Tuesday, August 28, 2012

ಮೂಕ ಮನಸು ಪ್ರೀತಿಸುತಿದೆ.. ಪ್ರೀತಿಸುತಿದೆ...!!!


ಮರುಭೂಮಿಯ ಬಿಸಿಲು ತಾಳಲಾರದೆ ರಜೆಗೆ ಬೆಂಗಳೂರಿಗೆ ವರ್ಷಗಳ ಹಿಂದೆ ಹೋಗಿದ್ದೆ. ಊರಲ್ಲಿ ಮನೆಗೆ ಹೊಸ ಅತಿಥಿ ಬಂದಿದ್ದ. ಏನ್ ಪ್ರೀತಿ, ಅಂತೀರಾ ಇವರು ಯಾರೋ ಗೊತ್ತೇ ಇಲ್ಲ, ಯಾರು ಬೇಕು ನಿಮ್ಗೆ.? ಯಾಕೆ ಬಂದಿರಿ? ಅಂತ ಕೇಳಲೇ ಇಲ್ಲ. ಅಮ್ಮ ಬೇರೇ ಅವನಿಗೆ ರೇಗ್ತಾ ಇದಾರೆ..!! ಏನೋ? ನೀನು, ಇವಳು ಯಾರು ಅಂತ ಗೊತ್ತಾ, ಹಂಗೆ ಹೇಗೆ ಒಳಗೆ ಬಿಟ್ಟೆ..?? ಯಾರಾದ್ರು ಬಂದ್ರೆ ಹೆಂಗೆ ತರಾಟೆ ತಗೋತೀಯಾ. "ಇವತ್ತೇನು ಹೀಗೆ ಸ್ವಾಗತ ಕೋರುತ್ತಿದ್ದೀಯ" ಇದೆಲ್ಲವನ್ನು ರಾಮು ಕೇಳಿಸಿಕೊಳ್ಳುತ್ತ ನನ್ನ ಸುತ್ತ ಓಡಾಡ್ತನೇ ಇದ್ದ. "ನಾನು ಈ ಮನೆಯವಳೇ ಅಂತ ಅವನಿಗೂ ಗೊತ್ತು" ನನ್ನ ನೋಡಿಲ್ಲದಿದ್ದ್ರೇ ಏನು?, ಅಮ್ಮನಿಗೆ ಹೀಗೆ ಸಮಜಾಯಿಸಿ ಕೊಡುವುದರ ಜೊತೆಗೆ ಹೊಸ ಅತಿಥಿ ನನ್ನ ಸ್ನೇಹಿತನಾಗಿದ್ದ.

ಆ ಒಂದು ತಿಂಗಳು ರಜೆಯಲ್ಲಿ ಬೆಂಗಳೂರಿನಲ್ಲಿದ್ದಾಗ, ಸುಮಾರು ಎಂಟತ್ತು ದಿನಗಳು ಮಾತ್ರ ಆ ಸ್ನೇಹಿತನ ಜೊತೆ ಮಾತನಾಡುತ್ತ, ಅವನಿಗೆ ಬೇಕಾದ ಬಿಸ್ಕತ್ತು, ಬನ್ನು, ಬ್ರೆಡ್ ಕೊಡುಸ್ತಾ ಇದ್ದೆ. ಅವನೂ ಸಹ ಖುಷಿ ಖುಷಿಲಿ ತಿಂದು ನನ್ನ ಹಿಂದೆನೇ ಓಡಾಡ್ತಾ ಇದ್ದ. ಇನ್ನು ನನ್ನ ಮಗನಿಗೆ ರಾಮು ತುಂಬಾ ಆತ್ಮೀಯ, ಕಾರಣ ಅದನ್ನು ಮನೆಗೆ ಕರೆದುಕೊಂಡು ಬಂದಿದ್ದೇ ಅವನು ಮತ್ತು ನನ್ನ ಅಣ್ಣನ ಮಗ. ಇನ್ನು ನನ್ನ ಜೊತೆ ದೋಸ್ತಿ ಕೇಳಬೇಕ ಮಗನ ರೆಕಮೆಂಡೇಷನ್ ಬೇರೇ ಇತ್ತು, ಅದಕ್ಕೆ ತಕ್ಕಂತೆ ನಮ್ಮಿಬ್ಬರ ಆತ್ಮೀಯತೆಯೂ ಜಾಸ್ತಿ ಆಗಿತ್ತು.

ಹುಫ್...!! ಮುಗಿತಾ ಇದೇ ರಜೆ. ನಾಳೆ ನಮ್ಮ ಗಂಟುಮೂಟೆ ಕಟ್ಟಬೇಕು ಮನೆನಲ್ಲಿ ಎಲ್ಲಾ ನಮ್ಮ ಲಗೇಜ್ ಪ್ಯಾಕ್ ಮಾಡ್ತಾ ಇದ್ದಾರೆ. ನಮ್ಮ ಈ ಸ್ನೇಹಿತ ಯಾಕೋ ಅತ್ತಿಂದಿತ್ತ ಇತ್ತಿಂದತ್ತ ಓಡಾಡ್ತಾ ಇದಾನೆ, ಎಲ್ಲರನ್ನು ನೋಡ್ತಾನೇ ಸುಮ್ಮನೇ ಇದ್ದಾನೆ, ಮಾತಿಲ್ಲ ಕತೆ ಇಲ್ಲ, ಮೌನ ಸಂಭಾಷಣೆ ನೆಡೆದಿತ್ತು. ಇತ್ತ ಬೆಳ್ಳಂ ಬೆಳ್ಳಿಗ್ಗೆ ನಮ್ಮ ಗಂಟುಮೂಟೆಗಳು ಕಾರಿನಲ್ಲಿ ಕುಳಿತಿವೆ. ಇವನು ಅದೇ ನನ್ನ ಸ್ನೇಹಿತ "ರಾಮು" ಸುಮ್ಮನೆ ಇರಲಾರದೇ ಮಹಡಿ ಮೇಲಿಂದ ಚಂಗನೆ ನೆಗೆದು ಕಾರಿನ ಸುತ್ತ ಪ್ರದಕ್ಷಿಣೆ ಹಾಕಿ, ಲಗೇಜ್ ಎಲ್ಲವನ್ನು ಮೂಸಿ ನೋಡಿದ್ದೇ ತಡ ಕಾರಿನ ಒಳಗೆ ಓಡೋಗಿ ಕುಳಿತುಬಿಟ್ಟ!!. ನನ್ನ ಕಳಿಸಲು ಬಂದವರೆಲ್ಲಾ "ಬಿಟ್ಟ ಕಣ್ಣು ಬಿಟ್ಟಂತೆ " ನೋಡ್ತಾ ಇದ್ದಾರೆ... "ನೋಡಿದ ಇದನ್ನ??", "ನೆನ್ನೆ ಮೊನ್ನೆ ನೋಡಿದೋಳನ್ನ ಇಷ್ಟು ಇಷ್ಟಪಡ್ತಿದೆ". ಹೀಗೆ ಒಬ್ಬರಿಗೊಬ್ಬರು ಮಾತಾಡ್ತಾ ಇದ್ದಾರೆ. ನಾನು ಇನ್ನೇನು ಹೊರಡಬೇಕು ಅಲ್ಲೇ ಇದ್ದ ಬೇಕರಿಯಿಂದ ಬನ್ನು ತಂದು ರಾಮು ಬಾರೋ ತಗೊಳ್ಳೋ ಎಂದು ಕರೆದರೆ ಬರಲೇ ಇಲ್ಲ, ಕಾರಿಂದ ಇಳಿಯದವನನ್ನು ಬಲವಂತವಾಗಿ ಹೊರಗೆ ಕರೆದು ಬನ್ನು ಕೊಟ್ಟರೆ ಮೂಸಿ ನೋಡ್ತಾನೇ ಬಾಯಿ ಮಾತ್ರ ತೆರೆಯುತ್ತಿಲ್ಲ, ಯಾಕೋ, ತಿನ್ನೋ?? ಎಂದು ಅಲ್ಲೇ ಕಲ್ಲಿನ ಮೇಲಿಟ್ಟೆ. ತಿನ್ನದೆ ನನ್ನ ಹಿಂದೆಯೇ ಬರ್ತಾ ಇದ್ದಾನೆ!! ಬೇಡ ರಾಮು ಹೋಗು, ಬರ್ತಾ ಇರ್ತೀನಿ ವರ್ಷಕೊಮ್ಮೆ ಆಯ್ತಾ ಎಂದು ಮುಖ ನೋಡಿದ್ರೆ ಅವನ ಆ ಕಪ್ಪು-ಬಿಳುಪಿನ ಕಣ್ಣ ರೆಪ್ಪೆ ಒದ್ದೆಯಲ್ಲಿತ್ತು.... ಏನೂ ಮಾತಾಡೋಕ್ಕೇ ಆಗ್ತಿಲ್ಲ ಅವನಿಗೆ. "ಮಾತು ಬರುವ ಹಾಗಿದ್ದರೆ ಚೆನ್ನಾಗಿತ್ತು ಕಣೋ", ’ನಿನ್ನ ಭಾವನೆಯನ್ನ ನನ್ನ ಜೊತೆ ಹಂಚಿಕೊಳ್ಳಬಹುದಿತ್ತು ಎಂದುಕೊಳ್ಳುತ್ತ ನನ್ನ ಮನಸ್ಸು ಒದ್ದೆಯಾಗಿತ್ತು’. ಇವನಿಗೆ ನಾನೇನು ಅಂತ ಸೇವೆ ಮಾಡಿಲ್ಲ ಅದೇಕೋ ಅಂದು ನನ್ನ ಬೀಳ್ಕೊಡುವಾಗ ತೋರಿದ ಪ್ರೀತಿ ನನ್ನ ಮನದ ಪುಟದಲ್ಲೇ ಉಳಿದುಬಿಟ್ಟಿತು..


"ರಾಮು"  ನಮ್ಮ ಮನೆಯ ನಾಯಿಮಹರಾಜ ಏನೋ ಒಂದು ತರ ಪ್ರೀತಿ ಈಗಲೂ ಮನೆಗೇನಾದರು ಫೋನ್ ಮಾಡಿದರೆ  ಒಮ್ಮೊಮ್ಮೆ ಅಪ್ಪನೋ ಅಮ್ಮನೋ ಯಾರಾದರು ಬೇರೆಯವರಿಗೆ ನೋಡು ಸುಗುಣ ಫೋನ್ ಮಾಡಿದ್ದಾಳೆ ಎಂದಾಗ ನನ್ನ ರಾಮು ಬೊಗಳಿದ್ದು ಕೇಳಿಸಿಕೊಂಡಿದ್ದೀನಿ.. ಆ ಬೊಗಳುವಿಕೆಯಿಂದಲೇ ಹೇಗಿದ್ದೀರಾ ಎಂದು ಕೇಳುವ ಹಾಗಿರುತ್ತೆ.. ಇದು ನನ್ನ ಬ್ರಾಂತೋ ಅಥವಾ ನಿಜವಾಗಿಯೂ ನನ್ನ ರಾಮು ನಮ್ಮ ನೆನಪಿಟ್ಟಿದ್ದಾನೋ ಗೊತ್ತಿಲ್ಲ.... ಆದರೆ ಫೋನ್ ಮಾಡಿದಾಗ ಈ ಅನುಭವ ಎಷ್ಟೋ ಬಾರಿ ನನಗಾಗಿದೆ......  ಪ್ರತಿದಿನ ಮನೆಮಂದಿ ನೆನಪಾಗ್ತಾರೋ ಇಲ್ಲವೋ ಆದರೆ ಈ ರಾಮು ಮಾತ್ರ ಪ್ರತಿಕ್ಷಣ ನೆನಪಾಗ್ತಾನೆ... 

ಪ್ರತಿ ವರ್ಷದ ಕಥೆಯಂತೆ ಕಳೆದ ತಿಂಗಳು ರಜೆಗೆ ಹೋದಾಗಲೂ ಅದೇ ಪ್ರೀತಿ ಅದೇ ಸ್ನೇಹ... ಬದಲಾವಣೆಯೇ ಇಲ್ಲದಂತ ನೋಟ-ಒಡನಾಟ. ಈ ಬಾರಿ ಬೆಂಗಳೂರನ್ನು ಬಿಡುವಾಗ ಬೆಳಗಿನ ಜಾವ ೩.೩೦ಕ್ಕೆ ಮನೆಯಿಂದ ಹೊರಟೆವು ಅಷ್ಟೊತ್ತಿನಲ್ಲಿ ಮಹಡಿಯ ಮೇಲೆ ಎಲ್ಲೋ ಮಲಗಿದ್ದವ ಜಂಗನೇ ಬಂದು ಬಿಟ್ಟ... ರಾಮನನ್ನು ಕಂಡ ಮನೆಯವರೆಲ್ಲಾ "ಎಲ್ಲರಿಗೂ ಹೇಳಿ ಹೊರಟೆ ರಾಮುಗೆ ಹೇಳಿದ್ದಾ..??" ನೋಡು ಆದರೂ ಅವನೇ ಎದ್ದು ಬಂದಿದ್ದಾನೇ ನಿಮ್ಮನ್ನ ಕಳುಹಿಸಿಕೊಡಲು ಎಂದು ಹೇಳಿದಾಗ ಮನಸ್ಸು ಏಕೋ ..ಏನೋ..ಎಂತದೋ ಭಾವನೆಯಲ್ಲಿತ್ತು ಹೇಳೋಕ್ಕೆ ಆಗ್ತಿಲ್ಲ..!!  ಹಾಗೇ ಅದೇ ಭಾವನೆಯಲ್ಲಿ ಹೊರಟ ನಮ್ಮನ್ನು ಬಹುದೂರ ಕಾರನ್ನು ಹಿಂಬಾಲಿಸಿ ಓಡಿ ಬರುತ್ತಿದ್ದವನನ್ನು... ಕಣ್ಣು ಮಬ್ಬಾಗುವರೆಗೂ ಅವನನ್ನೇ ದಿಟ್ಟಿಸಿ ನೋಡಿದೆ.....  


ರಾಮು.. ನನ್ನ ಪ್ರೀತಿಯ ರಾಮು... 

Thursday, August 23, 2012

ನನ್ನ ಪ್ರೀತಿಯ ಸ್ಯಾಮ್ ಅಲೆ... ಅವಳು ಬೀಸಿದಳು ಬಲೆ....


ನೀನು ತೀರಾ ಗಾಂಧಿವಾದಿ ಏನು ಆಗೋಕ್ಕೆ ಹೋಗಬೇಡ್ವೇ, ಸರ್ಕಾರ ಉದ್ದಾರ ಮಾಡೋಕ್ಕೆ ಹೋಗೋದು ಸಾಕು ಸುಮ್ನೇ ಮನೆನಲ್ಲಿ ಕಾರಿದೆ ಯಾರಾದ್ರು ಡ್ರೈವರ್ ಸಿಕ್ತಾರ ನೋಡು ದಿನದ ಬಾಟಾ ಕೊಟ್ಟು ಹೋಗಿ ಬರೋದು ಕಲ್ತಕೋ..!!!

ಹೂ ನಾವುಗಳು ವಿದ್ಯಾವಂತರು, ಬುದ್ಧಿವಂತರೇ ಹಿಂಗೆ ಮಾಡಿದ್ರೆ ಹೇಗೆ... ಆದಷ್ಟು ಸರ್ಕಾರಿ ವಾಹನಗಳನ್ನ ಉಪಯೋಗಿಸಿಕೊಂಡು ಓಡಾಡಬೇಕು... ಜನ ಎಲ್ಲರೂ ಕಾರ್, ಬೈಕ್ ಅಂತಲೇ ಓಡಾಡ್ತಾ ಇದ್ದು, ಸ್ವಲ್ಪನು ಮಯ್ಯಿ ನೋಯಿಸೋಕ್ಕೆ ಇಷ್ಟಪಡದೇ ಹೋದ್ರೇ ಹೆಂಗೆ.. ಹೀಗ್ ಮಾಡೇ ಪೆಟ್ರೋಲ್, ಡೀಸಲ್ ಬೆಲೆ ಗಗನಕ್ಕೆ ಹೋಗಿರೋದು... ಜೊತೆಗೆ ವಾಯು ಮಾಲಿನ್ಯವೂ ಹೆಚ್ಚಾಗಿರೋದು.

ಅಕ್ಕನ ಮಾತಿಗೆ ಬಾರಿ ಗಾಂಧಿವಾದದ ಮಾತು ಆಡಿ ಮಧ್ಯಾಹ್ನ ಮೆಜೆಸ್ಟಿಕ್ ಬಸ್ ಹತ್ತಿದ್ದೆ... ಅದು ಆಗಲೆ ೨ಗಂಟೆ ಊಟ ಬೇರೆ ಬಿಸಿಬಿಸಿ ತಿಂದಿದ್ದೇ... ಮೆಜೆಸ್ಟಿಕ್ ಬೇಡ ಯಲಹಂಕಗೇ ಸೀದ ಹೋಗುವ ಬಸ್ಗೆ ಹೋಗಿ ಅಲ್ಲಿಂದ ದೇವನಹಳ್ಳಿಗೆ ಹೋಗು ಅಂತ ಅಂದ್ರು ಮನೆನಲ್ಲಿ... ಮಗ ಮೆಜೆಸ್ಟಿಕ್ ನೋಡಿಲ್ಲ ಅವನಿಗೂ ತೋರಿಸಿದ ಹಾಗೆ ಆಗುತ್ತೆ ಎಂದು ಒಣಜಂಭವೋ, ಪ್ರತಿಷ್ಠೆಯೋ ಮಾಡಿ ಬಸ್ ಹತ್ತಿದೆ. ಮೆಜೆಸ್ಟಿಕ್ ಗೆ ೨೪೪ಸಿ ಬಸ್ ಹತ್ತಿ ಇಳಿಯುವ ಮುನ್ನ ತಾಮುಂದು ನಾಮುಂದು ಎಂಬಂತೆ ಒಬ್ಬರ ಮೇಲೆ ಒಬ್ಬರು ಮೈಮೇಲೆ ಬಿದ್ದು ಇಳಿದಿದ್ದಾಯ್ತು...

ನೆಂಟರ ಮನೆಗೆ ಹೋಗ್ತಾ ಇದ್ದೇನೆ ಏನಾದರೂ ತಿಂಡಿ ತೆಗೆದುಕೊಳ್ಳುವ ಎಂದು ಅಲ್ಲೇ ಹತ್ತಿರ ಇದ್ದ ನಂದಿನಿ ಸಿಹಿತಿಂಡಿಯ ಅಂಗಡಿಗೆ ಹೋಗಿ ಮೈಸೂರ್ ಪಾಕ್, ಪೇಡಾ, ಬಿಸ್ಕೇಟ್, ಅದು ಇದು ಆಳು-ಮೂಳು ಎಲ್ಲಾ ಪ್ಯಾಕ್ ಮಾಡಿಸಿದೆ.... ಮಗ ಐಸ್ ಕ್ರೀಂ ಎಂದಾ...?? ಹೂ ತಗೋ ಏನ್ ಬೇಕೋ ಎಂದೆ... ನೀನು ಒಂದು ತಿನ್ನಮ್ಮ ಅಂದಾ ನಾನು ಆಹಾ..!! ನಂದಿನಿ ಹಾಲಿನಲ್ಲಿ ಮಾಡಿದ ಐಸ್ ಕ್ರೀಂ... ತಿನ್ನೋಣ ಎಂದು ಆಗಲಿ ನನಗೂ ಒಂದು ಎಂದೆ...!!! ಇನ್ನೇನು ಬಿಲ್ ಕೊಡಬೇಕು... ಮಗ ಆಗಲೇ ಐಸ್ ಕ್ರೀಂಗೆ ಬಾಯಾಕಿದ್ದಾನೇ....!! ನನ್ನ ಬ್ಯಾಗ್ ನಲ್ಲಿದ್ದ ಪರ್ಸ್ ಕಾಣ್ತಾ ಇಲ್ಲ....... ಓಹ್..!!! ದೇವರೇ ಇರೋ ಬರೋ ದೇವರನ್ನೇಲ್ಲಾ ಜಪಿಸಿದೆ .. ತಕ್ಷಣ ಅಂಗಡಿಯವನಿಗೆ ಬಸ್ ಗೆ ಕೊಟ್ಟು ಮಿಕ್ಕಿದ್ದ ಕಾಸು ಕೈನಲ್ಲೇ ಇದ್ದದ್ದನ್ನು ಮಗನ ಐಸ್ ಕ್ರೀಂಗೆ ವಜಾ ಹಾಕಿಕೊಳ್ಳಿ ನನಗೆ ಐಸ್ ಬೇಡ ಎಂದು ... ನನ್ನ ಪರ್ಸ್ ಕಳ್ಳತನವಾಗಿದೆ ಎಂದು ಹೇಳಿ ಮಗನನ್ನ ಕರೆದುಕೊಂಡು ಓಡಿದೆ.

ಬಸ್ ಇಳಿದ ಜಾಗಕ್ಕೆ ಹೋಗಿ ನೋಡಿದೆ ೨೪೪ಸಿ ಬಸ್ ಕಾಣ್ತಾ ಇಲ್ಲ... ಕಣ್ಣು ಮಬ್ಬಾಗಿದೆ, ಏನು ಮಾಡುವುದು ತೋಚ್ತಾ ಇಲ್ಲ... ಸ್ವಲ್ಪ ಸಮಯದ ಮುಂಚೆ ಸ್ನೇಹಿತನಿಗೆ ಕರೆ ಮಾಡಿದ್ದೇ ಮತ್ತೆ ಅವನಿಗೆ ಕರೆ ಮಾಡಿ... ಹೀಗಾಗಿದೇ ಏನು ಮಾಡುವುದೋ ಎಂದೇ..!!! ನನ್ನ ಪರ್ಸ್ ನಲ್ಲಿದ್ದ ೫ಸಾವಿರ ರುಪಾಯಿ ಮತ್ತು ನನ್ನ ಪ್ರೀತಿಯ ಸ್ಯಾಮ್ ಕಾಣ್ತಾ ಇಲ್ಲ ಎಂದೇ...ಅಯ್ಯೋ..!! ಗೂಬೆ ಎಂತಾ ಕೆಲಸ ಮಾಡಿಕೊಂಡೆ... ಐ.ಎಂ ನಂ ಗೊತ್ತಿದ್ರೇ ಪೋಲೀಸ್ಗೆ ಕಂಪ್ಲೆಂಟ್ ಕೊಡು ಎಂದ..!!! ಯಾವುದಕ್ಕೂ ಪೋಲೀಸ್ ಠಾಣೆಗೆ ಹೋಗಿ ಬರೋಣ ಎಂದು ಉಪ್ಪಾರಪೇಟೆ ಸ್ಟೇಷನ್ ಹತ್ತಿರ ಹೋಗೋಕ್ಕೆ ಮಗನ ಕೈ ಹಿಡಿದು ಎಳೆದುಕೊಂಡೇ ಓಡಿದೆ....!!


ಮೊದಲ ಭೇಟಿ ಇದುವರೆಗೂ ಪೋಲೀಸ್ ಸ್ಟೇಷನ್ ಒಳಗಡೆ ಹೋಗಿ ನೋಡಿಲ್ಲ... ಇನ್ನೇನು ಒಳಹೋಗಬೇಕು ಎನ್ನುವಾಗ ಅಲ್ಲೇ ದ್ವಾರದಲ್ಲಿ ಬಂದೂಕುದಾರಿ ನಮ್ಮನ್ನೇ ದುರುಗುಟ್ಟುತ್ತಿದ್ದ... ಹಾಗೆ ಕಣ್ ಸರಿಸಿ ಒಳಗೆ ಹೋದೆ.. ಪೋಲೀಸ್ ಯಾರಿಗೋ ನೂರು ರುಪಾಯಿ ಎಲ್ಲಾ ಈಗ ನಡೆಯಲ್ಲಪ್ಪ... ಇದ್ದರೆ ೫೦೦ ಕೊಡು ಅಂತಾ ಇದ್ದ ಅಯ್ಯೋ ಕರ್ಮವೇ ನಾನು ಈಗ ಕೈಲಿದ್ದಿದ್ದೆಲ್ಲಾ ಕಳೆದುಕೊಂಡು ಬಂದಿದ್ದೀನಿ ಮತ್ತೆ ಇಲ್ಲಿ ಕಾಸು ಬೇರೆ ಕೇಳ್ತಾರೇನೋ ಗೊತ್ತಿಲ್ವೇ...ದೇವರೇ ಏನಪ್ಪಾ ಮಾಡೋದು ಎಂದು ಸ್ವಲ್ಪ ದೂರ ಹೊರಬಂದು ನನ್ನ ಯಜಮಾನರು ಕುವೈತ್ನಲಿದ್ದವರಿಗೆ (ನನ್ನ ಹತ್ತಿರವಿದ್ದ ಇನ್ನೊಂದು ಮೊಬೈಲಿನಿಂದ) ಕರೆ ಮಾಡಿದೆ "ಕಣ್ಣಲ್ಲಿ ಧಾರಾಕಾರ ಮಳೆ" ಆದರೆ "ಬೆಂಗಳೂರಲ್ಲಿ ಮಾತ್ರ ಆಗ ಮಳೆಯೇ ಇರಲಿಲ್ಲ"...  ನನ್ನ ಮೊಬೈಲ್ ಕಳೇದೋಯ್ತು ಪೋಲೀಸ್ ಸ್ಟೇಷನ್ಗೆ ಬಂದಿದ್ದೀನಿ ನನ್ನ ಈ-ಮೈಲ್ ನಲ್ಲಿ ಐ.ಎಂ ನಂಬರ್ ಇದೆ ನೋಡಿ ಮೆಸೇಜ್ ಮಾಡೋಕ್ಕೆ ಹೇಳಿದೆ... ಸ್ವಲ್ಪವೂ ಪ್ರಜ್ಞೇ ಇಲ್ವಾ ನಿನ್ಗೆ ಬೆಂಗಳೂರಲ್ಲಿ ಜನ ಹೇಗಿರ್ತಾರೆ, ಮಯ್ಯೆಲ್ಲಾ ಕಣ್ಣಾಗಿರಬೇಕು ಗೊತ್ತಾಗೋಲ್ವಾ..?!! ಯಜಮಾನರ ಕಡೆಯಿಂದ ಸುಪ್ರಭಾತ ಬರ್ತಾನೇ ಇದೆ.. "ಅಯ್ಯೋ ನನ್ನ ಕಷ್ಟ ನನ್ನ್ಗೆ ಈವಯ್ಯದೊಂದು ಗೊಣಗಾಟ.. ನಾನೇನು ಬೇಕು ಅಂತ ಕಳ್ಳಿ ಕೈಗೆ ಕೊಟ್ಟು ಬಂದ್ನಾ" ಹಿಂಗೆ ಮನಸಲ್ಲೇ ಅಂದುಕೊಂಡೆ ಧೈರ್ಯವಾಗಿ ಜೋರಾಗಿ ಅವರಿಗೆ ಹೇಳಿಲ್ಲ ಹೇಳಿದ್ರೇ ಅಷ್ಟೇ ಕಥೆ..:) ಐ. ಎಂ ನಂಬರ್ ತಗೆದುಕೊಂಡು ಕಂಪ್ಲೇಂಟ್ ಬರೆದುಕೊಟ್ಟೆ ಅಲ್ಲೇ ಕುಳಿತಿದ್ದ ಪೋಲೀಸ್ ಏನ್ ನಿಮ್ಮ ಹೆಸರು, ಯಾವ ಊರು ಕಂತೆ ಪುರಾಣಗಳನ್ನೇಲ್ಲಾ ಕೇಳ್ತಾ ಇದ್ರೇ ನನಗೆ ಒಳಗೊಳಗೇ ಕೋಪ.. ನನ್ನ ಊರು ಕೇರಿ ಕಟ್ಟುಕೊಂಡು ಇವರಿಗೇನು ಮೊದಲು ಕಂಪ್ಲೇಂಟ್ ಬಗ್ಗೆ ಮಾತಾಡಪ್ಪಾ ಸಾಮಿ ಎಂದುಕೊಂಡೇ... ನೋಡಿ ಮೆಡಂ ದಿನಕ್ಕೆ ಇಂತಹ ಕೇಸ್ ನೂರಾರು ಬರುತ್ವೇ ನಿಮ್ಮ ಕಳುವಾದ ವಸ್ತು ಸಿಕ್ಕರೇ ನಿಮ್ಮ ಅದೃಷ್ಟ, ಇಲ್ಲವೇ ಇಲ್ಲ... ನಿಮ್ಮ ಐ. ಎಂ ನಂಬರ್ ಕೊಟ್ಟೀದ್ದೀರಲ್ಲಾ ಕಂಪ್ಯೂಟರ್ ನಲ್ಲಿ ಹಾಕ್ತೀವಿ ನೋಡೋಣ ಎಂದು ಮುಂದಿನ ಮಹಭಾರತಕ್ಕೆ ಶುರುವಿಟ್ಟರು.

ಅಲ್ಲಾ...!!! ಮೇಡಮ್ ನಿಮ್ಗೇ ಸ್ವಲ್ಪಾನೂ ಗೊತ್ತಾಗಲಿಲ್ಲ್ವೇ (ಗೊತ್ತಾಗಿದ್ರೇ ನಿಮ್ಮ ಹತ್ರಾ ಯಾಕ್ ಬರ್ತಿದ್ದೇ ಸ್ವಾಮಿ - ಇದು ಮನಸಿನ ಮಾತು), ಬೆಂಗಳೂರಿನಲ್ಲಿ ಜನ ದಿಕ್ಕು ದೆಸೆ ಇಲ್ಲದೇ ಬಂದು ಇಲ್ಲಿ ಸುಖವಾಗಿ ಬದುಕೋದನ್ನ ಆಯ್ಕೇಮಾಡ್ಕೋತಾರೆ. ಮೊನ್ನೆ ಹಿಂಗೆ ಒಬ್ಳು ಕಳ್ಳಿ ಎಂ.ಬಿ.ಎ ಮಾಡಿರೋಳು ಸಿಕ್ಕಾಪಟ್ಟೆ ಕಳ್ಳತನ ಮಾಡಿ ಸಿಕ್ಕಾಕಿಕೊಂಡಿದ್ಲು ಎಂತಾ ಜಾಣರಿರ್ತಾರೆ ಗೊತ್ತೇ..??, ನಿಮ್ಮ ಪರ್ಸ್ ಕಳುವಾದ ಕೂಡಲೇ ಅವರ ಕೈನಲ್ಲಿ ಇರೋದೇ ಇಲ್ಲ ನಿಮಿಷಕ್ಕೆ ೪,೫ ಕೈ ಬದಲಾಯಿಸಿರ್ತಾರೆ ಗೊತ್ತೇ.. ನಾವು ದಿನಕ್ಕೆ ಎಷ್ಟು ಕೇಸ್ ನೋಡಿಲ್ಲಾ ಮೇಡಂ..!!! ಸ್ವಲ್ಪ ನೀವುಗಳು ಎಚ್ಚರಿಕೆಯಿಂದ ಇರ್ಬೇಕು..!!!(ಎಚ್ಚರ ಇಲ್ಲದ್ದಕ್ಕೆ ಹಿಂಗೆ ಆಗಿದ್ದು -ಮನಸಿನ ಮಾತು) ನೀವು ಬೆಂಗಳೂರಲ್ಲಿ ಎಷ್ಟು ದಿನ ಇರ್ತೀರೋ ಏನೋ ಅಷ್ಟರೊಳಗೆ ಸಿಕ್ಕರೆ ನೋಡ್ತೀವಿ ಮೇಡಮ್, ಆನಂತರ ನಿಮ್ಮ ಸಂಬಂಧಿಕರ ನಂಬರ್ ಕೊಟ್ಟಿದ್ದೀರಲ್ಲಾ ನೋಡೋಣ ಸಿಕ್ಕರೆ ತಿಳುಸ್ತೀವಿ. ನಮಗೂ ಕಷ್ಟ ಮೇಡಮ್ ಈ ಮೆಜೆಸ್ಟಿಕ್ ನಲ್ಲಿ ಸಿಕ್ಕಾಪಟ್ಟೆ ಜನ ಬರ್ತಾರೆ ಯಾರನ್ನ ಅಂತ ನೋಡೋದು, ಯಾರಿಗೆ ಅಂತ ರೂಲ್ಸ್ ಮಾಡೋದು, ಯಾರೋ ಒಬ್ಬಳು ಕಳ್ಳಿ ತರ ಇರ್ತಾಳೇ ಅಂದುಕೊಳ್ಳಿ ಅನುಮಾನಿಸಿ ಅವರನ್ನ ಕರೆತಂದ್ರೆ... ಅವರಿಂದೆನೇ ಬರ್ತಾರೆ ಜನ ಬಿಡಿಸ್ಕೊಂಡು ಹೋಗೋಕ್ಕೆ... ಹಾಗೂ ನಾವು ಪೋಲೀಸ್ ನವರು ಜೋರು ಮಾಡಿದ್ವಿ ಅಂತ ಇಟ್ಟುಕೊಳ್ಳಿ ಅಷ್ಟೇ ಮುಗಿತು ಕಥೆ ಪೋಲೀಸ್ ನವನು ನನ್ನ ಮೈಮೇಲೇ ಬಿದ್ದ, ನನ್ನ ಹತ್ತಿರ ಅಸಭ್ಯವಾಗಿ ವರ್ತಿಸಿದ ನಾನು ಕಳ್ಳಿಯೇ ಅಲ್ಲಾ...  ಮರ್ಯಾದಸ್ಥ  ಕುಟುಂಬದವಳು ಹೀಗೆಲ್ಲಾ ಮಾಡ್ತಾರೆ ಎಂದು ರಸ್ತೆಬದಿ ಕೂಗಾಡಿದ್ರೆ ಸಾಕು ಈ ಮೀಡಿಯಾ ಜನ ಕ್ಯಾಮರಾ ಎತ್ತಾಕೊಂಡು ಬಂದುಬಿಡ್ತಾರೆ, ಇರೋ ಬರೋ ಟಿವಿಗಳಲ್ಲೆಲ್ಲಾ ನೇರಪ್ರಸಾರ ಮಾಡ್ತಾರೆ ನಾವು ಏನು ತಪ್ಪೇ ಮಾಡದೇ ಇದ್ರು ಮನೆಮನೆಗಳಲ್ಲಿ ಹೆಸರಾಗ್ತೀವಿ ಕೊನೆಗೆ ಮನೆಗೆ ಹೋಗೋಕ್ಕು ಮುಖವಿಲ್ಲದೇ ಎಲ್ಲಾದ್ರು ದೇಶಾಂತರ ಹೋಗ್ಬೇಕಾಗುತ್ತೆ... ಇಂತ ಪರಿಸ್ಥಿತಿನಲ್ಲಿ ಕಳ್ಳರ ಮೇಲೆ ಕಣ್ಣಿಡೋದು ಹೇಗೆ ಹೇಳಿ ಮೇಡಮ್ ನೀವೇ..!!!

ಹೂ.. ಏನು ಮಾಡೋದು ಸರ್ ನಿಮ್ಮಲ್ಲೂ ತಪ್ಪುಗಳು ಇವೆ ಹಾಗೆ ನಿಮಗೂ ತೊಂದರೆಗಳೂ ಇವೆ ಎಂಬುದು ಗೊತ್ತು... ಆದರೂ ನಮ್ಮಲ್ಲಿನ ವ್ಯವಸ್ಥೆಗಳು ಸರಿ ಇಲ್ಲ. ಇದ್ದರೂ ಒಳ್ಳೆಯ ರೀತಿ ಬಳಸಿಕೊಳ್ಳುವವರು ಕಡಿಮೆ ಸರ್... ಎಂದೇಳಿ ಯಾಪ್ ಮೋರೆ ಹಾಕುತ್ತ ಕುಳಿತಿದ್ದೇ... ನನ್ನನ್ನೇ ದುರುಗುಟ್ಟುತ್ತ ಅಲ್ಲೇ ಜೈಲಿನಲ್ಲಿದ್ದವ ನೋಡ್ತಾ ಇದ್ದ, ಮಗ ಅಮ್ಮ ಕಳ್ಳ ನೋಡು ಜೈಲಿನಲ್ಲಿರೋನು ಯಾರೋ ಪೋಲೀಸ್ ಹತ್ರಾನೇ ಸಿಗರೇಟ್ ತಕೊಂಡು ಸೇದುತಾ ಇದಾನೆ... ಪೋಲೀಸೇ ಅವರಿಗೆ ಹೆಲ್ಪ್ ಮಾಡ್ತಾರಲ್ಲಮ್ಮಾ... ಎಂದು ಮಗ ಪಿಸುಗುಡುತ್ತಿದ್ದ... ಹೌದು ಸುಮ್ಮನಿರು ಅವನ ಕಡೆ ನೋಡ್ಬೇಡ ಭಯ ಆಗುತ್ತೆ ಏನ್ ಹಂಗಿದಾನೇ ಯಪ್ಪಾ..!! ರೌಡಿ ಥರ... ಕಳ್ಳ-ಪೋಲೀಸ್ ಆಟನೇ ಹಾಗೆ ಬಿಡು ಎಂದೇಳಿ  ಪೋಲೀಸ್ ಗೆ ನಮಸ್ಕಾರ ಹೇಳಿ ಅಲ್ಲಿಂದ ಕಾಲ್ ಕಿತ್ತೆ.

ಠಾಣೆಯ ಅನುಭವ ಹೊಸದಾದರು ಕೆಲವು ವಿಚಾರ ತಿಳಿದುಕೊಂಡು ಭಾರದ ಹೃದಯ ನನ್ನ ಪ್ರೀತಿಯ ಸ್ಯಾಮ್ ನ ಹತ್ತಿರವೇ ನನ್ನ ಹೃದಯದ ಅಲೆ ಬೀಸ್ತಾ ಇತ್ತು ಆದರೇನು ಮಾಡಲಾಗದು, ನನ್ನ ಜೀವನದಲ್ಲಿ ಮೊದಲಬಾರಿಗೆ ಒಂದು ವಸ್ತು ಕಳೆದುಕೊಂಡ ಅನುಭವ ನನ್ನ ಮನಸ್ಸಿಗೆ ಬಹಳ ಆಘಾತವನ್ನೇ ತಂದಿತ್ತು...!!

ಉಸಿರಿಲ್ಲದ ಅವನು
ನನ್ನವನ ಕೊಡುಗೆ
ನನ್ನತ್ತ ಬಂದಾಗ
ಬೆಸೆದೆ ಪ್ರೀತಿ ಬೆಸುಗೆ
ಸದಾ ರಿಂಗಣಿಸುತ
ಮುಂಜಾವ ರಾಗವಾಗಿ
ಸಂಜೆಯ ಹೊನಲಾಗಿ
ನನ್ನ ಆವರಿಸಿದ್ದ ಸ್ಯಾಮ್
ನನ್ನೊಡನಿಲ್ಲ...
ಅಲೆಯಾಗಿ ತೇಲಿ ಹೋದೆ
ಮತ್ತೆಂದು ಬರುವೇಯೋ
ಎಂದು ಕಾದು ಕುಳಿತಿರುವೆ
ನನ್ನ ನೆನೆದು ಬರುವೆಯಾ
ಹೇ.. ನನ್ನೊಲವ ಅಲೆಯೇ..

ಏನು ಕರ್ಮವೋ ಒಟ್ಟಲ್ಲಿ ಆಗಿನ್ನು ಕುವೈತಿನಿಂದ ಬೆಂಗಳೂರಿಗೆ ಬಂದು ವಾರವೂ ಕಳೆದಿರಲಿಲ್ಲ, ನನ್ನ ಪ್ರೀತಿಯ (ಸ್ಯಾಮ್ ಸಂಗ್ ವೇವ್-೨) ಸ್ಯಾಮ್ ನ ಅಲೆ ಅದೆಷ್ಟು ಬೇಗ ಬೀಸಿತೋ... ಬಿದ್ದೇ ಬಿಟ್ಟಿತು ಕಳ್ಳಿಯ ಬಲೆಗೆ...  

ಎಷ್ಟೋಂದ್ ಜನ ಇಲ್ಲಿ ಯಾರು ಕದ್ದೋರು... ಎಲ್ಲಿ ನಮ್ಮ ಸ್ಯಾಮ್ ಸಂಗ್ ಎಲ್ಲೀ


ಐ ಮಿಸ್ ಯು... ಸ್ಯಾಮ್