Showing posts with label ರಾಮಾಯಣ. Show all posts
Showing posts with label ರಾಮಾಯಣ. Show all posts

Wednesday, September 21, 2011

ಫೇಸ್ ಬುಕ್ಕಾಯಣ... ಪೋನಾಯಣ.....ರಾಮಾಯಣ

ನಮ್ಮ ಕಛೇರಿಯಲ್ಲಿ ಒಬ್ಬರು ಒಂದು ವಾರದ ಮಟ್ಟಿಗೆ ತವರೂರಾದ ಭಾರತಕ್ಕೆ ತೆರಳಿದ್ದರು... ಅವರು ಊರು ತಲುಪಿದ ಕೆಲವೇ ಘಂಟೆಗಳಲ್ಲಿ ಸುಮಾರು ೪,೫ ಮಿಸ್ ಕಾಲುಗಳು ಬಂದವಂತೆ, ಆ ಕರೆಯನ್ನು ಸ್ವೀಕರಿಸಿದ್ದೇ ತಡ ಯಾರೂ ಮಾತನಾಡುತ್ತಲಿರಲಿಲ್ಲ... ಯಾವುದೇ ಮಾತಿಲ್ಲ ಕಥೆಯಿಲ್ಲ, ಹೀಗೆ ಸುಮಾರು ಸರಿ ಕರೆಮಾಡಿದ್ದರಿಂದ ಪೋನ್ ಸ್ವಿಚ್ ಆಫ್ ಮಾಡಿಬಿಟ್ಟಿದ್ದಾರೆ.

ಆ ಪೋನ್ ಸ್ವಿಚ್ ಆಫ್ ಆಗಿದ್ದೇ ತಡ ೧೦ ನಿಮಿಷಗಳ ನಂತರ ಅವರ ಹೆಂಡತಿಯ ಮೊಬೈಲ್ ಗೆ ಬೇನಾಮಿ ಕರೆಗಳು ಬರಲು ಪ್ರಾರಂಭವಾಯಿತು. ಕರೆ ಸ್ವೀಕರಿಸಿದರೆ ಮಾತಿಲ್ಲ ಮೌನದಲ್ಲೇ ಧ್ವನಿ ಕೇಳುವ ಖಯಾಲಿ ಆ ಜನರಿಗೆ... ಒಂದೇ ದಿನದಲ್ಲಿ ಸುಮಾರು ೧೦,೧೫ ಕರೆ ಬರುವುದು ಮಾತಿಲ್ಲದೇ ಧ್ವನಿ ಕೇಳುವುದು ಇದೇ ನೆಡೆಯುತ್ತಲಿತ್ತು. ಕೊನೆಗೆ ಆ ಫೋನ್ ಕೂಡ ಸ್ವಿಚ್ ಆಫ್ ಮಾಡಿ... ಮನೆಗೆ ಬಂದು ಇನ್ನೇನು ನೀರು ಕುಡಿಯ ಬೇಕು ಎನ್ನುವಾಗಲೇ ಮನೆಯಲ್ಲಿದ್ದ ದೂರವಾಣಿಗೆ ಮತ್ತೆ ಕರೆ ಬಂದು ಸ್ವೀಕರಿಸಿದರೆ ಮತ್ತದೇ ಮೌನ....... ಮಾತಿಲ್ಲ ಕಥೆ ಇಲ್ಲ... ಆ ದೂರವಾಣಿಗೂ ಸುಮಾರು ಸರಿ ಕರೆ ಬರುವುದು ಸ್ವೀಕರಿಸುವುದು ಇದೇ ನೆಡೆದಿತ್ತು....... ತಾಳ್ಮೆ ಕಳೆದುಕೊಂಡ ಇವರು ಫೋನ್ ಲೈನ್ ತೆಗೆದು ಬಿಟ್ಟರು....

ಎಲ್ಲರಿಗೂ ಚಿಂತೆ ಕಾಡಲು ಪ್ರಾರಂಭವಾಯಿತು ಯಾರು ಮಾಡುತ್ತಿದ್ದಾರೆ ಏಕೆ ಹೀಗೆ ಎಂದು.... ಕೊನೆಗೆ ಮನೆಯಲ್ಲಿದ್ದ ಅವರ ಅಮ್ಮನ ಹತ್ತಿರ ವಿಚಾರಿಸುವಾಗ ಹೇಳಿದರು ನೀವುಗಳು ಭಾರತಕ್ಕೆ ಬರುವ ಸ್ವಲ್ಪ ಘಂಟೆಗಳ ಒಳಗೆ ಯಾರೋ ಕರೆ ಮಾಡಿದರು... ಬಂದಿದ್ದಾರ ಎಂದು, ಇನ್ನು ಬಂದಿಲ್ಲ ಎಂದೆ. ಸ್ವಲ್ಪ ಸಮಯದ ನಂತರ ಮತ್ತೂ ಕರೆ ಮಾಡಿ ಕೇಳಿದರು ಏನೋ ವಿಷಯವಿರಬೇಕೆಂದು ನಿಮ್ಮಗಳ ಮೊಬೈಲ್ ನಂಬರ್ ಕೊಟ್ಟೆ ಎಂದರು..... ಈ ಲ್ಯಾಂಡ್ ಲೈನ್ ನಂಬರ್ ಹೇಗೆ ಸಿಕ್ಕಿತು ಎಂದು ಯೋಚಿಸುವಾಗ ನೆನಪಾಗಿದ್ದು "ಫೇಸ್ ಬುಕ್", ಕುವೈತಿನಿಂದ ಭಾರತಕ್ಕೆ ಹೊರಡುವ ಮುನ್ನ ತಮ್ಮ ಫೇಸ್ ಬುಕ್ಕಿನಲ್ಲಿ ಅವರ ಮನೆಯ ದೂರವಾಣಿ ಸಂಖ್ಯೆಯನ್ನು ಹಾಕಿದ್ದಾರೆ ಅದರಿಂದಲೇ ಈ ಕೆಲಸವಾಗಿರಬಹುದು ಎಂದು ಊಹಿಸಿಕೊಂಡಿದ್ದಾರೆ.

ಇನ್ನು ಪೋಲೀಸಿಗೆ ತಿಳಿಸೋಣ ಎಂದರೆ ಅಲ್ಲಿ ಒಮ್ಮೆ ಹೋಗಿ ಸೇರಿಕೊಂಡರೆ ಮುಗಿಯಿತು ಮತ್ತೆ ಹೊರಗೆ ಬರೋಕ್ಕೆ ಆಗೋಲ್ಲ.... ೧ ವಾರ ಮಾತ್ರ ರಜೆಯಲ್ಲಿರುವುದು ಎಂದು ಯೋಚಿಸಿ ಸುಮ್ಮನಾಗಿದ್ದಾರೆ. ನಂತರ ಇಷ್ಟೂ ಕರೆಗಳು ಬಂದಿದ್ದ ದೂರವಾಣಿ ಸಂಖ್ಯೆಗಳನ್ನೆಲ್ಲವನ್ನೂ ಬರೆದಿಟ್ಟುಕೊಂಡು ಅವರ ಸ್ನೇಹಿತರೊಬ್ಬರಿಗೆ ಕೊಟ್ಟು ಬಂದಿದ್ದಾರೆ. ಈ ವಿಷಯವೆಲ್ಲವನ್ನೂ ಒಮ್ಮೆ ಪರಿಶೀಲಿಸುವಂತೆ ಹೇಳಿ ಬಂದಿದ್ದಾರೆ...

ಇದು ನಿಜವೇ ಎಂದು ನನಗೆ ಆಶ್ಚರ್ಯವಾಗಿ..!!! ಮತ್ತೊಮ್ಮೆ ಅವರನ್ನೇ ಕೇಳಿದೆ. ಹೌದು!!! ನಾನು ಊರಿಗೆ ಹೋಗಬೇಕೆಂದು ತೀರ್ಮಾನಿಸಿದ್ದೇ ಹೊರಡುವ ಹಿಂದಿನ ದಿನ ನಂತರ ಟಿಕೆಟ್, ಪ್ಯಾಕಿಂಕ್ ಹೀಗೆ ಬ್ಯುಸಿ ಇದ್ದೆ.. ಯಾರಿಗೂ ಹೇಳೇ ಇರಲಿಲ್ಲ... ಅಮ್ಮನಿಗೆ ಹೇಳಿದ್ದೇ ನಾನು ವಿಮಾನ ಹತ್ತುವ ೧ಗಂಟೆಯ ಮುನ್ನ, ಸ್ನೇಹಿತರಾಗಲಿ, ಸಂಬಂಧಿಕರಿಗಾಗಲಿ ಯಾರಿಗೂ ಹೇಳೇ ಇರಲಿಲ್ಲ ನಾನು ಬರುತ್ತೇನೆಂದು... ಇನ್ನು ನನ್ನ ಎರಡೂ ಹೊಸ ಸಿಮ್ ಗಳು ಸ್ನೇಹಿತ ವಿಮಾನ ನಿಲ್ದಾಣಕ್ಕೆ ತಂದು ಕೊಟ್ಟಿದ್ದು... ಆ ಸ್ನೇಹಿತ ಹೀಗೆ ಮಾಡುವವನೇ ಅಲ್ಲ... ಆದರೆ ನನಗೆ ಅನುಮಾನವಿರುವುದು ಈ ಫೇಸ್ ಬುಕ್ ಮಾತ್ರ... ಇದರಿಂದ ಹಲವು ಅನಾಹುತ ನೆಡೆದಿವೆ ಎಂದು ಕೇಳಿದ್ದೇನೆ ಎಂದರು. ನನ್ನ ಅನುಮಾನ ಖಂಡಿತಾವಾಗಿಯೂ ಸುಳ್ಳಾಗಲು ಸಾಧ್ಯವಿಲ್ಲ ಎನ್ನುತ್ತಾರೆ...!!

ಪಾಪ ಅವರು ರಜೆಯನ್ನು ಈ ಪೋನಿನ ರಾಮಾಯಣದಲ್ಲೇ ದಿನ ಕಳೆದು ಬಂದಿದ್ದಾರೆ.... ಇದು ಫೇಸ್ ಬುಕ್ ರಾಮಾಯಣವೋ..ಫೋನ್ ರಾಮಾಯಣವೋ... ಏನೋ ಒಂದು ತಿಳಿದಿಲ್ಲ ಆದರೆ ಈಗ ಮಾತ್ರ ಅವರು ಕರೆಗಳನ್ನು ಸ್ವೀಕರಿಸಿದ್ದರಲ್ಲ ಅಷ್ಟೂ ಸಂಖ್ಯೆಗಳನ್ನು ನೋಡುತ್ತ ನಂಬರಾಯಣದಲ್ಲಿ ಮುಳುಗಿದ್ದಾರೆ... (ಅವರು ಊರಿಂದ ಬಂದು ೩ ದಿನವಾಯಿತು ದಿನಕ್ಕೆ ಎರಡು ಬಾರಿಯಾದರೂ ಬರೆದಿಟ್ಟಿರುವ ಫೋನ್ ನಂಬರ್ ಗಳನ್ನು ಮಾತ್ರ ನೋಡುತ್ತಲೇ ಇದ್ದಾರೆ... ಯಾರು ಇರಬಹುದು, ಏಕೆ ಕರೆ ಮಾಡಿದರು ಎಂಬ ಪ್ರಶ್ನೆಗಳನ್ನು ಮನಸ್ಸಲ್ಲೇ ಹಾಕಿಕೊಂಡು ಗೊಣಗುತ್ತಲಿದ್ದಾರೆ).

ಆದರೆ ಇನ್ನೊಂದು ವಿಷಯವೆಂದರೆ ಅವರು ಊರು ಬಿಟ್ಟು ಕುವೈಟಿಗೆ ಬಂದ ನಂತರ ಅಲ್ಲಿ ಮನೆ ನಂಬರಿಗೆ ಮತ್ತಾವು ಬೇನಾಮಿ ಕರೆಗಳು ಬರುಲ್ಲಿಲ್ಲವೆಂದು ಹೇಳಿದ ಮೇಲೆ ಫೇಸ್ ಬುಕ್ಕಿನ ಮೇಲೆ ಹೆಚ್ಚು ಅನುಮಾನ ಪ್ರಾರಂಭವಾಗಿದೆ

ಇದು ನಿಜವೋ ಏನೋ ಗೊತ್ತಿಲ್ಲ ಆದರೆ ಆದಷ್ಟು ಮುಖ್ಯ ವಿಷಯಗಳನ್ನು ಮಾತ್ರ BUZZ , Google+, FACEBOOK, twitter ಇತ್ಯಾದಿ.... ಎಲ್ಲಿಯೂ ಬಿತ್ತರಿಸದೇ ಇರುವುದು ಒಳ್ಳೆಯದು.... ಅಲ್ಲವೇ..?

@ಫೋಟೋ - ಅಂತರ್ಜಾಲ