕಿಸಿ ಕಾಲೇಜಿನಲ್ಲಿ ಲೆಕ್ಟರರ್ಸ್ ಗಳ ಜೊತೆ ಸುಧೀರ್ಘ ಚರ್ಚೆ, ಕೃಷಿವಿಜ್ಞಾನಿಗಳೊಂದಿಗೆ ಚರ್ಚೆ ಎಲ್ಲರೊಂದಿಗೆ ಹಲವು ಮಾಹಿತಿ ಕಲೆಹಾಕಿ ನೆದರ್ಲಾಂಡ್ ಗೆ ಹೋಗುತ್ತಾನೆ.

ಶಂಕ್ರ "ತಾನು ಅಂದುಕೊಂಡಂತೆ ಇಲ್ಲ, ಹೊಸ ದೇಶ ಹಳ್ಳಿಯಿಂದ ಬಂದವನಿಗೆ ಈ ದೇಶದ ಬೇಸಾಯದ ಬಗ್ಗೆ ತಿಳಿದುಕೊಳ್ಳಬೇಕು". ಎಂಬ ಹುಮ್ಮಸ್ಸು ಅವನಲ್ಲಿ ಹೆಚ್ಚಾಯಿತು. ನಮ್ಮಲ್ಲಿನ ಕೃಷಿಗೂ ಇಲ್ಲಿಗೂ ಇರುವ ವ್ಯತ್ಯಾಸ ತಿಳಿದು ನನ್ನ ದೇಶಕ್ಕಾಗಿ ಏನಾದರು ಮಾಡಬೇಕೆಂದು ಶಂಕ್ರನ ಮನಸ್ಸು ಧೃಡವಾಯಿತು. ಅದಕ್ಕೆ ತಕ್ಕಂತೆ ಸಮಾವೇಶದಲ್ಲಿ ಭಾರತೀಯ ಕೃಷಿಯಲ್ಲಿ ಹೈಟೆಕ್ ಮತ್ತು ಜೈವಿಕ ತಂತ್ರಜ್ಞಾನ ಈ ವಿಷಯವಾಗಿ ತನ್ನ ನಿರೂಪಣೆ ಮತ್ತು ಅದಕ್ಕೆ ಉದಾಹರಣೆಗಳನ್ನು ನೀಡುತ್ತ ನೆರೆದಿದ್ದವರ ಮನಗೆದ್ದಿದ್ದ ಜೊತೆಗೆ ನೆದರ್ಲಾಂಡ್ ಸರ್ಕಾರ ಎರಡು ವರ್ಷಗಳ ಅಧ್ಯಾಯನ ಮತ್ತು ಸಂಶೋಧನೆಗಾಗಿ ಉಚಿತ ವ್ಯವಸ್ಥೆ ನೆರೆವೇರಿಸಿತ್ತು. ಇದು ಶಂಕ್ರನಿಗೆ ಸಂತಸವೇ ಸರಿ ಆದರೆ ಎರಡು ವರ್ಷ ಇಲ್ಲೇ ಇದ್ದರೆ ನಮ್ಮೂರು, ನನ್ನಪ್ಪನ ಆಸೆ ಎಲ್ಲವನ್ನು ಮರೆತುಬಿಡುತ್ತೇನೋ ಎಂಬ ಭಯ ಹುಟ್ಟಿತು. ಜೊತೆಗೆ ನೆದರ್ಲಾಂಡ್ ಹೋಗಬಾರದು ನನ್ನೂರಲ್ಲೇ ಇದ್ದು ಬಿಡುವುದೇ ವಾಸಿ ಎಂದು ತೀರ್ಮಾನಿಸಿದ.

ನೆದರ್ಲಾಂಡ್ ಭೇಟಿ, ಅಲ್ಲಿನ ಸಮಾವೇಶ, ಹೆಚ್ಚಿನ ಅಧ್ಯಯನಕ್ಕೆ ನೆದರ್ಲಾಂಡ್ ಸರ್ಕಾರದ ನೆರವು ಎಲ್ಲವನ್ನೂ ತಿಳಿದ ಶಂಕರನ ಮಾವ ಅಳಿಯನಿಗೆ ಪ್ರೋತ್ಸಾಹಕ್ಕೆ ನಿಂತನು, ತಡಮಾಡದೆ ಇಂಜಿನಿಯರಿಂಗ್ ಮುಗಿದ ಕೂಡಲೆ ನೆದರ್ಲಾಂಡಿನತ್ತ ಹೊರಡಲು ತಯಾರಿ ಮಾಡಿದ. ಒಲ್ಲದ ಮನಸಿನಲ್ಲೇ ನೆದರ್ಲಾಂಡಿನತ್ತ ಹೊರಟ ಕೂಡ. ಇತ್ತ ಶಂಕ್ರನ  ಅಪ್ಪ, ಅಮ್ಮನಿಗೆ  "ಇವನು ದೇಶ ಬಿಟ್ಟು ಹೋದ ಇನ್ನು ನಮ್ಮ ಕೈಗೆ ಸಿಗುವವನಲ್ಲ, ನನ್ನ ಆಸೆ ಎಲ್ಲ ಮಣ್ಣಾಯ್ತು ಲಕ್ಮು, ಮಗ ಇನ್ನು ಬೇಸಾಯ ಯಾವುದೋ ದೇಶದಲ್ಲಿ ಮಾಡೋಕ್ಕೆ ಹೊರಟ ಇನ್ನು ನಮ್ಮೂರು ಯಾಕೆ ಬೇಕು ಹೇಳು". ಎಂದು ತಲೆಮೇಲೆ ಕೈಹೊತ್ತು ಕುಳಿತ.


ಶಂಕ್ರು ಫಾರಿನ್ ಪಾಲಾದನೇ?? ವ್ಯವಸಾಯದ ಕನಸು ಮಣ್ಣಾಯಿತೇ?? ಕಥೆಯ ಅಂತ್ಯ ಮುಂದಿನಭಾಗದಲ್ಲಿ.....