Saturday, November 15, 2014

ಮಕ್ಕಳಾಗಿರವ್ವಾ ಮನ ತುಂಬಿ...!!

ಬಾಲ್ಯ ಮರುಕಳಿಸುವುದಿಲ್ಲ, ಮಕ್ಕಳನ್ನು ಕಂಡಾಗ ನಾವೂ ಅವರೊಂದಿಗೆ ಬೆರೆತಾಗ ಬಾಲ್ಯ ಮರುಕಳಿಸುವ ಸಾಧ್ಯತೆ ಇದೆ. ಹೌದು ನೆನ್ನೆ ಮಕ್ಕಳ ದಿನಾಚರಣೆ ಆದ್ದರಿಂದ ಕುವೈತಿನಲ್ಲಿ ನಡೆಯುವ ಕನ್ನಡ ಶಾಲೆ "ಚಿಗುರು ಬಳ್ಳಿ" ಮಕ್ಕಳೆಲ್ಲಾ ಸದಾ ಮನೆಯೊಳಗೆ ಕುಳಿತು ಸದಾ ನಾಲ್ಕು ಗೋಡೆಯ ಮಧ್ಯೆ ಓದುವುದಕ್ಕಿಂತ, ಅಲ್ಲೇ ಹತ್ತಿರದ ಉದ್ಯಾನವನದಲ್ಲಿ ಒಂದೆರಡು ಘಂಟೆಗಳ ಕಾಲ, ಆಟ-ಪಾಠ ಎರಡೂ ನಡೆಯಲೆಂದು ಕೊನೆ ಘಳಿಗೆಯಲ್ಲಿ ಸಂಧ್ಯಾ ಅರುಣ್ ನಿರ್ಧಾರ ಮಾಡಿದ್ದರು.  

ಸ್ವಲ್ಪ ತಣ್ಣನೆಯ ವಾತಾವರಣ, ಮಕ್ಕಳು ಬರುತ್ತಾರೋ ಇಲ್ಲವೋ ಎಂಬ ಅನುಮಾನದಲ್ಲೇ ನಾನು ನನ್ನವರು ಮಾತನಾಡುತ್ತ ಹೋಗುತ್ತಿದ್ದೆವು. ಒಬ್ಬೊಬ್ಬರಾಗಿ ಅಪ್ಪಂದಿರು ತಮ್ಮ ಮಕ್ಕಳನ್ನು ಕರೆದುಕೊಂಡು ಬಿಡುತ್ತಿದ್ದರೆ..!! ಮಕ್ಕಳಲ್ಲಿನ ಹುಮ್ಮಸ್ಸು, ಅಪ್ಪಂದಿರಲ್ಲಿದ್ದ ಸಂತಸ ಎಲ್ಲವೂ ನಮ್ಮ ಅನುಮಾನವನ್ನು ದೂರ ಮಾಡಿತ್ತು. 



ಮೊದಲೇ ಪಾರ್ಕ್ ಎಂದರೆ ಕೇಳಬೇಕಾ..? ವಾರಾಂತ್ಯ ಪೂರ ಮಜವಿರುತ್ತೆ ಎಂದು ಫುಲ್ 'ದಿಲ್ ಖುಷ್ ' ನಮ್ಮ ಮಕ್ಕಳು, ಇನ್ನು ಮಕ್ಕಳು ಬರುವರಿದ್ದರು ಅಷ್ಟರಲ್ಲಾಗಲೇ ಬಂದಿದ್ದ ಮಕ್ಕಳು ಆಟ ಶುರುಹಚ್ಚಿಕೊಂಡಿದ್ದರು, ಪಾಠ ಇರುವುದಿಲ್ಲ ಬರಿ ಆಟ ಇರಬೇಕು ಎಂದುಕೊಂಡಿದ್ದರೇನೋ ಪಾಪಾ..!! ಬನ್ನಿ ಮಕ್ಕಳ ಕುಳಿತುಕೊಳ್ಳಿ ಅಂದ್ರೇ "ಓಹ್ ಆಟ ಇಲ್ವಾ ಆಂಟಿ... ಪ್ಲೀಸ್ ಸ್ವಲ್ಪ ಆಟವಾಡ್ತೀವಿ" ಎಂದು ಕೇಳುತ್ತಿದ್ದರು.

ಮೊದಲು ಪಕ್ಕಾ ಇಂಗ್ಲೀಷ್-ಕನ್ನಡದ ಗಣಪತಿ ಹಾಡಿನಿಂದ ಸ್ವಲ್ಪ ಮಕ್ಕಳ ಗಮನ ಪಾಠದತ್ತ ಗಮನ ಸೆಳೆಯಲು  ನಮ್ಮ ಅರುಣ್ ಅವರು ಹೇಳಿಕೊಟ್ರು. ಆನಂತರ ಮಕ್ಕಳ ದಿನಾಚಾರಣೆ ಆದ್ದರಿಂದ ನಿಮ್ಮ ಆಸೆ ಏನಿದೆ ಹೇಳಿ ಮಕ್ಳಾ ಅಂತಾ ಸಂಧ್ಯಾ ಅವರು ಕೇಳಿದ್ರೆ, ಒಬ್ಬೊಬ್ಬರದೂ ಒಂದೊಂದು ಆಸೆ ನನಗೆ ಮೊಬೈಲ್ ಬೇಕು, ಆ ಆಟಿಕೆ ಬೇಕು, ವಿಡಿಯೋ ಗೇಮ್ ಬೇಕು, ನಾನು ಆಟ ಆಡ್ಬೇಕು, ನಾನು ಕನ್ನಡ ಚೆನ್ನಾಗಿ ಕಲಿಬೇಕು, ಕನ್ನಡ ಓದೋದು ಕಲಿಬೇಕು ಹೀಗೆ ಹಲವಾರು ಆಸೆ ಹಂಚಿಕೊಂಡ್ರು. ಅಲ್ಲೇ ಇದ್ದಾ ನಮ್ಮ ರಾಜೀವ್ ಅವರು ಮಕ್ಕಳೊಂದಿಗೆ ಮಾತಿಗೆ ಶುರುವಿಟ್ಟರು ಕನ್ನಡದ ಅಂಕಿಗಳು ಗೊತ್ತಾ ಅಂದಿದ್ದೇ ತಡಾ... ಒಂದು, ಎರಡು, ಮೂರು.......... ಹತ್ತು ..... ಸಾವಿರ ಹೀಗೆ.  ನಿಲ್ಲಿಸಿ ಮಕ್ಕಳ ಸಾಕು ಎಂದರೂ ಬಿಡದೆ ಕೋಟಿವರೆಗು ಕನ್ನಡ ಅಂಕಿ ಹೇಳುವಷ್ಟು ಹುಮ್ಮಸ್ಸಿನಿಂದಿದ್ದರು. ನಂತರ ನಾನು ಇಂಗ್ಲೀಷ್ ನಲ್ಲಿ ಮಾತು-ಕತೆ ನಡೆಸಿದ್ದನ್ನು ಕನ್ನಡದಲ್ಲಿ ಹೇಳಿ ಮಕ್ಕಳಾ ಅಂದ್ರೇ ಅಬ್ಬಾ...!! ಆಶ್ಚರ್ಯವಾಗುತ್ತೇ ಪಕ್ಕಾ ಕನ್ನಡ ಭಾಷೆಯನ್ನೇ ಬಳಸಿ ಮಾತನಾಡಿದ್ರು ಗೊತ್ತಾ..!!. 

                

ಇಷ್ಟೆಲ್ಲಾ ಆಯ್ತು ಇನ್ನೇನು ಮುಗಿತು ಆಟಕ್ಕೆ ಹೋಗಬಹುದು ಅಂದುಕೊಂಡ್ರೆ ಛೇ..!! ಪೇಪರ್ ತಗೊಳ್ಳಿ ಬರಿರಿ, ನಾವು ಹೇಳಿದ್ದನ್ನ ಅನ್ನೋದೇ ಈ ಸಂಧ್ಯಾ ಆಂಟಿ, ಸರಿ ಎಲ್ಲರೂ ಪೇಪರ್ ಪೆನ್ಸಿಲ್ ತೆಗೆದ್ರು, ಅಗಸ, ಗರಗಸ, ಸರ, ಘಂಟೆ, ಎಲ್ಲಾ ನಾವು ಒಂದು ವರ್ಷದ ಹಿಂದೆ ಹೇಳಿಕೊಟ್ಟ ಪದಗಳನ್ನೆಲ್ಲ ಬರೆದಿದ್ದು ನೋಡಿ ನನಗೆ ನಿಜಕ್ಕೂ ಖುಶಿ ಆಯ್ತು... ಸುಳ್ಳು ಅಂದುಕೋಬೇಡಿ ನೋಡಿ ಇಲ್ಲಿ ಅವರ ಮುದ್ದಾದ ಅಕ್ಷರಗಳು ಹೇಗಿ ನಿಜ ಹೇಳ್ತಾ ಇವೆ.


ಈ ಚಿತ್ರ ಸ್ವಲ್ಪ ದೊಡ್ಡದು ಮಾಡಿ ನೋಡಿ... ಮುದ್ದಾದ ಅಕ್ಷರಗಳನ್ನು.. 

ಮತ್ತೊಂದು ವಿಷಯ ಹೇಳಲೇಬೇಕು, ಇಲ್ಲಿನ ಎಷ್ಟೋ ಮಕ್ಕಳಲ್ಲಿ ಕನ್ನಡ ಮಾತೃಭಾಷೆ ಅಲ್ಲದಿದ್ದರೂ, ಇಷ್ಟು ಚೆನ್ನಾಗಿ ಕನ್ನಡ ಕಲಿಯುತ್ತಿದ್ದಾರೆ. - ಇದು ನಮಗೆಲ್ಲಾ ಹೆಮ್ಮೆಯ ವಿಷಯ.



               

ಅದಾಗಲೇ ೩೦ನೇ ಪದ ಬರಿರಿ ಮಕ್ಕಳಾ ಅಂದ್ರೇ ಇಲ್ಲೊಬ್ಬ ನಮ್ಮ ಪುಟ್ಟ ಪೋರಾ ಹೇಳಿದಾ... ಏನಿದು ಇವತ್ತು ಚಿಲ್ಡ್ರನ್ಸ್ ಡೇ ನಾ..!! ರೈಟಿಂಗ್ ಡೇ ನಾ ಅಂತಾ ಹಹಹ, ನನಗೆ ನಗು ತಡೆಯಲಾಗಲಿಲ್ಲ.... ಇವತ್ತು ಎರಡೂ ದಿನ ಸ್ವಲ್ಪ ಹೊತ್ತು, ಆಮೇಲೆ ಆಟವಾಡಿ ಎಂದಾಗ ಎಲ್ಲರ ಮುಖದಲ್ಲಿ ಮಂದಹಾಸ ಮೊಳಗುತ್ತಿತ್ತು... 

                

ಸರಿ ಮುಗಿತಪ್ಪಾ ಇನ್ನು ಪಾಠ ಆಯ್ತು, ಈಗ ಆಟ ಎನ್ನುವಾಗಲೇ ಕೈಗೊಂದು ಗುಲಾಬಿ ಕೊಟ್ಟು ತಿಂಡಿ ತೀರ್ಥ ಕೊಡುತ್ತಿದ್ದರೆ... ಇವ್ರೇನು ಆಟಕ್ಕೆ ಬಿಡ್ತಾರೋ ಇಲ್ವೊ ಅನ್ನೋ ಹಾಗೆ ನಮ್ಮನ್ನ ನೋಡ್ತಾ ಇದ್ರು ಮಕ್ಕಳು. ತಿಂಡಿ ನಂತರ ಆಟವೂ ಆಯ್ತು ಇನ್ನೂ ಆಟದ ಮನಸ್ಸು ಇರುವಾಗಲೇ ಅಪ್ಪಂದಿರು ಬಂದು ಬನ್ನಿ ಸಾಕು ಎಂದು ಮನೆ ಕಡೆ ಕರೆದುಕೊಂಡು ಹೋದರು.





ಮಕ್ಕಳ ದಿನಾಚಾರಣೆ ಒಂದು ರೀತಿ ಖುಷಿಯಿತ್ತು, ಆ ಮಕ್ಕಳಲ್ಲಿ ನನ್ನ ಮಗನ ಕಂಡೆ ಮನಸ್ಸು ಪೂರ್ತಿ ಸೊಗಸುಕಂಡೆ... ಮಕ್ಕಳ ಆಸಕ್ತಿ, ಶ್ರದ್ಧೆ, ಹೊನಲು-ಬೆಳಕು, ತರಲೆ, ಆಟದ ಹುರುಪು ಎಲ್ಲವನ್ನೂ ಕಂಡೆ... ಒಂದು ನಲಿವಿನ ದಿನವಾಯ್ತು ನನ್ನದು.