Showing posts with label ಬದುಕು. Show all posts
Showing posts with label ಬದುಕು. Show all posts

Wednesday, January 18, 2012

-ಬದುಕು ಸುಭೀಕ್ಷೆ-




ಬದುಕುವ ಆಸೆ
ನೀಡದಿರಲಿ ನಿರಾಸೆ
ಅದಕೆ ಬಯಸಿ ಹೊರಟೆ
ದುಡಿಮೆಯೆಂಬ ಹೊಟ್ಟೆ ಪಾಡಿಗೆ ...

ಬಡತನಕೆ ನೂರು ಮಕ್ಕಳು
ಕೆಸರಿಗೆ ಸಾವಿರಾರು ಹುಳಗಳು
ಎಂಬಂತೆ ಬೆಳೆದು ನಿಂತ ಸಂಸಾರ
ದೂಡಬೇಕಿದೆ ದುಡಿದು ಗೇಣು ಬಟ್ಟೆಗೆ....

ಭುವಿಯ ಹಾಸಿಗೆಯಲಿ ನಿದ್ರೆ
ನೇಸರನ ಬಿಸಿಲೊಡಲೇ ಛತ್ರ
ಹರಿದು ಹೋದರವರ ಪಾದರರಕ್ಷೆ 
ನಮ್ಮ ಬದುಕಿಗೆ ಶ್ರೀರಕ್ಷೆ...

ಬಡತನದ ಭಿಕ್ಷೆ
ಆ ದೈವ ಕೊಟ್ಟ ಶಿಕ್ಷೆ
ಅದನ ಮೆಟ್ಟಿ ನಿಂತರೇ
ಅದುವೆ ನಮ್ಮಗಳ ಸುಭೀಕ್ಷೆ...


@ಚಿತ್ರ ದಿಗ್ವಾಸ್

Sunday, October 9, 2011

-ಶೂನ್ಯ- (೦)

ಮದುವೆಯಾಗಿ ಇಲ್ಲಿಗೆ ಆಗಲೇ ೨೦ ವರ್ಷಗಳು ತುಂಬಿದೆ, ತವರನ್ನು ಮುಕ್ಕಾಲು ಮರೆತಾಯ್ತು, ಗಂಡನ ಮನೆಯೇ ಎಲ್ಲಾ. ಬೇಕು ಬೇಡಗಳ ತೀರಿಸುವುದೆಲ್ಲವೂ ಇಲ್ಲಿಯೇ, ನಾನು ಪೂರ್ಣ ಗಂಡ ಮತ್ತು ಈ ಮನೆಯವಳಾಗಿ ಬಿಟ್ಟಿದ್ದೇನೆ. ಅಂದು ಬಂದಾಗ ಎಲ್ಲವೂ ಹೊಸದಾಗಿತ್ತು, ತವರಿನ ಸಿರಿಯೇ ಕಣ್ಣ ಮುಂದಿತ್ತು... ಆದರೆ ಈಗ ಈ ಮನೆಯ ಸಿರಿಯ ಮುಂದೆ ತವರಿನ ಸಿರಿ ಮಾಸಿಹೋಗಿದೆ......

ಎಲ್ಲವೂ ಚೆನ್ನಾಗಿತ್ತು ಆದರೆ ಮದುವೆಯಾಗಿ ಇಷ್ಟು ವರ್ಷಗಳು ಕಳೆದರೂ ನನ್ನದೆಂಬ ಆಸ್ತಿ ಸಂಪಾದಿಸಲೇ ಇಲ್ಲ, ಗಂಡನ ಜೊತೆಗೆ ಅತ್ತೆ ಮಾವ ಮೈದುನಂದಿರು, ನಾದಿನಿಯರು, ತಂಗಿಯರು ಎಲ್ಲರ ಪ್ರೀತಿ ಸಂಪಾದಿಸಿದೆ, ಆದರೆ ಇಲ್ಲಿ ನನ್ನದೇ ಇದು ಎಂದು ಹಕ್ಕು ಚಲಾಯಿಸುವುದಾಗಲಿ, ಪ್ರೀತಿಯಿಂದ ಜೋರುಮಾಡುವುದಕ್ಕಾಗಲಿ ಆಗುತ್ತಿಲ್ಲವಲ್ಲ.... ಅದೇನು ಕೊರತೆಯೋ ಏನೋ ನಾನು ನನ್ನ ಕರುಳ ಕುಡಿ ಕೊಟ್ಟು ಕತ್ತರಿಸಿಕೊಳ್ಳುವಂತಹ ಯಾವುದೇ ಸಂದರ್ಭ ಬರಲೇ ಇಲ್ಲ....

ನಾನು ಸುಮಾರು ೨೦ ವರ್ಷಗಳೇ ಕಾದು ಬಿಟ್ಟೆ... ಅನಾಥ ಮಗುವಿಗಾದರೂ ಆಸರೆ ಇಟ್ಟಿದ್ದರೆ ಚೆನ್ನಾಗಿರುತ್ತಿತ್ತೋ ಏನೋ ಅದು ಸಹ ನಾನು ಮಾಡಲೇ ಇಲ್ಲ......... ಈಗ ಯಾಕೋ ಎಲ್ಲವೂ ನನ್ನನ್ನು ತುಂಬಾ ಕಾಡುತ್ತಲಿದೆ ಕಾರಣ ನನ್ನವನ ಇಲ್ಲದಿರುವಿಕೆ..!!!

ಪ್ರತಿ ಮನುಷ್ಯನಿಗೂ ಹೃದಯ ಇರಲೇಬೇಕು... ಪ್ರೀತಿಸೋಕೆ, ಮೆಚ್ಚಿ ಮಾತನಾಡೋಕೆ, ಉಸಿರು ಗಟ್ಟಿಯಾಗಿ ನಿಲ್ಲೋಕೆ, ರಕ್ತ ಹರಿದಾಡೋಕೆ ಎಲ್ಲಕ್ಕೂ ಬೇಕಾದದ್ದು ಹೃದಯ.. ಹಾ!! ಹೃದಯ ಇದೆ ನನ್ನಲ್ಲೂ, ಆದರೆ ಅದು ನಿಶಬ್ಧವಾಗಿದೆ ಏಕೋ ಏನೋ ಕೆಲಸನೇ ಮಾಡ್ತಾ ಇಲ್ಲ ಅನ್ನಿಸ್ತಾ ಇದೆ ಯಾಕೆ ಗೊತ್ತ... ಇತ್ತೀಚೆಗಷ್ಟೆ ನನ್ನವನೇ ಎಂದುಕೊಂಡಿದ್ದ ನನ್ನ ಹೃದಯ ಕಾಣದ ಊರಿಗೆ ತೆರಳಿಬಿಟ್ಟಿದೆ... ಹೃದಯ ಇಷ್ಟೆಲ್ಲಾ ಕಷ್ಟ ಕೊಡುತ್ತೆ ಅಂತ ಗೊತ್ತೇ ಇರಲಿಲ್ಲ... ನನಗೆ ನನ್ನವರು ಎಂಬುವರೇ ಇಲ್ಲದಾಗಿದೆ.

ಇನ್ನು ಪ್ರೀತ್ಸೋ ಗಂಡ ಇರುವಾಗ ಮಕ್ಕಳ ಹಂಗೇಕೆ ಎಂದು ೨೦ ವರ್ಷ ಕಾಲ ಹಾಕಿದೆ ಆದ್ರೆ ಇವತ್ತು ಏಕೋ ಅನಾಥ ಪ್ರಜ್ಞೆ ಕಾಡ್ತಾ ಇದೆ. ಪ್ರೀತ್ಸೋ ಗಂಡ ಇದ್ದಿದ್ದ್ರೆ ಈ ಯೋಚನೆ ಖಂಡಿತಾ ಬರ್ತಾ ಇರಲಿಲ್ಲ... ಆ ಹೃದಯ ಅವರಿಗೆ ಕೈಕೊಡ್ತು ಈಗ ನನ್ನ ಅನಾಥಳನ್ನಾಗಿ ಮಾಡ್ತು...

ತವರು ಮನೆಗೆ ವಾಪಸ್ಸ್ ಹೋಗೋಣ ಎಂದರೆ ಅಲ್ಲಿ ನಾನ್ನಿದ್ದಾಗ ಇದ್ದಂತ ಮನೆಯಂತಿಲ್ಲ ಎಲ್ಲವೂ ಬದಲಾಗಿದೆ. ಅಮ್ಮ ಅಪ್ಪ ತಮ್ಮ ಸ್ವಂತಿಕೆನ ಕಳೆದುಕೊಂಡಿದ್ದಾರೆ. ಅವರೇ ಸಂಪಾದಿಸಿದ ಕೋಟಿಗಟ್ಟಲೆ ಆಸ್ತಿಯಲ್ಲಿ ಮಜ ಮಾಡುವುದಕ್ಕೂ ಹಿಂದೂಮುಂದು ನೋಡ್ತಾ ಇದ್ದಾರೆ, ಕಾರಣ ಅಣ್ಣಂದಿರ ದರ್ಬಾರು ಅತ್ತಿಗೆಯರ ವ್ಯವಹಾರ, ನಮ್ಮವರೇ ಅಪರಿಚತರಂತೆ ಕಾಣ್ತಾ ಇದಾರೆ. ನಾನು ಇನ್ನು ಹೋಗಿ ಆ ಮನೆಯಲ್ಲಿ ಹೇಗೆ ಜೀವಿಸೋಕೆ ಆಗುತ್ತೆ.... ಇನ್ನು ೨೦ ವರ್ಷ ದೂಡಿದ ಗಂಡನ ಮನೆಯಲ್ಲಿ ಇರಬೇಕು. ಇವರೆಲ್ಲ ನನ್ನವರೇ ಆದರೆ ನನ್ನವನು ಇಲ್ಲದ ಮೇಲೆ ನನ್ನವರೆಲ್ಲ ಪರಕೀಯರೆಂಬ ಭಾವನೆ ಮೂಡ್ತಾ ಇದೆ. ಅತ್ತೆ ಮಾವನಿಗೆ ಕೊನೆಗಾಲದಲ್ಲಿ ಆಸರೆಯಾಗುವ ಆಸೆ ಇದೆ, ಆದರೆ ನನ್ನ ಮುಖ ನೋಡಿ ಅವರ ಮಗ ಇಲ್ಲವೇ ಎಂಬ ಕೊರಗು ದಿನವೂ ಅವರಿಗೆಲ್ಲ ಕಾಡದೆ ಇರುತ್ತಾ....

"ಗಂಡನನ್ನು ಕಳೆದುಕೊಂಡ ನಾನು ಅತ್ತೆಮಾವರಿಗೆ ಇತ್ತ ಮಗಳೂ ಆಗಲಾರೆ ಸೊಸೆಯೂ ಆಗಲಾರೇನೋ... ಎಂದೆನಿಸಿದೆ..."

ಮನೆಯಲ್ಲಿ ಮನೆಯೊಡಯನು ಇರಬೇಕು... ಕುಂಟನೋ ಕುರುಡನೋ ಏನಾಗಿದ್ದರೂ ಪರವಾಗಿ ಮನೆಯ ಮೂಲೆಯಲ್ಲಿ ಕುಳಿತಿದ್ದರೆ ಸಾಕಿತ್ತು.... ನನಗೂ ಧೈರ್ಯವಿತ್ತು, ೪೦ ದಾಟಿದ ವಯಸ್ಸು, ಆಸರೆಯೇ ಇಲ್ಲದ ಮನಸ್ಸು , ಸ್ವಂತಂತ್ರ ನಿರ್ಧಾರಗಳು ತೆಗೆದುಕೊಳ್ಳುವುದು ನಿಜಕ್ಕೂ ಕಷ್ಟ, ಗಂಡನಿದ್ದರೆ ನನಗೆ ಅವನು ಅವನಿಗೆ ನಾನು ಎಂದು ಇದ್ದುಬಿಡುತ್ತಿದ್ದೆವು.... ಇನ್ನೂ ನಾನು ಸುಮಾರು ೨೦ ವರ್ಷಗಳಷ್ಟೇನಾದರೂ ಬದುಕಿದ್ದರೆ ಅಥವಾ ನನ್ನ ಕೈಕಾಲಾಡದಂತ ಕಾಲದಲ್ಲಿ ಯಾರ ಆಸರೆ ಬಯಸಲಿ, ಅಮ್ಮ ಅನ್ನೋ ಸ್ವರವಿಲ್ಲ, ಪ್ರೀತಿಯಿಂದ ಅಮ್ಮಿ ಎಂದು ಕರೆಯೋ ಗಂಡನಿಲ್ಲ....... "ಬದುಕೇ ಶೂನ್ಯ"ವಾಗಿದೆ ಮುಂದೇನು ಗತಿ...ಎಂಬ ಭಯ ಕಾಡ್ತಾ ಇದೆ...????
ಮಗನೋ, ಮಗಳೊ ಇದ್ದಿದ್ದರೆ ಸ್ವಲ್ಪವಾದರೂ ಮರೆಯುತ್ತಲಿದ್ದೆನೋ ಏನೋ.... ಮುಂದಿನ ಜೀವನದ ಭಯವನ್ನಾದರೂ ಆ ಕೂಸು ಮರೆಮಾಚಿಸುತ್ತಿತ್ತೇನೋ ಗೊತ್ತಿಲ್ಲ... ಎಲ್ಲರೂ ಹೇಳಿದಂತೆ ಮಕ್ಕಳು ಬೆಳದ ಮೇಲೆ ಕೈಗೆ ಸಿಗುವುದಿಲ್ಲ ಅಂತಾರೆ... ಆದರೆ ಕೈಗೆ ಸಿಗದಿದ್ದರೂ ಎಲ್ಲೋ ನನ್ನವರು ಅನ್ನೋರು ಇದ್ದಾರೆ ಸತ್ತಾಗ ಮಣ್ಣಾಕುವ ಜೀವವೊಂದಿದೆ ಎಂದೆನಿಸುತ್ತೆ..!!! ಆದರೆ ಈಗ ಇದಾವುದೂ ನನಗಿಲ್ಲ.. ಯಾವ ಭಾಗ್ಯವೂ ನನಗಿಲ್ಲವೇ ಹೇ!! ದೇವರೆ... ಮುಂದಿನ ಶೂನ್ಯ ಬದುಕು ದೂಡುವುದು ಹೇಗೆ...???????? ಎಲ್ಲವೂ ಪ್ರಶ್ನಾರ್ಥಕ..??? ಕಂಬನಿಯೇ ನನ್ನ ಸಮಾದಾನಕ್ಕೆ ನಿಂತಿದೆ ಬೇರಾವ ಸಾಂತ್ವಾನ ನನ್ನೊಳಗಿಲ್ಲದಾಗಿದೆ..

ನನ್ನವನ ಜೊತೆ ನಾನು ಹೋಗುವ ಹಾಗೆ ಆ ದೇವರು ಕರುಣಿಸಿದ್ದರೆ ಎಲ್ಲವೂ ಚೆನ್ನಾಗಿತ್ತು...ಈಗ ನನ್ನಲ್ಲಿ "ಸಾಯುವ ಧೈರ್ಯ" ಕೂಡಾ ಇಲ್ಲ...

ಉಸಿರು ಬಿಕ್ಕುತಿದೆ...
ದುಃಖ ಉಮ್ಮಳಿಸುತಿದೆ
ಅನಾಥ ಪ್ರಜ್ಞೆಯ
ಶೂನ್ಯ ಸಿಂಹಾಸನದ
ನನ್ನ ಬದುಕು ಜೋತಾಡುತಿದೆ.....
-----
ಚಿತ್ರಗಳು: ಅಂತರ್ಜಾಲ

Tuesday, July 19, 2011

ಸಾರ್ಥಕ ಬದುಕು


@ಚಿತ್ರ ದಿಗ್ವಾಸ್
----------

ಬಿಸಿಲ ಕಾವು ರಾಚಿದರೇನು
ಧೂಳು ಮೈಯ್ಯನೆರಗಿದರೇನು
ರಾಶಿ ರಾಗಿ ತುಂಬಿ ತುಳುಕಿದರು
ಸ್ವಚ್ಚಗೊಳಿಸೋ ಕಾರ್ಯ ನಮ್ಮದಲ್ಲವೇನು..?

ದಿನದ ಹಸಿವು ಕಾಡದಿರದು
ಅದಕೆ ನೋಡಿ ನಮ್ಮ ದುಡಿಮೆ
ಏನು ಇರುವುದೋ ಅನ್ನದ ಮಹಿಮೆ
ನಮ್ಮ ಶ್ರಮದ ಹಿಂದೆ ಹಲವು ಭಾವ
ಮನುಜ ಅದನು ನೆನೆದರೆ ನಮ್ಮ ಬದುಕು ಸಾರ್ಥಕ...

ಕಷ್ಟ-ನಷ್ಟಗಳ ಆಗರ ರೈತ ಜೀವನ
ಧೀರ್ಘ ಮಳೆ, ಬರಗಾಲದ ಹೊಳೆ
ಅಧಿಕ ಕಳೆ, ಬೆಳೆದ ಬೆಳೆ
ಎಲ್ಲ ಎಣಿಸಿ ಶೃಂಗರಿಸಬೇಕಿದೆ ಈ ಕಣ...

ಮುಸುಕು ವೇಷ, ಮಸುಕು ನೋಟ
ಧೋ ಎನುವ ಧೂಳಿನ ಆರ್ಭಟ
ಮನೆ-ಹೊಲ ಕೆಲಸ ಸರಿದೂಗಿಸಿ ನಡೆಸುವ
ತೃಪ್ತಿ ಜೀವನ ಬಲ್ಲವನೇ ಬಲ್ಲ.....!!!