Monday, July 29, 2013

ಇದು ಯಾರ ಲಿಖಿತಾ..!!!???


ಸಾರ್ ನಮಸ್ಕಾರ, ಹೇಗಿದ್ದೀರಿ ನಿನ್ನೆ ರಾತ್ರಿ ಊರಿಂದ ಬಂದೆ ಸಾರ್...

ತಗೊಳ್ಳಿ ಇದು ನಮ್ಮ ಕೇರಳ ಚಿಪ್ಸ್ ಮತ್ತೆ ನಿಮಗೋಸ್ಕರ ಅಂತಾ ಒಂದು ಪೆನ್ ತಂದಿದ್ದೀನಿ.

ಓಹ್..!! ಥ್ಯಾಂಕ್ಸ್ ಶಿವ ಏನಕ್ಕೆ ಇದೆಲ್ಲಾ ತರೋಕ್ಕೆ ಹೋದೆ.. ಮತ್ತೆ ನಿನ್ನ ಹೆಂಡತಿಗೆ ಆಪರೇಷನ್ ಎಲ್ಲಾ ಆಯ್ತಾ..? ಹೇಗಿದ್ದಾರೆ ಈಗ .. ??

ಹೂ ಸರ್ ಚೆನ್ನಾಗಿದ್ದಾರೆ. ನೀವು ದೇವರಿದ್ದಂಗೆ, ನಾನು ಇದ್ದಕ್ಕಿದ್ದಂತೆ ಊರಿಗೆ ಹೋಗ್ಬೇಕಾದ್ರೆ ನನಗೆ ಹಣದ ಸಹಾಯ ಮಾಡಿದ್ರಿ ನಿಮ್ಮನ್ನ ಮರೆಯೋಕ್ಕೆ ಆಗೋಲ್ಲ. ಕ್ಷಮಿಸಿ ಈ ತಿಂಗಳ ಸಂಬಳ ಬಂದಾಗ ನಿಮಗೆ ಖಂಡಿತಾ ನಿಮ್ಮ ದುಡ್ಡು ಕೊಟ್ಟುಬಿಡ್ತೀನಿ...

ಹೇ..!! ಇರ್ಲಿ ಬಿಡು ಏನು ಅರ್ಜೆಂಟ್ ಇಲ್ಲಾ... ಸದ್ಯಕ್ಕೆ ಆರೋಗ್ಯವಾಗಿದ್ದಾರಲ್ಲ ಅದು ಮುಖ್ಯ. ಇವತ್ತೇ ಆಫೀಸಿಗೆ ಬಂದಿದ್ದೀಯಾ ಎಲ್ಲಾ ಕೆಲಸಗಳು ನಿನಗೇ ಕಾದಿದೆಯೇನೋ ಎಲ್ಲಾ ನೋಡು ಹೇಗೆ ನಡಿತಾ ಇದೆಯೆಂದು. 

ಸರಿ ಸರ್.. 

ಹೀಗೆ ಶಿವ ಸುಮಾರು ೧೧ ಗಂಟೆಯಲ್ಲಿ ತನ್ನ ಕಛೇರಿ ಬಾಸ್ ನೊಂದಿಗೆ ಮಾತನಾಡಿ ಎಲ್ಲರೊಂದಿಗೆ ಖುಷಿ ಖುಷಿಯಾಗಿ ಮಾತನಾಡಿಕೊಂಡು ರಮದಾನ್ ಆದ್ದರಿಂದ ಕುವೈತಿನಲ್ಲಿ ಕಛೇರಿ ಸಮಯ ಕೇವಲ ೬ ಗಂಟೆಗಳ ಕೆಲಸವಾದ್ದರಿಂದ ಮಧ್ಯಾಹ್ನ ೧೨ ಗಂಟೆಗೆ ಮನೆ ಕಡೆ ಹೊರಟ.

ಇತ್ತ ಬಾಸ್ ತಮ್ಮ ಮನೆಕಡೆ ಹೊರಟರು ಮಧ್ಯದಲ್ಲಿ ಅಂಗಡಿಯೊಂದಕ್ಕೆ ತೆರಳಿ ಮನೆಗೆ ಬೇಕಾದ ಸಾಮಾನು ಸರಂಜಾಮುಗಳನ್ನ ತೆಗೆದುಕೊಂಡು ತನ್ನ ಹೆಂಡತಿಯನ್ನ ಕರೆದೊಯ್ಯಲು ಬಂದರೆ.. ಆತನಲ್ಲಿ ಎಂದಿನ ಲವಲವಿಕೆ ಇಲ್ಲ. ಮಾತು ಮೌನವಾಗಿತ್ತು ನಿಟ್ಟುಸಿರಿನ ಶಬ್ದ ಕೇಳುತ್ತಿತ್ತು. ಏಕೆ ಏನಾಯಿತು ಎಂದು ಕೇಳುತ್ತಿದ್ದಂತೆ.!! 

"ಊರಿಗೆ ತೆರಳಿದ್ದ ಒಬ್ಬ ಆಫೀಸಿನವ ಇವತ್ತು ಬಂದು ನನಗೆ ಪೆನ್ ಗಿಫ್ಟ್ ಕೊಟ್ಟ ಆದರೆ... ಆದರೇ..... ಈಗ ೧ ಗಂಟೆಗೆ ಕಂಪನಿಯ ಕ್ಯಾಂಪ್ ಇಂದ ಕರೆ ಬಂತು ಅವನು ಊಟ ಮುಗಿಸಿ ಹೊರಗಡೆ ಕೈ ತೊಳೆಯಲು ಬಂದವನು ಕುಸಿದು ಬಿದ್ದನಂತೆ. ತಕ್ಷಣ ಎಲ್ಲರೂ ಆಸ್ಪತ್ರೆಗೆ ಕರೆದೊಯ್ದರೆ ಇಲ್ಲ... ಸತ್ತು ಹೋಗಿದ್ದಾರೆ ಎಂದರಂತೆ..!!"

ಇಷ್ಟು ಹೇಳಿ ಮೌನವಹಿಸಿದವರ ಕಣ್ಣಲ್ಲಿ ಸ್ತಬ್ಧ ಚಿತ್ರಣ ಎದ್ದು ಕಾಣುತ್ತಿತ್ತು.... ತಡೆಯಲಾರದ ಸಂಕಟವೊಂದು ಮನಸಲ್ಲಿ ಎದ್ದು ಕಾಣುತ್ತಿತ್ತು.

- ಇದು ನಡೆದದ್ದು ನನ್ನವರ ಕಛೇರಿಯಲ್ಲಿ ನನಗೂ ಮಾತು ಹೊರಳಲಿಲ್ಲ... ನನಗೇ ಅರಿವಿಲ್ಲದೆ ನನ್ನ ಕಣ್ಣಂಚು ಒದ್ದೆಯಾಗಿತ್ತು. ಇನ್ನೂ ವಿದ್ಯಾಭ್ಯಾಸ ಮುಗಿಸದ ಇಬ್ಬರು ಮಕ್ಕಳು. ಆಪರೇಷನ್ ಆಗಿ ಹಾಸಿಗೆ ಹಿಡಿದಿರುವ ಹೆಂಡತಿ... ಇತ್ತ ಮನೆ ಯಜಮಾನನ ಸಾವು. 

ಊರಲ್ಲಿ ಇದ್ದು ನಿನ್ನೆಯ ದಿನವೇ ಬಂದವನಿಗೆ ಸಾವು ಇಂದು ಈ ಮರುಭೂಮಿಯಲ್ಲಿ ಕಾದಿತ್ತೇ... ಸಾವು ಬಂದರೂ ಇಲ್ಲಿಗೆ ಯಾಕೆ ಕರೆತಂದ... ಅಲ್ಲೇ ಇಷ್ಟು ದಿನ ಊರಲ್ಲೇ ಇದ್ದಾಗ ಏಕೆ ಏನೂ ಆಗಲಿಲ್ಲ..?? ದೇವರೇ ಇಂತಹ ಸ್ಥಿತಿ ಯಾರಿಗೂ ಬಾರದಿರಲಿ. ಸಾಯುವ ವಯಸ್ಸಲ್ಲದಾಗ ಸಾವು ಬರುವುದು ಎಷ್ಟು ನ್ಯಾಯವೋ ಅರಿವಿಲ್ಲ.!!  

ಇದು ವಿಧಿ ಲಿಖಿತವೋ... ಏನೋ..??!! ಆದರೆ ಮನಸ್ಸು ಮಾತ್ರ ಮರುಗುತ್ತದೆ. ಕಾಣದ ದೇಶದಲ್ಲಿ ಕಷ್ಟಕ್ಕೆಂದು ಬಂದು ದುಡಿಯುವಾಗ ಅವರನ್ನೇ ನಂಬಿದ ಕುಟುಂಬವನ್ನು ನೆನೆದಾಗ ಮಾತು ನಿಂತು ಹೋಗುತ್ತದೆ.

ಜೀವವಿಲ್ಲದಾಗ ಆ ಆತ್ಮಕ್ಕೆ ಶಾಂತಿ ಕೋರುವುದೊಂದೇ ದಾರಿ... ಅವರ ಕುಟುಂಬಕ್ಕೆ ಈ ದುಃಖ ಭರಿಸುವ ಶಕ್ತಿ ಕೊಡಲೆಂದು ಆ ದೇವರಲ್ಲಿ ಪ್ರಾರ್ಥಿಸುತ್ತೇನೆ. 


ಇನ್ನು ಆತನ ಉಸಿರಿಲ್ಲದ ದೇಹ ಊರು ಮುಟ್ಟುಲು ಎಷ್ಟು ದಿನಗಳೋ... ಈ ವಿಷಯ ತಿಳಿದ ಮನೆಮಂದಿ ಮನಸ್ಸಿನ ಪರಿಸ್ಥಿತಿ ಹೇಗೋ..?

ಎಲ್ಲಿ ಯಾವಾಗ.. ಏನು ನಡೆಯುತ್ತದೆ ಎಂದು ಯಾರಿಗೂ ತಿಳಿದಿಲ್ಲ... :( 


ಅವನ ಇರುವಿಕೆಯೇ ಅವನು ಕೊಟ್ಟ ಪೆನ್ನು..!!!

Monday, July 15, 2013

- ವೈಷಮ್ಯತೆ -

ಎಲ್ಲರಿಗೂ ಅವರದೇ ಸಂಪ್ರದಾಯ
ಅವರದೇ ನೀತಿ ನಿಯಮಗಳು
ಅವುಗಳ ದೂಷಣೆ, ಧೋರಣೆ
ನಮ್ಮದಲ್ಲದ ಪಾತ್ರಗಳು....

ಸಂಬಂಧ, ಸಂಸ್ಕೃತಿ
ಬೆಳೆದು ಬಂದ ಹಾದಿ
ಅವರೇ ಪೋಣಿಸಿಕೊಂಡ
ದಾರದೊಳಗಿನ ಮಣಿಗಳು..

ತನ್ನ ಇರುವಿಕೆ ಪರರ ಬದುಕಾಗದೆ
ಸ್ವಇಚ್ಚೆ, ಸ್ವಸಾಮರ್ಥ್ಯ ಗುರುತು
ಹಚ್ಚಿ ಬಾಳು ಬೆಳಗುವ ಹಸ್ತ
ಎಲ್ಲರೊಳಗು ಹುದುಗಬೇಕಿದೆ....

ಮೇಲ್ದರ್ಜೆ, ಕೀಳುದರ್ಜೆ
ಎಲ್ಲ ಹಳತು ಮಾಡಿ
ಹೊಸ ಹೆಜ್ಜೆಯ ಸೂತ್ರದಿ
ನಡೆವ ವಿದ್ಯಾವಂತನಾಗಲಿ...

ಬದುಕು ಬವಣೆಗಳ ಪಟ್ಟಿ
ಇಲ್ಲಿ ಜಾತಿ ವೈಷಮ್ಯ
ಭಾವನೆಗಳ ಶೋಷಣೆ
ಎಲ್ಲ ಬಲ್ಲವನಿಗೆ ಸಲ್ಲದು...

ಯಾರೋ ಬಿತ್ತಿದ ವಿಷ ಬೀಜವನು
ಫಸಲು ಮಾಡುವ ಹೊಣೆ ಹೊತ್ತಂತೆ
ಹಸಿವಿಗೆ ಆಹಾರವಾಗದೆ
ದ್ವೇಷದಾ ಕೊಳ್ಳಿಗೆ ಆಹುತಿಯಾಗದಿರಲಿ..

ಮನುಕುಲದ ವೈಷಮ್ಯ
ಪ್ರಕೃತಿ ದಹಿಸೋ ಸಾಮರ್ಥ್ಯ
ಭುಗಿಲೇಳುವ ಕ್ರೋಧಕೆ
ಹೊಲಸು ಮರೆತು; ಅಳಿಸಿ ತಾರತಮ್ಯ...

ಯಾವುದೋ ಜಾತಿ ಯಾರದೋ ನೀತಿ
ಉಸಿರು, ಹೃದಯ ಬಡಿತಕೆ ಯಾವ ಜಾತಿ
ಏನೊಂದು ಎಣಿಸದೆ ಸಾಗುತಿರುವ ದಿನಚರಿಗೆ
ವಿಚಾರವಾದಿಗಳು ನೆಡುವ ದ್ವೇಷ ಸಸಿಗಳು
ಹೆಮ್ಮರವಾಗಿ ಬೆಳೆಯದಂತೆ ಕಟಾವು ಮಾಡಲಿ...!!!


ನನ್ನ "ಮೃದುಮನಸು" ಕೂಸಿಗೆ ಐದು ವರ್ಷಗಳು ಕಳೆದಿವೆ. ಈ ಪಂಚವಾರ್ಷಿಕ ಬ್ಲಾಗಿನಡಿ ಈ ಪುಟ್ಟ ಸಾಲುಗಳು. ಇತ್ತೀಚೆಗೆ ಜನರಲ್ಲಿ ವೈಷಮ್ಯಗಳು ಮತ್ತು ನಮ್ಮನಮ್ಮಲ್ಲೇ ಇರುಸುಮುರುಸುಗಳು ಹೆಚ್ಚುತ್ತಿವೆ. ಅವೆಲ್ಲವನ್ನೂ ದೂಡಿ ವಿದ್ಯಾವಂತ ಜನರು ಸಂತೃಷ್ಟಿ ನೆಲೆ ಕಾಣಲೆಂಬುದೇ ನನ್ನ ಈ ಕವನದ ಆಶಯ.  

ವಂದನೆಗಳು
ಮನಸು

Sunday, July 7, 2013

"ಪವರ್ ಸ್ಟಾರ್ ಪುನೀತ್" ಜೊತೆ ಅಭಿನಯ - ಖುಷಿ ತಂದ ಕ್ಷಣ..!!


ಹಿಂದೆಯೊಮ್ಮೆ ಪುನೀತ್ ರಾಜ್ಕುಮಾರ್ ಅವರನ್ನು ಭೇಟಿಯಾಗಿದ್ದೆ. ಆತ್ಮೀಯ ಮಾತುಕತೆಗಳೊಂದಿಗೆ ಆತ್ಮೀಯರಾಗಿದ್ದರು. ಅದೇ ಕಾರಣಕ್ಕೆ ಅವರ ಚಲನ ಚಿತ್ರದಲ್ಲಿ ನನಗೊಂದು ಆಫರ್ ಬಂದಿತ್ತು. ನನ್ಗೂ ಖುಷಿ "ಪವರ್ ಸ್ಟಾರ್" ಜೊತೆ ಅಭಿನಯಿಸುವುದೆಂದರೆ ಏನು ಸಾಮಾನ್ಯನಾ..? ಎಂದು ಒಪ್ಪಿಕೊಂಡೆ. ಶೂಟಿಂಗ್ ದಿನವೂ ಬುಕ್ ಆಯ್ತು.

ಅಂದು ನನ್ನ ಪಾತ್ರದ ಬಗ್ಗೆ ನಿರ್ದೇಶಕರು ಎಲ್ಲವನ್ನು ಸವಿವರವಾಗಿ ತಿಳಿಸಿದರು ನಾನು ಮೇಕಪ್ ಇಲ್ಲದೆ ಸ್ವಲ್ಪ ಬಡತನದ ಹೆಣ್ಣು ಮಗಳಂತಿರಬೇಕಿತ್ತು..

ಅದೋ ಅಲ್ಲಿ ಕಾಣುವ ಮೂಲೆಯಲ್ಲಿ ನೀವು ಹಳೆಯ ಬಟ್ಟೆ ಕಾಣುತ್ತಲ್ಲಾ ಅದನ್ನು ಹೊದ್ದುಕೊಂಡು ಮಲಗಿ ... ಸ್ವಲ್ಪ ದೂರದಿಂದ ಪುನೀತ್ ನಿಮ್ಮ ಕೊಠಡಿಗೆ ಬರುತ್ತಾರೆ. ನಿಮ್ಮನ್ನು ನೋಡಿ ಮಾತನಾಡಿಸುತ್ತಾರೆ. - ಇಷ್ಟು ಸಾಕು ನಂತರ ಮುಂದಿನದು ಹೇಳುವೆ ಎಂದರು ನಿರ್ದೇಶಕರು.

ಸರಿ ಈಗ ನನ್ನ ಸರದಿ ನಾನು ಅಲ್ಲಿ ಕಾಣುವ ಪಾಳು ಬಿದ್ದ ಮನೆಯಲ್ಲಿ ಹೋಗಿ ಅಲ್ಲೇ ಕಾಣುತ್ತಿದ್ದ ಬಟ್ಟೆಯನ್ನು ಹೊದ್ದುಕೊಂಡು ಮಲಗಿದೆ - ಆ ಕಡೆಯಿಂದ ನಿರ್ದೇಶಕರು ಕ್ಯಾಮರಾ ಸ್ಟಾರ್ಟ್ ಆಕ್ಷನ್ ಎಂದರು... ನನ್ನದು ತೀವ್ರ ಮೌನ, ಆಸೆ ಬತ್ತಿದ ಕಣ್ಣುಗಳು, ನಿರಾಶೆಯ ಬದುಕು ಎಂಬಂತೆ ನೆಲದಲ್ಲಿ ಬಿದ್ದುಕೊಂಡಿರುವಂತ ಪರಿಸ್ಥಿತಿ.... ನನ್ನತ್ತ ಕ್ಯಾಮರ ಜ಼ೂಮ್
ಮಾಡಿ...ಮಾಡಿ ಇಟ್ಟರು ನಾನು ಮಾತ್ರ ಆಸೆಗಳೇ ಬತ್ತಿಹೋದಂತೆ ಮುಖ ತೆರೆದಿಟ್ಟು ಹರುಕಲು ಬಟ್ಟೆ ಹೊದ್ದು ಮಲಗಿದ್ದೆ... 

ನನ್ನ ಅಭಿನಯ ನಿರ್ದೇಶಕರಿಗೆ ಖುಷಿ ನೀಡಿತ್ತು .. ಎಕ್ಸಲೆಂಟ್, ಗುಡ್ ಹೀಗೇ ಮಲಗಿರಿ ಎಂದು ಅತ್ತ... ಪುನೀತ್ ಸರ್ ರೆಡಿನಾ..!! ಆಕ್ಷನ್ ಎಂದರು..

ಪುನೀತ್ ಬೂಟಿನ ಸದ್ದು ಟಪ್......ಟಪ್......ಟಪ್.......ಸದ್ದು ಮಾಡುತ್ತ ಬರುತ್ತಿದ್ದಾರೆ..... ಹಾಗೇ ಬನ್ನಿ ಇನ್ನೂ ಮುಂದಕ್ಕೇ ಎಂದು ನಿರ್ದೇಶಕರು ಹೇಳುತ್ತಿದ್ದಾರೆ.....ಸುತ್ತಲೂ ಇದ್ದ ನಾಲ್ಕಾರು ಜನ್ರಲ್ಲಿ ಎಲ್ಲಿ... ಆ ಹೆಣ್ಣು ಮಗಳು ಎಂದು ನಾನಿದ್ದ ಕಡೆಗೆ ಬಂದು ನನ್ನನ್ನೇ ದಿಟ್ಟಿಸಿ ನೋಡುತ್ತಿದ್ದಾರೆ... ಇನ್ನೇನು ಮಾತನಾಡಬೇಕು ಎನ್ನುವಾಗ ಅತ್ತ ನಿರ್ದೇಶಕ ಕಟ್..ಕಟ್ ಎಂದು ಬಿಟ್ಟರು....

ಪುನೀತ್ ಸರ್, ಎಕ್ಸಲೆಂಟ್...ಆಕ್ಟಿಂಗ್ ವಾಹ್..!!  ಎಂದು ನಿರ್ದೇಶಕರು ಬೆನ್ನು ತಟ್ಟಿದರು...

ನಾನು ಎದ್ದು ಇದೇನು ಇಷ್ಟೇನಾ..? ಎಂದು ಕೇಳಿದೆ. ಪುನೀತ್ ಸಹ ನನ್ನ ಜೊತೆಯೇ ಇದ್ದವರು ಏನು ಅವರಿಗೆ ಡೈಲಾಗ್ ಎಲ್ಲಾ ಏನಿಲ್ಲ ಯಾಕೆ..? ಎಂದು ಕೇಳುತ್ತಿದ್ದಂತೆ... ಇಲ್ಲ ಸರ್, ಇದೆ ಈಗ ಸದ್ಯಕ್ಕೆ ಇಷ್ಟೇ ಇರಲಿ ಮಿಕ್ಕಿದ್ದು ಮಧ್ಯಾನ್ಹ ಎಂದರು.... ಸರಿ ಎಂದು ಪುನೀತ್ ಅತ್ತ ಸರಿಯುತ್ತಿದ್ದಂತೆ..........

ನಿರ್ದೇಶಕರು ನೋಡಿಮ್ಮಾ ನೀವು ಹೋಗಿ ಮೇಕಪ್ ಮಾಡಿಕೊಂಡು ಬನ್ನಿ ಇನ್ನೊಂದು ಸನ್ನಿವೇಶವಿದೆ ಅದನ್ನು ಚಿತ್ರೀಕರಿಸೋಣ ಎಂದರು ನನಗೆ ಏನೂ ತೋಚಲಿಲ್ಲ ಸುಮ್ಮನೇ ತಲೆಯಾಡಿಸಿದೆ.

೩೦ ನಿಮಿಷಗಳ ನಂತರ ಮೇಕಪ್ ಮಾಡಿಕೊಂಡು ಪುನೀತ್ ಜೊತೆ ಕುಳಿತಿದ್ದೆ ಅತ್ತ ಮತ್ತೊಂದು ಸನ್ನಿವೇಶದ ಚಿತ್ರೀಕರಣ ನಡೆಯುತ್ತಿತ್ತು...

(ಸನ್ನಿವೇಶ)
ಇಬ್ಬರು ಚಿಕ್ಕ ಮಕ್ಕಳು ಮರದ ತೊಲೆಗಳು ಮೂರು, ನಾಲ್ಕನ್ನು ಒಟ್ಟೊಟ್ಟಿಗೆ ಹೊತ್ತು ತರುತ್ತಿದ್ದಾರೆ... ಮಣ ಭಾರ...!! ಭುಜದ ಮೇಲಿಟ್ಟುಕೊಂಡು ಒಂದು ಕೊನೆಯಲ್ಲಿ ಒಬ್ಬ ಹುಡುಗ ಮತ್ತೊಂದು ಕೊನೆಯಲ್ಲಿ ಇನ್ನೊಬ್ಬ ಹುಡುಗ ..ಕಷ್ಟಪಟ್ಟು ತರುತ್ತಿದ್ದಾರೆ ಎಂಬಂತೆ ಬಾಸವಾಗುವಂತೆ ಅವರ ಮುಖದಲ್ಲಿ ಕಾಣುತ್ತಿದೆ...ಸ್ವಲ್ಪ ದೂರ ಬಂದ ನಂತರ ವಿಶಾಲ ಮೈದಾನದಲ್ಲಿ ರಪ್ಪ್ ಎಂದು ಭಾರವೇ ಇಲ್ಲದಂತೆ ಎಸೆದುಬಿಟ್ಟರು...!!!!.

ಅಯ್ಯೋ, ಇದೇನು ಅಲ್ಲಿಂದ ಹೊತ್ತುಕೊಂಡು ಬಂದಿದ್ದು ನೋಡಿದರೆ ಭಾರವಿದ್ದಂತೆ ಇತ್ತು, ಈಗ ಒಳ್ಳೆ ಹೂವಿನ ಕಡ್ಡಿ ಹಿಡಿದಂತೆ ಎಸೆಯುತ್ತಿದ್ದಾರೆ. ನಿರ್ದೇಶಕರೆ ಯಾವುದೇ ಸನ್ನಿವೇಶವನ್ನು ಚಿತ್ರಿಸುವಾಗ ಅದು ಸ್ವಲ್ಪ "ವಾಸ್ತವಕ್ಕೆ ಹತ್ತಿರ" ಇರುವಂತೆ ಚಿತ್ರಿಸಿ... ಇಲ್ಲವಾದರೆ ಜನರಿಗೆ ಸುಮ್ಮನೆ "ಬಂಡಲ್" ತೋರಿಸಬೇಡಿ ಎಂದುಬಿಟ್ಟೆ.

ನಿರ್ದೇಶಕರಿಗೆ ಅದೆಲ್ಲಿತ್ತೋ ಕೋಪ ಒಂದೇ ಸಮನೆ ಬೈಯ್ಯುತ್ತ ನಿನ್ನನ್ನು ಈ ಸಿನಿಮಾದಿಂದ ಕಿತ್ತು ಹಾಕಲಾಗಿದೆ. ನಿನ್ನಂತವರು ಬೇಡವೇ ಬೇಡ ಎಂದುಬಿಟ್ಟ... ಇತ್ತ ಪುನೀತ್ ಸಮಾಧಾನ ಮಾಡುತ್ತಲೇ ಇದ್ದಾರೆ. ಅದೆಲ್ಲಿತ್ತೋ ನನ್ನ ಮೊಬೈಲಿನ ಕರೆಗಂಟೇ ಒಂದೇ ಸಮನೇ ಬಡಿದುಕೊಳ್ಳುತ್ತಿದೆ. ಬೇಸರದಿಂದಲೇ ಮೊಬೈಲ್ ಕೈಗೆತ್ತುಕೊಂಡು ನೋಡಿದೆ ಆಗ ತಿಳಿಯಿತು ಬೆಳಗ್ಗೆ ೬ ಗಂಟೆ ...ಎದ್ದೇಳು ಎಂದು ಶುಭಸೂಚಿಸುತ್ತಿದ್ದದ್ದು.

ಇಷ್ಟೆಲ್ಲಾ ಕಥೆಗೆ ಕಾರಣ ನೆನ್ನೆಯ ಉದಯಾ ಟೀವಿಯ ಪೃಥ್ವಿ ಚಿತ್ರ.