Monday, June 8, 2015

ಅವನಿಲ್ಲದಾ ಹೊತ್ತು - How Old Are You..?

ನಿನ್ನ ವಯಸ್ಸು ಎಷ್ಟು..?


 ನನ್ನವನಿಲ್ಲದ ಹೊತ್ತು, ಟಿವಿ ರಿಮೋಟ್ ಕೈನಲ್ಲಿಯೇ ಇತ್ತು, ಚಾನಲ್ ಬದಲಿಸಿ ಬದಲಿಸಿ ಸಾಕಾಯ್ತು ಬರಿ ಅದೆ ಅತ್ತೆ-ಸೊಸೆ ವೈಷಮ್ಯ, ಮಕ್ಕಳಾಗೋಲ್ಲ ಗಂಡನಿಗೆ ಡೈವರ್ಸ್ ಇದೆ ತರಹ ಸೀರಿಯಲ್ ನೋಡಿ ದೇವಾ..!! ಇನ್ನು ನಾವು ಯಾವ ಜಮಾನದಲ್ಲಿದ್ದೀವಪ್ಪ, ನಮ್ಮ ಜನರನ್ನ ನೀನೆ ಕಾಪಾಡಬೇಕಪ್ಪ ಎಂದು ಕೊಂಡು ಟಿವಿ ಸ್ವಿಚ್ ಆಫ್ ಮಾಡಿದೆ.  

ಬೆಳಗ್ಗೆಯಷ್ಟೆ ಕೇರಳದ ಗೆಳತಿಯ ಹತ್ತಿರ ಇತ್ತೀಚೆಗೆ ಮಲಯಾಳಂನ ಒಳ್ಳೊಳ್ಳೆ ಫಿಲ್ಮ್ ಗಳನ್ನು ನೋಡಿಲ್ಲ, ಸ್ವಲ್ಪ ಲಿಸ್ಟ್ ಕೊಡು ಅಂದೆ. ಅದರಲ್ಲಿ ೪-೫ ಹೆಸರುಗಳಿದ್ದರಲ್ಲಿ ನನ್ನ ಸೆಳೆದಿದ್ದು "How Old Are You" ಚಿತ್ರದ ಹೆಸರು. ಹೇಗೂ ನನ್ನವನಿಲ್ಲ ನನ್ನಷ್ಟಕ್ಕೆ ನಾನೆ How Old Are You ಎಂದುಕೊಂಡು ಯೂಟ್ಯೂಬ್ ನಲ್ಲಿ ಹುಡುಕಿ ಎರಡೂವರೆ ಗಂಟೆಗಳ ಕಾಲ ನನ್ನನ್ನು ಹಿಡಿದಿಟ್ಟಿದ್ದು ಮಾತ್ರ ಸುಳ್ಳಲ್ಲ.  

ಸುಮಾರು ೧೩-೧೪ ವರ್ಷಗಳ ನಂತರ ಮರಳಿ ನಟನೆಗೆ ಬಂದ ಮಂಜು ವಾರಿಯರ್ ಬಹಳಷ್ಟು ಇಷ್ಟವಾದಳು, ಪಾತ್ರ ಹೇಳಿ ಮಾಡಿಸಿದಂತ್ತಿತ್ತು. ಒಂದು ಹೆಣ್ಣು ತನ್ನೊಳಗಿನ ಸಾಮರ್ಥ್ಯವನ್ನೆಲ್ಲ ಹೂತಿಟ್ಟು ಗಂಡ ಮನೆ-ಮಕ್ಕಳು ಸಂಸಾರ ಇದೆ ಜೀವನ, ಇಷ್ಟೆ ಬದುಕು ಎಂದು ಬೇಲಿ ಹಾಕಿಕೊಂಡವಳ ಯಶೋಗಾಥೆ. 

ನಿರುಪಮ ರಾಜೀವ್ ಆಗಷ್ಟೆ ೩೬ನೇ ವಯಸ್ಸಿಗೆ ಕಾಲಿಟ್ಟಿರುವಳು. ಅವಳ ವಯಸ್ಸೆ ಅವಳ ಬೆಳವಣಿಗೆಗೆ ಅಡಚಣೆಯಾದಂತೆ ಕಾಣುತ್ತದೆ. ಸಾಮಾನ್ಯ ಸರ್ಕಾರಿ ಕೆಲಸದಲ್ಲಿ ಕ್ಲರ್ಕ್ ಆಗಿರುವವಳ ಗಂಡ ತನ್ನ ಮುಂದಿನ ಭವಿಷ್ಯವನ್ನು ಐರ್ಲ್ಯಾಂಡ್ ನಲ್ಲಿ ಸೃಷ್ಟಿಸಿಕೊಳ್ಳಲು ಹೊರಡು ವ ತಯಾರಿಯಲ್ಲಿದ್ದವ. ಅವನ ಜೊತೆ ತಾನು ಕೆಲಸ ಹುಡುಕಿ ಅವನೊಟ್ಟಿಗೆ ಹೋಗಬೇಕೆಂಬ ಆಸೆಯಲಿ ಐರಿಷ್ ಕಂಪನಿಯ ಕೆಲಸಕ್ಕೆ ಇಂಟರ್ವ್ಯೂಗೆ ಹೋದವಳಿಗೆ ವಯಸ್ಸಿನ ಅಡ್ಡಿ. ಐರ್ಲ್ಯಾಂಡ್ ಗೆ ಹೋಗುವ ಗಂಡನಿಗೆ ತೊಂದರೆಯಾಗುತ್ತೆಂದು, ಗಂಡ ಮಾಡಿದ ಆಕ್ಸಿಡೆಂಟ್ ನಲ್ಲಿ ತನ್ನ ಹೆಸರು ತೂರಿಸಿಕೊಳ್ಳುವಳು. 

ಒಂದು ಬೆಳಗ್ಗೆ ನಿರುಪಮಾಗೆ ಐಜಿ ಕಚೇರಿಯಿಂದ ಕರೆ ಮಾಡಿ ಭಾರತದ ರಾಷ್ಟ್ರಪತಿ ನಿಮ್ಮನ್ನು ಭೇಟಿ ಮಾಡಬೇಕೆಂದು ಬಯಸಿದ್ದಾರೆ. ಕಾರಣ ಮಗಳು ತನ್ನ ಶಾಲೆಯಲ್ಲಿ ರಾಷ್ಟ್ರಪತಿಗಳನ್ನ ಕೇಳಿದ ಪ್ರಶ್ನೆ. ಭೇಟಿಗೂ ಮುನ್ನ ಅವಳನ್ನ ಗುರುತಿಸಿದ ಜನರೆ ಹೆಚ್ಚು. ಅದೇ ಖುಷಿಯಲ್ಲಿ ಪ್ರಧಾನಮಂತ್ರಿಗಳನ್ನ ಭೇಟಿ ಮಾಡಿದ್ದೇ ಒಂದು ದೊಡ್ಡ ದುರಂತ. ಅದಾದ ಮೇಲೆ ಎಲ್ಲೆಡೆ ನಗೆಪಾಟಲಿಗೆ ಈಡಾಗುತ್ತಾಳೆ. ಸಾಮಾಜಿಕ ತಾಣಗಳಲ್ಲಿ ಕಾರ್ಟೂನ್ ಆಗುವಳು. ಇದೇ ಕಾರಣಕ್ಕೆ ಅವಮಾನಗಳನ್ನ ಎದುರಿಸಿದ ಮಗಳು ಅಮ್ಮನನ್ನ ಕೀಳಾಗಿ ನೋಡುವುದು, ಗಂಡನ ಸ್ವಾರ್ಥ, ನಿರ್ಲಕ್ಷ್ಯತನ ಇದೆಲ್ಲವನ್ನು ಅನುಭವಿಸುತ್ತಿದ್ದ ನಿರುಪಮ ಇದ್ದಕ್ಕಿದ್ದಂತೆ ಗಂಡ-ಮಗಳು ಐರ್ಲ್ಯಾಂಡ್ ಗೆ ಹೊರಟು ನಿಂತಾಗ ಕುಗ್ಗಿ ಹೋಗುತ್ತಾಳೆ. 

ವಯಸ್ಸಾದ ತಂದೆ-ತಾಯಿಯನ್ನು ನೋಡಿಕೊಂಡು, ಅದೇ ಸರ್ಕಾರಿ ಕೆಲಸ,  ಜೊತೆಗೆ ಆಗೊಮ್ಮೆ ಈಗೊಮ್ಮೆ ಸ್ಕೈಪ್ ನಲ್ಲಿ ಮಗಳ ಜೊತೆ ಒಡಾನಾಟ, ಅಷ್ಟೇ ಜೀವನ. ಇವೆಲ್ಲದರ ಮಧ್ಯೆ ತನ್ನ ಹಳೆಯ ಗೆಳತಿ ಸೂಸನ್ ಭೇಟಿ. ಅವಳು ನೀಡಿದ ಧೈರ್ಯ ಕಾಲೇಜಿನಲ್ಲಿ ನಿನ್ನಲ್ಲಿದ್ದ ಹೋರಾಟದ ಕಿಚ್ಚು ಈಗಲೂ ಇರಲಿ, ಆಗಿನ ಧೈರ್ಯ ಹುಮ್ಮಸ್ಸು ಈಗೆಲ್ಲಿ ಹೋಯಿತು, ಅದನ್ನ ಅಲ್ಲೇ ಸುಟ್ಟುಹಾಕಿದ್ದೀಯಾ? ಈಗಲೂ ಕಾಲ ಮಿಂಚಿಲ್ಲ ಬದುಕಿನಲ್ಲಿ ಯಾವ ವಯಸ್ಸಿನಲ್ಲಾದರೂ ಆಸೆಗಳಿಗೆ ರೆಕ್ಕೆ ಕಟ್ಟಬಹುದು. ಜೀವನ ಎಂದಿಗೂ ಹೊಸತನವನ್ನ ಸೃಷ್ಟಿಸುತ್ತದೆ. ವಯಸ್ಸು ಯಾವುದಾದರೇನು ನಮ್ಮ ಕನಸಿಗೆ ನಾವೇ ಸಹಿ ಹಾಕಬೇಕು 'Your dream is your Signature' ಇದೊಂದು ಮಾತು ನಿರುಪಮಳಲ್ಲಿ ಮನಸ್ಥೈರ್ಯವನ್ನು ಹೆಚ್ಚಿಸುತ್ತದೆ. ಇದಾದ ನಂತರ ಎಲ್ಲವೂ ಬದಲಾವಣೆಯ ಹಾದಿ.

ಮನೆಯ ಮಹಡಿಯ ಪುಟ್ಟ ಕೈತೋಟ ಮುಂದೊಂದು ದಿನ ದೇಶವೇ ಗುರುತಿಸುವಂತೆ ಮಾಡುವ ಕಥೆ. ಗಂಡ ಮತ್ತು ಮಗಳು ಅವಳ ಸಾಮರ್ಥ್ಯವನ್ನು ಗುರುತಿಸುವ ದಿನ ಹತ್ತಿರವಾದಾಗ ಹೆಂಡತಿಯಲ್ಲಿನ ಸಂತಸ. ನನ್ನಿಂದ ಏನೂ ಸಾಧ್ಯವಿಲ್ಲ ಎಂದುಕೊಂಡವಳಲ್ಲಿ ಸಾಧಿಸುವ ಛಲ ಕಾಣುವ ಚಿತ್ರ.  

ಎಷ್ಟೋ ಜನ ಗಂಡಂದಿರು ಹೆಂಡತಿಯರನ್ನ ಕೀಳಾಗೆ ಕಾಣುತ್ತಾರೆ. ಅವಳಿಂದ ಏನು ಸಾಧ್ಯ, ಅಯ್ಯೋ ನಿನ್ನ ಕೈಲಿ ಏನಾಗುತ್ತೆ.. ನೀನಿನ್ನು ಹಳೆ ಕಾಲದವಳು ಎಂದು ಹೀಯಾಳಿಸಿ ಆ ಹೆಣ್ಣಿನಲ್ಲಿರುವ ಸಾಮರ್ಥ್ಯವನ್ನೆ ಮೂಲೆಗುಂಪು ಮಾಡುತ್ತಾರೆ. ಅಂತವರು ನೋಡಲೆ ಬೇಕಾದ ಚಿತ್ರ.
ವಯಸ್ಸು ಎಷ್ಟಾದರೇನು ಸಾಧನೆಯ ಹಾದಿ ಸದಾ ಹಸಿರಾಗಿರುತ್ತದೆ. ಹೆಣ್ಣಿನ ಸಬಲೀಕರಣ,  Organic farming ಮತ್ತು ಅದರ ಅನುಕೂಲ ಇವೆಲ್ಲವನ್ನು ಬಿಚ್ಚಿಡುತ್ತಾ ಹೆಣ್ಣಿನ ಭಾವುಕತೆಯ ತುಮುಲಗಳ ಚಿತ್ರ ಎಲ್ಲರಿಗೂ ಸ್ಪೂರ್ತಿದಾಯಕ.

ರೋಷನ್ ಆಡ್ರೀವ್ಸ್ ಅವರ ಅತ್ಯುತ್ತಮ ನಿರ್ದೇಶನ ಈ ಚಿತ್ರವನ್ನು ನೋಡಿ ನೀವು? ನಿಮ್ಮೊಳಗಿನ ಸಾಮರ್ಥ್ಯವನ್ನ ಗುರುತಿಸಿಕೊಳ್ಳಿ. ಭಾಷೆಯಾವುದಾದರೇನು ಒಳ್ಳೆಯದು ಎಂದಾದರೆ ಖಂಡಿತಾ ಆಹ್ವಾನಿಸಿ ಆಹ್ಲಾದಿಸಿ. 

 https://www.youtube.com/watch?v=sbNAvwI4w8w  

Saturday, May 2, 2015

ಹುಟ್ಟು ಹಬ್ಬಕ್ಕೊಂದು ಆಶಯ

Every step, innovative
with chain of desires
as you step in with,
no dearth of dreams

Let  peak the worthy dreams
Like a store of grains
Lets  you know its price
Build a living and its efforts

Foul surrounds you
a pure soul faces it
to possess  the power
a lightening can lit

As you climb the steps of age
World of energy you have
and be aligned with dreams
and goodness to side with love
                 
-----

ಹೆಜ್ಜೆ ಹೆಜ್ಜೆಗೂ ಹೊಸತನದ
ಆಸೆಗಳ ಸರಮಾಲೆಯಲಿ
ನಡೆವ ನಿನ್ನೊಳು
ಕನಸುಗಳಿಗೇನು ಬರವಿಲ್ಲ

ಯೋಗ್ಯ ಕನಸುಗಳು ಶಿಖರವಾಗಲಿ
ಕಟ್ಟಿದ ಬುತ್ತಿಯಂತೆ
ಅದರ ಬೆಲೆ ಅರಿವಿರಲಿ
ಬದುಕು ಕಟ್ಟುವ ಶ್ರಮ ತಿಳಿದಿರಲಿ

ಹೊಲಸು ನಮ್ಮ ಸುತ್ತಲಿದೆ
ಅದನು ಎದುರಿಸುವ
ಶುದ್ಧ ಮನಸಿಗೆ
ಕತ್ತಲಲೂ ಮಿಂಚಿನ ಬಲವಿದೆ

ವಯಸ್ಸಿನ ಮೆಟ್ಟಿಲು ಹತ್ತುತಾ
ಪ್ರಪಂಚದ ಶಕ್ತಿ
ಅದರೊಡನೆ ಬೆರೆವ ಕನಸು
ಶ್ರೇಷ್ಟವಾಗಿರಲಿ, ಒಲುಮೆಯ ಪರವಿರಲಿ
                    
ಮಗನ ಹುಟ್ಟು ಹಬ್ಬಕ್ಕೊಂದು ಆಶಯ....

Done in Pixlr

Tuesday, March 31, 2015

ನಿನ್ನ ನೋಡಿ ಕಲಿಯಬೇಕಿದೆ ಗುರುದೇವಾ..!!

ಮನಸಿನೊಡಲಾಳವ ಹಿಡಿದಿಡುತ
ಸ್ವಾರ್ಥತವ ದೂರವಿಟ್ಟು
ಬದುಕು ಸವೆಸುವುದೆಂದರೆ
ನಿನ್ನ ನೋಡಿ ಕಲಿಯಬೇಕಿದೆ 

ಬೆಂಗಾಡು ಭೂಮಿಯಲಿ ಬೆವರು ಸುರಿಸಿ  
ಪುಣ್ಯಕ್ಷೇತ್ರ ಕಟ್ಟಿದ ದೊರೆಯೇ
ನಿನ್ನ ಋಣದಲಿ ಬದುಕು ಸಾಗಿಸುತ
ನೆಮ್ಮದಿಯ ನೆಲೆ ಕಂಡವರು ಸಾವಿರಾರು

ಪ್ರತಿಫಲವೆನದೆ ಬಡವ-ಬಲ್ಲಿದನೆನದೆ
ಅಂಗಿ-ಅನ್ನಕೆ ದಾನಿಯಾಗಿ 
ವಿದ್ಯೆ-ಬುದ್ಧಿಗೆ ಗುರುವಾಗಿ  
ಆವರಿಸಿದ ಕತ್ತಲೆಗೆ ಬೆಳಕು ನೀ

ಹರಯದಲಿದ್ದ ಹುಮ್ಮಸ್ಸು ಇಂದಿಗೂ ಅದೇ ತೇಜಸ್ಸು
ಜಾವಕೇ ಎಚ್ಚರ ಬೆರೆವ ಮನಗಳಿಗೆ ಬಲು ಹತ್ತಿರ
ನಿನ್ನೊಳಗಿನ ಅರಿವು ಮೊಗೆದಷ್ಟು ಮುಗಿಯದ ಸರೋವರ  
ಅರಿತಷ್ಟೂ ನೀ ಶಿಖರದಂತೆ ಎತ್ತರ   

ನಿನ್ನ ಶ್ರಮದ ನಡಿಗೆ ಸಿದ್ದಗಂಗೆಯ ಮುಡಿಗೆ
ಅಂದು ನೀ ಹಿಡಿದ ಭರವಸೆಯ ಜೋಳಿಗೆ
ಈಗಲೂ ದಿನಂಪ್ರತಿ ತುಂಬುತ್ತಿದೆ 
ಅದು ಶ್ರೀಕ್ಷೇತ್ರಕೆ ನೀ ನೀಡಿದ ಕೊಡುಗೆ

ದೇವ ನಿನ್ನ ಈ ನೂರ ಎಂಟು 
ಬಯಲೊಳಗೆ ಆಸೆಗಳನು ಬೆತ್ತಲಾಗಿಸಿ
ನಾಡಿಗೆ ನೀ ಬೆಳೆಸಿದ ನಂಟು 
ಎಂದೂ ಕಳೆದುಕೊಳ್ಳಲಾರದಂತಾ ಗಂಟು 

ನೆಲ ನಾಡು ಜನ ಮನ ಕಾಯಕ 
ಎಲ್ಲವನು ಗೆಲುವುದೊಂದು ಧ್ಯಾನ
ಹೊಗಳಿಕೆ ಸನ್ಮಾನಗಳ ಬದಿಗಿಟ್ಟು
ಕೈಂಕರ್ಯದಲಿ ಸದಾ ತಲ್ಲೀನ 

ನಿನ್ನ ಆ ಮಿಂಚು ನೋಟ ಮಲ್ಲಿಗೆಯ ನಗು
ದಿಟ್ಟ ಹೆಜ್ಜೆ ಬಾಗಿದ ಬೆನ್ನಿನಲೂ ಹಲವು ಬಗೆ
ಕಾಣದ ದೇವರನು ಹುಡುಕಿದರೆ ಸಿಗುವ ನೀ
 ಅಲ್ಲಮನು ಕಂಡ ಗುಹೇಶ್ವರನೇ ಸೈ...!!!  

ಸದಾ ಒಳಿತನ್ನೇ ಬೆಳಸುತ್ತಾ, ಬೆಳಕಾಗಿರುವ ಶ್ರೀಗಳಿಗೆ ೧೦೮ನೇ ಹುಟ್ಟುಹಬ್ಬ ಹಾರ್ದಿಕ ಶುಭಾಶಯಗಳು... ಆಯಸ್ಸು ಅಕ್ಷಯವಾಗಲಿ... ಬಡವರಿಗೆ ನಿನ್ನೊಲುಮೆ ಸದಾ ದೊರಕಲಿ.

Tuesday, January 13, 2015

ನೋ ನೋ ನೋವು



ಅಯ್ಯೋ ಶಿವ್ನೇ ಇತ್ತ ಹೊರಳಿದರೆ 
ಯಾಕೋ ಚುಳ್ ಎನ್ನುತಿದೆ ಈ ಮಂಡಿ
ನಾನೇನು ಕಮ್ಮಿ ಶಕ್ತಿ ಇದೆ
ಮೊಂಡು ಮಾಡಿ ಮಂಡಿ ಮಡಚಿ ಕೂತೆ  
ಏಳುವಾಗಲೇ ಗೊತ್ತಾಗಿದ್ದು
ಅಮ್ಮಮ್ಮಾ ಅಪ್ಪಾ! ಈ ನೋವು ಯಾಕೆ ಎಂದು...

ಅಯ್ಯೋ ಇಲ್ಲಿ ಕಸ ಇಷ್ಟೊಂದು ಇದೆ
ಗುಡಿಸೋಣ ಅಂತಾ ಬಗ್ಗಿದೆ ನೋಡಿ
ಯಾಕೋ ಈ ಸೊಂಟ ಕಳ್ಕ್ ಅನ್ನುತಿದೆ
ಯಪ್ಪಾ ವಯಸ್ಸಾಯಿತಾ ಎಂದು
ಹುಟ್ಟಿದ ವರ್ಷ ಲೆಕ್ಕ ಹಾಕಿದೆ
ಇಲ್ಲಾ ಇನ್ನೂ ನಲವತ್ತು ದಾಟಿಲ್ಲ...

ಈಗ್ಲೇ ಹಿಂಗಾದ್ರೇ ಹೆಂಗೇ ದೇವ್ರು
ನಾನು ಕಾಶಿ-ರಾಮೇಶ್ವರ ಸುತ್ತೋದು ಹೇಗೆ
ವೈಷ್ಣೋದೇವಿಯನ್ನ ನಡಿಗೆಯಲಿ ಸಾಗಿ
ಮಾನಸ ಸರೋವವರನ್ನ ಮುಟ್ಟಿ
ಆ ಶಿವನ ಸಾನಿಧ್ಯದಲಿ ಮಂಜಾಗಿ ಕರಗದೆ
ಇನ್ನೊಂದಷ್ಟು ಪುಣ್ಯಕ್ಷೇತ್ರ ನೋಡುವಾಸೆ...

ಪರದೇಶ ಸುತ್ತುವ ಆಸೆಯಿಲ್ಲ ಸ್ವಾಮಿ
ನನ್ನ್ ದೇಶ ಸ್ವರ್ಗದ ಬೀಡು
ಆ ಕಲ್ಲು ಬಂಡೆಗಳಲಿ ಪ್ರಕೃತಿಯ ಮಡಿಲಲ್ಲಿ
ಒಂದಿಷ್ಟು ಹೆಜ್ಜೆ ಹಾಕುತ್ತ
ಒಂದಷ್ಟು ಇತಿಹಾಸ, ಚರಿತ್ರೆಗಳ ಮೆಲುಕು ಹಾಕಿ
ಭಾವ ಭಕ್ತಿ, ಜೀವನ ಶೈಲಿ ಅರಿಯುವಾಸೆ

ಈ ಚಳಿಗೆ ಕೈ ಕಾಲು ಹಿಡಿದು ಬಿಟ್ಟಿವೆ
ಹೆಜ್ಜೆ ಮುಂದೋಗುತ್ತಿಲ್ಲ ಅದ್ಯಾವ ದೇಹ ನಂದು
ಆಗೆಲ್ಲ ನಮ್ಮ ಹಿರಿಯರು ಮುದ್ದೆ, ಬಸ್ಸಾರು ಉಂಡು
ಗಟ್ಟಿ ಮೈಕಟ್ಟಿನಲಿ ಹೊಲಗದ್ದೆಗಳಲಿ ಮಿಂದು
ರಾಶಿ ಹಾಕುತ್ತಿರಲಿಲ್ಲವೇ..??
ಈಗ್ಯಾವ ಕೆಲಸ ಕಟ್ಟಿ ಹಾಕುತ್ತೇನೇ ಸ್ವಾಮಿ
ಈ ಸೋಮಾರಿ ಮಯ್ಯಿ ತಿರುಗಿದರೂ ನೋವು
ಕೂತರೂ ನಿಂತರೂ ನೋವೇ ನೋವು

ಮುಂದೆ ಕೂತಲ್ಲೇ ಕೈಲಾಸ ಸ್ವಾಮಿ
ಯಾವ ಪುಣ್ಯಕ್ಷೇತ್ರಗಳೂ ನನ್ನತ್ತ ಸರಿಯೋಲ್ಲ
ನಾನೇ ಕೂತಲ್ಲಿ ಕೈಮುಗಿದು
ಯೂಟೂಬ್ ನಲ್ಲೇ ಕೈಲಾಸ ಕಂಡು
ಆ ಮಾದೇಸ್ವರನಿಗೆ ದೀರ್ಘದಂಡವೇನೋ ಗೊತ್ತಿಲ್ಲ
ಅದ್ದುಪದ್ದು ಇಲ್ಲದ ಈ ನೋವಿಗೆ
ರುದ್ರನ ಮಂತ್ರ ಜಪಿಸಲು ರುದ್ರಾಕ್ಷಿ ತರಿಸಿಕೊಳ್ಳುವೆ
ಆಗಲಾದರೂ ಮುಕ್ತಿ ಸಿಗುವುದೇನೋ ಕಾಣೇ
ಈ ಬೆಂಬಿಡದ ನೋ..ನೋ ನೋವಿಗೆ..!! :) :)