Tuesday, July 19, 2011

ಸಾರ್ಥಕ ಬದುಕು


@ಚಿತ್ರ ದಿಗ್ವಾಸ್
----------

ಬಿಸಿಲ ಕಾವು ರಾಚಿದರೇನು
ಧೂಳು ಮೈಯ್ಯನೆರಗಿದರೇನು
ರಾಶಿ ರಾಗಿ ತುಂಬಿ ತುಳುಕಿದರು
ಸ್ವಚ್ಚಗೊಳಿಸೋ ಕಾರ್ಯ ನಮ್ಮದಲ್ಲವೇನು..?

ದಿನದ ಹಸಿವು ಕಾಡದಿರದು
ಅದಕೆ ನೋಡಿ ನಮ್ಮ ದುಡಿಮೆ
ಏನು ಇರುವುದೋ ಅನ್ನದ ಮಹಿಮೆ
ನಮ್ಮ ಶ್ರಮದ ಹಿಂದೆ ಹಲವು ಭಾವ
ಮನುಜ ಅದನು ನೆನೆದರೆ ನಮ್ಮ ಬದುಕು ಸಾರ್ಥಕ...

ಕಷ್ಟ-ನಷ್ಟಗಳ ಆಗರ ರೈತ ಜೀವನ
ಧೀರ್ಘ ಮಳೆ, ಬರಗಾಲದ ಹೊಳೆ
ಅಧಿಕ ಕಳೆ, ಬೆಳೆದ ಬೆಳೆ
ಎಲ್ಲ ಎಣಿಸಿ ಶೃಂಗರಿಸಬೇಕಿದೆ ಈ ಕಣ...

ಮುಸುಕು ವೇಷ, ಮಸುಕು ನೋಟ
ಧೋ ಎನುವ ಧೂಳಿನ ಆರ್ಭಟ
ಮನೆ-ಹೊಲ ಕೆಲಸ ಸರಿದೂಗಿಸಿ ನಡೆಸುವ
ತೃಪ್ತಿ ಜೀವನ ಬಲ್ಲವನೇ ಬಲ್ಲ.....!!!


Thursday, July 14, 2011

ಮೂಕವೇದನೆ


ನಾಯಿ ಏಕೋ ಮಣ್ಣು ಕೆರೆಯುತ್ತಿದೆ, ಅಲ್ಲೇ ಕೂತು ಅಳುತ್ತಿದೆ. ಮಾತು ಬಾರದೆ ಮೂಕವೇದನೆಯಲ್ಲಿದೆ. ದಾರಿ ಹೋಕರು ಯಾರೂ ಅದನ್ನು ಗಮನಿಸಲೇ ಇಲ್ಲ. ಎರಡು ಮೂರು ದಿನಗಳು ಕಾದ ನಾಯಿ ಬೇಸರದಿಂದ ಇದ್ದ ಜಾಗ ಬಿಟ್ಟು... ಓಡಿತು ಅಲ್ಲೇ ಪಕ್ಕದ ಊರಲ್ಲಿ ಯಾರದೋ ಮನೆ ಬಾಗಿಲಲಿ ಕಣ್ಣೀರಿಡುತ್ತ ಸಪ್ಪಗೆ ಕೂರುತ್ತಿತ್ತು, ಬಾಲ ಅಲ್ಲಾಡಿಸುತ್ತಿತ್ತು. ಮನೆಯೊಳಗಿನ ಒಡಯರನ್ನು ಕರೆದೊಯ್ಯುವ ಸನ್ನೆ ಮಾಡುತ್ತಿತ್ತು... ಮನೆಯವರು ಎಲ್ಲೋ ನಾಯಿ ಹಸಿವಾಗಿದೆ ಎಂದು ಅನ್ನ ನೀಡಿದರೂ ತಿನ್ನದೇ ಅಳುತ್ತಿತ್ತು. ಮೂಕ ಪ್ರಾಣಿಯ ಈ ವೇದನೆ ಮನುಷ್ಯನಿಗೆಲ್ಲಿ ಅರ್ಥವಾಗಬೇಕು. ಯಾರೂ ಅರಿತುಕೊಳ್ಳುವ ಹಾಗೆ ಕಾಣುತ್ತಿಲ್ಲವೆಂದು ಆ ಮನೆ ಒಡೆಯನ ಪಂಚೆಯನ್ನು ಬಾಯಲ್ಲಿ ಕಚ್ಚಿ ಎಳೆದೊಯ್ಯಲ್ಲು ಯತ್ನಿಸುತ್ತಿದ್ದಂತೆ ಆ ಮನೆಯವರು ಒಮ್ಮೆಲೆ ಅರಿತು ನಾಯಿ ಸಾಗಿದ ದಾರಿಯಲ್ಲೆ ನೆಡೆದರು, ಮೂಕ ಪ್ರಾಣಿ ಸ್ವಲ್ಪ ದೂರಕ್ಕೆ ಕರೆದುಕೊಂಡು ಹೋಗಿ ನೆಲವನ್ನೇ ಕೆರೆಯುತ್ತ ರೋಧಿಸುತ್ತಿತ್ತು.

ಇದನ್ನು ಕಂಡ ಆ ಮನೆಯ ಯಜಮಾನ ಅನುಮಾನದಿಂದ ನಾಲ್ಕಾರು ಜನಕ್ಕೆ ತಿಳಿಸಿ, ನಂತರ ಪೋಲೀಸರಿಗೆ ತಿಳಿಸಿದರು. ಆಗಲೇ ತಿಳಿದಿದ್ದು ಅಲ್ಲೊಂದು ಹೆಣ್ಣು ಶವವಾಗಿ ಮಲಗಿದ್ದಾಳೆಂದು. ಮಣ್ಣೊಳಗೆ ಮಣ್ಣಾಗಿದ್ದ ದೇಹ ಹೊರತೆಗೆಯುತ್ತಿದ್ದಂತೆ ನಾಯಿ ಆ ಹೆಣ್ಣಿನ ಪಾದದಡಿ ನಮಸ್ಕರಿಸುತ್ತ ಮಲಗಿದ್ದನ್ನು ಕಂಡು ಜನರೆಲ್ಲ ಮೂಕರಾದರು.

ನಂತರದ ಬೆಳವಣಿಗೆಯಲ್ಲಿ ತಿಳಿದಿದ್ದು ಆ ಹೆಣ್ಣು ತುಂಬು ಗರ್ಭಿಣಿ, ಪ್ರೀತಿಸಿ ಮದುವೆಯಾಗಿದ್ದಳು. ಶ್ರೀಮಂತ ಮನೆಯ ಹುಡುಗನನ್ನು ವರಿಸಿದ್ದೇ ತಪ್ಪಾಗಿ ಈ ಶಿಕ್ಷೆಯನ್ನು ಅನುಭವಿಸಬೇಕಾಗಿತ್ತು.

ನಾಯಿ ಇಷ್ಟು ನೋಯಲು ಕಾರಣ ಸತ್ತು ಹೋಗಿದ್ದ ಆ ಹೆಣ್ಣು ತಾನು ಆ ಮನೆಗೆ ಹೋದಾಗಿನಿಂದ ದಿನಾ ರಾತ್ರಿ ನಾಯಿಗೆ ಊಟವಾಕುತ್ತಳಿದ್ದಳಂತೆ. ಈ ಅನ್ನದ ಋಣ ಇಷ್ಟೆಲ್ಲಾ ಮಾಡಿಸಿದೆ.

ಮನುಷ್ಯನಲ್ಲಿ ಈ ಗುಣ ಬರಬಹುದೇ ಖಂಡಿತಾ ಇಲ್ಲ. ಮೂಕಪ್ರಾಣಿಗಳಲ್ಲಿರುವ ಪ್ರೀತಿ ನಮ್ಮಂತಹವರಲ್ಲಿ ಹೇಗೆ ಬರಲು ಸಾಧ್ಯ.

ಇದು ನಮ್ಮೂರಿಗೆ ಹತ್ತಿರ ಇರುವು ಯಾವುದೋ ಹಳ್ಳಿಯಲ್ಲಿ ನೆಡೆದಿತ್ತೆಂದು ನನ್ನಕ್ಕ ಹೇಳಿದ್ದಳು..

Tuesday, July 12, 2011

-ಉಸಿರು ಉಳಿಸಿ-

@ಚಿತ್ರ ದಿಗ್ವಾಸ್
--------

ಎಲ್ಲ ನವೀಕರಣದ ಹೆಸರು
ಆಡಂಬರದ ಡಾಂಬರೀಕರಣ
ಬೆಳೆವ ಜೀವಿಗಳು ಉಸಿರು
ಬಿಡಲಾಗದಂತ ಶಿಕ್ಷಾಭರಣ...!!!

ಭುವಿಯ ಗರ್ಭದಿಂದ
ಆಗಸನ ನೋಡಲಾರದಂತೆ
ಬಂಧಿಸಿಟ್ಟ ಈ ಮನುಷ್ಯ ಜೀವಕೆ
ಸಡ್ಡೆ ಹೊಡೆದು ನಿಂತಿಹೆವು ನಾವು...!!!

ಬೇರು ಭದ್ರಿಸಿ
ಹಸಿರ ರಕ್ಷಿಸಿ
ನಾನು ನನ್ನೊಡನೆ
ಎಳೆ ಕೂಸು ಬಂದಿಹೆವು ನೋಡಿ....!!!

ಭಾಸ್ಕರನು ಮೆಚ್ಚಿಹನು
ಎಳೆ ಎಳೆಯ ಬೆಳಕ ಚೆಲ್ಲಿಹನು
ಉಸಿರು ಉಳಿಯುವುದು
ದಾರಿ ಹೋಕರು ತುಳಿಯದಿದ್ದರೆ....!!!!

ಭಯವು ಮೂಡುತಿದೆ
ಬೆಂಕಿ ಚೆಂಡಿನಂತ
ವಾಹನಗಳು ಸಾಗುವುದೆಂದು
ಇರುವರೆಗು ನಮ್ಮನ್ನೇ ನಾವು ರಕ್ಷಿಸಿಕೊಳ್ಳಬೇಕಿದೆ...!!!

ಎಳೆ ಉಸಿರು ಚಿಗುರಿದೆ
ಬುಡ ಮೇಲು ಮಾಡದಿರಿ
ಹೇ ಮನುಜ ಮಿತ್ರರೇ
ನಿಮ್ಮಂತೆಹೇ ನಮ್ಮುಸಿರು...!!!

Sunday, July 3, 2011

ಗುಡಿಸಲಿನಲ್ಲೊಂದು ನಂದಾದೀಪ

ಮುಂದುವರಿದ ಕೊನೆಯ ಭಾಗ :- ದೀಪ-೩

ಪ್ರಶ್ನೆ ಪತ್ರಿಕೆ ಕಣ್ಣೆದುರಿದೆ, ಸ್ನೇಹಿತರಾಡಿದ ಮಾತು ಕಿವಿಯಲಿ ಗುನುಗುತಲಿದೆ, ಮೆದುಳು ಏಕೋ ಮಾತು ಕೇಳುತ್ತಿಲ್ಲ, ಕೈ ಕೆಲಸ ಮಾಡುತ್ತಿಲ್ಲ, ಒಮ್ಮೆ ಹೃದಯ ಮಾತ್ರ ಉತ್ತರಿಸುತ್ತೆ. "ಶಬರಿ ಇದು ಚಿಂತಿಸೋ ಸಮಯವಲ್ಲ ಹೃದಯದ ಮನಸ ಅರಿತುಕೊ, ಕೈಗೆ ಕೆಲಸಕೊಡು, ಗುನುಗುವ ಮಾತಿನ ಧನಿಗಳನ್ನ ಒಮ್ಮೆ ದೂರವಿಡು, ನಿನ್ನ ಧ್ಯೇಯದತ್ತ ಗಮನ ಕೊಡು" ಎಂದು ಹೃದಯ ಮನ ಬಿಚ್ಚಿ ಅವಳನ್ನ ತಟ್ಟಿ ಎಬ್ಬಿಸಿದೆ.

ತಟ್ ಎಂದು ಮನಸ್ಸನ್ನು ಬದಲಿಸಿದ ಶಬರಿ ಪ್ರಶ್ನೆಗಳನ್ನೆಲ್ಲಾ ಒಂದೊಂದಾಗಿ ಓದಿ ಮುಗಿಸಿ ಗೊತ್ತಿರುವ ಪ್ರಶ್ನೆಗಳಿಗೆ ಉತ್ತರಿಸಿದಳು. ಮನಸನ್ನು ಚಿಂತೆಗೀಡುಮಾಡದೆ ಪರೀಕ್ಷೆ ಮುಗಿಸಿದಳು. ರಜೆಯ ಮಜಾ ಪ್ರಾರಂಭವಾಯಿತು..!! ಯಾರೊಬ್ಬ ಸ್ನೇಹಿತರು ಇವಳತ್ತ ಮುಖ ಮಾಡಲಿಲ್ಲ, ಮನ ಮುದುಡಿದರೂ ಅಮ್ಮನೊಟ್ಟಿಗೆ ಕೆಲಸಕ್ಕೆ ನಿಂತಳು. ಪರೀಕ್ಷಾ ಫಲಿತಾಂಶಕ್ಕೆ ಇನ್ನೇನು ಕ್ಷಣಗಣನೆ ಅಮ್ಮನಿಗೂ ಗೊತ್ತಿತ್ತು ಈ ವಿಷಯ, ಅಪ್ಪ ಅಮ್ಮ ಇಬ್ಬರೂ ಕೂಡಿ ದೇವಸ್ಥಾನಕ್ಕೆ ಉದ್ದಾಂಡ ನಮಸ್ಕಾರವೂ ಮಾಡಿ ಬಂದಿದ್ದರು... ಮಗಳಲ್ಲಿ "ಮಗು ಈ ಸರಿ ಟಿವಿನೋರು ಬರ್ತಾರಾ...?" ಎಂದಷ್ಟೆ ಕೇಳಿದ್ದು....... ನೀನು ಚೆನ್ನಾಗಿ ಪರೀಕ್ಷೆಯಲ್ಲಿ ಉತ್ತರಿಸಿದ್ದೀಯಾ, ಕಳೆದಬಾರಿ ತರ ಕರ್ನಾಟಕಕ್ಕೆ ಮೊದಲನೆಯವಳಾಗುವಷ್ಟು ಚೆನ್ನಾಗಿ ಬರೆದಿದ್ದೀಯಾ ಇಲ್ಲವಾ...ಈ ತರಹದ ಪ್ರಶ್ನೆ ಕೇಳಲೇ ಇಲ್ಲ. ಏಕೆಂದರೆ ಚೆನ್ನಮ್ಮನಿಗೆ ಅಷ್ಟು ತಿಳುವಳಿಕೆ ಇಲ್ಲವೇ ಇಲ್ಲ.. ಮಗಳಿಗೆ ಅಮ್ಮನ ಮುಗ್ಧತನ ಅರ್ಥವಾಗಿತ್ತು. ಗೊತ್ತಿಲ್ಲಮ್ಮ ಬರೆಯೋದೇನೋ ಬರೆದಿದ್ದೀನಿ, ನೋಡೋಣ ಎಂದಷ್ಟೇ ಹೇಳಿದ್ದು. ಸಂಜೆ ಟಿವಿಯಲ್ಲಿ ಹೇಳ್ತಾರೆ ಯಾರು ಕರ್ನಾಟಕಕ್ಕೆ ಮೊದಲು ಎಂದು. ಶಬರಿಗೆ ಮನೆಗೆಲಸ ಮಾಡುವವರ ಮನೆಗೆ ಹೋಗಿ ಟಿವಿಯಲ್ಲಿ ನೋಡಬೇಕೆಂಬ ಆಸೆ ........ ಅಮ್ಮ ಅಪ್ಪನಿಗೂ ಹೇಳಿ ಎಲ್ಲರನ್ನು ಕರೆದುಕೊಂಡು ಸಂಜೆ ಬರುವ ವಾರ್ತೆಗೆ ಮಧ್ಯಾಹ್ನವೇ ಅವರ ಮನೆಯತ್ತ ಧಾವಿಸುತ್ತಾರೆ. ಶಾರದಮ್ಮನ ಮನೆ ಬೀಗ ಜಡಿದಿದ್ದಾರೆ. ಅಯ್ಯೋ ಎಂತಾ ಕೆಲಸ ಹಾಗೋಯ್ತು ಏನು ಮಾಡ್ಲಿ.... ಬೇಜಾರಲ್ಲೇ ಮನೆಗೆ ವಾಪಸ್ ಬಂದಾಗ ಮನೆಯತ್ತಿರ ಪತ್ರಿಕಾ ಬಳಗ ಕಾದಿತ್ತು. ಎಣಿಸಿದಂತೆ ಮಗಳು ಕರ್ನಾಟಕಕ್ಕೆ ಮೊದಲು..!! ಎಲ್ಲಾ ವಿಭಾಗಳಲ್ಲಿ ಇವಳಷ್ಟು ಹೆಚ್ಚು ಅಂಕ ಯಾರು ಗಳಿಸೇ ಇರಲಿಲ್ಲ. ಅಷ್ಟು ಉನ್ನತ ಅಂಕ ಗಳಿಸಿದ್ದವಳಿಗೆ ಪತ್ರಿಕಾ ಬಳಗ, ವಾಹಿನಿಯವರು ಎಲ್ಲರೂ ಮುಗಿಬಿದ್ದು ಅಭಿನಂದಿಸುತ್ತಲಿದ್ದಾರೆ. ಅಕ್ಕ ಪಕ್ಕದ ಬೃಹದಾಕಾರದ ಬಂಗಲೆಯಿಂದೆಲ್ಲ ನೋಡುತ್ತಲಿದ್ದಾರೆ. ಅವರುಗಳಲ್ಲೇ ಗುಸು ಗುಸು... ಏನಾಗಿದೆ ಆ ಗುಡಿಸಲಿನಲ್ಲಿ ಯಾರಾದರು ಸತ್ತಿದ್ದಾರಾ? ಏನಾಗಿರಬಹುದು.........ಅಯ್ಯೋ ಈ ಗುಡಿಸಲ ಜನ ಎಷ್ಟಿದ್ದರೇನು, ಸಂಜೆ ಹೊತ್ತಿಗೆ ಕುಡಿದು ರಾಧಾಂತ ಮಾಡೋ ಜನ ಎಂದು ಮನಸೋ ಇಚ್ಚೆ ಮಾತನಾಡಿಕೊಳ್ಳುತ್ತಲಿದ್ದಾರೆ..........ಆದರೆ ಆ ಜನ ಬಾಯಿ ಮುಚ್ಚಿಸಿದ್ದು ಬೆಳಗಿನ ವಾರ್ತಾ ಪ್ರಸಾರ ಮತ್ತು ಮುಂಜಾನೆಯ ಪತ್ರಿಕೆ ಮನೆ ಬಾಗಿಲು ತಟ್ಟಿದಾಗ ಆ ಶ್ರೀಮಂತ ಜನರಿಗೆ ಈ ಪುಟ್ಟ ಮನೆಯಲ್ಲಿ ಕೆಸರಿನ ಕಮಲವಿದೆ ಎಂದು ಗೊತ್ತಾಗಿದ್ದೇ ಆಗ......ಈ ಹಿಂದಿನ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ್ದರೂ ಹೆಚ್ಚು ಹೆಸರಾಗಿರಲಿಲ್ಲ....... ಪಿ.ಯು.ಸಿ ಹೇಗೆ ಜೀವನದ ಮಹತ್ತರ ಹೆಜ್ಜೆಯೋ ಹಾಗೇ ಪ್ರಪಂಚದ ಕಣ್ಣಿಗೆ ಬೀಳಲೂ ಅಷ್ಟೇ ಮುಖ್ಯವಾಯ್ತು. ಇಲ್ಲೂ ಸಹ ಶಬರಿ ತನ್ನ ಅಪ್ಪ ಅಮ್ಮನ ಆಸೆ, ಶಾರದಮ್ಮನವರ ಒಲವಿನ ಕಾಣಿಕೆ ಎಲ್ಲವೂ ಕೆಲಸ ಮಾಡಿತ್ತು. ಮರುದಿನ ಟಿವಿಯಲ್ಲಿ ಕಂಡ ಶಾಲೆಯ ಸ್ನೇಹಿತರೂ ಎಲ್ಲರೂ ಗುಂಪುಗುಂಪಾಗಿ ಆ ಕೆಸರ ಗುಡಿಸಲಿಗೆ ದುಂಬಾಲಿಟ್ಟರು. ಅಂದು ಅಸಹ್ಯದ ದಾರಿ ಇಂದು ನಗೆಯ ಹಾದಿಯಾಗಿತ್ತು. ಜನ ಎಲ್ಲಾ ಹಾಗೆ ಗೆದ್ದೆತ್ತಿನ ಬಾಲ ಹಿಡಿಯುವುದಂತೂ ಸತ್ಯ..!!!

ಮರುದಿನ ಮಧ್ಯಾಹ್ನದವರೆಗೆ ಶಾಲೆಯಲ್ಲಿ ಅಂಕಗಳನ್ನು ಬಿತ್ತರಿಸಲು ಸಮಯವಿತ್ತು..... ಆದರೆ ಪರೀಕ್ಷಾ ಮಂಡಳಿಯಿಂದಷ್ಟೇ ತಿಳಿದ ವಾಹಿನಿಯವರಾಗಲೇ ಬಿತ್ತರಿಸಿಬಿಟ್ಟಿದ್ದರು. ಶಾಲೆಯ ಅಂಗಳದಲ್ಲಿ ಖುಷಿಯ ಹೊಳೆ ಹರಿದಿತ್ತು. ಶಬರಿ ಶಾಲೆಯೊಳಗೆ ಬರುತ್ತಲಿದ್ದಂತೆ ಭವ್ಯ ಸ್ವಾಗತ ಗುರುಗಳೆಲ್ಲರಿಗೂ ಸಂತಸದ ಕ್ಷಣ. ಈ ಪುಟ್ಟ ಕೂಸಿನ ಕಂಗಳಲ್ಲಿ ಆನಂದದ ಕಣ್ಣೀರು ಹನಿ ಹನಿಯಾಗಿ ಕಟ್ಟೆಯೊಡದಿತ್ತು. ಅಮ್ಮ ಅಪ್ಪನ ಆಸೆ ಮೊಳಕೆ ಚೆನ್ನಾಗೆ ಹೊಡೆತಿತ್ತು ಇನ್ನು ಅರಳುವುದೊಂದು ಬಾಕಿ. ಗುರು ಹಿರಿಯರ ಆಶೀರ್ವಾದ ಪಡೆದು ಮನೆಗೆ ಬಂದವಳು ಶಾರದಮ್ಮನ ಆಶೀರ್ವಾದ ಪಡೆಯಲು ನಡೆದಳು. ಅತ್ತ ಶಾರದಮ್ಮನು ಕರಗಿ ನೀರಾದರು. ಈ ಕೂಸಿಗೆ ಶುಭಹಾರೈಸಿ ಸಿಹಿ ಅಡಿಗೆಯ ಭೋಜನವನ್ನೇ ಮಾಡಿಟ್ಟರು. ಎಲ್ಲರೂ ಸಂತಸದಿ ಮಾತನಾಡುತ್ತಲಿದ್ದಂತೆ ಮತ್ತೊಂದು ಸಂತಸದ ಸಂಗತಿ ಟಿವಿಯ ವಾರ್ತಾ ಪ್ರಸಾರದಲ್ಲಿ ಕೇಳಿಬಂತು..... ಪಿ.ಯು.ಸಿಯಲ್ಲಿ ಹೆಚ್ಚು ಅಂಕ ಗಳಿಸಿದ ಶಬರಿ ಎಂಬ ಹೆಣ್ಣು ಮಗಳಿಗೆ ಕರ್ನಾಟಕ ಘನ ಸರ್ಕಾರ ಉಚಿತವಾಗಿ ಆಕೆ ಎಲ್ಲಿಯವರೆಗೂ ಓದುವ ಇಚ್ಚೆ ಇದೆಯೋ ಅಲ್ಲಿಯವರೆಗೆ ಸರ್ಕಾರ ಖರ್ಚನ್ನು ಭರಿಸುವುದೆಂದು ಘೋಷಿಸಿದರು...!!! ಇದಕ್ಕಿಂತ ಸಂತಸ ಯಾರಿಗೆ ಬೇಕು ಅಲ್ಲೇ ಇದ್ದ ಶಾರದಮ್ಮನಿಗೊಮ್ಮೆಲೆ ಕಾಲು ಮುಗಿದುಬಿಟ್ಟರು ಅಮ್ಮ, ಅಪ್ಪ, ಮಗಳು ಮೂವರು, ಶಾರದಮ್ಮನಿಂದಲೇ ಇಷ್ಟೆಲ್ಲಾ ಸಾಧ್ಯವಾಯಿತೆಂಬುದವರ ನಂಬಿಕೆ (ಬಡವರಿಗೆ ಒಂದು ಹುಲ್ಲುಕಡ್ಡಿಯಷ್ಟು ಸಹಾಯ ಮಾಡಿದರೆ ಸಾಕು ಪೂಜ್ಯತೆಯ ಮನೋಭಾವ ಸಹಾಯ ಮಾಡಿದವರ ಮೇಲೆ ಹುಟ್ಟುತ್ತದೆ). ಅದೇ ಸಂತಸದಿ ಗುಡಿಸಲ್ಲಿ ಹಬ್ಬದ ವಾತಾವರಣವೇ ಕಂಗೊಳಿಸುತ್ತಿತ್ತು......

ಶಬರಿಗೆ ಪಿ.ಯು.ಸಿ ಮುಗಿಯಿತು ಜವಾಬ್ದಾರಿಯೂ ಹೆಚ್ಚಿತು. ಓದುವುದರಲ್ಲಿ ಹೇಗೆ ಮುಂದೋ ರೂಪಿನಲ್ಲೂ ಅಷ್ಟೆ ಮುಂದು. ಕೆಸರಿನ ಕಮಲದಂತೆ ಕೋಮಲವಾಗಿದ್ದಳು. ಮುದ್ದು ಮನಸಿಗೆ ಮುಖದ ರೂಪ, ಹರೆಯದ ವಯಸ್ಸಿಗೆ ಹೈದರ ಕಣ್ಣು ಕುಕ್ಕುವಂತಾ ಸೊಬಗಿನವಳು ತನ್ನ ಮುಂದಿನ ವಿದ್ಯಾಭ್ಯಾಸವನ್ನು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಮುಂದುವರಿಸಲು ಸರ್ಕಾರ ಅನುವು ಮಾಡಿಕೊಟ್ಟಿತ್ತು. ಈ ಸೌಂದರ್ಯದ ಹೆಣ್ಣು, ಸರಸ್ವತಿಯ ಕಣ್ಣು ಕಾಲೇಜಿನ ಎಲ್ಲರ ಮಾತಲ್ಲಿ ಉಳಿದುಬಿಟ್ಟಳು. ಇಲ್ಲೂ ಸಹ ವಿದ್ಯೆಯಲ್ಲಿ ಮುಂದು, ಹಾಗೆಂದು ಆಟಪಾಠಕ್ಕೆ ಎಂದೂ ಕಡಿಮೆ ಮಾಡಲಿಲ್ಲ. ತಾನು ಐ.ಎ.ಎಸ್ ಅಧಿಕಾರಿಯಾಗ ಬೇಕೆಂಬ ತುಡಿತ ಎಂದೂ ಯಾರಲ್ಲೂ ಹೇಳದವಳು, ಅಂದು ಕಾಲೇಜಿನ ಪ್ರಾಂಶುಪಾಲರಲ್ಲಿ ಹೇಳಿಕೊಂಡಳು ಕಾರಣವಿಷ್ಟೆ..... ಯಾವ ಯಾವ ಹಂತದಲ್ಲಿ ಏನು ಮಾಡಬೇಕು ಹೇಗೆ ನಾ ಅಂತಹ ಅಧಿಕಾರಿಯಾಗಬೇಕು ಎಂಬುದರ ವಿಷಯ ತಿಳಿಸಲು ಅಪ್ಪ ಅಮ್ಮರೇನು ವಿದ್ಯಾವಂತರಲ್ಲ..... ಗುರುಗಳೇ ಸೂಕ್ತವೆಂದು ಅವರ ಸಲಹೆ ಮೇರೆಗೆ ವಿದ್ಯಾಭ್ಯಾಸ ಮುಂದುವರಿಸಿದಳು.

ಸರಸ್ವತಿ ಒಲಿದ ಮೇಲೆ ಯಾವ ವಿದ್ಯೆಯಾದರೇನು ಅದು ನಿರ್ರಗಳವಾಗಿ ಎಲುಬಿಲ್ಲದ ಎಳಸಿನ ಮೇಲೆ ಅಚ್ಚು ಹೊತ್ತಿದಾಗೆ ನಾಲಿಗೆಯ ಅಂಚಿನಲ್ಲಿ ಹೊರಬರುತ್ತದೆ ಅಂತೆಯೇ ಮೆದುಳಲ್ಲಿ ಎಲ್ಲ ವಿಷಯಗಳು ಶೇಖರವಾಗಿ ಬಿಡುತ್ತದೆ.......... ಅದು ಶಬರಿಯ ವಿಷಯದಲ್ಲಿ ನಿಜವೇ ಹಾಗಿಬಿಟ್ಟಿತ್ತು.

ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆಯುವಾಗ ಅಮ್ಮ ಒಬ್ಬರ ಮನೆಯಲ್ಲಿ ಪೆನ್ನು, ಪೆನ್ಸಿಲ್ ಕದ್ದು ಆ ಮನೆಯಿಂದಲೇ ಹೊರ ಬರುವಂತಾಗಿದ್ದ ದಿನಗಳು ನೆನಪಿಸಿತು ಕಾರಣ ಆ ಮನೆಯೊಡತಿಯ ಮಗ ಇದೇ ಕಾಲೇಜಿನಲ್ಲಿ ಓದುತ್ತಲಿದ್ದನು.... ಹೇಳುವಂತಾ ವಿದ್ಯಾವಂತನಲ್ಲ.... ಮನೆಯಲ್ಲಿರುವ ದುಡ್ಡು ಪುಂಡಾಟಿಕೆಗೆ ಬಳಸುವಲ್ಲಿ ನಿಸ್ಸೀಮನಾಗಿದ್ದ...... ಹಾದಿ ಬೀದಿಯ ಹೆಣ್ಣುಗಳತ್ತ ಕಣ್ಣು ಹಾಕುವ ಚಾಳಿಯಲ್ಲಿದ್ದ....... ಈ ಸುಂದರ ಮೊಗದ ಶಬರಿಯ ಕಂಡು ಹಿಂದೆ ಬಿದ್ದವನು ಇವಳನ್ನೇ ವರಿಸಬೇಕೆಂಬ ಹಠ..... ಆ ಹಠ ಕೊನೆಗೆ ನಿರಾಸೆಯಂತು ಖಂಡಿತಾ ತಂದಿತ್ತು........... ಶಬರಿಗೆ ಈಗ ಯಾವ ಪ್ರೇಮ ಪ್ರಣಯದಲ್ಲಿ ಬೀಳುವಾಸೆ ಇರಲಿಲ್ಲ........ ನಿರಾಕರಿಸಿಯೂ ಬಿಟ್ಟಿದ್ದಳು. ಹಾಗೆ ಈ ಹುಡುಗು ಬುದ್ಧಿಗೆ ಅಮ್ಮನಿಂದಲೂ ಕಡಿವಾಣ ಬಂದಿತ್ತು......... ಆ ಹುಡುಗಿ ನಿನಗೆ ಗೊತ್ತಿಲ್ಲವಾ ಆ ಮನೆಗೆಲಸದವಳು.... ನಮ್ಮ ಅಂತಸ್ಥಿಗೂ ಅವಳಿಗೂ ಅಜಗಜಾಂತರ ನೀನು ಇಲ್ಲಿಗೆ ಕೊನೆ ಮಾಡಿದರೆ ಒಳ್ಳೆಯದು ಎಂದು ಬಲವಂತವೋ, ಒತ್ತಾಯ ಪೂರ್ವಕವೋ ಒಟ್ಟಲ್ಲಿ ಮಗನನ್ನು ಅವಳಿಂದ ತಪ್ಪಿಸಲು ಮಗನನ್ನು ಕಾಲೇಜು ಬಿಡಿಸಿ ಬೇರೆ ಕಾಲೇಜಿಗೆ ಕಳಿಸಿ ಬಿಟ್ಟರು.

ಯಾರು ಏನಾಗಲಿ, ಊರೂ ಹೋಗಲಿ, ಕಾಡು ಬರಲಿ ತನ್ನ ನಿಲುವು ಮಾತ್ರ ಬದಲಿಸದ ಶಬರಿ. ತನ್ನ ಕನಸಿನ ಶಿಖರ ಕೆಲವೇ ಮೆಟ್ಟಿಲಿರುವುದನ್ನು ಖಾತ್ರಿ ಮಾಡಿಕೊಂಡು ನಿಧಾನವಾಗಿ ಹೆಜ್ಜೆಯಿಡಲು ಪ್ರಾರಂಭಿಸುತ್ತಾಳೆ. ಐ.ಎ.ಎಸ್ ಪರೀಕ್ಷೆ ತೆಗೆದುಕೊಳ್ಳುವ ಆಸೆ ಇದ್ದರಿಂದ ತನ್ನ ಡಿಗ್ರಿಯಲ್ಲಿ ಒಳ್ಳೆ ಅಂಕ ಗಳಿಸಿ, ಮಾಸ್ಟರ್ ಡಿಗ್ರಿಯನ್ನೂ ಮುಗಿಸಿ ಆನಂತರವೇ ಐ. ಎ.ಎಸ್ ಯತ್ತ ಮುಖ ಮಾಡಿದ್ದು. ಐ.ಎ.ಎಸ್ ಪರೀಕ್ಷೆ ಬರೆಯುವವರೆಗೆ ದಾರಿದೀಪವಾಗಿ ನಿಂತಿದ್ದು ಕಾಲೇಜಿನಲ್ಲಿದ್ದ ಪ್ರಾಂಶುಪಾಲರು. ಪ್ರತಿ ಹೆಜ್ಜೆಗೂ ಅವಳ ನಿಲುವಿಗೆ ಬೆನ್ನೆಲುಬಾಗಿ ಸಾಧನೆಯ ಹಾದಿಗೆ ಬೆಳಕಾದರು. ಕೊನೆಗೂ ಐ.ಎ.ಎಸ್ ಪರೀಕ್ಷೆ ಜೊತೆಗೆ ಅಧಿಕಾರಿಗಿರಿಯೂ ಅವಳ ಗುಡಿಸಲ ಬಾಗಿಲಿನವರೆಗೂ ಹುಡುಕಿಕೊಂಡು ಬಂದಿತು. ಅಧಿಕಾರಿ ಪಟ್ಟ ಬಂದದ್ದೆ, ಓಹ್..!!! ಹೇಳಬೇಕೆ ಅಮ್ಮನಿಗೆ ಆಕಾಶ ಎರಡೇ ಗೇಣು ಎಂಬಂತೆ ಚಿಕ್ಕ ಮಕ್ಕಳಂತೆ ಚೆನ್ನಯ್ಯನ ಕೈ ಹಿಡಿದು ಎಳೆದಾಡಿ ಮಗಳನ್ನು ಬಾಚಿ ತಬ್ಬಿದಳು. ತುತ್ತು ಅನ್ನಕ್ಕೂ ಕಷ್ಟ ಪಡುವವರಿಗೆ ಅರಮನೆಯ ವೈಭೋಗ ಅದಾಗೆ ಹುಡುಕಿಕೊಂಡು ಬಂದಾಗ ಆಗುವ ಸಂತಸ ಈ ಬಡ ಕುಟುಂಬದಲ್ಲಿ ಕಾಣುತ್ತಿತ್ತು. ಸರ್ಕಾರಿ ಹಣದಲ್ಲಿ ಓದಿದವಳಿಗೆ ಸರ್ಕಾರದ ಋಣ ತೀರಿಸಲು ಸರ್ಕಾರಿ ಕೆಲಸ ದೇವರ ಕೆಲಸವೆಂದೇ ಸ್ವೀಕರಿಸಿದಳು.

ಸರ್ಕಾರ ಎಲ್ಲಾ ಸವಲತ್ತುಗಳನ್ನು ನೀಡಿತ್ತು. ಗುಡಿಸಲಿಂದ ದೊಡ್ಡ ಮನೆಗೆ ಹೋಗಲೇ ಬೇಕಿತ್ತು. ಅಪ್ಪ ಅಮ್ಮನಿಗೂ ಸಂತಸ, ಆದರೆ ಈ ಪುಟ್ಟ ಗುಡಿಸಲು ಅವಳಿಗೆ ಏನೆಲ್ಲಾ ಕೊಟ್ಟಿತ್ತು ತನ್ನ ಜೀವನವನ್ನೇ ಇಷ್ಟು ಕಾಲ ಕಳೆದೆ ಇಂದು ಈ ಜೀವನದ ಗುಡಿಸಲು ಬಿಟ್ಟು ಹೋಗಲು ಮನಸಾಗದಿದ್ದರೂ ತನ್ನ ಕೆಲಸಕ್ಕೆ ತಕ್ಕಂತಿರಲು ತೆರಳಬೇಕಾಯ್ತು. ಸರ್ಕಾರ ಇವಳಿಗೆಂದೆ ಬಣ್ಣದ ಬಂಗಾರದ ಮನೆಯನ್ನು ಸಜ್ಜುಗೊಳಿಸಿತ್ತು, ಕಾರಿನಲ್ಲಿ ಕುಳಿತು ಹೋದ ದಾರಿ ಅದು ಪೆನ್ನು ಕದ್ದು ಮನೆಯೊಡತಿ ಆಚೆಕಳಿಸಿದ್ದ ಮನೆಯೆದುರೇ ಇವರ ವಾಸವಾಗಿತ್ತು. ನಮ್ಮ ಕಾಲ ಚೆನ್ನಾಗಿದೆಯೆಂದು ನಮಗಿಂತ ಕೀಳಾದವರ ಮೇಲೆ ದರ್ಪ ಸಾಧಿಸಬಾರದೆಂಬುದಕ್ಕೆ ಇದೊಂದು ಪುಟ್ಟ ಉದಾಹರಣೆ. ಎದುರುಬದುರು ಮನೆ ಇವರನ್ನು ಕಂಡಾಗ ಆ ಮನೆಯೊಡತಿ ಶಾಂತಮ್ಮನಿಗೂ ಕಸಿವಿಸಿ. ಆದರೆ ಶಬರಿಯವರ ಮನೆ ಮನದಲ್ಲಿ ಯಾವ ಕಸಿವಿಸಿ ಇರಲಿಲ್ಲ.

ಇತ್ತ ಶಾರದೆ ಮತ್ತೊಂದು ಮನೆಯೊಡತಿ ಶಬರಿಗೆ ಮನೆ ಎಲ್ಲವೂ ವ್ಯವಸ್ಥೆಯಾದ ಮೇಲೆ ಚೆನ್ನಮ್ಮನನ್ನು ಕೆಲಸಕ್ಕೆ ಬರಬೇಡವೆಂದಾಗ ಬೇಸರಗೊಂಡ ಚೆನ್ನಮ್ಮ "ಏಕೆ!!?? ನಾನು ನಿಮ್ಮ ಮನೆಕೆಲಸ ಮಾಡಬಾರದು" ಎಂದ ಕೂಡಲೆ, ಒಂದು ಅಮೋಘ ಉತ್ತರವನ್ನೇ ಕೊಡುತ್ತಾರೆ. ನೀನು ಈಗ ಮಗಳಿಗೆ ಸೇವೆ ಮಾಡಿ ಮಗಳನ್ನು ನೋಡಿಕೊಂಡಿರು. ಕೆಲಸ ಮಾಡುವ ಅವಶ್ಯಕತೆ ಇಲ್ಲ ಎಂದು ಬುದ್ಧಿ ಮಾತು ಹೇಳಿದರಾದರೂ ಕೇಳುವುದಿಲ್ಲ. ನೀವು ಅಂದಿನಿಂದ ನಮಗೆ ಆಸರೆ. ನನ್ನ ಮಗಳು ಶ್ರೀಮಂತೆಯಾಗುತ್ತಲಿದ್ದರೇನು..?? ಆ ವಿದ್ಯೆಯ ಸಿರಿ ನಿಮ್ಮ ವರದಾನ ದಯವಿಟ್ಟು, ನಾನು ಬದುಕಿರುವವರೆಗೂ ನಿಮ್ಮ ಮನೆಗೆಲಸ ಮಾಡುತ್ತೇನೆಂದು ಬೇಡುತ್ತಾಳೆ........ ಶಬರಿಗೂ ಈ ವಿಷಯ ತಿಳಿದು ಅಮ್ಮ ನೀನು ಬೇರೆಲ್ಲ ಕಡೆ ಕೆಲಸ ಮಾಡುವುದನ್ನು ಬಿಟ್ಟು ಬಿಡು. ಶಾರದಮ್ಮನವರ ಮನೆಯಲ್ಲಿ ನಿನ್ನ ಕೈಲಾದಷ್ಟು ಕೆಲಸ ಮಾಡು ಎಂದು ಹೇಳುತ್ತಾಳೆ ಚೆನ್ನಮ್ಮನಿಗೂ ಸರಿ ಎನಿಸುತ್ತೆ. ನಾನು ಆಗಾಗ ಬಿಡುವಿರುವಾಗ ನಿನಗೂ ಸಹಾಯ ಮಾಡಲು ಶಾರದಮ್ಮನವರ ಮನೆಯಲ್ಲಿ ಕೆಲಸಕ್ಕೆ ಬರುತ್ತೇನೆಂದ ಮಾತು ಮಾತ್ರ ಶಾರದಮ್ಮನ ಮನಸ್ಸು ಮರುಳಾಗುವಂತೆ ಮಾಡಿಬಿಡುತ್ತೆ. ತಕ್ಷಣ ಈ ವಿಷಯ ತಿಳಿದ ಶಾರದಮ್ಮ ಗಂಡ ಮಕ್ಕಳೊಂದಿಗೆ ಮಾರುಕಟ್ಟೆಗೆ ಹೋಗಿ ತನ್ನಿಷ್ಟವಾದ ವಸ್ತುಗಳನ್ನೆಲ್ಲಾ ತೆಗೆದುಕೊಂಡು. ಚೆನ್ನಮ್ಮನ ಮನೆಯತ್ತ ದಾವಿಸುತ್ತಾರೆ. ಕುಟುಂಬ ಸಮೇತರಾಗಿ ಬಂದವರಿಗೆ ಶಬರಿಯ ಕುಟುಂಬ ಸ್ವಾಗತಿಸಿ ಉಪಚಾರ ಮಾಡುತ್ತಾರೆ.

ಶಾರದಮ್ಮ ಶಬರಿಯಲ್ಲಿ ಬಂದು ನೀನು ಇನ್ನು ಆ ಗುಡಿಸಲು ಮರೆತಿಲ್ಲವಂತೆ...!!!!!! ದಿನಾ ಸಂಜೆ ದೀಪ ಹಚ್ಚಿ ಬರುವೆಯಂತೆ ಎಂದಾಗ ಚೆನ್ನಮ್ಮ ಆಶ್ಚರ್ಯದಿಂದ ನೋಡುತ್ತಾಳೆ. ಯಾರಿಗೂ ಈ ವಿಷಯ ತಿಳಿದಿರಲಿಲ್ಲ... ಗುಡಿಸಲನ್ನು ಗುಡಿಯಾಗಿ ಪೂಜಿಸುವ ಈ ಶಬರಿಯ ದೈವ ಭಕ್ತಿ.......... ಅಮ್ಮ ಅಪ್ಪನ ಕಂಗಳು ಮಾತ್ರ ಆ ವಿಷಯ ಕೇಳಿ ಜ್ಯೋತಿ ಬೆಳಗಿದಂತೆ ಬೆಳಗುತ್ತಿತ್ತು....

ಇತ್ತ ಬಂದವರತ್ತ ಗಮನಿಸುತ್ತ... ಚೆನ್ನಮ್ಮ, ನೀವು ಬಂದದ್ದು ನಮಗೆ ಖುಷಿಯಾಯಿತು. ಶಾರದಮ್ಮ ನೀವು ನಮ್ಮೊಂದಿಗೆ ಊಟ ಮಾಡಿಯೇ ಹೋಗಬೇಕು, ಶಬರಿಯೇ ಇಂದು ಅಡಿಗೆ ಮಾಡುತ್ತಾಳಂತೆ ಇದ್ದು ಬಿಡಿ ಎಂದು ಒತ್ತಾಯ ಹೇರುತ್ತಾರೆ.......... ಊಟವೇನು ನಾನು ಇಂದು ಇಲ್ಲೇ ಇರುತ್ತೇನೆ ನನ್ನಾಸೆ ಒಂದಿದೆ ಅದನ್ನು ಪೂರೈಸಬೇಕು ಇದರಲ್ಲಿ ಒತ್ತಡವೇನಿಲ್ಲ....... ನಿಮ್ಮ ಅಭಿಪ್ರಾಯ ತಿಳಿಸಬೇಕು ಎಂದಾಗ ಚೆನ್ನಮ್ಮ ಗಂಡನ ಮುಖ ನೋಡುತ್ತಾಳೆ. ಅತ್ತ ಶಬರಿಯೂ ಅವಕ್ಕಾಗಿಬಿಡುತ್ತಾಳೆ. ಏನೆಂಬ ಕುತೂಹಲ!!! ಮೆದು ದನಿಯಲ್ಲೇ ಶಾರದಮ್ಮ ನನ್ನ ಮನೆಯವರೆಲ್ಲ ಒಪ್ಪಿ ಈ ನಿರ್ಧಾರಕ್ಕೆ ಬಂದಿದ್ದೇವೆ ಚೆನ್ನಮ್ಮ ನನ್ನ ಮನೆ ಕೆಲಸ ಬಿಡೋಲ್ಲವಂತೆ ಅದಕ್ಕೆ ನಾನು ಒಂದು ಮಾತನ್ನು ಕೇಳಬೇಕು....ಹಾ!!! ಹೇಳಿ ಶಾರದಮ್ಮ ನೀವು ಏನು ಹೇಳಿದರೂ ಕೇಳುವೆ ಎಂದಾಗ ಸರಿ............ ನೀನು ಇನ್ನು ಮೇಲೆ ನಮ್ಮ ಮನೆ ಕೆಲಸ ಮಾಡುವುದು ಬೇಡ!!!!!!!!!! ಅಯ್ಯೋ ಅದು ಆಗದ ಕೆಲಸ ನಾವೆಲ್ಲ ಒಪ್ಪಿಕೊಂಡೆ ನಿಮ್ಮ ಮನೆ ಕೆಲಸಕ್ಕೆ ಬರ್ತಾ ಇರೋದು, ಅದು ಬದಲಾಗುವುದಿಲ್ಲ ಎಂದಾಗ ಇಲ್ಲ ಚೆನ್ನಮ್ಮ, ನಿನ್ನ ಬದಲು ನಿನ್ನ ಮಗಳು ನನ್ನ ಮನೆ ಕೆಲಸಕ್ಕೆ ಸಮಯವಿದ್ದಾಗ ನಿನಗೆ ಸಹಾಯ ಮಾಡ್ತೀನಿ ಎಂದಳಲ್ಲಾ ಅದಕ್ಕೆ... ಅದಕ್ಕೆ.... ಶಬರಿಯೇ ನಮ್ಮ ಮನೆಯಲ್ಲಿ ಪೂರ್ಣ ಕೆಲಸ ಮಾಡಿಕೊಂಡಿರಲಿ ಎಂದು ಒತ್ತಾಯವಾಗಿ ಹೇಳಿದಾಗ ಚೆನ್ನಮ್ಮನಿಗೇಕೋ ಕಸಿವಿಸಿ, ಇದೇನು ಅವಳು ಅಂತಾ ದೊಡ್ಡ ಹುದ್ದೆ ವಿದ್ಯಾವಂತೆ ಇಷ್ಟೆಲ್ಲಾ ಇದ್ದು ಹೀಗೆ ಕೇಳ್ತಾರಲ್ಲ ಎಂದು ತಟ್ಟನೆ ಶಬರಿ ಕ್ಷಮಿಸಿ ಬೇಸರವಾಗಬೇಡಿ ನನಗೆ ಗೊತ್ತು ಅಮ್ಮನಿಗೆ ವಯ್ಯಸ್ಸಾಗಿದೆ ಶ್ರಮ ಬೇಡವೆಂದು ನಿಮ್ಮ ಮಾತು, ನನಗೆ ಕಚೇರಿ ಕೆಲಸ ಜಾಸ್ತಿ, ಅದು ಮುಗಿಸಿ ಬರುವುದೇ ತಡವಾಗುತ್ತೆ ಬೇಕಾದರೆ ನನ್ನ ತಂಗಿಯನ್ನು ಕಳಿಸುವೆ ನಾ ಬಿಡುವಿರುವಾಗ ಬರುವೆ ಎಂದು ಕೇಳಿಕೊಳ್ಳುತ್ತಾಳೆ ಶಾರದೆಯ ಅಂದಿನ ಸಹಾಯಕ್ಕೆ ಇಂದು ಈ ಕೃತಜ್ಞತಾ ಭಾವ!!!!!!!!!!

ಒಮ್ಮೆ ಎದ್ದು ನಿಂತ ಶಾರದೆ ಕ್ಷಮಿಸು ಶಬರಿ, ನೀನು ನನ್ನ ಮನೆಕೆಲಸದವಳಂತೆ ಬೇಡ ನನಗೆ ನೀನು ಮನೆಮಗಳಂತೆ ಸೊಸೆಯಾಗಿ ಬರಬೇಕು........!!!!!!!!!!! ಎಂದಿದ್ದೇ ಎಲ್ಲರು ದಿಗ್ಭ್ರಾಂತರಾಗುತ್ತಾರೆ. ಇದು ಸಹಜ, ಶಾರದಮ್ಮ ಅದ್ಧೂರಿ ಶ್ರೀಮಂತೆ, ಇವರ ಸ್ಥಾನವೇ ಬೇರೆ, ಅವರೆಲ್ಲಿ ನಾವೆಲ್ಲಿ ಎಂಬ ಭಾವನೆ. ಆದರೆ ಶ್ರೀಮಂತ ಮನಸಿನಲ್ಲಿ ತೀರ್ಮಾನ ಮಾಡಿದ ಶಾರದಮ್ಮನ ಮಾತಿಗೆ ಚೆನ್ನಮ್ಮ, ಚೆನ್ನಯ್ಯ ಇಬ್ಬರೂ ಒಪ್ಪುತ್ತಾರೆ.........ಆದರೆ ಶಬರಿ ಒಪ್ಪುವುದಿಲ್ಲ........ನನ್ನನ್ನು ನೀವು ಋಣಕ್ಕೆ ಸಿಕ್ಕಿಸುತ್ತಿದ್ದೀರಾ... ಅದೂ ಅಲ್ಲದೆ ನಾನು ಮದುವೆಯಾದರೆ ನನ್ನ ಮನೆ ನೆಡೆಸುವುದು ಅವರಿಗೆ ಕಷ್ಟ. ಅಪ್ಪ ಅಮ್ಮ ಸುಖವಾಗಿರಬೇಕು, ತಂಗಿ ತಮ್ಮನ ವಿದ್ಯಾಭ್ಯಾಸಕ್ಕೆ ಕುಂದು ಬರುವುದೆಂದಾಗ ಶಾರದಮ್ಮ ಇಲ್ಲ ಶಬರಿ ನಾನು ಯಾವ ಋಣಕ್ಕೂ ತಳ್ಳುತ್ತಿಲ್ಲ ನಿನ್ನಂತ ಮಗಳು ನನಗಿಲ್ಲ ಸೊಸೆಯೇ ಮಗಳೆಂಬುದಾಸೆ, ಇನ್ನು ನಿನ್ನ ಕುಟುಂಬಕ್ಕೆ ನಿನ್ನ ದುಡಿಮೆ ಮೀಸಲಿಡು ನಮ್ಮತ್ತ ಸ್ವಲ್ಪವೂ ಬಾರದಿರಲಿ, ಅವರ ಆಗುಹೋಗುಗಳೆಲ್ಲ ನಿನ್ನಿಂದಲೇ ಸಾಗಲಿ......... ಎಂದೇಳಿ ಮಾರುಕಟ್ಟೆ ಇಂದ ಹೊತ್ತು ತಂದಿದ್ದ ರೇಷ್ಮೇ ಸೀರೆ ಒಡವೆ, ಹಣ್ಣು ಹೂ ಎಲ್ಲವನ್ನು ಬ್ಯಾಗಿನಿಂದ ತೆಗೆದು ಆ ಪುಟ್ಟ ಕಂಗಳ ಮುಂದಿಟ್ಟು ಇದು ನನ್ನ ಆಸೆ, ಪೂರೈಸು ಎಂದು ಕರಮುಗಿದು ಕೇಳಿಕೊಳ್ಳುತ್ತಾಳೆ. ಅಪ್ಪ ಅಮ್ಮ ಮಗಳನ್ನು ಒಪ್ಪಿಸಿ.....ಕೊನೆಗೆ ಆ ಶ್ರೀಮಂತ ಮನೆಗೆ ಗುಡಿಸಿಲಿನ ನಂದಾದೀಪ ಬೆಳಕಾಗುವಂತೆ ಮಾಡುತ್ತಾರೆ.