Tuesday, December 31, 2013

ಹಸನಾಗಲಿ


ವರ್ಷವಿಡಿ ನಗು, ಕುಣಿತ, ಹಾಸ್ಯ ಸರಮಾಲೆಗಳ ಕಂಡೆ
ಜೊತೆ ಜೊತೆಗೆ ಇಡುವ ಹೆಜ್ಜೆಗಳು ಎಡವಿದ್ದವು
ಮತ್ತಷ್ಟು ಆತ್ಮೀಯತೆಯಲಿ ಮುಖವಾಡಗಳ ಪರಿಚಯ
ಮಗದಷ್ಟು ಕತ್ತಿ ಮಸೆಯುತ್ತಿರುವುದ ಕಂಡು ಸಹಿಸಿದೆ

ಬರಲಿರುವ  ವರುಷಕೆ ನನ್ನದು ಹೊಸ ಅಲೆಯ ಬೇಡಿಕೆ
ಬಿರುಸಿನ ಅಲೆಯಾದರೂ ಸಹಿಸುವ ಶಕ್ತಿಯ ಕೋರಿಕೆ
ಮರುಧರೆಯಲೂ ಮಲ್ಲಿಗೆಯ ಬೆಳೆಯುವ ಅಭಿಲಾಷೆ
ತಂಗಾಳಿ ಬೀಸಲಿ ಈ ಮರ್ಕಟ ಮನಕೆ 

ಸ್ನೇಹ-ನಂಟು ದ್ವೇಷ-ಪ್ರೀತಿಯಲಿ ಗೆಲುವಾಗಲಿ ಒಲವಿಗೆ
ಬೆನ್ನ ಹಿಂದೆ ಮಸೆಯುವ ಕತ್ತಿಗಳು ಮೊಂಡಾಗುವಂತೆ 
ಆಸೆ ಆಮಿಷಗಳಲಿ ಯೋಗ್ಯವಾದುದು ಕೈಗೂಡಲಿ
ನಾ ಸಾಧಿಸುವ ಹಾದಿ ಹಸನಾಗುವಂತೆ


ಹೊಸ ವರ್ಷದ ಶುಭಾಶಯಗಳು... ಬದುಕು ಹಸನಾಗಲಿ...ಪ್ರೀತಿ ಬೆಳೆಯಲಿ  :)


Saturday, December 28, 2013

ಕಾವ್ಯಧಾರೆ

ಜಿ. ಎಸ್. ಎಸ್ ರವರಿಗೆ ಚಿಕ್ಕಂದಿನಲ್ಲಿ ಸಾಹಿತ್ಯ ಒಲವು ಹುಟ್ಟಿಸಿದ್ದು ಶಿವರಾಮ ಕಾರಂತರ "ಬಾಲಪ್ರಪಂಚ", ತಂದೆಯವರೊಂದಿಗೆ ಊರೂರು ಸುತ್ತುತ್ತಲಿದ್ದರಿಂದ ಅಲ್ಲಿನ ಪರಿಸರ. ಚಿಕ್ಕಂದಿನಲ್ಲಿ ಕಥೆಗಳನ್ನು ಓದುತ್ತಿದ್ದ ಇವರಿಗೆ ಕಥೆ ಬರೆಯುವ ಹುಚ್ಚಾಗಿ ಪುಟಗಟ್ಟಲೆ ಬರೆದು ಅದನ್ನು ಹರಿದು ಹಾಕಿದ್ದರಂತೆ. ತಾವು ದಾವಣಗೆರೆಯಲ್ಲಿ ಓದುತ್ತಿರುವಾಗ ಅವರ ಗಣಿತ ಟೀಚರ್ ಸಾಹಿತ್ಯದ ಹುಚ್ಚು ಹೆಚ್ಚಿಸಿದ್ದರು. ಕಾವ್ಯಾಸಕ್ತಿ ಹೆಚ್ಚು ಬೆಳೆಯಲು ಕುವೆಂಪುರವರೇ ಸ್ಪೂರ್ತಿ ಎಂದು ಹೇಳುತ್ತಾರೆ. 

ಬಿಡುವಿನ ಸಮಯದಲ್ಲಿ ಗಣಿತ ಟೀಚರ್(ರೇವಣ್ಣ) ನೀಡುತ್ತಿದ್ದ ವಿಷಯದ ಮೇರೆಗೆ ಏನನ್ನಾದರು ಬರೆಯುವುದು, ಅದರ ಬಗ್ಗೆ ಚರ್ಚಿಸುವುದು. ಇದೇ ಸಮಯವನ್ನು ಸದುಪಯೋಗ ಪಡಿಸಿಕೊಂಡ ಜಿ. ಎಸ್. ಎಸ್ ಒಂದು ಕಥೆಯನ್ನು ಪದ್ಯವಾಗಿಸಿದ್ದರು
ಇರುವೆಯೊಂದು ತನ್ನ ಮರಿಗೆ 
ನೀರೊಳೀಜು ಕಲಿಸಲೆಂದು
ಹರಿವ ತೊರೆಯ ತಡಿಗೆ ಬಂದು
ನಿಂತುಕೊಂಡಿತು 
- ಸಾಲುಗಳನ್ನು ಕೇಳಿದ ಮೇಷ್ಟ್ರು ಖುಷಿಯಿಂದ ಶಿವರುದ್ರಪ್ಪನವನ್ನು ಪ್ರೋತ್ಸಾಹಿಸಿ ಬೆನ್ನು ತಟ್ಟಿದ್ದರು. ಈ ಸಾಲುಗಳು ಬರೆದಾಗ ಅವರಿಗೆ ೧೪ ವರ್ಷಗಳು.

೧೯೪೩ರಲ್ಲಿ ತುಮಕೂರಿನ ಕಾಲೇಜಿನಲ್ಲಿರುವಾಗ ಜಿ.ಪಿ ರಾಜರತ್ನಂ ಅವರು ಅಧ್ಯಾಪಕರು. ಒಮ್ಮೆ ರಾಜರತ್ನಂ ಅವರಿಗೆ ತಾವು ಬರೆದ ಕವಿತೆಗಳನ್ನು ಹಂಚಿಕೊಳ್ಳುತ್ತಾರೆ. ಅದೇ ಒಂದು ಸದಾವಕಾಶ ಎನ್ನಬಹುದು. ಅಲ್ಲಿಂದ ರಾಜರತ್ನಂ ಅವರು ಜಿ.ಎಸ್ .ಎಸ್ ಅವರಿಗೆ ಪದ್ಯ ಬರೆಯುವುದು,  ಮತ್ತಷ್ಟು ಚೆನ್ನಾಗಿ ಬರೆಯುವುದು ಹೇಗೆ ಎಂದು ತಿದ್ದಿ ತೀಡುತ್ತಾರೆ. ಅಲ್ಲದೇ ಅವರ ಕವಿತೆಗಳನ್ನು ಓದಿದ ರಾಜರತ್ನಂ ಅವರು ಕೆಲವು ಕವಿತೆಗಳನ್ನು ಆರಿಸಿ ಮಾಸ್ತಿ ಅವರ ಸಂಪಾದಕತ್ವದ "ಜೀವನ" ಎಂಬ ಪತ್ರಿಕೆಗೆ ಕಳುಹಿಸುತ್ತಾರೆ. ಅದೇ ಮೊದಲು ಪತ್ರಿಕೆಯಲ್ಲಿ ಪ್ರಕಟವಾದ ಕವಿತೆ ನಂತರದ ದಿನಗಳಲ್ಲಿ ಅವರು ಹಿಂದಿರುಗಿ ನೋಡಿದ್ದೇ ಇಲ್ಲ. 

ತಮ್ಮ ಬಿ.ಎ ವಿದ್ಯಾಭ್ಯಾಸಕ್ಕೆ ಮೈಸೂರಿಗೆ ಕಾಲಿಟ್ಟ ನಂತರದ ದಿನಗಳು ಮಾತ್ರ ಅವಿಸ್ಮರಣೀಯ. ಜಿ.ಎಸ್.ಎಸ್ ಅವರ ಪದ್ಯಗೀಳನ್ನು ಮತ್ತಷ್ಟು ಹೆಚ್ಚಿಸಿದವರು ಅವರೇ ಹೇಳುವಂತೆ "ಪ್ರೇರಕ-ಪೋಷಕ-ಗುರು" ತ.ಸು ಶಾಮರಾಯರು. ಇಲ್ಲಿ ಮತ್ತೊಂದು ವಿಷಯ ಹೇಳಲೇ ಬೇಕು. ಜಿ.ಎಸ್.ಎಸ್ ಅವರ "ಎದೆ ತುಂಬಿ ಹಾಡುದೆನು ಅಂದು ನಾನು" ಈ ಜನಪ್ರಿಯ ಕವಿತೆಯನ್ನು ಬರೆದಿದ್ದು ಇದೇ ಶಾಮರಾಯರಿಗೆ. ಕಾರಣ ಶಾಮರಾಯರು ಸದಾ ಜಿ.ಎಸ್. ಎಸ್ ಎಂತಹುದೇ ಕವನಗಳನ್ನು ಬರೆಯಲಿ ಸ್ವಲ್ಪವೂ ಬೇಸರಿಸದೇ ಕೇಳುತ್ತಲಿದ್ದರಂತೆ. ಈ ಕೇಳುವಿಕೆಯೇ ಎದೆ ತುಂಬಿ...... ಹಾಡಿಗೆ ಸ್ಪೂರ್ತಿ. 

ಶಾಮರಾಯರ ಕಣ್ಣಿಗೆ ಬಿದ್ದ ಕವನಗಳು ಕುವೆಂಪುರವರ ಗಮನ ಸೆಳೆದದ್ದು ಒಂದು ವಿಶೇಷ. ಒಮ್ಮೆ ಮಹಾರಾಜ ಕಾಲೇಜಿನ ಕರ್ನಾಟಕ ಸಂಘದಲ್ಲಿ ಏರ್ಪಡಿಸಿದ್ದ ಕವಿತಾ ಸ್ಪರ್ಧೆಯಲ್ಲಿ ಬಹುಮಾನ ಜಿ ಎಸ್ ಎಸ್ ಅವರಿಗೆ ಬಹುಮಾನ ಬಂದಿರುತ್ತದೆ. ಜಿ ಎಸ್ ಎಸ್ ಅವರನ್ನು ಕಣ್ ಸನ್ನೇಯಲ್ಲೇ ಹತ್ತಿರ ಕರೆದು "ಏನೇನು ಬರೆದಿದ್ದೀಯಾ ಅದನ್ನೆಲ್ಲಾ ತಾ" ಎಂದು ಕುವೆಂಪುರವರು ಹೇಳುತ್ತಲಿದ್ದಂತೆ. ಗಾಬರಿ ಜೊತೆಗೆ ಸಂಕೋಚದಿಂದಲೇ ತಾವು ಬರೆದಿದ್ದ ಕವಿತೆಗಳನ್ನೆಲ್ಲವನ್ನು ತಂದುಕೊಡುತ್ತಾರೆ. 

ಆ ಕವಿತೆಗಳ ಕಡತವನ್ನೆಲ್ಲಾ ಓದಿದ ಕುವೆಂಪುರವರ ಅನಿಸಿಕೆ ಹೀಗಿದೆ "ಇದೇನಿದು? ಬೆಳದಿಂಗಳ ವರ್ಣನೆ, ಒಳ್ಳೇ ಪ್ರಖರವಾದ ನಡುಹಗಲಿನ ಅನುಭವದ ಹಾಗೆ ಇದೆಯಲ್ಲ" ಮತ್ತಷ್ಟು ಕವನಗಳನ್ನು ನೋಡಿ "ಹೀಗೇ ಬರೆಯುತ್ತಲಿರಿ. ನಿಜವಾಯಿಯೂ ಚೆನ್ನಾಗಿವೆ" ಎಂದರಂತೆ. ಆಹಾ..!! ಎಂಥಾ ಅದೃಷ್ಟ ಪ್ರೀತಿಯ ಗುರು, ಪ್ರಸಿದ್ಧ ಕವಿ ಹೀಗೆ ಬೆನ್ನುತಟ್ಟಿದರೆ ಶಿಷ್ಯರಿಗೆ ಹುರುಪು ಹೆಚ್ಚುವುದಲ್ಲವೇ..? ಅಲ್ಲಿನ ನಂತರ ಕುವೆಂಪುರವರ ಮಾರ್ಗದರ್ಶನದ ಮೇರೆಗೆ ಇವರು ಬರೆದ ಕವಿತೆಗಳನ್ನು "ಪ್ರಬುದ್ಧ ಕರ್ಣಾಟಕ" ಪತ್ರಿಕೆಗಳಲ್ಲಿ ಸುಮಾರು ಕಾಲದವರೆಗೆ ಬಿತ್ತರಗೊಂಡವು. 

ಈ ಮಧ್ಯೆ ಬಿ ಎ ಮುಗಿದ ನಂತರ ದಾವಣಗೆರೆ ಕಾಲೇಜಿಗೆ ಉಪನ್ಯಾಸಕರಾಗಿ ತೆರಳಿದ್ದ ಸಮಯ.  "ತಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆ"  ಹೆಸರಿನಲ್ಲಿ ತ ಸ ಶಾಮರಾಯರು ಪ್ರಕಾಶನ ಪ್ರಾರಂಭಿಸಿದ್ದರು. ಇದೇ ಪ್ರಕಾಶನದಲ್ಲಿ ಜಿ ಎಸ್ ಎಸ್ ಅವರ "ಸಾಮಗಾನ" ಕವನ ಸಂಕಲವನ್ನು ಪ್ರಕಟಿಸಿದ್ದರು. ಇದೇ ಕವನಸಂಕಲನಕ್ಕೆ ಶ್ರೀ ಕುವೆಂಪುರವರು ಮುನ್ನುಡಿಯನ್ನು ಸಹ ಬರೆದಿದ್ದರು.

ಸಾಮಗಾನ ಕವನಸಂಕಲ ಪ್ರಕಟವಾದಾಗ ಮತ್ತು ಅದೇ ಸಮಯದಲ್ಲಿ ಇವರ ಸ್ನೇಹಿತರಾದ ಬಿಳಿಗಿರಿ ಅವರ ಕವನಸಂಕಲನವೂ ಬಿಡುಗಡೆಯಾಗಿತ್ತು. ಇವರೀರ್ವರ ಕವನ ಸಂಕಲನಗಳ ಬಗ್ಗೆ ಒಂದು ಪತ್ರಿಕೆಯಲ್ಲಿ ವಿಮರ್ಶೆ ವಿಮರ್ಶೆಯಾಗದೆ, ಒಬ್ಬ ಕವಿಯ ಮೇಲೆ ಮತ್ತೊಬ್ಬರನ್ನು ಎತ್ತಿಕಟ್ಟುವಂತೆ ಬರೆದಿದ್ದರು. ಇದನ್ನು ಕಂಡ ಸ್ನೇಹಿತರಾದ ಬಿಳಿಗಿರಿ ಅವರು ಹೀಗೆ ಪತ್ರಿಕೆಗೆ ಒಂದು ಪತ್ರ ಬರೆಯುತ್ತಾರೆ "ವಿಮರ್ಶೆಯ ನೆಪದಲ್ಲಿ ಒಬ್ಬರನ್ನು ಹೊಗಳಿ ಇನ್ನೊಬ್ಬರನ್ನು ತೆಗಳುತ್ತ ನಿಮ್ಮ ಬೇಳೆ ಬೇಯಿಸಿಕೊಳ್ಳ ಬೇಡಿ ಎಂದು ಖಾರವಾಗಿ ಬರೆದಿದ್ದರಂತೆ" ಇಂತಹ ಸ್ನೇಹಿತರು ಈಗ ಸಿಗುತ್ತಾರೆಯೇ ಎಂದು ಜಿ.ಎಸ್.ಎಸ್ ಸ್ನೇಹಿತರನ್ನು ನೆನಪುಮಾಡಿಕೊಂಡಿದ್ದಾರೆ. 

ಇವರ ಕವಿತೆಗಳನ್ನು ಪತ್ರಿಕೆಯಲ್ಲಿ ಓದಿದ ಪ್ರೋ.ತೀ.ನಂ.ಶ್ರೀ, ಪು.ತಿ.ನ ಎಲ್ಲರೂ ಬೆನ್ನುತಟ್ಟಿದ್ದಾರೆ. ೧೯೫೩ರಲ್ಲಿ ಎರಡನೇ "ಚೆಲುವು-ಒಲವು"  ಕವನ ಸಂಗ್ರಹಕ್ಕೆ ಪು.ತಿ.ನ ಅವರು ಮುನ್ನುಡಿಯನ್ನು ಬರೆದು ಹಾರೈಸಿದ್ದರು. ನಂತರ ೧೯೫೭ರಲ್ಲಿ "ದೀಪದಹೆಜ್ಜೆ" ಕವನ ಸಂಗ್ರಹ ಪ್ರಕಟವಾಯಿತು. ಸಾಹಿತ್ಯ ವಿಮರ್ಶೆಯಲ್ಲಿ ಆಸಕ್ತಿ ಹೆಚ್ಚಿದ್ದ ಇವರಿಗೆ "ವಿಮರ್ಶೆಯ ಪೂರ್ವ-ಪಶ್ವಿಮ" ಎಂಬ ಕೃತಿ ರಚನೆ ಸಾಧ್ಯವಾಯಿತು.

ದಾವಣಗೆರೆಯಲ್ಲಿ ಒಮ್ಮೆ ದಿಬ್ಬದ ಮೇಲೆ ಕುಳಿತಿರುವಾಗ ಅಲ್ಲಿನ ಪರಿಸರ ಕಂಡು "ಎಲ್ಲಿ ಹೋಗುವಿರಿ ನಿಲ್ಲಿ ಮೋಡಗಳೆ" ಎಂಬ ಸಾಲು ಹುಟ್ಟಿಕೊಂಡವು, ಒಂದು ಸಂಜೆ ಕಾಲೇಜಿನಿಂದ ಮನೆಗೆ ಹೋಗುವ ದಾರಿಯಲ್ಲಿ ಒಬ್ಬ ಹೆಣ್ಣು ಮಗಳ ಜಡೆ ಇವರಿಗೆ ಆಕರ್ಷಿಸಿದೆ. ಆ ಜಡೆಯ ಆಕರ್ಷಣೆ "ಲಲನೆಯರ ಬೆನ್ನಿನೆಡೆ ಹಾವಿನೊಲು ಜೋಲ್ವಜಡೆ" ಸಾಲನ್ನು ರಚಿಸುವಂತೆ ಮಾಡಿತು. ಹಾಗೆ ಒಂದು ರಾತ್ರಿ ಕನಸಿನಲ್ಲಿ "ಚಂದ್ರ ಜೇಡ ಬಲೆ ನೇಯುತ್ತಿತ್ತು ಬೆಳದಿಂಗಳ ನೂಲಿನಲಿ" ಎಂಬ ಸಾಲು ಹೊಳೆದಿತ್ತು ಅದೆ ಸಾಲಿನ ಜಾಡು ಹಿಡಿದು ಹೊರಟವರು ಪೂರ್ಣಕವನವನ್ನು ಬರೆಯಲು ಸುಮಾರು ವರ್ಷಗಳೇ ತೆಗೆದುಕೊಂಡಿದೆ.  

ಶಿವರುದ್ರಪ್ಪನವರನ್ನು ಯಾವ ಪಂಥಕ್ಕೆ ಸೇರಿಸಬೇಕೆಂದು ತಿಳಯದೆ ಗೊಂದಲಕ್ಕೀಡ ಕೆಲವರು "ಸಮನ್ವಯ ಕವಿ" ಎಂದು ಕರೆದರು ಆದರೆ ನಾನು ಅದಲ್ಲ. ಯಾಕೆಂದರೆ ಯಾವುದೇ ಹಣೆ ಚೀಟಿಗಳಿಂದ ನಿರ್ದೇಶಿತವಾಗುವುದನ್ನು ನಾನು ಒಪ್ಪುವುದಿಲ್ಲ ಎಂದು ಹೇಳುತ್ತರೆ. 

ಕವಿತೆಗಳು ಸಮಯವಲ್ಲದ ಸಮಯಗಳಲ್ಲಿ ಮೈಪಡೆದು ಕೂತುಬಿಡುತ್ತಾ ಹೊಸ ಹೊಸ ರೂಪಕೊಡುವಂತ ಕಾವ್ಯವನ್ನು ನೀಡುತ್ತಲಿದ್ದ ಶಿವರುದ್ರಪ್ಪನವರು "ಕವಿತೆ ಕಾಲಬದ್ಧವಾದ ಕ್ರಿಯೆಯಲ್ಲ, ಕಾಲಾತೀತದಲ್ಲಿ ಸಂಭವಿಸುವ ಒಂದು ವಿಸ್ಮಯ" ಎಂದು ಹೇಳುತ್ತಾರೆ. 

ಸಾಮಗಾನ, ಚೆಲುವು-ಒಲವು, ದೇವಶಿಲ್ಪಿ/ಶಿಲ್ಪ, ದೀಪದ ಹೆಜ್ಜೆ, ಅನಾವರಣ, ತೆರೆದ ಬಾಗಿಲು/ತೆರೆದ ದಾರಿ, ಗೋಡೆ, ವ್ಯಕ್ತಮಧ್ಯ ಓರೆ ಅಕ್ಷರಗಳು, ತೀರ್ಥವಾಣಿ, ಕಾರ್ತಿಕ, ಕಾಡಿನ ಕತ್ತಲಲ್ಲಿ, ಪ್ರೀತಿ ಇಲ್ಲದ ಮೇಲೆ, ಚಕ್ರಗತಿ - ಜಿ ಎಸ್ ಶಿವರುದ್ರಪ್ಪನವರು ತಮ್ಮದೇ ಶೈಲಿಯಲ್ಲಿ ಹೀಗೆ ಹಲವಾರು ಕವನ ಸಂಕಲಗಳನ್ನು ಬಿಡುಗಡೆ ಮಾಡಿದ್ದಾರೆ.

ಘಟನೆಗಳ ಸುತ್ತಾ... ಮುಂದಿನ ಭಾಗ

Thursday, December 26, 2013

ಏನು ಬರುತ್ತದೋ ಅದನ್ನು ಎದುರಿಸುತ್ತ ಒಪ್ಪಿಕೊಳ್ಳುವುದು - ಜಿ ಎಸ್. ಎಸ್.

೧೯೪೯ರಲ್ಲಿ ಬಿ. ಎ. ಆನರ್ಸ್ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾದ ಶಿವರುದ್ರಪ್ಪನವರಿಗೆ ದಾವಣಗೆರೆ ಡಿ.ಆರ್.ಎಂ ಕಾಲೇಜಿಗೆ ತಾತ್ಕಾಲಿಕ ಕನ್ನಡ ಉಪನ್ಯಾಸಕರಾಗಿ ನೇಮಕವಾದರು. 

ಮೊಟ್ಟ ಮೊದಲ ಬಾರಿಗೆ ಲೆಕ್ಚರರ್ ಆಗಿ ಮೇಷ ಧರಿಸುವುದು ಹೇಗೆ ಎಂದು ಜಿ.ಎಸ್.ಎಸ್ ಅವರಲ್ಲಿ ಪ್ರಶ್ನೆಗಳು ಕಾಡಿದ್ದವು. ಪಂಚೆ ಉಟ್ಟರೆ ಹುಡುಗರು ಗೇಲಿ ಮಾಡಬಹುದು, ಪೈಜಾಮ ಹಾಕಿಕೊಂಡು ಹೋದರೇ ನಾನು ವಿದ್ಯಾರ್ಥಿ ದಿನಗಳಲ್ಲಿ ಅದೇ ರೀತಿಯ ವೇಷಭೂಷಣದಲ್ಲಿರುತ್ತಿದ್ದೆ. ಪಂಚೆಗಿಂತ ಕೇಡು, ಪ್ಯಾಂಟೇ ವಾಸಿ ಎಂದುಕೊಂಡು ಅದಕ್ಕೆ ಒಪ್ಪುವ ಕೋಟು ಹೊಲಿಸಿಕೊಂಡರಂತೆ ಅವರೇ ಹೇಳುವಂತೆ 'ಸೂಟಾವತಾರಿ'ಯಾಗಿದ್ದೆ ಎಂದು ಹೇಳುತ್ತಾರೆ. ಕಾಲೇಜಿಗೆ ರಿಪೋರ್ಟ್ ಮಾಡಿಕೊಳ್ಳುವ ಹಿಂದಿನ ದಿನವಷ್ಟೇ 'ಶೂ' ಕೊಂಡು ರಾತ್ರಿ ಸ್ವಲ್ಪ ಹೊತ್ತು ರಿಹರ್ಸಲ್ ಸಹ ಮಾಡಿದ್ದರಂತೆ. ಬೆಳಗ್ಗೆ ಮೊದಲ ಪಾಠ ಮಾಡುವ ಮುನ್ನ ಅವರ ಗುರುಗಳಾದ ಕುವೆಂಪು ಅವರನ್ನು ನೆನೆದೆ, ಅವರೇ ಬರೆದ ’ಚಿತ್ರಾಂಗದಾ’ ಕಾವ್ಯವನ್ನು ಕುರಿತು ಒಂದು ಘಂಟೆಗಳ ಕಾಲ ಪಾಠ ಮಾಡಿ ಎಲ್ಲರೊಂದಿಗೆ ಸೈ ಎನಿಸಿಕೊಂಡಿದ್ದರು.

ತದನಂತರ ಮೈಸೂರಿನ ಯುವರಾಜ ಕಾಲೇಜಿಗೆ ವರ್ಗವಾದರು. ೧೯೫೧ರ ವೇಳೆಗೆ ಎಂ.ಎ ಶಿಕ್ಷಣವನ್ನು ಮುಗಿಸಿಕೊಂಡರು. ಆನಂತರ ಶಿವಮೊಗ್ಗೆಯ ಸಹ್ಯಾದ್ರಿ ಕಾಲೇಜಿನಲ್ಲಿ ಎರಡು ವರ್ಷ ಉಪನ್ಯಾಸಕರಾಗಿದ್ದರು. 

"ನಾನು ನಾಳೆ ಏನಾಗಬೇಕು ಎಂಬ ಬಗ್ಗೆ ಯಾವತ್ತೂ ತಲೆ ಕೆಡಿಸಿಕೊಳ್ಳಲಿಲ್ಲ. ಏನು ಬರುತ್ತದೋ ಅದನ್ನು ಎದುರಿಸುತ್ತ ಒಪ್ಪಿಕೊಳ್ಳುವುದು ನನಗೆ ಅಭ್ಯಾಸವಾಗಿಬಿಟ್ಟಿದೆ." ಹೀಗೆ ಶಿವರುದ್ರಪ್ಪನವರು ಅವರ ಜೀವನ ತಿರುವು, ಏರಿಳಿತಗಳನ್ನು ಸ್ವೀಕರಿಸಿದ ಬಗ್ಗೆ ಹೇಳಿಕೊಳ್ಳುತ್ತಾರೆ. ಮೈಸೂರಿಗೆ ಭಾರತ ಸರ್ಕಾರದ ಫೆಲೋಷಿಪ್ ಮೇಲೆ, ಕುವೆಂಪು ಅವರ ನಿರ್ದೇಶನದಲ್ಲಿ ಪಿ.ಎಚ್.ಡಿ ಅಧ್ಯಯನ ಮಾಡುವ ಸದಾವಕಾಶ ಇವರಿಗೆ ದೊರಕಿತು.

ಗಂಗೋತ್ರಿಯ ಸ್ನಾತಕೋತರ ಕೇಂದ್ರದಲ್ಲಿ ಪಾಠ ಹೇಳುತ್ತಿದ್ದ ಶಿವರುದ್ರಪ್ಪನವರಿಗೆ ಪರಿಚಿತರೊಬ್ಬರ ಒತ್ತಯದ ಮೇರೆಗೆ ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ, ರೀಡರ್ ಹುದ್ದೆಗೆ ಅರ್ಜಿ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಅವರ ಆತ್ಮೀಯ ಸ್ನೇಹಿತರಾದ ಪ್ರಭುಶಂಕರ್ ಅವರೂ ಸಹ ಅದೇ ಹುದ್ದೆಗೆ ಅರ್ಜಿ ಸಲ್ಲಿಸಿದ್ದರು. 

ಈ ವೇಳೆಗಾಗಲೇ ಪ್ರಭುಶಂಕರ್ ಅವರು ಡಿಗ್ರಿ ಕಾಲೇಜಿನಲ್ಲಿ ಉಪನ್ಯಾಸ ಮಾಡುತ್ತಲಿದ್ದರಿಂದ, ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಅವರಿಗೆ ಕೆಲಸ ಸಿಕ್ಕರೆ ಅವರೂ ನನ್ನ ಹಾಗೆ ಸ್ನಾತಕೋತ್ತರ ತರಗತಿಗಳಿಗೆ ಪಾಠ ಮಾಡವ ಅವಕಾಶ ದೊರೆಯುತ್ತದೆ. ಈ ಕಾರಣಕ್ಕೆ ಜಿ ಎಸ್ ಎಸ್ ಇಂಟರ್ವ್ಯೂಗೂ ಸಹ ಹೋಗದೆ, ಸ್ನೇಹಿತರಿಗೆ ಅವಕಾಶ ನೀಡಿದ್ದರು.  ಆದರೆ ಅವರೇ ಹೇಳಿದಂತೆ ಏನು ಬರುತ್ತೋ ಅದನ್ನು ಸ್ವೀಕರಿಸುವ ವ್ಯಕ್ತಿತ್ವವುಳ್ಳ ಜಿ ಎಸ್ ಎಸ್ ಉಸ್ಮಾನಿಯಾ ವಿಶ್ವವಿದ್ಯಾಲಯಕ್ಕೆ ಕನ್ನಡ ವಿಭಾಗದ ರೀಡರ್ ಮತ್ತು ಮುಖ್ಯಸ್ಥರಾಗಿ ನೇಮಕಗೊಂಡಿದ್ದು ಮಾತ್ರ ಅವರಿಗೆ ಆಶ್ವರ್ಯ ನೀಡಿತ್ತು. ಕಾರಣ ಇಷ್ಟೇ ಜಿ ಎಸ್ ಎಸ್ ಅಂದು ಇಂತರ್ವ್ಯೂಗೆ ಹೋಗಿಲ್ಲ. ಆದರೂ ಈ ಆಯ್ಕೆಯನ್ನು ಮಾಡಿದ್ದು ಪ್ರೊ. ತೀ ನಂ ಶ್ರೀಕಂಠಯ್ಯನವರು  ಮತ್ತು ಅವರ ತಂಡ. ಅದು ಒಂದು ರೀತಿ ಬಯಸದೇ ಬಂದದ್ದು.  

ಮೈಸೂರು ವಿಶ್ವವಿದ್ಯಾಲಯದಿಂದ ಡೆಪ್ಯುಟೇಷನ್ ಮೇಲೆ ಉಸ್ಮಾನಿಯಾ ವಿಶ್ವವಿದ್ಯಾಲಯಕ್ಕೆ ತೆರಳುವ ಮುನ್ನವೂ ಜಿ ಎಸ್ ಎಸ್ ತಮ್ಮ ಪ್ರೀತಿಯ ಗುರುಗಳ ಅನುಮತಿಯನ್ನು ಪಡೆದೇ ಮುಂದುವರಿಯುತ್ತಾರೆ. 

ಹೈದಾರಾಬಾದಿನಲ್ಲಿ ಡಿಪ್ಯುಟೇಷನ್ ಮೇಲೆ ತೆರಳಿದ್ದರೂ, ವಾಪಸ್ ಮೈಸೂರಿಗೆ ಬರಬೇಕೆಂಬ ಕಾತುರ ಅವರಲ್ಲಿ ಸದ ಮನೆ ಮಾಡಿತ್ತು. ಈ ಮಧ್ಯೆ ಮೈಸೂರು ವಿಶ್ವವಿದ್ಯಾಲಯದ ಮಾನಸ ಗಂಗೋತ್ರಿಯಲ್ಲಿ ಕರೆಯಲಾದ ರೀಡರ್, ಲೆಕ್ಚರರ್, ಪ್ರೊಫೆಸರ್ ಹೀಗೆ ಹಲವಾರು ಹುದ್ದೆಗಳಿಗೆ ಅರ್ಜಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಕನ್ನಡ ಪರಿಸರದಲ್ಲಿಯೇ ತಾನು ಬೆಳೆಯಬೇಕು ಎಂಬ ಆಸೆಗೆ ತಣ್ಣೀರೆರಚುವಂತಹ ಸನ್ನಿವೇಶಗಳು ತಲೆದೋರಿದ್ದವು. ಡೆಪ್ಯುಟೇಷನ್ ಅವಧಿ ಮುಗಿಯುತ್ತಲಿದೇ ಮುಂದೆ ಏನು ಎತ್ತ ಎಂಬ ಪ್ರಶ್ನೆಗಳು ಅವರನ್ನು ಕಾಡುತ್ತಲೇ ಇತ್ತು. ಇದೇ ಸಮಯದಲ್ಲಿ ಅಂದಿನ ಕುಲಪತಿಯಾಗಿದ್ದ ಶ್ರೀ ಮಾಲಿಯವರಿಗೆ ಒಂದು ಪತ್ರ ಬರೆದಿದ್ದರು. "ಅಶೈಕ್ಷಣಿಕ ರಾಜಕೀಯ ಪ್ರವೃತ್ತಿಗಳು ನನ್ನನ್ನು ಮೈಸೂರು ವಿಶ್ವವಿದ್ಯಾಲಯದಿಂದಲೇ ದೂರ ಇಡಲು ಪ್ರಯತ್ನಿಸುವಂತೆ ಕಾಣುತ್ತದೆ" ತಮ್ಮೆಲ್ಲ ಬೇಸರಗಳೊಂದಿಗೆ ಹೀಗೊಂದು ಸಾಲು ಬರೆದಿದ್ದರು. ಆ ಪತ್ರ ಕೆಲಸ ಮಾಡಿತು ಎಂಬುದಕ್ಕೆ ಮೈಸೂರು ಮಹಾರಾಜ ಕಾಲೇಜಿಗೆ ರೀಡರ್ ಮತ್ತು ಕನ್ನಡ ವಿಭಾಗದ ಮುಖ್ಯಸ್ಥರನ್ನಾಗಿ ನೇಮಕವಾದಾಗ. 

೧೯೬೪ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ರೀಡರ್ ಹುದ್ದೆಗಾಗಿ ನಡೆದ ಸಂದರ್ಶನದ ಒಂದು ತುಣುಕು ಓದಿ- 

ಪ್ರೋ. ಭೀಮಸೇನ ರಾಯರು ವ್ಯಾಕರಣಗಳ ಬತ್ತಳಿಕೆಗೆ ಕೈ ಹಾಕಿ ಅವರನ್ನು ಸುಲಭವಾಗಿ ಉರುಳಿಸಲು ಪ್ರಯತ್ನಿಸುವ ಮುನ್ನ ಜಿ ಎಸ್. ಎಸ್. ಒಂದು ಮಾತು ಹೇಳುತ್ತಾರೆ. ದಯಮಾಡಿ ವ್ಯಾಕರಣ ಕುರಿತು ನನಗೆ ಪ್ರಶ್ನೆ ಹಾಕಬೇಡಿ, ನನ್ನ ಕ್ಷೇತ್ರ ಅದಲ್ಲ. ಸಾಹಿತ್ಯವನ್ನು ಕುರಿತು ಅದು ಯಾವ ಕಾಲದ್ದೇ ಆಗಲಿ ಕೇಳಿ ಎಂದು ಬಿಡುತ್ತಾರೆ.

ನಂತರ ಪ್ರೊ.ಮಾಳಾವಾಡರು ಷಡಕ್ಷರ ಕವಿಯ "ಶಬರಶಂಕರವಿಲಾಸ" ಗ್ರಂಥ ತೆಗೆದು ಈ ಪದ್ಯದ ಅರ್ಥವನ್ನು ಹೇಳಿ ಎಂದು ಕೇಳುತ್ತಿದ್ದಂತೆ ನಾನು ಅರ್ಥ ಹೇಳುವುದಿಲ್ಲ. ಯಾಕೇ? ಎನ್ನುತ್ತಿದ್ದಂತೆ, ಜಿ ಎಸ್ ಎಸ್ ಅವರದು ದಿಟ್ಟ ಉತ್ತರ "ನೋಡಿ ಸರ್ ನಾನು ಒಬ್ಬ ಅಧ್ಯಾಪಕ, ಹದಿನೈದು ವರ್ಷಗಳಿಗೂ ಮೀರಿದ ಕಾಲದಲ್ಲಿ ಪಾಠ ಹೇಳಿದ್ದೇನೆ. ತರಗತಿಗೆ ಹೋಗುವ ಮುನ್ನ ಸಾಕಷ್ಟು ಪೂರ್ವ ಸಿದ್ಧತೆ ಮಾಡಿಕೊಂಡೇ ಹೇಳುವುದು ನನ್ನ ಪದ್ಧತಿ, ಹೀಗಿರುವಾಗ ಇದ್ದಕ್ಕಿದ್ದ ಹಾಗೆ ಯಾವುದೋ ಪದ್ಯವನ್ನು ತಾವು ತೋರಿಸಿ ಅರ್ಥ ಹೇಳು ಅನ್ನುತ್ತೀರಿ?" ಇದರ ಮೇಲೆ ರೀಡರ್ ಅಂಥ ಹುದ್ದೆಗೆ ಬಂದ ನನ್ನನ್ನು ಯಾವುದೋ ಪದ್ಯವೊಂದರ ಅರ್ಥವನ್ನು ನಾನು ಹೇಳಬಲ್ಲೆನೋ ಇಲ್ಲವೋ ಎಂದು ಶಂಕಿಸುತ್ತೀರಿ. ಈ ಕಾರಣಗಳಿಂದ ನಾನು ಈ ಪದ್ಯಕ್ಕೆ ಅರ್ಥ ಹೇಳುವಿದಿಲ್ಲ. ಎಂದು ಜಿ ಎಸ್ ಎಸ್ ಹೇಳಿಬಿಟ್ಟರಂತೆ.

ನಂತರ ಮಾಳವಾಡರು ಹೋಗಲಿ ಬಿಡಿ... Please enlighten me about this poem ಎಂದು ಹೇಳಿದಾಗ. ಜಿ ಎಸ್ ಎಸ್ ಆ ಪದ್ಯವನ್ನು ಓದಿ ಹೀಗೆ ಹೇಳಿದರು ‘sir there is no light in this poem to enlighten you’ ಅಲ್ಲಿದ್ದ ಕುಲಪತಿಗಳು, ರಿಜಿಸ್ಟ್ರಾರ್ ಎಲ್ಲರೂ ಜೋರು ನಕ್ಕು ವಾತಾವರಣ ತಿಳಿಗೊಂಡಿತು.

 ಅಲ್ಲೇ ಇದ್ದ ರಿಜಿಸ್ಟ್ರಾರ್ ಮಲ್ಲಿಕಾರ್ಜುನಪ್ಪನವರು ಜಿ ಎಸ್ ಎಸ್ ಕುರಿತು ನೀವು ಒಳ್ಳೆಯ ಕವಿ ನಿಮ್ಮ ಕಾವ್ಯವಾಚನವಾಗಲಿ ಎಂದು ಕೇಳುಕೊಂಡ ನಂತರ ಸಂದರ್ಶನ ಹೋಗಿ ಗೋಷ್ಠಿಯಾಯಿತು ಎಂದು ಜಿ ಎಸ್ ಎಸ್ ಅವರು ಹೇಳುತ್ತಾರೆ.

ಈ ಸಂದರ್ಶನದ ಬಗ್ಗೆ ತಿಳಿದವರು ಬೆಂಗಳೂರು ವಿವಿ ಕನ್ನಡ ವಿಭಾಗ ಹಾಳಾಗಿ ಹೋಯಿತು. ಮಹಾಕವಿ ಷಡಕ್ಷರ ದೇವನ ಪದ್ಯದ ಅರ್ಥ ಗೊತ್ತಿಲ್ಲದಿರುವವರೆಲ್ಲಾ ವಿಭಾಗದ ಮುಖ್ಯಸ್ಥರು ಹೀಗೆ ಮಾಡಿದರೆ ನಮ್ಮ ಶಿಕ್ಷಣ ಎಲ್ಲಿಗೆ ನಿಲ್ಲುತ್ತದೆ ಎಂದು ದೊಡ್ಡ ಮನುಷ್ಯರೊಬ್ಬರು ಮೂದಲಿಸಿದ್ದರಂತೆ.

ನಾನು ಓದಿದ ಜಿ ಎಸ್. ಎಸ್. ಅವರ ಹಲವಾರು ಪುಸ್ತಕಗಳು, ಅಂತರ್ಜಾಲದ ಹಲವಾರು ಲೇಖನಗಳು ಅವರ ಮೇಲಿನ ಅಪಾರ ಗೌರವ ಹೆಚ್ಚಿಸಿದೆ.


 ಮುಂದೆ ಕವನದ ಗೀಳು ಮತ್ತು ಬೆಳವಣಿಗೆ... 

(ತಪ್ಪಿದ್ದಲ್ಲಿ ಕ್ಷಮಿಸಿ. ನಾ ಓದಿದ ಮಾಹಿತಿಗಳನ್ನೆಲ್ಲ ಕಲೆಹಾಕಿ ನೆನಪು ಮಾಡಿಕೊಂಡು ಬರೆಯುತ್ತಿರುವೆ)

ಮೊದಲ ಭಾಗ ಓದಿಲ್ಲದೇ ಇರುವವರು ಈ ಕೆಳಕಂಡ ಲಿಂಕ್ ಗೆ ಭೇಟಿ ನೀಡಿ:
http://mrudhumanasu.blogspot.com/2013/12/blog-post_24.html

Tuesday, December 24, 2013

ನೋವಿನ ಬುತ್ತಿ, ಗಂಡಾಂತರಗಳ ಗಂಟಿನ ಸುತ್ತ - ಜಿ ಎಸ್ ಎಸ್

ಒಮ್ಮೆ ತೊಟ್ಟಿಲಲ್ಲಿ ಕೂಸನ್ನು ಮಲಗಿಸಿ, ಬಾವಿಯಲ್ಲಿ ನೀರು ತರಲು ಅಮ್ಮ ತೆರಳುತ್ತಾಳೆ. ಇತ್ತ ಪಕ್ಕದ ಮನೆಯ ಹುಲ್ಲುಜೋಪಡಿಗೆ ಬೆಂಕಿ ಬಿದ್ದು ಹತ್ತಿಕೊಂಡಿದೆ. ಆ ಬೆಂಕಿಯ ಕೆನ್ನಾಲಿಗೆ ಅಕ್ಕಪಕ್ಕದವರ ಮನೆಗೆಲ್ಲ ಹರಡಿದೆ. ಇತ್ತ ತೊಟ್ಟಿಲಲ್ಲಿ ಮಲಗಿದ್ದ ಕೂಸಿನ ಮನೆಗೂ ಬೆಂಕಿ ಹತ್ತಿಕೊಂಡು ಉರಿಯುತ್ತಿದೆ. ಬಾವಿಯಿಂದ ನೀರು ತರುತ್ತಿದ್ದವಳು ಮನೆ ಹತ್ತಿಕೊಂಡು ಉರಿಯುತ್ತಿರುವುದನ್ನು ಕಂಡು ಮಗು ಮಲಗಿಸಿರುವುದು ನೆನಪಾಗುತ್ತದೆ. ಭಯಭೀತಳಾಗಿ ಆ ಹೊಗೆ-ಬೆಂಕಿಯ ನಡುವೆಯೂ ಮನೆಯೊಳಗೆ ಹಾದು ಮಲಗಿದ್ದ ಕೂಸನ್ನು ತನ್ನ ಎದೆಗವಚಿಕೊಂಡು, ದುಃಖತಪ್ತಳಾಗಿ ಒಂದೇ ಉಸಿರಿಗೆ ಊರಾಚೆಯ ಬಯಲಿನಲ್ಲಿ ಬಂದು ಕೂತಳು. 

ಮತ್ತೊಮ್ಮೆ ತುಂಗಾ ನದಿಯ ಮರಳುಹಾಸಿನ ಅಂಚಿಗೆ ಕಂಕುಳಲ್ಲಿದ್ದ ಎರಡೂವರೆ ವರ್ಷದ ಕೂಸನ್ನು ಕೂರಿಸಿ, ಸ್ಕೂಲ್ ಮೇಷ್ಟ್ರು ಶಾಂತವೀರಪ್ಪ ಮತ್ತು ವೀರಮ್ಮ ಮಾತಿನಲ್ಲಿ ಮಗ್ನರಾಗಿ ತಾವು ತಂದಿದ್ದ  ಬುತ್ತಿಯನ್ನು ತೆಗೆದು ರೊಟ್ಟಿ ತಿನ್ನುತ್ತಲಿದ್ದರು. ಅತ್ತಕಡೆಯಿಂದ ಯಾರೋ ಅರಚುತ್ತಾರೆ ಅಯ್ಯೋ ಮಗು, ಮಗು ಎಂದು... ಇತ್ತ ಕೂರಿಸಿದ್ದ ಕೂಸು ಹರಿಯುವ ತುಂಗಾನದಿ ಕಡೆಗೆ ಕ್ಷಣಾರ್ಧದಲ್ಲಿ ಹೋಗಿ ನೀರಿನಲ್ಲಿ ಮುಗುಚಿಕೊಂಡಿತ್ತು. ರೊಟ್ಟಿ ಸವಿಯಲ್ಲಿದ್ದ ತಾಯಿ ಓಡಿಹೋಗಿ ನೀರಿನಲ್ಲಿದ್ದ ಮಗುವನ್ನು ಬಾಚಿ ತಬ್ಬಿ ಆಲಂಗಿಸುತ್ತಾರೆ. 

ನಂತರದ ದಿನಗಳಲ್ಲಿ ಈ ಬಾಲಕ ಸುಮಾರು ೫-೬ ವರ್ಷವಿರಬೇಕು ಆಗ ತನ್ನ ಅಮ್ಮನನ್ನು ಕಳೆದುಕೊಂಡುಬಿಟ್ಟರು. ಆ ತಾಯಿಯ ಮುಖದ ನೆನಪು ಅಸ್ಪಷ್ಟ ಆದರೆ ಆಕೆಯ ಹಾಡಿನ ಕೊರಳಿನ ಇಂಪು ಮಾತ್ರ ಅವರ ಮನಸ್ಸಿನಲ್ಲಿ ಸದಾ ಅನುರಣಿಸುತ್ತಲೇ ಇರುತ್ತದೆ. ತನ್ನ ಎರಡು ಗಂಡಾಂತರಗಳಲ್ಲಿ ರಕ್ಷಿಸಿದ ತಾಯಿಯನ್ನು ಕಳೆದುಕೊಂಡ ಆ ಮನಸ್ಸು ಸದಾ ಆ ಅಮ್ಮನನ್ನೇ ಹುಡುಕುತ್ತಲಿರುತ್ತದೆ.

"ನಿನ್ನ ಅಮ್ಮ ದೇವರಲ್ಲಿ ಹೋಗಿದ್ದಾಳೆ" ಎಂದಾಗ  ಬರುತ್ತಾಳಲ್ಲವಾ..? ಮತ್ತೆ ಬಂದೇ ಬರುತ್ತಾಳೆಂಬ ಆಸೆಯಲ್ಲೇ ಬಾಲ್ಯ. ದಿನಕ್ರಮೇಣ ವಾಸ್ತವದ ಅರಿವಾದಾಗ ದುಃಖ ಒತ್ತರಿಸಿಕೊಂಡು ನೆನಪು ಕಾಡುತ್ತಲಿರುತ್ತದೆ. ಆ ನಂತರ "ಕಂಡ ಕಂಡ ಹೆಣ್ಣ ಮೊಗದಿ ತಾಯಿ ಮುಖವನರಸಿ" ಹುಡುಕುವುದೇ ಕೆಲಸ. ಎಲ್ಲಿ ಅಮ್ಮ, ಅರಿವಾಗುವ ಮುನ್ನ ಮತ್ತೆಂದೂ ಬಾರದಲೋಕಕ್ಕೆ ತೆರಳಿರುತ್ತಾಳೆ. ಈ ಅಮ್ಮನ ನೆನಪಲ್ಲಿ ಮತ್ತೊಬ್ಬ ತಾಯಿ ಶಾಂತಮ್ಮ ಅವರ ಜೀವನವನ್ನು ತುಂಬುತ್ತಾರೆ. ಹೀಗೆ ಬಾಲ್ಯದಲ್ಲೇ ನೋವಿನ ಬುತ್ತಿ, ಗಂಡಾಂತರಗಳ ಗಂಟನ್ನು ಕಟ್ಟಿಕೊಂಡು ಬೆಳೆದವರು ಜಿ ಎಸ್ ಶಿವರುದ್ರಪ್ಪನವರು. 

ಜಿ ಎಸ್ ಎಸ್ - ಗುಗ್ಗರಿ ಶಾಂತವೀರಪ್ಪ ಶಿವರುದ್ರಪ್ಪನವರ ಪೂರ್ವಿಕರು ಧಾರವಾಡ ಜಿಲ್ಲೆಯ ಗುಗ್ಗರಿ ಎಂಬ ಊರಿನವರು. ಊರಿನ ನಂಟು ಕಳಚಿದ್ದರೂ ಅವರ ಹೆಸರಿನಲ್ಲಿ ಸದಾ ಬೆರೆತುಕೊಂಡಿದೆ. 

ಬಾಲ್ಯದ ದಿನಗಳಲ್ಲಿ ಅಪ್ಪನದು ಊರೂರು ಅಲೆಸುವಂತ ವೃತ್ತಿಯಲ್ಲಿ ಅವರನ್ನು ಹೆಚ್ಚು ಆಕರ್ಷಿಸಿದ್ದು ಹೊನ್ನಾಳಿಯ ಹತ್ತಿರದ ತುಂಗಭದ್ರಾ ನದಿ, ರಾಮಗಿರಿಯ ಬಯಲಾಟಗಳ ಹುಚ್ಚು, ಕೋಟೆ ಹಾಳುವಿನ ಸುತ್ತಮುತ್ತಲಿನ ಮಲೆನಾಡ ಸೆರಗು, ಬೆಲಗೂರಿನ ತೆಂಗಿನ ತೋಟದ ಹರಹು, ಸುತ್ತಮುತ್ತಲಿನ ನೇಕಾರರ ಮನೆ, ಕುಂಬಾರರ ಬೀದಿ, ನೇಕಾರ ಮತ್ತು ಕುಂಬಾರರ ಕೈಚಳಕಗಳು ಹೀಗೆ ವಿಧವಿಧವಾದ ಸೂಕ್ಷ ಅನುಭೂತಿಗಳು ಜಿ. ಎಸ್ . ಎಸ್ ಅವರ ಬಗೆ ಬಗೆಯ ಕವಿತೆಗಳು ರೂಪ ತಾಳುವಂತೆ ಮೋಡಿ ಮಾಡಿದ್ದವು. 

 ಹೊಸದುರ್ಗದ ಹತ್ತಿರದ ಬೆಲಗೂರಿನಲ್ಲಿ ಮಿಡಲ್ ಸ್ಕೂಲ್ ಪರೀಕ್ಷೆ ಬರೆದವರಲ್ಲಿ ಎಂಟು ಜನರು, ಅವರಲ್ಲಿ ಪಾಸಾಗಿದ್ದವರು ಇಬ್ಬರೇ ಅವರಲ್ಲಿ ಜಿ ಎಸ್ ಶಿವರುದ್ರಪ್ಪರವರು ಸಹ ಒಬ್ಬರು. ಆನಂತರ ದಾವಣಗೆರೆಯಲ್ಲಿ ಹೈಸ್ಕೂಲಿಗೆ ಸೇರಿದರು.  ಶಾಂತವೀರಪ್ಪನವರಿಗೆ ಸಂಸಾರಿಕ ಕಷ್ಟಗಳು ಹೆಚ್ಚಾಗಿ ಮಗನನ್ನು ಮುಂದೆ ಓದಿಸುವ ಇಚ್ಚೆಯಿಲ್ಲ. ಬದಲು ಕೆಲಸಕ್ಕೆ ಸೇರಿಸಿದರೆ ಮನೆ ಸಾಗುವುದು ಕಷ್ಟವಿಲ್ಲವೆಂದು ಭಾವಿಸಿ ಕೆಲಸಕ್ಕೆ ಸೇರಿಕೊಳ್ಳಲು ಹೇಳುತ್ತಾರೆ. ಆದರೆ ಶಿವರುದ್ರಪ್ಪನವರಿಗೆ ಮುಂದೆ ಓದುವ ಆಸೆ ನಂತರ ತುಮಕೂರಿನಲ್ಲಿ ಇಂಟರ್ ಮೀಡಿಯೇಟ್ ಸೇರಿದರು. 

ಚಿತ್ರ : ಅಂತರ್ಜಾಲ ಕೃಪೆ

೧೯೪೨ ಆಗ ಸ್ವಾತಂತ್ರ್ಯ ಚಳುವಳಿ ಭರಾಟೆ, ಶಿವರುದ್ರಪ್ಪನವರೂ ಮೆರವಣಿಗೆಗಳಲ್ಲಿ ಭಾಗವಹಿಸಿ ವಂದೇ ಮಾತರಂ ಕೂಗಿದ್ದರು. ಈ ವಿಷಯ ತಿಳಿದ ಶಿವರುದ್ರಪ್ಪನವರ ತಂದೆಗೆ ಗಾಭರಿ. ಈ ಮೊದಲು ಮೇಷ್ಟ್ರು  ಅವರು ಶಿಕ್ಷಕರಾಗಿದ್ದ ರಾಮಗಿರಿಯಲ್ಲಿ, ಒಮ್ಮೆ ಶಾಲಾ ಕುರ್ಚಿಗಳನ್ನು ಕಾಂಗ್ರೆಸ್ ಪರವಾದ ಸಭೆಗೆ ಕಳುಹಿಸಿದ್ದದ್ದೇ ದೊಡ್ಡ ಪ್ರಮಾದವಾಗಿತ್ತು, ವಿಷಯ ಹಿರಿಯ ಅಧಿಕಾರಿಗಳಿಂದ "ಇದು ದೇಶದ್ರೋಹದ ಕೆಲಸ" ಎಂದು ನೋಟೀಸ್ ಜಾರಿಗೊಳಿಸಿದ್ದರು. ಮೊದಲೇ ಕಷ್ಟದಲ್ಲಿದ್ದ ಮೇಷ್ಟ್ರಿಗೆ ಶಿವರುದ್ರಪ್ಪನವರ ವಂದೇ ಮಾತರಂ ಮೆರವಣಿಗೆಯಲ್ಲಿ ಭಾಗವಹಿಸುವುದರಿಂದ ತನ್ನ  ಕೆಲಸ ಎಲ್ಲಿ ಕಳೆದುಕೊಳ್ಳುವೆನೆಂಬ ಭಯ. ಇದೆಲ್ಲವನ್ನು ಮನಗಂಡ ತಂದೆ "ಸದ್ಯಕ್ಕೆ ಓದು ಬೇಡ, ಏನೂ ಬೇಡ, ನೆಟ್ಟಗೆ ಮನೆಗೆ ಬಾ" ಒಂದು ಒತ್ತಾಯದಿಂದ ಕರೆಸಿಕೊಂಡರು.

ಅರ್ಧಕ್ಕೆ ಓದನ್ನು ನಿಲ್ಲಿಸಿ ಸುಮಾರು ಮೂರು ತಿಂಗಳು ಹಳ್ಳಿಯಲ್ಲೇ ಪುಸ್ತಕಗಳಲ್ಲಿ ಮುಳುಗಿಹೋಗುತ್ತಾರೆ. ಒಮ್ಮೆ ಏರೋಪ್ಲೇನ್ ಫ್ಯಾಕ್ಟರಿಯಲ್ಲಿ ಯುವಕರು ಬೇಕಿದ್ದಾರೆ ಎಂಬ ಜಾಹಿರಾತಿನಿಂದ ಶಿವರುದ್ರಪ್ಪನವರ ತಂದೆ ಮಗನನ್ನು ಕೆಲಸಕ್ಕೆ ಸೇರಲು ಪ್ರೋತ್ಸಾಹಿಸಿ ಬೆಂಗಳೂರಿಗೆ ಇಂಟ್ರವ್ಯೂಗೆ ಕಳುಹಿಸುತ್ತಾರೆ. ಅಲ್ಲಿ Physical fitness ನಂತರ ಡಾಕ್ಟರ್  your are unfit for this job. ಹೋಗು ಮನೆಗೆ ಎಂದು ಕಳುಹಿಸಿಬಿಡುತ್ತಾರೆ. ಕೊನೆಗೆ ಹ್ಯಾಪ್ ಮೋರೆ ಹಾಕಿಕೊಂಡು ಬಂದ ಶಿವರುದ್ರಪ್ಪನವರು ತಂದೆಯೊಂದಿಗೆ ಸದ್ಯಕ್ಕೆ ಕೆಲಸ ಖಾಲಿ ಇಲ್ಲವಂತೆ ಎಂದು ಸುಳ್ಳು ಹೇಳುತ್ತಾರೆ. 

ಮುಂದೆ ನಗರಸಭೆಗೆ ಬಿಲ್ ಕಲೆಕ್ಟರ್ ವೃತಿಗಾಗಿ ಇಂಟರ್ವ್ಯೂಗೆ ತಂದೆಯವರೇ ಶಿವರುದ್ರಪ್ಪನವರನ್ನು ಕರೆದುಕೊಂಡು ಹೋಗುತ್ತಾರೆ. ಅಲ್ಲಿ ಕಮೀಷನರ್ ನಿನ್ನ ವಯಸ್ಸು ಎಷ್ಟು ಎಂದಾಗ ೧೬ ಎಂದು ಕೇಳಿ, "ನೀನು ಮನೆಗೆ ಹೋಗು, ನೀನು ಇನ್ನು ಚಿಕ್ಕವನು ಈ ಕೆಲಸ ನಿನ್ನದಲ್ಲ" ಎಂದುಬಿಡುತ್ತಾರೆ. ಅಲ್ಲೇ ಇದ್ದ ಶಾಂತವೀರಪ್ಪನವರನ್ನು ಕರೆಸಿ 'ಇಷ್ಟು ಚಿಕ್ಕ ಹುಡುಗನ್ನ ಈಗಲೇ ಕೆಲಸಕ್ಕೆ ಸೇರಿಸಲು ಯಾಕ್ರಿ ಕರಕೊಂಡು ಬಂದಿದ್ದೀರಿ? ಈ ಕೆಲಸ ಎಂಥದು ಗೊತ್ತೆ? ಕರೆದುಕೊಂಡು ಹೋಗಿ ಮುಂದಕ್ಕೆ ಓದಿಸಿ’ ಎಂದು ಆ ಕಮೀಷನರ್ ಹೇಳಿ ಕಳುಹಿಸಿಬಿಡುತ್ತಾರೆ. 

ಸ್ವಾತಂತ್ರ್ಯ ಹೋರಾಟದ ನಡುವೆ ತಮ್ಮ ವಿದ್ಯಾಭ್ಯಾಸ ನಿಂತುಹೋಗಿತ್ತು. ೧೯೪೩ರ ಜೂನ್ ವೇಳೆಗೆ ಮತ್ತೆ ತುಮಕೂರು ಇಂಟರ್ ಮೀಡಿಯೇಟ್ ಕಾಲೇಜನ್ನು ಸೇರಿದರು. ಆನಂತರದ ದಿನಗಳಲ್ಲಿ ತುಮಕೂರಿನ ಸಿದ್ಧಗಂಗಾ ಮಠದಲ್ಲಿ ಇದ್ದುಕೊಂಡು ದಿನವೂ ಕಾಲೇಜಿಗೆ ಹೋಗಿಬರುತ್ತಲಿದ್ದರು. ಜೂನಿಯರ್ ಇಂಟರ್ ಪರೀಕ್ಷೆ ಪಾಸಾದ ನಂತರ ಸಕಲೇಶಪುರದ ರೇಂಜ್ ಇನ್ಸ್ಪೆಕ್ಟರ್ ಕಛೇರಿಯಲ್ಲಿ ಗುಮಾಸ್ತರಾಗಿ ಬೇಸಿಗೆ ರಜೆಯನ್ನು ಕಳೆದರು. ಮುಂದೆ ಬಿ.ಎ ಓದಬೇಕು ಎಂಬ ಆಸೆಯಿದ್ದರೂ ತಮ್ಮ ತಂದೆಯ ಆಶಯದ ಮೇರೆಗೆ ಆಹಾರ ಧಾನ್ಯಗಳ ಡಿಪೋನಲ್ಲಿ "ರೇಷನ್ ಗುಮಾಸ್ತ"ರಾದರು. ಈ ವೃತ್ತಿಯಿಂದ ಸುತ್ತಮುತ್ತಲ ಜನರ ಬವಣೆ ಮತ್ತು ತಾಕಲಾಟಗಳನ್ನು ನೋಡಿ "ಚಕ್ರವ್ಯೂಹ" ಕಾದಂಬರಿ ಬರೆಯುವಂತೆ ಮಾಡಿತು.  ವಿಪರ್ಯಾಸವೆಂದರೆ ಈ ಕಾದಂಬರಿಯ ಹಸ್ತಪ್ರತಿ ಓದಲು ತೆಗೆದುಕೊಂಡು ಹೋದವರು ಹಿಂದಿರುಗಿಸುವುದೇ ಇಲ್ಲ.

೧೯೪೬ರ ನಂತರ ಮತ್ತೆ ಓದುವ ಮನಸ್ಸು ಮಾಡಿದರು ಆಗ ಮೈಸೂರಿಗೆ ಬಂದು ಬಿ.ಎ ಆನರ್ಸ್ನಲ್ಲಿ ಕನ್ನಡ  ಸೇರಿಕೊಂಡರು. ಅಲ್ಲಿಂದಾಚೆಗೆ ಕೆ.ವಿ ಪುಟ್ಟಪ್ಪ (ಕುವೆಂಪು) ಅವರ ಪಾಠ ಕೇಳುವ ಯೋಗ ಕೂಡಿಬಂದಿತು. 

ಮುಂದೆ ಮತ್ತಷ್ಟು ವಿಷಯಗಳು ನಿಮ್ಮೊಂದಿಗೆ .... 

Thursday, December 12, 2013

ನಿತ್ಯ ಕಾಯಕ

ಚಿತ್ರ ಕೃಪೆ - ಮಲ್ಲಿಕಾರ್ಜುನ್ 


ದೇಹ, ಮನಸು ಬಯಸುತ್ತದೋ ಬಿಡುತ್ತದೋ
ಭಾರವನ್ನು ಹೊರಲೇ ಬೇಕು ಬವಣೆಗಳ ತೀರಿಸಲೇ ಬೇಕು

ನಮ್ಮದು ಐಷಾರಾಮಿ ಜೀವವಲ್ಲ
ಪ್ರಕೃತಿಯನೇ ನಂಬಿರುವ ಬಾಳ್ವೆ ನಮ್ಮದು

ಗಂಡ ಹೊಲ ಗದ್ದೆ ದನಕರುಗಳ ಹಿಂದೆ
ಕೂಸು ಬೆನ್ನಿಗೆ ಬಿಗಿದ ಚೀಲದ ಮುಂದೆ 
ನಾನು ಬಾವಿ ಬಾಯಿಗೆ ಹಗ್ಗ ಬಿಟ್ಟೆ
ಇನ್ನು ಬಾಯಾರಿಕೆಯ ನೆವ ತೀರಿಸುವ ಸಮೀಕ್ಷೆ 

ದಣಿವು ತೀರಿಸುವ ಈ ಬಿಂದಿಗೆ 
ಹೊರೆಯೋ  ಹಗುರವೋ 
ಒಯ್ಯುವ ಬಂಡಿ ನಾನೇ
ಹಳ್ಳಿ ದೇಹ ಕಟ್ಟುಮಸ್ತು 
ಎಂತ ಭಾರವನೂ ಸಹಿಸಲು ಅಸ್ತು ..

ಪಾದುಕೆಯ ಆವಾಹನ ಇಲ್ಲ
ಬಿಸಿಲ ಸಮ್ಮೋಹನವಿಲ್ಲ
ಕಾಲುದಾರಿಯೇ ಹೆಜ್ಜೆಗೆ ಆಹ್ವಾನ
ನಡು ಬಿರುಸು ಹೊರೆಗೆ 
ಸಿಂಬೆ ನೆತ್ತಿಯ ನೋವಿಗೆ
ಇದು ದಿನನಿತ್ಯದ ಕಾಯಕ

Tuesday, December 3, 2013

ಜಾತಿ ಹಿಂದೆ ಹೋಗುವುದು ಬೇಡ..!!

ನಿನ್ನೆ ದಿನ...

ನಿಮ್ಮ ಬಾಸ್ ಇಲ್ವಾ..? ಅವರ ರೂಮ್ ನಲ್ಲಿ ಕಾಣುತ್ತಿಲ್ಲ, ಎಂದ ಮೆದು ಸ್ವರ ಅತ್ತ ಬಾಗಿಲಿನ ಕಡೆ ಕಣ್ಣು ತೆರೆಯುವಂತೆ ಮಾಡಿತು. (ಆತ ಕಾಂಟ್ರಾಕ್ಟ್ ಕಂಪನಿಯಲ್ಲಿ ನಮ್ಮದೇ ಪ್ರಾಜಕ್ಟ್ ನಲ್ಲಿ ಕೆಲಸ ಮಾಡುತ್ತಿದ್ದವ,  ಸುಮಾರು ೪ ವರ್ಷಗಳಿಂದ ಒಂದೇ ಕಡೆ ಕೆಲಸಮಾಡುತ್ತಿದ್ದರಿಂದ ಚಿರಪರಿಚಿತ).

ಇಲ್ಲ ಅನ್ಸುತ್ತೆ
ಯಾಕೆ ಏನ್ ಸಮಚಾರ..? ಎಂದು ಕೇಳುತ್ತಿದ್ದಂತೆ

ಏನಿಲ್ಲ ನನ್ನ ಮಗಳ ಮದುವೆ ಅದಕ್ಕೆ ಅವರಿಗೆ ಪತ್ರಿಕೆ ಕೊಡಬೇಕಿತ್ತು. ಎಂದು ಖುಷಿ ಖುಷಿಯಲ್ಲಿ ಹೇಳುತ್ತ ನಿಂತ.

ಓಹ್ ಹೌದಾ..!! ಯಾಕೆ ನಮ್ಮ ಪ್ರಾಜೆಕ್ಟ್ ಮ್ಯಾನೇಜರ್ ನಿಮಗೆ ಅಷ್ಟು ಪರಿಚಿತರೇ..? ಅದು ಅಲ್ಲದೇ ಆಕೆ ಈಜಿಪ್ಟ್ ನವರು, ಭಾರತಕ್ಕೆ ಬರುತ್ತಾರಾ..?? ಎಂದು ನಾನು ಪ್ರಶ್ನಿಸಿದೆ. 

ಏನಿಲ್ಲ ಸುಮ್ಮನೆ ಮದುವೆ ಅಲ್ವಾ ಅದಕ್ಕೆ ಎಂದ... !! - ಹಾಗೂ ಮುಂದುವರಿದು ಮತ್ತಷ್ಟು ಪ್ರಶ್ನೆ ಕೇಳಿದೆ

ಅದು ಸರಿ ನಾನು ಮತ್ತೆ ಮಿಕ್ಕುಳಿದವರು ನಮ್ಮ ಕಚೇರಿ, ವಿನ್ಯಾಸ ಸಲಹಗಾರ ಕಚೇರಿಯವರಲ್ಲಿ ಎಷ್ಟು ಜನ ಭಾರತಿಯರಿದ್ದಾರೆ. ನಿನ್ನ ಮಗಳು ನನಗೆ ಎಷ್ಟು ಚೆನ್ನಾಗಿ ಪರಿಚಯ (ಆತನ ಮಗಳು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದರಿಂದ ಅವಳನ್ನು ಬಹಳಷ್ಟು ಬಾರಿ ಭೇಟಿ ಮಾಡಿದ್ದೆ) ನಮಗೆಲ್ಲ ಪತ್ರಿಕೆ ಕೊಡಬೇಕು ಎಂದೆನಿಸಲಿಲ್ಲವೇ..?  ಅದೂ ಅಲ್ಲದೇ ನಿಮ್ಮ ಕೇರಳದವರೇ ಆದ ಎಲೆಕ್ಟ್ರಿಕಲ್ ಇಂಜಿನಿಯರ್ ಅವರು ನಿಮ್ಮ ಪಕ್ಕದ ಊರಿನವರು. ಕಳೆದ ಬಾರಿ ಏನೋ ೪-೫ ಕೇಜಿಗಟ್ಟಲೆ ಪಾರ್ಸೆಲ್ ಕಳುಹಿಸಿದ್ದೆ ನಿನ್ನ ಹೆಂಡತಿಗೆ. ಅವರಿಗಾದರೂ ಕೊಡಬಹುದಿತ್ತು ಅಲ್ಲವಾ..? ಅವರು ಮದುವೆಗೆ ಬರಲಾಗದಿದ್ದರೆ ಅವರ ಮನೆ ಕಡೆಯಿಂದ ಯಾರನ್ನಾದರೂ ಕಳುಹಿಸುತ್ತಿದ್ದರು. - ಏಕೆ ಹೀಗೆ ??

ಹಾಗೇನಿಲ್ಲ, ಕೊಡಬಾರದೆಂದೇನಲ್ಲಾ "ನಿಮ್ಮ ಪ್ರಾಜೆಕ್ಟ್ ಮ್ಯಾನೇಜರ್ "ಕ್ರಿಶ್ಚಿಯನ್ " ಅದಕ್ಕೆ ಪತ್ರಿಕೆ ಕೊಡೋಣ ಎಂದು ಬಂದೆ..!!" ಈ ಮಾತು ಕೇಳಿದ ಕೂಡಲೆ ನನಗೇಕೋ ಕಸಿವಿಸಿ ಎನಿಸಿತು. ಆದರೂ ಸಾವರಿಸಿಕೊಂಡೆ.

ಚಿತ್ರ- ನೆಟ್ ಲೋಕ

ಹೀಗೆ ಮಾಡುತ್ತಿರುವುದು ಸರಿಯಲ್ಲಾ, ಆಕೆ ಈಜಿಪ್ಟ್ ನವಳು ಅದೂ ಅಲ್ಲದೇ ಭಾರತ ದೇಶದ ಗಂಧಗಾಳಿಯಿಲ್ಲದವರೂ,  ಅವರಿಗೂ ಪತ್ರಿಕೆ ಕೊಡಿ ಬೇಡವೆಂದು ಹೇಳುತ್ತಿಲ್ಲ, ಯಾವ ದೇಶದವರಾದರೇನು ಎಲ್ಲರ ಆಶೀರ್ವಾದ ನಿಮ್ಮ ಮಗಳಿಗೆ ಬೇಕು. ಜಾತಿ ಒಂದೇ ಎಂದ ಮಾತ್ರಕ್ಕೆ ಮಿಕ್ಕವರನ್ನು ನಿರ್ಲಕ್ಷಿಸುವುದು ಒಳಿತಲ್ಲ. ಜಾತಿ ಯಾರು ಮಾಡಿದರು ನೀವು ಹಿಂದು ಹೆಸರಿನಲ್ಲೇ ಕರೆಯಲ್ಪಡುತ್ತೀರಿ ನಿಮ್ಮ ಹೆಸರಿನಲ್ಲಿ ಭಾರತೀಯ ಮೂಲತೆ ಇದೆ. ಎಲ್ಲರಲ್ಲೂ ಏಕತೆಯನ್ನು ಕಾಣಿ.

ಅದರಲ್ಲೂ ಹೊರ ದೇಶಕ್ಕೆ ಬಂದಾಗ ನಾವು ಜಾತಿಯನ್ನಿಟ್ಟುಕೊಂಡು ಬಂದವರಲ್ಲ, ಭಾರತೀಯರು ಎಂಬುದೊಂದೇ ನಮ್ಮ ಮಂತ್ರ...!! ಜಾತಿಯ ಹಿಂದೆ ಹೋಗದಿರಿ. ಇಂತಹ ನಡವಳಿಕೆ ನಿಮಗೆ ಶೋಭೆ ತರುವಂತಹುದಲ್ಲ. - ಇಷ್ಟು ಮಾತನಾಡುತ್ತಿದ್ದಂತೆ ನಮ್ಮ ಪ್ರಾಜೆಕ್ಟ್ ಮ್ಯಾನೇಜರ್ ಬಂದಳು.. ಈತ ಸರಿ ಹೊರಡುವೆ ಎಂದು ಹೇಳಿ ಹೊರಡುತ್ತಿದ್ದವನನ್ನು ತಡೆದು.

"ನಾನು ಇದನ್ನು ಖಂಡಿಸುತ್ತೇನೆ" ಎಂದಷ್ಟೇ ಹೇಳಿ ಸಾಗಾಕಿದೆ..!!

ಸಂಜೆ ಮನೆಗೆ ಹೋದನಂತರ ಈ-ಮೈಲ್ ತೆರೆದಾಗ ಕಂಡಿದ್ದು ಮದುವೆಯ ಕರೆಯೋಲೆ ಜೊತೆಗೆ ೧೦ ಜನರಿಗೂ ಲಗತ್ತಿಸಲಾಗಿತ್ತು. 

ಇಂದು ಬೆಳ್ಳಗ್ಗೆ ಆತ ಬಂದು ಕ್ಷಮೆ ಕೋರಿ ನಾನು ಹಾಗೆ ಮಾಡಬಾರದಿತ್ತು. ತೆಗೆದುಕೊಳ್ಳಿ ಪತ್ರಿಕೆ ಮಗಳಿಗೆ ನಿಮ್ಮೆಲ್ಲರ ಆಶೀರ್ವಾದವಿರಲಿ ಎಂದು ಹೇಳಿ ಹೊರಟ.

ಇತ್ತ ನಮ್ಮ ಕಚೇರಿಯವರೆಲ್ಲ ಆತನ ಮಗಳಿಗೊಂದು ಉಡುಗೊರೆ ಕೊಟ್ಟು ಆಶೀರ್ವಾದಕ್ಕೆ ಗ್ರೀಟಿಂಗ್ ಕಳುಹಿಸೋಣ ಎಂದು ಎಲ್ಲರೂ ನಿರ್ಧರಿಸಿದರು. ಆದರೆ ಪ್ರಾಜೆಕ್ಟ್ ಮ್ಯಾನೇಜರ್ ಗೆ ಕೊಟ್ಟ ಪತ್ರಿಕೆ ಮಾತ್ರ ಕಸದ ಬುಟ್ಟಿಯಲ್ಲಿತ್ತು ಅದನ್ನು ತಂದು ನನ್ನ ಆಫೀಸ್ ಬಾಯ್ ನನ್ನ ಕೈಗೆ ಕೊಟ್ಟ. 

ಏಕೋ ಮನಸ್ಸಿನೊಳಗೆ ಒಂದು ರೀತಿ. ಆತನಿಗೂ ಮನವರಿಕೆ ಪೂರ್ಣ ಪ್ರಮಾಣದಲ್ಲಾಗಿದೆ ಎಂದುಕೊಂಡಿದ್ದೇನೆ. ಆದರೆ ಯಾರೂ ಜಾತಿ ಹಿಂದೆ ಹೋಗುವುದು ಬೇಡ ಮಾನವೀಯತೆಯೊಂದೇ ಧರ್ಮ ಅದನ್ನು ಪಾಲಿಸಬೇಕಿದೆ ಅಷ್ಟೇ..!!

Monday, December 2, 2013

ಕಾವಿನ ಸ್ಪರ್ಶ


ಸಣ್ಣ ಬಿಸಿಯೊಂದು ತಾಕಿ ಒಡಕಾದ ಗಾಜು 
ಮರು ಲೇಪಿಸಲಾಗದೆ ಮೂಡಿತೊಂದು ಗೆರೆಯು 

ಏನೊಂದು ಅರಿಯದ ಬಿಸಿಯು ತನ್ನ ಕಾವ ಮರೆತು
ಬಿರುಕು ಹುಟ್ಟಿಸಿ ಬಳಕೆ ಕಸಿಯಿತು

ತನ್ನೊಳಗಿನ ಶಕ್ತಿ ಟೊಳ್ಳೆಂದು ಬಯಸಿ
ಗಾಜು ಹಿತವಾದ ಶಾಖಕೆ ಪರವಶವಾಯಿತು

ಬಲವಿಲ್ಲದ ಕಾವು ಒಡಕಲ್ಲದ ಗಾಜು
ತನ್ನರಿವು ಅರಿಯದೆ ಒಬ್ಬರಿಗೊಬ್ಬರು ಆಹುತಿ 
ಮುಖಾಮುಖಿ ಭೇಟಿ ಇನ್ನೆಲ್ಲಿ
ಗಾಜಿನ್ನು ಕಸದ ಬುಟ್ಟಿಯಲ್ಲಿ ...!!! 



ಗಾಜಿನ ತಟ್ಟೆ ಆಕಸ್ಮಿಕವಾಗಿ ಕಾವು ತಾಕಿ ಚೂರಾದ ಸಂದರ್ಭದಲ್ಲಿ ಮನಸ್ಸಿಗೆ ಹೊಳೆದ ಸಾಲುಗಳು :) :)

Saturday, November 23, 2013

ಮನುಷ್ಯತ್ವದ ನೆಲೆಕಾಣುವಂತಾಗಲಿ

ಬದಲಾವಣೆ ಜಗದ ನಿಯಮ ಎಂಬಂತೆ ತಾಂತ್ರಿಕ ಜಗತ್ತಿನಲ್ಲೂ ದಿನಕ್ಕೊಂದು ಹೊಸ ಆಯಾಮಗಳು ಸೃಷ್ಟಿಯಾಗುತ್ತಲಿವೆ. ಅದರಂತೆ ಜನರು ಸಹಾ ಹೊಸ ಹೊಸ ತಂತ್ರಶಾಸ್ತ್ರಗಳನ್ನು ಉಪಯೋಗಿಸುತ್ತಲೇ ಬಂದಿದ್ದೇವೆ. 

ಬೆಂಗಳೂರಿನ ಹೃದಯಭಾಗವಾದ ಕಾರ್ಪೋರೇಷನ್ ಬಳಿ ಇತ್ತೀಚೆಗೆ ನಡೆದ ಘಟನೆ:

ಮಹಿಳೆಯೊಬ್ಬರು ಎ.ಟಿ. ಎಂ ಹಣ ತೆಗೆಯುವಾಗ ಏಕಾಏಕಿ ಒಬ್ಬ ವ್ಯಕ್ತಿ ದೌರ್ಜನ್ಯವೆಸಗಿ, ಆಕೆಯನ್ನು ಹೀನಾಯವಾಗಿ ಥಳಿಸಿದ. ಆಕೆಯನ್ನು ಅಂಗವೈಕಲ್ಯತೆಗೆ ತಳ್ಳಿಬಿಟ್ಟ. ಇದು ಕೇವಲ ಹಣಕ್ಕಾಗಿ. ಸಿಸಿಟಿವಿಯಲ್ಲಿ ಕಂಡ ದೃಶ್ಯಾವಳಿ ಎಲ್ಲರ ಮನಸ್ಸಿನಲ್ಲಿ ಆಘಾತವನ್ನು ಸೃಷ್ಟಿಸಿದೆ. ಈ ವಿಷಯವಾಗಿ ಫೇಸ್ ಬುಕ್, ಮಾಧ್ಯಮ, ಪತ್ರಿಕೆಗಳು ಎಲ್ಲೆಡೆ ಎಷ್ಟೋ ಚರ್ಚೆಗಳು ಸಾಗುತ್ತಲೇ ಬಂದಿವೆ.

- ಹೀಗೆ ಆತ್ಮೀಯರೊಬ್ಬರು ಫೇಸ್ ಬುಕ್ ನಲ್ಲಿ ಸ್ವರಕ್ಷಣೆ ಬಗ್ಗೆ ತಮ್ಮ ವಿಚಾರವನ್ನು ಹಂಚಿಕೊಂಡಾಗ ಒಬ್ಬರು "ಮಹಿಳೆಯರು ಸಮಾನತೆಯೆಂಬ ಪೊಳ್ಳು ಜಿದ್ದಿಗೆ ಬಿದ್ದು ಸಬಲರು ಎಂಬ ಹೆಗ್ಗಳಿಕೆಯ ತೋರಿಕೆ ಬಿಟ್ಟು ....ಸ್ವಾಭಿಮಾನ ಮತ್ತು ಸ್ವರಕ್ಷಣೆಯತ್ತ ಹೆಚ್ಚು ಗಮನಕೊಟ್ಟರೆ ಸಮಾನತೆ ತಾನೇ ತಾನಾಗಿ ಒದಗಿ ಬರುತ್ತದೆ. ಸಮಾನತೆ ಒಂದು ಗೌರವವಾಗಿರಲಿ, ಅದು ಹಕ್ಕಾಗಿ ಅಲ್ಲ." - ಹೀಗೆಂದು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದ್ದರು. ಇದು ಅವರ ವೈಯಕ್ತಿಕ ಅಭಿಪ್ರಾಯವೇ ಆದರೂ ಸಮಾನತೆ ಬೇಕು ಎಂಬುದು ಸತ್ಯ. ಹಾಗಂತ ಇಂತಹ ಪರಿಸ್ಥಿತಿ ಒಬ್ಬ ಗಂಡಸಿಗೆ ಬರುವುದೇ ಇಲ್ಲ ಎಂದೇನಿಲ್ಲ. ಎಟಿಎಂನಲ್ಲಿ ಹಣ ತೆಗೆದುಕೊಳ್ಳಲು ಆ ಹೆಣ್ಣಿನ ಬದಲು ಗಂಡೇ ಅಲ್ಲಿದ್ದರೂ, ಅವನೂ ಸಹ ಎಷ್ಟರ ಮಟ್ಟಿಗೆ ಸ್ವರಕ್ಷಣೆ ಮಾಡಿಕೊಳ್ಳುತ್ತಿದ್ದನೋ ಗೊತ್ತಿಲ್ಲ. ಅಲ್ಲಿ ರೋಲಿಂಗ್ ಶಟರ್ ಹಾಕಿ ಬಂದೂಕು ಮತ್ತು ಮಚ್ಚನ್ನು ತನ್ನ ಕೈಯಲ್ಲಿ ಹಿಡಿದು ಬೆದರಿಸಿದರೆ ಯಾವುದೇ ಗಂಡಸು ಕೂಡ ಹೆದರುವ ಸಾಧ್ಯತೆಗಳಿವೆ. ತಕ್ಷಣಕ್ಕೆ ಕಿರುಚಿ, ಬೊಬ್ಬೆಯಿಟ್ಟರೂ ಕೊಲ್ಲುವ ಸಾಧ್ಯತೆಗಳೇ ಹೆಚ್ಚು. ಇಂತಹುದರಲ್ಲಿ ಆ ಹೆಣ್ಣು ಭಯಪೂರಿತಳಾಗಿ ಕೈಕಾಲು ಆಡದಿದ್ದರೆ ಏನು ಮಾಡಲೂ ಸಾಧ್ಯವಿಲ್ಲ. ಹೆಣ್ಣಿನ ಸಮಾನತೆಯೇ ಬೇರೆ ಈ ಘಟನೆಯೇ ಬೇರೆ. ಇಂತಹ ಘಟನೆ ಗಂಡು ಮತ್ತು ಹೆಣ್ಣು ಯಾರಿಗಾದರೂ ಆಗಬಹುದು. 

ಹಾಗಾದರೆ ಇದಕ್ಕೆ ಪರಿಹಾರವೇ ಇಲ್ಲವೇ??. ಎಲ್ಲ ತೊಂದರೆಗಳಿಗೂ ಪರಿಹಾರವೆಂಬುದು ಇದ್ದೇ ಇರುತ್ತೆ ಆದರೆ ಅದಕ್ಕೆ ಸಹಕಾರಿಯಾಗಿ ನಮ್ಮಂತಹ ಸಾಮಾನ್ಯ ಜನ, ಪೋಲೀಸ್, ಮಾಧ್ಯಮ, ಸರ್ಕಾರ ಹಾಗು ತಾಂತ್ರಿಕ ವ್ಯವಸ್ಥೆಗಳೂ ಹೊಂದಿಕೊಳ್ಳಬೇಕು. ಸುಮ್ಮನೆ ಸಾರಾಸಗಟಾಗಿ ಒಂದು ಬೃಹತ್ ಮಹಾನಗರಿಯನ್ನೇ ಗುರಿ ಮಾಡಿ ದೂಷಿಸಲೂ ಸಾಧ್ಯವಿಲ್ಲ. ಬೆಂಗಳೂರೆಂಬ ಮಾಂತ್ರಿಕ ನಗರ ಎಷ್ಟೋ ಜನರಿಗೆ ಅನ್ನ, ಬಟ್ಟೆಯನ್ನು ನೀಡುತ್ತಿದೆ. ಹೊರಗಿನಿಂದ ಬಂದ ಜನರು ಬೆಂಗಳೂರಿನಲ್ಲಿ ನೆಲೆಯೂರಿ ತಮ್ಮ ಬದುಕು ಸೃಷ್ಟಿಸಿಕೊಂಡಿದ್ದಾರೆ. ಈ ಹೊರಗಿನಿಂದ ಬಂದವರಲ್ಲಿ ಒಳ್ಳೆಯವರೂ, ಕೆಟ್ಟವರೂ ಇರುತ್ತಾರೆ ಹಾಗೆ ಬೆಂಗಳೂರಿಗರಲ್ಲೂ ಒಳ್ಳೆಯ ಮತ್ತು ಕೆಟ್ಟ ಜನರೂ ಇರುತ್ತಾರೆ. ಊರಿದ್ದ ಕಡೆ ಹೊಲಗೇರಿ ಎಂಬಂತೆ ಎಲ್ಲಾ ಸಾಧ್ಯಾನುಸಾಧ್ಯತೆಗಳು ಇದ್ದೇ ಇರುತ್ತವೆ. 

ಸಿಸಿಟಿವಿ ಯನ್ನು ಅಳವಡಿಸಿರುವುದೇಕೆ ಬರಿ ಅಲ್ಲಿ ನಡೆದ ಘಟನೆಗಳನ್ನು ಚಿತ್ರಿಸಿ, ಜನಕ್ಕೆ ಬಿತ್ತರಿಸುವುದು, ಮಾಧ್ಯಮಗಳು ಆಹಾರವಾಗಿಸಿಕೊಳ್ಳುವುದು, ಬೆಂಗಳೂರಿನಿಂದ ಬಿಬಿಸಿವರೆಗೂ ಚರ್ಚೆ ಹರಡುವುದಕ್ಕಾಗಿ ಅಲ್ಲ ಅಥವಾ ಇಂತಹ ಘಟನೆಯನ್ನು ನೋಡಿದ ಒಬ್ಬ ಯೂರೋಪಿನಾಕೆ ತನ್ನ ಟ್ವಿಟರ್ ನಲ್ಲಿ "ಓಹ್..!! ಬೆಂಗಳೂರು ಸುರಕ್ಷಿತವಲ್ಲ" ಎಂದಷ್ಟೇ ಬರೆದುಕೊಳ್ಳಲೂ ಅಲ್ಲ. ಪೋಲೀಸ್ ಕಾರ್ಯಾಚರಣೆಗೆ ಸಹಕಾರಿಯಾಗುವ ಈ ಚಿತ್ರ ತುಣುಕುಗಳನ್ನು ಮತ್ತಷ್ಟು ತಾಂತ್ರಿಕತೆಗೊಳಿಸಿದ್ದರೆ ಆ ಮಹಿಳೆಗೆ ಅಷ್ಟು ಬರ್ಬರತೆ ಗೋಚರವಾಗುತ್ತಿರಲಿಲ್ಲವೇನೋ. "ಸಿಸಿಟಿವಿ ಯಲ್ಲಿ ಇಂತಹ ಘಟನೆಗಳು ಚಿತ್ರೀಕರಣವಾಗುವಾಗ ಬೇರೆಲ್ಲಿಂದಲೋ ಈ ದೃಶ್ಯಗಳನ್ನು ನೋಡುವಂತೆಯೋ ಅಥವಾ ಇಂತಹ ಘಟನೆ ನಡೆಯುವಾಗ ಯಾವುದಾದರು ತುರ್ತು ಪರಿಸ್ಥಿತಿ ಸೂಚನೆಯೋ ಅಥವಾ ಕರೆ ಗಂಟೆಗಳ ಸದ್ದು ಬರುವಂತಿದ್ದರೆ ಸೂಕ್ತವೆನಿಸುತ್ತದೆ. ಅಂತೆಯೇ ಪ್ರತಿ ಎಟಿಎಂ ಕೇಂದ್ರಗಳಲ್ಲಿ ಭದ್ರತಾ ಸಿಬ್ಬಂದಿ ವ್ಯವಸ್ಥೆಗಳೂ ಇರಬೇಕಿತ್ತು" ಅಲ್ಲದೆ "ರೋಲಿಂಗ್ ಶಟರ್ ಇದು ತೀರಾ ಅಪಾಯಕಾರಿ. ಒಮ್ಮೆ ಆ ಬಾಗಿಲು ತೆರೆದಿಟ್ಟರೆ ಅದನ್ನು ಮತ್ತೆ ಯಾರೋ ಬಂದು ಸಲೀಸಾಗಿ ಮುಚ್ಚುವಂತೆ ಇರಬಾರದಿತ್ತು". ಶಟರ್ ಗಳಿಗಿಂತ ಸುರಕ್ಷಿತವಾದ ಬಾಗಿಲುಗಳನ್ನೂ ಸಹ ಮಾಡಬಹುದಿತ್ತೇನೋ..?". 

ಎಲ್ಲ ಮುನ್ನೆಚ್ಚರಿಕೆಗಳಿಗೂ ಮುನ್ನ ಬೆಂಗಳೂರಿಗರು ಅತಿ ಹೆಚ್ಚು ಕಾಳಜಿ ವಹಿಸಬೇಕಿದೆ. ಮನೆ ಬಾಡಿಗೆಗೆ ಬರುವ ವ್ಯಕ್ತಿ ಹೆಚ್ಚು ಹಣ ಕೊಡುತ್ತಾನೆಂಬ ಕಾರಣಕ್ಕೆ, ದಿಕ್ಕುದೆಸೆಯಿಲ್ಲದವರಿಗೆ ಮನೆ ಬಾಡಿಗೆ ಕೊಡುವುದು, ಆ ಮನೆಯಲ್ಲಿ ನೆಲೆಸಿರುವ ವ್ಯಕ್ತಿಯ ಪೂರ್ವಪರ ಎಲ್ಲವನ್ನು ತಿಳಿಯಬೇಕು. ಅಂತೆಯೇ ಹತ್ತಿರದ ಪೋಲೀಸ್ ಠಾಣೆಗಳಿಗೆ ನಿಮ್ಮ ಮನೆ ಬಾಡಿಗೆಯಲ್ಲಿರುವವರ ಮಾಹಿತಿಯನ್ನು ನೀಡಬೇಕು (ಹಲವು ಪೋಲೀಸ್ ಠಾಣೆಗಳು ಈ ವಿಷಯವನ್ನು ಎಲ್ಲೆಡೆ ಬಿತ್ತರಿಸಿವೆ). ಹಣದ ಆಮಿಷಕ್ಕೆ ಒಳಗಾಗಿ ಬೆಂಗಳೂರಿನ ಆಸ್ತಿಪಾಸ್ತಿ ಹೊರ ರಾಜ್ಯದವರ ಪಾಲಾಗುತ್ತಲೇ ಬಂದಿದೆ ಇದನ್ನು ತಡೆಗಟ್ಟಲು ಸರ್ಕಾರವೂ ಮುನ್ನೆಚ್ಚರಿಕೆ ವಹಿಸಬೇಕಿದೆ. 

ಎಲ್ಲ ವ್ಯವಸ್ಥೆಗಳೊಂದಿಗೆ ಮುನ್ನೆಚ್ಚರಿಕೆಯನ್ನೂ ನಾವುಗಳು ಕಲಿಯೋಣ. ಮಹಾನಗರಗಳಿಗೆ ಅಪವಾದಗಳು ಬೆಂಬಿಡದ ಭೂತಗಳಾಗದೆ ಮನುಷ್ಯತ್ವದ ನೆಲೆಕಾಣುವಂತಾಗಲಿ. 

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಲಿರುವ ಜ್ಯೋತಿ ಉದಯ್ ಆದಷ್ಟು ಬೇಕ ಗುಣಮುಖರಾಗಲೆಂದು ಆಶಿಸುತ್ತೇನೆ.

Sunday, September 29, 2013

ತನು ಕರಗದವರಲ್ಲಿ ...

ಚಿತ್ರ: ಅಂತರ್ಜಾಲ

"ಕಿತ್ತೂರು ಚೆನ್ನಮ್ಮ " ಚಿತ್ರದಲ್ಲಿ ಬರುವ ವಚನ - ಈ ವಚನ ಕೇಳಲು ಈ ಲಿಂಕ್ ಗೆ ಭೇಟಿ ನೀಡಿ

ತನು ಕರಗದವರಲ್ಲಿ ಮಜ್ಜನವನೊಲ್ಲೆಯಯ್ಯಾ ನೀನು
ಮನ ಕರಗದವರಲ್ಲಿ ಪುಷ್ಪವನೊಲ್ಲೆಯಯ್ಯಾ ನೀನು
ಹದುಳಿಗರಲ್ಲದವರಲ್ಲಿ ಗಂಧಾಕ್ಷತೆಯನೊಲ್ಲೆಯಯ್ಯಾ ನೀನು
ಅರಿವು ಕಣ್ದೆರೆಯದವರಲ್ಲಿ ಆರತಿಯನೊಲ್ಲೆಯಯ್ಯಾ ನೀನು
ಭಾವ ಶುದ್ಧವಿಲ್ಲದವರಲ್ಲಿ ಧೂಪವನೊಲ್ಲೆಯಯ್ಯಾ ನೀನು
ಪರಿಣಾಮಿಗಳಲ್ಲದವರಲ್ಲಿ ನೈವೇದ್ಯವನೊಲ್ಲೆಯಯ್ಯಾ ನೀನು
ತ್ರಿಕರಣ ಶುದ್ಧವಿಲ್ಲದವರಲಿ ತಾಂಬೂಲವನೊಲ್ಲೆಯಯ್ಯಾ ನೀನು
ಹೃದಯಕಮಲ ಅರಳದವರಲ್ಲಿ ಇರಲೊಲ್ಲೆಯಯ್ಯಾ ನೀನು
ಎನ್ನಲ್ಲಿ ಏನುಂಟೆಂದು ಕರಸ್ಥಲವನಿಂಬುಗೊಂಡೆ ಹೇಳಾ ಚೆನ್ನಮಲ್ಲಿಕಾರ್ಜುನಯ್ಯಾ..?
 -ಅಕ್ಕಮಹಾದೇವಿ
---------------
ಯಾವ ದೇಹ ನಮ್ರತೆಯಿಲ್ಲದೆ ಇರುವುದೋ..? ಅಂತಹವರಿಂದ ನೀನು ಅಭಿಷೇಕ ಮಾಡಿಸಿಕೊಳ್ಳಲು ಬಯಸುವುದಿಲ್ಲ.
ಕಠೋರತೆಯಿಂದಿರುವ ಮನಸ್ಸುಳ್ಳವರಿಂದ ನೀನೆಂದೂ ಪುಷ್ಪಗಳನ್ನೂ ಸ್ವೀಕರಿಸುವುದಿಲ್ಲ..!! 
ಯಾರು ಸಂತಸದಿಂದ ಸುಖಿ ನಾನು ಎಂದು ಭಾವಿಸುವುದಿಲ್ಲವೋ?? ಅವನಿಂದ ನೀನು ಅರಿಸಿನ ಚಂದನದಕ್ಕಿಯನೂ ಪಡೆಯಲಾರೆ...!!
ಯಾರು ತಿಳುವಳಿಕೆಯಿಲ್ಲದೆ ವರ್ತಿಸುತ್ತಾರೋ..? ಅಂತಹವರಿಂದ ಕರ್ಪೂರದ ಆರತಿಯನ್ನೂ ಸಹ ಮಾಡಿಸಿಕೊಳ್ಳುಲು ಒಪ್ಪದವ ನೀನು..!
ತನ್ನ ಅಂತರ್ಗತವನ್ನು ಶುದ್ಧವಾಗಿರಿಸಿಕೊಳ್ಳದವ ನೀಡುವ ಧೂಪವನ್ನು ನೀನು ನಿರಾಕರಿಸುವೆ...!!
ತನ್ನಲ್ಲಿರುವುದರಲ್ಲೇ ತೃಪ್ತಿಕಾಣದವನ ಕೈಯಲ್ಲಿ ನೈವೇದ್ಯವನ್ನೂ ಬೇಡ ಎನ್ನುವವನು ನೀನು.
ಕಾಯ,ವಾಚ,ಮನಸ್ಸು ಎಂಬ ಮೂರು ಅಂಗಗಳು  ಶುದ್ಧಿ ಇಲ್ಲದವನಲ್ಲಿ ಅಡಕೆ ವೀಳೆಯದೆಲೆಯನ್ನೆಂದೂ ತೆಗೆದುಕೊಳ್ಳುದವ ನೀನು.
ಕರುಣಾಮಯಿಗಳಲ್ಲದವರ ಹೃದಯದಲ್ಲಿ ನೀನೆಂದೂ ನೆಲೆಸಲು ಸಾಧ್ಯವಿಲ್ಲ.
ಇಂತಹ ಎಲ್ಲಾ ನಿರಾಕರಣೆಗಳಲ್ಲಿಯೂ ನನ್ನಲ್ಲಿ ಏನು ಕಂಡೆ, ನನ್ನಲ್ಲಿ ಏನಿದೆ ಎಂದು ನೀನು
ನನ್ನ ಕರಸ್ಥಲ, ನನ್ನ ಅಂಗೈಯಲ್ಲಿ ಬಂದು ನೆಲೆಸಿರುವೆ ದೇವಾ ಹೇಳು ಚೆನ್ನ ಮಲ್ಲಿಕಾರ್ಜುನ??.
---------
You never accept Ablution from those who are not in Humility.
You always refuse the offers of flowers from those who are not humble.
You always refuse the offering of sandalwood and saffron rice from those with rigid minds. 
You always refuse the offering of lamps or camphor from those whose eyes have not opened
by self-awareness.
You always refuse the offering of allspice (sandalwood) aroma from those emotionally who are not pure.
You always refuse the offering of food from those who refuse to change for better.
You never reside in those who don’t have a benevolent heart.
 How come you find in me that you choose to stay on my palm?
Oh Lord..!! Please express me..!!  Chenna Mallikarjuna .


ಸೂಚನೆ : ತಪ್ಪುಗಳಿದ್ದಲ್ಲಿ ತಿದ್ದಿ ಸರಿಪಡಿಸಿ.

Sunday, September 8, 2013

-ಹಬ್ಬದ ತವರು-


ಗೌರಿ ನೆಪದಲಿ ನಮಗೆ ಔತಣ
ತವರ ಉಸಿರು ಸೆಳೆವ
ಸಂಬಂಧ ಬೆಸುಗೆ ಬೆಸೆವ
ಅನುಬಂಧವೇ ಈ ಹಬ್ಬದ ಚಿತ್ರಣ 

ಗಂಡ ಮನೆ ಮಕ್ಕಳು
ಸಿರಿವಂತ ಬಾಂಧವ್ಯದಲೂ 
ತವರು ಬಡತನದಲಿದ್ದರೂ 
ಸೆಳೆತ ಮಾತ್ರ ರೋಮಾಂಚನ

ಹುಟ್ಟಿದ ಮನೆ ಜನನಿ ಮಾತೆ
ಅದು ಬಿಡಿಸದ ಕರುಳ ಕೊಂಡಿ
ಕುಂಕುಮಾರಿಶಿನ ಹಸಿರು ಬಳೆ
ಇದು ಭಾವ ತುಂಬಿದ ಬಾಗಿಣ

ಭಾಗ್ಯದ ಮಳೆ ತವರು ಮನೆ
ಅಂಬಲಿಯ ಒಲೆ ಉರಿಸಿ
ರಕ್ತ ಸಂಬಂಧಿಗಳ ಬೆರೆತು
ತುತ್ತು ಹಂಚಿಕೊಂಡ ಅರಮನೆ

 ಕಾಂತಿ ಕೊಟ್ಟ ತವರ ಮಡಿಲು
ಹರುಷ ತುಂಬುವ ಹಬ್ಬ ಹರಿದಿನ
ಪ್ರತಿಮನಕೆ ಬರಲಿ ಅನುದಿನ
ತಣಿಸುತಿರಲಿ ಹೆತ್ತಮ್ಮನ ಒಡಲು


ಎಲ್ಲರಿಗೂ ಗೌರೀ ಮತ್ತು ಗಣೇಶ ಹಬ್ಬದ ಶುಭಾಶಯಗಳು... 


Monday, September 2, 2013

"ಬಣ್ಣ" ತವರಿನ ಬಣ್ಣ -ಕಥೆ

"ಗೌರಿ ಹಬ್ಬದ ಕಳೆ ಮನೆ ಬಾಗಿಲಲ್ಲೇ ಕಾಣ್ತಾ ಇದೆ. ಅತ್ತಿಗೆ ಎಷ್ಟ್ ಚೆಂದಾಗಿ ರಂಗೋಲಿ ಬಿಡಿಸಿದ್ದಾಳೆ." ಏನೋ ಅಣ್ಣ ಅತ್ತಿಗೆ ಅಂತ ಇದ್ದಿದ್ದಕ್ಕೆ ನನ್ಗೂ ತವರಿನ ಋಣ ಇನ್ನೂ ಉಳಿದುಕೊಂಡಿದೆ.  "ಅಮ್ಮ ಇದ್ದಿದ್ರೇ ಇನ್ನೂ ಚೆನ್ನಾಗಿ ಇರೋದು" ಮನಸ್ಸು ಒದ್ದೆಯಾಗಿತ್ತು. ತಕ್ಷಣ ಆಟೋದವ ಮೇಡಮ್ ಮನೆ ಬಂದಿದೆ ನೋಡಿ.. ಎಂದು ಎಚ್ಚರಿಸಿದಾಗಲೇ ನಾನು ವಾಸ್ತವಕ್ಕೆ ಬಂದೆ. ಆಟೋದವನಿಗೆ ಕಾಸು ಕೊಟ್ಟು ಒಳಗೆ ಹೆಜ್ಜೆ ಇಟ್ಟೆ.!!!. 

ಓಹ್..!! ಬಂದ್ಯಾ ಕುಸುಮ, "ಸಾರಿ ಕಣೋ, ಕಾರ್ ಡ್ರೈವರ್ ಲೇಟ್ ಮಾಡಿಬಿಟ್ನಾ?, ಏನು ಕಥೆ ಎಲ್ಲಿ ಅಳಿಯಂದಿರು ಬರ್ಲಿಲ್ವಾ??, ಅಲ್ಲೇ ನಿಂತಿಕೋ" ಎಂದು ಕಳೆದ ವರ್ಷ ಅಮ್ಮ ಸಡಗರದಿಂದ ಆರತಿ ಹಿಡಿಕೊಂಡು ಬರಬರ ಬರ್ತಾ ಇದ್ಲು... ಆದರೆ ಈ ಸರಿ ನಾನು ಒಳಗೆ ಹೆಜ್ಜೆ ಇಟ್ಟರೂ ಏನೂ ಎತ್ತ ಎನ್ನುವವರು ಇಲ್ಲದೆ ಯಾಕೋ ಮನೆ ಮೌನವಾಗಿತ್ತು. ಎಲ್ಲಿ ಯಾರು ಕಾಣ್ತಾನೇ ಇಲ್ಲ ಎಂದುಕೊಂಡು, ಅಲ್ಲೇ ಸೋಫಾದ ಮೇಲೆ ನನ್ನ ಮಗನನ್ನ ಮಲಗಿಸಿದೆ. ಅತ್ತ ನೋಡಿದೆ, ಡ್ಯಾಡಿ ಪೇಪರ್ ಓದುತ್ತಾ ಅದರಲ್ಲೇ ಮಗ್ನರಾಗಿಬಿಟ್ಟಿದ್ದಾರೆ.

ಡ್ಯಾಡಿ ಏನು ಯಾರದ್ರು ಕಳ್ಳರು ಮನೆಗೆ ಬಂದು ಏನು ಬೇಕಾದರೂ ಸಲೀಸಾಗಿ ಹೊತ್ತುಕೊಂಡು ಹೋಗಬಹುದು ಅಲ್ವಾ? ಎಂದಾಗಲೇ ಡ್ಯಾಡಿ ನನ್ನತ್ತ ನೋಡಿ ನಕ್ಕು, ಹೋ ಬಂದ್ಯಾ ಬಾ ಕೂತ್ಕೋ, ಎಂದು ಮಾತಿನ ಶಾಸ್ತ್ರ ಮಾಡಿದರು. ಯಾಕೋ ಡ್ಯಾಡಿ ಅಮ್ಮನಿದ್ದಾಗ ಇದ್ದ ತರಹ ಇಲ್ಲ. ಮಗು ಬಗ್ಗೆನೂ ಕೇಳಲಿಲ್ಲ, ಎನೂ ವಿಚಾರಿಸಲೇ ಇಲ್ಲ ಕೂತ್ಕೋ ಅನ್ನೋ ಮಾತು ಬಿಟ್ಟು ಬೇರೇನು ಇಲ್ಲ... 

ಏನು ಕರ್ಮ ನಾನು ಬಂದು ೧೫ ನಿಮಿಷ ಆದರೂ ಯಾರೂ ಕಾಣುತ್ತಿಲ್ಲ, ಡ್ಯಾಡಿ ಎಲ್ಲಿ ಅಣ್ಣ, ಅತ್ತಿಗೆ, ಮಕ್ಕಳು ಯಾರು ಕಾಣ್ತಾನೇ ಇಲ್ಲ..??

ಇಲ್ಲಮ್ಮ, ಅವರು ಎಲ್ಲಾ ಊರಿಗೆ ಹೋಗಿದ್ದಾರೆ.  ಗೌರಿ ಹಬ್ಬ ಅಲ್ವಾ ನಿನ್ನ ಅತ್ತಿಗೆನೂ ಅವಳ ತವರು ಮನೆಗೆ ಹೋದಳು??

ಓಹ್ ಹೌದಾ ಡ್ಯಾಡಿ, ಮತ್ತೆ ಅಣ್ಣ ಪೋನ್ ಮಾಡಿದಾಗ ಹೇಳಲೇ ಇಲ್ಲ. ನನ್ನ ಹಬ್ಬಕ್ಕೆ ಕರೆದ ಅಂತಾ ಬಂದೆ.

ಹೌದಾ, ಕುಸುಮ ನನಗೆ ಗೊತ್ತಿಲ್ಲ ಅವೆಲ್ಲಾ, ಬಂದಿದ್ದೀಯಲ್ಲ ಒಳ್ಳೆದಾಯ್ತು ಬಿಡು ಹೋಗಿ ಅಡುಗೆ ಏನಾದ್ರು ಇದೆಯಾ ನೋಡು ಊಟ ಮಾಡೋಣ ಒಟ್ಟಿಗೆ. ಡ್ಯಾಡಿ ಹೇಳಿದ ಕೂಡಲೇ ಕೈಕಾಲು ತೊಳೆದು ದೇವರ ಕೋಣೆಗೆ ಹೋದೆ ಪೂಜೆ ಮಾಡಿದ್ದರು . ಇನ್ನೂ ದೀಪ ಉರಿಯುತ್ತಲಿತ್ತು. ಅಮ್ಮನ ನಗುವ ಪೋಟೋಕ್ಕೆ ಮಲ್ಲಿಗೆ ಹಾರ ಚೆನ್ನಾಗಿ ಕಾಣ್ತಾ ಇತ್ತು. ಅಮ್ಮ ನೀನು ಇರಬೇಕಿತ್ತಮ್ಮ ಯಾಕೋ ನನ್ನ ಕತ್ತು ಹಿಡಿದು ದಬ್ಬಿದಂಗೆ ಆಗ್ತಾ ಇದೆ. ನನ್ನ ಅಣ್ಣ ಬಾ ಅಂತ ಕರೆದಾ, ನಾನು ಕೇಳಿದ್ದೇ ಕೂಡ, ಅತ್ತಿಗೆ ಊರಿಗೆ ಹೋಗೋಲ್ವಾ ಅಂದಿದ್ದಕ್ಕೆ "ಇಲ್ಲ ಹೋಗೋಲ್ಲಾ ಮಕ್ಕಳು ಎಲ್ಲರೂ ಮನೆನಲ್ಲೇ ಇರ್ತಾರೆ ಬಾ" ಎಂದು ಹೇಳಿದ್ದ...!! ಈಗ ನೋಡಿದ್ರೇ ನನಗೆ ಯಾಕೋ ಮುಜುಗರ ಅನ್ನುಸ್ತಾ ಇದೆ ಅಮ್ಮಾ... ಎಂದು, ಒಂದೆರಡು ಕಣ್ಣ ಹನಿ ಹಾಗಿದೆ. ತಕ್ಷಣವೇ ಅಮ್ಮನ ಪೋಟೋದಿಂದ ಬಲಗಡೆ ಹೂ ಬಿತ್ತು.... 

ಅಮ್ಮನಿಗೂ ಬೇಸರವಾಗಿತ್ತೇನೋ ಪಾಪ, ಈ ಹೂ ಮುಡಿದು ಕೋ ಎಂದು ಕೊಟ್ಟಳೇನೋ ಎಂದೆನಿಸಿ ಆ ಹೂವನ್ನು ನನ್ನ ತಲೆಗೆ ಮುಡಿದೆ. ನಾನು ತಂದಿದ್ದ ಮಲ್ಲಿಗೆ ದಿಂಡಿನ ಹೂವನ್ನು ಅಮ್ಮನ ಪೋಟೋಗೆ ಹಾಕಿದೆ. ಹಣ್ಣುಕಾಯಿ ಸಿಹಿತಿಂಡಿ ಎಲ್ಲಾ ಅಲ್ಲೇ ದೇವರ ಮುಂದಿಟ್ಟು ಕೈ ಮುಗಿದೆ.
----
ಅಡುಗೆ ಕೋಣೆಯೊಳಗೆ ಘಮಘಮಿಸೋ "ಹೋಳಿಗೆ ಹೂರಣ, ಮೈದಾ ಹಿಟ್ಟಿನ 'ಕನ್ನಕ' ಕಲೆಸಿದ್ದು ಹಾಗೇ ಇದೆ. ಸಾರು ತಯಾರಾಗಿದೆ ಆದರೆ ಅನ್ನ ಇರಲಿಲ್ಲ ಮತ್ತು ಹೋಳಿಗೆ ತಟ್ಟಿದ್ದು ಕಾಣುತ್ತಲೇ ಇಲ್ಲ ಸುತ್ತಲೂ ಕಣ್ಣಾಡಿಸಿ. ಅಕ್ಕಿ ಹುಡುಕಿ ಅನ್ನಕ್ಕೆ ತಯಾರಿಟ್ಟೆ. ಹೋಳಿಗೆ ಸ್ವಲ್ಪ ಅಪ್ಪನಿಗೂ, ನನಗೂ ಬೇಕಾಗುವಷ್ಟು ತಟ್ಟಿ ಬಿಸಿ ಬಿಸಿ ಊಟಕ್ಕೆ ತಯಾರಾಗುವ ಮುನ್ನ ಅಮ್ಮನಿಗೆ ಸ್ವಲ್ಪ ಎಡೆ ಇಟ್ಟು ಡ್ಯಾಡಿಯನ್ನು ಊಟಕ್ಕೆ ಕರೆದೆ. 

"ಮಲಗಿದ್ದ ಸುಮುಖನನ್ನು ಎಬ್ಬಿಸಲಿಲ್ಲ..!!" ಮೊದಲು ಊಟ ಮಾಡಿಬಿಡುವ ಎಂದೆನಿಸಿ ಇಬ್ಬರೂ ಊಟಕ್ಕೆ ಕುಳಿತುಕೊಂಡೆವು. ಡ್ಯಾಡಿ ಮಾತೇ ಕಡಿಮೆ, ಮೊದಲೇ ಮೌನಿ ಈಗ ಇನ್ನೂ ಕೇಳುವ ಹಾಗಿಲ್ಲ... ನಾನೇ ಮಾತಿಗೆಳೆದೆ. 

ಡ್ಯಾಡಿ ಬೆಳ್ಳಿಗ್ಗೆ ತಿಂಡಿ ಏನು ತಿಂದ್ರಿ..?

ಉಪ್ಪಿಟ್ಟು ತಿಂದೆ ಅಮ್ಮಿ (ಅಪ್ಪಾ ನನ್ನ ಪ್ರೀತಿಯಿಂದ ಹಾಗೆ ಕರೆಯೋದು), ಎಲ್ಲಿ ನಿಮ್ಮ ಯಜಮಾನರು ಬರಲೇ ಇಲ್ಲಾ...?
ಸದ್ಯ ನನ್ನ ಗಂಡ ಬರಲಿಲ್ಲ. ಮೊನ್ನೆ ಅಣ್ಣ ಕರೆದಾಗ ಅವರು ಹೇಳಿದ್ರು. "ಅಮ್ಮಾ, ಇಲ್ಲ ಏನಿಲ್ಲ ಅವರು ಏನೋ ಕಾಟಚಾರಕ್ಕೆ ಕರೆದಿರ್ತಾರೆ ನೀನು ಕುಣ್ ಕೊಂಡು ಹೋಗಬೇಡ. ಅಮ್ಮನಿಗೆ ಹೇಳ್ತೀನಿ ಇಲ್ಲೇ ಅಡುಗೆ ಮಾಡಿ ಊಟಮಾಡಿದ್ರೇ ಆಯ್ತು" ಎಂದು ಮೂಗು ಮುರುದು ಕೊಂಕಾಗಿ ಮಾತಾಡಿದ್ದರು.  

ಅಮ್ಮಿ... ಎಲ್ಲಿದ್ದೀಯಾ..!! ಯಾಕೆ ಮಾತಿಲ್ಲ ...ಎಂದಾಗಲೇ ಬೆಚ್ಚಿ ಮಾತಿಗಿಳಿದೆ.

ಇಲ್ಲ ಡ್ಯಾಡಿ ಅವರಿಗೆ ರಜೆ ಇಲ್ಲ ಅದಕ್ಕೆ ಬಂದಿಲ್ಲಾ.. ನಾವಿಬ್ಬರು ಬಂದೆವು ಅಷ್ಟೇ.. ಮೌನಕ್ಕೆ ಶರಣಾಗಿ ಕೈ ಮತ್ತು ಬಾಯಿಗೆ ಕೆಲಸ ಕೊಟ್ಟೆ. 

ಊಟ ಮುಗಿಯುವ ಹೊತ್ತಿಗೆ ಸುಮುಖ ಎದ್ದು "ಅಮ್ಮಾ ಮಾವ ಎಲ್ಲಿ" ಎಂದು ಕೇಳಲು ಶುರುವಿಟ್ಟ. ಡ್ಯಾಡಿ ಅವನನ್ನು ಸಮಾಧಾನ ಮಾಡುತ್ತ ಮಾಮ ಎಲ್ಲೋ ಹೋಗಿದ್ದಾನೆ. ನೀನು ಮಲಗಿದ್ದಲ್ಲಾ ಅದಕ್ಕೆ ಕಾದು ಸುಸ್ತಾಗಿ ಎಲ್ಲೋ ಆಚೆ ಹೋದ ಬರುತ್ತಾನೇ ಬಿಡು ಸುಮು ಎಂದರು...

ಅಮ್ಮೀ... ಸ್ವಲ್ಪ ಮಗುಗೆ ಊಟ ತೆಗೆದುಕೊಂಡು ಬಾ, ಎಂದು ಹೇಳಿ ಮಗುವನ್ನು ಆಚೆ ಓಡಾಡಿಸಲು ಹೊರಟರು. ನಾನು ಅವರನ್ನು ಹಿಂಬಾಲಿಸಿ ಆಚೆ ಮಗುವಿಗೆ ಊಟ ಮಾಡಿಸಿ ಮನೆ ಒಳಗೆ ಹೆಜ್ಜೆಯಿಡುವಾಗ..!!?? 

ಮನೆ ಬಿಕೋ ಎನ್ನುತ್ತಿದೆ, ಜೊತೆಗೆ ನನ್ನ ಮನಸ್ಸು ಕೂಡ, "ಅಮ್ಮನಿಲ್ಲದ ಮನೆ ಮನೆಯಲ್ಲ ಬಿಡು..." ಕಳೆದ ವರ್ಷ ಇದೇ ಸಮಯದಲ್ಲಿ ಅತ್ತಿಗೆ ಊರಿಗೆ ಹೋಗಿದ್ದಳು, ನಾನು ಬಂದಿದ್ದೆ ಮನೆಯೆಲ್ಲಾ ಗಲಗಲಾ ಅನ್ನುತ್ತಿತ್ತು. "ಅಮ್ಮನದೋ ದೊಡ್ಡ ಕೈ ಊರಲ್ಲಿ ಇರೋಬರೋರಿಗೆಲ್ಲ ಕರೆದು ಊಟಕ್ಕೆ ಹಾಕುವುದೇ ಕೆಲಸ". ಏ ಸುಮ್ಮನಿರು ಅಮ್ಮಿ, ನಮ್ಮ ಕೈನಲ್ಲಿ ನಡೆಯುವಾಗ ನಾಲ್ಕು ಜನಕ್ಕೆ ಅನ್ನ ಹಾಕಬೇಕು ಎಂದು ಹೇಳುತ್ತಿದ್ದ ಅಮ್ಮ ಇಂದು ಇಲ್ಲ. 

ಗೌರಿ ಹಬ್ಬ ಅಳಬಾರದು. ಅಮ್ಮನ ಮನೆಗೆ ಬಂದು "ಅತ್ತು-ಕರೆದು ಅಮ್ಮನ ಮನೆ ಏಳಿಗೆ ಆಗದ ಹಾಗೆ ಮಾಡ್ತೀಯಾ" ಎಂದು ಯಾರೋ ಹಿಂದಿನಿಂದ ಹೇಳಿದಂತಾಯ್ತು...... ಹಿಂದಿರುಗಿ ನೋಡಿದೆ ಯಾರೂ ಇಲ್ಲ.

 ಓಹ್..!! ಹೋದ ವರ್ಷ ಅಮ್ಮ ನನಗೆ ಹೇಳಿದ್ಲು, "ನಾನು ಇಲ್ಲದಿದ್ದರೂ ನೀನು ಬಂದು ಹೋಗಬೇಕು, ಇದು ನೀನು ಹುಟ್ಟಿ ಬೆಳೆದ ಮನೆ, ಅತ್ತಿಗೆ ಅನ್ನಿಸಿಕೊಂಡವಳು ಮಧ್ಯದಲ್ಲಿ ಬಂದವಳು. ನಿನಗೂ ಸ್ವಾತಂತ್ರವಿದೆ ಯಾರೂ ಇಲ್ಲದಿದ್ದರೇನು ಸೀದ ಅಡಿಗೆ ಕೋಣೆಗೆ ಹೋಗು ನಿನಗೆ ಬೇಕಾದ್ದು ತಗೋ, ಕೈಲಾದ ಕೆಲಸ ಮಾಡು, ಇದ್ದದ್ದು ಉಂಡುಟ್ಟು, ಬಂದು-ಹೋಗಿ ಮಾಡು, ಅತ್ತುಕರೆದು ಹೋಗಬೇಡ" ಎಂದಿದ್ದು, ಈಗ ಹೇಳಿದಂತಿದೆ. 

ಅಡುಗೆ ಕೋಣೆ ಎಲ್ಲಾ ಸ್ವಚ್ಚ ಮಾಡಿದೆ, ಡ್ಯಾಡಿ ಸುಮುಖನನ್ನು ಕೈಗೆ ತಂದುಕೊಟ್ಟು ಹಾಸಿಗೆ ಸೇರಿದರು... ಹತ್ತೆ ನಿಮಿಷಕ್ಕೆ ಗೊರಕೆ ಹೊಡಿತಾ ಇದ್ದಾರೆ. ನನಗೋ ಬೇಸರ, ಇರು ಆಚೆ ಮಗನನ್ನು ಆಟ ಆಡಿಸೋಣ ಎಂದು ಆಚೆ ಕುಳಿತೆ ಬಾಗಿಲು ಭದ್ರ ಮಾಡಿ. 

ಸಪ್ಪಗೆ ಕುಳಿತಿದ್ದ ನನ್ನನ್ನು ಪಕ್ಕದ ಮನೆ ಸುಮಿ ಆಂಟಿ ಕರೆದರು. ಏಹ್!! ಅಮ್ಮಿ ಯಾವಾಗ ಬಂದೋ, ಬಾ ಬಾ ನಿನ್ನ ಸ್ನೇಹಿತೆಯರು ಬಂದಿದ್ದಾರೆ ಎಂದು ಮನೆಗೆ ಎಳೆದುಕೊಂಡು ಹೋದರು.

ಆಹಾ..!! ಆ ಮನೆಯ ಸಂತೋಷ ಹೇಳತೀರದು. ಸೊಸೆ ಮಗ, ಹೆಣ್ಣುಮಕ್ಕಳು ಎಲ್ಲರೂ ತುಂಬಿ ತುಳುಕುತ್ತಿತ್ತು. 
ಏಕೆ ಸೊಸೆ ಊರಿಗೆ ಹೋಗಿಲ್ವಾ ಎಂದು ಕೇಳಿದ್ರೇ,  ಅವಳು ಹೋಗಿಲ್ಲ ಹೆಣ್ಣು ಮಕ್ಕಳು ಇಲ್ಲಿ ಬರುತ್ತಾರೆ ನಾನು ಹೇಗೆ ಹೋಗಲಿ, ಹಬ್ಬ ಮುಗಿಸಿ ಶನಿವಾರ, ಭಾನುವಾರ ಹೋಗ್ತಾಳಂತೆ ಎಂದರು. 

ನನಗೆ ಒಳಗೊಳಗೆ ಸಂಕಟವಿದ್ದರೂ ತೋರಿಸಿಕೊಳ್ಳಲಿಲ್ಲ. ಆಂಟಿ ಮಾತ್ರ ಅಂದು ಹೇಗೆ ನನ್ನನ್ನೂ ಅವರ ಮಗಳಂತೆ ನೋಡುತ್ತಿದ್ದರೋ ಇಂದು ಸಹ ಅದೇ ಭಾವನೇ. ಬೇಡವೆಂದರೂ ಬಿಸಿ ಬಿಸಿ ಹೋಳಿಗೆ ಮಾಡಿಕೊಟ್ಟರು. ಹೆಣ್ಣು ಮಕ್ಕಳು ಯಾಕೆ ಬರ್ತೀರಾ ಹಾಯಾಗಿ ಒಂದೆರಡು ದಿನ ಇರಲು ಅಲ್ಲವೇ..? ಇಂತಹದರಲ್ಲಿ ನಿನ್ನ ಅತ್ತಿಗೆ ಊರಿಗೆ ಹೋಗಿದ್ದಾಳೆ ನೋಡು, ಬೆಳಿಗ್ಗೆ ತಾನೇ ಕೇಳಿದೆ ನೀನು ಬರ್ತಿದ್ದೀಯ ಅಂತಾ... ಅದಕ್ಕೆ ಅವಳು... "ಕರೆದ್ವಿ ಕುಸುಮನೇ ಬರೋಲ್ಲಾ" ಎಂದಳು ಅದಕ್ಕೆ ನಾನು ಊರಿಗೆ ಹೋಗ್ತೀನಿ ಅಂದಳು. ನೀನು ನೋಡಿದರೆ ಬಂದಿದ್ದೀಯಾ..!!?

ಆಂಟಿ, ಅವರಿಗೂ ತವರು ಮನೆ ಆಸೆ ಅಲ್ವಾ..? ಹೋಗಿಬರಲಿ ಎಂದು, ನಾನು ಬರೋಲ್ಲಾ ಎಂದು ಹೇಳಿದ್ದೆ. ನನ್ನ ಮೇಲೆ ನಾನೇ ಸುಳ್ಳು ಹೇಳುತ್ತಿದ್ದು ಆಂಟಿಗೆ ಅರಿವಿಗೆ ಬಂತು. 

ಏನು ತವರು ಮನೆ ಅವಳು ಕಳೆದವಾರ ಎಲ್ಲಾ ಅಲ್ಲೇ ಇದ್ದಳು, ಮಕ್ಕಳು ರಜೆ ಬಂದರೇ ಅಲ್ಲೇ ಇರ್ತಾಳೆ ನೀನಂತು ಕೆಲಸಕ್ಕೆ ಹೋಗುವವಳು ಏನೋ ಎಂದೋ ಬಂದು ಹೋದರೆ ಅವಳಿಗೇನು ತೊಂದರೆ. ಅವಳಿಗೂ ಅಣ್ಣನೋ ತಮ್ಮನೋ ಇರಬೇಕಿತ್ತು ಗೊತ್ತಾಗೋದು ೫ ಜನ ಹೆಣ್ಣು ಮಕ್ಕಳ ಜೊತೆ ಹುಟ್ಟಿ ಅವರದೇ ಪ್ರಪಂಚ. ನಿನ್ನ ನೋವು ಅವಳಿಗೇನು ಗೊತ್ತಾಗುತ್ತೆ. ಬರಿ ನಾಟಕದ ಮಾತುಗಳೇ ಅವಳದು. ನೀನು ಇಷ್ಟು ವಿದ್ಯಾವಂತೆ ದೇಶಗಳನ್ನು ಸುತ್ತಿ ಬಂದಿದ್ದೀಯಾ ಸ್ವಲ್ಪವೂ ಅಹಂಕಾರ ಇಲ್ಲ. ನಿನ್ನ ನಾದಿನಿಯರನ್ನು ದೀಪಾವಳಿಗೆ ಕರೆದು ಹೇಗೆ ಉಪಚಾರ ಮಾಡ್ತೀಯಾ ಆ ದೇವರು ನಿನ್ಗೆ ಯಾಕೆ ಹಿಂಗೆ ಮಾಡಿದ ಎಂದು ದೇವರನ್ನು ಶಪಿಸುತ್ತಿದ್ದವರನ್ನು ನಾನೇ ಮೊಟುಕುಗೊಳಿಸಿದೆ ಇನ್ನೊಂದು ಹೋಳಿಗೆ ಕೇಳುವ ಮೂಲಕ.

ಇಷ್ಟವಾಯ್ತಾ ಒಬ್ಬಟ್ಟು ತಿನ್ನು ಮಗಳೇ... ಎಂದು ಉಪಚರಿಸಿ... ನಂತರ ಗೌರಿ ಪೂಜೆ ಮಾಡಿಸಿ ನನಗೆ ಅರಿಶಿನ ಕುಂಕುಮ ಬಾಗಿನ ಕೊಟ್ಟು ಸೀರೆ, ಹಣ ಕೊಟ್ಟರು. ನನ್ನ ಕಣ್ಣುಗಳು ತಡೆಯದೆ ಬಾಗಿನದ ಮೇಲೆ ತೊಟ್ಟುಗಳನ್ನು ಚುಮುಕಿಸಿದವು. ಎಲ್ಲರು ನನ್ನನ್ನೇ ಸಮಾಧಾನ ಮಾಡಿ "ನೋಡು ಇನ್ನು ಮೇಲೆ ನಮ್ಮ ಮನೆ ಮಗಳು ನೀನು ಅವರಂತೆ ನೀನು ಬಂದು ಹೋಗಬೇಕು". ನಿನ್ನ ತಾಯಿ ನಾನೇ ಎಂದುಕೋ’, ನಿನ್ನಮ್ಮ ಬದುಕಿರುವಾಗ ಎಷ್ಟು ಜನರನ್ನು ಸಾಕಿ ಸಲಹಿದ್ದಾಳೆ. ನೀನು ಒಂದು ದಿನ ಬಂದು ಹೋದರೆ ನೋಡಿಕೊಳ್ಳುವವರಿಲ್ಲ. ನಿನ್ನ ಅತ್ತಿಗೆಯದು ಯಾವಾಗಲು ಕೋಣೆಯಲಿದ್ದು ಅದೇ ಬುದ್ದಿ. "ಮಕ್ಕಳಿಗೆ ಗಟ್ಟಿ ಮೊಸರನ್ನು ಕೊಡಲು ಅಕ್ಕಿಡಬ್ಬದಲ್ಲೋ ಪಬ್ಬದಲ್ಲೋ ಮುಚ್ಚಿಟ್ಟು ಆ ವಯಸ್ಸಾದ ಅಜ್ಜಿತಾತನಿಗೆ ನೀರು ಸುರಿಯುತ್ತಿದ್ದವಳು" ನಾನೇ ಕಣ್ಣಾರೇ ನೋಡಿದ್ದೀನಿ. ಮುಚ್ಚುಮರೆಯ ಜೀವನ ಅವಳದು. ನೀನು ತಲೆ ಕೆಡಿಸಿಕೊಳ್ಳಬೇಡ ಅವಳಿಗೂ ಇಬ್ಬರು ಹೆಣ್ಣು ಮಕ್ಕಳು ಇದ್ದಾರಲ್ಲ ಗೊತ್ತಾಗುತ್ತದೆ ಮುಂದೆ. 

ಆಂಟಿಗೆ ನನ್ನ ಮೇಲಿನ ಪ್ರೀತಿಗೆ ಇಷ್ಟೇಲ್ಲಾ ಮಾತು, ಇರಲಿ ಆಂಟಿ ಅವರ ಜೀವನ ಅವರದು ನಾನು ಹುಟ್ಟಿದಿಂದ ಅವರೇ ಇದ್ದರೇ. ನಾನು ಹುಟ್ಟಿದ ಮನೆ ನಾನು ಬಂದು ಹೋಗ್ತೀನಿ ಬೇರೆಯವರ ಅಪ್ಪಣೆ, ಉಪಚಾರ ನನಗೇಕೆ. ನಾನು ಇಂಜಿನಿಯರ್ ಹುಡುಗಿಯಾಗಿ ಅವರಂತೆ ಮಾತನಾಡಲಾಗದು. ವಾಸ್ತವ ಬದುಕನ್ನು ಅರ್ಥೈಸಿಕೊಳ್ಳಬೇಕು. ಎಲ್ಲರಿಗೂ ಅವರದೇ ಆಸೆ-ಆಕಾಂಕ್ಷೆಗಳಿರುತ್ತವೆ. ಅವರ ತವರಿಗೆ ಅವರು ಹೋಗಲು ನಾವು ಯಾಕೆ ಅಡ್ಡವಾಗಬೇಕು. ಎಂದು ನನ್ನನ್ನೇ ನಾನು ಸಮಾಧಾನಿಸಿಕೊಂಡು ಮಗನನ್ನು ಕರೆದುಕೊಂಡು ಬಂದೆ. 
---
ಅಪ್ಪಾ ಇನ್ನೂ ಮಲಗಿದ್ದಾರೆ ಆಗಲೇ ಸಂಜೆ ೬ ಗಂಟೆ, ಅಣ್ಣನೂ ಕರೆಮಾಡಲಿಲ್ಲ, ಅತ್ತಿಗೆಯೂ ಕರೆಮಾಡಲಿಲ್ಲ ನಾನು ಬಂದಿದ್ದಕ್ಕೆ ಸರಿಹೋಯ್ತು ಇಲ್ಲದಿದ್ದರೆ ಡ್ಯಾಡಿ ಏನು ಮಾಡ್ಕೋತಾ ಇದ್ರು ಊಟಕ್ಕೆ. ಎಂದೂ ಅಪ್ಪ ಅಡುಗೆ ಮನೆಗೆ ಬಂದವರಲ್ಲಾ... ದೇವರೆ ಅಪ್ಪನನ್ನು ಅಮ್ಮನೊಟ್ಟಿಗೆ ಬೇಗ ಕರೆದುಕೊಂಡುಬಿಡಪ್ಪಾ ಎಂದು ಬೇಡಿಕೊಂಡೆ. 

ದೇವರ ದೀಪ ಹಚ್ಚುವ ಸಮಯ ಡ್ಯಾಡಿಯನ್ನು ಎಬ್ಬಿಸಿ ಕಾಫಿ ಮಾಡಿಕೊಟ್ಟು, ದೇವರ ಪೂಜೆ ಮಾಡಿದೆ. ಸುಮುಖನದು ಅದೇ ಗಲಾಟೆ ಮಾಮ ಎಲ್ಲಿ ಎಂದು. ಅವನಿಗೆ ಕರೆ ಮಾಡಿದ್ರೆ ನಾಟ್ ರೀಚಬಲ್ ಅಂತಾ ಬರ್ತಾ ಇದೇ ಅತ್ತಿಗೆ ಊರೋ ಒಂದು ರೀತಿ ಕಾಡು ಇದ್ದಹಾಗೆ ಅಲ್ಲಿ ಸುತ್ತಮುತ್ತ ಮನೆಗಳೇ ಇಲ್ಲ ದೂರದಲ್ಲೆಲ್ಲೋ ಒಂದೊಂದೆ ಮನೆಗಳು ಇರುತ್ತವೆ... ಸಿಗ್ನಲ್ ಸಿಗೋದು ಕಷ್ಟ.

ಸರಿ ಸುಮುಖ ನಾಳೆ ಮಾಮ ಬರ್ತಾನೆ ಎಂದೇಳಿ ಅವನನ್ನು ಪಕ್ಕದ ಮನೆ ಮಕ್ಕಳ ಜೊತೆ ಆಟಕ್ಕೆ ಬಿಟ್ಟೆ. ಡ್ಯಾಡಿಯ ಹತ್ತಿರ ಮಾತನಾಡಬೇಕಾಗಿತ್ತು.

ಡ್ಯಾಡಿ ಯಾಕಿಷ್ಟು ಮೌನ, ನಾನು ಬರ್ತೀನಿ ಅಂದ್ರು ಊರಿಗೆ ಹೊರಟಿದ್ದಾರೆ ಅಣ್ಣ, ಅತ್ತಿಗೆ ಇದು ಒಂದು ರೀತಿ ಅವಮಾನ ಮಾಡಿದ ಹಾಗೆ ಅಲ್ವಾ ನನಗೆ?, ನನ್ನ ಕರೆಯದಿದ್ದರೆ ಬರುತ್ತಲೇ ಇರಲಿಲ್ಲ... ಕರೆದು ಮಂಗಳಾರತಿ ಮಾಡಿಸಿದ್ದಂತಾಯ್ತು... ಎಂದು ಅಳು ಮುಂದುಮಾಡಿದೆ.

ಡ್ಯಾಡಿಗೆ ಬೇಸರವಾಯ್ತೋ ಬಿಡ್ತೋ ಗೊತ್ತಿಲ್ಲ, ಇಂತಹವು ಜೀವನದಲ್ಲಿ ಬೇಜಾನ್ ಬರುತ್ತೆ ಅಮ್ಮಿ, ನೀನು ಎದುರಿಸಿ ನಿಲ್ಲಬೇಕು, ನೀನು ಮೊದಲೇ ಇಂಜಿನಿಯರ್ ಇಂತಹವು ಹೇಳಬೇಕ??

ಇಂಜಿನಿಯರ್ ಆದರೇನು ಮನಸ್ಸು ಇರೋಲ್ವಾ ನಮಗೆ? ಮೌನವೇ ಎಲ್ಲಕ್ಕೂ ಉತ್ತರವೆಂದು ಸುಮ್ಮನಾದೆ.

ರಾತ್ರಿ ಕಳೆದು ಬೆಳಗಾಯಿತು ಗಣೇಶನ ಹಬ್ಬ ಬಂದಿದೆ. ಅಣ್ಣ ಬಂದರು ಒಂದೇ, ಬರದಿದ್ದರೂ ಒಂದೇ ಎಂದೆನಿಸಿತು. ಸ್ನಾನ ಪೂಜೆ ಮುಗಿಸಿ ಸಿಹಿ ಕಡುಬು ಮಾಡಿ ನಾವು ಮೂವರು ತಿಂದೆವು. ನಾನು ನೆನ್ನೆಯೇ ಬೇಸರ ಮಾಡಿಕೊಂಡು ಹೊರಟು ಹೋಗಿದ್ದರೆ ಡ್ಯಾಡಿಗೆ ಇಂದಿನ ಊಟದ ವ್ಯವಸ್ಥೆ ಏನಾಗಬೇಕಿತ್ತು. ಮೊದಲೇ ಒಂದು ಮೂಲೆಯಲ್ಲಿ ಕೂತರೆ ಮುಗಿಯಿತು, ಎದ್ದು ತಿನ್ನುವ ಆಸಾಮಿಯೂ ಅಲ್ಲ.

ಮಧ್ಯಾಹ್ನದ ಊಟ ಮುಗಿಸಿ ಡ್ಯಾಡಿಗೆ ಹೇಳಿ ಹೊರಡೋಣ ಎಂದುಕೊಂಡೇ ಆದರೆ ಯಾಕೋ ಮನಸ್ಸು ಬೇಡವೆನಿಸಿತು. ಗಂಡನ ಮನೆಗೆ ಹೊರಟು ಹೋದರೆ "ಇಷ್ಟು ಬೇಗ ಬಿಟ್ಟುಬಿಟ್ಟಿತ ಅಪ್ಪನ ಮನೆ" ಎಂದಾರು, ಅಮ್ಮ ಇಲ್ಲ ಅಂತಾ ಆಗಲೇ ಅವರು ೨ನೇ  ದಿನಕ್ಕೆ ಮುಗಿಸಿ ಕಳಿಸಿದ್ರಾ ಎಂದು ಚುಚ್ಚು ಮಾತು ಆಡಿಯಾರು ಎಂದೆನಿಸಿತು. ಇಂದು ರಾತ್ರಿ ಕಳೆದರೆ ನಾಳೆ ಆಫೀಸ್ ಇರುತ್ತಲ್ಲಾ ಕಾರಣ ಕೊಡಬಹುದೆಂದು ಸುಮ್ಮನಾದೆ ಅಂದು ರಾತ್ರಿಯೂ ಬಾರದ ಅಣ್ಣನ ಬಗ್ಗೆ ಯಾವ ಭಾವವೂ ತುಂಬಿರಲಿಲ್ಲ.

ಬಂದ ಕೆಲಸ ಮುಗಿದಮೇಲೆ ನಮ್ಮದೇನು ನಮ್ಮ ನಮ್ಮ ಊರಿಗೆ ಹೊರಡಲೇ ಬೇಕಲ್ಲವೇ.'ಕೊಟ್ಟ ಹೆಣ್ಣು ಕುಲದಿಂದ ಹೊರಗೆ'. ನಾವು ಹುಟ್ಟಿ ಬೆಳೆದ ಮನೆ ನಮಗೊಂದು ದಿನ ಅನಾಥ ಪ್ರಜ್ಞೆ ಮೂಡಿಸುತ್ತದೆ ಎಂದರೆ ಇದೇನಾ..? "ಹೆಣ್ಣೇ ಏಕೆ ಬೇರೆ ಮನೆಗೆ ಹೋಗಬೇಕು, ಗಂಡು ನಾವಿರುವೆಡೆ ಇರಲು ಆಗದೆ. ನಮ್ಮ ವೇದನೆ ಅವನಿಗೂ ಗೊತ್ತಾಗಲಿ" ಏನೋ ಹುಚ್ಚು ಮನಸ್ಸು ತಡೆಯಲಾರದ ವೇದನೆ. ಅಮ್ಮ ತುಂಬಾ ನೆನಪಾಗ್ತಾಳೆ. 

ಪ್ರತಿ ಗೌರಿ ಹಬ್ಬ ಎಲ್ಲಾ ಮುಗಿಸಿ ಹೊರಡುವ ಮುನ್ನ ಅಮ್ಮ, ನಿನಗೆ ಮಲ್ಲಿಗೆ ಹೂವೆಂದರೆ ತುಂಬಾ ಇಷ್ಟ, ನಿನ್ನ ಉದ್ದನೆ ಕೂದಲಿಗೆ ೩ ಮೊಳ ಹೂ ಮುಡಿದುಕೋ ಚೆನ್ನಾಗಿ ಕಾಣುತ್ತೆ, ಅಮ್ಮಿ..!! ಅದೇನೋ ಆಫೀಸ್ ಗೆ ಫ್ಯಾಂಟ್ ಶರ್ಟ್ ಹಾಕ್ತೀಯ ಅದಕ್ಕೇನೋ ಪುಟ್ಟ ಬೊಟ್ಟು ಇಡುತ್ತಿದ್ದೆ. ಈಗೇನು ಸೀರೆ ಉಟ್ಟುಕೊಂಡಿದ್ದೀಯಾ, ಸ್ವಲ್ಪ ದೊಡ್ಡದಾದ ಬೊಟ್ಟು ಇಡಬಾರದ? ಹೋಗು ಅಲ್ಲೇ ನನ್ನ ಸ್ಟಿಕ್ಕರ್ ಇದೆ ಇಟ್ಟು ಕೋ, ಹಾ ಆಮೇಲೆ ತಗೋ ಈ ಸೀರೆ ನಿನಗೋಸ್ಕರ ಗೌರಿ ಹಬ್ಬಕ್ಕೆ ಅಂತಾ ತಂದಿದ್ದು, ರೇಷ್ಮೇ ಸೀರೆ ಹೊಸದಾಗಿ ಬಂದಿರೋ ಟೆಂಪಲ್ ಬಾರ್ಡರ್ ಕಣೆ... ಇದೇ ಸೀರೆಯಲ್ಲೇ ನಿಮ್ಮ ಅತ್ತೆ ಮನೆಗೆ ಹೋಗಬೇಕು. ಅತ್ತೆ ಮನೆಯವರು ಇವಳು ತವರು ಮನೆಯಿಂದ ಏನು ತಂದ್ಲು, ಹೆಂಗೆ ಬಂದ್ಲು ಅಂತಾ ನೋಡ್ತಾರೆ. ನಿನ್ನ "ತವರು ಏನು ನಿನಗೆ ಕೊರತೆ ಮಾಡಿಲ್ಲ" ಅನ್ನೋದು ಅವರಿಗೆ ಗೊತ್ತಾಗುತ್ತೆ. ಇದು ಬರಿ ತೋರಿಸಿಕೊಳ್ಳೋಕ್ಕಲ್ಲ ಅಮ್ಮಿ, ಇದರಲ್ಲಿ ನಿಮ್ಮ ಅಪ್ಪ ಅಮ್ಮನ ಪ್ರೀತಿನೂ ಇದೆ. ನಾನು ಸತ್ತರೂ ನಿಮ್ಮ ಅಪ್ಪ ಇರೋವರೆಗೂ ನಿನಗೆ ರೇಷ್ಮೆ ಸೀರೆನೇ ಕೊಡ್ಸಿಬೇಕು ಅಂತಾ ಹೇಳಿದ್ದೀನಿ, ಹಂಗೆ ನಿಮ್ಮ ಅಣ್ಣನಿಗೂ ಹೇಳಿದ್ದೀನಿ. ನಾನು ಇಲ್ಲಾ ಅಂದ್ರು ಏನು ಕೊರತೆ ಮಾಡೋಲ್ವೆ ನಿನ್ನ ಅಣ್ಣ ಹೆಣ್ಣುಗಳ್ಳು... ಹುಫ್..!! ಅಮ್ಮ ಏನೆಲ್ಲಾ ಬಡಬಡಾಯಿಸಿದ್ಲು ಅವತ್ತು ಈಗೇನಾಯ್ತು..? ಸದ್ಯ ನನಗೆ ಅವನೇನು ಕೊಡಿಸುವುದು ಬೇಡ ಒಂದು ಫೋನ್ ಮಾಡಿ ಮಾತಾಡಲೂ ಇಲ್ಲವೇ? 

ದೇಹದ ಭಾರಕ್ಕಿಂತ ಮನಸ್ಸಿನ ಭಾರವೇ ಹೆಚ್ಚು ಎನ್ನಿಸಲಿಕ್ಕೆ ಶುರುವಾಯಿತು. ಮಗನನ್ನು ತಯಾರು ಮಾಡಿದೆ ಅವನದು "ಮಾಮ ಎಲ್ಲಿ?" ಎಂಬ ಪ್ರಶ್ನೆ ಮುಗಿಯಲಿಲ್ಲ... ಇನ್ನು ಮನೆಗೆ ಹೋದರೆ ನನ್ನ ಅತ್ತೆ ಮೊಮ್ಮಗನಲ್ಲಿ ವಿಷಯ ಸಂಗ್ರಹ ಮಾಡುತ್ತಾರೆ. ಇನ್ನು ಮುಗಿದ ಕಥೆ ನಾನು ಆಟಿಕೆಯ ವಸ್ತು ಆಗುವುದೂ ಖಂಡಿತಾ..!! ಸುಮುಖನಿಗೆ ಮುದ್ದು ಮಾಡಿ ನೋಡು ಮಾಮ ಬಂದಿದ್ದಾ ನೀನು ಎದ್ದೇಳಲೇ ಇಲ್ಲ, ನಾಳೆ ಮತ್ತೆ ಬರೋಣ ಅಷ್ಟರಲ್ಲಿ ಮಾಮ ಕೆಲಸ ಮುಗ್ಸಿ ಬರ್ತಾನಂತೆ ಈಗ ನಮ್ಮ ಮನೆಗೆ ಹೋಗೋಣ ಎಂದು ಸುಳ್ಳು ಸಮಜಾಯಿಸಿ ಕೊಟ್ಟಿದ್ದು ಅವನಿಗೆ ಖುಷಿ ಕೊಟ್ಟಿತು. ಡ್ಯಾಡಿ ಮತ್ತದೇ ನ್ಯೂಸ್ ಪೇಪರ್ ಗೆ ಮೊರೆ ಹೋಗಿದ್ದಾರೆ. ಮಾಡಿಟ್ಟಿದ್ದ ಊಟವನ್ನು ಮಧ್ಯಾಹ್ನಕ್ಕೆ ತಿಂದುಬಿಡಿ ನನಗೆ ಆಫೀಸ್ ಇದೆ ಹೊರಡ್ತೀನಿ ಎಂದು  ಹೇಳಿ ಕಾಲಿಗೆ ನಮಸ್ಕರಿಸಿ ಆಶೀರ್ವಾದ ತೆಗೆದುಕೊಂಡು ಹೊರಬಂದೆ. "ಅಮ್ಮೀ, ಹೇಗೆ ಹೋಗ್ತೀಯಾ" ಎಂದು ಕೇಳಿದರು ನನ್ನ ಕಣ್ಣಾಲೆ ತುಂಬಿತ್ತು ಮಾತು ಹೊರಡಲಿಲ್ಲ... ಸಾವರಿಸಿಕೊಂಡು "ಬಸ್ ಸ್ಟಾಪ್ ಗೆ ಹೋದರೆ ಆಟೋ ಸಿಗುತ್ತೆ" ಬರ್ಲಾ ಬಾಯ್ ಎಂದೇಳಿ ಗೇಟ್ ದಾಟಿ ಹಿಂದುರಿಗಿದೆ ಬಾಗಿಲವರೆಗೂ ಬಾರದ ಅಪ್ಪನಿಗಾಗಿ ಕಣ್ಣು ಹುಡುಕುತ್ತಿತ್ತು... ದುಃಖ ದುಮ್ಮಿಕ್ಕಿ ಬರುತ್ತಿತ್ತು. 

ಸೊಂಟದಲ್ಲಿ ಅತ್ತಿಂದಿತ್ತ ಇತ್ತಿಂದತ್ತ ನೋಡುತ್ತಲಿದ್ದ ಕೂಸು, ಕೈಯಲ್ಲಿ ಬ್ಯಾಗ್ ಹೊತ್ತು ನಡೆವಾಗ ಹೆಜ್ಜೆಗಳು ನಿಧಾನಗತಿಗೆ ಇಳಿದವು. ಸುತ್ತಲೂ ಕಣ್ಣಾಡಿಸಿದೆ ಯಾವುದಾದರು ಬಟ್ಟೆ ಅಂಗಡಿ ಕಾಣುವುದೇನೋ ಎಂದು, ಅಮ್ಮ ಅಂದು ಹೇಳಿದ್ದಳು "ತವರು ಮನೆಯ ಹೆಸರು ಕುಂದಿಸಬಾರದು. ಕೆಲವೊಮ್ಮೆ ನಾವು ಕೊಡುವ ವಸ್ತುಗಳು ನಿನ್ನ ಗಂಡನ ಮನೆಯಲ್ಲಿ ಹೆಸರು ತರುತ್ತವೆ. ಜೊತೆಗೆ ನಿನ್ನ ಮರ್ಯಾದೆ ಉಳಿಸುತ್ತದೆ" ಯಾಕೋ ಒಂದು ಕಡೆ ನಿಜ ಎನ್ನಿಸುತ್ತಿದೆ ಇನ್ನೊಂದು ಕಡೆ ಇವೆಲ್ಲ ಗೊಡ್ಡು ಸಂಪ್ರದಾಯ ಎನ್ನಿಸುತ್ತಿದೆ. ಆದರೂ ನನ್ನ ಅತ್ತೆ ಸ್ವಲ್ಪ ಸಂಕುಚಿತ ಮನೋಭಾವ. ನನ್ನ ಮನೆಯನ್ನು ಬೆರಳು ಮಾಡಿ ತೋರಿಸಬಾರದು ಎಂದೆನಿಸುತ್ತಿತ್ತು. ಕೈಯಲ್ಲಿ ಹಣವಿಲ್ಲ ಅಷ್ಟು ಸಂಪಾದನೆ ಮಾಡುತ್ತೇನೆ ಹಣವಿಲ್ಲ ಎಂದು ಹೇಳಿಕೊಳ್ಳೊಕ್ಕೆ ಆಗುತ್ತಾ?, ಯಾರಾದರು ಕೇಳಿದರೆ ನಕ್ಕಾರು ಎಂದು ಒಳಮನಸ್ಸು ನಗುತ್ತಿತ್ತು. ನಿಜ, "ನನ್ನ ಸಂಬಳ ಎಲ್ಲವೂ ನನ್ನವರಿಗೆ ಕೊಟ್ಟು ಬಿಡುವೆ ನನಗೆ ಏನಾದರು ಬೇಕೆಂದರೆ ಅವರೇ ಕೊಡಿಸುತ್ತಾರೆ". ನನಗೆ ಇಂತಹ ಪರಿಸ್ಥಿತಿ ಬಂದಿರಲಿಲ್ಲ ಅದರ ಅರಿವೂ ಆಗಿರಲಿಲ್ಲ, ಯಾಕೆ ಅಂದರೆ ಅಮ್ಮನೇ ಕಾರಣ ಬಂದಾಗಲೆಲ್ಲಾ ಕೈಯಲ್ಲಿಷ್ಟು ದುಡ್ಡು, ಹೂ ಹಣ್ಣು ತಿಂಡಿಗಳು ಎಂದೇಳಿ ಕಳುಹಿಸೋಳು ಈಗ ಬರಿಗೈ ಹೇಗೆ ಹೋಗೋದು.... ಮೊನ್ನೆ ನನ್ನವರು ಕೊಟ್ಟಿದ್ದು ೨೦೦ ರುಪಾಯಿ ಆಟೋದಲ್ಲಿ ಹೋಗಿಬರಲು ಸಾಕೆಂದಿದ್ದರು ಅದರಲ್ಲೇ ಹೂಹಣ್ಣು ಬರುವಾಗ ತಂದಿದ್ದೆ ಇನ್ನು ೫೦ ರುಪಾಯಿ ಇದೆ ಅದು ಆಟೋಗೆ ಆಗುತ್ತೆ. ಏನು ಮಾಡಲಿ ಎಂದು ನನ್ನ ಪರ್ಸ್ ಹುಡುಕಾಡಿದೆ. ಬ್ಯಾಗ್ ಹುಡುಕಿದೆ ಎಲ್ಲಾದರು ಮರೆತು ಇಟ್ಟ ಹಣವೇನಾದರೂ ಇದೆಯೇ ಎಂದು ತಕ್ಷಣಕ್ಕೆ ೩ ಸಾವಿರ ರುಪಾಯಿ ಕಾಣಿಸಿತು. ಓಹ್..!! ಅದೇ ಆ ಪಕ್ಕದ ಮನೆ ಸುಮಿ ಆಂಟಿ ಕೊಟ್ಟಿದ್ದ ದುಡ್ಡು. ಅಬ್ಬಾ ನನ್ನ ಪುಣ್ಯಕ್ಕೆ ಈ ಹಣ ಸರಿ ಸಮಯಕ್ಕೆ ಬಂದಿದೆ. ನಿಜ ನಮಗೂ ನಮ್ಮದೂ ಎಂಬ ಆಸೆ ಇರುತ್ತೆ ಗಂಡನಿಗೂ ಹೇಳಲಾರದಂತ ಖರ್ಚುಗಳು ಇರುತ್ತವೆ ದುಡ್ಡಿನ ಅವಶ್ಯಕತೆ ಇದೆ ಎಂದೆನಿಸಿತು. 

ಯಾರದೋ ದುಡ್ಡು ಎಲ್ಲಮ್ಮನ ಜಾತ್ರೆ ಎಂಬಂತೆ ಪಕ್ಕದ ಮನೆಯವರು ಕುಂಕುಮಕ್ಕೆ ದುಡ್ಡು ಕೊಟ್ಟಿದ್ದರಲ್ಲಿ ಹೂ ಹಣ್ಣು, ಮಗನಿಗೆ ಒಂದು ಜೊತೆ ಬಟ್ಟೆ, ಸಾವಿರ ರುಪಾಯಿಯ ಒಂದು ಕಾಟನ್ ಸೀರೆ ನನಗಾಗಿ ತೆಗೆದುಕೊಂಡು ಹೊರ ಬಂದಾಗ ಏನೋ ನಿರಾಳ ಮನಸ್ಸು. ಅಲ್ಲೇ ಇದ್ದ ಆಟೋದವರನ್ನು ಕರೆದು ಬನಶಂಕರಿಗೆ ಬರುವಿರೆಂದು ಕೇಳಿ ಮನೆಕಡೆಗೆ ಬಂದೆ. ಮುಖ ಬಾಡಿರಲಿಲ್ಲ ನಗುವನ್ನು ತುಂಬಿಕೊಂಡಿದ್ದೆ ಅತ್ತೆಗೆ ನಗುವಿಂದಲೇ ಬ್ಯಾಗ್ ನಲ್ಲಿದ್ದ ಹಣ್ಣು ಹೂ ಅವರ ಕೈಗಿತ್ತು ಒಳ ನಡೆಯುವಷ್ಟರಲ್ಲಿ ಮೊಮ್ಮಗನ ಯೋಗಕ್ಷೇಮದತ್ತ ಹೊರಟ ಅತ್ತೆ, "ಮಾಮ ಅತ್ತೆ ಏನಂದರೋ, ಏನು ಹಬ್ಬ ಜೋರಾಯಿತಾ" ಎನ್ನುವಷ್ಟರಲ್ಲಿ ನನ್ನ ಕೂಸು ಹೂ..ನಜ್ಜಿ ಸಕ್ಕತ್ತಾಗಿತ್ತು ಗಣೇಶ, ಗೌರಿ ಎಲ್ಲಾ ಇದ್ರು ಸ್ವೀಟುಗಳು ಎಷ್ಟೋಂದು ಇತ್ತು, ಹುಡುಗರು ಎಷ್ಟೋಂದು ಜನ ಇದ್ರು ಆಟ ಆಡಿದೆ ಚೆನ್ನಾಗಿ ಎಂದು ಹುಮ್ಮಸ್ಸಿನಿಂದ ಹೇಳುತ್ತಿದ್ದ. ಅವನು ಆಟವಾಡಿ ಕುಣಿದಿದ್ದು ಪಕ್ಕದ ಮನೆಯವರೊಂದಿಗೆ. ಆ ಕೂಸಿನ ಮಾತು ನನ್ನ ತವರನ್ನೂ ಉಳಿಸಿತ್ತು ಒಂದೆಡೆ ಅತ್ತೆಗೂ ಖುಷಿ ತರಿಸಿತ್ತು ಮಗುವಿನ ಮಾತಲ್ಲಿ.

'ಮನೆಗೆ ಬಂದರೂ ಅಣ್ಣನದು ಒಂದು ಕರೆ ಇಲ್ಲ, ಡ್ಯಾಡಿಯೋ ದೇಹವೊಂದು ಇದೆ ಆತ್ಮವೆಲ್ಲಾ ಅಮ್ಮನಲ್ಲಿಗೆ ಹೊರಟು ಬಿಟ್ಟಿದೆ'. ಏನೇ ಆಗಲಿ, ಅಮ್ಮನ ಕರುಳು ಬಾದಿಸುವುದು ಮಕ್ಕಳಿಗೆ ಮಾತ್ರ ತಂದೆಯ ಭಾವನೆಗಳೆಲ್ಲವೂ ಅವರಲ್ಲೇ ಹುದುಗಿಬಿಡುತ್ತವೆ  "ಭಾವುಕತೆ  ಇರಬೇಕು ಸಂಬಂಧಗಳನ್ನ ಹಿಡಿದಿಡಲು" ಎಂದೆನಿಸುತ್ತದೆ. ತವರಿನಲ್ಲಿ ತಾಯಿ ಇರುವವರೆಗೂ ಬಣ್ಣ ತುಂಬಿ ನಗುತ್ತಿರುತಿತ್ತು. ತಾಯಿಯ ನಂತರದ ದಿನಗಳು ತುಂಬಿದ ಬಣ್ಣಗಳು ಮಾಸುತ್ತಾ ಹೋಗುತ್ತದೆ. ಎಲ್ಲ ಬೇಸರಗಳ ಬದಿಗಿತ್ತು ತೋರಿಕೆಯ ನಗುವಿದ್ದರೂ ಒಳಗೆಲ್ಲೋ ಅಮ್ಮನ ಇಲ್ಲದಿರುವಿಕೆ ಸಹಿಸಿಕೊಳ್ಳಲಾಗುತ್ತಿಲ್ಲ. "ಅಣ್ಣನ ಮನೆಗೆ ತಿಲಾಂಜಲಿ ಇಡಲೂ ಆಗುತ್ತಿಲ್ಲ, ಅದು ನನ್ನ ತವರು" ಎಂದು ಮನಸ್ಸು ಕೂಗಿ ಹೇಳುತ್ತಿದೆ. ಇತ್ತ ಎಫ್ ಎಂ ನಲ್ಲಿ ತಾಯಿ ಸತ್ತ ಮೇಲೆ ತವರಿಗೆ ಎಂದು ಹೋಗಬಾರದಮ್ಮ ... ಎಂಬ ಹಾಡು ನನಗೋಸ್ಕರ ಹಾಕಿರುವ ಹಾಗಿದೆ ಎಂದೆನಿಸ್ತಾ ಇದೆ. 

ಅಮ್ಮನಿಲ್ಲದ ಮನೆಯು
ಮಬ್ಬು ಕವಿದಿದೆ

ಬೆಳಕು ಹರಿಸುವ
ದೀಪಕೆ ಕಾದು ಕುಳಿತಿದೆ

ಹಗಲೋ ಇರುಳೋ
ಎರಡು ಒಂದೇ ಎನಿಸಿದೆ
ಅವಳಿಲ್ಲದ ಮನೆಯು 
ಬಿಕೋ ಎನುತಿದೆ...!!!

ಪೋಟೋ ಕೃಪೆ : ಮನು ವಚನ್

ಇದು ನಾ ಕಂಡ ಪರಿಚಿತಳ ಕಥೆ... 

Monday, July 29, 2013

ಇದು ಯಾರ ಲಿಖಿತಾ..!!!???


ಸಾರ್ ನಮಸ್ಕಾರ, ಹೇಗಿದ್ದೀರಿ ನಿನ್ನೆ ರಾತ್ರಿ ಊರಿಂದ ಬಂದೆ ಸಾರ್...

ತಗೊಳ್ಳಿ ಇದು ನಮ್ಮ ಕೇರಳ ಚಿಪ್ಸ್ ಮತ್ತೆ ನಿಮಗೋಸ್ಕರ ಅಂತಾ ಒಂದು ಪೆನ್ ತಂದಿದ್ದೀನಿ.

ಓಹ್..!! ಥ್ಯಾಂಕ್ಸ್ ಶಿವ ಏನಕ್ಕೆ ಇದೆಲ್ಲಾ ತರೋಕ್ಕೆ ಹೋದೆ.. ಮತ್ತೆ ನಿನ್ನ ಹೆಂಡತಿಗೆ ಆಪರೇಷನ್ ಎಲ್ಲಾ ಆಯ್ತಾ..? ಹೇಗಿದ್ದಾರೆ ಈಗ .. ??

ಹೂ ಸರ್ ಚೆನ್ನಾಗಿದ್ದಾರೆ. ನೀವು ದೇವರಿದ್ದಂಗೆ, ನಾನು ಇದ್ದಕ್ಕಿದ್ದಂತೆ ಊರಿಗೆ ಹೋಗ್ಬೇಕಾದ್ರೆ ನನಗೆ ಹಣದ ಸಹಾಯ ಮಾಡಿದ್ರಿ ನಿಮ್ಮನ್ನ ಮರೆಯೋಕ್ಕೆ ಆಗೋಲ್ಲ. ಕ್ಷಮಿಸಿ ಈ ತಿಂಗಳ ಸಂಬಳ ಬಂದಾಗ ನಿಮಗೆ ಖಂಡಿತಾ ನಿಮ್ಮ ದುಡ್ಡು ಕೊಟ್ಟುಬಿಡ್ತೀನಿ...

ಹೇ..!! ಇರ್ಲಿ ಬಿಡು ಏನು ಅರ್ಜೆಂಟ್ ಇಲ್ಲಾ... ಸದ್ಯಕ್ಕೆ ಆರೋಗ್ಯವಾಗಿದ್ದಾರಲ್ಲ ಅದು ಮುಖ್ಯ. ಇವತ್ತೇ ಆಫೀಸಿಗೆ ಬಂದಿದ್ದೀಯಾ ಎಲ್ಲಾ ಕೆಲಸಗಳು ನಿನಗೇ ಕಾದಿದೆಯೇನೋ ಎಲ್ಲಾ ನೋಡು ಹೇಗೆ ನಡಿತಾ ಇದೆಯೆಂದು. 

ಸರಿ ಸರ್.. 

ಹೀಗೆ ಶಿವ ಸುಮಾರು ೧೧ ಗಂಟೆಯಲ್ಲಿ ತನ್ನ ಕಛೇರಿ ಬಾಸ್ ನೊಂದಿಗೆ ಮಾತನಾಡಿ ಎಲ್ಲರೊಂದಿಗೆ ಖುಷಿ ಖುಷಿಯಾಗಿ ಮಾತನಾಡಿಕೊಂಡು ರಮದಾನ್ ಆದ್ದರಿಂದ ಕುವೈತಿನಲ್ಲಿ ಕಛೇರಿ ಸಮಯ ಕೇವಲ ೬ ಗಂಟೆಗಳ ಕೆಲಸವಾದ್ದರಿಂದ ಮಧ್ಯಾಹ್ನ ೧೨ ಗಂಟೆಗೆ ಮನೆ ಕಡೆ ಹೊರಟ.

ಇತ್ತ ಬಾಸ್ ತಮ್ಮ ಮನೆಕಡೆ ಹೊರಟರು ಮಧ್ಯದಲ್ಲಿ ಅಂಗಡಿಯೊಂದಕ್ಕೆ ತೆರಳಿ ಮನೆಗೆ ಬೇಕಾದ ಸಾಮಾನು ಸರಂಜಾಮುಗಳನ್ನ ತೆಗೆದುಕೊಂಡು ತನ್ನ ಹೆಂಡತಿಯನ್ನ ಕರೆದೊಯ್ಯಲು ಬಂದರೆ.. ಆತನಲ್ಲಿ ಎಂದಿನ ಲವಲವಿಕೆ ಇಲ್ಲ. ಮಾತು ಮೌನವಾಗಿತ್ತು ನಿಟ್ಟುಸಿರಿನ ಶಬ್ದ ಕೇಳುತ್ತಿತ್ತು. ಏಕೆ ಏನಾಯಿತು ಎಂದು ಕೇಳುತ್ತಿದ್ದಂತೆ.!! 

"ಊರಿಗೆ ತೆರಳಿದ್ದ ಒಬ್ಬ ಆಫೀಸಿನವ ಇವತ್ತು ಬಂದು ನನಗೆ ಪೆನ್ ಗಿಫ್ಟ್ ಕೊಟ್ಟ ಆದರೆ... ಆದರೇ..... ಈಗ ೧ ಗಂಟೆಗೆ ಕಂಪನಿಯ ಕ್ಯಾಂಪ್ ಇಂದ ಕರೆ ಬಂತು ಅವನು ಊಟ ಮುಗಿಸಿ ಹೊರಗಡೆ ಕೈ ತೊಳೆಯಲು ಬಂದವನು ಕುಸಿದು ಬಿದ್ದನಂತೆ. ತಕ್ಷಣ ಎಲ್ಲರೂ ಆಸ್ಪತ್ರೆಗೆ ಕರೆದೊಯ್ದರೆ ಇಲ್ಲ... ಸತ್ತು ಹೋಗಿದ್ದಾರೆ ಎಂದರಂತೆ..!!"

ಇಷ್ಟು ಹೇಳಿ ಮೌನವಹಿಸಿದವರ ಕಣ್ಣಲ್ಲಿ ಸ್ತಬ್ಧ ಚಿತ್ರಣ ಎದ್ದು ಕಾಣುತ್ತಿತ್ತು.... ತಡೆಯಲಾರದ ಸಂಕಟವೊಂದು ಮನಸಲ್ಲಿ ಎದ್ದು ಕಾಣುತ್ತಿತ್ತು.

- ಇದು ನಡೆದದ್ದು ನನ್ನವರ ಕಛೇರಿಯಲ್ಲಿ ನನಗೂ ಮಾತು ಹೊರಳಲಿಲ್ಲ... ನನಗೇ ಅರಿವಿಲ್ಲದೆ ನನ್ನ ಕಣ್ಣಂಚು ಒದ್ದೆಯಾಗಿತ್ತು. ಇನ್ನೂ ವಿದ್ಯಾಭ್ಯಾಸ ಮುಗಿಸದ ಇಬ್ಬರು ಮಕ್ಕಳು. ಆಪರೇಷನ್ ಆಗಿ ಹಾಸಿಗೆ ಹಿಡಿದಿರುವ ಹೆಂಡತಿ... ಇತ್ತ ಮನೆ ಯಜಮಾನನ ಸಾವು. 

ಊರಲ್ಲಿ ಇದ್ದು ನಿನ್ನೆಯ ದಿನವೇ ಬಂದವನಿಗೆ ಸಾವು ಇಂದು ಈ ಮರುಭೂಮಿಯಲ್ಲಿ ಕಾದಿತ್ತೇ... ಸಾವು ಬಂದರೂ ಇಲ್ಲಿಗೆ ಯಾಕೆ ಕರೆತಂದ... ಅಲ್ಲೇ ಇಷ್ಟು ದಿನ ಊರಲ್ಲೇ ಇದ್ದಾಗ ಏಕೆ ಏನೂ ಆಗಲಿಲ್ಲ..?? ದೇವರೇ ಇಂತಹ ಸ್ಥಿತಿ ಯಾರಿಗೂ ಬಾರದಿರಲಿ. ಸಾಯುವ ವಯಸ್ಸಲ್ಲದಾಗ ಸಾವು ಬರುವುದು ಎಷ್ಟು ನ್ಯಾಯವೋ ಅರಿವಿಲ್ಲ.!!  

ಇದು ವಿಧಿ ಲಿಖಿತವೋ... ಏನೋ..??!! ಆದರೆ ಮನಸ್ಸು ಮಾತ್ರ ಮರುಗುತ್ತದೆ. ಕಾಣದ ದೇಶದಲ್ಲಿ ಕಷ್ಟಕ್ಕೆಂದು ಬಂದು ದುಡಿಯುವಾಗ ಅವರನ್ನೇ ನಂಬಿದ ಕುಟುಂಬವನ್ನು ನೆನೆದಾಗ ಮಾತು ನಿಂತು ಹೋಗುತ್ತದೆ.

ಜೀವವಿಲ್ಲದಾಗ ಆ ಆತ್ಮಕ್ಕೆ ಶಾಂತಿ ಕೋರುವುದೊಂದೇ ದಾರಿ... ಅವರ ಕುಟುಂಬಕ್ಕೆ ಈ ದುಃಖ ಭರಿಸುವ ಶಕ್ತಿ ಕೊಡಲೆಂದು ಆ ದೇವರಲ್ಲಿ ಪ್ರಾರ್ಥಿಸುತ್ತೇನೆ. 


ಇನ್ನು ಆತನ ಉಸಿರಿಲ್ಲದ ದೇಹ ಊರು ಮುಟ್ಟುಲು ಎಷ್ಟು ದಿನಗಳೋ... ಈ ವಿಷಯ ತಿಳಿದ ಮನೆಮಂದಿ ಮನಸ್ಸಿನ ಪರಿಸ್ಥಿತಿ ಹೇಗೋ..?

ಎಲ್ಲಿ ಯಾವಾಗ.. ಏನು ನಡೆಯುತ್ತದೆ ಎಂದು ಯಾರಿಗೂ ತಿಳಿದಿಲ್ಲ... :( 


ಅವನ ಇರುವಿಕೆಯೇ ಅವನು ಕೊಟ್ಟ ಪೆನ್ನು..!!!

Monday, July 15, 2013

- ವೈಷಮ್ಯತೆ -

ಎಲ್ಲರಿಗೂ ಅವರದೇ ಸಂಪ್ರದಾಯ
ಅವರದೇ ನೀತಿ ನಿಯಮಗಳು
ಅವುಗಳ ದೂಷಣೆ, ಧೋರಣೆ
ನಮ್ಮದಲ್ಲದ ಪಾತ್ರಗಳು....

ಸಂಬಂಧ, ಸಂಸ್ಕೃತಿ
ಬೆಳೆದು ಬಂದ ಹಾದಿ
ಅವರೇ ಪೋಣಿಸಿಕೊಂಡ
ದಾರದೊಳಗಿನ ಮಣಿಗಳು..

ತನ್ನ ಇರುವಿಕೆ ಪರರ ಬದುಕಾಗದೆ
ಸ್ವಇಚ್ಚೆ, ಸ್ವಸಾಮರ್ಥ್ಯ ಗುರುತು
ಹಚ್ಚಿ ಬಾಳು ಬೆಳಗುವ ಹಸ್ತ
ಎಲ್ಲರೊಳಗು ಹುದುಗಬೇಕಿದೆ....

ಮೇಲ್ದರ್ಜೆ, ಕೀಳುದರ್ಜೆ
ಎಲ್ಲ ಹಳತು ಮಾಡಿ
ಹೊಸ ಹೆಜ್ಜೆಯ ಸೂತ್ರದಿ
ನಡೆವ ವಿದ್ಯಾವಂತನಾಗಲಿ...

ಬದುಕು ಬವಣೆಗಳ ಪಟ್ಟಿ
ಇಲ್ಲಿ ಜಾತಿ ವೈಷಮ್ಯ
ಭಾವನೆಗಳ ಶೋಷಣೆ
ಎಲ್ಲ ಬಲ್ಲವನಿಗೆ ಸಲ್ಲದು...

ಯಾರೋ ಬಿತ್ತಿದ ವಿಷ ಬೀಜವನು
ಫಸಲು ಮಾಡುವ ಹೊಣೆ ಹೊತ್ತಂತೆ
ಹಸಿವಿಗೆ ಆಹಾರವಾಗದೆ
ದ್ವೇಷದಾ ಕೊಳ್ಳಿಗೆ ಆಹುತಿಯಾಗದಿರಲಿ..

ಮನುಕುಲದ ವೈಷಮ್ಯ
ಪ್ರಕೃತಿ ದಹಿಸೋ ಸಾಮರ್ಥ್ಯ
ಭುಗಿಲೇಳುವ ಕ್ರೋಧಕೆ
ಹೊಲಸು ಮರೆತು; ಅಳಿಸಿ ತಾರತಮ್ಯ...

ಯಾವುದೋ ಜಾತಿ ಯಾರದೋ ನೀತಿ
ಉಸಿರು, ಹೃದಯ ಬಡಿತಕೆ ಯಾವ ಜಾತಿ
ಏನೊಂದು ಎಣಿಸದೆ ಸಾಗುತಿರುವ ದಿನಚರಿಗೆ
ವಿಚಾರವಾದಿಗಳು ನೆಡುವ ದ್ವೇಷ ಸಸಿಗಳು
ಹೆಮ್ಮರವಾಗಿ ಬೆಳೆಯದಂತೆ ಕಟಾವು ಮಾಡಲಿ...!!!


ನನ್ನ "ಮೃದುಮನಸು" ಕೂಸಿಗೆ ಐದು ವರ್ಷಗಳು ಕಳೆದಿವೆ. ಈ ಪಂಚವಾರ್ಷಿಕ ಬ್ಲಾಗಿನಡಿ ಈ ಪುಟ್ಟ ಸಾಲುಗಳು. ಇತ್ತೀಚೆಗೆ ಜನರಲ್ಲಿ ವೈಷಮ್ಯಗಳು ಮತ್ತು ನಮ್ಮನಮ್ಮಲ್ಲೇ ಇರುಸುಮುರುಸುಗಳು ಹೆಚ್ಚುತ್ತಿವೆ. ಅವೆಲ್ಲವನ್ನೂ ದೂಡಿ ವಿದ್ಯಾವಂತ ಜನರು ಸಂತೃಷ್ಟಿ ನೆಲೆ ಕಾಣಲೆಂಬುದೇ ನನ್ನ ಈ ಕವನದ ಆಶಯ.  

ವಂದನೆಗಳು
ಮನಸು

Sunday, July 7, 2013

"ಪವರ್ ಸ್ಟಾರ್ ಪುನೀತ್" ಜೊತೆ ಅಭಿನಯ - ಖುಷಿ ತಂದ ಕ್ಷಣ..!!


ಹಿಂದೆಯೊಮ್ಮೆ ಪುನೀತ್ ರಾಜ್ಕುಮಾರ್ ಅವರನ್ನು ಭೇಟಿಯಾಗಿದ್ದೆ. ಆತ್ಮೀಯ ಮಾತುಕತೆಗಳೊಂದಿಗೆ ಆತ್ಮೀಯರಾಗಿದ್ದರು. ಅದೇ ಕಾರಣಕ್ಕೆ ಅವರ ಚಲನ ಚಿತ್ರದಲ್ಲಿ ನನಗೊಂದು ಆಫರ್ ಬಂದಿತ್ತು. ನನ್ಗೂ ಖುಷಿ "ಪವರ್ ಸ್ಟಾರ್" ಜೊತೆ ಅಭಿನಯಿಸುವುದೆಂದರೆ ಏನು ಸಾಮಾನ್ಯನಾ..? ಎಂದು ಒಪ್ಪಿಕೊಂಡೆ. ಶೂಟಿಂಗ್ ದಿನವೂ ಬುಕ್ ಆಯ್ತು.

ಅಂದು ನನ್ನ ಪಾತ್ರದ ಬಗ್ಗೆ ನಿರ್ದೇಶಕರು ಎಲ್ಲವನ್ನು ಸವಿವರವಾಗಿ ತಿಳಿಸಿದರು ನಾನು ಮೇಕಪ್ ಇಲ್ಲದೆ ಸ್ವಲ್ಪ ಬಡತನದ ಹೆಣ್ಣು ಮಗಳಂತಿರಬೇಕಿತ್ತು..

ಅದೋ ಅಲ್ಲಿ ಕಾಣುವ ಮೂಲೆಯಲ್ಲಿ ನೀವು ಹಳೆಯ ಬಟ್ಟೆ ಕಾಣುತ್ತಲ್ಲಾ ಅದನ್ನು ಹೊದ್ದುಕೊಂಡು ಮಲಗಿ ... ಸ್ವಲ್ಪ ದೂರದಿಂದ ಪುನೀತ್ ನಿಮ್ಮ ಕೊಠಡಿಗೆ ಬರುತ್ತಾರೆ. ನಿಮ್ಮನ್ನು ನೋಡಿ ಮಾತನಾಡಿಸುತ್ತಾರೆ. - ಇಷ್ಟು ಸಾಕು ನಂತರ ಮುಂದಿನದು ಹೇಳುವೆ ಎಂದರು ನಿರ್ದೇಶಕರು.

ಸರಿ ಈಗ ನನ್ನ ಸರದಿ ನಾನು ಅಲ್ಲಿ ಕಾಣುವ ಪಾಳು ಬಿದ್ದ ಮನೆಯಲ್ಲಿ ಹೋಗಿ ಅಲ್ಲೇ ಕಾಣುತ್ತಿದ್ದ ಬಟ್ಟೆಯನ್ನು ಹೊದ್ದುಕೊಂಡು ಮಲಗಿದೆ - ಆ ಕಡೆಯಿಂದ ನಿರ್ದೇಶಕರು ಕ್ಯಾಮರಾ ಸ್ಟಾರ್ಟ್ ಆಕ್ಷನ್ ಎಂದರು... ನನ್ನದು ತೀವ್ರ ಮೌನ, ಆಸೆ ಬತ್ತಿದ ಕಣ್ಣುಗಳು, ನಿರಾಶೆಯ ಬದುಕು ಎಂಬಂತೆ ನೆಲದಲ್ಲಿ ಬಿದ್ದುಕೊಂಡಿರುವಂತ ಪರಿಸ್ಥಿತಿ.... ನನ್ನತ್ತ ಕ್ಯಾಮರ ಜ಼ೂಮ್
ಮಾಡಿ...ಮಾಡಿ ಇಟ್ಟರು ನಾನು ಮಾತ್ರ ಆಸೆಗಳೇ ಬತ್ತಿಹೋದಂತೆ ಮುಖ ತೆರೆದಿಟ್ಟು ಹರುಕಲು ಬಟ್ಟೆ ಹೊದ್ದು ಮಲಗಿದ್ದೆ... 

ನನ್ನ ಅಭಿನಯ ನಿರ್ದೇಶಕರಿಗೆ ಖುಷಿ ನೀಡಿತ್ತು .. ಎಕ್ಸಲೆಂಟ್, ಗುಡ್ ಹೀಗೇ ಮಲಗಿರಿ ಎಂದು ಅತ್ತ... ಪುನೀತ್ ಸರ್ ರೆಡಿನಾ..!! ಆಕ್ಷನ್ ಎಂದರು..

ಪುನೀತ್ ಬೂಟಿನ ಸದ್ದು ಟಪ್......ಟಪ್......ಟಪ್.......ಸದ್ದು ಮಾಡುತ್ತ ಬರುತ್ತಿದ್ದಾರೆ..... ಹಾಗೇ ಬನ್ನಿ ಇನ್ನೂ ಮುಂದಕ್ಕೇ ಎಂದು ನಿರ್ದೇಶಕರು ಹೇಳುತ್ತಿದ್ದಾರೆ.....ಸುತ್ತಲೂ ಇದ್ದ ನಾಲ್ಕಾರು ಜನ್ರಲ್ಲಿ ಎಲ್ಲಿ... ಆ ಹೆಣ್ಣು ಮಗಳು ಎಂದು ನಾನಿದ್ದ ಕಡೆಗೆ ಬಂದು ನನ್ನನ್ನೇ ದಿಟ್ಟಿಸಿ ನೋಡುತ್ತಿದ್ದಾರೆ... ಇನ್ನೇನು ಮಾತನಾಡಬೇಕು ಎನ್ನುವಾಗ ಅತ್ತ ನಿರ್ದೇಶಕ ಕಟ್..ಕಟ್ ಎಂದು ಬಿಟ್ಟರು....

ಪುನೀತ್ ಸರ್, ಎಕ್ಸಲೆಂಟ್...ಆಕ್ಟಿಂಗ್ ವಾಹ್..!!  ಎಂದು ನಿರ್ದೇಶಕರು ಬೆನ್ನು ತಟ್ಟಿದರು...

ನಾನು ಎದ್ದು ಇದೇನು ಇಷ್ಟೇನಾ..? ಎಂದು ಕೇಳಿದೆ. ಪುನೀತ್ ಸಹ ನನ್ನ ಜೊತೆಯೇ ಇದ್ದವರು ಏನು ಅವರಿಗೆ ಡೈಲಾಗ್ ಎಲ್ಲಾ ಏನಿಲ್ಲ ಯಾಕೆ..? ಎಂದು ಕೇಳುತ್ತಿದ್ದಂತೆ... ಇಲ್ಲ ಸರ್, ಇದೆ ಈಗ ಸದ್ಯಕ್ಕೆ ಇಷ್ಟೇ ಇರಲಿ ಮಿಕ್ಕಿದ್ದು ಮಧ್ಯಾನ್ಹ ಎಂದರು.... ಸರಿ ಎಂದು ಪುನೀತ್ ಅತ್ತ ಸರಿಯುತ್ತಿದ್ದಂತೆ..........

ನಿರ್ದೇಶಕರು ನೋಡಿಮ್ಮಾ ನೀವು ಹೋಗಿ ಮೇಕಪ್ ಮಾಡಿಕೊಂಡು ಬನ್ನಿ ಇನ್ನೊಂದು ಸನ್ನಿವೇಶವಿದೆ ಅದನ್ನು ಚಿತ್ರೀಕರಿಸೋಣ ಎಂದರು ನನಗೆ ಏನೂ ತೋಚಲಿಲ್ಲ ಸುಮ್ಮನೇ ತಲೆಯಾಡಿಸಿದೆ.

೩೦ ನಿಮಿಷಗಳ ನಂತರ ಮೇಕಪ್ ಮಾಡಿಕೊಂಡು ಪುನೀತ್ ಜೊತೆ ಕುಳಿತಿದ್ದೆ ಅತ್ತ ಮತ್ತೊಂದು ಸನ್ನಿವೇಶದ ಚಿತ್ರೀಕರಣ ನಡೆಯುತ್ತಿತ್ತು...

(ಸನ್ನಿವೇಶ)
ಇಬ್ಬರು ಚಿಕ್ಕ ಮಕ್ಕಳು ಮರದ ತೊಲೆಗಳು ಮೂರು, ನಾಲ್ಕನ್ನು ಒಟ್ಟೊಟ್ಟಿಗೆ ಹೊತ್ತು ತರುತ್ತಿದ್ದಾರೆ... ಮಣ ಭಾರ...!! ಭುಜದ ಮೇಲಿಟ್ಟುಕೊಂಡು ಒಂದು ಕೊನೆಯಲ್ಲಿ ಒಬ್ಬ ಹುಡುಗ ಮತ್ತೊಂದು ಕೊನೆಯಲ್ಲಿ ಇನ್ನೊಬ್ಬ ಹುಡುಗ ..ಕಷ್ಟಪಟ್ಟು ತರುತ್ತಿದ್ದಾರೆ ಎಂಬಂತೆ ಬಾಸವಾಗುವಂತೆ ಅವರ ಮುಖದಲ್ಲಿ ಕಾಣುತ್ತಿದೆ...ಸ್ವಲ್ಪ ದೂರ ಬಂದ ನಂತರ ವಿಶಾಲ ಮೈದಾನದಲ್ಲಿ ರಪ್ಪ್ ಎಂದು ಭಾರವೇ ಇಲ್ಲದಂತೆ ಎಸೆದುಬಿಟ್ಟರು...!!!!.

ಅಯ್ಯೋ, ಇದೇನು ಅಲ್ಲಿಂದ ಹೊತ್ತುಕೊಂಡು ಬಂದಿದ್ದು ನೋಡಿದರೆ ಭಾರವಿದ್ದಂತೆ ಇತ್ತು, ಈಗ ಒಳ್ಳೆ ಹೂವಿನ ಕಡ್ಡಿ ಹಿಡಿದಂತೆ ಎಸೆಯುತ್ತಿದ್ದಾರೆ. ನಿರ್ದೇಶಕರೆ ಯಾವುದೇ ಸನ್ನಿವೇಶವನ್ನು ಚಿತ್ರಿಸುವಾಗ ಅದು ಸ್ವಲ್ಪ "ವಾಸ್ತವಕ್ಕೆ ಹತ್ತಿರ" ಇರುವಂತೆ ಚಿತ್ರಿಸಿ... ಇಲ್ಲವಾದರೆ ಜನರಿಗೆ ಸುಮ್ಮನೆ "ಬಂಡಲ್" ತೋರಿಸಬೇಡಿ ಎಂದುಬಿಟ್ಟೆ.

ನಿರ್ದೇಶಕರಿಗೆ ಅದೆಲ್ಲಿತ್ತೋ ಕೋಪ ಒಂದೇ ಸಮನೆ ಬೈಯ್ಯುತ್ತ ನಿನ್ನನ್ನು ಈ ಸಿನಿಮಾದಿಂದ ಕಿತ್ತು ಹಾಕಲಾಗಿದೆ. ನಿನ್ನಂತವರು ಬೇಡವೇ ಬೇಡ ಎಂದುಬಿಟ್ಟ... ಇತ್ತ ಪುನೀತ್ ಸಮಾಧಾನ ಮಾಡುತ್ತಲೇ ಇದ್ದಾರೆ. ಅದೆಲ್ಲಿತ್ತೋ ನನ್ನ ಮೊಬೈಲಿನ ಕರೆಗಂಟೇ ಒಂದೇ ಸಮನೇ ಬಡಿದುಕೊಳ್ಳುತ್ತಿದೆ. ಬೇಸರದಿಂದಲೇ ಮೊಬೈಲ್ ಕೈಗೆತ್ತುಕೊಂಡು ನೋಡಿದೆ ಆಗ ತಿಳಿಯಿತು ಬೆಳಗ್ಗೆ ೬ ಗಂಟೆ ...ಎದ್ದೇಳು ಎಂದು ಶುಭಸೂಚಿಸುತ್ತಿದ್ದದ್ದು.

ಇಷ್ಟೆಲ್ಲಾ ಕಥೆಗೆ ಕಾರಣ ನೆನ್ನೆಯ ಉದಯಾ ಟೀವಿಯ ಪೃಥ್ವಿ ಚಿತ್ರ.

Tuesday, April 23, 2013

ಹುಟ್ಟು ಬದುಕು


                                     ಪೋಟೋ:  ಗಿರೀಶ್
 (ಈ ಪೋಟೋ ನೋಡಿದೊಡನೆ  ನನ್ನೂಳಗೆ "ಹುಟ್ಟು" ಹುಟ್ಟಿಸಿದ ಸಾಲುಗಳು)


-ಹುಟ್ಟು  ಬದುಕು-

ನಾ ಬಯಸಿದ ಜೀವನ
ನೀರ ಗರ್ಭದಲಿ
ತೆಪ್ಪದ ತೊಟ್ಟಿಲಿನಲಿ
ಹುಟ್ಟು ಹಾಕುತ
ದಡವ ಮುಟ್ಟಿಸುವ ಬದುಕು...

ನೀರ ಆಳದಲಿ
ಬಂಡೆಗಳ ಒಡೆತ
ಪ್ರಯಾಣಿಕರ ನಡುಕ
ಎದೆ ಝಲ್ ಎನಿಸಿದರೂ
ಕೈಯೊಳಗಿನ ಹುಟ್ಟು ಜಾರದಿರುವ ಜೀವನ

ಶಾಂತ ಅಲೆಗಳು
ಅಬ್ಬರಿಸುವ ಮೊದಲು
ಭಯದ ನೆರಳ ಸರಿಸಿ
ಮರಗೋಲ ಹಿಡಿದು
ಉದಕವ ಹಿಂದಿಕ್ಕಿ ಸಾಗುವ ಬದುಕು....

Wednesday, April 10, 2013

ಆದಿ ಪರ್ವ



ಸಿಹಿಯ ಮಡಿಲು ನಗುವಿನೊಳಗೆ ಸುಖ
ಕಹಿಯ ಕಡಲು ಅಳುವಿನೊಡನೆ ದುಃಖ
ಬೇವು-ಬೆಲ್ಲದ ಬದುಕು ಕಂಡಷ್ಟು
ಕುಲುಮೆಯೊಳಗೆ ಬೆಂದ ಚಿನ್ನದಂತೆ  

ಚಿಗುರು ಮಾವು, ಮೈಯ್ಯ ಕೊಳೆ ಕಳೆವ ತೈಲ
ಕಿರಣ ರಾಶಿಯಡಿ ಮನಸು ಪಕ್ಷಿಕಾಶಿ
ಹಸಿರಿನೊಡನೆ ಒಗರು ಅಂಟಿನೊಳಗೆ ವಾಯು
ಎಲ್ಲ ಕಂಡ ಬದುಕು ಸಿಹಿ ಹೂರಣದಂತೆ  

ಹಿರಿಯರಿಗೆ ಧೂಪ, ಗೋವಿನ ಪೂಜೆ
ನೇಗಿಲ ಯೋಗಿಯದು ಭೂಮಿ ಉಳುವಿಕೆ 
ದಾನ ಧರ್ಮದೊಡನೆ ಪಂಚಾಂಗ ಶ್ರವಣ
ವಿವಿಧ ರೂಪ ಕಂಡ ಬದುಕು ಯುಗಾದಿ   

ಚಿಗುರಿನೊಡನೆ ಕನಸು ಬೆಳಗಲು
ಬಿಸಿಲ ಬೆಳಕು ಮನವ ತಣಿಸಲು
ಚೈತ್ರದ ಚಿಲುಮೆಯ ಯುಗಾದಿ
ವರುಷ ವರುಷ ತರಲಿ ಹರುಷದ ಹೋಳಿಗೆ 

 ಎಲ್ಲರಿಗೂ "ಯುಗಾದಿ" ಹಬ್ಬದ ಶುಭಾಶಯಗಳು ... 


ಚಿತ್ರ: ನೆಟ್ ಲೋಕ


Thursday, March 21, 2013

-ತೈಲವಿದ್ದಂತೆ ಹಣ-


 -ತೈಲವಿದ್ದಂತೆ ಹಣ-

                         ಚಿತ್ರ: ಮನಸು

ತೈಲ ಇರುವ ಬಾವಿಯಲ್ಲಿ
ಹಣದ ಹೊಳೆಯೇ ಹರಿವುದು
ಆರ್ಥಿಕ ನೆಲೆಯ ನೀಡುವಲ್ಲಿ
ದೇಶ ಶಾಂತಿ ನಿಲುವುದು...!!

ಹಳ್ಳ ತೋಡಿ ಬಾವಿ ಮಾಡಿ
ಹಿಂಡಿ ಹಿಪ್ಪೆ ಮಾಡಿ ಹೀರುತ
ದೇಶದ ಸಂಪತ್ತು ಹೆಚ್ಚಿಸವಲ್ಲಿ
ಭೂಮಿ ತಾಯಿ ನಲುಗುವಳು..!!

ತೈಲದಂತೆ ಮನುಜನಾರು
ಕಷ್ಟಗಳ ಹೊರುವನೋ
ಬೆಲ್ಲದುಂಡೆಯಾಗಿ ತಾನು
ಇರುವೆ ಮಧ್ಯೆ ನಿಲುವನು...!!!

ಎಣ್ಣೆ ಇರುವ ದೀಪದಂತೆ
ಸದಾ ಬೆಳಗುತಿರುವರು
ಮನೆಮಂದಿಗೆ ಬೆಳಕಾಗಿ
ಹೊರೆಗಳ ತಾ ಹೊರುವನು...!!

ಹಣದ ಹೊಳೆ ಹರಿದರಂತೂ
ಮನೆ-ಮನಗಳು ತಾ ಕುಣಿವವು
ಇದ್ದರೆ ಇರುವ ಬಂಧಗಳೆಲ್ಲಾ
ಇರದಿರೆ ತಾ ಕಿತ್ತು ಹರಿವವು..!!

ಮನುಜನ ಹಣ ತೈಲದಂತೆ
ಬೆಳಕಿಗೂ ಬೇಕು ತೈಲವಂತೆ
ಪ್ರಗತಿ, ಚಲನೆ ಸಕಲಕೂ ಬೇಕು
ಹಣವಿದ್ದವ ತೈಲ ಬಾವಿಯಂತೆ..!!

                        ಚಿತ್ರ: ಅಂತರ್ಜಾಲ

Thursday, March 7, 2013

ಮುಸುಕಿನಿಂದೊರಗೆ


ಮುಸುಕಿನಿಂದೊರಗೆ



ಹಸಿರ ಹೊದಿಕೆಯಲಿ
ಬೆಚ್ಚಗಿದ್ದವಳ ಬಿಚ್ಚಿ
ಕೆಂಡದೋಕುಳಿಯಲಿ
ಸುಟ್ಟು ಬೇಯಿಸಿದರು
ಇಂಗಳದ ಕಾವು 
ತಡೆಯುವ ಮುನ್ನ
ಉಪ್ಪು-ಖಾರ ಬೆರೆಸಿ
ಸೇವಿಸಿದರೆನ್ನ...

ಬೆಂದ ಮೈಯ್ಯಿ
ಖಾರದುರಿಯ
ಬೇನೆಯಲಿದ್ದವಳನು
ಸವಿದು ಸವಿದು
ಜಗಿದು ಜಗಿದು
ತಿನ್ನುತಲಿದ್ದರು....

ಹೊಟ್ಟೆ ಹೊರೆಯಲು
ಬಾಯಿ ರುಚಿಸಲು
ನಾನು ಬೇಕು
ನನ್ನ ಸುಡಲೇಬೇಕು
ಬದುಕು ಬಯಸಿದಾಗಲ್ಲ
ಇನ್ನೊಬ್ಬರ ಜೀವನಕೆ
ಮತ್ತೊಬ್ಬರು ಸಾಯಲೇಬೇಕು...

ಚಿತ್ರ ಕೃಪೆ: ಅಮೋಲ್ ಪಾಟೀಲ್

Wednesday, February 13, 2013

ಪರಿಸರ ಸುಂದರ, ನಾವು ಬೆಳೆಸಿದರೆ..!!?


Indian Institute of Engineers (Kuwait)ನ ವತಿಯಿಂದ ಒಂದು ದಿನದ ಪರಿಸರ ಸಂರಕ್ಷಣೆಯತ್ತ ಎಲ್ಲರನ್ನೂ ಕೊಂಡೊಯ್ಯುವ ವಿಚಾರವಾಗಿ ಒಂದು ಮೈಲ್ ಬಂದಾಗ ಶುಕ್ರವಾರ ಬೆಳಿಗ್ಗೆ ಬೇಗ ಎದ್ದು ಹೋಗಲು ಆಗುತ್ತಾ? ಎಂದು ಯೋಚಿಸಿ ಕೊನೆಗೆ ಹೋಗೋಣ ಸದಾ ಬರ್ತ್ ಡೆ, ಮದುವೆ ಅದು ಇದು ಅಂತೇಳಿ ಪಾರ್ಟಿಗಳಿಗೆ ಹೋಗ್ತೀವಿ ಇಂತಹದಕ್ಕೆ ಹೋಗಬಾರದೆ ಎನ್ನಿಸಿ, ಕೊನೆಗೆ ಬೆಳಗ್ಗೆ ೬ಕ್ಕೆ ಎದ್ದು ತಯಾರಾಗಿ ಸಾಲ್ಮಿಯ (ಕುವೈತಿನ ಒಂದು ಸ್ಥಳ) ಅಲ್ಲಿಗೆ ಎಲ್ಲರೂ ಬರುವಂತೆ ಹೇಳಿದ್ದರು ನಮ್ಮ ಮನೆಯಿಂದ ೩೦ ಕಿ.ಮೀ ದೂರವಿದ್ದರೂ ನಮಗೇನು ಪರಿಸರದೊಡನೆ ಒಡನಾಟ ಬೇಕಿತ್ತು ಹೊರಟೇಬಿಟ್ಟೆವು. 

೭.೩೦ರಷ್ಟರಲ್ಲಿ ಎಲ್ಲರೂ ಒಂದು ಬಸ್ ನಲ್ಲಿ ಮೆಸ್ಸಿಲ್ಲಾ ಮಾರ್ಗವಾಗಿ ಹೋಗುತ್ತಲೇ ಅಲ್ಲೇ ಕಾದಿದ್ದ K'S PATH (Kuwait Society for the Protection of Animals and Their Habitat) ಈ ಸಂಸ್ಥೆಯ ಮೂಲಕವೇ ಪರಿಸರ ಸಂರಕ್ಷಣೆಯ ಸ್ಥಳವೊಂದನ್ನು ಸ್ವಚ್ಚಗೊಳಿಸುವ ವ್ಯವಸ್ಥೆ ನೆಡೆದಿದ್ದು. K'S PATH ಸಂಸ್ಥೆಯ ಸ್ವಯಂಸೇವಕರು ನಮ್ಮೆಲ್ಲ ಹೆಸರುಗಳನ್ನು ನೊಂದಾಯಿಸಿಕೊಂಡು ೬ನೇ ರಿಂಗ್ ರಸ್ತೆಯ ಮೂಲಕ ಅವರನ್ನು ಹಿಂಬಾಲಿಸುವಂತೆ ಬಸ್ ಡ್ರೈವರ್ ಗೆ ಹೇಳಿದರು. ನಾವು ಏನು ಮಹಾ ಘನಂದಾರಿ ಕೆಲಸ ಮಾಡುತ್ತೇವೋ ಗೊತ್ತಿಲ್ಲ. ಅದು ಎಂತಹ ಸ್ಥಳವೋ, ಅಚ್ಚುಕಟ್ಟಾಗಿ ಮಲಗಬಹುದಿತ್ತೇನೋ ಎಂದು ಮನಸಲ್ಲೇ ಗೊಣಗಿಕೊಳ್ಳುತ್ತಿದ್ದೆ.

 ಕುವೈತ್ ಸಿಟಿಯಿಂದ ಸುಮಾರು ೫೦ ಕಿ.ಮೀ ದೂರವಿರುವ ಅಬ್ದಲ್ಲಿಯ (Abdelliya) ಎಂಬ ಹೊರವಲಯದಲ್ಲಿರುವ ಒಂದು ಏರಿಯಾಗೆ ಹೋಗುವ ಮಾರ್ಗ ಮಧ್ಯ ಒಂಟೆಗಳು, ಕುದುರೆ, ಕುರಿಗಳ ಹಿಂಡು ಜೊತೆಗೆ  ಹೀಗೆ ಒಂದೊಂದೆ ನೋಡಿಕೊಂಡು ಹೋಗುತ್ತಾ ಇದ್ದಂತೆ ದಾರಿಯ ಮಧ್ಯದಲ್ಲಿ ಫಾತಿಮಾ ಮಹಲ್ ಎಂದು ಯಾರೋ ಕುವೈತಿ ಕುಟುಂಬದವರು ಕಟ್ಟಿಸಿರುವ ಮಾಸ್ಕ್ ಕಣ್ಣಿಗೆ ಬಿತ್ತು. ತಾಜ್ ಮಹಲ್ ಮಾದರಿಯಲ್ಲೇ ಇದೆ ಅದೇ ವಿನ್ಯಾಸವುಳ್ಳ ಈ ಮಾಸ್ಕ್ ನೋಡಿ ತಾಜ್ ಮಹಲ್ ಕಂಡಂತಾಯ್ತು... 
ಮಂಜು ಮುಸುಕಿದ ಹಾದಿಯಲ್ಲಿ ಕಂಡ ಮಹಲ್ 

ಸ್ವಲ್ಪ ಸಮಯದ ನಂತರ ಫೇಸ್-೧ ಹೆಬ್ಬಾಗಿಲಿನಲ್ಲಿ ಸೆಕ್ಯುರಿಟಿ ಜನರೊಂದಿಗೆ  K'S PATH ಸ್ವಯಂ ಸೇವಕರು ಮಾತನಾಡಿ ನಮ್ಮೆಲ್ಲರನ್ನು ಒಳಗೆ ಕರೆದುಕೊಂಡು ಹೋದರು ಒಳ ಹೋಗುತ್ತಿದ್ದಂತೆ ಅದೇನೋ ಸ್ವಚ್ಚಂದ, ಗಿಡ ಮರಗಳು ಹೂಬಿರಿದು ನಗುವ ಭಾವ ನಮ್ಮನ್ನೆಲ್ಲಾ ತುಂಬು ಹೃದಯದಿಂದ ಬರಮಾಡಿಕೊಂಡವು.
                             
ಕುವೈತಿಗೆ ಬಂದು ಏಳು ವರ್ಷಗಳಾದರು ನಾನು ಈ ಸ್ಥಳದ ಬಗ್ಗೆ ನಿಜಕ್ಕೂ ಕೇಳಿರಲಿಲ್ಲ. ಕುವೈತಿ ದೇಶದ ಅತಿ ಪ್ರಸಿದ್ಧ ಕಂಪನಿ ಕುವೈತ್ ಆಯಿಲ್ ಕಂಪನಿಗೆ ಸೇರಿದ ಭೂಮಿಯಲ್ಲಿ ಸುಮಾರು ಒಂದು ಮಿಲಿಯನ್ ಸ್ಕೊಯರ್ ಮೀಟರಿನಷ್ಟು ಫೇಸ್-೧ಗೆ ಮೀಸಲಿಟ್ಟು ಫೇಸ್-೨ಗೆ ಸುಮಾರು ೨ ಮಿಲಿಯನ್ ಸ್ಕೊಯರ್ ಮೀಟರಿನಷ್ಟು ಸ್ಥಳವನ್ನು ಪ್ರಕೃತಿಗೆಂದೇ ಮೀಸಲಿಟ್ಟಿದ್ದಾರೆ. ಈ ಪ್ರದೇಶವನ್ನು K'S PATH (Kuwait Society for the Protection of Animals and Their Habitat)ಇವರ ಸಹಯೋಗದೊಂದಿಗೆ ಇಡೀ ಭೂಪ್ರದೇಶವನ್ನು  ಸೂಕ್ಷ್ಮರೀತಿಯಲ್ಲಿ ಪರಿಶೀಲಿಸಿ ಸ್ವಚ್ಚತೆಯನ್ನು ಮಾಡುತ್ತಲೇ ಬಂದಿದ್ದಾರೆ.

 ಹಿಂದೆ ಹಲವು ಬಾರಿ ಕುವೈತ್ ಮತ್ತು ಇರಾಕ್ ಯುದ್ಧದ ಸಂದರ್ಭದಲ್ಲಿ ಬಿದ್ದಿದ್ದ ಗುಂಡು ಮದ್ದುಗಳನ್ನು ಸಹ ಹೊರತೆಗೆದು, ಕಸಕಡ್ಡಿಗಳನ್ನನ್ನೆಲ್ಲಾ ಬೇರ್ಪಡಿಸಿ ಒಂದು ಸ್ವಚ್ಚಂದ ನೆಲೆಯನ್ನಾಗಿ ಸೃಷ್ಟಿಸಿದ್ದಾರೆ. ಈ ಪ್ರದೇಶದಲ್ಲಿ (ಫೇಸ್-೧) ಇಲ್ಲಿ ಎರಡು ಕೃತಕ ಕೊಳಗಳನ್ನು ನಿರ್ಮಿಸಿದ್ದಾರೆ. ಈ ಕೊಳದಲ್ಲಿ ಲೀಲಾಜಾಲವಾಗಿ ನಗುವ ಆ ನೀರೆಯನ್ನು ಕಂಡರೆ ಈ ಕೊಳ ಕೃತಕವಾದದ್ದಲ್ಲ ನೈಸರ್ಗಿಕವಾಗೇ ಈ ಮರುಭೂಮಿಯಲ್ಲಿ ಹುಟ್ಟಿದವಳೇನೋ ಎಂದೆನಿಸುತ್ತದೆ. ಇದೇ ಕೊಳಕ್ಕೆ ಹಲವಾರು ಪಕ್ಷಿಗಳು ವಲಸೆ ಬಂದು ಹೋಗುತ್ತಿರುತ್ತವೆ. ಈ ಕೊಳದ ಈ ಕೊಳದ ಸುತ್ತಲೆಲ್ಲ ಹಸಿರು ಜಿನುಗುಡುತ್ತಲಿವೆ ಜೊತೆಗೆ ದುಂಬಿಗಳ ಕಲರವ ಎಲ್ಲರ ಕಿವಿಯನ್ನು ಇಂಪುಗೊಳಿಸುತ್ತದೆ.



ಮೊಟ್ಟ ಮೊದಲಿಗೆ ಕಂಡ ಕೊಳ ಮನಸ್ಸಿಗೆ ಮುದ ನೀಡಿತ್ತು ಸ್ವಲ್ಪ ಸಮಯದ ನಂತರ ಎಲ್ಲರಿಗೂ ಕೈ ಚೀಲಗಳು, ಕಸವನ್ನು ತುಂಬುವ ಚೀಲಗಳನ್ನು ಸಹ ಕೊಟ್ಟರು. ಇಲ್ಲಿ ಈಗಾಗಲೇ ಸ್ವಚ್ಚಂದವಾಗಿರುವ ಸ್ಥಳ. ಅದನ್ನು ಏಕೆ ಸ್ವಚ್ಚಗೊಳಿಸಬೇಕು ಎಂದುಕೊಳ್ಳುತ್ತಿರಬಹುದು. ಈ ಮರುಭೂಮಿಯಲ್ಲಿ ಗಾಳಿ ಹೆಚ್ಚು ಒಮ್ಮೊಮ್ಮೆ ಬಿರುಗಾಳಿ ಎಲ್ಲಿಯೋ ಇರುವ ಕಸಕಡ್ಡಿಗಳನ್ನು ಹೊತ್ತು ಇನ್ನೊಂದೆಡೆ ಸರಾಗವಾಗಿ ತಂದು ಬಿಸುಡುವಂತ ಕೆಲಸ ಈ ವಾಯುದೇವ ಮಾಡಿಮುಗಿಸುತ್ತಾನೆ. ಈ ಗಾಳಿಯ ಜೊತೆಗೆ ನೇಸರನ ತೊಟ್ಟಿಲನ್ನಾಗಿಸಲು ಹೊರಟಿರುವ ಈ ಸ್ಥಳದಲ್ಲಿ ಮನುಷ್ಯನೂ ಕೆಲಸ ಮಾಡಬೇಕಾಗುತ್ತದೆ ಅಲ್ಲವೇ? ಅಲ್ಲಿ ಹಲವು ಗಿಡ ಮರಗಳನ್ನು ನೆಟ್ಟು, ಅದಕ್ಕೆಂದೇ ಹನಿ ನಿರಾವರಿಯ  ವ್ಯವಸ್ಥೆಯನ್ನೂ ಸಹ ಮಾಡಿದ್ದಾರೆ ಇವೆಲ್ಲಾ ಕೆಲಸಗಳನ್ನು ಮಾಡುವಾಗ ಈ ಮೂಢ ಮಾನವ ತಾನು ತಂದಿದ್ದ ಹೂಗಿಡಗಳ ಪಾಟ್, ಪ್ಲಾಸ್ಟಿಕ್ ಚೀಲಾ ಎಲ್ಲವನ್ನೂ ತನ್ನ ಕೆಲಸ ಮುಗಿದ ಮೇಲೆ ಅಲ್ಲೇ ಬಿಟ್ಟು ಹೋಗಿದ್ದ, ಜೊತೆಗೆ ಟೈಂ ಪಾಸ್ಗೆ ಸಿಗರೇಟ್, ಪೆಪ್ಸಿ ಎಂದು ಇವೆಲ್ಲವನ್ನು ತಿಂದು ಕುಡಿದು ಅಲ್ಲಿಯೇ ಬಿಸಾಕಿದ್ದರು. ಇಂತಹವನ್ನೆಲ್ಲಾ ನಾವುಗಳು ಸ್ವಚ್ಚಗೊಳಿಸುವ ಸಣ್ಣ ಪ್ರಯತ್ನ ಮಾಡಿದೆವು.




ಹಾಗೆ ನಾವು ಸುಮಾರು ೩೦ ಜನರಲ್ಲಿ ೩ ಗುಂಪು ಮಾಡಿ ಸುತ್ತುವರೆದೆವು. ಮುಂದೆ ಸಾಗಿದಂತೆ ನೆಲದಲ್ಲಿ ಹೆಜ್ಜೆ ಇಡಲೂ ಭಯ ಪಾಪ ಈ ಹುಳಹುಪ್ಪಟಗಳು ತಮಗಾಗೇ ಗೂಡುಕಟ್ಟಿಕೊಂಡಿರುವವನ್ನು ಎಲ್ಲಿ ತುಳಿದು ಬಿಡುತ್ತೇವೋ ಎಂಬ ಭಯ. ಹಾವುಗಳು, ಹಲ್ಲಿಗಳು, ಇರುವೆ, ಇಲಿ, ಹೆಗ್ಗಣ ಹೀಗೆ ಹಲವಾರು ಪ್ರಾಣಿಗಳು ತಮ್ಮ ತಮ್ಮ ಮನೆಗಳನ್ನು ಸ್ವತಂತ್ರದಿಂದ ಸುಂದರವಾಗಿ ಕಟ್ಟಿ ಕೊಂಡಿದ್ದವು.  ಸುತ್ತಲಿನ ಭೂಪ್ರದೇಶವನ್ನು ಸುತ್ತುವರಿದು ಕೈಗೆ ಸಿಕ್ಕಿದ ಗಾಜು,ಚೀಲಗಳು, ಕಬ್ಬಿಣ ಸಲಾಕೆಗಳು, ಟೈಯರ್,ಪ್ಲಾಸ್ಟಿಕ್ ಸಾಮಾನುಗಳು ಹೀಗೆ ಸುಮಾರು ಕಸವನ್ನು ಶೇಖರಿಸಿದೆವು. 
ಸಿಗರೇಟ್ ಸೇದಿ ಉಳಿದ ತುಂಡು ಮಣ್ಣಿನೊಳಗೆ ಬೆರೆತುಹೋಗಲು ಸುಮಾರು ೪೦೦ ವರ್ಷಗಳು ಬೇಕಾಗುತ್ತದೆ ಎಂದರೆ ಊಹಿಸಿಕೊಳ್ಳಿ. ಅಂತಹ ವಸ್ತುಗಳು ಮಣ್ಣಿನಲ್ಲಿ ಸೇರಿಕೊಂಡು ಮಣ್ಣಿನಲ್ಲಿರುವ ಸತ್ವವನ್ನೇ ನುಂಗಿಬಿಡುತ್ತವೆ. ಇಷ್ಟೆಲ್ಲಾ ಕೆಡಕಿನಲ್ಲೂ ಪ್ರಕೃತಿಗೆ ಮೀಸಲಿಟ್ಟ ಸ್ಥಳವನ್ನು ಬಿಡಲಾರರು. ಸದಾ ಅಲ್ಲಿ ಬರುವ ಪಕ್ಷಿಗಳನ್ನು ಬೇಟೆಯಾಡಲು ಬೇಲಿ ನುಸುಳಿ ಬರುವಂತ ಬೇಟೆಗಾರರೂ ಹೆಚ್ಚೆಂದು ಅಲ್ಲಿನ ನಿರ್ವಾಹಕರು ಹೇಳುತ್ತಿದ್ದು ಕೇಳಿ ಬೇಸರವೆನಿಸಿತು. 
                                          
ಬೇಟೆಗಾರರು ಹಾರಿಸಿದ್ದ ಗುಂಡು ನನ್ನ ಕೈಗೆ ಸಿಕ್ಕಿತು.
 


KOC ಎಂಬ ಕಂಪನಿ K’S Path ಸಹಯೋಗದೊಂದಿಗೆ ಪ್ರಾಣಿಗಳ ಸಹಜ ವಾಸಸ್ಥಾನ ಮಾಡಬೇಕೆಂದು ಈ ಭೂ ಪ್ರದೇಶವನ್ನು ಅಚ್ಚುಕಟ್ಟಾದ ಸ್ಥಳವನ್ನಾಗಿಸಿ ಪ್ರಾಣಿ, ಪಕ್ಷಿ, ಜೀವಜಂತುಗಳಿಗೆ ಅನುವು ಮಾಡಿಕೊಟ್ಟಿದೆ. ಇಂತಹ ಯೋಜನೆಯನ್ನು ಹಮ್ಮಿಕೊಂಡಿರುವು ಪ್ರಪಂಚದಲ್ಲೇ ಇದೇ ಮೊದಲ ಕಂಪನಿ ಎಂದು ಹೇಳುತ್ತಾರೆ. KOC ನೈಸರ್ಗಿಕವಾಗಿ ದೊರೆಯುವ ತೈಲ ಸಿರಿಯನ್ನು ತೆಗೆದು ಬಳಸುತ್ತಿರುವುದರಿಂದ ಈ ಭೂಮಿಯ ಫಲವತ್ತತೆ ನಶಿಸಿ ಹೋಗುವುದನ್ನು ಮತ್ತೊಂದೆಡೆ ನೈಸರ್ಗಿಕ ಸವಲತ್ತುಗಳನ್ನು ಸೃಷ್ಟಿಸುತ್ತಿವೆ ಇದು ಶ್ಲಾಘನೀಯ. ಎಲ್ಲರೂ ಹೇಳಬಹುದು ಆಯಿಲ್ (ತೈಲ) ದುಡ್ಡು ಇನ್ನೇನು ಮಾಡುತ್ತಾರೆ  ಮಾಡಲಿ ಬಿಡಿ ಎಂದು, ನಿಜ ಒಪ್ಪಬೇಕಾದ್ದೆ ಆದ್ರೆ ದುಡ್ಡು ಇದ್ದು ಎಷ್ಟು ಜನ ಯಾರು ಯಾರು ಏನು ಮಾಡುತ್ತಾರೆ ಹೇಳಿ. ಇಲ್ಲಿ ಕೆಲಸಗಳಿಗೆಂದೆ ಹಲವಾರು ವಿಜ್ಞಾನಿಗಳು, ಪರಿಸರ ತಜ್ಞರು, ಇಂಜಿನಿಯರುಗಳು ಬಹಳಷ್ಟು ಕೆಲಸ ಮಾಡುತ್ತಿದ್ದಾರೆ ಮುಂದೊಂದು ದಿನ ಈ ಪ್ರದೇಶ ಮರುಭೂಮಿಯ ಮಲೆನಾಡಾಗುವುದಂತೂ ಸತ್ಯ.
   
ಪ್ರಾಣಿ,ಪಕ್ಷಿ, ಗಿಡಮರಗಳ ನೆಲೆವೀಡಾಗಲೆಂದು ಮಾಡಹೊರಟಿರುವ ಈ ಸ್ಥಳವನ್ನು ಒಂದೆರಡು ಘಂಟೆಗಳ ಕಾಲ ಸ್ವಚ್ಚಗೊಳಿಸಿ ಬಂದಿದ್ದಕ್ಕೇನು ನಮ್ಮಗಳಿಗೆ ತೊಂದರೆಯಾಗಿಲ್ಲ ಅಲ್ಲಿರುವ ಗಿಡ ಮರ, ಜೀವಜಂತುಗಳು, ಎಲ್ಲ ವಾಸಸ್ಥಾನ ಹೇಗಿದೆ ಯಾವರೀತಿ ಬೆಳೆಯುತ್ತಿವೆ. ಪ್ರಕೃತಿ ಒಂದು ಪಾಠವಿದ್ದಂತೆ ನಮಗೆ ಗೊತ್ತಿಲ್ಲದನ್ನು ಕಲಿಸುತ್ತದೆ. ಅಂದು ನಮ್ಮ ಜೊತೆಯಲ್ಲಿ ಹಲವು ಕುವೈತಿ ಜನರೂ ಕೂಡಾ ಬಂದಿದ್ದರು ಅವರೊಂದಿಗಿನ ಒಡನಾಟ ಒಂದೊಳ್ಳೆ ಅನುಭವವನ್ನು ಕೊಟ್ಟಿತು.


ಗೂಡುಗಳು...

ಕೊನೆಯಲ್ಲಿ ಎಲ್ಲರೂ ಹೊರಡುವ ಮುನ್ನ ನಮ್ಮ ಜೊತೆಗೆ ಇದ್ದ ಕುವೈತಿ ಇಂಜಿನಿಯರ್ ಒಂದು ಮಾತು ಹೇಳಿದರು "ಮನುಷ್ಯ ಈ ಪ್ರಪಂಚದ ಯಾವುದೇ ಮೂಲೆಯಲ್ಲಿರಲಿ ಅವನು ಒಂದಿಲ್ಲೊಂದು ದಿನ ಭೂಮಿಯ ಒಳಗೆ ಹೂತುಹೋಗುತ್ತಾನೆ ಅಂತಹದರಲ್ಲಿ ಎಲ್ಲಿದ್ದರೂ ನಮ್ಮ ಜೊತೆ ಇರುವ ಪ್ರಕೃತಿಗೆ ನಮ್ಮ ಕೈಲಾದ ಕೆಲಸ ಮಾಡಲೇಬೇಕು" ಎಷ್ಟು ನಿಜ ಅನ್ನಿಸಿತು. ಇದು ನಮ್ಮ ಊರಲ್ಲ ಆದರೂ ನಮಗೆ ಅನ್ನ ಕೊಡುತ್ತಿರುವ ಊರು ಗೌರವಿಸಲೇಬೇಕು ನಮ್ಮ ಕೈಲಾದದ್ದನ್ನು ಮಾಡಲೇಬೇಕು ಎಂದೆನಿಸಿತು. 
 ಕಡಿಮೆ ಸಿಹಿಯುಳ್ಳಂತಹ ಖರ್ಜೂರದ ಮರಗಳು
ನಾವು ಎಲ್ಲಿದ್ದರೇನು, ಹೇಗಿದ್ದರೇನು ಪ್ರಕೃತಿ ಎಂಬವಳ ಮಡಿಲಲ್ಲೇ ಬದುಕಬೇಕು. ಆ ಪ್ರಕೃತಿಗೆ ಹಾರೈಕೆ ಮಾಡುತ್ತಲೇ ಇರಬೇಕು ಇಲ್ಲವಾದರೆ ಒಮ್ಮೆ ಮುನಿಸ್ಯಾಳು ಸುನಾಮಿ, ಭೂಕಂಪ ತಂದ್ಯಾಳು.


KOCಗೆ ಒಳಪಟ್ಟ ಭೂಪ್ರದೇಶದಲ್ಲಿ ಸುಮಾರು ೧೨% ಭೂಭಾಗವನ್ನು ಪರಿಸರಕ್ಕೆ ಮೀಸಲಿಟ್ಟಿರುವುದು ಖುಷಿಯ ವಿಷಯ. ಇಂತಹುದೇ ಕೆಲಸಗಳನ್ನು ಸರ್ಕಾರ ಮತ್ತು ಕಂಪನಿಗಳು ಮಾಡುತ್ತ ಬಂದರೆ ನಿಜಕ್ಕೂ ಸಂತಸ ಮತ್ತು  ಪ್ರಕೃತಿ ಮಾತೆಗೆ ಕೊರತೆ ಎಂಬುದು ಬರುವುದಿಲ್ಲ ಎಂದೆನಿಸುತ್ತದೆ.