Monday, November 15, 2010

ಕಡಲ ಅಬ್ಬರದಲಿ ಕೃಷ್ಣದೇವರಾಯ ದರ್ಬಾರು.

ಬಿಸಿಲ ಬಿಸಿ ಮುಗಿದು ತಣ್ಣನೆ ತಂಗಾಳಿ ಬೀಸುತ್ತಿರುವ ಸಮಯ ಉಸುಕಿನ ನಗರಿಯಲ್ಲಿ..... ಇದೇ ಶುಕ್ರವಾರ 12-11-10 ರಂದು ಸಂಜೆ ಅದೇ ತಂಪು ಗಾಳಿಯನ್ನು ವಿಹರಿಸುತ್ತ ಸಂಜೆ ಸುಮಾರು 3 ಗಂಟೆಗಾಗಲೇ ಜನಗಳ ಹಿಂಡು ಸಾಲುಸಾಲಾಗಿ ರಂಗು ರಂಗಿನ ರೇಷ್ಮೆ ಸೀರೆ ತೊಟ್ಟ ಹೆಂಗಳೆಯರು ಅವರ ಜೊತೆ ಸಾಥ್ ನೀಡಿದ್ದ ಗಂಡಸರು ನಗು ಮೊಗದಿ ಲಘುಬಗೆಯಲಿ ಅಮ್ಮ ಅಪ್ಪನ ಕೈ ಹಿಡಿದು ಮುನ್ನುಗ್ಗಿತ್ತಿದ್ದ ಪುಟ್ಟ ಚೇತನಗಳು ಬರುತ್ತಲೇ ಹವಲ್ಲಿಯಲ್ಲಿನ ಅಮೇರಿಕನ್ ಇಂಟರ್ನ್ಯಾಷನಲ್ ಶಾಲೆಯ ಸಭಾಂಗಣಕ್ಕೆ ಮೆರುಗು ನೀಡಿದರು....


ಅತ್ತ ಜನಜಂಗುಳಿ ನೆರೆಯುತ್ತಲಿದ್ದಂತೆ ಇತ್ತ ಭಾರತ ದೇಶದ ರಾಯಭಾರಿಯಾಗಿ ಕಾರ್ಯ ನಿರ್ವಹಿಸುತ್ತಲಿರುವ ಅಜಯ್ ಮಲ್ಹೋತ್ರ ಮತ್ತು ಅವರ ಪತ್ನಿಯೊಂದಿಗೆ ಬರುತ್ತಲಿದ್ದಂತೆ ಅನಿವಾಸಿ ಭಾರತೀಯರ, ಕರ್ನಾಟಕ ಉಪಾಧ್ಯಕ್ಷರಾದಂತ ಕ್ಯಾ. ಗಣೇಶ್ ಕಾರ್ಣಿಕ್ ಇವರೆಲ್ಲರೂ ವೇದಿಕೆಯನ್ನು ಅಲಂಕರಿಸುತ್ತಲಿದ್ದಂತೆ ಕೂಟದ ಪುಟ್ಟ ಮಕ್ಕಳಿಂದ ಎಲ್ಲಾದರು ಇರು ಎಂತಾದರು ಇರು ಹಾಡಿನ ರೂಪಕದಿ ಆರಂಭಿಸಿದರು. ಗಣ್ಯರು ವೇದಿಕೆಗೆ ದೀವಿಗೆಯ ಶಕ್ತಿ ನೀಡಿ, ಕೂಟದ ಪತ್ರಿಕೆಯಾದ ಮರಳಮಲ್ಲಿಗೆ ಮತ್ತು ನೆನಪಿನ ಸಂಚಿಕೆಯನ್ನು ಬಿಡುಗಡೆ ಮಾಡಿದ ನಂತರ ಕೂಟದ ಬೆಳ್ಳಿ ಹಬ್ಬದ ನೆನಪಿಗಾಗಿ ಸಂಗ್ರಹಿಸಿದ್ದ ದೇಣಿಗೆಯನ್ನು ಬೆಂಗಳೂರಿನ ಅರುಣ ಚೇತನ ಶಾಲೆಗೆ ಕೊಡುಗೆಯಾಗಿ ನೀಡಲಾಯಿತು. ವೇದಿಕೆಯಲ್ಲಿ ನಿಂತು ಹಲವು ಅನಿಸಿಕಾಲಹರಿಗಳನ್ನು ನಮ್ಮೊಟ್ಟಿಗೆ ಹಂಚಿಕೊಂಡು ಮುಂದಿನ ಕಾರ್ಯಕ್ರಮಗಳಿಗೆ ಅನುವು ಮಾಡಿಕೊಟ್ಟರು.....


ಇಲ್ಲೇ ನೋಡಿ ಬದಲಾವಣೆಯ ಹಾದಿ ಹಿಡಿದಿದ್ದು.... ನಾವೆಲ್ಲ ಕುವೈತಿನಲ್ಲಿದ್ದೀವಿ ಇಲ್ಲಿನ ಜನರೇ ಆಗಮಿಸಿ ಮರುಭೂಮಿಯ ವಾಸನೆಯಲ್ಲೇ ಇರುವೆವು ಎಂದುಕೊಳ್ಳುತ್ತಲಿದ್ದಂತೆ ಒಂದೇ ಭಾರಿಗೆ ಕಡಲನ್ನು ದಾಟಿ ಹಂಪಿ ನಗರಕ್ಕೆ ಇಳಿದುಬಿಟ್ಟಂತಾಯಿತು..........


ಮರುಭೂಮಿಯಿಂದ ಹಂಪಿ ವೈಭವಕ್ಕೆ ತೆರಳಲು ಪರಿಕಲ್ಪಿಸಿದ್ದು ಶ್ರೀಮತಿ ಕವನ ಹರ್ಷ ರಾವ್. ಅವರು ನಿರ್ದೇಶಿಸಿದ ರಾಜವೈಭವದಲ್ಲಿ ನಾವಂತು ಮಿಂದೆವು........

ಆ ಮುಸಂಜೆಯ ನೇಸರನೂ ನಾಚುವಂತೆ ಹಂಪಿಯ ನಗರಿ ಸಜ್ಜುಗೊಂಡಿತ್ತು..... ಕರ್ನಾಟಕದ ಇತಿಹಾಸದಲ್ಲಿ ಹಲವಾರು ರಾಜಮನೆತನಗಳು ಹೆಸರು ಮಾಡಿದ್ದಾರೆ ಅದರಲ್ಲಿ ಹಂಪಿಯನ್ನಾಳಿದ ರಾಜಮನೆತನಗಳಿಗೆ ಒಳ್ಳೆಯ ಇತಿಹಾಸವಡಗಿದೆ.... ಪಂಪಾಕ್ಷೇತ್ರ ಉದಯವಾಗುತ್ತಲಿದ್ದಂತೆ ಅಲ್ಲಿನ ಜನರ ಜೀವನ, ನಾಡು ನುಡಿಯ ಸಂಸ್ಕೃತಿ ವೈಭವವನ್ನು ಬಿಂಬಿಸಲು ಮುತ್ತು ರತ್ನದ ವ್ಯಾಪಾರಿಗಳು ಬಂದೇ ಬಿಟ್ಟರು, ಎಂತಹಾ ಪರಿ..!!! ರಾಶಿ ರಾಶಿ ಮುತ್ತುರತ್ನವನ್ನು ಸೇರಿನಲ್ಲಿ ಕೊಂಡುಕೊಳ್ಳುತ್ತಲಿರುವ ಸಾಮಾನ್ಯ ಜನ...... ಓಹ್ ಎಂತಾ ಅದೃಷ್ಟವಂತರು ಅಂದಿನ ಜನ ಎಂದೆನಿಸಿತು........

ಪಂಪಾಕ್ಷೇತ್ರವನ್ನು ಆಳಿದ ಹಕ್ಕಬುಕ್ಕರಿಂದಿಡಿದು ಕೃಷ್ಣದೇವರಾಯನವರೆಗಿನ ಆಳ್ವಿಕೆಯ ಸಾರವನ್ನು ಕೆಲವು ಶಾಡೋ ಮೂಲಕ ಹಾಗೂ ಬಿತ್ತಿಚಿತ್ರಗಳ ಮೂಲಕ ನೆರೆದಿದ್ದವರೆಲ್ಲರಿಗೂ ವೈಭವೋತೀತವಾಗಿ ದೃಶ್ಯ ನಿರೂಪಣೆಯಲ್ಲಿ ನೀಡಿ. ಅತಿ ಹೆಚ್ಚು ಹೆಸರುವಾಸಿಯಾದ, ಕರ್ನಾಟಕ ಇತಿಹಾಸದಲ್ಲಿ ಅಚ್ಚಳೆಯದೆ ಸುವರ್ಣಾಕ್ಷರದಲ್ಲಿ ಬರೆದಿಡುವಂತಾ ನಮ್ಮ ಕರುನಾಡ ಕೀರ್ತಿ ಪತಾಕೆಯನ್ನು ಬಾನೆತ್ತರಕ್ಕೆ ಏರಿಸಿದ ಶ್ರೀ ಕೃಷ್ಣದೇವರಾಯನ ಆಳ್ವಿಕೆಯ ಪಕ್ಷಿನೋಟ ವೇದಿಕೆಯಲ್ಲಿ ಅಲಂಕೃತಗೊಳ್ಳುತ್ತಲೇ ಬಂದಿತು..... ಕೃಷ್ಣದೇವರಾಯ ತನ್ನ ಆಳ್ವಿಕಾ ದಿನಗಳಲ್ಲಿ ಆತನ ದೈವ ಭಕ್ತಿ ಬಿಂಬಿಸುವ ನಿಟ್ಟಿನಲ್ಲಿ ಶರಣು ವಿರುಪಾಕ್ಷ ಶಶಿಭೂಷಣ ಹಾಡಿಗೆ ಹೆಂಗಳೆಯರು ಹೆಜ್ಜೆ ನೀಡಿದ್ದೇ ವಿಶೇಷವಾಗಿತ್ತು. ನಂತರ ಕೃಷ್ಣದೇವರಾಯನ ಆಡಳಿತಾವದಿಯಲ್ಲಿ ಜನರ ಜೀವನದೊಟ್ಟಿಗೆ ಅಂದಿನ ಆಟೋಟಗಳಿಗೆ ನೀಡುತ್ತಲಿದ್ದ ಪ್ರಾಶಿಸ್ತ್ಯವನ್ನೂ ಸಹ ಬಿಂಬಿಸಿದ್ದು ನಮ್ಮ ಕೂಟದ ಚಿಣ್ಣರು..... ಹಳ್ಳಿ ಸೊಗಡು ವೇದಿಕೆಯಲ್ಲಿದೆ ನೇಸರ ಉದಯವಾಗುತ್ತಲಿದ್ದಾನೆ ಅಲ್ಲೇ ಪಕ್ಕದಲ್ಲಿ ವ್ಯಾಯಾಮಮಾಡುತ್ತಲಿರುವ ಜನರು, ಇನ್ನು ಕೆಲವರು ಸಂಗೀತಾಭ್ಯಾಸದಲ್ಲಿ ತೊಡಗಿದ್ದಾರೆ, ಅಪ್ಪಾಳೆ ತಿಪ್ಪಳೆಯಾಟದ ಮಕ್ಕಳು, ಕುಂಟೆಬಿಲ್ಲೆ, ಜೂಟಾಟ, ಚಿನ್ನಿದಾಂಡು, ಕಣ್ಣಾಮುಚ್ಚಲೆ, ಪಗಡೆ, ಅಲಗುಣಿ ಮನೆಯಾಟ, ಕುಸ್ತಿ ಹೀಗೆ ಹಲವು ಗ್ರಾಮೀಣ ಆಟಗಳನ್ನು ಮನಸೂರೆಗೊಳ್ಳುವಂತೆ ನಮ್ಮ ಮುಂದಿಟ್ಟರು.....

ಇಷ್ಟೆಲ್ಲಾ ವಿವಿಧತೆಯನ್ನು ಹೊಂದಿದ್ದ ಕೃಷ್ಣದೇವರಾಯನ ಹೆಸರು ಜಗಜಾಹೀರು ಆಗುತ್ತಲಿಂದಂತೆ ಮಹಾರಾಜನ ಗುಣಗಾನ ಎಲ್ಲೆಲ್ಲೂ ಮನೆಮಾಡಿತ್ತು ಪಕ್ಕದ ರಾಜ್ಯದಲ್ಲಿದ್ದ ಹೆಸರಾಂತ ತೆನಾಲಿ ರಾಮನೂ ಸಹ ಕೃಷ್ಣದೇವರಾಯನ ಬಗೆಗೆ ತಿಳಿದು ಗುಣಗಾನ ಮಾಡುವಂತೆ ಪುಟ್ಟದೊಂದು ನಗೆಹೊನಲಿನ ನಾಟಕವನ್ನು ಸಹ ನೀಡಿ ಬಹಳಷ್ಟು ಉತ್ಸುಕತೆಗೆ ಕಾರಣವಾಯಿತು. ಕೃಷ್ಣದೇವರಾಯನ ಆಳ್ವಿಕೆಯಲ್ಲೇ ಪುರಂದರದಾಸರೂ ಸಹ ಇದ್ದಿದ್ದರೆಂದು ಬಿಂಬಿಸುವ ಪರಿಯಲ್ಲಿ ಕಂಡೆನಾ ಗೋವಿಂದನಾ ಹಾಡಿಗೆ ನೃತ್ಯ ರೂಪಕ ಅಹಾ!!! ಹೆಣ್ಣು ನಾಟ್ಯಪ್ರವೀಣೆ ಎಂದು ಬಿಂಬಿಸಿಬಿಟ್ಟರು.......... ಹೀಗೆ ಸುತ್ತಮುತ್ತನ ದೇಶ, ರಾಜ್ಯ, ನಗರದ ವಿವರಣೆಯೊಂದಿಗೆ ಕೃಷ್ಣದೇವರಾಯ ತನ್ನ ಆಳ್ವಿಕೆಯಲ್ಲಿ ಕೃಷ್ಣದೇವರಾಯನ ಮೊದಲ ಆಡಳಿತ ದಿನಗಳಲ್ಲಿ ರಕ್ಷಣಾ ಕಾರ್ಯಕ್ಕೆ ಸೈನ್ಯದ ಅವಶ್ಯಕತೆ ಬಂದಾಗ ಸಾಮಂತರಿಂದ ಸೈನ್ಯದ ತುಕಡಿಗಳನ್ನು ಕ್ರೂಢೀಕರಿಸಲಾಗುತ್ತಿತ್ತು. ಇದರಿಂದಾಗುತ್ತಿದ್ದ ಮಹತ್ವದ ಸಮಯ ನಷ್ಟವನ್ನು ಪರಿಗಣನೆಗೆ ತೆಗೆದುಕೊಂಡು ತನ್ನದೇ ಆದ ಸೈನ್ಯವನ್ನು ಕಟ್ಟಿದನು, ಸ್ತ್ರೀಯರಿಗೂ ಸೈನ್ಯದಲ್ಲಿ ಪ್ರಾಧಾನ್ಯತೆ ಕೊಟ್ಟಿದ್ದು ಕೃಷ್ಣದೇವರಾಯನ ಆಡಳಿತ ವೈಖರಿಗೆ ನಿದರ್ಶನ. ಸೈನ್ಯದಲ್ಲೂ ಸೈನಿಕರ ಹುಮ್ಮಸ್ಸು ಉತ್ಸಾಹಗಳು ಪಡೆಯ ಶಕ್ತಿವರ್ಧಕಗಳಾಗಿದ್ದವು. ಈ ಹುಮ್ಮಸ್ಸಿನ ಸೈನಿಕರನ್ನು ನಿರೂಪಿಸಲು ವೇದಿಕೆಯಲ್ಲೊಂದು ಸೈನಿಕ ನೃತ್ಯ ಬಿಂಬಿತವಾಯಿತು ಕೂಟದ ಮಕ್ಕಳು ಸೈನಿಕ ವೇಷಧಾರಿಗಳಾಗಿ ಹೆಜ್ಜೆಯಾಕುತ್ತ ಕತ್ತಿವರಸೆ, ಯುದ್ಧದ ರೂಪಕದಲ್ಲಿ ನೃತ್ಯಮಾಡಿದ್ದಂತು ನಿಜಕ್ಕೂ ಎದೆ ಝಲ್ ಎಂಬಂತಿತ್ತು..........

ಒಂದೆಡೆ ಸಾಮ್ರಾಜ್ಯ ಸಂಘಟನೆ ಸುಸ್ಥಿರಗೊಳ್ಳುತ್ತಿದ್ದಂತೆ ಬಿಟ್ಟು ಹೋಗಿದ್ದ ಪ್ರದೇಶಗಳನ್ನು ಪುನರ್ವಶ ಮತ್ತು ವಿಸ್ತರಣೆ ಕಾರ್ಯ ಪ್ರಾರಂಭಿಸಿಕೊಳ್ಳುತ್ತಲಿದ್ದ ಸಮಯದಲ್ಲಿ ಬಿಜಾಪುರ ಮತ್ತು ಗುಲ್ಬರ್ಗಗಳನ್ನು ವಶಪಡಿಸಿಕೊಂಡು ನಂತರ ಅವರ ರಾಜ್ಯವನ್ನು ಹಿಂತಿರುಗಿಸಿದ್ದಕ್ಕೆ "ಯವನರಾಜ್ಯಸ್ಥಾಪನಾಚಾರ್ಯ" ಎಂಬ ಬಿರುದು ಗಳಿಸಿ, ರಾಜನಿಗೆ ಮುಸ್ಲಿಂದೊರೆಗಳಿಂದ ಆತಿಥ್ಯ ನೀಡುವ ಪರಿಯಲ್ಲಿ ಖವ್ವಾಲಿ ನೃತ್ಯ ರೂಪಕವನ್ನು ಪುಟ್ಟ ಕಂದಮ್ಮಗಳಾದ ಇನ್ನು ಕೇವಲ ನಾಲ್ಕೈದು ವರ್ಷದ ಮಕ್ಕಳು ನರ್ತಿಸಿದ್ದೇ ವಿಶೇಷವಾಗಿತ್ತು..

ಕೃಷ್ಣದೇವರಾಯ ತನ್ನ ವಿಜಯಯಾತ್ರೆಗಳನ್ನು ಪೂರೈಸಿ ಬಂದ ಸಾಮ್ರಾಟನಿಗೆ ಸಾಮಂತರು, ಮಾಂಡಲೀಕರಲ್ಲದೇ ಬುಡಕಟ್ಟು ಮತ್ತು ಗುಡ್ಡಗಾಡುಜನ ತಮ್ಮ ಸಂತೋಷವನ್ನು ವ್ಯಕ್ತಪಡಿಸುವ ರೀತಿಯಲ್ಲಿ ಅಡವಿದೇವಿಯ ಕಾಡು ಜನಗಳ.... ಹಾಡಿಗೆ ಕಾಡು ಜನರಂತೆ ಹೆಜ್ಜೆಹಾಕಿ ವಿಜೃಂಭಿಸಿದರು.

ಕೃಷ್ಣದೇವರಾಯ ಸಾಹಿತ್ಯಾಸಕ್ತಿಯುಳ್ಳವನೆಂದು ಬಿಂಬಿಸಲು ಮತ್ತೊಮ್ಮೆ ತೆನಾಲಿರಾಮ ನಾಟಕ ನಗೆಗಡಿಗೆಯನೊತ್ತು ವೇದಿಕೆಯನ್ನು ಅಲಂಕರಿಸುವುದರೊಂದಿಗೆ ನೆರೆದ ಜನಸ್ತೋಮಕ್ಕೆ ಖುಷಿ ನೀಡಿತು...... ಆಸ್ಥಾನದ ಕವಿಗಳೊಂದಿಗೆ ರಾಜನೇನೋ ಸಂತಸದಿ ಸಾಹಿತ್ಯ ಸಂಗೀತವೆಂದು ಮುಳುಗಿರದೆ ಜನತೆಯಲ್ಲೂ ಹೊಸ ಹುಮ್ಮಸ್ಸನ್ನು ಹುಟ್ಟಿಸಲು ತಾನು ಹಲವು ದೇಶಗಳನ್ನು ಗೆದ್ದು ಬಂದಾಗ ಆಚರಿಸುವ ಮಹಾನವಮಿಯ ಉತ್ಸವದ ವೈಭವಕ್ಕೆ ಸಾಕ್ಷಿಯಾಗುವಂತೆ ಹಬ್ಬ ಹಬ್ಬ..... ಇದು ನಮ್ಮ ಕರುನಾಡ ಹಬ್ಬ ಈ ಹಾಡಿಗೆ ಹೆಜ್ಜೆಯಾಕುತ್ತ ಅಂದಿನ ನವರಾತ್ರಿಯ ಹಬ್ಬ ರಾಷ್ಟ್ರೀಯ ಹಬ್ಬವಾಗಿ ಮನೆಮಂದಿಯೆಲ್ಲ ಆಚರಿಸುವಂತಾದದ್ದನ್ನು ಸಡಗರದಿ ನಮ್ಮೆಲ್ಲರಿಗೆ ತಣಿಸಿದರು.

ಶ್ರೀಕೃಷ್ಣದೇವರಾಯ ತನ್ನ ಆಳ್ವಿಕೆಯಲ್ಲಿ ಪೋರ್ಚುಗೀಸರೊಂದಿಗಿನ ಸಂಬಂಧ, ಅವರೊಟ್ಟಿಗಿನ ಆತ್ಮೀಯತೆಯನ್ನು ಪ್ರತಿಬಿಂಬಿಸಲು ಪೋರ್ಚುಗೀಸ್ ನೃತ್ಯವನ್ನು ನಮ್ಮ ಕೂಟದ ಮಕ್ಕಳು ವಾಹ್..!!! ಸೊಗಸಾಗಿ ನೃತ್ಯದ ಝಲಕ್ ನೀಡಿ ನಮಗೆಲ್ಲರಿಗೂ ಕಣ್ಣ ತಣಿಸಿದರು.

ಕೃಷ್ಣದೇವರಾಯನ ನಗರ ವೈಭವಕ್ಕೆ ಸಾಕ್ಷಿಯಾಗಿ ಹಳ್ಳಿಯ ಸೊಗಡನ್ನು ಬಿಂಬಿಸಲು ನಮ್ಮ ಕೂಟದ ಚಿನ್ನಾರಿಗಳು ಹಳ್ಳಿ ವೇಷಭೂಷಣದಿ ಜಾನಪದ ನವ್ವಾಲೆ ಬಂತಪ್ಪ ನವ್ವಾಲೆ ಮತ್ತು ಮಾತನಾಡಣ್ಣಯ್ಯ ಮಾತನಾಡು... ಹಾಡಿಗೆ ನೃತ್ಯಮಾಡಿ ಚಪ್ಪಾಳೆ ಗಿಟ್ಟಿಸಿದರು....... ಹಳ್ಳಿಯ ಸೊಗಡನ್ನೇನೋ ಕಂಡೆವು ಅಂತೆಯೆ ರಾಜ ತನ್ನ ಎಲ್ಲಾ ಕಾರ್ಯಗಳಲ್ಲಿ ಪೂಜೆ, ಪುನಸ್ಕಾರ, ದಾನ ದತ್ತಿಗಳಲ್ಲೂ ಮೇಲುಗೈ ತನ್ನ ಆರಾಧ್ಯದೈವದಂತೆ ಪೂಜಿಸುವ ತಿರುಪತಿ ವೆಂಕಟೇಶನಿಗೆ ದತ್ತಿಯನ್ನು ನೀಡುತ್ತಲಿದ್ದನೆಂಬುದರ ಪರಿಗೆ ಮನಮೋಹಕ ನೃತ್ಯದ ರೂಪಕವಾಗಿ ತಿರುಪತಿ ಡೋಲೋತ್ಸವ ವೇದಿಕೆಯಲ್ಲಿ ಜರುಗಿತು..... ಈ ಮನಮೋಹಕ ನೃತ್ಯ ನಿಜಕ್ಕೂ ನೆರೆದಿದ್ದವರೆಲ್ಲರ ಕಣ್ ಮನ ತಣಿಸಿದ್ದಂತೂ ಸತ್ಯ.......


ಕೃಷ್ಣದೇವರಾಯ ತನ್ನದೇ ಜಗತ್ತಿನಲ್ಲಿ ಏನೆಲ್ಲಾ ಸಾಧಿಸಿ, ಜನರ ಹೊಗಳಿಕೆಗೆ ಪೂರಕವಾಗಿ ರಾಜ್ಯವನ್ನಾಳಿ ತನ್ನ ಆಳ್ವಿಕೆಯನ್ನು ಸುವರ್ಣಾಕ್ಷರದಲ್ಲಿ ಬರೆದು ಅಚ್ಚಳಿಯದೆ ಹೆಸರುಳಿಸಿದಂತ ರಾಜನಿಗೂ ಕಂಟಕವೊಂದಿದ್ದರಿಂದ ರಾಜಗುರುಗಳಾದ ವ್ಯಾಸತೀರ್ಥರು ಆ ಕಂಟಕ ಗಳಿಗೆ ಕುಹುಯೋಗದ ಸಮಯದಲ್ಲಿ ಮಹಾರಾಜರ ಪಟ್ಟವನ್ನು ಸ್ವೀಕರಿಸಿ, ರಾಜನಿಗೆ ಬಂದೊದಗಿದ ವಿಪತ್ತು ಪರಿಹಾರಮಾಡಿ ನಂತರ ಮಹಾರಾಜನಿಗೆ ಪಟ್ಟಾಭಿಷೇಕ ನೆರೆವೇರಿಸುವ ಚಿತ್ರಣವಂತೂ ವೇದಿಕೆಯಲ್ಲಿ ಸಂಭ್ರಮಿಸಿತ್ತು...


ಆ ರಾಜ ನೆಡಿಗೆ, ಗಾಂಭೀರ್ಯ, ಪಟ್ಟದರಾಣಿಯ ಆತ್ಮಗೌರವ, ಸಂತಸ ಜೊತೆಗೆ ಆಸ್ಥಾನದಲ್ಲಿ ನೆರೆದಿದ್ದ ಅಷ್ಟದಿಗ್ಗಜರು, ಸಾಮಂತರು, ಸೇನಾದಿಪತಿಗಳು, ಊರ ಜನರು ರಾಜನ ಪಟ್ಟಾಭಿಷೇಕದ ಸವಿಯನ್ನು ಸವಿಯಲು ರಾಜನ ಆಸ್ಥಾನವನ್ನು ಸುತ್ತುವರಿದಿದ್ದ ದೃಶ್ಯವಂತು ಅಂದಿನ ಕೃಷ್ಣದೇವರಾಯನ ಪಟ್ಟಭಿಷೇಕವೇ ಮರುಭೂಮಿಯಲ್ಲಿ ಜರುಗುತ್ತಲಿದೆ ಎಂಬ ರೀತಿಯಲ್ಲಿ ಆಗಮಿಸಿದ್ದ ಗಣ್ಯರೆಲ್ಲರೂ ಮಹಾರಾಜನಿಗೆ ಜಯಘೋಷ ಕೂಗುತ್ತಲಿದ್ದರು......... ರಾಜನ ಪಟ್ಟಾಭಿಷೇಕದೊಂದಿಗೆ ಮುಕ್ತಾಯವಾದ ವಿಜಯನಗರದ ವೈಭವದ ಕೊಡುಗೆ ಮನೋಘ್ನವಾಗಿ ಸುಮಾರು ಎರಡು ಗಂಟೆಗಳ ಕಾಲ ಮನ ತಣಿಸಿತು.

ಕೂಟದ ಕಾರ್ಯಕ್ರಮಗಳ ನಂತರ ಮ್ಯಾಜಿಕ್ ಮಾಂತ್ರಿಕರ ಸರದಿ ಚಿಣ್ಣರಿಗೆ ಮನತಣಿಸಿದ್ದಲ್ಲದೇ ದೊಡ್ಡವರಿಗೂ ಮನೋಲ್ಲಾಸವಾಯಿತು. ಸದಾ ಕೆಲಸ ಕಾರ್ಯಗಳ ಜಂಜಾಟದಲ್ಲಿದ್ದ ನಮ್ಮೆಲ್ಲರಿಗೂ, ತಮ್ಮ ಚಾಣಾಕ್ಯ ಶಕ್ತಿಯಿಂದ ಎಲ್ಲರನ್ನು ಮಂತ್ರಮುಗ್ಧ ಮಾಡಿದರು...... ಉದಯ್ ಜಾದೂಗರ್ ಬರಿ ಮ್ಯಾಜಿಕ್ ಮಾಂತ್ರಿಕರೇ ಅಲ್ಲ ಮಾತಿನ ಮಾಂತ್ರಿಕರೂ ಕೂಡ.......... ಸದಾ ನಗುತ್ತಾ ಸುತ್ತಲಿದ್ದವರನ್ನೇಲ್ಲಾ ನಗಿಸುತ್ತಾ..... ಹಾಸ್ಯ ಚಟಾಕಿಗಳನ್ನೂ ಹಾರಿಸುತ್ತಲಿದ್ದರು........ ಮ್ಯಾಜಿಕ್ ನ ನಂತರ ಮಾತನಾಡುವ ಗೊಂಬೆಯೊಂದಿಗೂ ಸರಸ ಸಲ್ಲಾಪದಿ ವಿಶೇಷತೆಯನ್ನು ಮೂಡಿಸಿ ನೆರೆದಿದ್ದವರಿಗೆ ಖುಷಿ ನೀಡಿ ಶ್ಯಾಡೋ ಪ್ಲೇ... ಮೂಲಕ ಹಲವು ಆಕೃತಿಯನ್ನು ಮಕ್ಕಳು, ದೊಡ್ಡವರೊಂದಿಗೆ ಹಂಚಿಕೊಂಡಿದ್ದೇ ವಿಶೇಷ..... ಚಿರಮನಸ್ಸಿಗೆ ನಿಲ್ಲುವಂತೆ ಮಾಡಿಹೋಗಿದ್ದಾರೆ ಮಾಯಾ ಮಾಂತ್ರಿಕರು....... ಉದಯ್ ಜಾದೂಗಾರರೊಂದಿಗೆ ಅರುಣ್ ಕುಮಾರ್ ದತ್ತರು ಸಹ ಹಲವು ಮ್ಯಾಜಿಕ್ ಮಂತ್ರವನ್ನು ನಮ್ಮೆಲ್ಲರಿಗೂ ಉಣಬಡಿಸಿದರು. ಮಕ್ಕಳಂತೂ ಈ ಮ್ಯಾಜಿಕ್ ನೋಡಿದ ಮೇಲಂತೂ ಮನೆಯಲ್ಲಿ ಯಾವ ವಸ್ತುವಿನ ಮೇಲಾಗಲಿ ಮ್ಯಾಜಿಕ್ ಲೆಕ್ಕಾಚಾರದಲ್ಲೇ ಮುಳುಗಿಹೋಗಿದ್ದಾರೆ......... ಅಂದರೆ ಮ್ಯಾಜಿಕ್ ಮಕ್ಕಳ ಮನಸಿನಲ್ಲಿ ಮನೆ ಮಾಡಿದೆ.
ಒಟ್ಟಿನಲ್ಲಿ ಆರು ತಿಂಗಳ ಪರಿಶ್ರಮ... ಆರು ಗಂಟೆಗಳ ಕಾಲ ವೇದಿಕೆಯನ್ನು ಮೆರುಗುಗೊಳಿಸಿದ್ದಂತು ಸತ್ಯ....... ನಮ್ಮ ಮನಸ್ಸಿಗೆ ಮುದನೀಡುವುದರೊಟ್ಟಿಗೆ ಮೂಕವಿಸ್ಮಿತವಾಗಿದ್ದೇವೆ ಇಂತಹ ಅದ್ಭುತ ಕಾರ್ಯಕ್ರಮದಲ್ಲಿ ನಾವೂ ಭಾಗಿಗಳಾಗಿರುವುದೇ ಒಂದು ಸಂತಸದ ವಿಷಯ.

ಈ ಮನಮೋಹಕ ದಿನದ ಕೊಡುಗೆಗೆ ೨೦೧೦ರ ಕಾರ್ಯಕಾರಿ ಸಮಿತಿ ಮತ್ತು ಅವರ ಕುಟುಂಬ ವರ್ಗ, ಇವರಿಗೆ ಸಾಥ್ ನೀಡಿದ ಹಲವು ಸಮಿತಿಗಳು, ನೃತ್ಯ ನಿರ್ದೇಶಕರು, ಮತ್ತು ಕಾಣದ ಹಸ್ತಗಳು.... ಇಂತಹ ಸೊಬಗನ್ನು ನೀಡಿದ ಎಲ್ಲರಿಗೂ ನನ್ನ ಧನ್ಯವಾದಗಳು...

ಕನ್ನಡ ಕೂಟ ಒಂದು ಮನೆಯಂತಿದೆ, ಸದಾ ಎಲ್ಲರ ಮನದ ಮನೆಗೆ ಸಿಂಗರಿಸುವ ಶಕ್ತಿ ಮತ್ತಷ್ಟು ಬರಲೆಂದು ಆಶಿಸುತ್ತೇವೆ.

ಮತ್ತಷ್ಟು ಫೋಟೋ ಗಳಿಗೆ ಈ ಕೆಳಕಂಡ ಲಿಂಕ್ ಗಳಿಗೆ ಭೇಟಿ ನೀಡಿ:

ವಂದನೆಗಳು...

Sunday, October 10, 2010

ನೀನಿಲ್ಲದೆ.......!!!???

ನಿನ್ನೊಟ್ಟಿಗಿನ ೬ ವರ್ಷದ ಜೀವನ ತುಂಬಾ ತುಂಬಾ ಸುಖ ಕೊಟ್ಟಿದೆ, ನಿನ್ನ ಮದುವೆಯಾಗಿ ಇಷ್ಟು ವರ್ಷದಲ್ಲಿ ಅತ್ತೆ ಮಾವ, ಅಪ್ಪ ಅಮ್ಮ, ಅತ್ತಿಗೆ ನಾದಿನಿ ಎಲ್ಲರ ಪ್ರೀತಿ ಗಳಿಸಿದೆ ನಮ್ಮ ಸಂಸಾರದಂತ ಪುಟ್ಟ ಸುಖ ಸಂಸಾರ ಎಲ್ಲೂ ಇಲ್ಲ ಅಂತ ಅನ್ಸುತ್ತೆ.... ನಮ್ಮ ಅಪ್ಪ ಅಮ್ಮ ಕೊಟ್ಟ ಸೈಟಿನಲ್ಲಿ ಮನೆಯನ್ನೂ ಕಟ್ಟಿಕೊಂಡು ನೆಮ್ಮದಿಯ ಜೀವನ ಜೊತೆಗೊಂದು ಹೆಣ್ಣು ಕೂಸು ಅಬ್ಬಾ ನನಗೆ ಇದಕ್ಕಿಂತ ಖುಷಿ, ಸುಖ ಬೇಕಾ ಹೇಳು....... ಎಲ್ಲವೂ ಚೆನ್ನಾಗಿತ್ತು, ಎಲ್ಲರೂ ಚೆನ್ನಾಗಿದ್ದರೂ ನೀನು ದುಡಿದು ನನ್ನ ಸಾಕುವುದರ ಜೊತೆಗೆ ನಿನ್ನ ಅಪ್ಪ ಅಮ್ಮ ಎಲ್ಲರನ್ನೂ ಸಂತಸದಲ್ಲಿಟ್ಟಿದ್ದೆ....... ಈ ಎಲ್ಲ ಇದ್ದವುಗಳು ಇಂದು ಇಲ್ಲ ಕಾರಣ ನೀನೇ........ ನೀನ್ನಿಂದನೇ ನನ್ನ ಜೀವನ ಸಂಪೂರ್ಣವಾಗಿತ್ತು..... ಆದರೆ ಈಗ ಸಂಪೂರ್ಣ ಎಲ್ಲಿ ಎಲ್ಲವೂ ಮುರಿದಿದೆ ಗೊತ್ತಾ....?

ಸುಖ ಸಂಸಾರಕ್ಕೆ ಸಕ್ಕರೆಯೆಂಬ ಸಿಹಿ ಸಿಹಿಯಾದ ಕಾಯಿಲೆಯೊಂದು ಬಂದು ಕಡಲ ಅಲೆಯಂತೆ ಅಪ್ಪಳಿಸಿದ್ದೇ ನೋಡು ನನ್ನ ಇಂದಿನ ಜೀವನಕ್ಕೆ ಸಾಕ್ಷಿ............ ಚಿಕ್ಕ ವಯಸ್ಸಿಗೆ ನಿನಗೆ ಸಕ್ಕರೆ ಕಾಯಿಲೆ ಬಂದು ನನ್ನಿಂದ ನಿನ್ನ ದೂರ ಮಾಡಿಬಿಟ್ಟಿತು... ನಿನ್ನೊಟ್ಟಿಗೆ ಬರೋಣವೆಂದರೆ ನಮ್ಮ ಕರುಳ ಕುಡಿಗೆ ಅನಾಥ ಪ್ರಜ್ಞೆ ಮೂಡಿಸುವುದು ಬೇಡ ಎಂದು ನಿನ್ನೊಟ್ಟಿಗಿರದೆ ಇಲ್ಲೇ ಉಳಿದೆ. ಬಾರದ ಲೋಕಕ್ಕೆ ನೀನೇನೋ ಹೋಗಿ ಬಿಟ್ಟೆ ಅದು ನನಗೆ ಕಾಣುತ್ತಲೂ ಇಲ್ಲ ಅಲ್ಲಿ ಹೇಗಿರುತ್ತೆ ಎಂಬ ಪರಿಜ್ಞಾನವೂ ಇಲ್ಲ ನಿನ್ನ ನೋವು, ಸಂಕಟ, ಏನೇ ಇದ್ದರೂ ನೀನೇ ನುಂಗಿಕೊಳ್ಳ ಬೇಕು......... ನಾನು ಅಷ್ಟೆ ನನ್ನ ನೋವು ನನಗೆ ಇದೇ......

ನಿನ್ನ ಪ್ರೀತಿಯ ಹಾರೈಕೆ ಇಲ್ಲ, ನನಗಾಗಿ ಓಡೋಡಿ ಬರುವ ನನ್ನವನಿಲ್ಲ, ನೀನು ಕಾಣದ ಲೋಕಕ್ಕೆ ಹೋಗಿದ್ದೇ ತಡ ......... ಇಲ್ಲಿ ನೆಡೆದಿದ್ದೇ ಸೋಜಿಗ, ಈ ದೊಡ್ಡ ಮನೆಯಲ್ಲಿ ನಾನು ಮಗು ಇಬ್ಬರೇ ಇರಲಾಗದೆ ನಿನ್ನಮ್ಮ ಅಪ್ಪನನ್ನು ಕರೆದೆ ಬಾರದೇ ಹೋದರು, ನಾನು ಅವರೊಟ್ಟಿಗಿರಲು ಹೋದರೆ ನನ್ನ ಮಗನೇ ಇಲ್ಲದಾಗ ನೀನಿದ್ದು ಏನು ಮಾಡುವೆ. ನಿನ್ನದೆಂಬ ಮನೆಯೇ ಇದೆಯಲ್ಲ ಅಲ್ಲೇ ಇದ್ದು ಬಿಡು ಎಂದರು.......... ನಿನ್ನ ಪ್ರತಿ ಮಾತಿನ ಪ್ರತಿಧ್ವನಿ ಆ ಮನೆಯಲ್ಲಿ ಕೇಳಿ ಕೇಳಿ ಮನಸು ಕಂಬನಿಯಿಂದ ರಕ್ತ ಹೆಪ್ಪುಗಟ್ಟಿದಂತಾಗಿತ್ತು........ ನನ್ನ ಮಗುವಿಗೊಂದು ಆಸರೆ ಇರಲೆಂದು ಅಮ್ಮನ ಮನೆ ಸೇರಿಬಿಟ್ಟೆ.

ನಿನಗೆ ಗೊತ್ತ ಒಂದು ವಿಷಯ... ನನ್ನ ಅಮ್ಮ ಅಪ್ಪ ಮನೆಗೆಲಸಕ್ಕೆ ಒಬ್ಬ ಕೆಲಸದವಳನ್ನ ಹುಡುಕ್ತಾ ಇದ್ದ್ರು, ನಾನು ಸಿಕ್ಕೆನಲ್ಲ ಒಳ್ಳೆದಾಯಿತು.......... ಅಣ್ಣ ಅತ್ತಿಗೆಯರು ಕೆಲಸಕ್ಕೆ ಹೋಗ್ತಾರೆ ಇಬ್ಬರು ಅಣ್ಣಂದಿರ ಮಕ್ಕಳು ಪ್ರತಿಷ್ಟಿತ ಸ್ಕೂಲ್ ನಲ್ಲಿ ಓದುತ್ತಾ ಇದ್ದರೆ.......... ನಾನು ಅವರೆಲ್ಲರ ಹಾರೈಕೆ, ಸೇವೆಯಲ್ಲಿ ಇದ್ದೀನಿ.... ನನ್ನ ಮಗು ಯಾವುದೋ ಶಾಲೆನಲ್ಲಿ ಹೆಚ್ಚು ಖರ್ಚಾಗದ ಸ್ಕೂಲ್ನಲ್ಲಿ ಓದುತ್ತಿದ್ದಾನೆ.......... ನೀನು ತಪ್ಪು ಮಾಡಿಬಿಟ್ಟೆ ನಾನು ಕೆಲಸಕ್ಕೆ ಹೋದ್ರೆ ನನಗೆ ಎಲ್ಲಿ ಕಷ್ಟ ಆಗುತ್ತೋ ಎಂದು ಅಂದು ಕಳಿಸದಿದ್ದಕ್ಕೆ ನೋಡು ಎಂತಾ ಕಷ್ಟ ಪಡ್ತಾ ಇದ್ದೀನಿ...... ಮನೆ ಕಟ್ಟಿದ್ದೀನಿ ಬಾಡಿಗೆ ಬರುತ್ತೆ ಅಂತೀಯ. ಇಲ್ಲ ನಾನು ಇವರ ಮನೆಗೆ ಬಂದು ಸೇರಿದ್ದಕ್ಕೆ ನನ್ನ ಮತ್ತೆ ಮಗನ ಖರ್ಚಿಗೆ ಆ ಮನೆ ಬಾಡಿಗೆಯನ್ನೂ ಅಣ್ಣ ವಸೂಲಿ ಮಾಡ್ಕೋತಾ ಇದಾನೆ.... ನಾನು ತಪ್ಪು ಮಾಡಿದೆ ಅಲ್ವಾ..? ನನ್ನ ತವರು ನಾ ಕೆಟ್ಟು ಬಂದರೆ ನನ್ನ ಕೈ ಬಿಡೋಲ್ಲ ಎಂದು ಭಾವಿಸಿದ್ದೆ..... ನನ್ನ ಭಾವನೆ ಸುಳ್ಳಾಗಿ ಹೋಯ್ತು.....

ದಿನ ಬೆಳಗಾದರೆ ಮನೆಗೆಲಸ, ಮಕ್ಕಳ ಸ್ಕೂಲಿಗೆ ಬಿಡೋದು, ನಗು ಇಲ್ಲ, ಸುಖ ಇಲ್ಲ ಜೀವ ಇರಬೇಕು ಮಗುವಿಗಾಗಿ ಅನ್ನೋ ಹಾಗೆ ಇದ್ದೀನಿ........ ನನಗಾಗಿ ಮರುಗೋ ಜೀವ ಇಲ್ಲ, ಪ್ರೀತಿ ನೀಡೋ ಕೈಗಳಿಲ್ಲ..... ಒಂದು ಸಮಾರಂಭಕ್ಕೆ ಹೋಗೋ ಹಾಗಿಲ್ಲ, ಗಂಡ ಇಲ್ಲದೆ ಸುತ್ತೋದ ಬೇಡವೇ ಬೇಡ ಅನ್ನೋ ಅಮ್ಮ ಅಪ್ಪ, ಮಗನ ಶಾಲೆಗೆ ಬಿಟ್ಟು ಬರುವುದು ತಡವಾದರೆ ಯಾರಿಗಾಗಿ ಕಾಯುತ್ತಲಿದ್ದೆ.... ಯಾರ ಹತ್ತಿರ ಮಾತಾಡ್ತಾ ಇದ್ದೆ ವ್ಯಗ್ಯ ಪ್ರಶ್ನೆ ಸುರಿಸೋ ಎಲ್ಲಾ ಅಮ್ಮ..... ನನ್ನಮ್ಮ ಮೊದಲಿನಂತಿಲ್ಲ ಯಾಕೆ ಗೊತ್ತ ನೀನಿಲ್ಲವಲ್ಲ ಅದಕ್ಕೆ..... ಗಂಡ ಇಲ್ಲ ದಾರಿ ತಪ್ಪಿ ನೆಡೆದ್ರೆ ಎಂಬ ಭಯವೋ ಏನೋ ಅವರಿಗೆ......

ನನಗೇ ಯಾಕೋ ಅನಾಥ ಪ್ರಜ್ಞೆ ಮೂಡಿದೆ...... ಅಪ್ಪ ಅಮ್ಮನಿಗಾಗಿ ಪ್ರೀತಿ ತೋರೋ ಘಳಿಗೆ, ಅತ್ತಿಗೆಯಂದಿರು ಅವರವರ ಗಂಡಂದಿರ ಜೊತೆ ಸುಖವಾಗಿ ಸಂತಸದಿ ಇರುವಾಗ ನನಗೆ ನೀನಿರ್ಬೇಕಿತ್ತು, ನಿನ್ನ ಪ್ರೀತಿಲಿ ನಲಿಯಬೇಕಿತ್ತು ಅನ್ನ್ಸುತ್ತೆ......... ಅವರಿಗೆಲ್ಲಾ ಕಾಯಿಲೆ ಬಂದರೆ ನನ್ನವರು ಎಂದು ಸಲಹಿ ಹಾರೈಕೆ ಮಾಡಲು ಅವರ ಗಂಡಂದಿರಿದ್ದಾರೆ ಆದರೆ ನನ್ಗೆ ಕಾಯಿಲೆ, ಬೇಸರ, ನೋವು ಎಲ್ಲಾ ನಾನೇ ಸಹಿಸಿ ನುಂಗಬೇಕಾಗಿದೆ......... ಯಾರ ಎದುರೂ ದುಃಖವನ್ನೇಳುವ ಹಾಗೆ ಇಲ್ಲ. ಅಲ್ಲಿ ಒಂಟಿ ದೆವ್ವ ತರ ಭೂತಬಂಗಲೆಯಲ್ಲಿರುತ್ತಿದ್ದೆ ಈಗ ಜನಗಳ ಜೊತೆ ಇರೋಕ್ಕೆ ಕರೆತಂದರೆ ನಿನ್ಗೆ ದುಃಖ ದುಮ್ಮಾನ ಬರುತ್ತಾ ಅಂತಾರೆ ಏನು ಮಾಡಲಿ ಹೇಳು, ನನ್ನ ನೋವಿಗೆ ಒತ್ತಾಸರೆಯಾಗಿದ್ದ ಆ ನಿನ್ನ ಹೃದಯ, ನನ್ನ ದುಃಖವನ್ನು ಒರೆಸುವ ಆ ನಿನ್ನ ಅಸ್ತಗಳು, ಮಲಗುವಾಗ ದಿಂಬಾಗಿದ್ದ ಆ ನಿನ್ನ ಕೈಗಳು ಸದಾ ನೆನಪಾಗುತ್ತೆ...... ಈಗಲೂ ಬೇಕೆನಿಸುತ್ತೆ.......... ನೀ ಹೋದ ಮೇಲೆ ನನ್ನ ದುಃಖವನ್ನು ಸ್ನಾನದ ಕೋಣೆಯ ಗೋಡೆಗಳು ಕೇಳಿವೆ, ಅಡುಗೆ ಒಲೆ, ಪಾತ್ರೆಗಳು ಆಲಿಸಿವೆ...... "ಎಷ್ಟೋ ಕತ್ತಲೆಯ ರಾತ್ರಿಗಳು ನೀನಿಲ್ಲದೆ ನನ್ನ ಕಣ್ಣ ಕಂಬನಿಯನ್ನು ನುಂಗಿದ್ದು ಆ ನಿನ್ನ ತಲೆದಿಂಬು" ಆ ಮನೆಯಿಂದ ಬರುವಾಗ ನಾನು ನಿನ್ನ ತಲೆದಿಂಬು ನಿನ್ನ ನೆನಪಿಗಾಗಿ ತಂದಿದ್ದೆ ನೋಡು ಎಷ್ಟು ಸಲಹುತ್ತೆ ನನ್ನ.... ನಿನ್ನ ಆಲಿಂಗನ ಇಲ್ಲದೇ ರಾತ್ರಿಗಳನ್ನ ದೂಡ್ತಾ ಇದ್ದೀನಿ ನಿನ್ನ ಕೂಸಿಗಾಗಿ ನೀನಿಟ್ಟ ಪ್ರೀತಿಗಾಗಿ.......... ನಾನು ನನ್ನ ಪ್ರೀತಿಸುವುದಕ್ಕಿಂತ ನೀನು ನನ್ನ ಪ್ರೀತಿಸಿದ್ದ ನೆನಪೇ ನನ್ನ ಜೀವಂತಕ್ಕೆ ಸಾಕ್ಷಿ....

ನೀನಿಲ್ಲದಿರುವ ಮನೆ ಬಿಟ್ಟು ಬರಬಾರದಿತ್ತು ಅಲ್ಲವಾ...? ಕಷ್ಟವೋ ಸುಖವೋ ನಿನ್ನ ಪ್ರೀತಿಯ ನೆನಪಲ್ಲಿ, ಹಳೆಯ ದಿನಗಳನ್ನ ಮೆಲುಕು ಹಾಕುತ್ತ ಅಲ್ಲೇ ಇದಿದ್ದರೆ ಚೆನ್ನಾಗಿತ್ತು..... ನೆನಪಿನ ಪುಟಗಳನ್ನ ದಿನಾ ಒಂದೊಂದೇ ತೆಗೆದು ನೋಡ್ತಾ ಇದಿದ್ದರೆ ನನ್ನ ಸಾವು ಸಹ ಸಮೀಪಿಸಿ ನಿನ್ನ ಸೇರಿಬಿಡ್ತಾ ಇದ್ದೇ ಅಂತ ಅನ್ನುಸ್ತಾ ಇದೆ......

ನಾನು ಬರುವೆ ನೀನಿರುವಲ್ಲಿಗೆ

ಸ್ವಲ್ಪ ಕಾದುಬಿಡು ....

ನಿನ್ನ ಮಗುವನ್ನು ಸಲಹಿ

ಜವಾಬ್ದಾರಿವಂತಳಾಗಿ ಮಾಡುವವರೆಗೆ.........

ನೀನಿಲ್ಲದೆ ನನಗೆ ಅರಿವಾಗಿದ್ದು ......... "ಗಂಡನಿರುವವರೆಗೆ ಎಲ್ಲಾ... ಅವನಿಲ್ಲದಾಗ ಏನಿಲ್ಲ...ತುಸು ಪ್ರೀತಿಗೂ ಬರಸಿಡಿಲು ಬಂದು ತಟ್ಟಿಬಿಡುವುದು" ಇದೇ ನೀನಿಲ್ಲದಾಗ ಕಲಿಸಿದ್ದು ನನಗೆ....

ನಿನ್ನ ಕಾಣುವ ನಿರೀಕ್ಷೆಯಲ್ಲಿ

ನಿನ್ನವಳು (ಸ್ನೇಹಿತೆಯ ನೋವು ಈ ಲೇಖನದಲ್ಲಿ)....

Thursday, September 23, 2010

ಮನಸು ಮರಳಿ ಬ್ಲಾಗಿಸಿದೆ.....

ನಮಸ್ಕಾರ ಇಷ್ಟು ಕಾಲ ಒಟ್ಟಿಗಿದ್ದು ಬ್ಲಾಗಿನ ಮನಸನ್ನೇ ಅರಿಯಲಿಲ್ಲ ನೋಡಿ ನನ್ನ ಮನಸು...... ಬಣಗುಡುತ್ತಿರುವ ಈ ನನ್ನ ಮನಸಿಗೆ ಸಾಂತ್ವಾನಿಸಲು ಇಲ್ಲ, ಏನು ಇಲ್ಲ, ಅನಾಥಳಾಗಿ ಬಿಟ್ಟು ಊರು ಸುತ್ತಲು ಹೊರಟುಹೋಗಿದ್ದೆ...... ಈಗಲಾದರು ಈ ಮೃದುಮನಸಿಗೆ ನನ್ನ ಕಥೆ ಹೇಳಿಕೊಳ್ಳೋಣವೆಂದು ಬಂದಿರುವೆ ನೀವು ಸಹ ಓದಿ.

ತವರೂರು ನೋಡುವ ಖುಷಿಯಲ್ಲಿ ಹೋಗಿದ್ದೆ ಕೇವಲ ೨೫ ದಿನಗಳ ರಜೆಗಾಗಿ. ಅಂದು ಶುಕ್ರವಾರ ವರಮಹಾಲಕ್ಷ್ಮಿ ಹಬ್ಬದ ದಿನ ವಿಮಾನ ಇಳಿದಾಗ ಅಯ್ಯೋ..!!! ಹಸಿರ ಸಿರಿಯೊಂದಿಗೆ (ಮರುಭೂಮಿಗೆ ಹೋಲಿಸಿದರೆ ನಮ್ಮೂರು ಹಸಿರೇ) ಕಾಂಕ್ರಿಟ್ ಮನೆಗಳ ಸಾಲು ಎದ್ದು ಕಾಣುತ್ತಿತ್ತು. ನನ್ನ ತವರೂರ ಮಣ್ಣಿನ ವಾಸನೆಯೇ ನನಗೆ ಬಹಳಷ್ಟು ಮುದನೀಡಿತ್ತು..... ತವರ ಭೂಮಿಗೆ ನಮಿಸುತ್ತ ಮನೆಯ ದಾರಿಯಿಡಿದು ಹೊರಟರೆ ಮತ್ತದೆ ರಸ್ತೆ ಜೊತೆಗಷ್ಟು ಹೊಸ ಹೊಸ ರಸ್ತೆಗಳ ಕಾಮಗಾರಿ, ಮೆಟ್ರೋ ಸಿರಿ, ಅದೇ ಆಟೋರಿಕ್ಷಾ, ಬಸ್ಸು ಕಾರುಗಳದೇ ಕಾರುಬಾರು..... ಎತ್ತ ನೋಡು ಸುತ್ತ ಮುತ್ತ ನನ್ನವರೇ ಇದ್ದಾರೆ ಎಂಬ ಭಾವನೆ ........ ಆದರೆ ಮರುಭೂಮಿಯಲ್ಲಿ ಎಲ್ಲಿ ನೋಡಿದರು ಇವರಾರು ನಮ್ಮವರಲ್ಲ ಇದು ನನ್ನೂರಲ್ಲ, ನನ್ನದೇನು ಇಲ್ಲ ಎಂಬ ಭಾವನೆ ........ ಒಮ್ಮೆಲೇ ನನ್ನೂರು ತಲುಪಿದ ಕೂಡಲೆ ಎಲ್ಲವೂ ನನ್ನದೇ ಎಂಬ ಪುಳಕಭಾವ.

ಮನೆಗೆ ಹತ್ತಿರವಾಗುತ್ತಿದ್ದ ಹಾಗೆ ರಸ್ತೆಯ ಇಕ್ಕೆಡಗಳಲ್ಲಿ ಹಬ್ಬದ ಕಳೆ ಎದ್ದು ಕಾಣುತ್ತಿತ್ತು..... ನನಗೂ ಒಂದು ವರ್ಷದ ಹಿಂದೆ ಎಲ್ಲರೂ ಕೂಡಿ ಹಬ್ಬ ಮಾಡಿದ್ದೆವು. ಈಗ ಮತ್ತೆ ಎಲ್ಲರೂ ಸೇರಿ ಹಬ್ಬ ಮಾಡುತ್ತಲಿದ್ದೇವೆ ಎಂಬ ಖುಷಿ ಜೊತೆಗೆ ಅದೇ ಸಂಜೆ ನಮ್ಮ ಬಳಗ ಅಂದರೆ ಬ್ಲಾಗ್ ಬಳಗದಲ್ಲಿ ಶಿವು.ಕೆ, ಪ್ರವೀಣ್, ಅನಿಲ್ ಬೆಡಗಿ, ನಾಗರಾಜ್, ಶಿಪ್ರ, ಶಶಿ ಅಕ್ಕ ಎಲ್ಲರೂ ಬರುವುದು ಮೊದಲೇ ತಿಳಿದಿತ್ತು. ಮೊದಲಿದ್ದ ಖುಷಿಯ ಜೊತೆ ಇವರೆಲ್ಲರ ಭೇಟಿ ಮತ್ತಷ್ಟು ಹೊಸ ಉತ್ಸಾಹವನ್ನೇ ತಂದಿತ್ತು. ಪ್ರಯಾಣದ ಆಯಾಸ ಯಾವೂದು ಇರದೆ ಕಾತುರವಾಗಿರುವಷ್ಟೇ ಮೊದಲ ಭೇಟಿ ಎಂದೆನಿಸಲಿಲ್ಲ. ಎಲ್ಲರೂ ಬಹಳ ದಿನಗಳ ಪರಸ್ಪರ ಭೇಟಿ ಮಾಡಿದ್ದೆವೆಂದೆನಿಸಿತು.
----
ನಂತರದ್ದೇ ಪುಸ್ತಕ ಬಿಡುಗಡೆ ಸಮಾರಂಭ ಈಗಾಗಲೇ ಎಲ್ಲರ ಬ್ಲಾಗಿನಲ್ಲಿ ಫೋಟೋಗಳು, ವಿಡಿಯೋಗಳು, ಕವನ, ಲೇಖನಗಳ ಮುಖೇನ ಎಲ್ಲರ ಮನಗಳಿಗೆ ತಲುಪಿವೆ ಆದರೂ ನನ್ನದೊಂದು ಪುಟ್ಟ ನುಡಿಗಳನ್ನು ನಿಮ್ಮೊಂದಿಗೆ ನನ್ನ ಮೃದುಮನಸಿನೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ.

ಅಂದಿನ ಸಮಾರಂಭ ನಮ್ಮ ಮನೆಯಲ್ಲೇ ನೆಡೆಯುವ ಸಮಾರಂಭದ ರೀತಿ ನೆಡೆದಿತ್ತು. ಆ ಸಮಾರಂಭಕ್ಕೆ ಎಲ್ಲರೂ ಏನು ಕೆಲಸ ಮಾಡಲು ಸಾಧ್ಯ ನನ್ನಿಂದೇನಾದರೂ ಆಗುವುದೇ, ಮಾಡಬಹುದೇ ಎಂಬ ಉತ್ಸಾಹದಲ್ಲೇ ಇದ್ದರು, ಎಲ್ಲರೂ ಹಾಗೇ ಕೆಲಸ ನಿರ್ವಹಿಸಿದರು. ಸಮಾರಂಭದಲ್ಲಿ ನಾನು ಮತ್ತು ನನ್ನವರಿಗೂ ಒಂದು ಸ್ಥಾನ ನೀಡಿದ ಶಿವು ಹಾಗೂ ಅಜಾದ್ ಅವರಿಗೆ ನಾವು ಸದಾ ಆಭಾರಿಗಳು.... ನಮ್ಮ ಸವಿ ಆಶಯ ಸದಾ ಅವರೊಂದಿಗೆ ಇದ್ದೇ ಇರುತ್ತದೆ. ನಮ್ಮ ಪುಟ್ಟ ಕೆಲಸದಲ್ಲಿ ಅಲ್ಪ ಸಲ್ಪವಾದರು ತಪ್ಪುಗಳೇನಾದರೂ ಆಗಿದ್ದರೆ ಕ್ಷಮೆ ಕೋರುತ್ತೇವೆ........ ನಾವು ದೂರದ ಊರಿನಲ್ಲಿದ್ದರೂ ಕನ್ನಡ ಭಾಷೆ, ಸಂಸ್ಕೃತಿ, ನಮ್ಮ ಆಚಾರ ವಿಚಾರ ಯಾವುದನ್ನೂ ಮರೆತಿಲ್ಲ ಎಲ್ಲರಿಗಿಂತ ಹೆಚ್ಚಿನದಾಗಲ್ಲದಿದ್ದರೂ ನಮ್ಮ ಮಟ್ಟಿಗೆ ಆಚರಿಸುತ್ತಲಿದ್ದೇವೆ ಅಂತೆಯೇ ನಮ್ಮ ಕನ್ನಡಿಗರ ಬ್ಲಾಗ್ ಬಂಧುಗಳೆಲ್ಲರಿಂದಲೂ ಹಲವು ವಿಚಾರಗಳನ್ನು ತಿಳಿದು ನಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳುತ್ತಲಿದ್ದೇವೆ. ಹಾಗೆ ಎಲ್ಲಾ ಬ್ಲಾಗ್ ಬರಹಗಾರರಿಗೂ ನಮ್ಮ ಧನ್ಯವಾದಗಳು...... ಅಂದಿನ ಸಮಾರಂಭಕ್ಕೆ ಕಳೆಕಟ್ಟಿದ ಡುಂಡಿರಾಜ್ ರವರು, ಶೇಷಾಶಾಸ್ತ್ರಿಗಳು, ಸುಧೀಂದ್ರರವರೆಂಬ ಮಹಾನ್ ವ್ಯಕ್ತಿಗಳ ಭೇಟಿಯಂತೂ ಮತ್ತಷ್ಟು ಖುಷಿ ನೀಡಿದೆ. ಬ್ಲಾಗ್ ಭಾಂದವ್ಯ ಸದಾ ಹಸಿರಾಗಿರಲಿ..... ಏನೇ ಬಂದರೂ ಬ್ಲಾಗಿಗರಲ್ಲಿ ಬಲವಿರಲಿ...... ಸಹಮತ ಜೊತೆಗೆ ಬ್ಲಾಗ್ ಬರಹಗಳ ಮೂಲಕ ಸಮಾಜಕ್ಕೆ ಒಳಿತನ್ನು ನೀಡಲೆಂದು ಆಶಿಸುತ್ತೇನೆ..... ಅಂದಿನ ಸಮಾರಂಭದ ರುವಾರಿಗಳು, ಆಗಮಿಸಿದ್ದ ಎಲ್ಲಾ ಬ್ಲಾಗಿಗರು, ಮಿತ್ರರು, ಆತ್ಮೀಯರು ಎಲ್ಲರ ಭೇಟಿ ಇದೆಯಲ್ಲಾ ಅದು ನೆನಪಿನ ಪುಟಗಳಲ್ಲಿ ಮೊದಲನೇ ಪುಟದಲ್ಲಿ ಅಚ್ಚಳಿಯದೆ ಉಳಿದುಬಿಟ್ಟಿದೆ. ಯಾವುದೇ ಸುನಾಮಿ ಅಲೆಗಳು ಬಂದರೂ ಅಳಿಸಲಾಗದಂತ ಭಾಂದವ್ಯ ಬೆಳೆದು ನಿಂತಿದೆ. ಇದೇ ರೀತಿ ಮುಂದೆಯೂ ಉಳಿಯಲೆಂಬುದೆ ನನ್ನ ಆಸೆ.

ಇಷ್ಟೆಲ್ಲಾ ಸವಿ ನೆನಪಿನೊಂದಿಗೆ ನನ್ನ ಕುಟುಂಬದವರೊಂದಿಗೆ ಕಾಲ ಕಳೆದು ಮತ್ತದೆ ಉಸುಕಿನ ಜೀವನಕ್ಕೆ ಮರಳಿದಾಗ ಏನೋ ಬೇಸರ, ದುಗುಡ, ಕೆಲಸದಲ್ಲಿ ಆಸಕ್ತಿಯೇ ಇಲ್ಲವಾಗಿತ್ತು ಬಂದ ದಿನವೇ ಕಛೇರಿಗೆ ಹೋಗಿದ್ದೆ ........ ಬರುವುದೇನೋ ಬಂದಿದ್ದೆ ಮರುಭೂಮಿಗೆ ಇರೋಬರುವ ಕೆಲಸವೆಲ್ಲ ನನಗೇ ಬೀಳಬೇಕಾ.... ಹೊಸ ಪ್ರಾಜೆಕ್ಟ್ ಎಂದು ಎಲ್ಲವನ್ನು ತುಂಬಿದರು, ಈಗ ಬ್ಲಾಗ್ ಬರೆಯುವುದಿರಲಿ......... ಓದಲೂ ಪುರುಸೊತ್ತಿಲ್ಲದಾಗಿ ಬಿಟ್ಟಿದೆ. ನನ್ನವರೇನೋ ಎರಡು ಸಾಲಿಗೆ ಒಂದು ಪೋಸ್ಟ್ ಮಾಡಿಬಿಡುತ್ತಾರೆ, ಆದರೆ ನಾನೇನು ಮಾಡಲಿ ಹೇಳಿ..... ಇಷ್ಟು ದಿನ ಬಿಡುವಿದ್ದ ಈ ಮೃದುಮನಸಿಗೆ ಸಮಯಕೊಟ್ಟು ಇಂದು ರಾತ್ರಿ ಪುಟ್ಟ ಲೇಖನ ಬರೆದಿದ್ದೇನೆ....

ಸಮಯ ಸಿಕ್ಕಾಗ ನಿಮ್ಮೆಲ್ಲರ ಬ್ಲಾಗ್ ಲೇಖನಗಳನ್ನು ಓದುವೆ.....ಆದರೂ ಆಗೊಮ್ಮೆ ಈಗೊಮ್ಮೆ ಓದುತ್ತಲಿರುವೆ ದಯವಿಟ್ಟು ಯಾರೂ ಅನ್ಯತಾ ಭಾವಿಸಬಾರದು.....

ಸದಾ ಮೃದುಮನಸಿನೊಂದಿಗಿರಿ......

Tuesday, August 17, 2010

ಮೀನಿನ ಮೇಸ್ಟ್ರು ಮತ್ತು ಕಣ್ಣಿನ ಡಾಕ್ಟರ್


ನಮಗೆ ತೀರಾ ಆತ್ಮೀಯರೆನಿಸಿಕೊಂಡಂತಹ ಇಬ್ಬರೂ ಬಹಳ ವಿಶೇಷ ವ್ಯಕ್ತಿಗಳು, ತಮ್ಮ ವೃತ್ತಿಯಲ್ಲಿ ಅತಿ ಪ್ರಬುದ್ಧತೆಯನ್ನು ಸಾಧಿಸಿರುವಂತಹವರು.

ಮೊದಲು ಅವರೂರಿನಲ್ಲೇ ಇರುವ ಕೆರೆ, ಕುಂಟೆಗಳಲ್ಲಿ ಬೆಸ್ತರಂತೆ ಮೀನನ್ನು ಹಿಡಿದು ಅದರ ಬಗ್ಗೆ ಹೆಚ್ಚು ಹಳ್ಳಿ ಜನರಿಗೆ ತಿಳಿಸುತ್ತಿದ್ದರೇನೋ.... ನಂತರ ಹಳ್ಳಿಯಿಂದ ಪೇಟೆಗೆ ಬಂದು ಮೀನಿನ ಮಾರ್ಕೆಟ್ ಗೆ ಬಂದಂತಹ ಮೀನುಗಳ ಬಗ್ಗೆ ಬಾರಿ ಅಭ್ಯಾಸ ಮಾಡಿ ಮಾಡಿ..... ನಂತರ ಕಡಲ ತೀರಕ್ಕೆ ಹೋಗಿ ಅಲ್ಲೂ ಕಡಲ ದಡದಲ್ಲಿ ಕೂತು ಮೀನಿಗಾಗಿ ಗಾಳ ಹಾಕಿ ಅಲ್ಲೂ ಯಶಸ್ವಿಯಾಗಿ ಎಲ್ಲರಿಗೂ ಪಾಠ ಪ್ರವಚನ ಮಾಡಿರಬೇಕು....... ಆನಂತರ ಊರು, ಕೇರಿ ಬಿಟ್ಟು ದೂರದಲ್ಲಿರೋ ಕಡಲ ಅಲೆಗಳು ರಾತ್ರೋರಾತ್ರಿ ನಿಶಬ್ಧ ನಿದ್ರೆಯಲ್ಲೂ ಕೇಳುವಂತಿರಬೇಕೆಂದು ಅರಬೀ ಸಮುದ್ರದ ದಡದಲ್ಲೇ ಇರೋ ಮೀನಿನ ಸಂಸಾರಕ್ಕೆ ಸೇರಿ ಬಿಟ್ಟಿರುವ ಮೀನಿನ ಮೇಸ್ಟ್ರು..... ಮೊದ ಮೊದಲು ಕೊಡದಲ್ಲಿದ್ದ ಮೀನಿನಂತೆ ಸಾಹಿತ್ಯ ಕೃಷಿಯನ್ನು ಅಕ್ಕಪಕ್ಕ ಇದ್ದ ಮೀನುಗಳಿಗೆ ನೀಡುತ್ತಲಿದ್ದರು ಈಗ ನೋಡಿ ಕಡಲ ಅಬ್ಬರಕ್ಕೆ ಜಿಗಿದಿದ್ದಾರೆ. ಯಾವ ಅಲೆಗಳ ಅಡೆತಡೆಯೂ ಇಲ್ಲದೆ ಸಾಹಿತ್ಯದ ಹೊನಲನ್ನು ನಮ್ಮಂತಹ ಸಹಸ್ರಾರು ಜನರಿಗೆ ನೀಡಲು ಸಜ್ಜಾಗಿರುವ..... ಮಾತಿನ ಜಾದು........ ಮೀನಿನ ಮೇಸ್ಟ್ರು, ನೀರು ವಿಜ್ಞಾನಿಗಳಾದಂತ ಇವರು ಡಾ. ಅಜಾದ್, ಅವರಿಗೆ ನಮ್ಮ ಅಭಿನಂದನೆಗಳು.......

ಅಂತೆಯೇ ನಮ್ಮ ಕಣ್ಣಿನ ಡಾಕ್ಟರ್ ....... ಡಾಕ್ಟರ್ ಎಂದರೆ ಯಾರು ಎಂದುಕೊಂಡಿರಿ ಸ್ಟೆತಸ್ಕೋಪ್ ಹಿಡಿದರೆನೇ ಡಾಕ್ಟರಾ...? ಇಲ್ಲ ಇವರೂ ಒಂತರ ಡಾಕ್ಟರೇ ಸರಿ ಒಂದೇ ಕಣ್ಣಿನಲ್ಲಿ ಮತ್ತೊಂದು ಕಣ್ಣಿಟ್ಟು ಸೃಷ್ಟಿಯ ಸೌಂದರ್ಯವನ್ನು ನಮಗೆಲ್ಲರಿಗೂ ವಿಧವಿಧವಾಗಿ ಬಣ್ಣ ಬಣ್ಣದ ಚಿತ್ರಗಳ ಮೂಲಕ ನೀಡುತ್ತ ನಮ್ಮನೆಲ್ಲಾ ಹೊಸದೊಂದು ಲೋಕಕ್ಕೆ ಕರೆದೊಯ್ಯುತ್ತಿರುವ.... ಹಾಗೂ ದಿನಬೆಳಗಾದರೆ ಬೆಂಗಳೂರಿಗರಿಗೆ ದೇಶ ವಿದೇಶದ ಸುದ್ದಿ ಸಾರಾಂಶವನ್ನು ನೀಡುತ್ತಲಿರುವ..... ವೆಂಡರ್ ಕಣ್ಣಿನ ಶ್ರೀ ಶಿವು ಅವರಿಗೂ ನಮ್ಮ ಅಭಿನಂದನೆಗಳು.

ಎಲ್ಲಾ ಬ್ಲಾಗಿಗರ ಪರವಾಗಿ ...... ತಮ್ಮ ಸಾಹಿತ್ಯದ ಕೂಸುಗಳನ್ನು ಹೊರ ಜಗತ್ತಿಗೆ ನೀಡುತ್ತಲಿರುವ ಮೀನಿನ ಮೇಸ್ಟ್ರಿಗೆ ಹಾಗೂ ಕಣ್ಣಿನ ಡಾಕ್ಟರ್ ಗೆ ಹೃದಯಪೂರ್ವಕ ಅಭಿನಂದನೆಗಳು.

ಯಾರು ಯಾರು ಬರುವವರು:?
೧. ಬಾಲ್ಕನಿ ಸೀಟ್ ಬೇಕಿದ್ದವರು ಪಕ್ಕು ಮಾಮ, ದಾದ, ಬ್ಯಾಚುಲರ್ಸ್ ಗೆ ಹೆಣ್ಣು ಹುಡುಕುವ ಹಿರಿಯಣ್ಣ, ಮರಳು ಮತ್ತು ಸಿಮೆಂಟ್ ಮಧ್ಯದಲ್ಲೇ ಸೆಂಟಿಮೆಂಟ್ ತೋರಿಸುವ ಶ್ರೀ ಪ್ರಕಾಶ್ ಹೆಗಡೆಯವರಿಗೆ ಹೇಳಿ ಟವಲ್ ಹಾಕಿಸಬಹುದು....
೨. ಇನ್ನು ಗಾಂಧಿ ಕ್ಲಾಸ್ ನಲ್ಲಿ ಕೂರಲು ಬಯಸುವವರು ನನ್ನ ಪ್ರೀತಿಯ ತಮ್ಮ, ಅಮಾಯಕ, ಶಿಪ್ರ, ಮದುಮಗ ಶಿವಪ್ರಕಾಶ್ ಗೆ ಹೇಳಿ ಟವಲ್ ಹಾಕಿಸಬಹುದು......

ಸೂಚನೆ: ಒಬ್ಬೊಬ್ಬರಿಗೂ ಒಂದೊಂದು ಬಣ್ಣದ ಟವೆಲ್ ಇರುತ್ತೆ ...... ಯಾರು ಹೆದರಬೇಕಿಲ್ಲ ಮೊದಲೇ ನಿಮ್ಮ ಬಣ್ಣದ ಟವೆಲ್ ಹೇಳಿರುತ್ತಾರೆ.....

ಸ್ಥಳ : ಕನ್ನಡ ಭವನ
ದಿನಾಂಕ: ೨೨ ಆಗಸ್ಟ್ ೨೦೧೦
ಪ್ರಾರಂಭ: ಬೆಳ್ಳಿಗ್ಗೆ ೧೦ಕ್ಕೆ
ಮುಕ್ತಾಯ: ಮುಗಿಯುವುದು ನಮ್ಗೆ ಗೊತ್ತಿಲ್ಲ......
ಪುಸ್ತಕಗಳ ಹೆಸರು : ಜಲನಯನ ಮತ್ತು ಗುಬ್ಬಿ ಎಂಜಲು


Sunday, August 15, 2010

ಸ್ವತಂತ್ರ - ಅತಂತ್ರ


ಆಂಗ್ಲರ ಕಣ್ಣಿಗೆ ಗುರಿಯಾಗಿದ್ದ ಭರತ ಭೂಮಿಯಲಿ
ಸ್ವತಂತ್ರವೇ ಇಲ್ಲದೆ ಕೂಲಿಯಾಳುಗಳಾಗಿದ್ದರು
ತಮ್ಮ ತನವನ್ನೇ ಮರೆತು ಬಾಳು ಸಾಗಿಸುತ್ತಿದ್ದರು
ಅಂದು ಸ್ವತಂತ್ರ ಬರುವ ಮೊದಲು...........

ಸ್ವತಂತ್ರ ಪಡೆಯುವ ದಿಟ್ಟ ಹೆಜ್ಜೆಯಲ್ಲಿ
ಎಷ್ಟೋ ಹಳ್ಳಿಗಳು ಗುಡಿಸಿ ಗುಂಡಾಂತರ
ಜೊತೆಗೆ ಹೆಣ್ಣು ಮಕ್ಕಳಿಗೆ ಹಲವು ಅವಾಂತರ
ಗಂಡು ದಿಕ್ಕಿಲ್ಲದಂತೆ ಬರಡು ಜೀವನ ಮಾಡಿಬಿಟ್ಟಿದ್ದರಂದು.........

ಸ್ವತಂತ್ರ ಪೂರ್ವಾದಿನಗಳು ಕರಿ ನೆರಳಿನಂತೆ
ಸಾಗಿಸಿದ ಅದೆಷ್ಟೋ ಜನಸ್ಥೋಮ
ಒಲವಿನ ಹಸೆಮಣೆಯನ್ನೇ ಮರೆತು
ಸೇಡಿನ ಧಗೆಯಲಿ ಮಿಂದಿದ್ದರು ಅಂದು.....

ಹೆಣ್ಣು ಗಂಡು ಭೇದವಿಲ್ಲದಂತೆ ಹೀನಾಯ ಸ್ಥಿತಿಗೆ ತಳ್ಳಿ
ಆಂಗ್ಲ ದೊರೆಗಳು ರಾಜಠೀವಿಯಲ್ಲಿ ಮೆರೆದರು
ದುಃಖಕೆ ಸ್ಪಂದಿಸದೆ ಕಾಲ್ತುಳಿತಕೆ ಬಿದ್ದ
ಹತಾಷಾ ಜನರ ನೋವು ನರಗಟ್ಟಿದ್ದವಂದು........

ಸ್ವತಂತ್ರದ ಮುನ್ನಾದಿನಗಳ ನೋವಿನ ಕಹಳೆಗೆ
ಜಲಿಯನ್ ವಾಲಾ ಬಾಗ್ ನ ಮಾರಣಹೋಮವೇ
ಸಾಕು ನರಕಯಾತನೆ ಅನುಭವಿಸಿದ ಅಂದಿನ
ಅಮಾಯಕ ಜನರಿಗೆ ನೀಡಿದ ಆಂಗ್ಲರ ಕೊಡುಗೆ.........

ಹೋರಾಟ, ಬಡಿದಾಟ, ಕಾದಾಟ ಯಾವುದಕ್ಕೂ
ಬಗ್ಗದ ಆಂಗ್ಲರಿಗೆ ಕೊನೆಗೊಂದು ಹುಟ್ಟಿತೊಂದು ತಂತ್ರ
ಅದುವೇ ಶಾಂತಿಯುತ ಅಹಿಂಸಾ ಮಾರ್ಗದ ಮಂತ್ರ
ಮಂತ್ರ-ತಂತ್ರದಲೇಗೋ ಮೊಳಗಿತು ಸ್ವತಂತ್ರದ ಕಹಳೆ ...........

ಸ್ವತಂತ್ರ ಬಂದರೇನು ಪ್ರಜಾಪ್ರಭುತ್ವ ಇದ್ದರೇನು
ರಾಜಕೀಯದ ಹೆಸರಲಿ ಆಂಗ್ಲರಿಗಿಂತ ಕೀಳಾಗಿ
ಬಾಳುತಿಹರು ನಾವೇ ಆಯ್ಕೆ ಮಾಡಿದ
ದೇಶ, ರಾಜ್ಯ ಕಾಯುವ ಬದಲು...ನುಂಗೋ ಭಟರು........

ರಾಜಕೀಯದ ದಬ್ಬಾಳಿಕೆಯಲಿ ಬಿದ್ದೇಳುತಿರುವ
ಖಾದಿ ಬಟ್ಟೆಯ ಭ್ರಷ್ಟ ರಾಜಕಾರಣಿಗಳಿಗೆ
ಅಹಿಂಸಾ ಮಾರ್ಗ ಬಿಟ್ಟು ಬೇರಾವ ಮಾರ್ಗ
ಹುಡುಕಿ ತಳಿಸಬೇಕಿದೆಯೋ ತಿಳಿಯದು.........

ಎಂದು ಈ ಭ್ರಷ್ಟತೆ ಹೋಗಿ ನಿಷ್ಟತೆ ಬರುವುದೋ
ಮತ್ತೊಮ್ಮೆ ಗಾಂಧಿಯಂತ ಮಹಾನುಭಾವಿಗಳು
ಹುಟ್ಟಿ ಬರಬೇಕಿದೆ, ಸ್ವತಂತ್ರದ ಹೆಸರಲಿ
ಅತಂತ್ರವನ್ನು ಹೊರದೋಡಿಸ ಬೇಕಿದೆ.......



ಭಾರತ ಭೂಮಿಗೆ ಬ್ರಿಟೀಷರಿಂದ ಸ್ವಾತಂತ್ರ್ಯ ದೊರಕದಿದ್ದರೆ ಚೆನ್ನಾಗಿರುತ್ತಿತ್ತು ಮತ್ತು ಬ್ರಿಟೀಷರ ಆಳ್ವಿಕೆಯಲ್ಲಿಯೇ ನಾವೆಲ್ಲರೂ ಇರಬೇಕಿತ್ತು......?

ಬ್ರಿಟೀಷರ ಆಳ್ವಿಕೆಯಲ್ಲಿದ್ದಿದ್ದರೆ ನಮಗೆ ಹೊರದೇಶದಾದ್ಯಂತ ಒಳ್ಳೆಯ ಮರ್ಯಾದೆ ಇರುತ್ತಿತ್ತು. ನಮ್ಮಗಳಿಗೆಲ್ಲಾ ಬ್ರಿಟೀಷ್ ಪಾಸ್ ಪೋರ್ಟ್ ಸಿಗುತ್ತಿತ್ತು. ಅನುಕೂಲಗಳು ಹೆಚ್ಚಿನವಾಗುತ್ತಿತ್ತು, ಈಗ ನಮ್ಮ ದೇಶದಲ್ಲಿ ಮೋಸ, ವಂಚನೆ,ಧಗ, ಕಳ್ಳತನ, ಕೊಲೆ, ಅತ್ಯಾಚಾರ ಎಲ್ಲವೂ ಮಿತಿಮೀರಿದೆ......... ರಾಜಕೀಯದವರು ಅತಿಯಾಗಿ ವರ್ತಿಸುತ್ತಾರೆ - ಎಂಬುದು ನಮ್ಮ ಸಹದ್ಯೋಗಿಯೊಬ್ಬರ ವಾದ.....

ನಮಗೆ ನಮ್ಮತನ ಎನ್ನುವುದು ಸ್ವತಂತ್ರ ಬಂದಿದ್ದರಿಂದಲೇ ಸಾಧ್ಯ.... ನಮ್ಮನ್ನು ನಾವು ಗುರುತಿಸಿಕೊಳ್ಳಲು ಸ್ವತಂತ್ರವೇ ಸರಿಯಾದ ದಾರಿ...... ಅವರ ಆಳ್ವಿಕೆಯಲಿದ್ದರೆ ನಾವುಗಳು ಕೆಲಸ ಮಾಡಿ ಬ್ರಿಟೀಷರು ಹೆಸರು ತೆಗೆದುಕೊಳ್ಳುತ್ತಲಿದ್ದರು. ಅವರ ಪಾಸ್ ಪೋರ್ಟ್ ನಿಂದ ನಮಗ್ಯಾವುದೇ ಅನುಕೂಲವಾದರೂ ನಮ್ಮ ಸ್ವಂತಿಕೆ ಇರುವುದಿಲ್ಲ. ಎಲ್ಲಾ ದೇಶದಲ್ಲಿ ಮೋಸ ವಂಚನೆ, ಕೊಲೆ ದರೋಡೆ ಇದ್ದೇ ಇರುತ್ತೆ ದೂರದಲ್ಲಿರುವವರಿಗೆ ಕಾಣುವುದಿಲ್ಲ ನಮ್ಮ ದೇಶದ ಬಗ್ಗೆ ನಾವು ಹೆಚ್ಚು ತಿಳಿದುಕೊಳ್ಳುತ್ತೇವೆ ಆದ್ದರಿಂದ ನಮ್ಮ ದೇಶದಲ್ಲೇ ಹೆಚ್ಚು ತಪ್ಪು ನೆಡೆಯೋದು ಎಂದು ತಪ್ಪು ಭಾವಿಸುತ್ತೇವೆ - ಎಂಬುದು ನನ್ನ ವಾದ

ನೀವು ಸಹ ನಿಮ್ಮ ನಿಮ್ಮ ವಾದಗಳನ್ನು ಮಂಡಿಸಿ.... ನಿಮಗೇನನ್ನಿಸುತ್ತೋ ಅದನ್ನು ತಿಳಿಸಿ.....

Thursday, August 5, 2010

ಹೀಗೆಲ್ಲಾ ಆಗುತ್ತಾ.....

ಆಫೀಸಿಗೆ ಬೆಳ್ಳಿಗ್ಗೆ ಬೆಳ್ಳಿಗ್ಗೆ ಎದ್ದು ರೆಡಿಯಾಗಿ ಹೋಗೋದು ಇದೆಯಲ್ಲಾ.... ಒಂದು ತರಾ ಬೇಜಾರು....... ಏನು ಮಾಡೋದು ಹೊಟ್ಟೆಪಾಡು... ಹೋಗ್ಲೇಬೇಕು.......

ಯಾವಾಗಲೂ ಬೆಳ್ಳಿಗ್ಗೆ ೬.೪೦ ಅಷ್ಟರಲ್ಲಿ ನನ್ನವರು ರೆಡಿಯಾಗಿ ನಿಲ್ಲಿಸಿದ್ದ ಕಾರನ್ನು ಸ್ವಲ್ಪ ಹೊತ್ತು ಸ್ಟಾರ್ಟ್ ಮಾಡಿ ಆನಂತರ ಮನೆ ಮುಂದಕ್ಕೆ ತಂದು ನನಗಾಗಿ ಕಾಯೋ ವಾಡಿಕೆ... ಏನು ಮಾಡೋದು ನಾವು ಹೆಂಗಳೆಯರು ಸ್ವಲ್ಪ ಹಾಗೆ ಕನ್ನಡಿ ಎಂಬ ಭೈರವನ ಜೊತೆ ಒಡನಾಟ ಜಾಸ್ತಿ..... ಅಂದು ಹೊರಗಡೆ ನನಗಾಗಿ ಕಾರ್ ನಿಲ್ಲಿಸಿ ಕಾಯುತ್ತಿದ್ದ ನನ್ನವರು ಬೈಯ್ದಾರು ಎಷ್ಟೊತ್ತು ಶೃಂಗಾರ ಮಾಡಿಕೊಂಡು ಬೇಗ ಬರೋದಿಕ್ಕೆ ಆಗೋಲ್ಲವಾ..... ಎಂದರೆ..!!? ಎಂದು ಲಘುಬಗೆಯಿಂದ ಮನೆಗೆ ಬೀಗ ಜಡಿದು ಓಡುತ್ತಿದ್ದೆ..... ಅಷ್ಟರಲ್ಲಿ ನನ್ನ ಮುಂದೆ ಒಬ್ಬಾಕೆ ಹೋಗ್ತಾ ಇದ್ದಳು ನಾನು ಅವಳನ್ನೂ ಹಿಂದಿಕ್ಕಿ ಬರಬರನೇ ಹೋದವಳೇ ಎದುರೇ ಇದ್ದ ಕೆಂಬಣ್ಣದ ಕಾರನ್ನು ಹತ್ತಲು ಹತ್ತಿರವಾಗುತ್ತಿದ್ದಂತೆ ನನಗೆ ಕಾರಿನಲ್ಲಿರೋರು ಯಾರು ಅಂತ ಅನ್ನಿಸ್ತಾ ಇತ್ತು......... ಅಯ್ಯೋ ಇದೇನು ನನ್ನವರು ಗಡ್ಡ ಬಿಟ್ಟಿಲ್ಲ... ಶೇವ್ ಮಾಡ್ತಾರಲ್ಲಾ ಯಾವಾಗಲೂ, ಇಂದು ಅವರ ಮುಖ ನೋಡಿದ್ನಾ ಇಲ್ವಾ........ ಮಬ್ಬು ಮಬ್ಬಾಗಿ ಕಾರಿನೊಳಗಿರುವ ವ್ಯಕ್ತಿ ಕಾಣ್ತಾ ಇದ್ರು....... ಕನ್ನಡಕ ಬೇರೆ ಹಾಕಿರ್ಲಿಲ್ಲ..... ಏನೋ ಬಿಡು ಎಂದು ಮತ್ತೂ ಹತ್ತಿರ ಹೋಗ್ತಾ ಇದ್ದ ಹಾಗೆ ಕಾರ್ ಒಳಗಿಂದ ಕೈ ಅಲುಗಾಡಿದ ರೀತಿ ಕಾಣುಸ್ತಾ ಇತ್ತು ............ ಭಿಕ್ಷೆಗೆ ಬಂದವರನ್ನ ಮುಂದಕ್ಕೆ ಹೋಗು ಅಂತಾರಲ್ಲ ಹಾಗೆ ಸನ್ನೇ ಮಾಡುತ್ತಿರುವ ಹಾಗೆ ಕಾಣಿಸಿತು ಆದರು........ ನಾನು ಕಾರಿನ ಫ್ರೆಂಟ್ ಸೀಟ್ ಬಾಗಿಲು ತೆಗೆದೆ ಆಗಲೇ ಗೊತ್ತಾಗಿದ್ದು ನೋಡೀ..........

ಅಬ್ಬಾ..!!!! ಇದು ನನ್ನವರಲ್ಲ ನಮ್ಮ ಕಾರಲ್ಲಾ ನಾನು ಯಾವುದೋ ಕಾರಿಗೆ ......... ಹತ್ತಿಕೊಳ್ಳಲು ಬಂದುಬಿಟ್ಟಿದ್ದೀನಿ ಎಂದು. ಆಮೇಲೆ ಮುಂದೆ ನೋಡಿದ್ರೆ ಅಲ್ಲೇ ಇದೆ ನಮ್ಮ ಕಾರ್ ........ (ಆತ ಕೈ ಸನ್ನೆ ಮಾಡಿದ್ದು ಮುಂದಿರುವ ಕಾರ್ ನಿಮ್ಮದು ಎಂದು ಆಗ ಅರ್ಥವಾಯ್ತು) ನನ್ಗೆ ನಾಚಿಕೆಯಾಗಿ ಸಾರಿ ಕೇಳಿದೆ.......... ಕಾರಿನಲ್ಲಿ ಕುಳಿತಿರುವವ ಏನೋ ಸುಮ್ಮನಾದ ನಾನು ಒಬ್ಬಾಕೆನ ಹಿಂದಿಕ್ಕಿ ಬಂದಿದ್ದೆನಲ್ಲಾ .....!!! ಆಕೆ ಗುರ್ ಎಂದಾಳು ಎಂದು ಹಿಂತಿರುಗಿ ಅವಳಿಗೂ ಸಾರಿ ಹೇಳಿದೆ..........ಆಕೆ ಏನೂ ಮಾತನಾಡಿದ್ದು ಕೇಳಿಸಲಿಲ್ಲ, ಜೊತೆಗೆ ಅವರ ಮುಖಭಾವವೂ ತಿಳಿಯಲಿಲ್ಲ ಕಾರಣ ಅವರ ಕಣ್ಣು ಮಾತ್ರ ಕಾಣುವಂತಿದ್ದ ಉಡುಪು.....ಆದ್ರೂ ಅವರ ಕಣ್ಣಿನಲ್ಲೇ ಗೊತ್ತಾಯ್ತು ಪರವಾಗಿಲ್ಲ ಎಂದಿದ್ದು..........

ಅಯ್ಯೋ....... ಅವರಿರ್ಲಿ ಇಲ್ಲಿ ನನ್ನವರು ಕಾರಿನಲ್ಲೇ ಕೂತು..... ಹಿಂಬದಿ ಬರುವ ಕಾರುಗಳ ಕಾರುಬಾರು ನೋಡುವ ಕನ್ನಡಿಯಲ್ಲೇ ನನ್ನನ್ನು ನೋಡ್ತಾ ಇದ್ದಾರೆ..... ಹುಸಿ ಹುಸಿ ನಗುವಿನಲ್ಲಿ ನಿನ್ಗೆ ಅಷ್ಟು ಗೊತ್ತಾಗೋಲ್ವ ನಮ್ಮ ಕಾರು ಯಾವ್ದು ಅಂತಾ...!!!!

ಅಯ್ಯೋ ಇಲ್ಲಪ್ಪ ನಾನು ಆತುರವಾಗಿ ಬರ್ತಾ ಇದ್ದೇ ಅಲ್ಲದೇ ಆ ಕಾರು LANCER.... ಒಂದೇ ಬಣ್ಣ.... ಕನ್ನಡಕ ಬೇರೆ ಹಾಕಿರ್ಲಿಲ್ಲ... ಮಬ್ಬು ಮಬ್ಬು ಒಳಗಿರೋರು ನೀವಲ್ಲ ಅಂತಾ ತಿಳಿಲಿಲ್ಲ....

ಕನ್ನಡಕ ಹಾಕ್ಕೊಳ್ಳೊದು ಅಲ್ವಾ....?

ಅಯ್ಯೋ ಕನ್ನಡಕ ಮತ್ತೆ ವಾಚ್ ಇವೆಲ್ಲಾ ಹಾಕಿಕೊಳ್ಳೋಸ್ಟರಲ್ಲಿ ಟೈಮ್ ಆಗುತ್ತೆ ಅದರ ಬದಲು ಕಾರಿನಲ್ಲಿ ಕುಳಿತಾಗ ಸಮಯ ಇರುತ್ತೇ ಅಂತಾ ದಿನಾ ಹಾಗೆ ತರ್ತೀನಲ್ಲ ಇವತ್ತು ಹಾಗೇ ಬಂದೆ...... ನೀವು ನಿಲ್ಲಿಸೋ ಜಾಗದಲ್ಲಿ ಆ ಕಾರು ತಂದು ಅದು ಅಲ್ಲದೆ ಒಂದೇ ತರಹದ ಕಾರು ನಿಲ್ಲಿಸಿದ್ರೆ ಹಿಂಗೆ ಆಗುತ್ತೆ....... ಏನು ಮಾಡೋದು...... ಆ ಗಂಡ ಹೆಂಡತಿ ಏನು ತಿಳಿದಿದ್ದ್ರೆ ಸಾಕು.... ಎಂದು........ ನಾ ಏನೇ ಬಡಬಡಾಯಿಸಿದರೂ ನನ್ನವರಿಗೆ ನಗುನೋ ನಗು....

ಇಷ್ಟೆಲ್ಲಾ ಮಾತಾಡುವಷ್ಟರಲ್ಲಿ ಆ ಕಾರ್ ನಮ್ಮ ಮುಂದೆ ಹಾರಿ ಹೋಯ್ತು ಅಷ್ಟರಲ್ಲಾಗಲೇ ಕನ್ನಡಕ ಕಣ್ಣಿಗೆ ಬಂದಿತ್ತು ಅಗೋ ನೋಡಿ ಆ ಕಾರಿನ ನಂಬರ್ ಕೂಡ ಹೆಚ್ಚು ಕಮ್ಮಿ ನಮ್ಮ ಕಾರಿನ ನಂಬರ್ ತರವೇ ಇದೇ......... ಏನು ಕರ್ಮನೋ ಬೆಳಿಗ್ಗೆ ಬೆಳಿಗ್ಗೆ ....... ನನ್ಗೆ ನಾಚಿಕೆಯಾಗೋ ಹಾಗೆ ಈ ಕೆಲಸ ಮಾಡಿದ್ದೆ ... ಅಂದು !!!...........

ಇದೆಲ್ಲಾ ಅವಾಂತರವಾದಾಗಿನಿಂದ ದಿನ ಕಾರ್ ನಂಬರ್ ಪ್ಲೇಟ್ ನೋಡಿ.... ಕಾರಿನೊಳಗೆ ಇರುವವರು ನನ್ನವರೇ ಎಂದು ಖಾತ್ರಿ ಮಾಡಿಕೊಳ್ಳುತ್ತೇನೆ ... ಅದು ಏನಾದರು ತಡವಾಗಿ ಆಚೆ ಹೋದರೆ....... ಸಾಮಾನ್ಯವಾಗಿ ನನ್ನವರ ಜೊತೆಯಲ್ಲೇ ಹೆಜ್ಜೆ ಹಾಕೋಕ್ಕೆ ಪ್ರಾರಂಭಿಸಿದ್ದೀನಿ ಯಾಕೆ ಗೊತ್ತಾ...!!! ಪಕ್ಕದಲ್ಲೇ ಇದ್ದರೆ ಅವರು ಯಾವ ಕಾರಿನಲ್ಲಿ ಕೂರುತಾರೋ ನಾನೂ ಅದೇ ಕಾರಿನಲ್ಲಿ ಕೂರುತ್ತೇನೆ...... ಇದೆ ಸರಿಯಾದ ಐಡಿಯಾ ಅಲ್ಲವೆ.....

ಈಗ ಆ ಕಾರಿನವರು ಎದುರು ಸಿಕ್ಕಾಗ ನಾನು ಅವರುಗಳ ಮುಖವೇ ನೋಡೋಲ್ಲ ........... ಗೊತ್ತಿಲ್ಲದವಳಂತೆ ಇದ್ದು ಬಿಡ್ತೀನಿ.... ಹೀಗೂ ಆಗುತ್ತೆ ಕೆಲವೊಮ್ಮೆ ಏನು ಮಾಡೋದು ಅಲ್ವಾ....???

ಈ ಲೇಖನ ಯಾಕೆ ಬರೆದೆ ಅಂತೀರಾ...!!! ಇವತ್ತು... ನಾನು ನನ್ನ ಕನ್ನಡಕವನ್ನ ಮರೆತು ಆಫೀಸಿಗೆ ಬಂದಿದ್ದೀನಿ (ನನ್ನವರಿಗೆ ಹೇಳ ಬೇಡಿ ಆಮೇಲೆ ಬೈತಾರೆ...!!!) ಹಹಹಹ ಇಂದು ಇಲ್ಲಿ ಆಫೀಸಿನಲ್ಲಿ ಏನು ಫಜೀತಿ ಆಗುತ್ತೋ ಗೊತ್ತಿಲ್ಲ ..... ಮಬ್ಬು ಮಬ್ಬಿನಲ್ಲೇ ಟೈಪಿಸಿದ್ದೇನೆ... ತಪ್ಪಿದ್ದರೆ ತಿದ್ದಿಕೊಳ್ಳಿ ಹಹಹಹ......

Monday, July 12, 2010

ಪದ

ಪದಗಳಿಗೆ ಶಕ್ತಿ ಇದೆ
ಅದು ಜೀವನ ಮತ್ತು ಸಾವಿನ
ಸಂಬಂಧ ಸೃಷ್ಟಿಸುವಲ್ಲಿ..........

ಪದಗಳಿಗೆ ಹೊಳಪಿದೆ
ಜೀವನದ ನೆಲೆ
ಕಾಣುವಲ್ಲಿ.....

ಪದ ಬಳಕೆಗೆ ಮಿತಿಯಿದೆ
ಅದು ಎರಡು ಜೀವಗಳ
ಅರ್ಥ ಮಾಡಿಕೊಳ್ಳುವಲ್ಲಿ........

ಪದಗಳಲಿ ಭಯವಿದೆ
ಪದ ಬಳಸುವ
ಏರುಪೇರಿನಲ್ಲಿ........

ಪದಗಳಲಿ ನಗುವಿದೆ
ನಗೆಯ ಪದ
ಬಳಸಿದಲ್ಲಿ......

ಪದಗಳಲಿ ದ್ವೇಷವಿದೆ
ಪದಗಳು
ಇರುಸುಮುರುಸಿನಲ್ಲಿ....

Sunday, June 20, 2010

ಬಿಸಿಗಾಳಿ


ಬಿಸಿಗಾಳಿ ಸುಡು ಬಿಸಿಲಿನ ಗಾಳಿ
ಬೇಸರಿಕೆಯ ಮನಸಿನಲಿ
ತೋಯ್ಯ್ದಿದೆ ಮೈ ಉರಿ ಬಿಸಿಲಿನಲಿ......


ಒಮ್ಮೆ ಓಡಾಡಿ ಬಂದರೆ ಸಾಕು
ದಿನವೆಲ್ಲ ಸುದಾರಿಸಿಕೊಳ್ಳ ಬೇಕು

ಈ ಮರುಭೂಮಿಯ ಬಿಸಿಲ ಧಗೆಗೆ.......


ಬಾನಾಡಿಯ ಆ ನೇಸರ
ಭುವಿಗೆ ಉಗುಳುತಿರುವನು

ಬಿಸಿ ಬಿಸಿಯ ಕೆಂಡದೋಕುಳಿ......


ಕಡಲ ಅಬ್ಬರವೇ ಇದ್ದರೂ
ಅವಳೂ ತಣ್ಣಗಾಗಿಸಲಿಲ್ಲ

ನೇಸರನ ಧಗ ಧಗಿಸೋ ಕೋಪವ.......


ಮರುಭೂಮಿಗೆ ಮರುಳಾಗಿ
ಕ್ರೂರ ನೋಟವನೇ ಬೀರಿ
ಬಿಸಿ ಗಾಳಿಯಾಗಿ ಬೀಸುತಿಹನು ನೋಡಿ........


ಬಿಸಿಗಾಳಿಯೇ ನಾ ಕಾಡಿ ಬೇಡುವೆ
ನಿನ್ನ ದೂಡಿ ಸಿಹಿಗಾಳಿ
ತಂಪೆರಗಿ ತಟ್ಟುವುದೆಂದು ಹೇ
ಳು.....

ಬಿಸಿಗಾಳಿಗೆ ನಲುಕುತಿರುವೆವು
ಈ ಬಿಸಿಲ ಮೂರ್ನಾಲ್ಕು ತಿಂಗಳು

ಕಳೆವುದು ಹೇಗೋ ಏನೋ ಕಾಣೆನು........

------------

ಮರುಭೂಮಿಯಲ್ಲಿ ನೇಸರನೇಕೋ ಬಲು ಮುನಿಸಿಕೊಂಡುಬಿಟ್ಟಿದ್ದಾನೆ. ಅದಕ್ಕೆ ಈ ಬಿಸಿಲ ಧಗೆ ಎಲ್ಲೆ ಮೀರಿ ಸಾಗುತಿದೆ. ಇಲ್ಲಿನ ಬಿಸಿಲು ೫೨-೫೩ ಡಿಗ್ರಿಗೂ ಮೀರಿಬಿಟ್ಟಿದ್ದೆ. ಬಿಸಿಲಿಗೆ ಮೈ ಒಡ್ಡಿ ಕೆಲಸ ಮಾಡುವವರ ಕಂಡರೆ ಮನ ಕಲಕುತ್ತದೆ.... ಆದಷ್ಟು ಈ ಬಿಸಿಲ ಬೇಗೆ ಕಳೆಯಲೆಂದು ದೇವರಲ್ಲಿ ಪ್ರಾರ್ಥಿಸುತ್ತೇವೆ.

Thursday, June 10, 2010

ಬಹುಶಃ ಇದೇ ನನ್ನ ಕೊನೆಯ ಪತ್ರ.......

ಎಲ್ಲರಿಗೂ ನಮಸ್ಕಾರ...!!!!

ಮನಸಿಟ್ಟು ಓದಿ, ಮನಸ್ಸಲ್ಲೇ ಅನುಭವಿಸಿ, ಮನಸಲ್ಲೇ ಆಶಿಸಿ, ಮನದಾಳದಿಂದ ಉತ್ತರಿ.........

ನನ್ನ ಹೆಸರು ಕನ್ನಡಾಂಬೆ, ನನ್ನ ಊರು ಕರ್ನಾಟಕ, ನನ್ಗೆ ಸಾವಿರಾರು ಮಕ್ಕಳು, ಹೆತ್ತ ತಾಯಿ ನಿನ್ಗೂ ಗೊತ್ತಿಲ್ವಾ ಅಂತೀರಾ..!!! ಏನು ಮಾಡೋದು ವಯ್ಯಸ್ಸಾಗಿರೋ ತರ ಮಾಡಿದ್ದಾರೆ ನನ್ನ ಮಕ್ಕಳೆಲ್ಲರು.....ಎಷ್ಟು ಮಕ್ಕಳೆಂದು ನೆನಪಿಸಿಕೊಳ್ಳೋಕೆ ಹಾಗೋಲ್ಲ.....

ಇವತ್ತು ನಾನು ನನ್ನ ಮನಸಲ್ಲಿರೋದನ್ನ ಈ ಮೃದುವಾದ ಮನಸಿನಲ್ಲಿ ಹೇಳ್ಕೊಳೋಣ ಅಂತ ಬಂದೆ ನೀವೆಲ್ಲಾ ಓದಿ ಓಡಿಹೋಗದೆ. ಸ್ವಲ್ಪ ನನಗೋಸ್ಕರ ಏನಾದರು ಮಾಡಿ ಆಯ್ತಾ..?

ನನ್ನ ಮಕ್ಕಳು ತುಂಬಾ ಒಳ್ಳೆಯವರು, ಕೆಲವರು ವಿದ್ಯಾವಂತರು, ಕೆಲವರು ದಡ್ಡರು, ಕೆಲವರು ಕೆಲಸಕ್ಕೆಂದು ದೂರ ಹೋಗಿದರೆ, ಕೆಲವರು ನನ್ನ ಭೂಮಿ ತಾಯಿನ ಪೂಜಿಸ್ತಾ ಇದಾರೆ. ಹುಟ್ಟಿದ ಮಕ್ಕಳು ಎಲ್ಲಾ ಅಪ್ಪ ಅಮ್ಮನ್ನ ಚೆನ್ನಾಗಿ ನೋಡುಕೋತಾರಾ ಹೇಳಿ, ಹಾಗೆ ನನ್ನ ಮಕ್ಕಳೂ ಕೂಡ, ಕೆಲವರು ಹಾಗೆ, ಇನ್ನು ಕೆಲವರು ಹೀಗೆ ಎಂಬಂತೆ ಇರ್ತಾರೆ....

ನನ್ನವರು ಯಾರು ನನ್ನ ನೋಡ್ಕೊತಾರೋ ಬಿಡ್ತಾರೋ ಅದು ಬೇರೆ ವಿಷಯ, ಆದರೆ ನನ್ನ ಮನಸಿಗೆ ನೋವಂತು ಮಾಡ್ತಾರೆ. ನನ್ನ ನೋಡಿಕೊಳ್ಳುವುದು ಬೇಡ, ಆದರೆ ನನ್ಗೆ ಅಮ್ಮ ಅನ್ನೋ ಗೌರವ ಕೊಟ್ಟರೆ ಸಾಕು....

ನನ್ನ ಇಷ್ಟು ಮಕ್ಕಳು ಹೇಗೆ ಬೇರೆ ಬೇರೆ ಆಗಿದಾರೆ ಗೊತ್ತೇ..? ಉತ್ತರ ಕನ್ನಡಿಗರು, ದಕ್ಷಿಣ ಕನ್ನಡಿಗರು, ಕರಾವಳಿ ಕನ್ನಡಿಗರು- ಹೀಗೆ ಏನೆಲ್ಲಾ ಆಗೋಗಿದೆ, ಊರು, ಮನೆ ಬದಲಾಗೋದು ಆಯ್ತು ಅವರ ಮಾತು ನೋಡಬೇಕು ಹೇಗೆ ಗೊತ್ತ..? ಈ ಬೆಂಗಳೂರು ಕಡೆಯವರು ಕನ್ನಡಮ್ಮನ ಜೊತೆ ತಮಿಳಮ್ಮನನ್ನು ಬೆರಿಸಿಕೊಂಡು ಮಾತಾಡ್ತಾರೆ, ಇನ್ನು ಉತ್ತರ ಕರ್ನಾಟಕಕ್ಕೆ ಹೋದರೆ ಅಲ್ಲಿ ಮರಾಠಿಯಮ್ಮ ಜೊತೆಗೆ ಹಿಂದಿಯಮ್ಮನ ಸೇರಿಸಿಕೊಂಡಿರ್ತಾರೆ, ಹಂಗೆ ಈ ಬಳ್ಳಾರಿ ಸೀಮೆಗೆ ಬಂದರೆ ಅವರೆಲ್ಲ ಮಾವಾಳ್ಳು-ಮೀವಾಳ್ಳು ಅಂತ ತೆಲುಗಮ್ಮನ್ನ ತುಂಬಿಸಿಕೊಂಡಿದ್ದಾರೆ. ಇಷ್ಟೆಲ್ಲಾ ಆಯ್ತ ಇನ್ನು ಕರಾವಳಿ ಕಡೆ ಹೋದರೆ ಅದೇನೋ ತುಳು, ಮತ್ತೆ ಕೊಂಕಣಿ ಅಮ್ಮಂದಿರ ಜೊತೆ ಬೆರೆತು ಬಿಟ್ಟಿದ್ದಾರೆ, ಕೆಲವು ಮಕ್ಕಳು ಉರ್ದು, ಇಂಗ್ಲೀಷಿಯಮ್ಮ ಎಂದುಕೊಂಡು ಕನ್ನಡಮ್ಮ ನೀ ಯಾರಮ್ಮ ಅಂತಾರೆ. ನೋಡಿ ಹೀಗೆ ನನ್ನೊಟ್ಟೆನಲ್ಲಿ ಹುಟ್ಟಿದ ಮಕ್ಕಳೇ ಹೀಂಗವ್ರೆ, ನಾ ಯಾರ ಹತ್ರಾ ಅಂತ ಹೋಗಿ ನನ್ನ ಉಳಿಸಿ, ಬೆಳೆಸಿ ಇರೋವಾಗ ಚೆನ್ನಾಗಿ ನೋಡ್ಕೊಳ್ಳಿ ಅಂತ ಬೇಡೋದು. ನಮ್ಮವರೇ ಇಲ್ಲದಾಗ ಬೇರೆಯವರು ಬರ್ತಾರ ನನ್ನ ಗೋಳಿನ ಕಥೆ ಕೇಳೋಕೆ.......

ನನ್ನ ಪಕ್ಕದ ಮನೆನಲ್ಲಿ ತಮಿಳಮ್ಮ ಅಂತಾ ಇದಾರೆ ಅವರ ಮಕ್ಕಳು ನೋಡಬೇಕು ಅಬ್ಬಾ!!! ಆಶ್ಚರ್ಯ ಆಗ್ತದೆ ಅವಳ ಮಕ್ಕಳೇನಾ ಇವೆಲ್ಲ ಅಂತಾ.... ಆ ಮಕ್ಕಳು ತಮ್ಮ ತವರೂರು ಬಿಟ್ಟು ಬೇರೆ ಊರಿಗೆ ಹೋಗವ್ರೆ ಆ ಊರಿನಲ್ಲಿ ಇರೋರಿಗೆಲ್ಲ ತಮಿಳಮ್ಮನ ಪ್ರೀತಿನೂ ತುಂಬವ್ರೆ ಗೊತ್ತಾ.... ಆಮೇಲೆ ಇನ್ನೊಂದು ಈ ಇಂಗ್ಲೀಷಮ್ಮ ಇದಾಳಲ್ಲ ಆಕೆ ಏನು ನಮ್ಮ ಪಕ್ಕದ ಮನೇಯವಳಲ್ಲ ಆದ್ರೂ ಎಷ್ಟೋಂದು ದೂರ ನಮ್ಗೂ ಅವರಿಗೂ ಆದರೆ ನನ್ನ ಮಕ್ಕಳೆಲ್ಲಾ ಮಾರು ಹೋಗಿದಾರೆ. ಆಕೆಯ ಮೈಮಾಟಕ್ಕೋ, ವಯ್ಯಾರಕ್ಕೋ ಗೊತ್ತಿಲ್ಲ. ಈಗ ಹೇಗಾಗಿದೆ ಗೊತ್ತ ನಾನು ಮಲತಾಯಿ, ಅವಳೇ ಹೆತ್ತತಾಯಿ..... ನನ್ನ ಪಾಡು ಯಾರಿಗೂ ಬೇಡ ಮುಂದೊಂದು ದಿನ ಏನು ಮಾಡ್ತಾರೋ ಅನ್ನೋ ಭಯ. ನಾ ಆ ತಮಿಳಮ್ಮನ ಮಕ್ಕಳಂತೆ ನೀವೂ ಆಗ್ರೋ ಅಂತ ಕೇಳೊಲ್ಲ, ಇಂಗ್ಲೀಷಮ್ಮನ ತರ ನಿನ್ನ ತಾಯಿನ ಎಲ್ಲೆಡೆ ಹಬ್ಬಿಸಿ ಅಂತ
ಕೇಳೊಲ್ಲ..........ಏನಾದರೂ ಆಗಲಿ ನಾನು ನಾನು ಅದೇ ನಾನು........ ಹೆತ್ತಮ್ಮ ಅಲ್ಲವಾ ನನ್ನನ್ನ ನಾನಾಗಿ ಸಾಯೋಕೆ ಬಿಡಿ ನಾನಾಗಿ ಸತ್ತರೆ ನನ್ನ ನೆನಪು ನಿರಂತರಾ ಅನ್ನೋ ಹಾಗೆ ಭಾಷೆನೂ ನಿರಂತರವಾಗಿ ಇರುತ್ತೆ......... ಇನ್ನು ಸಾಯುವ ವಯಸ್ಸು ಬಂದೇ ಇಲ್ಲ ಆಗಲೇ ನನ್ನ ಉಸಿರನ್ನ ಚಿವುಟು ಹಾಕಲಿಕ್ಕೆ ನನ್ನ ಹೊಟ್ಟೆನಲ್ಲಿ ಹುಟ್ಟಿದ ಕುಡಿಗಳೇ ಕಾದಿವೆ. ನನಗೆ ಇದಕ್ಕಿಂತಾ ಬೇಸರದ್ದು, ನೋವಿನ ಜೊತೆ ಸಂಕಟ ತರೋ ವಿಷಯ ಬೇರೇನಿದೆ ಹೇಳಿ ನೀವೆ...?

ಪರ ಮಾತೆಯನ್ನು ಪ್ರೀತಿಸಿರಿ, ನನ್ನನ್ನೂ ಸಹ ಉಳಿಸಿ, ನಾ ಎಂದೂ ನನ್ನೊಬ್ಬಳ ಸಂಗಡವೇ ಇರಿ ಎಂದು ನಾನೇಳುವುದಿಲ್ಲ ಇರುವ ಮನೆಯಲ್ಲಿ
ಎಲ್ಲರನ್ನು ಆಹ್ವಾನಿಸು, ಪ್ರೀತಿಸಿ ಹಾರೈಕೆ ಸಲ್ಲಿಸು...ಆದರೆ ನನ್ನ ಇರುವಿಕೆಯಲ್ಲೇ ಎಲ್ಲವನ್ನು ಸ್ವೀಕರಿಸು.....

ನನ್ನ ಉಸಿರು ಕೊನೆವರೆಗೂ, ನಿಮ್ಮ ಮೊಮ್ಮಕ್ಕಳು, ಮರಿಮಕ್ಕಳು ಎಲ್ಲರು ಇ
ಗೆ ಈ ಭೂಮಿ ಇರುವವರೆಗೂ ನಾನು ರಾರಜಿಸಬೇಕೆಂದರೆ ನನ್ನ ಉಸಿರಿಗೆ ಹರ್ಷ ಕೊಡಿ ................ ಇಲ್ಲ ನೀ ಹೆತ್ತಮ್ಮ, ನನ್ನಮ್ಮ ನಿನ್ನೊಡಲ ಧಗ ಧಗಿಸಿ ಹುರಿಯುವಂತೆ ಮಾಡೋಲ್ಲವೆಂದರೆ ನಿಮ್ಮ ಪ್ರತಿ ಹೆಜ್ಜೆಯಲ್ಲೂ ನನ್ನೆಸರ ಉಸಿರಾಡಿ.........ಈ ತಾಯ ಪ್ರೀತಿಯನ್ನ ಉಳಿಸಿಕೊಂಡರೆ ನಾ ಕೊನೆವರೆಗೂ ನಿಮ್ಮೊಟ್ಟಿಗೆ......ಇಲ್ಲವೆ ನೀವು ಮಲತಾಯಿಯೊಟ್ಟಿಗೆ ನಿರ್ಧಾರ ನಿಮ್ಮದು ಬದುಕು ನನ್ನದು............

ನಿಮ್ಮ.......
ಕನ್ನಡಾಂಬೆ

Thursday, June 3, 2010

ಕುಡಿತ - ಕಾಂತಿಹೀನ

ಕುಡಿತ

ಸುಂದರ ಬದುಕಿದೆ
ನನ್ನವರೆಲ್ಲರೂ ಇದ್ದಾರೆ
ಯಾವ ಕೊರೆತೆಯೂ ಇಲ್ಲ
ಬಾಳುವಾಸೆ ಅತಿಯಾಗಿದೆ
ಆದರೆ........
ನನ್ನ ಜೀವ ದಿನ ಎಣಿಸುತಿದೆ
ಕಾರಣ.......
ವಯಸ್ಸಲ್ಲಿ ಕುಡಿದು ತೇಗಿದ್ದು....
ಇಂದು ಮರಣಕ್ಕೆ ಹತ್ತಿರವಾದೆ
ಇನ್ನೆಲ್ಲಿ ......
ಬಾಳುವಾಸೆ ನನ್ನವರೊಟ್ಟಿಗೆ.
ಚಟ್ಟವನ್ನೇ ......
ಬಯಸಬೇಕಿದೆ ಈ ಮಧ್ಯವಯಸ್ಸಿಗೆ..?!!!

________________


ಕಾಂತಿಹೀನತೆ


ಬಾಗಿಲಲಿ ಪೂಜೆಗೈದಿದೆ
ತೋರಣ ಹಚ್ಚಹಸಿರಾಗಿದೆ
ಮನೆಯೊಳಗಣ ದೀಪದ ಬೆಳಕಿದೆ
ಒಳಗೋಗುವಾಸೆ
ಹೋದರೆ.......
ಆ ದೀಪದ ಕಾಂತಿಗೆ
ಪ್ರಜ್ವಲತೆಯ ಮಿಂಚಿನ ಶಕ್ತಿಯೇ ಇಲ್ಲ
ಕಾರಣ..........
ಮನೆಯ ನಂದಾದೀಪದ ಕಾಂತಿ
ಕಳೆಗುಂದಿದೆ........

Tuesday, May 25, 2010

ಮರಳ ಮಲ್ಲಿಗೆಗೆ ನೀರೆರೆಯಬೇಕಿದೆ

ಏನು ಇದು ಮರಳ ಮಲ್ಲಿಗೆಗೆ ನೀರೆರೆಯಬೇಕಾ, ನಮ್ಮೂರಿಂದ ಅವರಿಗೆ ನೀರು ಹೇಗಪ್ಪಾ ಕಳಿಸೋದು. ಅದು ಅಲ್ಲದೆ ಆ ಮರುಭೂಮಿಗೆ ನಾವು ಎಷ್ಟು ನೀರು ಕಳಿಸಿದ್ರು ಸಾಲೋದಿಲ್ಲ, ಜೊತೆಗೆ ನಾವೇ ಇಲ್ಲಿ ನೀರಿಲ್ಲ ಅಂತ ಕಷ್ಟಪಡ್ತಾ ಇದ್ದೀವಿ, ಇವ್ರಿಗೆ ಬೇರೆ ಕಳಿಸ್ಬೇಕಾ...!!!? ಅಂತ ತಿಳ್ಕೊಂಡಿರಾ ಖಂಡಿತಾ ಇಲ್ಲ. ಮುಂದೆ ಹೇಳ್ತೀನಿ ನೋಡಿ ಯಾವ ನೀರು ಕಳಿಸಬೇಕು ಮರುಭೂಮಿಗೆ ಅಂತ.

ಈಗ ವಿಷಯಕ್ಕೆ ಬರೋಣವೇ...... ನಮ್ಮ ಕನ್ನಡ ಕೂಟದಲ್ಲಿ ಮರಳ ಮಲ್ಲಿಗೆ ಎಂಬ ಪತ್ರಿಕೆ ಇರುವುದು (ಈ ವಿಷಯ ಕೆಲವರಿಗಾಗಲೇ ತಿಳಿದಿದೆ) ವರ್ಷಕ್ಕೆ ೫ ಅಥವಾ ೬ ಪತ್ರಿಕೆಗಳನ್ನು ಮುದ್ರಿಸುತ್ತಲಿದ್ದೆವು. ಈ ಬಾರಿ ಮಾಸ ಪತ್ರಿಕೆಯಾಗಿ ಪ್ರತಿ ತಿಂಗಳು ಹೊರ ತರುತ್ತಲಿದ್ದೇವೆ. ಇಲ್ಲಿಯವರೆಗು ೫ ಸಂಚಿಕೆಗಳಾಗಿ ಹೊರಹೊಮ್ಮಿವೆ. ಮುಂಬರುವ ಸಂಚಿಕೆಗಳಲ್ಲಿ ಒಂದು ಅಥವಾ ಎರಡು ಸಂಚಿಕೆಗಳಲ್ಲಿ ಹೊರನಾಡು, ಕರುನಾಡ ಕನ್ನಡಿಗರ ಲೇಖನಕ್ಕೆ ಮೀಸಲಿಟ್ಟು ಸಂಚಿಕೆಯನ್ನು ಹೊರತರುವ ಆಶಯದಲ್ಲಿದ್ದೇವೆ.

ನಮ್ಮ ಕನ್ನಡ ಕೂಟದ ಮಲ್ಲಿಗೆ ಮರಳಿನಲ್ಲಿ ಹಬ್ಬಿ ರಾರಾಜಿಸುತ್ತಲಿದೆ ಕೂಡ, ನಿಮ್ಮ ಲೇಖನಗಳನ್ನು ಮತ್ತಷ್ಟು ನಮಗೆ ಕಳಿಸಿ. ನಮ್ಮ ಕನ್ನಡದ ಅರಿವು, ಕನ್ನಡ ಭಾಷಾ ಸಾಮರ್ಥ್ಯ, ಕರುನಾಡಿನ ಬಾಂಧವ್ಯ ಎಲ್ಲವನ್ನು ಹೆಚ್ಚಿಸಬೇಕೆಂದು ಕೋರುತ್ತೇವೆ..... ಮರಳ ಮಲ್ಲಿಗೆಗೆ ನಿಮ್ಮ ಲೇಖನಗಳು, ನಗೆಹನಿಗಳು, ಆರೋಗ್ಯ ಬಗೆಗಿನ ಲೇಖನ, ಕಾರ್ಟೂನ್, ಚುಟುಕುಗಳು, ಕವನಗಳು, ಹಾಸ್ಯ, ವಿಶೇಷ ವ್ಯಕ್ತಿಯ ಪರಿಚಯ, ವಿಶೇಷ ಸ್ಥಳದ ಪರಿಚಯ, ಸೌಂದರ್ಯ ಸಲಹೆ, ಅಡುಗೆ ವಿಶೇಷ ತಿನಿಸುಗಳ ಬಗ್ಗೆ, ಅತ್ಯುತ್ತಮ ಫೋಟೋಗಳು, ಸಣ್ಣ ಕಥೆ, ವಿಜ್ಞಾನ ಹಾಗೂ ತಾಂತ್ರಿಕ ಜಗತ್ತಿನ ಬಗೆಗಿನ ಲೇಖನ, ಇಷ್ಟೆಲ್ಲದರಲ್ಲಿ ನಿಮಗಾವುದು ಸರಿಹೊಂದುವುದೋ ಆ ಬರಹಗಳನ್ನು ನಮಗೆ ಕಳಿಸಿಕೊಡಿ. ನಮ್ಮ-ನಿಮ್ಮ ಹಾಗೂ ಹೊರನಾಡು-ಕರುನಾಡ ಭಾಷಾ ಬಾಂಧವ್ಯವನ್ನು ಬೆಳೆಸುವಲ್ಲಿ ನಿಮ್ಮ ಸಹಕಾರ ಅಗತ್ಯವಿದೆ.

ವಿಶೇಷ ಸೂಚನೆ :
. ಲೇಖನಗಳು ಒಂದು ಅಥವಾ ಎರಡು ಪುಟ ಮೀರದಂತಿರಲಿ.
೨. ಯೂನಿಕೋಡ್ ಬಳಸದೆ ಬರಹ ಫಾಂಟ್ ಹಾಗೂ ೧೨ ನಲ್ಲಿರಲಿ.
೩. ಜೂನ್ ೧೦ರೊಳಗೆ ನಮ್ಮ ಈ-ಮೈಲ್ ವಿಳಾಸಕ್ಕೆ ಕಳಿಸಿಕೊಡಿ. maralamallige@kuwaitkannadakoota.org

೪. ನಮ್ಮ ಕೆಲವು ಸಂಚಿಕೆಗಳನ್ನು ವೀಕ್ಷಿಸಲು ಈ ಲಿಂಕ್ ಗೆ ಭೇಟಿ ನೀಡಿ :
http://www.kuwaitkannadakoota.org/marala_mallige.html


ನಮ್ಮ ಈ ಹೊಸ ಪ್ರಯತ್ನಕ್ಕೆ ನಿಮ್ಮೆಲ್ಲರ ಲೇಖನ ಅಥವಾ ಬರಹಗಳೊಂದಿಗೆ ನಮ್ಮ ಜೊತೆ ಕೈಜೋಡಿಸಿ, ಮರುಭೂಮಿಯ ಕನ್ನಡ ನುಡಿಗೆ ನೀರೆರೆದು ಸಹಕರಿಸುವಿರೆಂದು ನಾವು ಭಾವಿಸುತ್ತೇವೆ.

ಧನ್ಯವಾದಗಳು
ಮನಸು
http://www.kuwaitkannadakoota.org/

Sunday, April 18, 2010

ಪ್ರತಿಭಾ ಕಾರಂಜಿ



ಅಂದು ಶುಕ್ರವಾರ (೧೬--೧೦) ಸುಮಾರು ಸಂಜೆ ಗಂಟೆ ಇರಬಹುದು, ವೇದಿಕೆ ಪ್ರತಿಭೆಗಳ ಹುಡುಕಾಟಕ್ಕೆ ಸಜ್ಜಾಗಿತ್ತು.... ಅತ್ತಕಡೆಯಿಂದ ಸಾಲು ಸಾಲಾದ ಇರುವೆಗಳಂತೆ ಜನರು ಬರುತ್ತಲಿದ್ದರು..... ಜನರಾಗಮನ ಕುವೈತ್ ಕನ್ನಡ ಕೂಟದ ಕಾರ್ಯಕಾರಿಸಮಿತಿಯ ಸಹಯೋಗದೊಂದಿಗೆ ಮರಳ ಮಲ್ಲಿಗೆ ಮತ್ತು ವೆಬ್ ಸಮಿತಿಯ ವತಿಯಿಂದ ಪುಟ್ಟ ಸಮಾರಂಭವನ್ನು ಏರ್ಪಡಿಸಿದ್ದರು. ವೇದಿಕೆ ಕನ್ನಡ ಕೂಟದ ಪ್ರತಿಭೆಗಳ ಹುಡುಕಾಟದಲ್ಲಿ ತೊಡಗಿದ್ದಂತು ಖಂಡಿತಾ ನಿಜ.......


ಕೂಟದ ಸಾಂಸ್ಕೃತಿಕ ಕಾರ್ಯದರ್ಶಿ ಅವರಿಂದ ಸ್ವಾಗತ ಭಾಷಣ ಪ್ರಾರಂಭವಾಗಿ ಕೂಟದ ಗೀತೆಯೊಂದಿಗೆ ಶುಭಕೋರಿ ಅಧ್ಯಕ್ಷದಂಪತಿಗಳೊಂದಿಗೆ ಪ್ರತಿಭಾ ಕಾರಂಜಿಯ ಜ್ಯೋತಿ ಬೆಳಗಿತು. ನಂತರದಿ ಅಧ್ಯಕ್ಷರ ಹಿತನುಡಿಯೊಂದಿಗೆ ಸಾಂಸ್ಕೃತಿಕಕಾರ್ಯದರ್ಶಿಗಳು ಮರಳ ಮಲ್ಲಿಗೆ ಮತ್ತು ವೆಬ್ ಸಮಿತಿಯವರ ಮುಖೇನ ಸಮಾರಂಭದ ಮುಂದಿನ ಕಾರ್ಯಕ್ರಮಗಳಿಗೆ ಚಾಲನೆನೀಡಲು ಅನುವು ಮಾಡಿದರು......




ನಂತರದಿ ಸಮಿತಿಯ ಸಂಚಾಲಕರಿಂದ ಕಾರ್ಯಕ್ರಮಗಳ ವಿವರದೊಂದಿಗೆ ಪ್ರಾರಂಭಿಸಿ, ಮರಳ ಮಲ್ಲಿಗೆ ಸಮಿತಿ ಬಳಗದಸದಸ್ಯೆಯಿಂದ ಮುದ್ದು ಕೆ.ಕೆ.ಕೆ ನಿರ್ವಹಣೆಯತ್ತ ಮುನ್ನುಗಿತು.... ಪುಟ್ಟ ಕಂದಮ್ಮಗಳು ಪುಟಾಣಿ ಹೆಜ್ಜೆಯನಿಡುತ್ತಾ ಎಲ್ಲರತ್ತ ಗಮನಸೆಳೆಯುತ್ತ ಅಲ್ಲೇ ಇದ್ದ ಆಟಿಕೆಗಳಲ್ಲಿ ಕುಣಿಯುತ್ತ ವೇದಿಕೆಯನ್ನು ತುಂಬಿ ಬಿಟ್ಟಿದ್ದರು... ಇದನ್ನೆಲ್ಲಾ ವೀಕ್ಷಿಸಿದ ತೀರ್ಪುಗಾರರಂತುತೀರ್ಪುನೀಡಲು ಸ್ವಲ್ಪ ಸಮಯ ಯೋಚಿಸುವಂತಾಯಿತು....ಪುಟ್ಟ ಹೆಜ್ಜೆ ಕಂಡು ಮುಂದೆ ಸಾಗುತ್ತಲಿದ್ದಂತೆ ಕಂಡಿದ್ದು ದಂಪತಿಗಳುಅವರವರ ಗಂಡ ಹೆಂಡತಿಯರ ಹುಡುಕಾಟ ಯಾಕೆ ಜೊತೆನಲ್ಲಿ ಬಂದಿರಲಿಲ್ಲವಾ ಅಂತೀರಾ ಹಾಗಲ್ಲ ಜೊತೆಯಲ್ಲಿ ಬಂದವರು ಅವರಸ್ನೇಹಿತರೊಟ್ಟಿಗೆ ಕೂತುಬಿಟ್ಟಿದ್ದರು....ದಂಪತಿಗಳಿಗೆ ಪರೀಕ್ಷೆ ಇತ್ತು ನೋಡಿ ಕನ್ನಡದಲ್ಲಿ ಬರಿಬೇಕು ಕೆಲವು ಪ್ರಶ್ನೆ ಹೆಂಡತಿಗೆ ಗೊತ್ತಿಲ್ಲ, ಕೆಲವು ಗಂಡಂದಿರಿಗೆ ಗೊತ್ತಿಲ್ಲ ಒಬ್ಬರಿಗೊಬ್ಬರು ಯೋಚಿಸಿ ಬರೆಯಲು ಅಷ್ಟೆ ಪೆನ್ನು ಪೇಪರ್ ತಗೊಂಡು ಸುಮಾರು ೮೨ದಂಪತಿಗಳು ಉತ್ತರಿಸಿದರು........ಎಲ್ಲರಿಗೂ ಸಂತಸ ಕೂಡ...... ಇವೆಲ್ಲ ಮುಗಿದ ನಂತರ ನೋಡಿ ಮಿಕ್ಕುಳಿದ ಆಯಾವಯೋಮಿತಿಗೆ ತಕ್ಕಂತೆ ಕೆಲವು ಮಕ್ಕಳು ಅಪ್ಪ ಅಮ್ಮನೇನಾ ಕನ್ನಡ ಬರೆಯೋದು ನಾವು ಕನ್ನಡ ಪದಜೋಡಿಸ್ತೀನಿ ಅಂತಹೋದರು, ಇನ್ನು ಕೆಲವು ಮಕ್ಕಳು ನಮ್ಮದೇ ಶೈಲಿಯಲ್ಲಿ ಗ್ರೀಟಿಂಗ್ ಕಾರ್ಡ್ ಮಾಡಿ ತೋರುಸ್ತೀವಿ ನೋಡಿ ಅಂತ ಹೊರಟರು.... ಇನ್ನು ಸ್ವಲ್ಪ ದೊಡ್ಡ ಮಕ್ಕಳು ಇದಾರಲ್ಲಾ ಅವರು ಅಯ್ಯೋ ಇವರೆಲ್ಲ ಸುಮಾರಾದ ಸ್ಪರ್ಧೆಯಲ್ಲಿದ್ದಾರೆ ನಾವು ರಸವತ್ತಾಗಿರೋರಸಪ್ರಶ್ನೆಗೆ ಉತ್ತರ ಬರೆದುಕೊಂಡು ಫೈನಲ್ಸ್ ಗೆ ಬರ್ತೀವಿ ಕಾದು ನೋಡಿ ಅಂತ ಆಯಾ ಸ್ಪರ್ಧಾ ಸ್ಥಳಕ್ಕೆ ಹೊರಟೇ ಬಿಟ್ಟರು. ಇನ್ನುಅಮ್ಮಂದಿರು ಮಕ್ಕಳು ಹೊರಗಡೆ ಹೊರಟರೆ ನಾವು ಏನು ಕಡಿಮೆ ಇಲ್ಲ ಅಂತ ರಂಗೋಲಿ ಹಾಕಲಿಕ್ಕೆ ಹೊರಟರು ಅಲ್ಲಿ ಹೋದರೆ ನೀರೆಯರಿಗೆ ಕಾಂಪಿಟ್ ಮಾಡೋಕೆ ರಂಗೋಲಿ ಹಿಡಿದು ಧೀರರೂ ಸಹ ನಿಂತಿದ್ದರು.........









ಅಲ್ಲಿ ಅಪ್ಪ ಅಮ್ಮ ಅಣ್ಣ, ಅಕ್ಕಂದಿರು ಪರೀಕ್ಷೆಗಳಿಗೆ ಹೊರಟರೆ ಇತ್ತ ಗರಿಗೆದರಿ ಹಕ್ಕಿಗಳಂತೆ ಹಾರಾಡುವ ಪುಟ್ಟ ಪುಟಾಣಿಗಳ ತೊದಲು ನುಡಿಯಲ್ಲಿ ಕನ್ನಡದ ಹಾಡುಗಳು ಸರಾಗವಾಗಿ ಹಾಡಿ ಎಲ್ಲರೆದು ನಾಯಿಮರಿ, ಆನೆ, ಚಂದಮಾಮ, ರೊಟ್ಟಿಯ ಕಿಟ್ಟ, ಒಂದು ಎರಡು, ಬಾಳೆ ಎಲೆ ಎಲ್ಲವನ್ನು ವೇದಿಕೆಗೆ ತಂದೇ ಬಿಟ್ಟಿದ್ದರು ನೋಡಿ ನಮ್ಮೆಲ್ಲರಿಗೂ ಕಷ್ಟವಾಗಿತ್ತು ಕೂಡ ಹೇಗೆ ಇವರನ್ನೇಲ್ಲ ಪುಟ್ಟವೇದಿಕೆಯಲ್ಲಿ ಕೂರಿಸೋದಾ ಹೇಳಿ..... ನಮಗೆ ಸ್ವಲ್ಪ ಭಯ ಆಯ್ತು ಏನಪ್ಪಾ ಅಷ್ಟು ದೊಡ್ಡ ಆನೆ ಬಂದರೇಗೆ ಅಂತಾ..........ಬಂದಿದ್ದ ಕಾಡು, ಊರಿನ ಪ್ರಾಣಿ, ಪಕ್ಷಿ ಎಲ್ಲವನ್ನು ಕಳಿಸೋಸ್ಟರಲ್ಲಿ ಹಲವು ಸ್ಪರ್ಧೆ ಮುಗಿಸಿ ಎಲ್ಲರೂ ವೇದಿಕೆ ಸೇರಿದರು.


ಆಮೇಲೆ ಬಂದರು ನೋಡಿ ಒಂದು ಪುಟಾಣಿ ಕೃಷ್ಣ ಯಶೋದೆ ಇಬ್ಬರ ಪಾತ್ರ ನಾನೇ ಮಾಡ್ತೀನಿ ಅಂತ, ಮತ್ತೊಂದು ಬಬ್ರುವಾಹನ ಅರ್ಜುನರ ಸಂಭಾಷಣೆ, ಕಿತ್ತೂರು ರಾಣಿ ಇಂಗ್ಲೀಷರ ಜೊತೆ ಮಾತುಕತೆ.... ಅಮ್ಮ ಮಗಳ ನಡುವೆ ಸಂಭಾಷಣೆ........ಟಿವಿ ಧಾರಾವಹಿಯ ಪಾರ್ವತಿ, ಸುಬ್ಬು, ರೇಡಿಯೋ ನಾದದ ವೇದ, ಅಪ್ಪ ಮೊಮ್ಮಗನ ಪಾತ್ರ, ಅಜ್ಜ ತಾತನ ಇಂಗ್ಲೀಷ್ ಮಾತು.....ಹೀಗೆ ಎಷ್ಟೊಂದು ಅಂತೀರಾ (ಕೆಲವು ಮರೆತೆ ಬಿಟ್ಟಿರುವೆ ನೋಡಿ) ಏಕಪಾತ್ರಾಭಿನಯ ಮಾಡಿ ತೋರಿಸಿದ್ರು ಗೊತ್ತಾ........
ಪಾತ್ರಗಳನ್ನ ನೋಡಿದ್ವಾ ಆಮೇಲೆ ಅದೆಲ್ಲಿತ್ತೋ ಗುಂಪುಗಳು ಬಂದರು ನೋಡಿ ಮಾತಿನಚಕಮಕಿಗೆ ಎಲ್ಲಾ ಹೆಣ್ಣು ಕೆಲಸಕ್ಕೆ ಹೋಗಬೇಕು ಗಂಡು ಮನೆನಲ್ಲಿರಬೇಕು ಅಂತ ಕೆಲವರು ಅದಕ್ಕೆ ವಿರುದ್ಧ ಹೀಗೆ ಜಟಾಪಟಿ ನೆಡಿದು ಕೊನೆಗೆ ನೋಡಿ ಸ್ವಾಮಿ ನಾವಿರೋದೆ ಹೀಗೆ ಅಂತ ಹೇಳಿದ್ರು........

ಇವರನ್ನೆಲ್ಲ ನೋಡಿದಮೇಲೆ ಅದೆಲ್ಲಿದ್ದರೋ ಕವಿಗಳು ಸಾಲುಸಾಲಾಗಿ ವೇದಿಕೆಯನ್ನು ಅಲಂಕರಿಸಿಬಿಟ್ಟರು.... ಪುಟ್ಟ ಮಕ್ಕಳಿಂದಿಡಿದುದೊಡ್ಡವರೆಲ್ಲ ಕನ್ನಡ, ಇಂಗ್ಲೀಷ್, ಹಿಂದಿ ಭಾಷೆಗಳಲ್ಲಿ ತಮ್ಮ ಕವನವಾಚನ ನೀಡಿ ನೆರೆದಿದ್ದವರೆಲ್ಲರಿಗೂ ಖುಷಿ ನೀಡಿದರು.

ಕವಿಗಳನ್ನು ಕಳಿಸಿ ನಂತರ ಬಂದವರೇ ರಸಪ್ರಶ್ನೆಗೆ ಉತ್ತರಿಸುವ ಚಿಣ್ಣರು ವೇದಿಕೆಯಲ್ಲಿ ನೀರವ ಮೌನ ಎಲ್ಲರೂ ಪ್ರಶ್ನೆಗಳತ್ತ ಗಮನಕೆಲವರಿಗೆ ಪ್ರಶ್ನೆಗಳಿಗೆ ಉತ್ತರ ತಿಳಿದಿರಲಿಲ್ಲ ಕೆಲವರಿಗೆ ತಿಳಿದಿತ್ತು ..........ತಿಳಿದಿಲ್ಲದವರಿಗೆ ಯೋಚಿಸಲೂ ಬಿಡದೆ ನೆರೆದಿದ್ದ ಜನಗಳಲ್ಲಿಯಾರಾದರೊಬ್ಬರು ತಟ್ ಅಂತ ಉತ್ತರ ಹೇಳೋರು ನೋಡಿ.......ಅವರಿಗೂ ಖುಷಿ ಅಲ್ವಾ ನಮ್ಗೆ ಉತ್ತರಗೊತ್ತಿದೆ ಅಂತ ಹೇಳೇಬಿಡೋರು.

ಸೀರಿಯಸ್ ಕ್ವಿಜ್ ಮುಗಿಸಿ ಸತಿ-ಪತಿಗಳು ಮೊದಲೇ ಪರೀಕ್ಷೆ ಬರೆದಿದ್ದರಲ್ಲ ಅವರಲ್ಲಿ ಡಿಸ್ಟಿಂಗ್ಷನ್ ತಗೊಂಡು ಬಂದ ಜೋಡಿಗಳುವೇದಿಕೆಯನ್ನೇರಿದರು. ಸಪ್ತಪದಿ ತುಳಿದ ಜೋಡಿಗಳು ಉತ್ತರಿಸಿ, ಅದೇನೆನೋ ಹಾವಭಾವ ಮಾಡಿ ಗಂಡ ಹೆಂಡತಿಗೆ, ಹೆಂಡತಿಗಂಡನಿಗೆ ಸನ್ನೆಗಳನ್ನು ಮಾಡಿ ಗಾದೆ ಹೇಳಿಸಿ.... ಉತ್ತರಿಸದ ಗಂಡನ ಮೇಲೆ ಸಿಡುಕಿ ಸೆಟೆದು ಹೋಗಿ ಕುಳಿತರು........ಆನಂತರ ಹೆಂಡತಿ ಸಮಾಧಾನ ಮಾಡೋಕ್ಕೆಂತಾ ಒಂದು ಡಾನ್ಸ್ ಝಲಕ್ ಇತ್ತು ನೋಡಿ ಎಂತಾ ಸ್ಟೆಪ್ ಅಂತೀರ ಕೆಲವರನ್ನುಬಾಲಿವುಡ್, ಹಾಲಿವುಡ್ ಸಿನಿಮಾಗಳಲ್ಲಿ ನೃತ್ಯ ನಿರ್ದೇಶನಕ್ಕೂ ಕರೆದರು.... ಇನ್ನು ಕೆಲವರು ಅಪ್ಪಾಳೆ ತಿಪ್ಪಾಳೆ ಅಂತಾ ನಾವು ಊರಲ್ಲಿ ಆಡ್ತಾ ಇದ್ದವಲ್ಲಾ ಹಾಗೆ ಕುಣಿದರು ಗೊತ್ತಾ........ಎಲ್ಲರು ನಕ್ಕು ನಕ್ಕು ಹೊಟ್ಟೆ ಹುಣ್ಣು ಮಾಡಿಕೊಂಡರು........ಗೆದ್ದವರುನಾವೇ ಅಪರೂಪದ ಜೋಡಿಗಳು ಎಂದು ಬೀಗಿದರು.......


ವೇದಿಕೆ ಖಾಲಿ ಮಾಡಿಸೋಕೆ ಕಷ್ಟ ಆಯ್ತು ನೋಡಿ ಯಾಕೆ ಅಂತೀರಾ ಮತ್ತೆ ಸಪ್ತಪದಿ ಜೋಡಿಗಳು ಕುಣಿತ ಬಿಟ್ಟು ಬರೋಲ್ಲಾಅಂತಾರೆ ಆದರೆ ಏನು ಮಾಡೋದು ಗಂಟೆಗಳ ಮುಳ್ಳು ಮುಂದೆ ಹೋಗ್ತಾನೆ ಇತ್ತು ಅದಕ್ಕೆ ಅವರನ್ನ ವೇದಿಕೆಯಿಂದಕೆಳಗಿಳಿಸಿದೆವು........ಆನಂತರ ಕೂಟದ ಹಿರಿಯರಿಂದ ವೈಶಾಖ ಮಾಸದ ಸಂಚಿಕೆ ಬಿಡುಗಡೆ, ಮಾಜಿ ಅಧ್ಯಕ್ಷರ ಹಿತನುಡಿ, ನಂತರಅದೇನೋ ಬಾಗಿಲ ಬಹುಮಾನವನ್ನ ವೇದಿಕೆ ಮೇಲೆ ಕೊಟ್ಟರಪ್ಪಾ........ಹಹಹ.....ತದನಂತ ಸ್ಪರ್ಧಾ ವಿಜೇತರಿಗೆಬಹುಮಾನ......ಇದಿಷ್ಟು ನೆಡೆಯುತ್ತಲಿದ್ದಂತೆ ಖಜಾಂಜಿ ಯವರಿಂದ ವಂದನಾರ್ಪಣೆ ಕೇಳೋಕ್ಕೂ ಆಗದೆ ಸುಸ್ತಾಗಿದ್ದ ಜನಹೊಟ್ಟೆಯತ್ತ ಗಮನವರಿಸಿ ಊಟದತ್ತ ನಡೆದರು............


ಇವಿಷ್ಟು ಕಾರ್ಯಕ್ರಮ ಕಂಡ ಕಂಗಳು ಖುಷಿಯಾದವು......... ಕಾರ್ಯಕ್ರಮ ಯಶಸ್ಸಿಗೆ ಸಹಕರಿಸಿದ ಎಲ್ಲಾ ಕಾರ್ಯಕಾರಿ ಸಮಿತಿ, ಉಪ ಸಮಿತಿಗಳು, ಮೇಲ್ವಿಚಾರಕರು, ಮಕ್ಕಳು, ಹಿರಿಯರು, ಅತಿಥಿಗಳು, ತೀರ್ಪುಗಾರರು, ಹಲವು ಕಾಣದ ಹಸ್ತಗಳು, ಧ್ವನಿವರ್ಧಕಕ್ಕೆ ಸಹಕಾರಿಸಿದವರು, ಕ್ಯಾಮರಾ ಕಣ್ಣಿಗೂ ಹಾಗೂ ಕ್ಯಾಮಾರಾ ಕ್ಲಿಕ್ಕಿಸಿದವರಿಗೂ, ಸವಿ ಊಟ ನೀಡಿದವರಿಗೂಎಲ್ಲರಿಗೂ ಹಾಗೂ ಮರಳ ಮಲ್ಲಿಗೆ ಮತ್ತು ವೆಬ್ ಸಮಿತಿ ಬಳಗದ ಸದಸ್ಯರೆಲ್ಲರಿಗೂ ಪ್ರೀತಿಪೂರ್ವಕ ಧನ್ಯವಾದಗಳು.

ಪೋಟೋಗಳಿಗೆ ಇಲ್ಲಿ ಕ್ಲಿಕ್ಕಿಸಿ : http://picasaweb.google.com/yogee.tumkur/PrathibaKaranji?feat=directlink#

ನಮ್ಮ ವೆಬ್ ಸೈಟಿಗೆ ಭೇಟಿ ನೀಡಿ ಅಂತೆಯೇ ಮರಳ ಮಲ್ಲಿಗೆ ಮಾಸ ಪತ್ರಿಕೆಗಳನ್ನು ಓದಿ ನಿಮ್ಮ ಅನಿಸಿಕೆ ತಿಳಿಸಿ.
http://www.kuwaitkannadakoota.org/



ವಂದನೆಗಳು
ಮನಸು