೨೬/೨೬/೨/೨೦೧೦ ರ ಶುಕ್ರವಾರದ ಮುಂಜಾನೆ ೭.೩೦ರ ಸಮಯ ಕುವೈತಿನ ಕಾರ್ಮಲ್ ಸ್ಕೂಲಿನ ಆಡಿಟೋರಿಯಂ ಆವರಣವನ್ನು ಪ್ರವೇಶಿಸುತ್ತಲಿದ್ದಂತೆ ಎಲ್ಲರ ಮನ ಸೆಳೆದದ್ದು ಸುಂದರವಾದ ದೇಗುಲ ದರ್ಶನ. ಅಲ್ಲೇ ಪಕ್ಕದಲ್ಲಿ ವಿಷ್ಣು ಸಹಸ್ರನಾಮ, ಲಲಿತ ಸಹಸ್ರನಾಮ ಪಠಿಸುತ್ತಲಿದ್ದ ಕನ್ನಡ ಕೂಟದ ಸದಸ್ಯರು ಎಲ್ಲರ ಮನಸಿಗೆ ಅಹ್ಲಾದವನ್ನು ನೀಡುತ್ತಲಿತ್ತು. ಸಹಸ್ರನಾಮ ಮುಗಿದ ಕೂಡಲೇ ಎಲ್ಲರೂ ತಮ್ಮ ಉಪಹಾರ ಮುಗಿಸಿ ಕೂಟದ ಮುಂದಿನ ಕಾರ್ಯಕ್ರಮಗಳತ್ತ ಮುಂದಾದರು. ಪ್ರಾರ್ಥನಾ ಗೀತೆಯ ನಂತರ ಅಧ್ಯಕ್ಷರಾದ ಶ್ರೀ ಹರ್ಷರಾವ್ ಹಾಗೂ ಪತ್ನಿ ಶ್ರೀಮತಿ ಕವನರಾವ್ ಅವರ ಅಮೃತ ಹಸ್ತದಿಂದ ಜ್ಯೋತಿ ಬೆಳಗಿಸುವ ಮುಖೇನ ಕಾರ್ಯಕ್ರಮಗಳಿಗೆ ಜಾಲನೆ ನೀಡಿದರು. ಮೊದಲು ವಯೋಮಿತಿ ವಿಭಾಗಗಳಂತೆ ಪುಟ್ಟ ಮಕ್ಕಳ ವೇಷಭೂಷಣ ಸ್ಪರ್ಧೆ ನೆಡೆಯಿತು. ಆನಂತರ ಭಗವದ್ಗೀತೆಯಲ್ಲಿ ಕೃಷ್ಣಾರ್ಜುನರ ಆಯ್ದ ಸಂಭಾಷಣೆಯನ್ನು ಕಣ್ಣ ಮುಂದೆ ಚಿತ್ರಿಸಿದ್ದರು. ಮತ್ತಷ್ಟು ಮಕ್ಕಳು ನಗರ ಸಂಕೀರ್ತನೆಯಂತೆ ದಾಸರ ಹಾಡುಗಳನ್ನು ಹಾಡಿ ನೆರೆದಿದ್ದವರಿಗೆ ಸಂತಸಗೊಳಿಸಿದರು. ಇವೆಲ್ಲದರ ಮಧ್ಯೆ ಕಳೆದ ಸಾಲಿನ ಕಾರ್ಯಕಾರಿ ಸಮಿತಿ ಸದಸ್ಯರಿಗೆ ಅಭಿನಂದಿಸಿ ಗೌರವಿಸಲಾಯಿತು. ನಂತರದಿ ಸಂಗೀತ ಬಗೆಗಿನ ಪುಟ್ಟ ನಿರೂಪಣೆಯಿಂದ ಶ್ರೀಮತಿ ರಂಗಶ್ರೀ ಅವರು ಎಲ್ಲರಿಗು ಸಂಗೀತದ ಬಗ್ಗೆ ಉತ್ತಮ ಮಾಹಿತಿ ನೀಡಿದರು. ಇವೆಲ್ಲದರೊಟ್ಟಿಗೆ ಹರಿಕಥಾ ಸ್ಪರ್ಧೆಯಲ್ಲಿ ದೊಡ್ಡವರೆಲ್ಲರು ಭಾಗವಹಿಸಿ ವಿಶಿಷ್ಟ ರೀತಿಯಲ್ಲಿ ಎಲ್ಲರ ಗಮನ ಸೆಳೆದರು.

ನಂತರ ಮರಳ ಮಲ್ಲಿಗೆಯ ಸಂಚಿಕೆ ಬಿಡುಗಡೆಯನ್ನು ನೆರೆವೇರಿಸಲಾಯಿತು. ಎಲ್ಲಾ ಕಾರ್ಯಕ್ರಮಗಳು ಮುಗಿದ ನಂತರದಿ ಹೆಂಗಳೆಯರು ಹಾಗೂ ಗಂಡಸರ ಭಜನಾವಳಿ ನಡೆಯುತ್ತಲೆ ದೇವಸ್ಥಾನದಲ್ಲಿ ಶಂಖನಾದ ಮೊಳಗಿತು. ನೆರೆದಿದ್ದ ಸದಸ್ಯರೆಲ್ಲ ಭಕ್ತಿಪರವಷರಾಗಿ ಘಂಟಾನಾದ ಮೊಳಗುತ್ತಿದ್ದೆಡೆಗೆ ಕರ ಮುಗಿದು ದೇವರನ್ನು ಧ್ಯಾನಿಸುತ್ತಲಿದ್ದರು. ಭಕ್ತಿ ಮಂಟಪವನ್ನು ತೊರೆಯಲು ಅಲ್ಲಿದ್ದ ಸದಸ್ಯರಾರಿಗೂ ಮನವಿಲ್ಲದಿದ್ದರೂ ಅಲ್ಲೇ ಇದ್ದ ಮೃಷ್ಟಾನ್ನಭೋಜನದ ಸವಿ ಸವಿಯಾದ ಊಟ ಎಲ್ಲರನ್ನತ್ತ ಸೆಳೆಯಿತು. ಹೋಳಿಗೆ ಊಟ ಸವಿದವರೆಲ್ಲ ಬೀಡವನ್ನು ಸವಿದು ಮನೆಗಳತ್ತ ಮುಖಮಾಡಿದರು.

ಪ್ರಶಾಂತ ದೇಗುಲವನ್ನು ಸೃಷ್ಟಿಸಿ ಭಕ್ತಿ ಮಂಟಪಕ್ಕೊಯ್ದ ಸಾಂಸ್ಕೃತಿಕ ಸಮಿತಿ ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯರಿಗೆ ಹಾಗೂ ಈ ಸುಂದರ ಭಕ್ತಿ ಪರಿಸರ ಸೃಷ್ಟಿಸಲು ಸಹಕರಿಸಿದ ಹಲವು ಕಾಣದ ಹಸ್ತಗಳಿಗೂ ನಮ್ಮ ಧನ್ಯವಾದಗಳು.
ಚಿತ್ರಗಳ ಕೃಪೆ: ಯೋಗೀಶ್ಮತ್ತಷ್ಟು ಫೋಟೋಗಳಿಗೆ ಈ ಲಿಂಕಿಗೆ ಭೇಟಿ ನೀಡಿ. http://picasaweb.google.com/yogee.tumkur/DAASOTSAVA?feat=directlink