Monday, December 31, 2012

ಅನಾಥ ಗುರು..


 -ಕಥೆ -
ಅನಾಥ ಗುರು..
ಇದು ನಮ್ಮ-ನಿಮ್ಮ ನಡುವಿನ ಜೀವನ


ನಾನು ಅಂದ್ರೇ ನನ್ನ ಅಪ್ಪ, ಅಮ್ಮ, ಅಣ್ಣಂದಿರು ಅಕ್ಕಂದಿರಿಗೆ ಪ್ರಾಣ...!!! ಚಿಕ್ಕವಳಾಗಿ ಹುಟ್ಟಬೇಕು ಎಲ್ಲರ ಪ್ರೀತಿ ಗಳಿಸಬೇಕು.. ಇದು ನಾನು ಬೆಳೆಯುತ್ತಿರುವಾಗ ನನ್ನೊಳ ಮನಸ್ಸಿಗೇ ಹೇಳಿಕೊಂಡ ವಿಷಯ. ನಾನಿನ್ನೂ ಹತ್ತನೇ ತರಗತಿ ಅಪ್ಪ ಅಮ್ಮ ಇಬ್ಬರೂ ನನ್ನನ್ನ ಬಿಟ್ಟು ಕಾಣದ ಲೋಕಕ್ಕೆ ಹೋಗಿಯಾಗಿತ್ತು, ಅಮ್ಮ ಇಲ್ಲದಿದ್ದರೂ ಅಕ್ಕಂದಿರಿದ್ದಾರೆ, ಅಪ್ಪ ಇಲ್ಲದಿದ್ದರೂ ಅಣ್ಣಂದಿರಿದ್ದಾರೆ ಎಂಬ ಧೈರ್ಯ ನನ್ನಲ್ಲಿತ್ತು. ಎಸ್. ಎಲ್. ಸಿ ಪರೀಕ್ಷೆ ಮುಗಿಸಿದೆ ರಜೆಯ ನೆಪವೊಡ್ಡಿ ಅಕ್ಕಂದಿರ ಮನೆಯಲ್ಲೇ ತಿರುಗಾಡಿ ಬಂದಿದ್ದೆ. ಅಣ್ಣ ಮುಂದಿನ ವಿಧ್ಯಾಭ್ಯಾಸಕ್ಕೆ ಕಳುಹಿಸುತ್ತಾನೆ ಎಂದುಕೊಂಡಿದ್ದೆ, ಆದರೆ ಅಣ್ಣ ಯಾಕೋ ಮನಸೇ ಮಾಡಲಿಲ್ಲ. ಇದ್ದ ಇನ್ನಿಬ್ಬರು ಅಣ್ಣಂದಿರನ್ನ ಕೇಳಿದರೆ ಬೇಡ ಮಗಳೇ ನಿನ್ನನ್ನ ಮುದ್ದಾಗಿ ಬೆಳೆಸಿದ್ದೀವಿ ನೀನು ಕಾಲೇಜ್ ಗೆ ಎಂದು ಹೊರಗಡೆ ಹೋದರೆ ಬರುವವರೆಗೂ ನಮಗೆ ಭಯ, ನಿನಗೆ ಯಾವುದೇ ಕೊರತೆ ಇಲ್ಲದೆ ನಿನ್ನ ನಾವು ಸಾಕುತ್ತೇವೆ... ಈ ಪ್ರೀತಿ ಅಣ್ಣಂದಿರ ಮೇಲೆ ನಂಬಿಕೆ ಇಲ್ಲವೇ..!! ಕಂದ, ಮನೆಯಲ್ಲೇ ಆರಾಮಾಗಿ ಇದ್ದು ಬಿಡು ಎಂದು ಅಣ್ಣಂದಿರು ಹೇಳಿದಾಗ..ನನ್ಗೆ ಆಕಾಶ ಎರಡೇ ಗೇಣು...!! ಎಂತಹ ಪ್ರೀತಿ?? ಅಬ್ಬಾ!! ನಾನೇ ಧನ್ಯಳು ಎಂದೆನಿಸಿತು.

ಅಣ್ಣಂದಿರ ಮುದ್ದಿಗೆ ಮನೆಯಲ್ಲೇ ಉಳಿದೆ. ಇದೆಲ್ಲದರ ನಡುವೆಯೇ ಅತ್ತಿಗೆಯಂದಿರು ಮನೆ ತುಂಬಿಕೊಂಡಿದ್ದರು, ಮೂವರು ಅಣ್ಣಂದಿರು, ಅತ್ತಿಗೆಯಂದಿರಿಗೆ ನನ್ನ ಮೇಲೆ ಪ್ರೀತಿ, ಕಾಳಜಿ ಎಲ್ಲವೂ ಇತ್ತು. ನಾನು ಸಹಾ ಅತ್ತಿಗೆಯರನ್ನೂ ಬಹಳಷ್ಟು ಹೊಂದುಕೊಂಡುಬಿಟ್ಟಿದ್ದೆ. ಅತ್ತಿಗೆಯಂದಿರೂ ತಮ್ಮ ಬಾಣಂತನಕ್ಕೊ ಹೋಗದೇ ನನ್ನ ಮೇಲಿನ ಕಾಳಜಿಗೋ ಅಥವಾ ಬಿಟ್ಟಿರಲಾರದೆಯೋ ಅವರೂ ಸಹ ತನ್ನ ತವರು ಮನೆಗಳತ್ತ ತಲೆ ಹಾಕಲಿಲ್ಲ. ಸದಾ ನನ್ನದೇ ಗುಣಗಾನ ನೀನು ನಮ್ಮ ತಾಯಿ ಇದ್ದಂಗೆ, ನಮ್ಮ ಸೇವೆ ಎಷ್ಟು ಚೆನ್ನಾಗಿ ಮಾಡ್ತೀ, ಮಕ್ಕಳನ್ನೆಲ್ಲಾ ಪ್ರೀತಿಸ್ತೀ ನಿನ್ನ ಪಡೆದದ್ದೇ ಪುಣ್ಯ ಎಂದು ಹೇಳಿದರೆ ಭೂಮಿ ಮೇಲೆ ನಿಲ್ಲಲಾಗದೇ ತೇಲಾಡುವ ಹಾಗೆ ಆಗ್ತಾ ಇದ್ದದ್ದಂತೂ ಸತ್ಯ.

ಕನಸು ಕಾಣುವ ವಯಸ್ಸು ನನ್ನದು, ವಯಸ್ಸಿಗೂ ಮೀರಿದ ಆಸೆ, ಆಕಾಂಕ್ಷೆಗಳು ನನ್ನನ್ನ ಕಾಡುತ್ತಲೇ ಇದ್ದವು, ಮದುವೆಯ ವಯಸ್ಸಾಗಿದೆ ನನಗೂ ಎನ್ನುವುದಕ್ಕಿಂತ, ನಾನೂ ಒಬ್ಬನ ಆಸರೆಯ ಬೆಚ್ಚನೆಯ ಸುಖದಲ್ಲಿ ಬಾಳಬೇಕು ಎಂಬ ತುಮುಲ ಸದಾ ಕಾಡುತ್ತಲೇ ಇತ್ತು. ಅಕ್ಕ-ಪಕ್ಕದ ಮನೆಯಲ್ಲಿದ್ದ ನನ್ನ ಸ್ನೇಹಿತೆಯರು ಮದುವೆಯಾಗಿ ಬಾಣಂತನಕ್ಕೆ ತವರಿಗೆ ಬಂದಿದ್ದಾರೆ. ನನ್ನ ಆಪ್ತ ಗೆಳತಿ ಜಾನುಗೆ (ಜಾನಕಿ) ಎಂಥಾ ಮನೆ ಸಿಕ್ಕಿದೆ ಎಂದರೆ ತಂದೆಯ ಮನೆಯಲ್ಲಿ ಎಂದೂ ಕಾಣದ ಸುಖದ ಸುಪ್ಪತ್ತಿಗೆಯ ಮನೆ, ಪ್ರೀತಿಸೋ ಗಂಡ ಸದಾ ಗಂಡನನ್ನೇ ಹೊಗಳುತ್ತಿದ್ದ ಜಾನುನ ನೋಡಿದ್ರೇ ನಾನೂ ಮದುವೆಯಾಗಬೇಕು, ನನಗೂ ಅಂತಹ ಗಂಡ ಬೇಕು ಎಂಬಂತಾಗುತ್ತಿತ್ತು. ಜಾನೂ ಬಾಣಂತನಕ್ಕೆ ಬಂದರೆ ಅವಳನ್ನು ಬಿಟ್ಟಿರಲಾರದೇ ಓಡೋಡಿ ಬರುವ ಅವಳ ಗಂಡ, ಕೈಯಲ್ಲಿ ಹಿಡಿದುತರುವ ಗುಲಾಬಿ, ಮಲ್ಲಿಗೆ ಹೂ ಹಣ್ಣು ಕಾಯಿಗಳಲ್ಲೇ ಹೆಂಡತಿಯನ್ನು ಕಾಣುವ ಅವನ ಸಂಭ್ರಮ ನೋಡಿಯೇ, ನನ್ನಲ್ಲಿ ಹೊಸ ಆಸೆ ಅಂಕುರಿಸಿತ್ತು. ಇಷ್ಟೆಲ್ಲಾ ಆಸೆಗಳನ್ನು ಹೇಳಿಕೊಳ್ಳಲು ಎಷ್ಟೇ ಆಪ್ತರು, ಪ್ರೀತಿಸುವವರು ಇದ್ದರೂ ಯಾರೊಂದಿಗೂ ನನ್ನ ಆಸೆ ಬಿಚ್ಚಿಡಲಾಗಲೇ ಇಲ್ಲ.

ಸಂಜೆಯ ಕತ್ತಲು ಕವಿಯುವ ಮುನ್ನ ನೆಂಟರು ನನ್ನ ಬಾಳಿನ ಬೆಳಕನ್ನು ಹಚ್ಚಲು ಬಂದರು, ದೂರ ಸಂಬಂಧಿಕರು ಯಾವುದೋ ಒಂದು ಗಂಡಿನ ಜಾಡು ಹಿಡಿದು ಬಂದಿದ್ದರು, ಅಣ್ಣಂದಿರು, ಅಕ್ಕಂದಿರು ಅತ್ತಿಗೆಯರೂ ಎಲ್ಲರೂ ಸೇರಿದ್ದರು. ಒಬ್ಬರ ಮುಖ ಒಬ್ಬರು ನೋಡುಕೊಳ್ಳುತ್ತ ನಮಗೆ ನನ್ನ ತಂಗಿಯನ್ನು ಬೇರೆ ಮನೆಗೆ ಕಳುಹಿಸುವ ಮನಸೇ ಇಲ್ಲ. ನನ್ನ ತಂಗಿ ಬೇರೊಂದು ಮನೆಗೆ ಹೋದರೆ ಎಲ್ಲಿ ನಲುಗುವಳೋ ಎಂಬ ನೋವು ಕಾಡುತ್ತಿದೆ. ಅಣ್ಣಂದಿರ ಮಾತಿಗೆ ಅಕ್ಕಂದಿರು ಹೀಗೆಲ್ಲ ಹೇಳಿದರೆ ಹೇಗೆ ಮನೆ ಮಗಳು ಎಷ್ಟು ದಿನವೆಂದು ಮನೆಯಲ್ಲಿರಲು ಸಾಧ್ಯ?. ಮದುವೆ ಎಂಬುದು ಹೆಣ್ಣಿನ ಜೀವನದ ಅತಿ ಮುಖ್ಯ ಘಟ್ಟ. ಅವಳನ್ನು ಧಾರೆ ಎರೆದು ಕೊಡಿ ಎಂಬ ಮಾತಿಗೋ ಏನೋ ಒಟ್ಟಲ್ಲಿ ನನ್ನ ಜೀವನದಲ್ಲೂ ಮದುವೆ ಭಾಗ್ಯ ಒಲಿದು ಬಂದಿತ್ತು.

ಅಪ್ಪ,ಅಮ್ಮ ನನಗಾಗೇ ಮಾಡಿಸಿಟ್ಟಿದ್ದ ಒಡವೆ, ವಸ್ತುಗಳ ಜೊತೆ ಅಣ್ಣಂದಿರು ಎಲ್ಲರೂ ಕೂಡಿ ಗಂಡಿಗೆಂದು ಹಣ, ಆಸ್ತಿ ಎಲ್ಲವನ್ನೂ ನೀಡಿ ಅತಿ ಅದ್ದೂರಿಯಲ್ಲಿ ಮದುವೆ ಕಾರ್ಯ ನೆರೆವೇರಿಸಿದರು. ಗಂಡ ಎಂಬ ಕಲ್ಪನೆಯೇ ನನ್ನಲ್ಲಿ ಬೇರೆ ಇತ್ತು. ಸದಾ ಪ್ರೀತಿ, ಕಾಡುವವ ನನ್ನೆಲ್ಲ ನೋವು ನಲಿವಿಗೆ ಸ್ಪಂದಿಸುವವ ಹೀಗೆ ಹಲವು ಕನಸಿನ ಸೌಧವನ್ನೇ ಕಲ್ಪಿಸಿಕೊಂಡಿದ್ದೆ, ಅದಕ್ಕೆ ತಕ್ಕಂತ ಗಂಡನೂ ಸಿಕ್ಕಿದ್ದ. ಸದಾ ನನ್ನ ಒಳಿತನ್ನೇ ಬಯಸುವ ಗಂಡ, ಮನೆಗೆ ಎಂದೂ ತಡಮಾಡದೆ ಸಮಯಕ್ಕೆ ಸರಿಯಾಗಿ ಬರುವುದು, ಎಂದೂ ತಪ್ಪಿಸದೇ ನನ್ನ ಮುಡಿಯನ್ನು ಮಲ್ಲಿಗೆಯ ಹೂಮಾಲೆಗಳಲ್ಲಿ ಅಲಂಕರಿಸುವ ಪರಿ ಎಲ್ಲವೂ ವಿಶಿಷ್ಟವೇ ಆಗಿತ್ತು. ನನ್ನ ಮದುವೆ ತಡವಾಗಿಯಾದರೂ ಒಂದು ಅರ್ಥಪೂರ್ಣ ಮದುವೆಯಾಗಿರುವೆ ಎಂಬ ಭಾವನಾಲೋಕದಲ್ಲಿ ತೇಲುವ ಮೊದಲ ಘಟ್ಟದಲ್ಲೇ........!!! ನನ್ನವನ ತಡ ರಾತ್ರಿ ಆಗಮನ ಯಾಕೋ ಭಯ ಸೃಷ್ಟಿಸಿತ್ತು.

ದಿನಗಳೂ ಕಳೆದಂತೆ ತಡ ರಾತ್ರಿಗಳು ತಡವಾದ ದಿನಗಳಾಗಲು ಪ್ರಾರಂಭವಾಯ್ತು, ಕಾರಣ ಹುಡುಕ ಹೊರಟರೇ ಗಂಡನ ಕಣ್ಣ ಕಂಬನಿ ನನ್ನನ್ನೇ ಕರಗಿಸಿಬಿಟ್ಟಿತ್ತು. ಕೆಲಸದ ಹೆಸರಿನಲ್ಲಿ ಎಲ್ಲವೂ ಡೋಲಾಯಮಾನವಾಗಿದೆ ಹಣವಿಲ್ಲದೇ ಕೈಚೆಲ್ಲಿ ಕೂರಬೇಕಿದೆ. ಸಾಲ-ಸೋಲಗಳು ಬೆಂಬೆತ್ತಿ ಕಾಡುತ್ತಿದೆ ನಾನು ಬದುಕುವುದೇ ಕಷ್ಟ ಎಂಬ ಮಾತುಗಳು ನನ್ನ ಹೃದಯವನ್ನು ಘಾಸಿಗೊಳಿಸಿತ್ತು. ಗಂಡನಿಗಿಂತ ಹೆಚ್ಚಿನದು ಏನೆಂದು ಅಣ್ಣಂದಿರು ಕೊಟ್ಟಿದ್ದ ಹಣ,ಆಸ್ತಿ ಎಲ್ಲವನ್ನೂ ಮಾರಿ ಕೈ ತುಂಬಿ ಚೆಲ್ಲುವಷ್ಟು ಹಣವನ್ನು ನನ್ನವನ ಕೈಗೆ ನೀಡಿದ್ದೆ. ಅಂದು ಆ ರಾತ್ರಿ ಎಂದೂ ಮರೆಯದ ರಾತ್ರಿ ಗಂಡ ನನ್ನಲ್ಲಿ ತೋರಿಸಿದ ಪ್ರೀತಿ, ಗೌರವ, ಪೂಜನೀಯ ಭಾವನೆ ಯಾರಿಗೂ ಸಿಗಲಾರದೆಂದು ಭಾವಿಸಿದ್ದೆ.

ಮನೆ, ಆಸ್ತಿ, ಒಡವೆ ಎಲ್ಲವನ್ನು ಮಾರಿದ ಹಣದಿಂದ ಸಾಲಗಳನ್ನು ತೀರಿಸುತ್ತಿರುವೆ. ಈಗಿರುವ ಮನೆ ಇನ್ನೇನು ಕೆಲ ದಿನಗಳಲ್ಲಿ ಖಾಲಿ ಮಾಡಬೇಕು, ನಾವು ಬಾಡಿಗೆ ಮನೆಗೆ ಹೋಗೋಣ ಎಂದು ಪುಟ್ಟ ಮನೆಯಲ್ಲಿ ಅರಸಿಯಾಗಿ ಕೂರಿಸಿದರು. ಇತ್ತ ದೂರದ ಊರಲ್ಲಿ ಯಾರಿಗೋ ಸಾಲ ನೀಡುವ ನೆಪ ಒಡ್ಡಿ ಅಂದು ನನ್ನ ಬಿಟ್ಟು ಹೋದವ ಹಿಂದಿರುಗಿ ಬರಲೇ ಇಲ್ಲ, ಬಾಡಿಗೆ ಹಣ ಕಟ್ಟಲು ನನ್ನಲ್ಲಿ ಏನೂ ಇಲ್ಲ, ಇದ್ದ ಅಡ್ವಾನ್ಸ್ ಹಣದಲ್ಲಿ ಜಮಾ ಆಗುತ್ತಲೇ ಬರುತ್ತಿದೆ. ಇತ್ತ ೬ ತಿಂಗಳು ಕಳೆಯುತ್ತೆ ಅಡ್ವಾನ್ಸ್ ಕೂಡ ಖಾಲಿಯಾಗುತ್ತೆ ಮನೆಯೊಡತಿ ಇನ್ನೇನು ಕತ್ತು ಹಿಡಿದು ದಬ್ಬಬೇಕಾಗಿತ್ತು... ತಕ್ಷಣ ಅಣ್ಣಂದಿರ ನೆನಪು...

ನನ್ನ ಅಣ್ಣಂದಿರು ಎಂದೂ ಕೈ ಬಿಡುವುದಿಲ್ಲ ಎಂಬ ವಿಶ್ವಾಸದಲ್ಲಿ ಅಣ್ಣಂದಿರ ಮನೆ ಹೊಕ್ಕೆ, ಮೂರು ದಿನಗಳು ಅಲ್ಲಿಯೇ ಇದ್ದೆ ಅಣ್ಣಂದಿರು ಗಂಡ ಎಲ್ಲಿ ಏನು ಬಂದಿದ್ದು, ಯಾವ ವಿಷಯವಿಚಾರ ವಿನಿಮಯವಿಲ್ಲದೇ, ಸಂಬಂಧಿಕಳಾಗಿ ೪ ದಿನ ಕಳೆದೆ, ಕೊನೆಗೆ ನಾನೇ ಬಾಯಿಬಿಟ್ಟೆ.. ಅಣ್ಣ..!! ನನ್ನ ಗಂಡ ಹೀಗೆ ಮಾಡಿದ್ದಾನೆ ಎಲ್ಲಿ ಹೋದರೋ ಗೊತ್ತಿಲ್ಲ, ನನ್ನ ಬಾಡಿಗೆ ಮನೆಗೆ ಬಿಟ್ಟು ಹೋದವರು ಬರಲೇ ಇಲ್ಲ..!!  ಎಂದು ಬಿಕ್ಕಳಿಸುವಾಗ ಸಾಂತ್ವಾನಿಸುವ ಕೈ ಚಾಚುತ್ತ ಯಾರು ಬರಲೇ ಇಲ್ಲ. ಮತ್ತೂ ದುಃಖ ತಡೆಯಲಾರದೆ ಮನಸ್ಸು ಕುಗ್ಗಿ ಹೋಗಿತ್ತು. ಅತ್ತಿಗೆಯಲ್ಲೂ ಮೊದಲಿದ್ದ ಪ್ರೀತಿಯಿಲ್ಲಾ, ಎಲ್ಲವೂ ಅಯೋಮಯವೆನಿಸಿತು...ಇಷ್ಟೆಲ್ಲಾ ನೆಡೆದರೂ ನಾನು ಇಲ್ಲಿರುವುದು ಒಳಿತಲ್ಲವೆಂದು ಮನೆಬಿಡುವ ಸಮಯ ಅಣ್ಣಂದಿರಲ್ಲೊಬ್ಬ ನೋಡು..!! ನೀನು ಹಣ,ಆಸ್ತಿ,ಮನೆ ಇವನ್ನೆಲ್ಲಾ ಮಾರುವಾಗ ನಾವು ಇರಲಿಲ್ಲವೇ..? ನಿನಗಾಗಿ ಅಷ್ಟೆಲ್ಲಾ ಮಾಡಿದರೆ, ನೆನ್ನೆ ಮೊನ್ನೆ ಪರಿಚಿತನಾದವನೇ ನಿನಗೆ ಹೆಚ್ಚಾಯಿತಾ..!! ಅವನು ಗಂಡನೇ ಇರಬಹುದು, ಆದರೂ ಅಪ್ಪನ ಮನೆಯ ಆಸ್ತಿ ಒಮ್ಮೆಯಾದರೂ ಒಪ್ಪಿಗೆ ಬೇಡವೇ..? ಎಂದು ಮುಖಕ್ಕೆ ಮಂಗಳಾರತಿ ಮಾಡಿ ಮನೆಯತ್ತ ಎಂದೂ ಯಾವ ಕಾರಣಕ್ಕೂ ಬರಬೇಡ, ದೈನೇ ಎಂದು ಬೇಡುವ ಸ್ಥಿತಿಗೆ ನಾವು ಕಳುಹಿಸಿರಲಿಲ್ಲಾ...!! ಎಂದು ಹೇಳಿ ಕಳುಹಿಸಿಬಿಟ್ಟರು.

ನಿಜ ನಾನು ಒಪ್ಪುತ್ತೇನೆ ತಪ್ಪು ಮಾಡಿದ್ದೀನಿ, ಅದೇನೋ "ಕೊಟ್ಟ ಹೆಣ್ಣು ಕುಲದಿಂದ ಹೊರಗೆ" ಎಂಬಂತೆ ನಾನು ಹೊರಗಿನವಳಾಗಿದ್ದೆ. ಮದುವೆಯಾದರೆ ಗಂಡನೇ ಎಲ್ಲಾ ಎಂದು ಭಾವಿಸಿ ಅವನನ್ನು ನಂಬಿ ನನ್ನದೆಲ್ಲದು ಅವನದಲ್ಲವೂ ಎಂದು ಭಾವಿಸಿ ಕೊಟ್ಟಿದ್ದೆ ಈಗ ಮೋಸಹೋದೆ. ಇತ್ತ ಅಣ್ಣಂದಿರೂ ಕೈ ಹಿಡಿಯಲಿಲ್ಲ, ಬಾಡಿಗೆ ಮನೆಯೇ ಗಟ್ಟಿ ಎಂದು ಮತ್ತದೇ ಮನೆಗೆ ಬಂದಾಗ ನನ್ನ ಮನೆಯ ಪಾತ್ರೆ-ಸಾಮಾನುಗಳೆಲ್ಲಾ ಮನೆಯ ಬಾಗಿಲಲ್ಲಿದ್ದವು, ಆಶ್ಚರ್ಯದಿಂದ ಏನಾಗಿದೆ ಎಂದು ತೋಚದಾಯ್ತು, ಮನೆಯೊಡತಿಯಲ್ಲಿ ಕೇಳಿದೊಡನೆ ನೋಡಮ್ಮ ಮನೆ ಬಾಡಿಗೆ ಇಲ್ಲಿಗೆ ಅಡ್ವಾನ್ಸ್ ವಜಾ ಆಗಿದೆ. ಮುಂದೆ ನಿನ್ನಿಷ್ಟ ಎಲ್ಲಾದರು ಬೇರೆ ಮನೆ ಮಾಡಿಕೊಂಡು ಹೋಗು ಎಂದು ಹೇಳಿಬಿಟ್ಟರು. ನನ್ನೊಳಗಿನ ಆತಂಕ ಇಮ್ಮಡಿಸಿತು, ಕಣ್ಣುಗಳು ಮಾತನಾಡಲು ಪ್ರಾರಂಭಿಸಿದವು, ಕರಗಳು ಬೇಡಿಕೆಗೆ ಮುಂದಾದವು.... ನನಗೆ ಯಾರೂ ಇಲ್ಲ ದಯವಿಟ್ಟು ಸಹಕರಿಸಮ್ಮ, ನಿಮ್ಮ ಮನೆಕೆಲಸ ಮಾಡಿಕೊಂಡು ಇರುತ್ತೇನೆ ನನಗೆ ಇರಲು ಜಾಗ, ಊಟ ಬಟ್ಟೆ ಕೊಟ್ಟರೆ ಸಾಕು ಎಂದು ಗೋಗರೆದು ಬೇಡಿದೆ. ಮನೆಯೊಡತಿ ಕೂಡ ಒಬ್ಬಳೇ ಇದ್ದಳು ಅವಳಿಗೆ ಇದ್ದ ಹೆಣ್ಣು ಮಕ್ಕಳೆಲ್ಲಾ ಬೇರಾವುದೋ ದೇಶದಲ್ಲಿ ನೆಲೆಸಿದ್ದರಿಂದ. ಕೈಗಾಸರೆಯಾಗುವಳೆಂದು ಮನಸ್ಸು ಒಪ್ಪಿ ನನ್ನನ್ನು ಅಲ್ಲಿಯೇ ಅವರ ಮನೆಯಲ್ಲೇ ಇರುವ ಹಾಗೆ ವ್ಯವಸ್ಥೆ ಮಾಡಿದರು.

ಇತ್ತ ನನ್ನ ಕಥೆಗೆ ಬೇರಾರೋ ಮರುಗಿದರೂ ನನ್ನವರೇ ಆದ ಅಣ್ಣ, ಅಕ್ಕಂದಿರು ಕರಗದೇ  ಹೋದರು, ಇತ್ತ ಕಟ್ಟಿಕೊಂಡ ಗಂಡ ಹೆಂಡತಿಯ ನೆನಪೇ ಇಲ್ಲದಂತಾದ. ಅಂದು ಅಣ್ಣಂದಿರು ತೋರಿಸಿದ್ದ ಪ್ರೀತಿ, ಗಂಡ ತೋರಿಸಿದ ಪ್ರೀತಿ ಎಲ್ಲವೂ ನಾಟಕವೇ..?? ಎಂಬ ಭ್ರಮೆಯಲ್ಲಿ ಮುಳುಗಿ ಹೋಗಿದ್ದೆ. ಕಾರಣ ಹುಡುಕ ಹೊರಟರೆ ಉತ್ತರ ಸಿಗಲೇ ಇಲ್ಲ. ಮತ್ತೊಮ್ಮೆ ಅಣ್ಣಂದಿರ ನೋಡೋ ಆಸೆ, ಗೊತ್ತಿಲ್ಲದವರ ಮನೆಯಲ್ಲಿ ಎಷ್ಟು ದಿನ ಹೊರೆಯಾಗಿ ಇರುವುದು ಎಂದು ಅಣ್ಣಂದಿರ ಆಶ್ರಯಕ್ಕೆ ಮತ್ತೆ ಹೊರಟೆ, ಅತ್ತಿಗೆಯಂದಿರ ಒಡಲಾಳದ ಪ್ರೀತಿ ಅಂದೇ ಅರ್ಥವಾಗಿದ್ದು, ಅತ್ತಿಗೆಯಂದಿರ ಮಕ್ಕಳ ಸಾಕುವಾಗ ನನ್ನ ನೆರವು ಬೇಕಿತ್ತು, ಮನೆಯಲ್ಲಿ ಕಸ ಮುಸುರೆ ತೊಳೆಯಲು ಹೆಣ್ಣು ಬೇಕಿತ್ತು ಇದೇ ಕಾರಣಕ್ಕೆ ಮದುವೆ ಮಾಡದೆ ಪ್ರೀತಿಯ ನೆಪವೊಡ್ಡಿದ್ದರು.... ಇನ್ನು ಗೆಂಡನೆಂಬವ ಪ್ರೀತಿಯ ಬಲೆ ಬೀಸಿ ನನ್ನನ್ನೇ ಬರಿದು ಮಾಡಿದ್ದ. ಅವನ ಪ್ರೀತಿ ಅರಿವಾಗಿದ್ದು ನನ್ನ ಹಳೆಯ ಮನೆ ನೋಡುವ ಮನಸಾಗಿ ಹೋದಾಗ, ಅಲ್ಲೂ ಆಘಾತವೇ ಕಾದಿತ್ತು ನನ್ನ ಗಂಡನೇ ಆ ಮನೆಯ ಒಡಯನಾಗಿದ್ದ ಕಾರಣ ಇಷ್ಟೇ ತಾನು ಪ್ರೀತಿಸಿದವಳನ್ನ ಮದುವೆಯಾಗಿ ನನ್ನ ಹೆಸರಲ್ಲಿದ್ದ ಆಸ್ತಿ ಅವಳದಾಗಿದ್ದು ತಿಳಿದಿದ್ದು ಇಂದೇ. ನಾನೊಬ್ಬಳು ಮೂಢಳು ಪ್ರೀತಿಯ ಅರ್ಥವೇ ಅರಿವಾಗಿಲ್ಲ, ಅರಿವಾಗುವಷ್ಟರಲ್ಲಿ ಜೀವನವೇ ಮುಗಿದಿತ್ತು. ತನ್ನೆಲ್ಲಾ ಕಷ್ಟಗಳ ಬರವಣಿಗೆಯಲ್ಲಿ ಅಳಿಸಿ, ತಿದ್ದಿ-ತೀಡಿ ಬರೆಯಲು ಸಾಧ್ಯವಾಗದಂತಹ ಆಘಾತಕರ ಸ್ಥಿತಿಯನ್ನು ಮುಟ್ಟಿದ್ದೇನೆ. ಇನ್ನೇನಿದ್ದರೂ  ಅಪರಿಚಿತರ ಆಶ್ರಯವೇ ಲೇಸು. ಒಂಟಿ ಬಾಳಿಗೆ ಅನಾಥ ಪ್ರಜ್ಞೆ ಬೆಂಬಿಡದೆ ಕಾಡುವುದನ್ನು ಮರೆಮಾಚಲು ನನ್ನ ಜೀವನ ಸೃಷ್ಟಿಸಿಕೊಳ್ಳಲು ಅನಾಥಾಶ್ರಮದ ಶಾಲೆಯಲ್ಲಿ ಅನಾಥ ಮಕ್ಕಳಿಗೆ ಗುರುವಾಗಿ ಕೆಲಸ ಮಾಡುತ್ತಿದ್ದೇನೆ. ಈಗ ನಾನು ಅನಾಥ ಗುರು..!!


Thursday, December 13, 2012

ಯಾವ ಹೆಸರು ಯಾರ ಹೆಸರಿಗೋ...

ಸಿ.ಇ.ಓ ಕರೆ....

ಓ ಗಾಡ್, ಏನ್ ಕಾದಿದೆಯಪ್ಪೋ ಮೊದಲೇ ಕೊರೆಯುತ್ತೆ ಈ ಯಪ್ಪಾ... ಅಂದುಕೊಂಡು ಒಳಗೆ ಹೋದೆ..!! ಕರ್ಮ, ಅದೇನೋ ಹೇಳ್ತಾರಲ್ಲಪ್ಪಾ ಸಿಗಾರ್ ಸೇದಿರುವ ವಾಸನೆ ಗಬ್ಬ್ ಅಂತಾ ಇದೆ... ನನ್ಗೋ ಒಳಗೆ ಹೋಗ್ತಾ ಇದ್ದ ಹಾಗೆ ಕೆಮ್ಮೋ ಕೆಮ್ಮು... ಸಾರಿ... ಸ್ಮೋಕ್ ಮಾಡಿದ್ದೆ ಅಂದ್ರು ಬಾಸ್, ಆಯ್ತಪ್ಪಾ ಈಗ ಕರೆದಿದ್ದೇನು ಅಂದೇ..!!

ಯಾರು ಇದು ಸಯ್ಯದ್..?

ಯಾವ ಸಯ್ಯದ್, ಎಲ್ಲಿದ್ದಾರೆ ಏನು ಕಥೆ..? ಎಂದು ಮರು ಪ್ರಶ್ನೆ ಹಾಕಿದೆ... 

ನೀವು ಮುಸ್ಲಿಮ್ಮಾ, ಐ ಥಿಂಕ್... ಹಿಂದು ಅಲ್ಲವಾ??... ನಿಮ್ಮಲ್ಲೂ ಸೈಯ್ಯದ್ ಅಂತಾ ಹೆಸರು ಇರುತ್ತಾ..?

ನಾನು ಮುಸ್ಲಿಮ್ ಅಲ್ಲಾ, ಈಗ ಏನು ವಿಷಯ ಹೇಳಿ...(ಸದ್ಯ ಅಲ್ಲಿಂದ ಓಡಿದ್ರೇ ಸಾಕಿತ್ತು. ಆ ವಾಸನೆಗ ನಿಲ್ಲೋಕ್ಕೆ ಆಗ್ತಿಲ್ಲ)

ಯಾವುದೋ ಪೇಪರ್ ಗಳನ್ನು ತಿರುವಿ ಹಾಕಿ. ನೋಡಿ, ಇಲ್ಲಿ ಯಾರು..? ಇದು ನಿನ್ನ ಹೆಸರಿನ ಜೊತೆ 'ಸಯ್ಯದ್ ಆಲಿಂಗಪ್ಪಾ'   ಮತ್ತು ಮಫೂನ್ ಅಂತಾ ಇದೇ ನಿನ್ನ ಗಂಡನ ಹೆಸರು ಮಹೇಶ್ ಅಲ್ಲ್ವಾ? ಎಂದು ಕೇಳಿದರು

ಹೌದು ಮಹೇಶ್ ನನ್ನ ಗಂಡನ ಹೆಸರು... ಮನು ವಚನ್ ನನ್ನ ಮಗನ ಹೆಸರು..

ಹಾಗಾದ್ರೆ ಈ ಸೈಯ್ಯದ್ ಯಾರು..?

ಅದು ನನ್ನ ಗಂಡನ ಹೆಸರಿಗೆ ಇನ್ನೊಂದು ಹೆಸರು ಕೊಟ್ಟಿದ್ದಾರೆ ಈ ಕುವೈತಿಗೆ ಬಂದ ಮೇಲೆ..!! ಅಂತೇಳಿದೆ.. 

ನನ್ನವರ ಹೆಸರು ಸಿದ್ದಲಿಂಗಪ್ಪ ಮಹೇಶ್ ಎಂದು ಅಪ್ಪನ ಹೆಸರಿನ ಜೊತೆ ಅವರ ಹೆಸರು ಇದೆ. ಕುವೈತಿಗೆ ಬಂದ ಹೊಸತರಲ್ಲಿ ನನ್ನವರ ಹೆಸರಿನಲ್ಲಿ ರೆಸಿಡೆನ್ಸಿ, ಸಿವಿಲ್ ಐಡಿ ಮಾಡಿಸುವಾಗ ಅವರ ಹೆಸರನ್ನು ಅರೆಬಿಕ್ ಗೆ ಬರೆಯುವ ಸಂದರ್ಭದಲ್ಲಿ ಹೀಗೆ ಮಾಡಿಬಿಟ್ಟಿದ್ದಾರೆ. ಮತ್ತೆ ಬದಲಿಸಲು ಹೋದಾಗ ಅರಬೀ ಭಾಷೆಯಲ್ಲಿ ಸಿದ್ದಲಿಂಗಪ್ಪ ಎಂಬ ಹೆಸರನ್ನು ಸೈಯ್ಯದ್ ಆಲಿಂಗಪ್ಪಾ ಎಂದೇ ಬರೆಯೋದು ಎಂದು ಸಮಜಾಯಿಶಿ ಕೊಟ್ಟರಂತೆ... :)

ಕೊನೆಗೆ ನನ್ನ ಮಾತು ಕೇಳಿಸಿಕೊಂಡು ನಮ್ಮ ಬಾಸ್ ಹಾಗು ಜೊತೆಯಲ್ಲೇ ಇದ್ದ ನಮ್ಮ ಕಛೇರಿಯವರು ನಗುತ್ತಲೇ... ಸೈಯ್ಯದ್ ಹೆಂಡತಿ ಎಂದು ರೇಗಿಸುತ್ತಲೇ ಇದ್ದರು.

ಮತ್ತೆ ಮಗನಿಗೂ ಹೀಗೇ ಆಗಿದ್ದಾ..? ಹೌದು ಅಂದೇಳಿದೆ 

ಮನು ವಚನ್ ಹಿಂದಿ ಪಿಲ್ಮ್ ಆಕ್ಟರ್ ಇದಾರಲ್ಲಾ ಅಮಿತಾ ಬಚನ್ ಹಂಗಾ ಹೆಸರು ಅದೇ ಫ್ಯಾಮಿಲಿನಾ ಅಂದ್ರು... ಹೂ ಅದೇ ತರನೇ ಆದರೆ ನಾವು ಆ ಫ್ಯಾಮಿಲಿ ಅಲ್ಲ ಅಂದೇ..ಹಹಹ (ಹೇಗೋ ಈಜಿಪ್ಟ್ ಜನಕ್ಕೆ ನಮ್ಮ ಭಾರತದ ನಟರ ಬಗ್ಗೆ ಗೊತ್ತಲ್ಲಾ ಅಂತಾ ಖುಷಿ ಆಯ್ತು).


ಇದೊಂದೇ ಘಟನೆ ಅಲ್ಲಾ.... ಎಲ್ಲಿಗೇ ಹೋಗಲಿ ನನ್ನವರನ್ನು ಸೈಯ್ಯದ್ ಎಂದೇ ಕರೆಯುತ್ತಾರೆ.. ಮನೆಯ ವಾಚ್ ಮನ್ ಸಹಾ "ಹಾ..!! ಸೈಯ್ಯದ್... ಆ..!! ಸೈಯ್ಯದ್..." ಎನ್ನುತ್ತಲೇ ಕರೆಯುತ್ತಾನೆ ಜೊತೆಗೆ ಒಮ್ಮೆ ನಮಾಜ್ ಮಾಡೋಕ್ಕೆ ಬರೋಲ್ವಾ ಎಂದು ಕರೆದಿದ್ದಾ. ಇಲ್ಲ ನಾವು ನಮಾಜ್ ಮಾಡೋಲ್ಲಾ ಎಂದಾಗ ಸೈಯ್ಯದ್ ಎಂದು ಹೆಸರಿದೆ ಮತ್ತೆ..?? ಹೂ ಹೆಸರಿದೆ ಅದು ಕುವೈತ್ ಜನ ಬದಲಿಸಿರೋದು ಎಂದು ಹೇಳಿದ್ದರು. :) ಇನ್ನು ಮಾತ್ತಾರಾದರು ಅರಬೀ ಜನ ಅವರ ಸಿವಿಲ್ ಐಡಿ ನೋಡಿದರೆ ಸಾಕು ಸೈಯ್ಯದ್ ಎಂದೇ ಕರೆಯುವುದು. 

ನಾನು ಸಹ ನನ್ನವರು ಎಲ್ಲಿಗಾದರು ಹೊರಟರೆ ಸೈಯ್ಯದ್ ಅಲಿಂಗಪ್ಪಾ ಎಂಬುದನ್ನು ಸ್ವಲ್ಪ ಬದಲಿಸಿ ಸೈಯ್ಯದ್ ಎಲ್ಲಿಗಪ್ಪಾ..?? ಎಂದು ಕೇಳುತ್ತೇನೆ. 

ಇನ್ನು ನನ್ನ ಮಗನ ಹೆಸರು ಮನುವಚನ್ ಇರುವುದು ಮಫೂನ್ ಮಾಡಿದ್ದಾರೆ ಒಂದು ರೀತಿ ಬಫೂನ್ ಆದಂಗೆ ಆಯ್ತು ನೋಡಿ..:)

ಈ ರೀತಿ ಇರುವ ಹೆಸರೇ ಬದಲಾದರೆ ತಮಾಷೆ ಜೊತೆಗೆ ಮುಜುಗರವೂ ಇರುತ್ತದೆ ಅಲ್ಲವೇ..???:) :)

ಸೈಯ್ಯದ್ ಅಲಿಂಗಪ್ಪಾ, ಅ..ಲಿಂಗ ಅಪ್ಪ... ಆಲಿಂಗ ಅಪ್ಪಾ, ಎಲ್ಲಿಗಪ್ಪಾ ಹೀಗೆ ನಿಮ್ಮ ಕಲ್ಪನೆಗೆ ಬಂದಂತೆ ಹೆಸರನ್ನು ಬದಲಿಸಿ ಸದ್ಯಕ್ಕೆ ನಕ್ಕು ಬಿಡಿ :) :)

Sunday, September 30, 2012

ಹುಚ್ಚು ಹೆಚ್ಚಾಗಿದೆ..!!!


                       ಚಿತ್ರ ನೋಡಿ ಎಲೆ ಅಡಿಕೆ ಕಡ್ಡಿಪುಡಿ ತಿನ್ನೋ...ಹುಚ್ಚು ಹೆಚ್ಚಾಗಿದೆ...ಎಂದುಕೋ ಬೇಡಿ..!!


                                                                                     ಪೋಟೋ ಡಿ.ಜಿ ಮಲ್ಲಿಕಾರ್ಜುನ್ 


ಹೊರಗಡೆ ಹೋದ ಮಗ ಇನ್ನು ಬಂದಿಲ್ಲ ಎಂದು ಮನೆಯಿಂದ ಆಚೆ ಹೋಗಿ ಕಾಯಲು ನಿಂತೆ, ಇದ್ದಕ್ಕಿದ್ದಂತೆ  ನನ್ನ ಅಡ್ಡಗಟ್ಟಿ ಏನೋ ಮಾತನಾಡುತ್ತಲಿದ್ದಾಳೆ, ಅರ್ಥವಾಗುತ್ತಿಲ್ಲ, ಅಕ್ಷರಗಳನ್ನ ನುಂಗುತ್ತಲೇ ಇದ್ದಾಳೆ. ಇಪ್ಪತ್ತರ ಆಸುಪಾಸಿನ ಹುಡುಗಿ, ವಕ್ರ ಉಡುಗೆ, ಕೆದರಿದ ಗುಂಗುರು ಕೂದಲು, ಕೆಂಪು ಪಾಚಿ ಹಲ್ಲುಗಳು, ಕೈಕಾಲಲ್ಲಿ ನಿತ್ರಾಣವಿಲ್ಲ ಎನಿಸುತ್ತೆ... ಬಡಕಲು ದೇಹ.. ಕಣ್ಣುಗಳಲ್ಲಿನ ನಿರಾಶೆ ಎದ್ದು ಕಾಣುತ್ತಿದೆ ಅವಳ ಕೈಯಲ್ಲಿ ಏನೋ ಆಟದ ಕಡ್ಡಿ. ಹಾಗೆ ಸ್ವಲ್ಪ ಕಣ್ಣರಳಿಸಿ ಹಿಂದೆ ನೋಡಿದೆ ಅಲ್ಲೇ ಒಂದು ಪುಟ್ಟ ಮಗು ಆಟದ ಸಾಮಾನಿನೊಂದಿಗೆ ನಿಂತಿದೆ. ಮೊದಲ ಸಲ ನೋಡ್ತಾ ಇರೋ ಈ ಹುಡುಗಿ ಹತ್ತಿರ ನಾನು ಇಂಗ್ಲೀಷಿನಲ್ಲೇ ಮಾತನಾಡಿ ಏನು ಎಂದು ಕೇಳಿದೆ..!! ನೀನು(ನುವ್ವು) ಇಂಡಿಯಾ..?? ಅಂದಳು ಹೌದು, ಎಂದು ಸನ್ನೆ ಮಾಡಿದೆ. ಮತ್ತೆ ತೆಲುಗಿನವಳ ಅಂದಳು. ಇಲ್ಲ, ಏನು ಬೇಕು..? ಎಂದು ತೆಲುಗಿನಲ್ಲೇ ಮಾತನಾಡಿಸಿದೆ. 

ನೀನು ಮಾಲ್ಯಾ(MALYA)(ಕುವೈತಿನ ಒಂದು ಸಿಟಿ)ಗೆ ಹೋಗ್ತಾ ಇದ್ದೀಯಾ ಅಂದಳು, ಇಲ್ಲ..!! ನಾನು ಅಲ್ಲಿಗೆ ಹೋಗೋದಿಲ್ಲ ಅಂದೆ, ಹೋಗು ಒಂದು ಸರಿ ಅಂದಳು.. ಯಾಕೆ ಎಂದು ಕೇಳಿದ್ರೇ.. ನನಗೆ ಕಡ್ಡಿಪುಡಿ ಅಥವಾ ಹನ್ಸ್ ಬೇಕು ತಂದು ಕೊಡ್ತೀಯಾ.....? ನಿನಗೆ ಯಾಕೆ ಬೇಕು ಅದೆಲ್ಲಾ ಅಚ್ಚುಕಟ್ಟಾಗಿ ಊಟ ಮಾಡಿಕೊಂಡಿರು ಎಂದೇಳ್ತಾ ಇದ್ದ ಹಾಗೇ ಏನೋ ಮುಖಭಾವ ಕೋಪಕ್ಕೆ ತಿರುಗಿದಂತಾಗಿತ್ತು.. ನನಗೇ ಅದು ತಿಂದಿಲ್ಲಾ ಅಂದ್ರೇ ಹುಚ್ಚು ಹಿಡಿಯುತ್ತೇ... ತಂದುಕೊಡು ಇಲ್ಲಾ ಅಂದ್ರೇ "ನಿಮ್ಮ ಯಜಮಾನ ಇದಾರಲ್ಲಾ ಅವರಿಗೆ ಹೇಳಿ ತರಿಸಿಕೊಡು" ಎಂದ ಕೂಡಲೇ... "ನಾನು ದಂಗಾಗಿ ಹೋದೆ......!!!". ಸಾವರುಸಿಕೊಳ್ಳುತ್ತಲೇ............ ನೀನು ಕೆಲಸ ಮಾಡ್ತೀಯಲ್ಲಾ ಆ ಮನೆಯ ಯಜಮಾನರಿಗೆ ಹೇಳು.. ತರಿಸಿಕೊಡುವರು, ಅಯ್ಯೋ.. ಅದು ಯಾವ್ ಭಾಷೆ ತೂ.. ಬರೋದೇ ಇಲ್ಲ ನನ್ಗೆ ಅಂದಳು.. ಭಾಷೆ ಬರದೆ ಅರಬೀ ಮನೆಯಲ್ಲಿ ಆ ಮಗು ಜೊತೆ ಒಡನಾಟ, ಮನೆಮಂದಿಯೊಂದಿಗೆ ಮಾತುಕತೆ ಹೇಗಿರಬೇಕು ದೇವರೇ..!! ಇವಳು, ಎಂದು ಯೋಚಿಸ್ತಾ ನಿಂತೆ..!! 

ಏನು.... ಏನು ತಂದು ಕೊಡ್ತೀಯಾ..!!? ಎಂದು ಕೈ ಅಲ್ಲಾಡಿಸಿ ಕೇಳಿದರೆ ನನಗೆ ಉತ್ತರಿಸಲು ತೋಚಲೇ ಇಲ್ಲ..!! ಮನಸಲ್ಲೇ ನೂರಾರು ದ್ವಂದ್ವಗಳು.. ಅವಳ ನೋಡಿದರೆ ಪಾಪ ಎನಿಸುತ್ತೇ ಆದರೆ ಛೇ..!! ಈ ಕೆಟ್ಟ ಅಭ್ಯಾಸ ಎಲ್ಲಾ ಯಾಕೆ ಈ ಹುಡುಗೀಗೇ ಅಚ್ಚುಕಟ್ಟಾಗಿ ತಿಂದುಕೊಂಡಿರಬಾರದ ಅಥವಾ ಆ ಮನೆಯಲ್ಲಿ ಅವಳ ಹುಚ್ಚು ಹೆಚ್ಚಿಸುವಂತಾ ಘಟನೆಗಳು ನೆಡೆಯುತ್ತಾ ?. ಹೀಗೇ ಏನೇನೋ ಪ್ರಶ್ನೆಗಳು ನನ್ನೊಳಗೆ. ಒಬ್ಬ ಮನುಷ್ಯನನ್ನು ನೋಡಿ ಅವರು ಹೇಗೆ, ಏನೂ, ಎಂತವರು ಎಂದು ತೀರ್ಮಾನಿಸುವುದು ಬಹಳ ಕಷ್ಟದ ಕೆಲಸ. ಆದರೂ ನಾನು ಕೊನೆಗೂ ಅವಳ ಪ್ರಶ್ನೆಗೆ ಉತ್ತರಿಸಲೇ ಇಲ್ಲ ಮೌನವಾಗೇ ನಿಂತು ಬಿಟ್ಟೆ....!!!

ನಾನು ಈ ಹುಡುಗಿ ನೋಡಿದ್ದು ಆಗಷ್ಟೇ..?? ಯಾವುದೋ ಅರಬೀ ಮಗುವನ್ನು ಅಪಾರ್ಟ್ಮೆಂಟ್ ಮುಂದೆ ಆಟವಾಡಿಸುತ್ತಾ ಇದ್ದಳು. ನಾವಿರುವ ಅಪಾರ್ಟ್ಮೆಂಟ್ ನಲ್ಲಿ ಯಾರೂ ಪರಿಚಯ ಇಲ್ಲ, ಪಕ್ಕದ ಮನೆಯಲ್ಲಿ ಯಾರಿದ್ದಾರೋ ಎಂಬುದು ೬ ವರ್ಷ ಕಳೆದರೂ ಇನ್ನೂ ಗೊತ್ತಾಗಿಲ್ಲ. ಅಂತಹದರಲ್ಲಿ ಮಹಡಿ ಮೇಲೆ ಯಾವುದೋ ಮನೆ ಕೆಲಸದ ಹುಡುಗಿ ಇಷ್ಟು ಜೋರು ಮಾಡಿ ನಿನ್ನ ಗಂಡನಿಗೆ ಹೇಳಿ ತರಿಸಿಕೊಡು ಎಂದು ಹೇಳಬೇಕಾದರೆ "ಈ ಕಡ್ಡಿಪುಡಿಯೋ ಅಥವಾ ಆ ಮನೆಮಂದಿಯೋ ಎಷ್ಟು ಹುಚ್ಚು ಹಿಡಿಸಿರಬೇಡ....!!!???"


ನಿತ್ರಾಣದ ಆ ಕಣ್ಣುಗಳು ಹಂಬಲಿಸುತ್ತಿರುವುದು ಕಾಣುತ್ತಿದೆ...ಆದರೆ ತಂದುಕೊಡಲು ನನ್ನ ಮನಸ್ಸು ಒಪ್ಪುತ್ತಿಲ್ಲ..!! 

Tuesday, September 18, 2012

ನೆನಪಾಗ್ಯಾದಾ...!!!


ಕಳೆದ ಬಾರಿ ತವರಿಗೆ ಬಂದಿದ್ದ ಗಣಪ ಮತ್ತು ಅವರಮ್ಮ 
ಪೋಟೋ - ಮನುವಚನ್
----------

ನೆನಪಾಗ್ಯಾದಾ...!!!

ನನ್ನಪ್ಪ ನನ್ನಮ್ಮ..
ಕರೆ ಮಾಡಿ ಕರೆದ್ಯಾರ 
ಹೊಸ ಸೀರೆ ತಂದೀನಿ
ಕುಂಕುಮ ಅರಿಶಿನ-ಬಾಗೀನ
ಕೊಂಡೊಯ್ಯು ಬಾ ಎಂದಾರಾ...

ನನ್ನಣ್ಣ-ಅತ್ತಿಗೆ
ಮಾತಲ್ಲೇ ಬೈದಾರ
ಪ್ರತಿ ವರುಷ ಬರುವವಳು
ಈ ವರ್ಷ ಬಲು ಬೇಗ 
ಬಂದು ಹೊರೆಟೆಬಿಟ್ಟೆಯಲ್ಲಾ ಎಂದಾರಾ...

ನನ್ನಕ್ಕ-ಬಾವ
ಪ್ರತಿ ಸಲವು ಬಂದಾಗ
ಜೊತೆ ಜೊತೆಗೆ ಇದ್ದೇವು
ಹೋಳಿಗೆ ಹೂರಣದಿ
ನಿನ್ನ ನಗುವಾ ಕಂಡೇವು...

ಎಲ್ಲ ಪ್ರೀತಿ ಬೈಗುಳದಿ
ಊರ ಹಾದಿಯ ನೋಡುತ
ಮನಸ್ಯಾಕೋ ಒದ್ದಾಡಿ
ತವರೂರ ನೆನಸ್ಯಾದಾ..

ನಾನೊಬ್ಬ ಮಗಳೆಂದು
ಬಾವ ಕೊಡಿಸುತ್ತಿದ್ದ ಬಳೇ
ಅಣ್ಣ ಕೊಡುತಿದ್ದ ರೊಕ್ಕಾ
ಅಮ್ಮ ನೀಡುವ ಬಾಗಿನ
ಅಕ್ಕ ತೋರಿಸಿಕೊಡುವ ಪೂಜೆ
ಅತ್ತಿಗೆಯ ಕೈರುಚಿ ಅಡಿಗೆ
ಎಲ್ಲ ನೆನಪಾಗಿ 
ಕಣ್ಣು ಯಾಕೋ ಜಿನಿಗ್ಯಾದಾ..!!


ಎಲ್ಲರಿಗೂ ಗೌರಿ-ಗಣೇಶ ಹಬ್ಬದ ಶುಭಾಶಯಗಳು....

Thursday, September 6, 2012

ಮಿಥ್ಯದ ಹೂರಣ ಸತ್ಯದ ತೋರಣ...


ಬೆಂಗಳೂರಿಗೆ ಹೋಗಿದ್ದಾಗ ಒಂದಷ್ಟು ಪುಸ್ತಕಗಳನ್ನು ಗೀತಕ್ಕ ನನಗಾಗಿ ಓದಲು ಕೊಟ್ಟಿದ್ದರು. ನನಗೂ ಅವರ ಪುಸ್ತಕಗಳನ್ನು ಓದಬೇಕು ಎಂಬ ಆಸೆ ಬಹಳಷ್ಟಿತ್ತು.. ಅವರು ಸುಮಾರು ೧೦-೧೨(ಕರೆಕ್ಟ್ ಲೆಕ್ಕ ಬೇಕಂದ್ರೆ ಪೋಟೋ ನೋಡಿ) ಪುಸ್ತಕಗಳನ್ನು ಕೊಟ್ಟಿದ್ದರು ಇತ್ತೀಚೆಗೆ ಇವುಗಳಲ್ಲಿ ಯಾವುದು ಓದಲಿ ಎಂದು ಯೋಚಿಸುತ್ತಿದ್ದೆ ಆದರೂ ಅವುಗಳಲ್ಲಿ ಮಿಥ್ಯ ಕಥೆ ಯಾಕೋ ನನ್ನ ತಲೆಯಲ್ಲೇ ಗಿರಕಿ ಹೊಡೆಯುತ್ತಿತ್ತು.. ಎಲ್ಲರೂ ಈ ಪುಸ್ತಕ ಹಾಗಿದೆ ಹೀಗಿದೆ ಒಂದು ಗಂಡಿನ ಮನಸ್ಸನ್ನು ಅರಿತು ಬರೆದಿದ್ದಾರೆ ಎನ್ನುತ್ತಿದ್ದರು ನನಗೂ ಗಂಡಿನ ಮನದಾಳದ ಮಾತುಗಳನ್ನು ತಿಳಿಯುವ ಕುತೂಹಲದಲ್ಲಿ ಮಿಥ್ಯದ ಮೊದಲ ಪುಟ ತೆರೆಯುವ ಮುನ್ನ ಮುಖಪುಟದ ವಿನ್ಯಾಸದ ಹಿಂದಿನ ಅರ್ಥ ಹೆಣ್ಣು ಎತ್ತಲೋ ಮುಖ ಮಾಡಿದ್ದಾಳೆ ಗಂಡು ತಲೆಮೇಲೆ ಕೈಹೊತ್ತು ಕುಳಿತಿದ್ದಾನೆ... ಇಲ್ಲಿ ಗಂಡಿನ ಸಂಕಟ ಎದ್ದು ಕಾಣುತ್ತೆ ಹೆಣ್ಣು ಧೈರ್ಯದಿಂದಿದ್ದಾಳೆ ಎಂದೆನಿಸಿತು...ಮತ್ತೆ ಪುಟ ತಿರುಗಿಸುತ್ತಾ ನೆಡೆದಂತೆ ಮಿಥ್ಯದ ಬಾಗಿಲು ತೆರೆಯಿತು. 
ಚಿತ್ರ: ಮನುವಚನ್ 
ಕಾದಂಬರಿಯ ಮುಖ್ಯ ಪಾತ್ರಧಾರಿ ಪುರು (ಪುರುಷೋತ್ತಮ್) ಒಬ್ಬ ಮಧ್ಯಮ ವರ್ಗದ ಗಂಡು, ಅಪ್ಪ-ಅಮ್ಮ, ಹೆಂಡತಿ ಮಕ್ಕಳೊಂದಿಗಿನ ಸಂತೋಷದ ಜೀವನದಲ್ಲೂ ಕಾಣುವ ನೂರೆಂಟು ತುಮುಲ ಮನಸಿನ ಚಿತ್ರಣ. ವಿದ್ಯಾವಂತನಾಗಿ ನಾಲ್ಕಾರು ಜನರೊಂದಿಗೆ ಬೆರೆತು ಪ್ರಪಂಚದ ಜ್ಞಾನ ಉಳ್ಳವನೇ ಆದರೂ ಕೆಲವೊಮ್ಮೆ ತನ್ನ ಮನಸ್ಸಿನೊಳಗಿನ ಭಾವನೆಗಳಲ್ಲಿ ಕುಗ್ಗಿ ಹೋಗುತ್ತಾನೆ. ಇಲ್ಲಿ ಪುರು ತನ್ನ ಕಛೇರಿಯಲ್ಲಿ ಲೇಡಿ ಬಾಸ್ ನಿಂದ ಅನುಭವಿಸುತ್ತಿದ್ದ ಯಾತನೇ ಅನ್ನುವುದಕ್ಕಿಂತ ಒಂದು ರೀತಿ ಮುಜುಗರದ ಸಂಗತಿಗಳು ಸದಾ ಕಾಡುತ್ತಲೇ ಇದ್ದವು. "ಹೆಣ್ಣು ತಾನಾಗೇ ಬಯಸಿ ಬಂದರೆ ಯಾವ ಗಂಡು ಬಿಡುವುದಿಲ್ಲ" ಎಂಬುದು ಎಲ್ಲರ ಬಾಯಲ್ಲಿ ಬರುವ ಮಾತು... ಆದರೆ ೪೦ರ ಹರಯದ ಹೆಣ್ಣು ಗಂಡ ಎಲ್ಲೋ ದೂರದ ದೇಶದಲ್ಲಿದ್ದಾನೆ ಬೆಳೆದು ನಿಂತ ಮಗ ಅವನದೇ ಪ್ರಪಂಚದಲ್ಲಿದ್ದಾನೆ. ಇನ್ನು ಇವಳದು ಎಂಬ ಬದುಕು ಶೂನ್ಯತೆಯಲ್ಲಿ ತುಂಬಿದೆ. ದೂರದಲ್ಲಿ ನೆಲೆಸಿರೋ ಗಂಡ ಒಲ್ಲದ ಗಂಡನೂ ಸಹ ಆಗಬಹುದು...  ಎಲ್ಲೋ ಇರುವ ಗಂಡನನ್ನು ಕಾಯುತ್ತ ತನ್ನ ದಿನ ಜೀವನದಲ್ಲಿನ ಬಣ್ಣದ ಬದುಕನ್ನು ತನ್ನದೇ ನಿಟ್ಟಿನಲ್ಲಿ ಸೃಷ್ಟಿಸಿಕೊಳ್ಳ ಹೊರಡುತ್ತಾಳೆ.  ಈ ಬಣ್ಣದ ಬದುಕಿಗೆ ಬಣ್ಣ ಹಚ್ಚುವವ ಪುರುಷೋತ್ತಮನೇ ಯಾಕಾಗಬಾರದು ಸ್ಪುರದ್ರೂಪಿ, ಸಾಧುವಿದ್ದಂತೆ, ಮೊದಲೇ ಕಲೆಗಾರ ಚಿತ್ರ ಬಿಡಿಸುವವ ನನ್ನ ಬದುಕಿಗೆ ಬಣ್ಣ ಬಳಿಯಲಾರನೇ ಎಂಬ ಮನಸ್ಥಿತಿಯಲ್ಲಿರುವ ಬಾಸ್ ಪ್ರತಿಭಾ ಸದಾ ಪುರುಷೋತ್ತಮನತ್ತಲೇ ಒಲವು.. ಕಾಫೀ, ಟೀ ನೆಪವೊಡ್ಡಿ ಕರೆದೊಯ್ಯುವುದಲ್ಲದೇ ಕಛೇರಿಯಲ್ಲಿ ತಡವಾಗಿ ಹೋಗುವಂತೆ ಕೆಲಸಗಳ ಹೊರೆಯೊರಿಸುವ ಈ ಬಾಸ್ ಪ್ರತಿಭಾಳನ್ನು ಎದುರಿಸುವ ಶಕ್ತಿ ಇವನಲ್ಲಿ ಇಲ್ಲದಾಯಿತು.
ಚಿತ್ರ: ಸ್ಕಾನರ್ 7425 :)

ಗಂಡಸು ಕಛೇರಿಯಲ್ಲಿನ ಏರುಪೇರಿನಲ್ಲೂ ಮನೆಗೆ ಬಂದಾಗ ಮನೆಯಲ್ಲೂ ಸಮಾಧಾನವಿಲ್ಲದಿದ್ದರೆ ಖಂಡಿತ ಅವನ ಜೀವನ ಅಯೋಮಯ... ಇಲ್ಲಿ ಪುರುವಿನ ಪರಿಸ್ಥಿತಿಯೂ ಹಾಗೆ ಕಲೆಗಾರನಾಗಿ ಪ್ರತಿಭಾಳ ಚಿತ್ರ ಬಿಡಿಸಿದ..!! ಇಲ್ಲಿ ಅವನ ಹೆಂಡತಿ ಇವನ ಗ್ರಹಚಾರ ಬಿಡಿಸಿದಳು. ಅಪ್ಪ, ಅಮ್ಮನ ಮನಸಿನಲ್ಲೂ ಪ್ರಶ್ನೆಗಳು ಹುಟ್ಟುವಂತಾದವು ಇಂತಹ ಸಂದರ್ಭದಲ್ಲಿ ಬಾಸ್ ಮತ್ತು ಇವನ ಏಕಾಂತದಲ್ಲಿ ನೆಡೆದ ಸಂಭಾಷಣೆ.. ಸೆಕ್ಷುಯಲ್ ಹೆರಾಸ್ ಮೆಂಟ್ ಕೇಸ್ ಜಡಿದ ಕಾರಣಕ್ಕೆ ಪುರುಷೋತ್ತಮನನ್ನೇ ಜೈಲಿಗೆ ಕಳುಹಿಸುವತ್ತ ಸಾಗಿದ ಕಥೆ ಮುಂದೇನಾಗುತ್ತೇ ಎಂಬ ಭಯ ಕುತೂಹಲ..!!??.. ಇಲ್ಲಿ ಗೀತಾರವರು ಸಮರ್ಥವಾಗಿ ಪುರೋಷತ್ತಮನ ಮನದಾಳವನ್ನು ತುಂಬಾ ಮನೋಘ್ನವಾಗಿ ಬಿಂಬಿಸಿದ್ದಾರೆ. ಹೆಣ್ಣು ಭೋಗದ ವಸ್ತು ಎಂಬುದು ಅವನ ಭಾವನೆಯಾಗಿರಲಿಲ್ಲ ಆದರೂ ಅವನ ಜೈಲಿಗೆ ಹೋಗುವ ಸಮಯದಲ್ಲಿ ಸಹಕರಿಸಿದ್ದು ಸಹೋದ್ಯೋಗಿಗಳು. ಇಲ್ಲಿ ಇವನ ಸಹಕಾರಕ್ಕೆ ನಿಂತಿದ್ದು  ಹೆಂಗಳೆಯರೇ ಹೆಚ್ಚು.

ಗಂಡ ಜೊತೆಯಲಿಲ್ಲದಿದ್ದರೆ ಎಷ್ಟೋ ಹೆಣ್ಣು ಮಕ್ಕಳು ಆಮಿಷ ಅಥವಾ ಮೋಹದ ಜಾಲದಲ್ಲೋ ಬಿದ್ದುಬಿಡುವ ಸಾಧ್ಯತೆಗಳು ಹೆಚ್ಚು ಎಂಬುದು ಇಲ್ಲಿ ಒತ್ತಿ ಒತ್ತಿ ಹೇಳಿದಂತಿದೆ. ಮತ್ತೊಬ್ಬ ರವಿ ಎಂಬುವವ ದುಬೈನಲ್ಲಿ ನೆಲೆಸಿರುತ್ತಾನೆ ಇತ್ತ ಅವನ ಹೆಂಡತಿ(ಸುಕನ್ಯಾ) ಯಾವುದೋ ಪ್ರೀತಿ ಆಮಿಷಕ್ಕೆ ಬಿದ್ದು ತನ್ನ ಚಿಕ್ಕ ಮಗುವನ್ನು ಬಿಟ್ಟು ಹೋಗುತ್ತಾಳೆ... ಇಲ್ಲಿ ಕರುಳ ಬಳ್ಳಿಗೂ ಬೆಲೆಯಿಲ್ಲದಂತಾಯಿತು. ಇಷ್ಟೆಲ್ಲಾ ನೆಡೆದರೂ ಆಕೆಯ ಗಂಡ ಮಾತ್ರ ಒಂದು ಪ್ರಬುದ್ಧ ಸ್ಥಾನದಲ್ಲೇ ಉಳಿಯುತ್ತಾನೆ ಮರಳಿ ಸುಕನ್ಯಾ ಬರುವುದಾದರೆ  ಸ್ವೀಕರಿಸಲೂ ಸಿದ್ಧನಾಗಿರುತ್ತಾನೆ.

ಇಲ್ಲಿ ಪುರುಷೋತ್ತಮ ತಂದೆ ತನ್ನ ಏಕಮಾತ್ರ ಆಸ್ಥಿಯನ್ನು ಮಗಳಿಗೆ ಅಫಿಡವಿಟ್ ಮಾಡಿರುವಾಗಲೇ ಇದ್ದ ಇಬ್ಬರು ಹೆಣ್ಣು ಮಕ್ಕಳು ಮನೆಯ ಬೆಲೆ ಕಟ್ಟುವುದು ನೋಡಿ.. ನಾನೆಲ್ಲಿ ನನ್ನ ಆಸ್ತಿಯಲ್ಲಿ ಮೂರು ಮಕ್ಕಳಿಗೂ ಭಾಗ ನೀಡಿ ಅದರಂತೆ ಅಮ್ಮ ಅಪ್ಪನೂ ಮೂರು ಭಾಗಗಳಂತೆ ವಿಗಂಡಿಸಿ ಬಿಡುವರೋ ಎಂದು ಮನಸಿನಲ್ಲೇ ತೋಯ್ದಾಡುತ್ತಿದ್ದರೆ.. ಇಲ್ಲಿ ಮಗ ಮತ್ತು ವಯಸ್ಸಾದ ತಂದೆಯ ನಡುವಿನ ಸಂಭಾಷಣೆ  ಒಂದು ರೀತಿ ಪ್ರೀತಿಯ ಬೆಸುಗೆ ಅದು ಎಂದೂ ಬಿಡಿಸಲಾರದ ಸಂಬಂಧವನ್ನು ಕಲ್ಪಿಸಿಕೊಂಡರೇ ಸುಖವೆನಿಸುತ್ತೆ... ಅಪ್ಪ ಮಗನ ಬಾಂಧವ್ಯಕ್ಕೆ ಆಸ್ತಿ ಮತ್ತು ಹೆಣ್ಣು ಮಕ್ಕಳೊಡನೆ ನೆಡೆಯುವ ಜಟಾಪಟಿ ಎನ್ನುವುದಕ್ಕಿಂತ ತೋಳಲಾಟವನ್ನು ಮಗ ಎಷ್ಟು ಚೆನ್ನಾಗಿ ನಿಭಾಯಿಸುತ್ತಾನೇ ಎಂಬುದನ್ನು ಓದುವ ಆತುರ ಅಷ್ಟರಲ್ಲಿ ಇದ್ದಕ್ಕಿದ್ದಂತೆ ಎಂದೂ ಹೋಗದ ಈ ಕರೆಂಟ್ ತಟ್ಟ್ ಎಂದು ಕತ್ತಲನ್ನು ಕವಿಸಿಬಿಟ್ಟಿತ್ತು... ನಾನು ಓದುವ ಪುಸ್ತಕಕ್ಕೆ ಕತ್ತಲು ಕವಿದಂತೆ ಮಾಡಿದ ಹಾಗೆ ಪುರುಷೋತ್ತಮನ ಜೀವನದಲ್ಲೂ ಕತ್ತಲು ಬರುವುದೇನೋ ಹೆಣ್ಣು ಮಕ್ಕಳು ಅಪ್ಪನ ವಿರುದ್ಧ ನಿಲ್ಲುವರೇನೋ, ಸೊಸೆಯಾದ ಜಾನಕಿ ಮನಸ್ಸು ಕೆಡಿಸಿಕೊಂಡು ಸಂಸಾರ ಇಬ್ಬಾಗವಾಗುವುದೇನೋ ಎಂಬ ದ್ವಂದ್ವದಲ್ಲಿದ್ದೆ ಆದರೂ ಮೊಬೈಲ್ ನಲ್ಲಿದ್ದ ಲೈಟ್ ಆನ್ ಮಾಡಿ ಪೂರ್ಣ ಕಥೆಯನ್ನು ಒಂದೇ ಉಸಿರಿಗೆ ಓದಿಬಿಟ್ಟೆ..
ಕಥೆಯ ಮುಕ್ತಾಯ ಬಹಳ  ಇಷ್ಟವಾಯಿತು. ಈ ಕಥೆ ಓದುವವ ಅವನ ಮನೋಭಾವನೆ ಕೆಟ್ಟದ್ದಾಗಿದ್ದರೂ ಹೌದು..!! ನಾನು ಹೀಗಿರಬಾರದು ನನ್ನಲ್ಲೂ ಬದಲಾವಣೆ ಬೇಕು ಎಂದು ಬಯಸುತ್ತಾನೆ. ನಾನು ಅಲ್ಲಿನ ಪಾತ್ರಗಳಲ್ಲಿ ಒಬ್ಬಳಾಗಿ ತಲ್ಲೀನಳಾಗಿದ್ದೆ... ಹಾಗೇ ಪುರುಷೋತ್ತಮನಂತೆಯೇ ನನ್ನ ಅಣ್ಣ, ಗಂಡ, ಅಪ್ಪ, ಭಾವ ಎಲ್ಲರೂ ಇರಬಹುದು ಅಂತೆಯೇ ಇಲ್ಲಿನ ಹೆಣ್ಣನ ಪಾತ್ರಧಾರಿಗಳೂ ನಮ್ಮ ಸುತ್ತಲೇ ಇರಬಹುದು ಎಂಬಂತೆ ಭಾಸವಾಯಿತು.  ಹೆಣ್ಣಾಗಿ ನಾವು ಧೋರಣೆಗಳನ್ನು ಮಾಡುವವರ ವಿರುದ್ಧ ಹೋರಾಡಬೇಕು, ಹೆಣ್ಣು ಎಂದ ಕೂಡಲೇ ಸರ್ಕಾರ ಸವಲತ್ತು, ಅಥವಾ ಕೋರ್ಟ್-ಕಚೇರಿಗಳಲ್ಲಿ ಹೆಣ್ಣಿನ ಪರವಾಗೇ ಕಾನೂನುಕಟ್ಟಳೆಗಳು ಇರಬಹುದು ಆದರೆ ಅದನ್ನು ಸದುಪಯೋಗ  ಪಡಿಸಿಕೊಳ್ಳಬೇಕೆ ವಿನಃ ದುರುಪಯೋಗ ಪಡಿಸಿಕೊಳ್ಳಬಾರದು.

ಇದು ನಾಯಕ ಪ್ರಧಾನ ಕಾದಂಬರಿ. ಹೆಣ್ಣು ಗಂಡಿನ ಮನದಾಳದಲ್ಲಿಳಿದು ಹೀಗೂ ನೆಡೆಯುತ್ತದೆ ಎಂದು ತೋರಿಸಿರುವ ಕಥೆ. ಅಂತೆಯೆ.... Feminist  ಆಗುವ ಬದಲು Humanist ಆದರೆ ಒಳ್ಳೆಯದು ಎಂಬುದನ್ನ ಹೇಗೆ ಬಿಂಬಿಸಿದ್ದಾರೆ ಎಂದು ಮಿಥ್ಯಾ ಕಾದಂಬರಿಯನ್ನು ಓದಿದರೆ ನಿಮಗೇ ತಿಳಿಯುತ್ತದೆ...

ಮಿಥ್ಯ.. ಮಿಥ್ಯ...ಮಿಥ್ಯ.. ಕಾದಂಬರಿಯ ಪಾತ್ರಗಳೆಲ್ಲವೂ ನಮ್ಮ ನಿಮ್ಮ ನಡುವೆ ಬಂದುಹೋಗುವುದಂತೂ ಸತ್ಯ.. ಸತ್ಯ.. ಸತ್ಯ...

ಧನ್ಯವಾದಗಳು ಗೀತಕ್ಕ ನನಗೆ ಒಳ್ಳೊಳ್ಳೆ ಪುಸ್ತಕಗಳನ್ನು ಕೊಟ್ಟಿರಿ.. ಆದಷ್ಟು ಬೇಗ ಮಿಕ್ಕುಳಿದ ಪುಸ್ತಕಗಳನ್ನು  ಓದಿ ಮುಗಿಸುವೆ. 

Monday, September 3, 2012

ಹಳಿ ತಪ್ಪಿದ ಕರುಳ ಬಳ್ಳಿ...


ನನ್ನ ಪಕ್ಕದಲ್ಲಿ ಕುಳಿತವರು ನನ್ನ ಮಗನಿಗೆ ಐಸ್ ಕ್ರೀಂ ಕೊಡಿಸುವುದಾಗಿ ಬಲವಂತದಿ ಕರೆದೊಯ್ದಿದ್ದರು...ತುಮಕೂರಿನ ರೈಲ್ವೇ ನಿಲ್ದಾಣದಲ್ಲಿ ಕಿಟಿಕಿಯಾಚೆ ಕಣ್ಣಾಡಿಸಿದೆ ಮಗ ಐಸ್ ಕ್ರೀಂ ತಿನ್ನುತ್ತ ಅಲ್ಲೇ ಇದ್ದ ಕಲ್ಲು ಬೆಂಚಿನ ಮೇಲೆ ಕುಳಿತಿದ್ದ, ಪಕ್ಕದಲ್ಲಿ ಕುಳಿತವರು ಸಹ ಅವನೊಟ್ಟಿಗೆ ಏನೋ ಬಾಯಾಡಿಸುತ್ತಿದ್ದರು ನಾನು ಇದ್ದಾನೇ ಕಣ್ಣಿನ ಆಸುಪಾಸಲ್ಲೇ ಎಂದು ಕೈನಲ್ಲಿದ್ದ ಗೀತಾ ಬಿ.ಯು ರವರ ಮಿಥ್ಯಾ ಪುಸ್ತಕವನ್ನು ಓದಲು ಮುಂದಾದೇ.. ತೀವ್ರ ಮೌನದಲ್ಲೇ ಒಂದು ಗಂಡಿಗೂ ತನ್ನದೇ ಆದ ಭಾವನೆಗಳು ಹೇಗಿರುತ್ತದೆ ಎಂದು ಕಥೆಯೊಟ್ಟಿಗೆ ನಾನೂ ಮೆಲುಕು ಹಾಕುತ್ತ ಹೊರಟೆ.... ಓದುವುದರಲ್ಲಿ ಮಗ್ನಳಾದವಳಿಗೆ ರೈಲು ತನ್ನ ಹಳಿ ಬಿಟ್ಟು ಸಾಗುವವರೆಗೂ ಗೊತ್ತೇ ಆಗಲಿಲ್ಲ ಮಗ ಇನ್ನೂ ರೈಲಿಗೆ ಬಂದಿಲ್ಲವೆಂದು..!! ತಕ್ಷಣ ಕಿಟಕಿಯತ್ತ ನೋಡಿದೆ ಅಮ್ಮಾ... ಅಮ್ಮಾ..!! ಎಂದು ಕಿರುಚುತ್ತ ಕೈನಲ್ಲಿದ್ದ ಐಸ್ ಕ್ಯಾಂಡಿಯನ್ನು ರಪ್ಪನೆ ಎಸೆದು ಓಡೋಡಿ ಬರುವ ಕಂದನ ಕಂಡು ಎದೆ ಝಲ್ ಎಂದಿತ್ತು... ಅಯ್ಯೋ ಕಂದಾ...ಅಯ್ಯೋ ಕಂದಾ...ಇನ್ನೂ ನೀನು ಹತ್ತಿಲ್ಲವೇ ಬೇಗ ಓಡಿ ಬಾ..  ಬಾಗಿಲಿನತ್ತ ಓಡಿದೆ.... ಮಗನನ್ನು ಕರೆದೊಯ್ದವರೂ ಓಡೋಡಿ ಬರುತ್ತಿದ್ದರು... ನನ್ನ ಮಗನನ್ನು ಕೈಹಿಡಿದು ಕರೆದುಕೊಂಡು ಬನ್ನಿ ನಾನು ಹತ್ತಿಸಿಕೊಳ್ಳುವೆ ಎಂದು ಕಿರುಚಿ ಹೇಳಿದರೂ ಅವರು ನನ್ನ ಮಾತು ಕೇಳುವುದರಲ್ಲೇ ಇರಲಿಲ್ಲ... ಓಡಿ ಬಂದವರು ಗಾಬರಿಯಲ್ಲಿ ರೈಲು ಹತ್ತಿಬಿಟ್ಟಿರು..... 

ನನಗೋ ಈ ಮನುಷ್ಯ ಹತ್ತಿ ಬಂದನಲ್ಲ ನನ್ನ ಮಗನನ್ನು ಕರೆತರಲಿಲ್ಲ... ಎಂದುಕೊಳ್ಳುವಷ್ಟರಲ್ಲಿ ರೈಲು ರಭಸಕ್ಕೆ ತಿರುಗಿತು ಹೋ..!! ಜನರೆಲ್ಲಾ ಜೋರು ಧ್ವನಿಯಲ್ಲಿ ಅಯ್ಯೋ ಮಗು, ಅಯ್ಯೋ ಮಗು ಎನ್ನುತ್ತಿದ್ದಾರೆ...ಇನ್ನು "ಮಗ ಕೈ ತಪ್ಪಿದ" ಎಂಬ ಗಾಬರಿಯಲ್ಲಿ ನಾನು ರೈಲಿಂದ ಆಚೆ ಹಾರಲು ಯತ್ನಿಸುವಷ್ಟರಲ್ಲೇ.. ಹಿಂದಿನಿಂದ ಯಾರೋ ನನ್ನ ತೋಳನೆಳೆದರು, ಮಗ ಓಡಿ ಬರುತ್ತಿದ್ದ ರಭಸವನ್ನೇ ದಿಟ್ಟಿಸುತ್ತಿದ್ದೇ... ರೈಲ್ವೇ ನಿಲ್ದಾಣದ ಆಸುಪಾಸು ಬಿಟ್ಟು ಮಗ ಆಗಲೇ ಮುಂದೆ ಬಂದಿದ್ದ, ಜಲ್ಲಿ ಕಲ್ಲುಗಳ ಮೇಲೆಯೇ ಓಡಿ ಬರುವುದು ಕಾಣುತ್ತಿದೆ... ಕಾಂಗ್ರೆಸ್ ಗಿಡಗಳು ಸುತ್ತುವರಿದಿವೆ ಅವನ ಅರುಚಿವಿಕೆ ನನ್ನ ಕಿವಿಗೆ ಕೇಳುತ್ತಿಲ್ಲ.. ನನ್ನ ಕಣ್ಣು ಒಂದೇ ಸಮನೇ ಜೋಗ್ ಜಲಪಾತವಾಗಿಬಿಟ್ಟಿದೆ.... ಈ ಮನುಷ್ಯ ಕರೆದುಕೊಂಡೋದವ ಕರೆತರುವುದ ಬಿಟ್ಟು ಎಂತಾ ಕೆಲಸ ಮಾಡಿದ, ಈಗ ಏನು ಮಾಡಲಿ, ಹೇಗೆ ಮಗನನ್ನ ಮತ್ತೆ ಸೇರಲಿ.. ಎಷ್ಟು ಭಯ ಪಟ್ಟಿದೆಯೋ ನನ್ನ ಕೂಸು, ಮುಂದೇನು ಮಾಡುವನೋ ದೇವರೇ ಕಾಪಾಡಪ್ಪ.....  


ನನ್ನನ್ನೇ ನೋಡುತ್ತಿದ್ದ ಬೋಗಿಯ ಜನ... ಆ ಮನುಷ್ಯನನ್ನೇ ನಿಂದಿಸುತ್ತಿದ್ದರು.. ಇತ್ತ ಆ ಮನುಷ್ಯ ನನ್ನ ಪಾದವಿಡಿದು ನನ್ನನ್ನು ಕ್ಷಮಿಸಿ ನಿಮ್ಮ ಮಗ ನನ್ನಲ್ಲಿ ಎಷ್ಟು ಬೇಗ ಹೊಂದುಕೊಂಡುಬಿಟ್ಟ ನನಗೆ ಮಕ್ಕಳಿದಿದ್ದರಿಂದ ಪ್ರೀತಿ ಹೆಚ್ಚಾಗಿ ಅವನಿಗೆ ತಿಂಡಿ ಕೊಡಿಸಲು ಕರೆದುಕೊಂಡೋದೆ. ಕ್ಷಮಿಸಿ ಮೇಡಮ್.. ಕ್ಷಮಿಸಿ ಮೇಡಮ್... ಎಂದು ಒಂದೇ ಸಮನೆ ರೋಧಿಸುತ್ತಿದ್ದಾನೆ.. ನಾನು ಹೇಳುವುದಿನ್ನೇನು.."ಕ್ಷಮಿಸಲೇನಿದೇ ನನ್ನನ್ನು ನನ್ನ ಪಾಡಿಗೆ ಬಿಟ್ಟು ಬಿಡಿ" ಎಂದು ಕೋಪದ ಜೊತೆಗೆ ನನ್ನ ಮೇಲೆ ಬೇಸರವಾಗುತಿತ್ತು. ಈ ಪುಸ್ತಕ ಆಮೇಲೆ ಓದಿದ್ದರೇ ಸಾಕಾಗಿತ್ತು ಇಲ್ಲವೇ ಮಗ ಒಳಗೆ ಬಂದ ಮೇಲೆ ಓದಿದ್ದರೆ ಆಗುತ್ತಿತ್ತು.... ಎಂದು ನನ್ನನ್ನು ನಾನೇ ಶಪಿಸಿಕೊಳ್ಳುತ್ತ ಅಲ್ಲೇ ನೆಲದ ಮೇಲೆ ಕುಸಿದುಬಿದ್ದೆ... ಯಾರೋ ಏನೋ ಹೇಳಿದ್ದು ಕೇಳಿಸಿತು "ಮುಂದಿನ ನಿಲ್ದಾಣದಲ್ಲಿ ಇಳಿದು ತುಮಕೂರಿಗೆ ಹೋಗಿ ನೋಡಿ", ಇನ್ನೊಬ್ಬರು ಇಲ್ಲೇ "ರೈಲ್ವೇ ಕ್ರಾಸಿಂಗ್ ಇರುತ್ತೆ ಸ್ವಲ್ಪ ಹೊತ್ತು ನಿಲ್ಲಿಸಿರುತ್ತಾರೆ ಇಲ್ಲಿಯೇ ಇಳಿದು ಹೋಗಿ" ಎಂದರು.... ನನಗೆ ಆಗ ಸ್ವಲ್ಪ ಧೈರ್ಯ ಬಂದಂತಾಗಿತ್ತು.. ಹತ್ತಿರವೇ ಕ್ರಾಸಿಂಗ್ ಇರೋದರಿಂದ ಇಳಿದು ಹೋಗೋಣ ಎಂದುಕೊಳ್ಳುವಷ್ಟರಲ್ಲಿ ಮತ್ತೊಬ್ಬರು ಇಲ್ಲಾ... ಈ ರೈಲು ಮುಂದೆ ಬೆಂಗಳೂರಿನ "ಯಶವಂತಪುರ" ಬಿಡುವವರೆಗೂ ನಿಲ್ಲಿಸುವುದೇ ಇಲ್ಲಾ... "ಧಸಕ್ ಎಂದಿತು ಜೀವ"..!!! 


ಮತ್ತೇನು ಮಾಡುವುದು ಹಳಿ ತಪ್ಪಿಸಲೇ, ರೈಲಿಂದ ಹಾರಲೇ.. ಈಗಾಗಲೇ ನನ್ನ ಕರುಳ ಬಳ್ಳಿ ಹಳಿ ತಪ್ಪಿದೇ, ಇಷ್ಟು ಜನರು ಇದ್ದಾರೆ ಅವರಿಗೆಲ್ಲಾ ಯಾವ ಯಾವ ಕೆಲಸಗಳು ಇದ್ದಾವೋ ಏನು ಕಥೆಯೋ ಮತ್ತಾವ ಹಳಿ ತಪ್ಪಿಸಲಿ.. ದೇವರೇ ನನಗೆ ಯಾವುದಾದರೊಂದು ದಾರಿ ತೋರಿಸಪ್ಪ ನನ್ನೊಳಗಿನ ನಿಟ್ಟುಸಿರೆಲ್ಲ ಕಂಬನಿಯಧಾರೆಯಾಗಿತ್ತು. ನಾನು ಜೀವಂತ ಇರುವ ಹಾಗಿದೆಯೇ, ಇರುವ ಒಬ್ಬ ಮಗನನ್ನು ಬಿಟ್ಟು ಮತ್ತೇನು ಮಾಡಲಿ, ಮುಂದಿನ ಬದುಕು ಹೇಗೆ.. ಮಗ ಅಷ್ಟು ದೂರ ಓಡೋಡಿ ಬಂದ.. ತಿರುಗಿ ನಿಲ್ದಾಣಕ್ಕೆ ಹೋದನೋ ಇಲ್ಲವೋ... ಯಾರಾದರು ಕರೆದುಕೊಂಡು ಹೋಗಿಬಿಟ್ಟರೆ ಏನು ಮಾಡಲಿ ತಂದೆ..!! ದೇವರಲ್ಲಿ ಅಂಗಾಲಾಚಿ ಬೇಡುತ್ತಿದ್ದನ್ನು ಕಂಡ ರೈಲಿನ ಜನ... ಎಲ್ಲರೂ ಮಮ್ಮಲ ಮರುಗಿದರು ಎಲ್ಲರೂ ನನ್ನೊಟ್ಟಿಗೆ ಅವರೂ ದುಃಖಿಸಿದರು... ತೋಚದಾಯಿತು...!!?? ಮತ್ತೆ ಬಾಗಿಲ ಹತ್ತಿರ ಹೋಗಿ ದಿಟ್ಟಿಸಿ ನೋಡುತ್ತಲೇ ಇದ್ದೇ... ಓಡುವ ರೈಲಿನಿಂದ ಹಾರಿ ಬಿಟ್ಟಾಳು ಎಂದು ಒಂದಿಬ್ಬರು ನನ್ನ ಹಿಡಿದಿದ್ದರು.... ಇತ್ತ ಯಾವುದೋ ಶಬ್ದ ಟ್ರ್ ಣ್ ಟ್ರ್ ಣ್ ಎನ್ನುತ್ತಿದೆ... ಓಹೋ..! ದೇವರು ದಾರಿಬಿಟ್ಟ.. ಈಗ ರೈಲು ಯಾವುದೋ ಕಾರಣಕ್ಕೆ ನಿಲ್ಲಿಸುತ್ತಾರೇನೋ ಎಂದು ಮಗ್ಗುಲು ಬದಲಿಸುತ್ತ ಕಣ್ಣು ತೆರೆದು ನೋಡಿದರೆ ಬೆಳಗಿನ ಜಾವ ೫.೩೦ ಆಗಿತ್ತು..!!

ಚಿತ್ರ  @ ಶಿವುಲೋಕ..

Tuesday, August 28, 2012

ಮೂಕ ಮನಸು ಪ್ರೀತಿಸುತಿದೆ.. ಪ್ರೀತಿಸುತಿದೆ...!!!


ಮರುಭೂಮಿಯ ಬಿಸಿಲು ತಾಳಲಾರದೆ ರಜೆಗೆ ಬೆಂಗಳೂರಿಗೆ ವರ್ಷಗಳ ಹಿಂದೆ ಹೋಗಿದ್ದೆ. ಊರಲ್ಲಿ ಮನೆಗೆ ಹೊಸ ಅತಿಥಿ ಬಂದಿದ್ದ. ಏನ್ ಪ್ರೀತಿ, ಅಂತೀರಾ ಇವರು ಯಾರೋ ಗೊತ್ತೇ ಇಲ್ಲ, ಯಾರು ಬೇಕು ನಿಮ್ಗೆ.? ಯಾಕೆ ಬಂದಿರಿ? ಅಂತ ಕೇಳಲೇ ಇಲ್ಲ. ಅಮ್ಮ ಬೇರೇ ಅವನಿಗೆ ರೇಗ್ತಾ ಇದಾರೆ..!! ಏನೋ? ನೀನು, ಇವಳು ಯಾರು ಅಂತ ಗೊತ್ತಾ, ಹಂಗೆ ಹೇಗೆ ಒಳಗೆ ಬಿಟ್ಟೆ..?? ಯಾರಾದ್ರು ಬಂದ್ರೆ ಹೆಂಗೆ ತರಾಟೆ ತಗೋತೀಯಾ. "ಇವತ್ತೇನು ಹೀಗೆ ಸ್ವಾಗತ ಕೋರುತ್ತಿದ್ದೀಯ" ಇದೆಲ್ಲವನ್ನು ರಾಮು ಕೇಳಿಸಿಕೊಳ್ಳುತ್ತ ನನ್ನ ಸುತ್ತ ಓಡಾಡ್ತನೇ ಇದ್ದ. "ನಾನು ಈ ಮನೆಯವಳೇ ಅಂತ ಅವನಿಗೂ ಗೊತ್ತು" ನನ್ನ ನೋಡಿಲ್ಲದಿದ್ದ್ರೇ ಏನು?, ಅಮ್ಮನಿಗೆ ಹೀಗೆ ಸಮಜಾಯಿಸಿ ಕೊಡುವುದರ ಜೊತೆಗೆ ಹೊಸ ಅತಿಥಿ ನನ್ನ ಸ್ನೇಹಿತನಾಗಿದ್ದ.

ಆ ಒಂದು ತಿಂಗಳು ರಜೆಯಲ್ಲಿ ಬೆಂಗಳೂರಿನಲ್ಲಿದ್ದಾಗ, ಸುಮಾರು ಎಂಟತ್ತು ದಿನಗಳು ಮಾತ್ರ ಆ ಸ್ನೇಹಿತನ ಜೊತೆ ಮಾತನಾಡುತ್ತ, ಅವನಿಗೆ ಬೇಕಾದ ಬಿಸ್ಕತ್ತು, ಬನ್ನು, ಬ್ರೆಡ್ ಕೊಡುಸ್ತಾ ಇದ್ದೆ. ಅವನೂ ಸಹ ಖುಷಿ ಖುಷಿಲಿ ತಿಂದು ನನ್ನ ಹಿಂದೆನೇ ಓಡಾಡ್ತಾ ಇದ್ದ. ಇನ್ನು ನನ್ನ ಮಗನಿಗೆ ರಾಮು ತುಂಬಾ ಆತ್ಮೀಯ, ಕಾರಣ ಅದನ್ನು ಮನೆಗೆ ಕರೆದುಕೊಂಡು ಬಂದಿದ್ದೇ ಅವನು ಮತ್ತು ನನ್ನ ಅಣ್ಣನ ಮಗ. ಇನ್ನು ನನ್ನ ಜೊತೆ ದೋಸ್ತಿ ಕೇಳಬೇಕ ಮಗನ ರೆಕಮೆಂಡೇಷನ್ ಬೇರೇ ಇತ್ತು, ಅದಕ್ಕೆ ತಕ್ಕಂತೆ ನಮ್ಮಿಬ್ಬರ ಆತ್ಮೀಯತೆಯೂ ಜಾಸ್ತಿ ಆಗಿತ್ತು.

ಹುಫ್...!! ಮುಗಿತಾ ಇದೇ ರಜೆ. ನಾಳೆ ನಮ್ಮ ಗಂಟುಮೂಟೆ ಕಟ್ಟಬೇಕು ಮನೆನಲ್ಲಿ ಎಲ್ಲಾ ನಮ್ಮ ಲಗೇಜ್ ಪ್ಯಾಕ್ ಮಾಡ್ತಾ ಇದ್ದಾರೆ. ನಮ್ಮ ಈ ಸ್ನೇಹಿತ ಯಾಕೋ ಅತ್ತಿಂದಿತ್ತ ಇತ್ತಿಂದತ್ತ ಓಡಾಡ್ತಾ ಇದಾನೆ, ಎಲ್ಲರನ್ನು ನೋಡ್ತಾನೇ ಸುಮ್ಮನೇ ಇದ್ದಾನೆ, ಮಾತಿಲ್ಲ ಕತೆ ಇಲ್ಲ, ಮೌನ ಸಂಭಾಷಣೆ ನೆಡೆದಿತ್ತು. ಇತ್ತ ಬೆಳ್ಳಂ ಬೆಳ್ಳಿಗ್ಗೆ ನಮ್ಮ ಗಂಟುಮೂಟೆಗಳು ಕಾರಿನಲ್ಲಿ ಕುಳಿತಿವೆ. ಇವನು ಅದೇ ನನ್ನ ಸ್ನೇಹಿತ "ರಾಮು" ಸುಮ್ಮನೆ ಇರಲಾರದೇ ಮಹಡಿ ಮೇಲಿಂದ ಚಂಗನೆ ನೆಗೆದು ಕಾರಿನ ಸುತ್ತ ಪ್ರದಕ್ಷಿಣೆ ಹಾಕಿ, ಲಗೇಜ್ ಎಲ್ಲವನ್ನು ಮೂಸಿ ನೋಡಿದ್ದೇ ತಡ ಕಾರಿನ ಒಳಗೆ ಓಡೋಗಿ ಕುಳಿತುಬಿಟ್ಟ!!. ನನ್ನ ಕಳಿಸಲು ಬಂದವರೆಲ್ಲಾ "ಬಿಟ್ಟ ಕಣ್ಣು ಬಿಟ್ಟಂತೆ " ನೋಡ್ತಾ ಇದ್ದಾರೆ... "ನೋಡಿದ ಇದನ್ನ??", "ನೆನ್ನೆ ಮೊನ್ನೆ ನೋಡಿದೋಳನ್ನ ಇಷ್ಟು ಇಷ್ಟಪಡ್ತಿದೆ". ಹೀಗೆ ಒಬ್ಬರಿಗೊಬ್ಬರು ಮಾತಾಡ್ತಾ ಇದ್ದಾರೆ. ನಾನು ಇನ್ನೇನು ಹೊರಡಬೇಕು ಅಲ್ಲೇ ಇದ್ದ ಬೇಕರಿಯಿಂದ ಬನ್ನು ತಂದು ರಾಮು ಬಾರೋ ತಗೊಳ್ಳೋ ಎಂದು ಕರೆದರೆ ಬರಲೇ ಇಲ್ಲ, ಕಾರಿಂದ ಇಳಿಯದವನನ್ನು ಬಲವಂತವಾಗಿ ಹೊರಗೆ ಕರೆದು ಬನ್ನು ಕೊಟ್ಟರೆ ಮೂಸಿ ನೋಡ್ತಾನೇ ಬಾಯಿ ಮಾತ್ರ ತೆರೆಯುತ್ತಿಲ್ಲ, ಯಾಕೋ, ತಿನ್ನೋ?? ಎಂದು ಅಲ್ಲೇ ಕಲ್ಲಿನ ಮೇಲಿಟ್ಟೆ. ತಿನ್ನದೆ ನನ್ನ ಹಿಂದೆಯೇ ಬರ್ತಾ ಇದ್ದಾನೆ!! ಬೇಡ ರಾಮು ಹೋಗು, ಬರ್ತಾ ಇರ್ತೀನಿ ವರ್ಷಕೊಮ್ಮೆ ಆಯ್ತಾ ಎಂದು ಮುಖ ನೋಡಿದ್ರೆ ಅವನ ಆ ಕಪ್ಪು-ಬಿಳುಪಿನ ಕಣ್ಣ ರೆಪ್ಪೆ ಒದ್ದೆಯಲ್ಲಿತ್ತು.... ಏನೂ ಮಾತಾಡೋಕ್ಕೇ ಆಗ್ತಿಲ್ಲ ಅವನಿಗೆ. "ಮಾತು ಬರುವ ಹಾಗಿದ್ದರೆ ಚೆನ್ನಾಗಿತ್ತು ಕಣೋ", ’ನಿನ್ನ ಭಾವನೆಯನ್ನ ನನ್ನ ಜೊತೆ ಹಂಚಿಕೊಳ್ಳಬಹುದಿತ್ತು ಎಂದುಕೊಳ್ಳುತ್ತ ನನ್ನ ಮನಸ್ಸು ಒದ್ದೆಯಾಗಿತ್ತು’. ಇವನಿಗೆ ನಾನೇನು ಅಂತ ಸೇವೆ ಮಾಡಿಲ್ಲ ಅದೇಕೋ ಅಂದು ನನ್ನ ಬೀಳ್ಕೊಡುವಾಗ ತೋರಿದ ಪ್ರೀತಿ ನನ್ನ ಮನದ ಪುಟದಲ್ಲೇ ಉಳಿದುಬಿಟ್ಟಿತು..


"ರಾಮು"  ನಮ್ಮ ಮನೆಯ ನಾಯಿಮಹರಾಜ ಏನೋ ಒಂದು ತರ ಪ್ರೀತಿ ಈಗಲೂ ಮನೆಗೇನಾದರು ಫೋನ್ ಮಾಡಿದರೆ  ಒಮ್ಮೊಮ್ಮೆ ಅಪ್ಪನೋ ಅಮ್ಮನೋ ಯಾರಾದರು ಬೇರೆಯವರಿಗೆ ನೋಡು ಸುಗುಣ ಫೋನ್ ಮಾಡಿದ್ದಾಳೆ ಎಂದಾಗ ನನ್ನ ರಾಮು ಬೊಗಳಿದ್ದು ಕೇಳಿಸಿಕೊಂಡಿದ್ದೀನಿ.. ಆ ಬೊಗಳುವಿಕೆಯಿಂದಲೇ ಹೇಗಿದ್ದೀರಾ ಎಂದು ಕೇಳುವ ಹಾಗಿರುತ್ತೆ.. ಇದು ನನ್ನ ಬ್ರಾಂತೋ ಅಥವಾ ನಿಜವಾಗಿಯೂ ನನ್ನ ರಾಮು ನಮ್ಮ ನೆನಪಿಟ್ಟಿದ್ದಾನೋ ಗೊತ್ತಿಲ್ಲ.... ಆದರೆ ಫೋನ್ ಮಾಡಿದಾಗ ಈ ಅನುಭವ ಎಷ್ಟೋ ಬಾರಿ ನನಗಾಗಿದೆ......  ಪ್ರತಿದಿನ ಮನೆಮಂದಿ ನೆನಪಾಗ್ತಾರೋ ಇಲ್ಲವೋ ಆದರೆ ಈ ರಾಮು ಮಾತ್ರ ಪ್ರತಿಕ್ಷಣ ನೆನಪಾಗ್ತಾನೆ... 

ಪ್ರತಿ ವರ್ಷದ ಕಥೆಯಂತೆ ಕಳೆದ ತಿಂಗಳು ರಜೆಗೆ ಹೋದಾಗಲೂ ಅದೇ ಪ್ರೀತಿ ಅದೇ ಸ್ನೇಹ... ಬದಲಾವಣೆಯೇ ಇಲ್ಲದಂತ ನೋಟ-ಒಡನಾಟ. ಈ ಬಾರಿ ಬೆಂಗಳೂರನ್ನು ಬಿಡುವಾಗ ಬೆಳಗಿನ ಜಾವ ೩.೩೦ಕ್ಕೆ ಮನೆಯಿಂದ ಹೊರಟೆವು ಅಷ್ಟೊತ್ತಿನಲ್ಲಿ ಮಹಡಿಯ ಮೇಲೆ ಎಲ್ಲೋ ಮಲಗಿದ್ದವ ಜಂಗನೇ ಬಂದು ಬಿಟ್ಟ... ರಾಮನನ್ನು ಕಂಡ ಮನೆಯವರೆಲ್ಲಾ "ಎಲ್ಲರಿಗೂ ಹೇಳಿ ಹೊರಟೆ ರಾಮುಗೆ ಹೇಳಿದ್ದಾ..??" ನೋಡು ಆದರೂ ಅವನೇ ಎದ್ದು ಬಂದಿದ್ದಾನೇ ನಿಮ್ಮನ್ನ ಕಳುಹಿಸಿಕೊಡಲು ಎಂದು ಹೇಳಿದಾಗ ಮನಸ್ಸು ಏಕೋ ..ಏನೋ..ಎಂತದೋ ಭಾವನೆಯಲ್ಲಿತ್ತು ಹೇಳೋಕ್ಕೆ ಆಗ್ತಿಲ್ಲ..!!  ಹಾಗೇ ಅದೇ ಭಾವನೆಯಲ್ಲಿ ಹೊರಟ ನಮ್ಮನ್ನು ಬಹುದೂರ ಕಾರನ್ನು ಹಿಂಬಾಲಿಸಿ ಓಡಿ ಬರುತ್ತಿದ್ದವನನ್ನು... ಕಣ್ಣು ಮಬ್ಬಾಗುವರೆಗೂ ಅವನನ್ನೇ ದಿಟ್ಟಿಸಿ ನೋಡಿದೆ.....  


ರಾಮು.. ನನ್ನ ಪ್ರೀತಿಯ ರಾಮು... 

Thursday, August 23, 2012

ನನ್ನ ಪ್ರೀತಿಯ ಸ್ಯಾಮ್ ಅಲೆ... ಅವಳು ಬೀಸಿದಳು ಬಲೆ....


ನೀನು ತೀರಾ ಗಾಂಧಿವಾದಿ ಏನು ಆಗೋಕ್ಕೆ ಹೋಗಬೇಡ್ವೇ, ಸರ್ಕಾರ ಉದ್ದಾರ ಮಾಡೋಕ್ಕೆ ಹೋಗೋದು ಸಾಕು ಸುಮ್ನೇ ಮನೆನಲ್ಲಿ ಕಾರಿದೆ ಯಾರಾದ್ರು ಡ್ರೈವರ್ ಸಿಕ್ತಾರ ನೋಡು ದಿನದ ಬಾಟಾ ಕೊಟ್ಟು ಹೋಗಿ ಬರೋದು ಕಲ್ತಕೋ..!!!

ಹೂ ನಾವುಗಳು ವಿದ್ಯಾವಂತರು, ಬುದ್ಧಿವಂತರೇ ಹಿಂಗೆ ಮಾಡಿದ್ರೆ ಹೇಗೆ... ಆದಷ್ಟು ಸರ್ಕಾರಿ ವಾಹನಗಳನ್ನ ಉಪಯೋಗಿಸಿಕೊಂಡು ಓಡಾಡಬೇಕು... ಜನ ಎಲ್ಲರೂ ಕಾರ್, ಬೈಕ್ ಅಂತಲೇ ಓಡಾಡ್ತಾ ಇದ್ದು, ಸ್ವಲ್ಪನು ಮಯ್ಯಿ ನೋಯಿಸೋಕ್ಕೆ ಇಷ್ಟಪಡದೇ ಹೋದ್ರೇ ಹೆಂಗೆ.. ಹೀಗ್ ಮಾಡೇ ಪೆಟ್ರೋಲ್, ಡೀಸಲ್ ಬೆಲೆ ಗಗನಕ್ಕೆ ಹೋಗಿರೋದು... ಜೊತೆಗೆ ವಾಯು ಮಾಲಿನ್ಯವೂ ಹೆಚ್ಚಾಗಿರೋದು.

ಅಕ್ಕನ ಮಾತಿಗೆ ಬಾರಿ ಗಾಂಧಿವಾದದ ಮಾತು ಆಡಿ ಮಧ್ಯಾಹ್ನ ಮೆಜೆಸ್ಟಿಕ್ ಬಸ್ ಹತ್ತಿದ್ದೆ... ಅದು ಆಗಲೆ ೨ಗಂಟೆ ಊಟ ಬೇರೆ ಬಿಸಿಬಿಸಿ ತಿಂದಿದ್ದೇ... ಮೆಜೆಸ್ಟಿಕ್ ಬೇಡ ಯಲಹಂಕಗೇ ಸೀದ ಹೋಗುವ ಬಸ್ಗೆ ಹೋಗಿ ಅಲ್ಲಿಂದ ದೇವನಹಳ್ಳಿಗೆ ಹೋಗು ಅಂತ ಅಂದ್ರು ಮನೆನಲ್ಲಿ... ಮಗ ಮೆಜೆಸ್ಟಿಕ್ ನೋಡಿಲ್ಲ ಅವನಿಗೂ ತೋರಿಸಿದ ಹಾಗೆ ಆಗುತ್ತೆ ಎಂದು ಒಣಜಂಭವೋ, ಪ್ರತಿಷ್ಠೆಯೋ ಮಾಡಿ ಬಸ್ ಹತ್ತಿದೆ. ಮೆಜೆಸ್ಟಿಕ್ ಗೆ ೨೪೪ಸಿ ಬಸ್ ಹತ್ತಿ ಇಳಿಯುವ ಮುನ್ನ ತಾಮುಂದು ನಾಮುಂದು ಎಂಬಂತೆ ಒಬ್ಬರ ಮೇಲೆ ಒಬ್ಬರು ಮೈಮೇಲೆ ಬಿದ್ದು ಇಳಿದಿದ್ದಾಯ್ತು...

ನೆಂಟರ ಮನೆಗೆ ಹೋಗ್ತಾ ಇದ್ದೇನೆ ಏನಾದರೂ ತಿಂಡಿ ತೆಗೆದುಕೊಳ್ಳುವ ಎಂದು ಅಲ್ಲೇ ಹತ್ತಿರ ಇದ್ದ ನಂದಿನಿ ಸಿಹಿತಿಂಡಿಯ ಅಂಗಡಿಗೆ ಹೋಗಿ ಮೈಸೂರ್ ಪಾಕ್, ಪೇಡಾ, ಬಿಸ್ಕೇಟ್, ಅದು ಇದು ಆಳು-ಮೂಳು ಎಲ್ಲಾ ಪ್ಯಾಕ್ ಮಾಡಿಸಿದೆ.... ಮಗ ಐಸ್ ಕ್ರೀಂ ಎಂದಾ...?? ಹೂ ತಗೋ ಏನ್ ಬೇಕೋ ಎಂದೆ... ನೀನು ಒಂದು ತಿನ್ನಮ್ಮ ಅಂದಾ ನಾನು ಆಹಾ..!! ನಂದಿನಿ ಹಾಲಿನಲ್ಲಿ ಮಾಡಿದ ಐಸ್ ಕ್ರೀಂ... ತಿನ್ನೋಣ ಎಂದು ಆಗಲಿ ನನಗೂ ಒಂದು ಎಂದೆ...!!! ಇನ್ನೇನು ಬಿಲ್ ಕೊಡಬೇಕು... ಮಗ ಆಗಲೇ ಐಸ್ ಕ್ರೀಂಗೆ ಬಾಯಾಕಿದ್ದಾನೇ....!! ನನ್ನ ಬ್ಯಾಗ್ ನಲ್ಲಿದ್ದ ಪರ್ಸ್ ಕಾಣ್ತಾ ಇಲ್ಲ....... ಓಹ್..!!! ದೇವರೇ ಇರೋ ಬರೋ ದೇವರನ್ನೇಲ್ಲಾ ಜಪಿಸಿದೆ .. ತಕ್ಷಣ ಅಂಗಡಿಯವನಿಗೆ ಬಸ್ ಗೆ ಕೊಟ್ಟು ಮಿಕ್ಕಿದ್ದ ಕಾಸು ಕೈನಲ್ಲೇ ಇದ್ದದ್ದನ್ನು ಮಗನ ಐಸ್ ಕ್ರೀಂಗೆ ವಜಾ ಹಾಕಿಕೊಳ್ಳಿ ನನಗೆ ಐಸ್ ಬೇಡ ಎಂದು ... ನನ್ನ ಪರ್ಸ್ ಕಳ್ಳತನವಾಗಿದೆ ಎಂದು ಹೇಳಿ ಮಗನನ್ನ ಕರೆದುಕೊಂಡು ಓಡಿದೆ.

ಬಸ್ ಇಳಿದ ಜಾಗಕ್ಕೆ ಹೋಗಿ ನೋಡಿದೆ ೨೪೪ಸಿ ಬಸ್ ಕಾಣ್ತಾ ಇಲ್ಲ... ಕಣ್ಣು ಮಬ್ಬಾಗಿದೆ, ಏನು ಮಾಡುವುದು ತೋಚ್ತಾ ಇಲ್ಲ... ಸ್ವಲ್ಪ ಸಮಯದ ಮುಂಚೆ ಸ್ನೇಹಿತನಿಗೆ ಕರೆ ಮಾಡಿದ್ದೇ ಮತ್ತೆ ಅವನಿಗೆ ಕರೆ ಮಾಡಿ... ಹೀಗಾಗಿದೇ ಏನು ಮಾಡುವುದೋ ಎಂದೇ..!!! ನನ್ನ ಪರ್ಸ್ ನಲ್ಲಿದ್ದ ೫ಸಾವಿರ ರುಪಾಯಿ ಮತ್ತು ನನ್ನ ಪ್ರೀತಿಯ ಸ್ಯಾಮ್ ಕಾಣ್ತಾ ಇಲ್ಲ ಎಂದೇ...ಅಯ್ಯೋ..!! ಗೂಬೆ ಎಂತಾ ಕೆಲಸ ಮಾಡಿಕೊಂಡೆ... ಐ.ಎಂ ನಂ ಗೊತ್ತಿದ್ರೇ ಪೋಲೀಸ್ಗೆ ಕಂಪ್ಲೆಂಟ್ ಕೊಡು ಎಂದ..!!! ಯಾವುದಕ್ಕೂ ಪೋಲೀಸ್ ಠಾಣೆಗೆ ಹೋಗಿ ಬರೋಣ ಎಂದು ಉಪ್ಪಾರಪೇಟೆ ಸ್ಟೇಷನ್ ಹತ್ತಿರ ಹೋಗೋಕ್ಕೆ ಮಗನ ಕೈ ಹಿಡಿದು ಎಳೆದುಕೊಂಡೇ ಓಡಿದೆ....!!


ಮೊದಲ ಭೇಟಿ ಇದುವರೆಗೂ ಪೋಲೀಸ್ ಸ್ಟೇಷನ್ ಒಳಗಡೆ ಹೋಗಿ ನೋಡಿಲ್ಲ... ಇನ್ನೇನು ಒಳಹೋಗಬೇಕು ಎನ್ನುವಾಗ ಅಲ್ಲೇ ದ್ವಾರದಲ್ಲಿ ಬಂದೂಕುದಾರಿ ನಮ್ಮನ್ನೇ ದುರುಗುಟ್ಟುತ್ತಿದ್ದ... ಹಾಗೆ ಕಣ್ ಸರಿಸಿ ಒಳಗೆ ಹೋದೆ.. ಪೋಲೀಸ್ ಯಾರಿಗೋ ನೂರು ರುಪಾಯಿ ಎಲ್ಲಾ ಈಗ ನಡೆಯಲ್ಲಪ್ಪ... ಇದ್ದರೆ ೫೦೦ ಕೊಡು ಅಂತಾ ಇದ್ದ ಅಯ್ಯೋ ಕರ್ಮವೇ ನಾನು ಈಗ ಕೈಲಿದ್ದಿದ್ದೆಲ್ಲಾ ಕಳೆದುಕೊಂಡು ಬಂದಿದ್ದೀನಿ ಮತ್ತೆ ಇಲ್ಲಿ ಕಾಸು ಬೇರೆ ಕೇಳ್ತಾರೇನೋ ಗೊತ್ತಿಲ್ವೇ...ದೇವರೇ ಏನಪ್ಪಾ ಮಾಡೋದು ಎಂದು ಸ್ವಲ್ಪ ದೂರ ಹೊರಬಂದು ನನ್ನ ಯಜಮಾನರು ಕುವೈತ್ನಲಿದ್ದವರಿಗೆ (ನನ್ನ ಹತ್ತಿರವಿದ್ದ ಇನ್ನೊಂದು ಮೊಬೈಲಿನಿಂದ) ಕರೆ ಮಾಡಿದೆ "ಕಣ್ಣಲ್ಲಿ ಧಾರಾಕಾರ ಮಳೆ" ಆದರೆ "ಬೆಂಗಳೂರಲ್ಲಿ ಮಾತ್ರ ಆಗ ಮಳೆಯೇ ಇರಲಿಲ್ಲ"...  ನನ್ನ ಮೊಬೈಲ್ ಕಳೇದೋಯ್ತು ಪೋಲೀಸ್ ಸ್ಟೇಷನ್ಗೆ ಬಂದಿದ್ದೀನಿ ನನ್ನ ಈ-ಮೈಲ್ ನಲ್ಲಿ ಐ.ಎಂ ನಂಬರ್ ಇದೆ ನೋಡಿ ಮೆಸೇಜ್ ಮಾಡೋಕ್ಕೆ ಹೇಳಿದೆ... ಸ್ವಲ್ಪವೂ ಪ್ರಜ್ಞೇ ಇಲ್ವಾ ನಿನ್ಗೆ ಬೆಂಗಳೂರಲ್ಲಿ ಜನ ಹೇಗಿರ್ತಾರೆ, ಮಯ್ಯೆಲ್ಲಾ ಕಣ್ಣಾಗಿರಬೇಕು ಗೊತ್ತಾಗೋಲ್ವಾ..?!! ಯಜಮಾನರ ಕಡೆಯಿಂದ ಸುಪ್ರಭಾತ ಬರ್ತಾನೇ ಇದೆ.. "ಅಯ್ಯೋ ನನ್ನ ಕಷ್ಟ ನನ್ನ್ಗೆ ಈವಯ್ಯದೊಂದು ಗೊಣಗಾಟ.. ನಾನೇನು ಬೇಕು ಅಂತ ಕಳ್ಳಿ ಕೈಗೆ ಕೊಟ್ಟು ಬಂದ್ನಾ" ಹಿಂಗೆ ಮನಸಲ್ಲೇ ಅಂದುಕೊಂಡೆ ಧೈರ್ಯವಾಗಿ ಜೋರಾಗಿ ಅವರಿಗೆ ಹೇಳಿಲ್ಲ ಹೇಳಿದ್ರೇ ಅಷ್ಟೇ ಕಥೆ..:) ಐ. ಎಂ ನಂಬರ್ ತಗೆದುಕೊಂಡು ಕಂಪ್ಲೇಂಟ್ ಬರೆದುಕೊಟ್ಟೆ ಅಲ್ಲೇ ಕುಳಿತಿದ್ದ ಪೋಲೀಸ್ ಏನ್ ನಿಮ್ಮ ಹೆಸರು, ಯಾವ ಊರು ಕಂತೆ ಪುರಾಣಗಳನ್ನೇಲ್ಲಾ ಕೇಳ್ತಾ ಇದ್ರೇ ನನಗೆ ಒಳಗೊಳಗೇ ಕೋಪ.. ನನ್ನ ಊರು ಕೇರಿ ಕಟ್ಟುಕೊಂಡು ಇವರಿಗೇನು ಮೊದಲು ಕಂಪ್ಲೇಂಟ್ ಬಗ್ಗೆ ಮಾತಾಡಪ್ಪಾ ಸಾಮಿ ಎಂದುಕೊಂಡೇ... ನೋಡಿ ಮೆಡಂ ದಿನಕ್ಕೆ ಇಂತಹ ಕೇಸ್ ನೂರಾರು ಬರುತ್ವೇ ನಿಮ್ಮ ಕಳುವಾದ ವಸ್ತು ಸಿಕ್ಕರೇ ನಿಮ್ಮ ಅದೃಷ್ಟ, ಇಲ್ಲವೇ ಇಲ್ಲ... ನಿಮ್ಮ ಐ. ಎಂ ನಂಬರ್ ಕೊಟ್ಟೀದ್ದೀರಲ್ಲಾ ಕಂಪ್ಯೂಟರ್ ನಲ್ಲಿ ಹಾಕ್ತೀವಿ ನೋಡೋಣ ಎಂದು ಮುಂದಿನ ಮಹಭಾರತಕ್ಕೆ ಶುರುವಿಟ್ಟರು.

ಅಲ್ಲಾ...!!! ಮೇಡಮ್ ನಿಮ್ಗೇ ಸ್ವಲ್ಪಾನೂ ಗೊತ್ತಾಗಲಿಲ್ಲ್ವೇ (ಗೊತ್ತಾಗಿದ್ರೇ ನಿಮ್ಮ ಹತ್ರಾ ಯಾಕ್ ಬರ್ತಿದ್ದೇ ಸ್ವಾಮಿ - ಇದು ಮನಸಿನ ಮಾತು), ಬೆಂಗಳೂರಿನಲ್ಲಿ ಜನ ದಿಕ್ಕು ದೆಸೆ ಇಲ್ಲದೇ ಬಂದು ಇಲ್ಲಿ ಸುಖವಾಗಿ ಬದುಕೋದನ್ನ ಆಯ್ಕೇಮಾಡ್ಕೋತಾರೆ. ಮೊನ್ನೆ ಹಿಂಗೆ ಒಬ್ಳು ಕಳ್ಳಿ ಎಂ.ಬಿ.ಎ ಮಾಡಿರೋಳು ಸಿಕ್ಕಾಪಟ್ಟೆ ಕಳ್ಳತನ ಮಾಡಿ ಸಿಕ್ಕಾಕಿಕೊಂಡಿದ್ಲು ಎಂತಾ ಜಾಣರಿರ್ತಾರೆ ಗೊತ್ತೇ..??, ನಿಮ್ಮ ಪರ್ಸ್ ಕಳುವಾದ ಕೂಡಲೇ ಅವರ ಕೈನಲ್ಲಿ ಇರೋದೇ ಇಲ್ಲ ನಿಮಿಷಕ್ಕೆ ೪,೫ ಕೈ ಬದಲಾಯಿಸಿರ್ತಾರೆ ಗೊತ್ತೇ.. ನಾವು ದಿನಕ್ಕೆ ಎಷ್ಟು ಕೇಸ್ ನೋಡಿಲ್ಲಾ ಮೇಡಂ..!!! ಸ್ವಲ್ಪ ನೀವುಗಳು ಎಚ್ಚರಿಕೆಯಿಂದ ಇರ್ಬೇಕು..!!!(ಎಚ್ಚರ ಇಲ್ಲದ್ದಕ್ಕೆ ಹಿಂಗೆ ಆಗಿದ್ದು -ಮನಸಿನ ಮಾತು) ನೀವು ಬೆಂಗಳೂರಲ್ಲಿ ಎಷ್ಟು ದಿನ ಇರ್ತೀರೋ ಏನೋ ಅಷ್ಟರೊಳಗೆ ಸಿಕ್ಕರೆ ನೋಡ್ತೀವಿ ಮೇಡಮ್, ಆನಂತರ ನಿಮ್ಮ ಸಂಬಂಧಿಕರ ನಂಬರ್ ಕೊಟ್ಟಿದ್ದೀರಲ್ಲಾ ನೋಡೋಣ ಸಿಕ್ಕರೆ ತಿಳುಸ್ತೀವಿ. ನಮಗೂ ಕಷ್ಟ ಮೇಡಮ್ ಈ ಮೆಜೆಸ್ಟಿಕ್ ನಲ್ಲಿ ಸಿಕ್ಕಾಪಟ್ಟೆ ಜನ ಬರ್ತಾರೆ ಯಾರನ್ನ ಅಂತ ನೋಡೋದು, ಯಾರಿಗೆ ಅಂತ ರೂಲ್ಸ್ ಮಾಡೋದು, ಯಾರೋ ಒಬ್ಬಳು ಕಳ್ಳಿ ತರ ಇರ್ತಾಳೇ ಅಂದುಕೊಳ್ಳಿ ಅನುಮಾನಿಸಿ ಅವರನ್ನ ಕರೆತಂದ್ರೆ... ಅವರಿಂದೆನೇ ಬರ್ತಾರೆ ಜನ ಬಿಡಿಸ್ಕೊಂಡು ಹೋಗೋಕ್ಕೆ... ಹಾಗೂ ನಾವು ಪೋಲೀಸ್ ನವರು ಜೋರು ಮಾಡಿದ್ವಿ ಅಂತ ಇಟ್ಟುಕೊಳ್ಳಿ ಅಷ್ಟೇ ಮುಗಿತು ಕಥೆ ಪೋಲೀಸ್ ನವನು ನನ್ನ ಮೈಮೇಲೇ ಬಿದ್ದ, ನನ್ನ ಹತ್ತಿರ ಅಸಭ್ಯವಾಗಿ ವರ್ತಿಸಿದ ನಾನು ಕಳ್ಳಿಯೇ ಅಲ್ಲಾ...  ಮರ್ಯಾದಸ್ಥ  ಕುಟುಂಬದವಳು ಹೀಗೆಲ್ಲಾ ಮಾಡ್ತಾರೆ ಎಂದು ರಸ್ತೆಬದಿ ಕೂಗಾಡಿದ್ರೆ ಸಾಕು ಈ ಮೀಡಿಯಾ ಜನ ಕ್ಯಾಮರಾ ಎತ್ತಾಕೊಂಡು ಬಂದುಬಿಡ್ತಾರೆ, ಇರೋ ಬರೋ ಟಿವಿಗಳಲ್ಲೆಲ್ಲಾ ನೇರಪ್ರಸಾರ ಮಾಡ್ತಾರೆ ನಾವು ಏನು ತಪ್ಪೇ ಮಾಡದೇ ಇದ್ರು ಮನೆಮನೆಗಳಲ್ಲಿ ಹೆಸರಾಗ್ತೀವಿ ಕೊನೆಗೆ ಮನೆಗೆ ಹೋಗೋಕ್ಕು ಮುಖವಿಲ್ಲದೇ ಎಲ್ಲಾದ್ರು ದೇಶಾಂತರ ಹೋಗ್ಬೇಕಾಗುತ್ತೆ... ಇಂತ ಪರಿಸ್ಥಿತಿನಲ್ಲಿ ಕಳ್ಳರ ಮೇಲೆ ಕಣ್ಣಿಡೋದು ಹೇಗೆ ಹೇಳಿ ಮೇಡಮ್ ನೀವೇ..!!!

ಹೂ.. ಏನು ಮಾಡೋದು ಸರ್ ನಿಮ್ಮಲ್ಲೂ ತಪ್ಪುಗಳು ಇವೆ ಹಾಗೆ ನಿಮಗೂ ತೊಂದರೆಗಳೂ ಇವೆ ಎಂಬುದು ಗೊತ್ತು... ಆದರೂ ನಮ್ಮಲ್ಲಿನ ವ್ಯವಸ್ಥೆಗಳು ಸರಿ ಇಲ್ಲ. ಇದ್ದರೂ ಒಳ್ಳೆಯ ರೀತಿ ಬಳಸಿಕೊಳ್ಳುವವರು ಕಡಿಮೆ ಸರ್... ಎಂದೇಳಿ ಯಾಪ್ ಮೋರೆ ಹಾಕುತ್ತ ಕುಳಿತಿದ್ದೇ... ನನ್ನನ್ನೇ ದುರುಗುಟ್ಟುತ್ತ ಅಲ್ಲೇ ಜೈಲಿನಲ್ಲಿದ್ದವ ನೋಡ್ತಾ ಇದ್ದ, ಮಗ ಅಮ್ಮ ಕಳ್ಳ ನೋಡು ಜೈಲಿನಲ್ಲಿರೋನು ಯಾರೋ ಪೋಲೀಸ್ ಹತ್ರಾನೇ ಸಿಗರೇಟ್ ತಕೊಂಡು ಸೇದುತಾ ಇದಾನೆ... ಪೋಲೀಸೇ ಅವರಿಗೆ ಹೆಲ್ಪ್ ಮಾಡ್ತಾರಲ್ಲಮ್ಮಾ... ಎಂದು ಮಗ ಪಿಸುಗುಡುತ್ತಿದ್ದ... ಹೌದು ಸುಮ್ಮನಿರು ಅವನ ಕಡೆ ನೋಡ್ಬೇಡ ಭಯ ಆಗುತ್ತೆ ಏನ್ ಹಂಗಿದಾನೇ ಯಪ್ಪಾ..!! ರೌಡಿ ಥರ... ಕಳ್ಳ-ಪೋಲೀಸ್ ಆಟನೇ ಹಾಗೆ ಬಿಡು ಎಂದೇಳಿ  ಪೋಲೀಸ್ ಗೆ ನಮಸ್ಕಾರ ಹೇಳಿ ಅಲ್ಲಿಂದ ಕಾಲ್ ಕಿತ್ತೆ.

ಠಾಣೆಯ ಅನುಭವ ಹೊಸದಾದರು ಕೆಲವು ವಿಚಾರ ತಿಳಿದುಕೊಂಡು ಭಾರದ ಹೃದಯ ನನ್ನ ಪ್ರೀತಿಯ ಸ್ಯಾಮ್ ನ ಹತ್ತಿರವೇ ನನ್ನ ಹೃದಯದ ಅಲೆ ಬೀಸ್ತಾ ಇತ್ತು ಆದರೇನು ಮಾಡಲಾಗದು, ನನ್ನ ಜೀವನದಲ್ಲಿ ಮೊದಲಬಾರಿಗೆ ಒಂದು ವಸ್ತು ಕಳೆದುಕೊಂಡ ಅನುಭವ ನನ್ನ ಮನಸ್ಸಿಗೆ ಬಹಳ ಆಘಾತವನ್ನೇ ತಂದಿತ್ತು...!!

ಉಸಿರಿಲ್ಲದ ಅವನು
ನನ್ನವನ ಕೊಡುಗೆ
ನನ್ನತ್ತ ಬಂದಾಗ
ಬೆಸೆದೆ ಪ್ರೀತಿ ಬೆಸುಗೆ
ಸದಾ ರಿಂಗಣಿಸುತ
ಮುಂಜಾವ ರಾಗವಾಗಿ
ಸಂಜೆಯ ಹೊನಲಾಗಿ
ನನ್ನ ಆವರಿಸಿದ್ದ ಸ್ಯಾಮ್
ನನ್ನೊಡನಿಲ್ಲ...
ಅಲೆಯಾಗಿ ತೇಲಿ ಹೋದೆ
ಮತ್ತೆಂದು ಬರುವೇಯೋ
ಎಂದು ಕಾದು ಕುಳಿತಿರುವೆ
ನನ್ನ ನೆನೆದು ಬರುವೆಯಾ
ಹೇ.. ನನ್ನೊಲವ ಅಲೆಯೇ..

ಏನು ಕರ್ಮವೋ ಒಟ್ಟಲ್ಲಿ ಆಗಿನ್ನು ಕುವೈತಿನಿಂದ ಬೆಂಗಳೂರಿಗೆ ಬಂದು ವಾರವೂ ಕಳೆದಿರಲಿಲ್ಲ, ನನ್ನ ಪ್ರೀತಿಯ (ಸ್ಯಾಮ್ ಸಂಗ್ ವೇವ್-೨) ಸ್ಯಾಮ್ ನ ಅಲೆ ಅದೆಷ್ಟು ಬೇಗ ಬೀಸಿತೋ... ಬಿದ್ದೇ ಬಿಟ್ಟಿತು ಕಳ್ಳಿಯ ಬಲೆಗೆ...  

ಎಷ್ಟೋಂದ್ ಜನ ಇಲ್ಲಿ ಯಾರು ಕದ್ದೋರು... ಎಲ್ಲಿ ನಮ್ಮ ಸ್ಯಾಮ್ ಸಂಗ್ ಎಲ್ಲೀ


ಐ ಮಿಸ್ ಯು... ಸ್ಯಾಮ್

Sunday, July 1, 2012

ಕಾಣದ ಲೋಕಕೆ ತೆರಳಿದಾಗ... ದರುಶನ ಭಾಗ್ಯ ಇಲ್ಲದಾಗ..!!


ಕಾರಣಾಂತರಗಳಿಂದ ೩ ವರ್ಷವಾದರೂ ಊರಿನ ಕಡೆ ತಲೆಹಾಕದವ ತನ್ನ "ಮಗ ಮತ್ತು ತಾಯಿ" ನೋಡಲು ಇತ್ತೀಚೆಗಷ್ಟೇ ಹೋಗಿ ಬಂದಿದ್ದ. ನೆಂಟರಿಷ್ಟರ ಒಡನಾಟ, ಊರೂರು ಸುತ್ತಾಟ, ಅಮ್ಮನ ಕೈ ಅಡುಗೆ ರುಚಿ ಇನ್ನೂ ತನ್ನ ನಾಲಿಗೆಯಲ್ಲೇ ಇದೆ.. ಇದೆಲ್ಲದರ ಜೊತೆ ತವರಿನ ನೆನಪು ಮಾಸೇ ಇಲ್ಲದಿರುವಂತಿರುವಾಗ ನೆನ್ನೆ..!! ಬೆಳ್ಳಂ ಬೆಳ್ಳಗ್ಗೆ ಏನೋ ಸಂಕಟ, ಮುಂಜಾವಿನ ನಿದ್ರೆಯೂ ತನ್ನತ್ತ ಸುಳಿಯದಂತೆ ಮಾಡಿದ್ದು ಆ ಒಂದು ದೂರವಾಣಿ ಕರೆ. ಆಂಧ್ರದ ಕಡೆಯಿಂದ ಕರೆ ಬಂದಿದ್ದೇ ತಡ ತನ್ನ ಕಿವಿ ತಾನೇ ನಂಬದಂತ ವಿಷಯವೊಂದು ಮುಟ್ಟಿತು. ಕಳೆದ ರಾತ್ರಿ ಅಮ್ಮನೊಟ್ಟಿಗೆ ಮಾತನಾಡಿದ್ದ ಮಗನಿಗೆ ಬೆಳ್ಳಿಗ್ಗೆ ಅಮ್ಮನಿಲ್ಲ ಎಂಬ ಸುದ್ದಿ ಆಘಾತ ನೀಡಿದ್ದಂತು ಸತ್ಯ.

ಅಮ್ಮನಂತೂ ಇಲ್ಲ, ಕೊನೆಯಲ್ಲಿ ಅಮ್ಮನ ಮುಖವಾದರೂ ನೋಡಬೇಕಲ್ಲಾ...!! ಓಹ್ ಏನು ಮಾಡುವುದು ಈಗಷ್ಟೇ ಊರಿಂದ ಬಂದಿದ್ದಾನೆ, ಇದ್ದಕ್ಕಿದ್ದ ಹಾಗೆ ಊರಿಗೆ ಮರಳೋದು ಎಂದರೆ ಅಷ್ಟು ಸುಲಭವೇ..?? ಕೈ ಎಲ್ಲಾ ಬರಿದಾಗಿದೆ ಕುವೈತಿನಲ್ಲಿ ನೆಲೆಸಬೇಕಾದರೆ ತನ್ನ ರೆಸಿಡೆನ್ಸಿ ಮಾಡಿಸಿಕೊಳ್ಳುವ ಸಲುವಾಗಿ ೧೦ ದಿನಗಳ ಮುಂದೆಯೇ ಕುವೈತಿ ವ್ಯಕ್ತಿಗೆ ಸುಮಾರು ೫೦ಸಾವಿರ ಹಣ ನೀಡಿ, ಒಂದು ವರ್ಷದ ಮಟ್ಟಿಗೆ ಕುವೈತಿನಲ್ಲಿ ನೆಲೆಸುವಂತೆ ಮಾಡಿಕೊಂಡಿದ್ದ. ತಾನು ದುಡಿಯೋ ಸಂಬಳ ಕೇವಲ ೧೦ ಸಾವಿರ ಇನ್ನು ಈಗ ಊರಿಗೆ ಹೋಗಲು ಸಾಲ ಯಾರು ನೀಡುತ್ತಾರೆ. ಹೇಗೆ ಊರಿಗೆ ಹೋಗೋದು ದೇವರೇ ...!!

ತನ್ನ ಇಷ್ಟೇಲ್ಲಾ ತೊಳಲಾಟವನ್ನು ನನ್ನ ಕಛೇರಿಯ "ಆಫೀಸ್ ಬಾಯ್"  ಹೇಳಿಕೊಳ್ಳದಿದ್ದರೂ ಅವನ ಕಣ್ಣುಗಳು ಮತ್ತು ಮುಖಭಾವ ಎಲ್ಲವನ್ನೂ ಬಿಚ್ಚಿಡುತ್ತಿತ್ತು. ನಾನು ಏನಾಗಿದೆ ಎಂದು ಪೂರ್ಣ ವಿಷಯ ತಿಳಿದಾಗ ಒಮ್ಮೆಲೇ ಮನಸ್ಸು ಕುಸಿದಂತಾಯಿತು. ಇಷ್ಟೆಲ್ಲಾ ಇದ್ದರೂ ಕೆಲಸಕ್ಕೆ ಬಂದಿದ್ದಾನೆ, ಜೊತೆಗೆ ಅವನು ಊರಿಗೆ ಹೋಗಬೇಕು ಎಂಬ ತುಡಿತವನ್ನೂ ಯಾರೊಂದಿಗೂ ಹೇಳಿಕೊಳ್ಳದೇ ತನ್ನ ಕೆಲಸದಲ್ಲೇ ಮಗ್ನನಾಗಿದ್ದಾನೆ... ಛೇ..!! ಎಂತಾ ವಿಪರ್ಯಾಸ, ತಾಯಿ ಮುಖ ನೋಡಲಾಗದೆ ಕೊರಗುತ್ತಾನಲ್ಲಾ ಎಂದೆನಿಸಿ ಕಛೇರಿಯಲ್ಲಿದ್ದವರೆಲ್ಲ ಯೋಚಿಸಿ ಅವನಿಗೆ ಟಿಕೆಟ್ ಕೊಡಿಸಿ ಕಳಿಸುವ ವ್ಯವಸ್ಥೆ ಮಾಡಲು ಮುಂದಾದೆವು.

ಹಣವನ್ನೆಲ್ಲಾ ಹೊಂದಿಸಿದೆವು, ಇದರ ಜೊತೆಗೆ ವಿಮಾನ ಟಿಕೆಟ್ ಬುಕ್ ಮಾಡುವ ಕೆಲಸ,ನಾನು ಇರೋಬರೋ ವಿಮಾನಗಳ ಬಗ್ಗೆ ವಿಚಾರಿ ನೋಡಿದೆ ಯಾವೊಂದು ವಿಮಾನಕ್ಕೂ ಟಿಕೆಟ್ ಸಿಗುತ್ತಿಲ್ಲ. ಕಾರಣ ಇಷ್ಟೇ.. ಇಲ್ಲಿ "ಜೂನ್, ಜುಲೈ,ಆಗಸ್ಟ್" ಈ ಮೂರು ತಿಂಗಳು ಬೇಸಿಗೆ ರಜೆಯಾದ್ದರಿಂದ ಎಲ್ಲಾ ವಿಮಾನಗಳ ಟಿಕೆಟ್ ಈ ಮೊದಲೇ ಬುಕ್ ಆಗಿಹೋಗಿದ್ದವು. ಕೊನೆಗೂ ಯಾವುದೇ ವಿಮಾನಕ್ಕೂ ಟಿಕೆಟ್ ಸಿಗಲಿಲ್ಲ ಅಮ್ಮನ ಮುಖ ನೋಡಲಾಗಲೂ ಇಲ್ಲ. ಊರಿಗೆ ಕರೆ ಮಾಡಿ ನಾನು ಬರುವುದಿಲ್ಲ ಉಳಿದ ಕಾರ್ಯಗಳನ್ನೆಲ್ಲ ಮುಗಿಸಿಬಿಡಿ ಎಂದು ತನ್ನವರಿಗೆ ಕರೆಮಾಡಿ ಕೈ ಚೆಲ್ಲಿ ಕುಳಿತುಬಿಟ್ಟ.

ಕೊನೆಯಲ್ಲಿ ಅವನ ಮಾತು ಮೇಡಮ್, "ಪಾಪಿ ಸಮುದ್ರಕ್ಕೆ ಹೋದರೂ ಮೊಣಕಾಲುದ್ದ ನೀರು" ಎಂಬಂತೆ ನನ್ನ ಪರಿಸ್ಥಿತಿ, ನೀವೆಲ್ಲ ಹಣ ನೀಡಿ ಇಷ್ಟು ನನಗಾಗಿ ಪ್ರಯತ್ನಿಸಿದರೂ ಯಾವುದೇ ಪ್ರಯೋಜನವಿಲ್ಲ.. ಈಗೊಂದೇ ದಾರಿ ಅಮ್ಮನ ಆತ್ಮಕ್ಕೆ ಕ್ಷಮೆಕೋರಿ ಇಲ್ಲಿಂದಲೇ ಕೈಮುಗಿದು ಬಿಡುವೇ..!!

"ಅಮ್ಮಾ..!! ನನ್ನನ್ನು ಕ್ಷಮಿಸಿಬಿಡು ನಿನ್ನ ಮುಖ ನೋಡಲು ಬರಲಾಗದು" ಸತ್ತ ಜೀವಕೆ ಕೇಳಿತೆ ಈ ಮಗನ ಮಾತು...!!???


Tuesday, June 19, 2012

ಯಾಕೆ...ಹೀಗೆ..!??


ಯಾಕೆ ಮನುಷ್ಯ ಹೀಗೆ
ಮನಸು ಪೂರ ಕೆಡಕೇ
ಹಾಲಿನಂತ ಮನಸಿಗೆ 
ಹುಳಿ ಹಿಂಡುವುದು ಏತಕೆ...


ಇಂದು ಇರುವುದು
ನಾಳೆ ಕಳೆವುದು
ನಾವೇ ದುಡಿದ ಆ ಹಣ
ವ್ಯಯಿಸುವುದಕೆ ಬೆಲೆಯ ಕಟ್ಟುವುದು ಏತಕೆ...ಈ ಜನ. 


ಊರು ಊರು ಸುತ್ತಿ
ಕಷ್ಟ ನಷ್ಟ ಎಲ್ಲ ಜಯಿಸಿ
ಇರುವ ಎರಡು ದಿನದ ಬದುಕಲಿ
ಮನಸಿಗೆ ಕಸಿವಿಸಿ ಕೊಡುವುದು ಏತಕೆ...ಈ ಜನ 


ಹೋದ ನೆನ್ನೆಗೂ 
ಬರುವ ನಾಳೆಗೂ
ಇಂದು ಹೋಲಿಕೆ ಏತಕೆ
ಇದ್ದಲ್ಲೇ ಇರುವ ಮನಸಿಗೆ 
ಒತ್ತಡದ ಬಿಸಿಯೇಕೆ ನೀಡುವರು...ಈ ಜನ.


ಅರ್ಥವಿರುವ ಜೀವನಕೆ
ವ್ಯರ್ಥ ಕಾಲಹರಣ 
ಕೊಳಕ ತುಂಬಿಸಿ
ಗಂಗೆಯ ಕದಡಿದಂತೆ
ಶುದ್ಧ ಮನಸ ಹೊಲಸು ಮಾಡುವುದು ಏತಕೆ...ಈ ಜನ.

Thursday, June 7, 2012

ಬ್ಯೂಟಿ ಮತ್ತು ಪಾರ್ಲರ್

ಒಳಗೊಳಗೇ ಏನೋ ಕೌತುಕ...ಆಗಿನ್ನು ಕುವೈತ್ ನಗರ ಹೊಸದು. ಕುವೈತಿಗೆ ಬರುವ ಮೊದಲು ಬೇರೆ ಅರಬ್ ದೇಶ ನೋಡಿದ್ದರೂ, ಇಲ್ಲಿನ ವಾತಾವರಣ, ಜನ, ಸ್ಥಳ ಎಲ್ಲವೂ ಬೇರೆ ತರಹವೇ ಇದೇ ಎನ್ನಿಸಿತ್ತು.  ನಗರವನ್ನು ಒಮ್ಮೆ ಸುತ್ತಾಡಿದೊಡೆ ಕಣ್ಣಿಗೆ ಕಾಣೋದು ಹೆಚ್ಚುಕಡಿಮೆ ಒಂದೊಂದು ಅಪಾರ್ಟ್ ಮೆಂಟ್ಗಳಲ್ಲೂ ಒಂದು ಅಥವಾ ಎರಡು ಬ್ಯೂಟಿ ಪಾರ್ಲರ್ ಗಳೇ ಕಾಣ್ತಾವೇ... ಯಪ್ಪಾ..!!! ಕುವೈತ್ ಹೆಂಗಳೆಯರಿಗೆ ಸೌಂದರ್ಯ ಪ್ರಜ್ಞೆ ಹೆಚ್ಚೇ ಇರಬೇಕು ಅಂದುಕೊಂಡಿದ್ದೆ. ಬ್ಯೂಟಿ ಪಾರ್ಲರ್ ಜಾಸ್ತಿ ಆದಷ್ಟು ಅಲಂಕಾರ ಪ್ರಿಯರೂ ಜಾಸ್ತಿ ಆಗ್ತನೇ ಇರ್ತಾರೆ ಅಲ್ವಾ..??.



ಕುವೈತಿಗೆ ಹೊಸದಾಗಿ ಬಂದಾಗ ಬೆಂಗಳೂರಿನ ಸ್ನೇಹಿತ ಒಬ್ಬ ಕೇಳಿದ್ದ "ಕುವೈತಿ ಹುಡುಗೀರು ಹೇಗಿದ್ದಾರೆ. ಎಲ್ಲಾ ಹೇಳ್ತಾರೆ ಸಕತ್ ಬ್ಯೂಟಿಗಳಾಗಿರ್ತಾರೆ ಅಂತಾ ಹೌದಾ..?" ಎಂದಿದ್ದ. ನಾನು ಹೌದ..!! ನಾನು ಅಷ್ಟು ನೋಡೇ ಇಲ್ಲವೇ, ಎಂದು ಅಂದಿನಿಂದಲೇ ಕುವೈತಿ ಹೆಂಗಳೆಯರತ್ತ ಕಣ್ಣಾಯಿಸಿದೆ.... ವಾಹನ ಓಡಿಸುವಾಗ ಅವರ ಕರಗಳನ್ನು ನೋಡಿ ವಾಹ್ ಎಷ್ಟು ನುಣುಪಾಗಿದೆ ಕೈ. ಅವರ ಕೈಗಳೇ ಅಷ್ಟು ಚೆಂದವಿರುವಾಗ  ಇನ್ನು ಮುಖವೇಗೆ ಇರುತ್ತೆ ಎಂದುಕೊಳ್ಳುತ್ತಿದ್ದೆ.  

ನಿಜ ಕುವೈತಿನ ಹೆಣ್ಣು ಮಕ್ಕಳು ತುಂಬಾ ಚೆನ್ನಾಗಿರುತ್ತಾರೆ. ಇಲ್ಲಿನ ಹೆಂಗಳೆಯರು ಹೆಚ್ಚು ಸೌಂದರ್ಯಕ್ಕೆ ಒತ್ತು ಕೊಡ್ತಾರೆ ಎಂದೆನಿಸಿತು. ಮೊದಲೇ "ಹೆಣ್ಣು ಎಂದರೆ ಸೌಂದರ್ಯ" ಎಂಬಂತೆ ಪ್ರಪಂಚ ಬಿಂಬಿಸಿದೆ ಅದರೊಳಗೆ ಇಲ್ಲಿನ ಹೆಂಗಳೆಯರು ಇನ್ನೂ ವಿಭಿನ್ನ.   ಇಲ್ಲಿನವರು ಪಾಶ್ಚಿಮಾತ್ಯರ ರೀತಿಯೂ ಉಡುಗೆಗಳನ್ನು ತೊಡುವವರೂ ಇದ್ದಾರೆ, ಅಂತೆಯೇ ತಮ್ಮದೇ ಸಂಸ್ಕೃತಿಯ ಬುರುಕವನ್ನು ತೊಡುವವರೂ ಇದ್ದಾರೆ. ಬುರುಕವನ್ನು ತೊಟ್ಟಿರುವಂತ ಹೆಂಗಳೆಯರನ್ನು ನೋಡಿದ್ದೇನೆ. ಆಹಾ..!! ಏನು ಹೇಳ್ತೀರಾ ಕಣ್ಣಿಗೆ ತೀಡಿದ ದಟ್ಟನೆಯ ಕಾಡಿಗೆ ನಮ್ಮನ್ನ ಆಕರ್ಷಿಸುತ್ತವೆ. ಇನ್ನು ಇಲ್ಲಿನ ಹೆಂಗಳೆಯರು ಮೃದು ಕೋಮಲ ತ್ವಚೆಯ ಸ್ವಚ್ಚ ಬೆಳ್ಳನೆಯ ಚರ್ಮಕ್ಕೆ ಹೊಂದುವಂತಾ ಅಲಂಕಾರ ಜೊತೆಗೆ ಕೇಶರಾಶಿ... ನಾನು ಎಷ್ಟೋ ದಿನ ಯೋಚಿಸಿದ್ದೇನೆ, ಈ ಹೆಂಗಳೆಯರಿಗೆ ಸಮಯ ಎಲ್ಲಿ ಸಿಗುತ್ತೆ, ಯಾವಾಗ ಈ ರೀತಿ ಅಲಂಕಾರ ಮಾಡಿಕೊಳ್ಳುತ್ತಾರೆ ಎಂದು. ಕುವೈತಿನ ಇಂತಹ ಸುಡುಬಿಸಿಲಿನಲ್ಲೂ ಅವರ ಸೌಂದರ್ಯ ಸ್ವಲ್ಪವೂ ಮಾಸಿರುವುದಿಲ್ಲ ಆ ರೀತಿ ಅಲಂಕರಿಸಿರುತ್ತಾರೆ.

ಅಲಂಕಾರ ಎಂದರೆ ಬರಿ ಬಣ್ಣ ಬಳಿದುಕೊಳ್ಳುವುದಕ್ಕೆ ಅಷ್ಟೇ ಮೀಸಲಿಡದೆ, ತನ್ನ ರೂಪಕ್ಕೆ ತಕ್ಕಂತಹ ವಸ್ತ್ರಗಳನ್ನು ತೊಟ್ಟು, ಅದಕ್ಕೆ ಸೂಕ್ತವಾಗಿ ಬೆರಳುಗಳಿಗೆ ಉಂಗುರ, ಕಿವಿ ಓಲೆ, ಕೊರಳಿಗೆ ಸರ, ಚಪ್ಪಲಿ ಇವೆಲ್ಲಾ ಅಲ್ಲದೆ ತನ್ನ ಕೈಗಳಲ್ಲೂ ಮೇಕಪ್ ಗೆ ತಕ್ಕಂತ ಬ್ಯಾಗಳನ್ನೂ ಸಹ ದಿನದಿನಕ್ಕೂ ಬದಲಿಸಿ ಬರ್ತಾರೆ. ಈ ಸೌಂದರ್ಯ ಸುಗಂಧವಾಗಿಸಲು ಅವರು ಬಳಸೋ ಸುಗಂಧ ದ್ರವ್ಯಗಳಂತೂ ಹೇಳತೀರದು ಸದಾ ಘಮಘಮಿಸುತ್ತಲೇ ಇರ್ತಾರೆ. ಇವೆಲ್ಲವುಗಳ ಜೊತೆ ಕೆಲವು ಹೆಣ್ಣು ಮಕ್ಕಳು ವಿವಿಧ  ಕಾರುಗಳು ಅದು ಹೆಸರಾಂತ  ಐಷಾರಾಮಿ ಕಾರುಗಳನ್ನ ಆಗಾಗ ಬದಲಿಸುತ್ತಾ ಓಡಾಡುವುದನ್ನ ಕಂಡಿದ್ದೇವೆ.



ಕುವೈತ್ ಹೆಂಗಳೆಯರು ಬರಿ ಸೌಂದರ್ಯಕ್ಕಷ್ಟೇ ಮೀಸಲಿಡದೆ, ಅವರುಗಳಲ್ಲಿ ಬಹಳಷ್ಟು ವಿದ್ಯಾವಂತೆಯರು ಸಹ ಇದ್ದಾರೆ. ಹಲವು ಪ್ರತಿಷ್ಠಿತ ಕಂಪನಿಗಳಲ್ಲಿ ಒಳ್ಳೊಳ್ಳೆ ಹುದ್ದೆಗಳನ್ನು ಅಲಂಕರಿಸಿ ಸದಾ ಎಲ್ಲಾ ಕಾರ್ಯಗಳಲ್ಲಿ ಮತ್ತು ಎಲ್ಲಾ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿ ಇರುವುದು ಹೆಮ್ಮೆಯ ವಿಷಯ. 

ಐಷಾರಾಮಿ ಕುವೈತ್ ನಗರಿಯಲ್ಲಿ ಹೆಂಗಳೆಯರ ಪಾರ್ಲರ್ ಎಷ್ಟು ಐಷಾರಾಮಿಯಿಂದ ಕೂಡಿರುತ್ತದೋ ಅಷ್ಟೇ ಐಷಾರಾಮಿಯಿಂದ ಗಂಡಸರ ಪಾರ್ಲರ್ ಗಳೂ ಸಹ ಇರುತ್ತವೆ (ಗಂಡಸರೇನು ಕಮ್ಮಿ ಮೇಕಪ್ ಮಾಡ್ತಾರೇ ಅಂದುಕೋ ಬೇಡಿ).  ಜಗಮಗಿಸೋ ದೀಪಗಳು, ಅದ್ಧೂರಿ ಆಸನಗಳು, ವಿಭಿನ್ನ ರೀತಿಯ ಕನ್ನಡಿಗಳ ಶೃಂಗಾರ ನೋಡೋಕ್ಕೆ ಎರಡು ಕಣ್ಣು ಸಾಲದೆ ಕೃತಕ ಎರಡು ಕಣ್ಣುಗಳನ್ನ(ಕನ್ನಡಕ) ತೆಗೆದುಕೊಂಡಿದ್ದೇನೆ. ನಾನು ಹೇಳುವುದಕ್ಕಿಂತ ನೀವೆಲ್ಲಾ ಒಮ್ಮೆ ಬಂದು ನೋಡಿದರೆ ಚೆನ್ನಾಗಿರುತ್ತೆ. ಬೆಂಗಳೂರಲ್ಲಿ ಚಿಲ್ಲರೆ ಅಂಗಡಿಗಳು ಇದ್ದ ಹಾಗೆ ಈ ಪಾರ್ಲರ್ ಗಳು ಇವೆ ಎಂದರೆ ನೀವು ನಂಬಲೇ ಬೇಕು.

ಕುವೈತಿನ ಪ್ರತಿ ಅಪಾರ್ಟ್ ಮೆಂಟ್ ಗಳಲ್ಲಿ ಕಾಣಿಸೋ ಬ್ಯೂಟಿ ಪಾರ್ಲರ್ ನೋಡಿದ್ರೇ ಇವರು ವಾರಕ್ಕೆ ಅದೆಷ್ಟು ಬಾರಿ ಕುಳಿತು ಶೃಂಗಾರಕ್ಕೆ ಹೆಚ್ಚು ಮಹತ್ವ ಕೊಡುತ್ತಾರೋ ಎನಿಸುತ್ತದೆ. ಒಟ್ಟಲ್ಲಿ ಏನೇ ಹೇಳಿ ಕುವೈತಿನ ಹೆಂಗಳೆಯರಲ್ಲಿ ಸೌಂದರ್ಯ ಪ್ರಜ್ಞೆ ಮೆಚ್ಚಲೇ ಬೇಕು ಜೊತೆಗೆ ಆ ಸೌಂದರ್ಯ ವರ್ಧಕಗಳ ಜೊತೆಗೆ ಸಮಯ ತಳ್ಳುತ್ತ ಸಮಯ ಮೀಸಲಿಡುವ ಅವರ ತಾಳ್ಮೆಗೆ ಜೈ ಎನ್ನಲೇ ಬೇಕು.

ಚಿತ್ರಗಳು: ನೆಟ್ ಲೋಕ