Sunday, September 30, 2012

ಹುಚ್ಚು ಹೆಚ್ಚಾಗಿದೆ..!!!


                       ಚಿತ್ರ ನೋಡಿ ಎಲೆ ಅಡಿಕೆ ಕಡ್ಡಿಪುಡಿ ತಿನ್ನೋ...ಹುಚ್ಚು ಹೆಚ್ಚಾಗಿದೆ...ಎಂದುಕೋ ಬೇಡಿ..!!


                                                                                     ಪೋಟೋ ಡಿ.ಜಿ ಮಲ್ಲಿಕಾರ್ಜುನ್ 


ಹೊರಗಡೆ ಹೋದ ಮಗ ಇನ್ನು ಬಂದಿಲ್ಲ ಎಂದು ಮನೆಯಿಂದ ಆಚೆ ಹೋಗಿ ಕಾಯಲು ನಿಂತೆ, ಇದ್ದಕ್ಕಿದ್ದಂತೆ  ನನ್ನ ಅಡ್ಡಗಟ್ಟಿ ಏನೋ ಮಾತನಾಡುತ್ತಲಿದ್ದಾಳೆ, ಅರ್ಥವಾಗುತ್ತಿಲ್ಲ, ಅಕ್ಷರಗಳನ್ನ ನುಂಗುತ್ತಲೇ ಇದ್ದಾಳೆ. ಇಪ್ಪತ್ತರ ಆಸುಪಾಸಿನ ಹುಡುಗಿ, ವಕ್ರ ಉಡುಗೆ, ಕೆದರಿದ ಗುಂಗುರು ಕೂದಲು, ಕೆಂಪು ಪಾಚಿ ಹಲ್ಲುಗಳು, ಕೈಕಾಲಲ್ಲಿ ನಿತ್ರಾಣವಿಲ್ಲ ಎನಿಸುತ್ತೆ... ಬಡಕಲು ದೇಹ.. ಕಣ್ಣುಗಳಲ್ಲಿನ ನಿರಾಶೆ ಎದ್ದು ಕಾಣುತ್ತಿದೆ ಅವಳ ಕೈಯಲ್ಲಿ ಏನೋ ಆಟದ ಕಡ್ಡಿ. ಹಾಗೆ ಸ್ವಲ್ಪ ಕಣ್ಣರಳಿಸಿ ಹಿಂದೆ ನೋಡಿದೆ ಅಲ್ಲೇ ಒಂದು ಪುಟ್ಟ ಮಗು ಆಟದ ಸಾಮಾನಿನೊಂದಿಗೆ ನಿಂತಿದೆ. ಮೊದಲ ಸಲ ನೋಡ್ತಾ ಇರೋ ಈ ಹುಡುಗಿ ಹತ್ತಿರ ನಾನು ಇಂಗ್ಲೀಷಿನಲ್ಲೇ ಮಾತನಾಡಿ ಏನು ಎಂದು ಕೇಳಿದೆ..!! ನೀನು(ನುವ್ವು) ಇಂಡಿಯಾ..?? ಅಂದಳು ಹೌದು, ಎಂದು ಸನ್ನೆ ಮಾಡಿದೆ. ಮತ್ತೆ ತೆಲುಗಿನವಳ ಅಂದಳು. ಇಲ್ಲ, ಏನು ಬೇಕು..? ಎಂದು ತೆಲುಗಿನಲ್ಲೇ ಮಾತನಾಡಿಸಿದೆ. 

ನೀನು ಮಾಲ್ಯಾ(MALYA)(ಕುವೈತಿನ ಒಂದು ಸಿಟಿ)ಗೆ ಹೋಗ್ತಾ ಇದ್ದೀಯಾ ಅಂದಳು, ಇಲ್ಲ..!! ನಾನು ಅಲ್ಲಿಗೆ ಹೋಗೋದಿಲ್ಲ ಅಂದೆ, ಹೋಗು ಒಂದು ಸರಿ ಅಂದಳು.. ಯಾಕೆ ಎಂದು ಕೇಳಿದ್ರೇ.. ನನಗೆ ಕಡ್ಡಿಪುಡಿ ಅಥವಾ ಹನ್ಸ್ ಬೇಕು ತಂದು ಕೊಡ್ತೀಯಾ.....? ನಿನಗೆ ಯಾಕೆ ಬೇಕು ಅದೆಲ್ಲಾ ಅಚ್ಚುಕಟ್ಟಾಗಿ ಊಟ ಮಾಡಿಕೊಂಡಿರು ಎಂದೇಳ್ತಾ ಇದ್ದ ಹಾಗೇ ಏನೋ ಮುಖಭಾವ ಕೋಪಕ್ಕೆ ತಿರುಗಿದಂತಾಗಿತ್ತು.. ನನಗೇ ಅದು ತಿಂದಿಲ್ಲಾ ಅಂದ್ರೇ ಹುಚ್ಚು ಹಿಡಿಯುತ್ತೇ... ತಂದುಕೊಡು ಇಲ್ಲಾ ಅಂದ್ರೇ "ನಿಮ್ಮ ಯಜಮಾನ ಇದಾರಲ್ಲಾ ಅವರಿಗೆ ಹೇಳಿ ತರಿಸಿಕೊಡು" ಎಂದ ಕೂಡಲೇ... "ನಾನು ದಂಗಾಗಿ ಹೋದೆ......!!!". ಸಾವರುಸಿಕೊಳ್ಳುತ್ತಲೇ............ ನೀನು ಕೆಲಸ ಮಾಡ್ತೀಯಲ್ಲಾ ಆ ಮನೆಯ ಯಜಮಾನರಿಗೆ ಹೇಳು.. ತರಿಸಿಕೊಡುವರು, ಅಯ್ಯೋ.. ಅದು ಯಾವ್ ಭಾಷೆ ತೂ.. ಬರೋದೇ ಇಲ್ಲ ನನ್ಗೆ ಅಂದಳು.. ಭಾಷೆ ಬರದೆ ಅರಬೀ ಮನೆಯಲ್ಲಿ ಆ ಮಗು ಜೊತೆ ಒಡನಾಟ, ಮನೆಮಂದಿಯೊಂದಿಗೆ ಮಾತುಕತೆ ಹೇಗಿರಬೇಕು ದೇವರೇ..!! ಇವಳು, ಎಂದು ಯೋಚಿಸ್ತಾ ನಿಂತೆ..!! 

ಏನು.... ಏನು ತಂದು ಕೊಡ್ತೀಯಾ..!!? ಎಂದು ಕೈ ಅಲ್ಲಾಡಿಸಿ ಕೇಳಿದರೆ ನನಗೆ ಉತ್ತರಿಸಲು ತೋಚಲೇ ಇಲ್ಲ..!! ಮನಸಲ್ಲೇ ನೂರಾರು ದ್ವಂದ್ವಗಳು.. ಅವಳ ನೋಡಿದರೆ ಪಾಪ ಎನಿಸುತ್ತೇ ಆದರೆ ಛೇ..!! ಈ ಕೆಟ್ಟ ಅಭ್ಯಾಸ ಎಲ್ಲಾ ಯಾಕೆ ಈ ಹುಡುಗೀಗೇ ಅಚ್ಚುಕಟ್ಟಾಗಿ ತಿಂದುಕೊಂಡಿರಬಾರದ ಅಥವಾ ಆ ಮನೆಯಲ್ಲಿ ಅವಳ ಹುಚ್ಚು ಹೆಚ್ಚಿಸುವಂತಾ ಘಟನೆಗಳು ನೆಡೆಯುತ್ತಾ ?. ಹೀಗೇ ಏನೇನೋ ಪ್ರಶ್ನೆಗಳು ನನ್ನೊಳಗೆ. ಒಬ್ಬ ಮನುಷ್ಯನನ್ನು ನೋಡಿ ಅವರು ಹೇಗೆ, ಏನೂ, ಎಂತವರು ಎಂದು ತೀರ್ಮಾನಿಸುವುದು ಬಹಳ ಕಷ್ಟದ ಕೆಲಸ. ಆದರೂ ನಾನು ಕೊನೆಗೂ ಅವಳ ಪ್ರಶ್ನೆಗೆ ಉತ್ತರಿಸಲೇ ಇಲ್ಲ ಮೌನವಾಗೇ ನಿಂತು ಬಿಟ್ಟೆ....!!!

ನಾನು ಈ ಹುಡುಗಿ ನೋಡಿದ್ದು ಆಗಷ್ಟೇ..?? ಯಾವುದೋ ಅರಬೀ ಮಗುವನ್ನು ಅಪಾರ್ಟ್ಮೆಂಟ್ ಮುಂದೆ ಆಟವಾಡಿಸುತ್ತಾ ಇದ್ದಳು. ನಾವಿರುವ ಅಪಾರ್ಟ್ಮೆಂಟ್ ನಲ್ಲಿ ಯಾರೂ ಪರಿಚಯ ಇಲ್ಲ, ಪಕ್ಕದ ಮನೆಯಲ್ಲಿ ಯಾರಿದ್ದಾರೋ ಎಂಬುದು ೬ ವರ್ಷ ಕಳೆದರೂ ಇನ್ನೂ ಗೊತ್ತಾಗಿಲ್ಲ. ಅಂತಹದರಲ್ಲಿ ಮಹಡಿ ಮೇಲೆ ಯಾವುದೋ ಮನೆ ಕೆಲಸದ ಹುಡುಗಿ ಇಷ್ಟು ಜೋರು ಮಾಡಿ ನಿನ್ನ ಗಂಡನಿಗೆ ಹೇಳಿ ತರಿಸಿಕೊಡು ಎಂದು ಹೇಳಬೇಕಾದರೆ "ಈ ಕಡ್ಡಿಪುಡಿಯೋ ಅಥವಾ ಆ ಮನೆಮಂದಿಯೋ ಎಷ್ಟು ಹುಚ್ಚು ಹಿಡಿಸಿರಬೇಡ....!!!???"


ನಿತ್ರಾಣದ ಆ ಕಣ್ಣುಗಳು ಹಂಬಲಿಸುತ್ತಿರುವುದು ಕಾಣುತ್ತಿದೆ...ಆದರೆ ತಂದುಕೊಡಲು ನನ್ನ ಮನಸ್ಸು ಒಪ್ಪುತ್ತಿಲ್ಲ..!! 

Tuesday, September 18, 2012

ನೆನಪಾಗ್ಯಾದಾ...!!!


ಕಳೆದ ಬಾರಿ ತವರಿಗೆ ಬಂದಿದ್ದ ಗಣಪ ಮತ್ತು ಅವರಮ್ಮ 
ಪೋಟೋ - ಮನುವಚನ್
----------

ನೆನಪಾಗ್ಯಾದಾ...!!!

ನನ್ನಪ್ಪ ನನ್ನಮ್ಮ..
ಕರೆ ಮಾಡಿ ಕರೆದ್ಯಾರ 
ಹೊಸ ಸೀರೆ ತಂದೀನಿ
ಕುಂಕುಮ ಅರಿಶಿನ-ಬಾಗೀನ
ಕೊಂಡೊಯ್ಯು ಬಾ ಎಂದಾರಾ...

ನನ್ನಣ್ಣ-ಅತ್ತಿಗೆ
ಮಾತಲ್ಲೇ ಬೈದಾರ
ಪ್ರತಿ ವರುಷ ಬರುವವಳು
ಈ ವರ್ಷ ಬಲು ಬೇಗ 
ಬಂದು ಹೊರೆಟೆಬಿಟ್ಟೆಯಲ್ಲಾ ಎಂದಾರಾ...

ನನ್ನಕ್ಕ-ಬಾವ
ಪ್ರತಿ ಸಲವು ಬಂದಾಗ
ಜೊತೆ ಜೊತೆಗೆ ಇದ್ದೇವು
ಹೋಳಿಗೆ ಹೂರಣದಿ
ನಿನ್ನ ನಗುವಾ ಕಂಡೇವು...

ಎಲ್ಲ ಪ್ರೀತಿ ಬೈಗುಳದಿ
ಊರ ಹಾದಿಯ ನೋಡುತ
ಮನಸ್ಯಾಕೋ ಒದ್ದಾಡಿ
ತವರೂರ ನೆನಸ್ಯಾದಾ..

ನಾನೊಬ್ಬ ಮಗಳೆಂದು
ಬಾವ ಕೊಡಿಸುತ್ತಿದ್ದ ಬಳೇ
ಅಣ್ಣ ಕೊಡುತಿದ್ದ ರೊಕ್ಕಾ
ಅಮ್ಮ ನೀಡುವ ಬಾಗಿನ
ಅಕ್ಕ ತೋರಿಸಿಕೊಡುವ ಪೂಜೆ
ಅತ್ತಿಗೆಯ ಕೈರುಚಿ ಅಡಿಗೆ
ಎಲ್ಲ ನೆನಪಾಗಿ 
ಕಣ್ಣು ಯಾಕೋ ಜಿನಿಗ್ಯಾದಾ..!!


ಎಲ್ಲರಿಗೂ ಗೌರಿ-ಗಣೇಶ ಹಬ್ಬದ ಶುಭಾಶಯಗಳು....

Thursday, September 6, 2012

ಮಿಥ್ಯದ ಹೂರಣ ಸತ್ಯದ ತೋರಣ...


ಬೆಂಗಳೂರಿಗೆ ಹೋಗಿದ್ದಾಗ ಒಂದಷ್ಟು ಪುಸ್ತಕಗಳನ್ನು ಗೀತಕ್ಕ ನನಗಾಗಿ ಓದಲು ಕೊಟ್ಟಿದ್ದರು. ನನಗೂ ಅವರ ಪುಸ್ತಕಗಳನ್ನು ಓದಬೇಕು ಎಂಬ ಆಸೆ ಬಹಳಷ್ಟಿತ್ತು.. ಅವರು ಸುಮಾರು ೧೦-೧೨(ಕರೆಕ್ಟ್ ಲೆಕ್ಕ ಬೇಕಂದ್ರೆ ಪೋಟೋ ನೋಡಿ) ಪುಸ್ತಕಗಳನ್ನು ಕೊಟ್ಟಿದ್ದರು ಇತ್ತೀಚೆಗೆ ಇವುಗಳಲ್ಲಿ ಯಾವುದು ಓದಲಿ ಎಂದು ಯೋಚಿಸುತ್ತಿದ್ದೆ ಆದರೂ ಅವುಗಳಲ್ಲಿ ಮಿಥ್ಯ ಕಥೆ ಯಾಕೋ ನನ್ನ ತಲೆಯಲ್ಲೇ ಗಿರಕಿ ಹೊಡೆಯುತ್ತಿತ್ತು.. ಎಲ್ಲರೂ ಈ ಪುಸ್ತಕ ಹಾಗಿದೆ ಹೀಗಿದೆ ಒಂದು ಗಂಡಿನ ಮನಸ್ಸನ್ನು ಅರಿತು ಬರೆದಿದ್ದಾರೆ ಎನ್ನುತ್ತಿದ್ದರು ನನಗೂ ಗಂಡಿನ ಮನದಾಳದ ಮಾತುಗಳನ್ನು ತಿಳಿಯುವ ಕುತೂಹಲದಲ್ಲಿ ಮಿಥ್ಯದ ಮೊದಲ ಪುಟ ತೆರೆಯುವ ಮುನ್ನ ಮುಖಪುಟದ ವಿನ್ಯಾಸದ ಹಿಂದಿನ ಅರ್ಥ ಹೆಣ್ಣು ಎತ್ತಲೋ ಮುಖ ಮಾಡಿದ್ದಾಳೆ ಗಂಡು ತಲೆಮೇಲೆ ಕೈಹೊತ್ತು ಕುಳಿತಿದ್ದಾನೆ... ಇಲ್ಲಿ ಗಂಡಿನ ಸಂಕಟ ಎದ್ದು ಕಾಣುತ್ತೆ ಹೆಣ್ಣು ಧೈರ್ಯದಿಂದಿದ್ದಾಳೆ ಎಂದೆನಿಸಿತು...ಮತ್ತೆ ಪುಟ ತಿರುಗಿಸುತ್ತಾ ನೆಡೆದಂತೆ ಮಿಥ್ಯದ ಬಾಗಿಲು ತೆರೆಯಿತು. 
ಚಿತ್ರ: ಮನುವಚನ್ 
ಕಾದಂಬರಿಯ ಮುಖ್ಯ ಪಾತ್ರಧಾರಿ ಪುರು (ಪುರುಷೋತ್ತಮ್) ಒಬ್ಬ ಮಧ್ಯಮ ವರ್ಗದ ಗಂಡು, ಅಪ್ಪ-ಅಮ್ಮ, ಹೆಂಡತಿ ಮಕ್ಕಳೊಂದಿಗಿನ ಸಂತೋಷದ ಜೀವನದಲ್ಲೂ ಕಾಣುವ ನೂರೆಂಟು ತುಮುಲ ಮನಸಿನ ಚಿತ್ರಣ. ವಿದ್ಯಾವಂತನಾಗಿ ನಾಲ್ಕಾರು ಜನರೊಂದಿಗೆ ಬೆರೆತು ಪ್ರಪಂಚದ ಜ್ಞಾನ ಉಳ್ಳವನೇ ಆದರೂ ಕೆಲವೊಮ್ಮೆ ತನ್ನ ಮನಸ್ಸಿನೊಳಗಿನ ಭಾವನೆಗಳಲ್ಲಿ ಕುಗ್ಗಿ ಹೋಗುತ್ತಾನೆ. ಇಲ್ಲಿ ಪುರು ತನ್ನ ಕಛೇರಿಯಲ್ಲಿ ಲೇಡಿ ಬಾಸ್ ನಿಂದ ಅನುಭವಿಸುತ್ತಿದ್ದ ಯಾತನೇ ಅನ್ನುವುದಕ್ಕಿಂತ ಒಂದು ರೀತಿ ಮುಜುಗರದ ಸಂಗತಿಗಳು ಸದಾ ಕಾಡುತ್ತಲೇ ಇದ್ದವು. "ಹೆಣ್ಣು ತಾನಾಗೇ ಬಯಸಿ ಬಂದರೆ ಯಾವ ಗಂಡು ಬಿಡುವುದಿಲ್ಲ" ಎಂಬುದು ಎಲ್ಲರ ಬಾಯಲ್ಲಿ ಬರುವ ಮಾತು... ಆದರೆ ೪೦ರ ಹರಯದ ಹೆಣ್ಣು ಗಂಡ ಎಲ್ಲೋ ದೂರದ ದೇಶದಲ್ಲಿದ್ದಾನೆ ಬೆಳೆದು ನಿಂತ ಮಗ ಅವನದೇ ಪ್ರಪಂಚದಲ್ಲಿದ್ದಾನೆ. ಇನ್ನು ಇವಳದು ಎಂಬ ಬದುಕು ಶೂನ್ಯತೆಯಲ್ಲಿ ತುಂಬಿದೆ. ದೂರದಲ್ಲಿ ನೆಲೆಸಿರೋ ಗಂಡ ಒಲ್ಲದ ಗಂಡನೂ ಸಹ ಆಗಬಹುದು...  ಎಲ್ಲೋ ಇರುವ ಗಂಡನನ್ನು ಕಾಯುತ್ತ ತನ್ನ ದಿನ ಜೀವನದಲ್ಲಿನ ಬಣ್ಣದ ಬದುಕನ್ನು ತನ್ನದೇ ನಿಟ್ಟಿನಲ್ಲಿ ಸೃಷ್ಟಿಸಿಕೊಳ್ಳ ಹೊರಡುತ್ತಾಳೆ.  ಈ ಬಣ್ಣದ ಬದುಕಿಗೆ ಬಣ್ಣ ಹಚ್ಚುವವ ಪುರುಷೋತ್ತಮನೇ ಯಾಕಾಗಬಾರದು ಸ್ಪುರದ್ರೂಪಿ, ಸಾಧುವಿದ್ದಂತೆ, ಮೊದಲೇ ಕಲೆಗಾರ ಚಿತ್ರ ಬಿಡಿಸುವವ ನನ್ನ ಬದುಕಿಗೆ ಬಣ್ಣ ಬಳಿಯಲಾರನೇ ಎಂಬ ಮನಸ್ಥಿತಿಯಲ್ಲಿರುವ ಬಾಸ್ ಪ್ರತಿಭಾ ಸದಾ ಪುರುಷೋತ್ತಮನತ್ತಲೇ ಒಲವು.. ಕಾಫೀ, ಟೀ ನೆಪವೊಡ್ಡಿ ಕರೆದೊಯ್ಯುವುದಲ್ಲದೇ ಕಛೇರಿಯಲ್ಲಿ ತಡವಾಗಿ ಹೋಗುವಂತೆ ಕೆಲಸಗಳ ಹೊರೆಯೊರಿಸುವ ಈ ಬಾಸ್ ಪ್ರತಿಭಾಳನ್ನು ಎದುರಿಸುವ ಶಕ್ತಿ ಇವನಲ್ಲಿ ಇಲ್ಲದಾಯಿತು.
ಚಿತ್ರ: ಸ್ಕಾನರ್ 7425 :)

ಗಂಡಸು ಕಛೇರಿಯಲ್ಲಿನ ಏರುಪೇರಿನಲ್ಲೂ ಮನೆಗೆ ಬಂದಾಗ ಮನೆಯಲ್ಲೂ ಸಮಾಧಾನವಿಲ್ಲದಿದ್ದರೆ ಖಂಡಿತ ಅವನ ಜೀವನ ಅಯೋಮಯ... ಇಲ್ಲಿ ಪುರುವಿನ ಪರಿಸ್ಥಿತಿಯೂ ಹಾಗೆ ಕಲೆಗಾರನಾಗಿ ಪ್ರತಿಭಾಳ ಚಿತ್ರ ಬಿಡಿಸಿದ..!! ಇಲ್ಲಿ ಅವನ ಹೆಂಡತಿ ಇವನ ಗ್ರಹಚಾರ ಬಿಡಿಸಿದಳು. ಅಪ್ಪ, ಅಮ್ಮನ ಮನಸಿನಲ್ಲೂ ಪ್ರಶ್ನೆಗಳು ಹುಟ್ಟುವಂತಾದವು ಇಂತಹ ಸಂದರ್ಭದಲ್ಲಿ ಬಾಸ್ ಮತ್ತು ಇವನ ಏಕಾಂತದಲ್ಲಿ ನೆಡೆದ ಸಂಭಾಷಣೆ.. ಸೆಕ್ಷುಯಲ್ ಹೆರಾಸ್ ಮೆಂಟ್ ಕೇಸ್ ಜಡಿದ ಕಾರಣಕ್ಕೆ ಪುರುಷೋತ್ತಮನನ್ನೇ ಜೈಲಿಗೆ ಕಳುಹಿಸುವತ್ತ ಸಾಗಿದ ಕಥೆ ಮುಂದೇನಾಗುತ್ತೇ ಎಂಬ ಭಯ ಕುತೂಹಲ..!!??.. ಇಲ್ಲಿ ಗೀತಾರವರು ಸಮರ್ಥವಾಗಿ ಪುರೋಷತ್ತಮನ ಮನದಾಳವನ್ನು ತುಂಬಾ ಮನೋಘ್ನವಾಗಿ ಬಿಂಬಿಸಿದ್ದಾರೆ. ಹೆಣ್ಣು ಭೋಗದ ವಸ್ತು ಎಂಬುದು ಅವನ ಭಾವನೆಯಾಗಿರಲಿಲ್ಲ ಆದರೂ ಅವನ ಜೈಲಿಗೆ ಹೋಗುವ ಸಮಯದಲ್ಲಿ ಸಹಕರಿಸಿದ್ದು ಸಹೋದ್ಯೋಗಿಗಳು. ಇಲ್ಲಿ ಇವನ ಸಹಕಾರಕ್ಕೆ ನಿಂತಿದ್ದು  ಹೆಂಗಳೆಯರೇ ಹೆಚ್ಚು.

ಗಂಡ ಜೊತೆಯಲಿಲ್ಲದಿದ್ದರೆ ಎಷ್ಟೋ ಹೆಣ್ಣು ಮಕ್ಕಳು ಆಮಿಷ ಅಥವಾ ಮೋಹದ ಜಾಲದಲ್ಲೋ ಬಿದ್ದುಬಿಡುವ ಸಾಧ್ಯತೆಗಳು ಹೆಚ್ಚು ಎಂಬುದು ಇಲ್ಲಿ ಒತ್ತಿ ಒತ್ತಿ ಹೇಳಿದಂತಿದೆ. ಮತ್ತೊಬ್ಬ ರವಿ ಎಂಬುವವ ದುಬೈನಲ್ಲಿ ನೆಲೆಸಿರುತ್ತಾನೆ ಇತ್ತ ಅವನ ಹೆಂಡತಿ(ಸುಕನ್ಯಾ) ಯಾವುದೋ ಪ್ರೀತಿ ಆಮಿಷಕ್ಕೆ ಬಿದ್ದು ತನ್ನ ಚಿಕ್ಕ ಮಗುವನ್ನು ಬಿಟ್ಟು ಹೋಗುತ್ತಾಳೆ... ಇಲ್ಲಿ ಕರುಳ ಬಳ್ಳಿಗೂ ಬೆಲೆಯಿಲ್ಲದಂತಾಯಿತು. ಇಷ್ಟೆಲ್ಲಾ ನೆಡೆದರೂ ಆಕೆಯ ಗಂಡ ಮಾತ್ರ ಒಂದು ಪ್ರಬುದ್ಧ ಸ್ಥಾನದಲ್ಲೇ ಉಳಿಯುತ್ತಾನೆ ಮರಳಿ ಸುಕನ್ಯಾ ಬರುವುದಾದರೆ  ಸ್ವೀಕರಿಸಲೂ ಸಿದ್ಧನಾಗಿರುತ್ತಾನೆ.

ಇಲ್ಲಿ ಪುರುಷೋತ್ತಮ ತಂದೆ ತನ್ನ ಏಕಮಾತ್ರ ಆಸ್ಥಿಯನ್ನು ಮಗಳಿಗೆ ಅಫಿಡವಿಟ್ ಮಾಡಿರುವಾಗಲೇ ಇದ್ದ ಇಬ್ಬರು ಹೆಣ್ಣು ಮಕ್ಕಳು ಮನೆಯ ಬೆಲೆ ಕಟ್ಟುವುದು ನೋಡಿ.. ನಾನೆಲ್ಲಿ ನನ್ನ ಆಸ್ತಿಯಲ್ಲಿ ಮೂರು ಮಕ್ಕಳಿಗೂ ಭಾಗ ನೀಡಿ ಅದರಂತೆ ಅಮ್ಮ ಅಪ್ಪನೂ ಮೂರು ಭಾಗಗಳಂತೆ ವಿಗಂಡಿಸಿ ಬಿಡುವರೋ ಎಂದು ಮನಸಿನಲ್ಲೇ ತೋಯ್ದಾಡುತ್ತಿದ್ದರೆ.. ಇಲ್ಲಿ ಮಗ ಮತ್ತು ವಯಸ್ಸಾದ ತಂದೆಯ ನಡುವಿನ ಸಂಭಾಷಣೆ  ಒಂದು ರೀತಿ ಪ್ರೀತಿಯ ಬೆಸುಗೆ ಅದು ಎಂದೂ ಬಿಡಿಸಲಾರದ ಸಂಬಂಧವನ್ನು ಕಲ್ಪಿಸಿಕೊಂಡರೇ ಸುಖವೆನಿಸುತ್ತೆ... ಅಪ್ಪ ಮಗನ ಬಾಂಧವ್ಯಕ್ಕೆ ಆಸ್ತಿ ಮತ್ತು ಹೆಣ್ಣು ಮಕ್ಕಳೊಡನೆ ನೆಡೆಯುವ ಜಟಾಪಟಿ ಎನ್ನುವುದಕ್ಕಿಂತ ತೋಳಲಾಟವನ್ನು ಮಗ ಎಷ್ಟು ಚೆನ್ನಾಗಿ ನಿಭಾಯಿಸುತ್ತಾನೇ ಎಂಬುದನ್ನು ಓದುವ ಆತುರ ಅಷ್ಟರಲ್ಲಿ ಇದ್ದಕ್ಕಿದ್ದಂತೆ ಎಂದೂ ಹೋಗದ ಈ ಕರೆಂಟ್ ತಟ್ಟ್ ಎಂದು ಕತ್ತಲನ್ನು ಕವಿಸಿಬಿಟ್ಟಿತ್ತು... ನಾನು ಓದುವ ಪುಸ್ತಕಕ್ಕೆ ಕತ್ತಲು ಕವಿದಂತೆ ಮಾಡಿದ ಹಾಗೆ ಪುರುಷೋತ್ತಮನ ಜೀವನದಲ್ಲೂ ಕತ್ತಲು ಬರುವುದೇನೋ ಹೆಣ್ಣು ಮಕ್ಕಳು ಅಪ್ಪನ ವಿರುದ್ಧ ನಿಲ್ಲುವರೇನೋ, ಸೊಸೆಯಾದ ಜಾನಕಿ ಮನಸ್ಸು ಕೆಡಿಸಿಕೊಂಡು ಸಂಸಾರ ಇಬ್ಬಾಗವಾಗುವುದೇನೋ ಎಂಬ ದ್ವಂದ್ವದಲ್ಲಿದ್ದೆ ಆದರೂ ಮೊಬೈಲ್ ನಲ್ಲಿದ್ದ ಲೈಟ್ ಆನ್ ಮಾಡಿ ಪೂರ್ಣ ಕಥೆಯನ್ನು ಒಂದೇ ಉಸಿರಿಗೆ ಓದಿಬಿಟ್ಟೆ..
ಕಥೆಯ ಮುಕ್ತಾಯ ಬಹಳ  ಇಷ್ಟವಾಯಿತು. ಈ ಕಥೆ ಓದುವವ ಅವನ ಮನೋಭಾವನೆ ಕೆಟ್ಟದ್ದಾಗಿದ್ದರೂ ಹೌದು..!! ನಾನು ಹೀಗಿರಬಾರದು ನನ್ನಲ್ಲೂ ಬದಲಾವಣೆ ಬೇಕು ಎಂದು ಬಯಸುತ್ತಾನೆ. ನಾನು ಅಲ್ಲಿನ ಪಾತ್ರಗಳಲ್ಲಿ ಒಬ್ಬಳಾಗಿ ತಲ್ಲೀನಳಾಗಿದ್ದೆ... ಹಾಗೇ ಪುರುಷೋತ್ತಮನಂತೆಯೇ ನನ್ನ ಅಣ್ಣ, ಗಂಡ, ಅಪ್ಪ, ಭಾವ ಎಲ್ಲರೂ ಇರಬಹುದು ಅಂತೆಯೇ ಇಲ್ಲಿನ ಹೆಣ್ಣನ ಪಾತ್ರಧಾರಿಗಳೂ ನಮ್ಮ ಸುತ್ತಲೇ ಇರಬಹುದು ಎಂಬಂತೆ ಭಾಸವಾಯಿತು.  ಹೆಣ್ಣಾಗಿ ನಾವು ಧೋರಣೆಗಳನ್ನು ಮಾಡುವವರ ವಿರುದ್ಧ ಹೋರಾಡಬೇಕು, ಹೆಣ್ಣು ಎಂದ ಕೂಡಲೇ ಸರ್ಕಾರ ಸವಲತ್ತು, ಅಥವಾ ಕೋರ್ಟ್-ಕಚೇರಿಗಳಲ್ಲಿ ಹೆಣ್ಣಿನ ಪರವಾಗೇ ಕಾನೂನುಕಟ್ಟಳೆಗಳು ಇರಬಹುದು ಆದರೆ ಅದನ್ನು ಸದುಪಯೋಗ  ಪಡಿಸಿಕೊಳ್ಳಬೇಕೆ ವಿನಃ ದುರುಪಯೋಗ ಪಡಿಸಿಕೊಳ್ಳಬಾರದು.

ಇದು ನಾಯಕ ಪ್ರಧಾನ ಕಾದಂಬರಿ. ಹೆಣ್ಣು ಗಂಡಿನ ಮನದಾಳದಲ್ಲಿಳಿದು ಹೀಗೂ ನೆಡೆಯುತ್ತದೆ ಎಂದು ತೋರಿಸಿರುವ ಕಥೆ. ಅಂತೆಯೆ.... Feminist  ಆಗುವ ಬದಲು Humanist ಆದರೆ ಒಳ್ಳೆಯದು ಎಂಬುದನ್ನ ಹೇಗೆ ಬಿಂಬಿಸಿದ್ದಾರೆ ಎಂದು ಮಿಥ್ಯಾ ಕಾದಂಬರಿಯನ್ನು ಓದಿದರೆ ನಿಮಗೇ ತಿಳಿಯುತ್ತದೆ...

ಮಿಥ್ಯ.. ಮಿಥ್ಯ...ಮಿಥ್ಯ.. ಕಾದಂಬರಿಯ ಪಾತ್ರಗಳೆಲ್ಲವೂ ನಮ್ಮ ನಿಮ್ಮ ನಡುವೆ ಬಂದುಹೋಗುವುದಂತೂ ಸತ್ಯ.. ಸತ್ಯ.. ಸತ್ಯ...

ಧನ್ಯವಾದಗಳು ಗೀತಕ್ಕ ನನಗೆ ಒಳ್ಳೊಳ್ಳೆ ಪುಸ್ತಕಗಳನ್ನು ಕೊಟ್ಟಿರಿ.. ಆದಷ್ಟು ಬೇಗ ಮಿಕ್ಕುಳಿದ ಪುಸ್ತಕಗಳನ್ನು  ಓದಿ ಮುಗಿಸುವೆ. 

Monday, September 3, 2012

ಹಳಿ ತಪ್ಪಿದ ಕರುಳ ಬಳ್ಳಿ...


ನನ್ನ ಪಕ್ಕದಲ್ಲಿ ಕುಳಿತವರು ನನ್ನ ಮಗನಿಗೆ ಐಸ್ ಕ್ರೀಂ ಕೊಡಿಸುವುದಾಗಿ ಬಲವಂತದಿ ಕರೆದೊಯ್ದಿದ್ದರು...ತುಮಕೂರಿನ ರೈಲ್ವೇ ನಿಲ್ದಾಣದಲ್ಲಿ ಕಿಟಿಕಿಯಾಚೆ ಕಣ್ಣಾಡಿಸಿದೆ ಮಗ ಐಸ್ ಕ್ರೀಂ ತಿನ್ನುತ್ತ ಅಲ್ಲೇ ಇದ್ದ ಕಲ್ಲು ಬೆಂಚಿನ ಮೇಲೆ ಕುಳಿತಿದ್ದ, ಪಕ್ಕದಲ್ಲಿ ಕುಳಿತವರು ಸಹ ಅವನೊಟ್ಟಿಗೆ ಏನೋ ಬಾಯಾಡಿಸುತ್ತಿದ್ದರು ನಾನು ಇದ್ದಾನೇ ಕಣ್ಣಿನ ಆಸುಪಾಸಲ್ಲೇ ಎಂದು ಕೈನಲ್ಲಿದ್ದ ಗೀತಾ ಬಿ.ಯು ರವರ ಮಿಥ್ಯಾ ಪುಸ್ತಕವನ್ನು ಓದಲು ಮುಂದಾದೇ.. ತೀವ್ರ ಮೌನದಲ್ಲೇ ಒಂದು ಗಂಡಿಗೂ ತನ್ನದೇ ಆದ ಭಾವನೆಗಳು ಹೇಗಿರುತ್ತದೆ ಎಂದು ಕಥೆಯೊಟ್ಟಿಗೆ ನಾನೂ ಮೆಲುಕು ಹಾಕುತ್ತ ಹೊರಟೆ.... ಓದುವುದರಲ್ಲಿ ಮಗ್ನಳಾದವಳಿಗೆ ರೈಲು ತನ್ನ ಹಳಿ ಬಿಟ್ಟು ಸಾಗುವವರೆಗೂ ಗೊತ್ತೇ ಆಗಲಿಲ್ಲ ಮಗ ಇನ್ನೂ ರೈಲಿಗೆ ಬಂದಿಲ್ಲವೆಂದು..!! ತಕ್ಷಣ ಕಿಟಕಿಯತ್ತ ನೋಡಿದೆ ಅಮ್ಮಾ... ಅಮ್ಮಾ..!! ಎಂದು ಕಿರುಚುತ್ತ ಕೈನಲ್ಲಿದ್ದ ಐಸ್ ಕ್ಯಾಂಡಿಯನ್ನು ರಪ್ಪನೆ ಎಸೆದು ಓಡೋಡಿ ಬರುವ ಕಂದನ ಕಂಡು ಎದೆ ಝಲ್ ಎಂದಿತ್ತು... ಅಯ್ಯೋ ಕಂದಾ...ಅಯ್ಯೋ ಕಂದಾ...ಇನ್ನೂ ನೀನು ಹತ್ತಿಲ್ಲವೇ ಬೇಗ ಓಡಿ ಬಾ..  ಬಾಗಿಲಿನತ್ತ ಓಡಿದೆ.... ಮಗನನ್ನು ಕರೆದೊಯ್ದವರೂ ಓಡೋಡಿ ಬರುತ್ತಿದ್ದರು... ನನ್ನ ಮಗನನ್ನು ಕೈಹಿಡಿದು ಕರೆದುಕೊಂಡು ಬನ್ನಿ ನಾನು ಹತ್ತಿಸಿಕೊಳ್ಳುವೆ ಎಂದು ಕಿರುಚಿ ಹೇಳಿದರೂ ಅವರು ನನ್ನ ಮಾತು ಕೇಳುವುದರಲ್ಲೇ ಇರಲಿಲ್ಲ... ಓಡಿ ಬಂದವರು ಗಾಬರಿಯಲ್ಲಿ ರೈಲು ಹತ್ತಿಬಿಟ್ಟಿರು..... 

ನನಗೋ ಈ ಮನುಷ್ಯ ಹತ್ತಿ ಬಂದನಲ್ಲ ನನ್ನ ಮಗನನ್ನು ಕರೆತರಲಿಲ್ಲ... ಎಂದುಕೊಳ್ಳುವಷ್ಟರಲ್ಲಿ ರೈಲು ರಭಸಕ್ಕೆ ತಿರುಗಿತು ಹೋ..!! ಜನರೆಲ್ಲಾ ಜೋರು ಧ್ವನಿಯಲ್ಲಿ ಅಯ್ಯೋ ಮಗು, ಅಯ್ಯೋ ಮಗು ಎನ್ನುತ್ತಿದ್ದಾರೆ...ಇನ್ನು "ಮಗ ಕೈ ತಪ್ಪಿದ" ಎಂಬ ಗಾಬರಿಯಲ್ಲಿ ನಾನು ರೈಲಿಂದ ಆಚೆ ಹಾರಲು ಯತ್ನಿಸುವಷ್ಟರಲ್ಲೇ.. ಹಿಂದಿನಿಂದ ಯಾರೋ ನನ್ನ ತೋಳನೆಳೆದರು, ಮಗ ಓಡಿ ಬರುತ್ತಿದ್ದ ರಭಸವನ್ನೇ ದಿಟ್ಟಿಸುತ್ತಿದ್ದೇ... ರೈಲ್ವೇ ನಿಲ್ದಾಣದ ಆಸುಪಾಸು ಬಿಟ್ಟು ಮಗ ಆಗಲೇ ಮುಂದೆ ಬಂದಿದ್ದ, ಜಲ್ಲಿ ಕಲ್ಲುಗಳ ಮೇಲೆಯೇ ಓಡಿ ಬರುವುದು ಕಾಣುತ್ತಿದೆ... ಕಾಂಗ್ರೆಸ್ ಗಿಡಗಳು ಸುತ್ತುವರಿದಿವೆ ಅವನ ಅರುಚಿವಿಕೆ ನನ್ನ ಕಿವಿಗೆ ಕೇಳುತ್ತಿಲ್ಲ.. ನನ್ನ ಕಣ್ಣು ಒಂದೇ ಸಮನೇ ಜೋಗ್ ಜಲಪಾತವಾಗಿಬಿಟ್ಟಿದೆ.... ಈ ಮನುಷ್ಯ ಕರೆದುಕೊಂಡೋದವ ಕರೆತರುವುದ ಬಿಟ್ಟು ಎಂತಾ ಕೆಲಸ ಮಾಡಿದ, ಈಗ ಏನು ಮಾಡಲಿ, ಹೇಗೆ ಮಗನನ್ನ ಮತ್ತೆ ಸೇರಲಿ.. ಎಷ್ಟು ಭಯ ಪಟ್ಟಿದೆಯೋ ನನ್ನ ಕೂಸು, ಮುಂದೇನು ಮಾಡುವನೋ ದೇವರೇ ಕಾಪಾಡಪ್ಪ.....  


ನನ್ನನ್ನೇ ನೋಡುತ್ತಿದ್ದ ಬೋಗಿಯ ಜನ... ಆ ಮನುಷ್ಯನನ್ನೇ ನಿಂದಿಸುತ್ತಿದ್ದರು.. ಇತ್ತ ಆ ಮನುಷ್ಯ ನನ್ನ ಪಾದವಿಡಿದು ನನ್ನನ್ನು ಕ್ಷಮಿಸಿ ನಿಮ್ಮ ಮಗ ನನ್ನಲ್ಲಿ ಎಷ್ಟು ಬೇಗ ಹೊಂದುಕೊಂಡುಬಿಟ್ಟ ನನಗೆ ಮಕ್ಕಳಿದಿದ್ದರಿಂದ ಪ್ರೀತಿ ಹೆಚ್ಚಾಗಿ ಅವನಿಗೆ ತಿಂಡಿ ಕೊಡಿಸಲು ಕರೆದುಕೊಂಡೋದೆ. ಕ್ಷಮಿಸಿ ಮೇಡಮ್.. ಕ್ಷಮಿಸಿ ಮೇಡಮ್... ಎಂದು ಒಂದೇ ಸಮನೆ ರೋಧಿಸುತ್ತಿದ್ದಾನೆ.. ನಾನು ಹೇಳುವುದಿನ್ನೇನು.."ಕ್ಷಮಿಸಲೇನಿದೇ ನನ್ನನ್ನು ನನ್ನ ಪಾಡಿಗೆ ಬಿಟ್ಟು ಬಿಡಿ" ಎಂದು ಕೋಪದ ಜೊತೆಗೆ ನನ್ನ ಮೇಲೆ ಬೇಸರವಾಗುತಿತ್ತು. ಈ ಪುಸ್ತಕ ಆಮೇಲೆ ಓದಿದ್ದರೇ ಸಾಕಾಗಿತ್ತು ಇಲ್ಲವೇ ಮಗ ಒಳಗೆ ಬಂದ ಮೇಲೆ ಓದಿದ್ದರೆ ಆಗುತ್ತಿತ್ತು.... ಎಂದು ನನ್ನನ್ನು ನಾನೇ ಶಪಿಸಿಕೊಳ್ಳುತ್ತ ಅಲ್ಲೇ ನೆಲದ ಮೇಲೆ ಕುಸಿದುಬಿದ್ದೆ... ಯಾರೋ ಏನೋ ಹೇಳಿದ್ದು ಕೇಳಿಸಿತು "ಮುಂದಿನ ನಿಲ್ದಾಣದಲ್ಲಿ ಇಳಿದು ತುಮಕೂರಿಗೆ ಹೋಗಿ ನೋಡಿ", ಇನ್ನೊಬ್ಬರು ಇಲ್ಲೇ "ರೈಲ್ವೇ ಕ್ರಾಸಿಂಗ್ ಇರುತ್ತೆ ಸ್ವಲ್ಪ ಹೊತ್ತು ನಿಲ್ಲಿಸಿರುತ್ತಾರೆ ಇಲ್ಲಿಯೇ ಇಳಿದು ಹೋಗಿ" ಎಂದರು.... ನನಗೆ ಆಗ ಸ್ವಲ್ಪ ಧೈರ್ಯ ಬಂದಂತಾಗಿತ್ತು.. ಹತ್ತಿರವೇ ಕ್ರಾಸಿಂಗ್ ಇರೋದರಿಂದ ಇಳಿದು ಹೋಗೋಣ ಎಂದುಕೊಳ್ಳುವಷ್ಟರಲ್ಲಿ ಮತ್ತೊಬ್ಬರು ಇಲ್ಲಾ... ಈ ರೈಲು ಮುಂದೆ ಬೆಂಗಳೂರಿನ "ಯಶವಂತಪುರ" ಬಿಡುವವರೆಗೂ ನಿಲ್ಲಿಸುವುದೇ ಇಲ್ಲಾ... "ಧಸಕ್ ಎಂದಿತು ಜೀವ"..!!! 


ಮತ್ತೇನು ಮಾಡುವುದು ಹಳಿ ತಪ್ಪಿಸಲೇ, ರೈಲಿಂದ ಹಾರಲೇ.. ಈಗಾಗಲೇ ನನ್ನ ಕರುಳ ಬಳ್ಳಿ ಹಳಿ ತಪ್ಪಿದೇ, ಇಷ್ಟು ಜನರು ಇದ್ದಾರೆ ಅವರಿಗೆಲ್ಲಾ ಯಾವ ಯಾವ ಕೆಲಸಗಳು ಇದ್ದಾವೋ ಏನು ಕಥೆಯೋ ಮತ್ತಾವ ಹಳಿ ತಪ್ಪಿಸಲಿ.. ದೇವರೇ ನನಗೆ ಯಾವುದಾದರೊಂದು ದಾರಿ ತೋರಿಸಪ್ಪ ನನ್ನೊಳಗಿನ ನಿಟ್ಟುಸಿರೆಲ್ಲ ಕಂಬನಿಯಧಾರೆಯಾಗಿತ್ತು. ನಾನು ಜೀವಂತ ಇರುವ ಹಾಗಿದೆಯೇ, ಇರುವ ಒಬ್ಬ ಮಗನನ್ನು ಬಿಟ್ಟು ಮತ್ತೇನು ಮಾಡಲಿ, ಮುಂದಿನ ಬದುಕು ಹೇಗೆ.. ಮಗ ಅಷ್ಟು ದೂರ ಓಡೋಡಿ ಬಂದ.. ತಿರುಗಿ ನಿಲ್ದಾಣಕ್ಕೆ ಹೋದನೋ ಇಲ್ಲವೋ... ಯಾರಾದರು ಕರೆದುಕೊಂಡು ಹೋಗಿಬಿಟ್ಟರೆ ಏನು ಮಾಡಲಿ ತಂದೆ..!! ದೇವರಲ್ಲಿ ಅಂಗಾಲಾಚಿ ಬೇಡುತ್ತಿದ್ದನ್ನು ಕಂಡ ರೈಲಿನ ಜನ... ಎಲ್ಲರೂ ಮಮ್ಮಲ ಮರುಗಿದರು ಎಲ್ಲರೂ ನನ್ನೊಟ್ಟಿಗೆ ಅವರೂ ದುಃಖಿಸಿದರು... ತೋಚದಾಯಿತು...!!?? ಮತ್ತೆ ಬಾಗಿಲ ಹತ್ತಿರ ಹೋಗಿ ದಿಟ್ಟಿಸಿ ನೋಡುತ್ತಲೇ ಇದ್ದೇ... ಓಡುವ ರೈಲಿನಿಂದ ಹಾರಿ ಬಿಟ್ಟಾಳು ಎಂದು ಒಂದಿಬ್ಬರು ನನ್ನ ಹಿಡಿದಿದ್ದರು.... ಇತ್ತ ಯಾವುದೋ ಶಬ್ದ ಟ್ರ್ ಣ್ ಟ್ರ್ ಣ್ ಎನ್ನುತ್ತಿದೆ... ಓಹೋ..! ದೇವರು ದಾರಿಬಿಟ್ಟ.. ಈಗ ರೈಲು ಯಾವುದೋ ಕಾರಣಕ್ಕೆ ನಿಲ್ಲಿಸುತ್ತಾರೇನೋ ಎಂದು ಮಗ್ಗುಲು ಬದಲಿಸುತ್ತ ಕಣ್ಣು ತೆರೆದು ನೋಡಿದರೆ ಬೆಳಗಿನ ಜಾವ ೫.೩೦ ಆಗಿತ್ತು..!!

ಚಿತ್ರ  @ ಶಿವುಲೋಕ..