Sunday, July 1, 2012

ಕಾಣದ ಲೋಕಕೆ ತೆರಳಿದಾಗ... ದರುಶನ ಭಾಗ್ಯ ಇಲ್ಲದಾಗ..!!


ಕಾರಣಾಂತರಗಳಿಂದ ೩ ವರ್ಷವಾದರೂ ಊರಿನ ಕಡೆ ತಲೆಹಾಕದವ ತನ್ನ "ಮಗ ಮತ್ತು ತಾಯಿ" ನೋಡಲು ಇತ್ತೀಚೆಗಷ್ಟೇ ಹೋಗಿ ಬಂದಿದ್ದ. ನೆಂಟರಿಷ್ಟರ ಒಡನಾಟ, ಊರೂರು ಸುತ್ತಾಟ, ಅಮ್ಮನ ಕೈ ಅಡುಗೆ ರುಚಿ ಇನ್ನೂ ತನ್ನ ನಾಲಿಗೆಯಲ್ಲೇ ಇದೆ.. ಇದೆಲ್ಲದರ ಜೊತೆ ತವರಿನ ನೆನಪು ಮಾಸೇ ಇಲ್ಲದಿರುವಂತಿರುವಾಗ ನೆನ್ನೆ..!! ಬೆಳ್ಳಂ ಬೆಳ್ಳಗ್ಗೆ ಏನೋ ಸಂಕಟ, ಮುಂಜಾವಿನ ನಿದ್ರೆಯೂ ತನ್ನತ್ತ ಸುಳಿಯದಂತೆ ಮಾಡಿದ್ದು ಆ ಒಂದು ದೂರವಾಣಿ ಕರೆ. ಆಂಧ್ರದ ಕಡೆಯಿಂದ ಕರೆ ಬಂದಿದ್ದೇ ತಡ ತನ್ನ ಕಿವಿ ತಾನೇ ನಂಬದಂತ ವಿಷಯವೊಂದು ಮುಟ್ಟಿತು. ಕಳೆದ ರಾತ್ರಿ ಅಮ್ಮನೊಟ್ಟಿಗೆ ಮಾತನಾಡಿದ್ದ ಮಗನಿಗೆ ಬೆಳ್ಳಿಗ್ಗೆ ಅಮ್ಮನಿಲ್ಲ ಎಂಬ ಸುದ್ದಿ ಆಘಾತ ನೀಡಿದ್ದಂತು ಸತ್ಯ.

ಅಮ್ಮನಂತೂ ಇಲ್ಲ, ಕೊನೆಯಲ್ಲಿ ಅಮ್ಮನ ಮುಖವಾದರೂ ನೋಡಬೇಕಲ್ಲಾ...!! ಓಹ್ ಏನು ಮಾಡುವುದು ಈಗಷ್ಟೇ ಊರಿಂದ ಬಂದಿದ್ದಾನೆ, ಇದ್ದಕ್ಕಿದ್ದ ಹಾಗೆ ಊರಿಗೆ ಮರಳೋದು ಎಂದರೆ ಅಷ್ಟು ಸುಲಭವೇ..?? ಕೈ ಎಲ್ಲಾ ಬರಿದಾಗಿದೆ ಕುವೈತಿನಲ್ಲಿ ನೆಲೆಸಬೇಕಾದರೆ ತನ್ನ ರೆಸಿಡೆನ್ಸಿ ಮಾಡಿಸಿಕೊಳ್ಳುವ ಸಲುವಾಗಿ ೧೦ ದಿನಗಳ ಮುಂದೆಯೇ ಕುವೈತಿ ವ್ಯಕ್ತಿಗೆ ಸುಮಾರು ೫೦ಸಾವಿರ ಹಣ ನೀಡಿ, ಒಂದು ವರ್ಷದ ಮಟ್ಟಿಗೆ ಕುವೈತಿನಲ್ಲಿ ನೆಲೆಸುವಂತೆ ಮಾಡಿಕೊಂಡಿದ್ದ. ತಾನು ದುಡಿಯೋ ಸಂಬಳ ಕೇವಲ ೧೦ ಸಾವಿರ ಇನ್ನು ಈಗ ಊರಿಗೆ ಹೋಗಲು ಸಾಲ ಯಾರು ನೀಡುತ್ತಾರೆ. ಹೇಗೆ ಊರಿಗೆ ಹೋಗೋದು ದೇವರೇ ...!!

ತನ್ನ ಇಷ್ಟೇಲ್ಲಾ ತೊಳಲಾಟವನ್ನು ನನ್ನ ಕಛೇರಿಯ "ಆಫೀಸ್ ಬಾಯ್"  ಹೇಳಿಕೊಳ್ಳದಿದ್ದರೂ ಅವನ ಕಣ್ಣುಗಳು ಮತ್ತು ಮುಖಭಾವ ಎಲ್ಲವನ್ನೂ ಬಿಚ್ಚಿಡುತ್ತಿತ್ತು. ನಾನು ಏನಾಗಿದೆ ಎಂದು ಪೂರ್ಣ ವಿಷಯ ತಿಳಿದಾಗ ಒಮ್ಮೆಲೇ ಮನಸ್ಸು ಕುಸಿದಂತಾಯಿತು. ಇಷ್ಟೆಲ್ಲಾ ಇದ್ದರೂ ಕೆಲಸಕ್ಕೆ ಬಂದಿದ್ದಾನೆ, ಜೊತೆಗೆ ಅವನು ಊರಿಗೆ ಹೋಗಬೇಕು ಎಂಬ ತುಡಿತವನ್ನೂ ಯಾರೊಂದಿಗೂ ಹೇಳಿಕೊಳ್ಳದೇ ತನ್ನ ಕೆಲಸದಲ್ಲೇ ಮಗ್ನನಾಗಿದ್ದಾನೆ... ಛೇ..!! ಎಂತಾ ವಿಪರ್ಯಾಸ, ತಾಯಿ ಮುಖ ನೋಡಲಾಗದೆ ಕೊರಗುತ್ತಾನಲ್ಲಾ ಎಂದೆನಿಸಿ ಕಛೇರಿಯಲ್ಲಿದ್ದವರೆಲ್ಲ ಯೋಚಿಸಿ ಅವನಿಗೆ ಟಿಕೆಟ್ ಕೊಡಿಸಿ ಕಳಿಸುವ ವ್ಯವಸ್ಥೆ ಮಾಡಲು ಮುಂದಾದೆವು.

ಹಣವನ್ನೆಲ್ಲಾ ಹೊಂದಿಸಿದೆವು, ಇದರ ಜೊತೆಗೆ ವಿಮಾನ ಟಿಕೆಟ್ ಬುಕ್ ಮಾಡುವ ಕೆಲಸ,ನಾನು ಇರೋಬರೋ ವಿಮಾನಗಳ ಬಗ್ಗೆ ವಿಚಾರಿ ನೋಡಿದೆ ಯಾವೊಂದು ವಿಮಾನಕ್ಕೂ ಟಿಕೆಟ್ ಸಿಗುತ್ತಿಲ್ಲ. ಕಾರಣ ಇಷ್ಟೇ.. ಇಲ್ಲಿ "ಜೂನ್, ಜುಲೈ,ಆಗಸ್ಟ್" ಈ ಮೂರು ತಿಂಗಳು ಬೇಸಿಗೆ ರಜೆಯಾದ್ದರಿಂದ ಎಲ್ಲಾ ವಿಮಾನಗಳ ಟಿಕೆಟ್ ಈ ಮೊದಲೇ ಬುಕ್ ಆಗಿಹೋಗಿದ್ದವು. ಕೊನೆಗೂ ಯಾವುದೇ ವಿಮಾನಕ್ಕೂ ಟಿಕೆಟ್ ಸಿಗಲಿಲ್ಲ ಅಮ್ಮನ ಮುಖ ನೋಡಲಾಗಲೂ ಇಲ್ಲ. ಊರಿಗೆ ಕರೆ ಮಾಡಿ ನಾನು ಬರುವುದಿಲ್ಲ ಉಳಿದ ಕಾರ್ಯಗಳನ್ನೆಲ್ಲ ಮುಗಿಸಿಬಿಡಿ ಎಂದು ತನ್ನವರಿಗೆ ಕರೆಮಾಡಿ ಕೈ ಚೆಲ್ಲಿ ಕುಳಿತುಬಿಟ್ಟ.

ಕೊನೆಯಲ್ಲಿ ಅವನ ಮಾತು ಮೇಡಮ್, "ಪಾಪಿ ಸಮುದ್ರಕ್ಕೆ ಹೋದರೂ ಮೊಣಕಾಲುದ್ದ ನೀರು" ಎಂಬಂತೆ ನನ್ನ ಪರಿಸ್ಥಿತಿ, ನೀವೆಲ್ಲ ಹಣ ನೀಡಿ ಇಷ್ಟು ನನಗಾಗಿ ಪ್ರಯತ್ನಿಸಿದರೂ ಯಾವುದೇ ಪ್ರಯೋಜನವಿಲ್ಲ.. ಈಗೊಂದೇ ದಾರಿ ಅಮ್ಮನ ಆತ್ಮಕ್ಕೆ ಕ್ಷಮೆಕೋರಿ ಇಲ್ಲಿಂದಲೇ ಕೈಮುಗಿದು ಬಿಡುವೇ..!!

"ಅಮ್ಮಾ..!! ನನ್ನನ್ನು ಕ್ಷಮಿಸಿಬಿಡು ನಿನ್ನ ಮುಖ ನೋಡಲು ಬರಲಾಗದು" ಸತ್ತ ಜೀವಕೆ ಕೇಳಿತೆ ಈ ಮಗನ ಮಾತು...!!???