Showing posts with label ಅಮ್ಮ. Show all posts
Showing posts with label ಅಮ್ಮ. Show all posts

Tuesday, December 8, 2009

ಅಮ್ಮನಾದಾಗ ತಬ್ಬಿಬ್ಬಾದೆ!!!!

ರಜೆಯಲ್ಲಿ ಊರಿನಲ್ಲಿದ್ದಾಗ ಎಲ್ಲೋ ಹೋಗಬೇಕಿತ್ತು...ಬಸ್ ನಿಲ್ದಾಣದಲ್ಲಿ ನಿಂತಿದ್ದೆ. ಅಲ್ಲೇ ನನ್ನ ಪಕ್ಕ ಒಬ್ಬ ಹೆಂಗಸು ಕೈನಲ್ಲೊಂದು ಬ್ಯಾಗ್, ಕಂಕುಳಲ್ಲೊಂದು ಸುಮಾರು ೬ ತಿಂಗಳ ಹಸುಗೂಸು, ಮತ್ತೊಂದು ಅಮ್ಮನನ್ನೇ ತಬ್ಬಿ ನಿಂತ ಸುಮಾರು ೨ ವರ್ಷದ ಕಂದಮ್ಮ ನಾನು ನೋಡಿದೆ ಮನವೇಕೋ ಕರಗಿತು ಎಷ್ಟು ಕಷ್ಟ ನೋಡು ಪಾಪ ಎರಡು ಮಕ್ಕಳು ಜೊತೆಗೆ ಬ್ಯಾಗ್ ಬೇರೆ ಆಟೋದಲ್ಲಾದರೂ ಹೋಗಬಾರದೆ ಎನಿಸಿತು, ಆದರೆ ಆಕೆಯ ಮುಖ ನೋಡಿದರೆ ಅಷ್ಟು ಸ್ಥಿತಿವಂತರೆನಿಸಲಿಲ್ಲ...ಪಾಪ ಅವರವರ ಕಷ್ಟ ಅವರವರಿಗಿರುತ್ತೆ ನಾವು ಎಲ್ಲರನ್ನು ತಾಳೆ ಹಾಕಬಾರದೆನಿಸಿತು...

ಸ್ವಲ್ಪ ಸಮಯದ ನಂತರ ಬಸ್ ಬಂತು ನಾನು ಅಮ್ಮನನ್ನು ತಬ್ಬಿ ನಿಂತ ಕಂದಮ್ಮನನ್ನು ಕರೆದುಕೊಂಡೆ, ಆಕೆ ಇನ್ನೊಂದು ಮಗುವಿನೊಂದಿಗೆ ಬಸ್ ಹತ್ತಿದಳು, ಒಳ ಹೋಗುತ್ತಿದ್ದಂತೆ ಆಕೆ ಕುಳಿತುಕೊಂಡಳು ನಾನು ಆ ಮಗುವನ್ನು ಹೊತ್ತುಕೊಂಡೇ ಸ್ವಲ್ಪ ಸಮಯ ನಿಂತಿದ್ದೆ...ತಕ್ಷಣವೇ ಆಕೆ ಇಲ್ಲಿ ಕೊಡಿ ಎಂದು ಹೇಳಿದಳು ನಾ ಕೊಟ್ಟೆ... ಅಷ್ಟು ಹೊತ್ತು ಸುಮ್ಮನಿದ್ದ ಮಗು ಅಮ್ಮನ ಹತ್ತಿರವೇಕೋ ಅಳಲು ಪ್ರಾರಂಭಿಸಿತು.... ನನಗೆ ಹಿಂದಿನ ಸೀಟು ಸಿಕ್ಕಿತು ನಾನು ಕುಳಿತುಬಿಟ್ಟೆ...ಆದರೆ ಆ ಮಗು ಅಳು ನಿಲ್ಲಿಸಲೇ ಇಲ್ಲ, ತದನಂತರ ಮಗುವಿನ ತಾಯಿ ಪಕ್ಕ ಒಬ್ಬರು ವಯಸ್ಸಾದಾಕೆ ಕುಳಿತಿದ್ದರು ಅವರು ಹಿಂದೆ ತಿರುಗಿ ನಿನಗೆ ಸ್ವಲ್ಪನೂ ಅರ್ಥವಾಗೋಲ್ಲವೇ ನೀನು ಕುಳಿತಿದ್ದೀಯಲ್ಲಮ್ಮಾ, ನಿನ್ನ ಮಗೂನ ಕರೆದುಕೊಳ್ಳೋಕೇನು ಆ ಯಮ್ಮ ಬೇರೆ ಮಗು ಇರೋಳು ನಿನ್ನ್ಗೆ ಅರ್ಥ ಆಗೋಲ್ವೇನಮ್ಮ ಅಂದರು...ನಾನು ತಕ್ಷಣ ತಬ್ಬಿಬ್ಬಾದೆ!!.....ಹಹಹಹ........ಮಕ್ಕಳು ಅಮ್ಮನತ್ತಿರ ಇದ್ದರೆ ಸರಿ ನೀನು ಕೂತಿದ್ದೀಯ ಕರ್ರ್ಕೋ ಎಂದರು, ನಂತರ ಆ ಮಗುವಿನ ತಾಯಿ ಈ ಮಗು ಅವರದಲ್ಲ ನನ್ನದೇ ಎಂದಳು, ಮಗುವಿನ ತಾಯಿ... ಬಸ್ ನಲ್ಲಿದ್ದವರೆಲ್ಲ ಒಮ್ಮೆಲೇ ಚಾಲಕನೂ ಸೇರಿ ನಕ್ಕುಬಿಟ್ಟರು ಈ ನಗು ಕಂಡು ಅಳುತ್ತಿದ್ದ ಕಂದ ನಗಲು ಪ್ರಾರಂಭಿಸಿತು ಅದಕ್ಕೇನು ಅರ್ಥವಾಯಿತೋ ಕಾಣೆ ಒಟ್ಟಲ್ಲಿ ನಗು ಬಂತು ಹಹಹಹ....

ಕೆಲವೂಮ್ಮೆ ನಾವು ತಬ್ಬಿಬ್ಬಾಗುವ ಸಂದರ್ಭಗಳು ಬಂದು ಬಿಡುತ್ತವೇ ಅಲ್ಲವೇ..?

ವಂದನೆಗಳು
ಶುಭದಿನ

Wednesday, September 9, 2009

ಶುಭಪ್ರಯಾಣ

ಪ್ರಿಯ ಬ್ಲಾಗ್ ಸ್ನೇಹಿತರೇ... ನಿಮ್ಮೆಲ್ಲರ ಶುಭಾಶಿರ್ವಾದದಿಂದ ನಮ್ಮ ಮಗ ಇಂದು ಸಂಜೆ ಯಾವುದೇ ತೊಂದರೆ ಇಲ್ಲದೆ ಕುವೈಟ್ ಬಂದು ತಲುಪಿದ!!!!!!

ನಿಮ್ಮೆಲ್ಲರ ಆಶೀರ್ವಾದ ಶುಭ ಹಾರೈಕೆ ಸದಾ ನಮ್ಮಮೇಲಿರಲಿ

ಬೇಸಿಗೆ ರಜೆ ಎಂದು ನಿನಗೋ ಮೂರು ತಿಂಗಳ ರಜೆ, ಈ ಬೇಸಿಗೆಯ ಬಿಸಿಯಲಿ ನೀ ಏನು ಮಾಡಲು ಸಾಧ್ಯ ಇರುವಷ್ಟು ರಜೆಯನ್ನು ಊರಿನಲ್ಲಿ ಕಳೆಯಲು ಇಬ್ಬರು ಹೊರಟೆವು, ಆದರೆ ನಾ ನಿನ್ನೊಟ್ಟಿಗೆ ೩ ತಿಂಗಳು ರಜೆ ಕಳೆಯಲಾಗದೆ ಕೆಲಸದ ನಿಮಿತ್ತ ಮರಳಿ ಮರುಭೂಮಿಗೆ ಬರಬೇಕಾಯಿತು... ನೀ ಬರಲು ಸ್ನೇಹಿತರೊಟ್ಟಿಗೆ ಬರುವಾಗೆ ತಯಾರಿ ನಡೆಸಿದ್ದೆವು... ನಿನ್ನ ಬರುವಿಕೆಗೆ ಯಾವ ಕೊರತೆಬರದಂತೆ ಎಲ್ಲ ವ್ಯವಸ್ಥೆಯೂ ನೆಡೆದಿತ್ತು...

ಇನ್ನೇನೂ ನನ್ನ ಕಂದಮ್ಮ ತಾಯ ಮಡಿಲ ಸೇರುವ ದಿನ ಬಹಳ ಹತ್ತಿರವಿತ್ತೆನ್ನುವಾಗಲೇ ಕಾರಣಾಂತರದಿಂದ ಸ್ನೇಹಿತರ ಜೊತೆಗೂಡಿ ಬರಲಾಗದೆ ಪ್ರಯಾಣ ರದ್ದಾಯಿತು ಮತ್ತೆ ನಿನ್ನ ಕರೆತರುವುದೆಂತು ಚಿನ್ನ ನನ್ನ ಮುದ್ದು ನೀ ಒಬ್ಬೊಂಟಿಯಾದೆಯಲ್ಲಾ ನಿನ್ನ ಕರೆತರಲು ನಾವೇ ಬರೋಣವೆಂದರೆ ಕೆಲಸಗಳ ಒತ್ತಡದೊಂದಿಗೆ ಹಲವಾರು ಇರುಸುಮುರುಸುಗಳು, ನನ್ನ ಮನದಲ್ಲಿ ನೀ ಬರಲಾಗದೆಂದು ತಿಳಿದೊಡೆ ನನಗೇನೋ ದುಗುಡ, ಆಘಾತ, ದುಃಖ ಎಲ್ಲವೂ ಒಮ್ಮೆಲೆ ಹೊಮ್ಮಿ ಬಂತು... ನಿನ್ನನ್ನು ಕರೆತರಲು ನಾವೇ ಹೋಗುವುದೊ ಬೇರೆ ವ್ಯವಸ್ಥೆ ಮಾಡುವುದೋ ಎಂಬ ದ್ವಂದ್ವ ಮನಸಿನಲಿದ್ದಾಗ ಸ್ನೇಹಿತರಿಂದ ತಿಳಿಯಿತು "ಜೊತೆಯಿಲ್ಲದ ಮಗುವಿನ ಪ್ರಯಾಣ(ಅನ್ಅಕಂಪನೀಡ್ ಚೈಲ್ಡ್ ಟ್ರಾವೆಲ್)" ಎಂದು ಪ್ರಯಾಣದ ಚೀಟಿ ಕಾಯ್ದಿರಿಸಿದ್ದರೆ (ಟಿಕೆಟ್ ಬುಕ್) ಯಾವುದೇ ತೊಂದರೆ ಇಲ್ಲದೆ ಕರೆದುಕೊಂಡು ಬರುತ್ತಾರೆಂದಾಗ ಮತ್ತದೇ ದುಃಖ ಚಿನ್ನ... ನಮ್ಮ ನಿಲುವನ್ನು ನಿನ್ನಪ್ಪ ಕರೆಮಾಡಿ ಹೇಳಿದಾಗ ಕಂದ ನೀನು ವಿಮಾನದಲ್ಲಿ ಒಬ್ಬನೇ ಪ್ರಯಾಣ ಮಾಡಬೇಕು, ಗಗನಸಖಿಯರು ನಿನಗೆ ಸಹಾಯ ಮಾಡುತ್ತಾರೆಂದಾಗ ನಿಜವಾಗಿಯೂ ನಾ ನಂಬದಂತಷ್ಟು ಮಟ್ಟಕ್ಕೆ ನಿನ್ನ ಉತ್ತರ ಕೇಳಿತು... "ಓಹೋ!! ಅದಕ್ಕೇನು ಬರುತ್ತೇನೆ, ನನಗೇನು ಭಯವಿಲ್ಲ" ಎಂದು ಧೈರ್ಯವಾಗಿ ನಗುವಿನಲ್ಲೇ ಒಪ್ಪಿದ್ದೇ..!! ಈ ಮಾತು ಕೇಳುತ್ತಿದ್ದಂತೆ ನನಗೆ ಒಮ್ಮೆಲೇ ದುಃಖ ತಡೆಯದೆ ಕಣ್ಣೀರ ಧಾರೆ ಹರಿದುಬಿಟ್ಟಿತ್ತು ಇದ ಕಂಡ ನಿನ್ನಪ್ಪ ನನ್ನೊಮ್ಮೆ ಮೆದುವಾಗಿ ರೇಗಿದರು ನಿನ್ನದು ಭಾವಾತಿರೇಕ. ನೀ ವಿದ್ಯಾವಂತೆ, ಬುದ್ದಿವಂತೆ, ಎಲ್ಲ ತಿಳಿದಿದ್ದು ನೀನೇ ಹೀಗೆ ಮಾಡಿದರೆ ಹೇಗೆ? ನಮ್ಮಲ್ಲಿ ವ್ಯವಸ್ಥೆ ಇದೆ ಅದನ್ನ ಉಪಯೋಗಿಸಿಕೊಳ್ಳಲು ಇದು ಒಂದು ಒಳ್ಳೆ ಸಮಯ ಎಂದೆಲ್ಲಾ ಹಲವು ಸಮಜಾಯಿಷಿ ಕೊಟ್ಟರು ಆದರೇನು ಮಾಡುವುದು ಕಂದ? ನಾ ಎಲ್ಲಿ ಏನೇ ಆಗಿರಲಿ, ಎಷ್ಟೆ ಬುದ್ದಿ ಇದ್ದರೇನು ಮಗುವಿನ ಅಮ್ಮನಲ್ಲವೇ? ನನ್ನ ಕರುಳಬಳ್ಳಿ ಇನ್ನು ಪುಟ್ಟದ್ದು ಅದಕ್ಕಿಗಾಗಲೇ ಜವಾಬ್ದಾರಿ ಕೊಟ್ಟುಬಿಟ್ಟಿರುವೇ. ಅಮ್ಮನಿಲ್ಲದಾಗ ಊಟಮಾಡುವುದು....ತಣ್ಣಗಿದ್ದ ಊಟವನ್ನು ಬಿಸಿಮಾಡುವುದು...ಶಾಲೆಯಿಂದ ಬಂದು ಮನೆ ಬಾಗಿಲು ತೆರೆದು ಅದನ್ನ ಭದ್ರಪಡಿಸಿ ಮನೆಯನ್ನ ಜೋಪಾನಿಸುವುದು ಇವಲ್ಲದೆ ಹತ್ತು ಹಲವು ನಿನ್ನ ಹೆಗಲೇರಿದೆ ನಿನ್ನ ವಯಸ್ಸಿನ ಮಕ್ಕಳನ್ನು ಇನ್ನು ಪುಟ್ಟ ಕಂದಮ್ಮರಂತೆ ನೋಡಿಕೊಳ್ಳುವ ತಾಯಂದಿರ ಕಂಡರೆ ನನಗೇನೋ ಒಂದು ರೀತಿ ನಾ ತಪ್ಪು ಮಾಡಿದೆ ನನ್ನಿಂದ ನಿನಗೆ ಸಲ್ಲಬೇಕಾದ ಪ್ರೀತಿ ಹಾರೈಕೆ ಸಲ್ಲಲಿಲ್ಲವೇನೋ ಎಂಬ ಭಾವನೆ ಮನದಾಳದಲ್ಲಿ ಆಗಾಗ ಮೂಡುತ್ತೆ, ಅಲ್ಲದೆ ಈ ಮನಸಿನಲ್ಲಿ ಕಾಡುತ್ತೆ ನಾ ಏನು ಮಾಡಲಿ ಕಂದ ನಮ್ಮ ವ್ಯವಸ್ಥೆಗಳು ಬದಲಾಗಿವೆ, ನಿನ್ನ ಭವಿಷ್ಯದ ನೆಲೆ ಹಚ್ಚ ಹಸಿರಾಗಿರಲೆಂಬುದು ನನ್ನ ಇಚ್ಚೆ...

ನೀ ಇನ್ನು ಮರುಭೂಮಿಯ ಮುಟ್ಟುವವರೆಗೂ ನನ್ನ ಹೃದಯಬಡಿತ ಅತಿರಭಸವಾಗಿರುತ್ತೆ. ಮನದ ಮೈದಾನದಲ್ಲಿ ಹಲವಾರು ಯಕ್ಷಪ್ರಶ್ನೆಗಳು ಮೂಡುತ್ತಲೇ ಇರುತ್ತವೆ. ನಿನ್ನ ನೋಡುವವರೆಗೂ ನಿದ್ರಾಹಾರ ಸೇರದು. ಕಣ್ಣಂಚಿನ ಕಂಬನಿ ಅಲ್ಲೇ ಮೂಡಿಬಿಟ್ಟಿದೆ ನೀ ಬರುವವರೆಗೂ ಅದು ಮಾಸುವ ಸೂಚನೆ ಕಾಣುತ್ತಿಲ್ಲ.

ನೀ ಬೆಂಗಳೂರಿಂದ ಕುವೈಟ್ಗೆ ನೇರ ಒಂದೇ ವಿಮಾನದಲ್ಲಿ ಬರುವಂತಿದ್ದರೆ ನನಗಷ್ಟು ಭಯ, ದುಃಖವೇನಿರುತ್ತಿರಲಿಲ್ಲವೇನೋ ಈಗ ದುಬೈ ವಿಮಾನ ನಿಲ್ದಾಣದಲ್ಲಿ ಸುಮಾರು ೩ ಗಂಟೆಗಳ ಕಾಲ ತಂಗಿದ್ದು ಮತ್ತೊಂದು ವಿಮಾನದಲ್ಲಿ ಬರಬೇಕು ನನಗೆ ಇಲ್ಲೇ ಹೆಚ್ಚಿನ ಆಂತಕ ನಿನಗೆಲ್ಲಿ ಬೇಸರವಾಗುತ್ತೊ, ಎಲ್ಲಿ ನೊಂದುಕೊಂಡು ಬೀಡುತ್ತೀಯೋ, ದುಃಖದಿ ನನ್ನ ಶಪಿಸಿಬಿಡುತ್ತೀಯೇನೋ...ನನ್ನಮ್ಮ ನನ್ನ ಜೊತೆಗಿದ್ದರೆ ಈ ರೀತಿ ತೊಂದರೆ ಇರುತ್ತಿತ್ತೆ ಎಂಬ ಭಾವನೆ ಬರುವಾಗೆ ಪರಿಸ್ಥಿತಿ ಎಲ್ಲಿ ಒದಗಿಬರುತ್ತೋ ಎಂಬ ಭೀತಿ ಕಾಡುತ್ತಿದೆ ನನ್ನ ಕಂದಮ್ಮ.... ನಿನಗೆ ಧೈರ್ಯ ತುಂಬುವ ಶಕ್ತಿ ಆ ಕಾಣದ ದೇವರೇ ನೀಡಬೇಕು. ಊರಲ್ಲೂ ಅಜ್ಜಿ, ತಾತ, ದೊಡ್ಡಮ್ಮ, ದೊಡ್ಡಪ್ಪ, ಅತ್ತೆ, ಮಾವ, ಎಲ್ಲರಿಗೊ ತಡೆಯಲಾಗದ ಆತಂಕ ಅವರಿಗೊ ನಾನು ಕ್ಷಮೆಯಾಚಿಸುತ್ತೇನೆ.

ನಿನ್ನ ಬರುವಿಕೆಗಾಗಿ ಕಾದು ಕುಳಿತಿರುವೆ... ಮನದ ದುಗುಡ ಸಾವಕಾಶದಿ ತಹಬದಿಗೆ ತರಲು ಪ್ರಯತ್ನಿಸುತ್ತಲಿರುವೆ ಕಂದ.... ಈ ಎಲ್ಲಾ ಪರಿಸ್ಥಿತಿಗೆ ಕಾರಣ ಯಾರೆಂದು ತಿಳಿಯದು? ನೀನೋ, ನಾನೋ, ಅಪ್ಪನೋ, ಸಮಯವೋ, ಅಥವಾ ದಿನವೋ ತಿಳಿಯದು ಏನಾದರು ಸರಿ ನನ್ನ ಕಂದ ನೀ ಬರುವ ಹಾದಿಯಲಿ ಲೋಹದ ಹಕ್ಕಿಯು ನಿನ್ನ ಕರೆತರಲು ಆ ದೇವವೃಂದಗಳು ನಗೆಯ ಹೂವ ಚೆಲ್ಲಲೆಂದು ಆಶಿಸುತ್ತೇನೆ. ನಿನ್ನ ಪ್ರಯಾಣ ಯಾವ ಕೊರತೆಬಾರದೆ ನಿನಗೂ ಸಂತಸವಾಗುವ ಹಾಗೆ ಪ್ರಯಾಣ ಸುಖವಾಗಿ ಸಾಗಲೆಂದು ಹೃದಯಪೂರ್ವಕವಾಗಿ ಹರಸುವೆವು.
ನನ್ನದೇನೇ ತಪ್ಪಿದ್ದರೂ ಕ್ಷಮಿಸಿಬಿಡು ಕಂದ ಪೂರ್ಣಪ್ರಮಾಣದ ತಾಯಾಗಲಿಲ್ಲ.... ನಿನ್ನ ಹಾರೈಕೆ ಮಾಡುವುದರಲಿ ಎಲ್ಲೋ ಸೋತಿರುವೆನು...

ಇಷ್ಟೆಲ್ಲ ಅನುಭವದಿ ಒಂದಂತು ನಿಜ, ನಿನ್ನ ಹಾದಿಯಲಿ ಕಷ್ಟ ಸುಖ ಏನೇ ಬಂದರೂ ಎದುರಿಸಿ ನೀ ಬಾಳುವೆ ಎಂಬ ನಂಬಿಕೆ ನನಗಿದೆ ಅಂತೆಯೇ ಜೀವನಪೂರ್ತಿ ಯಾರನ್ನು ಆಶ್ರಯಿಸದೆ ನಿನ್ನ ಕಾಲಮೇಲೆ ನೀ ನಿಲ್ಲುವೆ... ನೀ ನಮ್ಮ ಹೆಮ್ಮೆಯ ಪುತ್ರನಾಗಿ ಬಾಳು. ನಿನ್ನ ಅಮ್ಮ ಅಪ್ಪನ ಸಾಕಬೇಕೆಂಬ ಬೇಡಿಕೆ ಏನಿಲ್ಲ.... ದೈನೆ ಎಂದು ಬಂದ ಜನರಿಗೆ ನೆಲೆಯಾಗು, ಹತ್ತಾರು ಜನಸಮೂಹಕ್ಕೆ ಮಾದರಿಯಾಗಿ ಬಾಳು ಆಶ್ರಯ ಬೇಡಿ ಬಂದವರಿಗೆ ಆಶ್ರಯನೀಡಿ ಅವರ ದುಃಖ ಮರೆಸುವ ಶಕ್ತಿ ನಿನ್ನಲ್ಲಿ ಮೂಡಲಿ.

ಒಲವಿನ ಕುಡಿಗೆ ಪ್ರಯಾಣದ ಬಿಸಿ ಮುಟ್ಟದಿರಲಿ ಎಂದು ಆಶಿಸುತ್ತ ಶುಭಪ್ರಯಾಣ....ನನ್ನ ಕಂದಮ್ಮಗೆ....


ಪ್ರೀತಿಯಿಂದ
ಮೃದುಮನಸಿನ ಅಮ್ಮ...
ಸವಿಗನಸಿನ ಅಪ್ಪ..



ತಾಯಿ ಮಗನ ಸಮಾಗಮ ಮುಂದಿನ ಭಾಗದಲ್ಲಿ....

Sunday, May 10, 2009

ಅಮ್ಮನೇ ದೈವ!!!!

ನಿನ್ನುಸಿರ ತವಕ
ಬಲು ದೂರವಿದೆ.....
ನಿನ್ನ್ ಬಿಸಿ ಉಸಿರು
ತಾಕಲು ಸಮುದ್ರ ಅಡ್ಡವಿದೆ....
ನಿನ್ನ್ ಪ್ರೀತಿ ಪುಳಕ
ನನಗರಿವಿದೆ......
ನಿನ್ನ್ ಪ್ರೀತಿ ಹಾರೈಕೆ
ಹೃದಯಸ್ಪರ್ಶಿಸಿದೆ......
ಅಮ್ಮ ನಾನಿನ್ನ
ಪ್ರೇಮಸುಧೆ .....
ನೀ ಎನ್ನ ದೈವ
ಎಂದು ಮನ ಪೂಜಿಸುತಿದೆ.....
ನಿನ್ನ್ ಪೂಜೆಗೆ ಹೂ,ಗಂಧ
ಕಡ್ಡಿ,ಕರ್ಪೂರ ತರುವಾಸೆ ಎನಗಿಲ್ಲ....
ಹೂವಾಗಿ ಎನ್ನ
ಹೃದಯ ಕಮಲವಿದೆ.....
ಗಂಧವಾಗಿ ಎನ್ನ
ಮುದ ಪ್ರೇಮವಿದೆ....
ಕಡ್ಡಿ,ಕರ್ಪೂರವಾಗಿ ಎನ್ನ
ಕರವು ಕಾದಿದೆ.....
ಎನ್ನ ದೇಹದ ದೇಗುಲಕೆ
ನೀನೇ ದೈವ.....
ಅಂದು ನಿನ್ನ ಮಡಿಲು
ಕೊಟ್ಟ ಜೀವ.....
ಎನ್ನಮ್ಮ ನೀ
ಕರುಣಾಮಯಿ.....
ನಿನ್ನ್ ಒಡಲ
ಹರಸು ತಾಯಿ.....
ನನ್ನ್ ಪ್ರಾಣ ಪಕ್ಷಿ
ಹಾರುವ ಮುನ್ನ....
ನಿನ್ನ ಪಾದಕೆ
ಎರಗುವೆನಮ್ಮ.....
ಕೊನೆಯ ನನ್ನುಸಿರು
ಬಂದು ಸೇರುವುದು ನಿನ್ನೊಂದಿಗೆ....
ಅಲ್ಲಿವರೆಗು ಸಲ್ಲಿಸುವೆ
ಪ್ರೇಮಗುಚ್ಚ ನಿನ್ನ ಪಾದಕೆ.....
ನಿನ್ ಪ್ರೀತಿ ಎನಗೆ ಆಸರೆ
ನಾನು ನಿನ್ನ ಕೈ ಸೆರೆ....
**************
ಅಮ್ಮನಿರೊ ಊರಿಂದ ದೂರವಿದ್ದು ಅಮ್ಮನ ಹಾರೈಕೆ, ಅಮ್ಮನೊಂದಿಗೆ ಬೆರೆಯಲು ಕಾಲ,ಸಮಯ,ಜೀವನ ಎಲ್ಲವೊ ಅಡ್ಡವಿದೆ ನನ್ನಮ್ಮನ ಪ್ರೀತಿಗೆ ಸಣ್ಣದೊಂದು ಕವನ ಶೈಲಿ ಅಷ್ಟೆ...ಅಮ್ಮನ ಪ್ರೀತಿಗೆ ಸರಿಸಾಟಿ ಇಲ್ಲವೇ ಇಲ್ಲ ಆದರು ನನ್ನ ಮನದಾಳದ ಮಾತು ನಿಮ್ಮೊಂದಿಗೆ.
ಇಲ್ಲಸಲ್ಲದ ದೇವರ ಹುಡುಕುವದ ಬಿಟ್ಟು...... ಇಷ್ಟು ದೊಡ್ಡ ದೇಹಕೊಟ್ಟ ನನ್ನಮ್ಮನೇ ದೈವ, ನನಗೆ ಅಮ್ಮನೇ ಸರ್ವಸ್ವ, ನಾ ನನ್ನ ಮಗುವಿಗೆ ಅಮ್ಮನಾದರೊ ನನಗೆ ನನ್ನ ಅಮ್ಮನೇ ಎಲ್ಲ...ಇಷ್ಟು ಒಳ್ಳೆ ಜೀವನ ನೆಡೆಸಲು, ನನ್ನ ಬೇಕು ಬೇಡಗಳನ್ನು ನೀಗಿಸಿದ ನನ್ನಮ್ಮನೇ ದೈವ. ಅಂತ ಅಮ್ಮನಿಗೆ ಹೃದಾಯಂತಾರಾಳದಲಿ ಸಲ್ಲಿಸುವೆ ಪೂಜ್ಯಭಾವ...ಅಮ್ಮ ನೊರುಕಾಲ ಬಾಳಲಿ ಅವಳ ಪ್ರೀತಿ ನನ್ನೊಂದಿಗೆ ಸದಾ ಇರಲೆಂದು ಬಯಸುತ್ತೆನೆ.
ವಂದನೆಗಳು
ಶುಭಮಸ್ತು.